ಉತ್ತಂಗಿ ಚೆನ್ನಪ್ಪ

ಉತ್ತಂಗಿ ಚೆನ್ನಪ್ಪ : - ತಿರುಳು ಗನ್ನಡದ ತಿರುಕ(ಕಾವ್ಯ ನಾಮ). ಹದಿನೆಂಟನೆ ಶತಮಾನದ ಮಧ್ಯಭಾಗದಲ್ಲಿ. ಸ್ವಾತಂತ್ರ್ಯ ಪೂರ್ವದ ಬ್ರಿಟಿಷರ ಆಡಳಿತದ ಕಾಲದಲ್ಲಿ ಕ್ರೈಸ್ತಧರ್ಮಾನುಯಾಯಿಗಳಾದ ರೆವರೆಂಡ್ ಕಿಟಲ್, ಬಿ.ಎಲ್ ರೈಸ್ ಮೊದಲಾದವರಿಂದ ಕನ್ನಡದಲ್ಲಿ ಕೆಲಸ ಆರಂಭವಾಯಿತು. ಅದೇ ಪರಂಪರೆಯನ್ನು ಮುಂದುವರಿಸಿ ಕನ್ನಡದ ಜನಪದದಲ್ಲಿ ಶಿವಶರಣರ ವಚನಗಳನ್ನು ಅದರಲ್ಲೂ ನಾಡಿನ ಜನರ ನಾಲಗೆಯ ಮೇಲೆ ನಲಿದಾಡುವ ತ್ರಿಪದಿಗಳನ್ನು ರಚಿಸಿದ ಸರ್ವಜ್ಞ ಕವಿಯ ಸಂಪೂರ್ಣ ಪರಿಚಯ ಮಾಡಿಕೊಟ್ಟವರಲ್ಲಿ ಪ್ರಮುಖರು ರೆವೆರೆಂಡ್ ಉತ್ತಂಗಿ ಚೆನ್ನಪ್ಪ. ಇವರು ಭಾರತೀಯರು. ಧರ್ಮಪ್ರಚಾರ ಅವರ ವೃತ್ತಿಯಾದರೂ ಪ್ರವೃತ್ತಿಯಿಂದ ಕನ್ನಡದ ಕಟ್ಟಾಳು. ನಾಡಿಗರ ನಾಲಿಗೆಯ ಮೇಲೆ ನೆಲಸಿದ್ದ , ಪಂಡಿತ ಪಾಮರರ ಪ್ರೀತಿಗೆ ಒಳಗಾಗಿದ್ದ ಸರ್ವಜ್ಞನ ವಚನಗಳಿಗೆ ಒಂದು ವ್ಯವಸ್ಥಿತ ರೂಪಕೊಟ್ಟು ವಚನ ಸಂಗ್ರಹವನ್ನು ಹೊರ ತಂದರು.

ಜನನ, ಬಾಲ್ಯ, ಶಿಕ್ಷಣ ಬದಲಾಯಿಸಿ

  • ಚೆನ್ನಪ್ಪ, ೧೮೮೧ನೆಯ ಅಕ್ಟೋಬರ್ ೨೮ರಂದು ಧಾರವಾಡದಲ್ಲಿ ಜನಿಸಿದರು. ತಂದೆ ದಾನಿಯೇಲಪ್ಪ, ತಾಯಿ ಸುಭದ್ರಮ್ಮ. ಅವರ ತಂದೆ ಅನಾಥಾಶ್ರಮದ ಮೇಲ್ವಿಚಾರಕರು ಹಾಗೂ ಶಿಕ್ಷಕರು. ಅವರ ಮೂಲಸ್ಥಳ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನಲ್ಲಿರುವ ಉತ್ತಂಗಿ ಗ್ರಾಮ. ಗೌಡರ ಮನೆತನ. ವೀರಶೈವ ಮತಾನುಯಾಯಿಗಳು. ಎರಡು ತಲೆಮಾರಿನ ಹಿಂದೆಯೇ ಮತಾಂತರವಾಗಿದ್ದರೂ ಮೂಲಸ್ಥಳದ ಮತ್ತು ಧರ್ಮದ ಬಗೆಗೆ ಅವರಿಗೆ ಅಪಾರ ಅಭಿಮಾನ.
  • ಅದರಿಂದ ಉತ್ತಂಗಿ ಅವರ ಹೆಸರಿನ ಭಾಗವಾಗಿಯೇ ಉಳಿಯಿತು. ಚೆನ್ನಪ್ಪನವರ ಬಾಲ್ಯ ಕಳೆದುದು ಗದಗ ಬೆಟಗೇರಿಯಲ್ಲಿ. ಬಾಲಕ ಚೆನ್ನಪ್ಪನ ಪ್ರಾಥಮಿಕ ಶಿಕ್ಷಣ ಅಲ್ಲಿಯೇ ಆಯಿತು. ಬಾಲ್ಯದಲ್ಲಿ ಅಂಥಹ ಬುದ್ದಿವಂತ ವಿದ್ಯಾರ್ಥಿಯಾಗಿರಲಿಲ್ಲ. ಜ್ಞಾಪಕ ಶಕ್ತಿಯೂ ಕಡಿಮೆ. ಶಾಲೆಯ ಎಲ್ಲಾ ಬಾಲಕರಿಗಿಂತ ಅಭ್ಯಾಸದಲ್ಲಿ, ಹಿಂದೆ. ಗಣಿತ ಅವರಿಗೆ ಬಹಳ ತಲೆನೋವಿನ ವಿಷಯ. ತಂದೆಯಿಂದ ಆಗಾಗ ಶಿಕ್ಷೆಗೆ ಒಳಗಾಗುತಿದ್ದರು. ಆದರೆ ಆತಂಕ, ಸದಾ ಯೇಸುವಿನ ಪ್ರಾರ್ಥನೆಯಲ್ಲಿ ನಿರತರು.
  • ಮಗನು ಎಲ್ಲರಂತೆ ಆದರೆ ದೇವರ ಸೇವೆಗೆ ಬಿಡುವೆನೆಂಬ ಹರಕೆ ಮಾಡಿಕೊಂಡಿದ್ದರು. ಧಾರವಾಡದಲ್ಲಿ ಬಡಮಕ್ಕಳಿಗಾಗಿರುವ ವಸತಿಶಾಲೆಯಲ್ಲಿ ಸೇರಿದರು ಅಲ್ಲಿ ಇಂಗ್ಲಿಷ್ ಮತ್ತು ಸಂಸ್ಕೃತ ಕಲಿಸಲಾಯಿತು.ಅಲ್ಲಿ ಮೂರು ವರ್ಷ ಕಲಿತ ನಂತರ ಅವರಲ್ಲಿ ಬಹಳ ಸುಧಾರಣೆ ಕಂಡಿತು. ನೇರವಾಗಿ ಬಾಸೆಲ್ಮಿಷನ್ ಸ್ಕೂಲಿನ ನಾಲ್ಕನೆ ತರಗತಿಗೆ ಪ್ರವೇಶ ಸಿಕ್ಕಿತು. ಅವರ ಚಿಕಿತ್ಸಕ ಬುದ್ದಿಯಿಂದ ಶಿಕ್ಷಕರ ಕೋಪಕ್ಕೆ ಗುರಿಯಾದರು. ಯಾವುದನ್ನು ಖಚಿತ ಮಾಡಿಕೊಳ್ಳದೆ ಒಪ್ಪುತ್ತಿರಲಿಲ್ಲ.
  • ಅವರಿಗೆ ಸಾಹಿತ್ಯದಲ್ಲಿ ಬಹಳ ಆಸಕ್ತಿ ತಮ್ಮ ಗೆಳೆಯರ ಜೊತೆ ಸೇರಿ ಒಂದು ಪತ್ರಿಕೆಯನ್ನು ಹೊರತಂದರು ಆದರೆ ಶಾಲೆಯ ಅಧಿಕಾರ ವರ್ಗವು ಅದನ್ನು ವಿದ್ಯಾರ್ಥಿಗಳು ಓದಬಾರದೆಂದು ವಿರೋಧಿಸಿತು. ಶಾಲೆಯಿಂದ ಅವರನ್ನು ಹೊರದೂಡುವ ಬೆದರಿಕೆ ಹಾಕಿದರೂ ಜಗ್ಗದೆ ತಮ್ಮ ಕೆಲಸ ಮುಂದುವರಿಸಿದರು. ಹಾಗೂ ಹೀಗೂ ಮೆಟ್ರಿಕ್ ತನಕ ಬಂದರು. ಮೆಟ್ರಿಕ್ ಪರೀಕ್ಷೆಗ ಕುಳಿತುಕೊಳ್ಳಲಿಲ್ಲ. ತಮ್ಮ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದರು.
  • ಚೆನ್ನಪ್ಪ ತಾಯಿಯ ಅಪೇಕ್ಷೆಯಂತೆ ಧರ್ಮ ಪ್ರಚಾರಕರಾಗಲು ಒಪ್ಪಿದರು. ಅದಕ್ಕಾಗಿ ಮಂಗಳೂರಿನ ದೈವಜ್ಞಶಾಲೆಗೆ ಸೇರಿದರು. ಕ್ರೈಸ್ತ ಧರ್ಮ ಉಪದೇಶದಲ್ಲಿ ತರಬೇತಿ ಕೊಡಲಾಗುತಿತ್ತು. ಅಲ್ಲಿಯೂ ಪ್ರಶ್ನೆ ಕೇಳುವುದನ್ನು ಬಿಡಲಿಲ್ಲ. ಆದರೆ ಅದನ್ನು ಅಲ್ಲಿನವರು ಸಹಿಸುತ್ತಿರಲಿಲ್ಲ. ಅಲ್ಲಿ ವಿಶೇಷ ಸಮವಸ್ತ್ರವನ್ನು ಧರಿಸ ಬೇಕಿತ್ತು. ಅದಕ್ಕಾಗಿ ಬಟ್ಟೆಯನ್ನು ವಿದೇಶದಿಂದ ತರಿಸುತಿದ್ದರು. ಚೆನ್ನಪ್ಪ ವಿದೇಶಿ ವಸ್ತ್ರ ತೊಡದೆ ಖಾದಿ ಬಟ್ಟೆ ಬಳಸಿ ಉಡುಪು ಹೊಲಿಸಿಕೊಂಡರು. ಅದು ದುಬಾರಿಯೂ ಆಗಿರಲಿಲ್ಲ.
  • ಹೀಗಾಗಿ ಅವರ ಅನೇಕ ಗೆಳೆಯರಿಗೆ ಅದರಿಂದ ಸಹಾಯವಾಯಿತು.ಕ್ರಮೇಣ ಎಲ್ಲರ ಸಮವಸ್ತ್ರವನ್ನು ಖಾದಿ ಬಟ್ಟೆ ಬಳಸ ತೊಡಗಿದರು. ಆದರೆ ಅಧಿಕಾರವರ್ಗದ ಕೋಪಕ್ಕೆ ಗುರಿಯಾದರು. ಅವರ ಮೇಲೆ ಶಿಸ್ತು ಕ್ರಮದ ಕತ್ತಿ ತೂಗಾಡ ತೊಡಗಿತು. ಎಚ್ಚೆತ್ತು ಕೊಂಡ ಚೆನ್ನಪ್ಪ ತಮ್ಮ ಯಾವುದಕ್ಕೂ ಪ್ರಶ್ನೆಕೇಳದೆ, ಸಂಶಯ ಪರಿಹಾರಕ್ಕೆ ಗುರುಗಳನ್ನು ಅವಲಂಬಿಸದೆ ಪುಸ್ತಕಗಳ ಮೊರೆ ಹೋದರು.

ಸ್ವಾಧ್ಯಾಯಿಯಾಗಿ ಬದಲಾಯಿಸಿ

  • ಎಲ್ಲಾ ಜ್ಞಾನಕ್ಕೂ ಪುಸ್ತಕದ ನೆರವು ಪಡೆದರು. ಈ ನಡೆ ಅವರ ಜೀವನದಲ್ಲಿ ಹೊಸ ತಿರುವು ತಂದಿತು. ಮಂದ ಬುದ್ದಿಯವನೆಂದು ಕೊಂಡಿದ್ದ ಹುಡುಗನ ಅರಿವಿನ ಆಳ ಹೆಚ್ಚುತ್ತಾ ಹೋಯಿತು. ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ತತ್ವ ಗ್ರಂಥಗಳ ಅಧ್ಯಯನ ಮಾಡಿದರು. ಕ್ರೈಸ್ತ ಧರ್ಮದ ಗ್ರಂಥಗಳ ಜೊತೆಗೆ ಉಪನಿಷತ್ತು, ವಚನಶಾಸ್ತ್ರ, ಭಗವದ್ಗೀತೆಗಳ ಅಧ್ಯಯನವೂ ಸಾಗಿತು.
  • ಓದುತ್ತಾ ಹೊದಂತೆ ಅವರಿಗೆ ಕ್ರೈಸ್ತರಲ್ಲಿ ಪ್ರೊಟೆಸ್ಟೆಂಟ್ ಧರ್ಮದ ಪುನರ್ ಸ್ಥಾಪಕ ಮಾರ್ಟಿನ್ ಲೂಥರ್ ಮತ್ತು ವಿಶ್ವಧರ್ಮ ಪ್ರತಿಪಾದಕ ಬಸವೇಶ್ವರರ ನಡುವೆ ಬಹಳ ಸಾಮ್ಯತೆ ಕಂಡಿತು.ಇಬ್ಬರ ಸಮಾಜ ಸುಧಾರಣಾ ವಿಧಾನ ಅವರಿಗೆ ಮೆಚ್ಚುಗೆಯಾಯಿತು.

ದೈವಜ್ಞಾನ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದರು . ಧಾರವಾಡಕ್ಕೆ ಬಂದೊಡನೆ ಕೆಲಸ ದೊರೆಯಿತು. ರೆವರೆಂಡ್ ಫಾದರ್ ಉತ್ತಂಗಿಯವರು ದೇಶಿಯರಲ್ಲಿ ಬಹಳ ಜನಪ್ರಿಯರಾಗಿದ್ದರು.

  • ವಿಶೇಷವಾಗಿ ವಿದೇಶಿ ಪ್ರಚಾರಕರು ತಮ್ಮ ಮತದ ಮಂಡನೆಗಿಂತ ಅನ್ಯ ಮತದ ಖಂಡನೆಯೇ ಮುಖ್ಯ ಎಂದು ಭಾವಿಸುತಿದ್ದರು. ಆದರೆ ಚೆನ್ನಪ್ಪ ಅನ್ಯ ಮತಗಳನ್ನು ಹೀಗಳೆಯದೆ ಧರ್ಮಬೋಧೆ ಮಾಡುತಿದ್ದರು. ತಮ್ಮ ಉಪನ್ಯಾಸದಲ್ಲಿ ಇತರೆ ಧರ್ಮದ ಉತ್ತಮ ಅಂಶಗಳನ್ನೂ ಉದಾಹರಿಸುತಿದ್ದರು.

ಕ್ರೈಸ್ತಧರ್ಮದ ಉಪದೇಶಕ ಬದಲಾಯಿಸಿ

  • ರೆವರೆಂಡ್ ಫಾದರ್ ಉತ್ತಂಗಿ ಚನ್ನಪ್ಪನವರು, ಕ್ರೈಸ್ತಧರ್ಮದ ಉಪದೇಶಕರಾಗಿ ತಮ್ಮ ಬೋಧನಕ್ರಮದಲ್ಲಿ ದೇಸಿ ಪದ್ಧತಿಯನ್ನು ಅಳವಡಿಸಿಕೊಂಡಿರುವುದು, ಎಲ್ಲ ಮತಗಳಲ್ಲೂ ಇರುವ ಗೌರವ ಮತ್ತು ಶ್ರದ್ಧೆ. ಪ್ರತಿಯೊಂದು ಮತದ ಒಳ್ಳೆಯ ಅಂಶಗಳನ್ನೂ ಗುರುತಿಸಿ, ಸಮಯ ಬಂದಾಗ ಅವನ್ನು ತಮ್ಮ ನಿರೂಪಣೆಯಲ್ಲಿ ಉದಾಹರಿಸುತ್ತಿದ್ದ ಅವರ ವೈಖರಿಯನ್ನು ಅನೇಕರು ಸಹಿಸಲಿಲ್ಲ, ಚನ್ನಪ್ಪನವರಿಗೆ ಕ್ರೈಸ್ತ ಧರ್ಮದಲ್ಲಿ ನಂಬಿಕೆ ಇಲ್ಲವೆಂದು ಆಡಿಕೊಂಡರು.
  • ಅವರ ಮೆಲೆ ಕ್ರಮ ತೆಗೆದುಕೊಳ್ಳಬೇಕೆಂದು ದೂರು ದಾಖಲಾಯಿತು. ಚನ್ನಪ್ಪನವರು ಬಸವಣ್ಣ ಮತ್ತು, ಅವರ ಅನುಭವಮಂಟಪ, ಶರಣರುಗಳ ಬಗ್ಗೆ ಪೂಜ್ಯಭಾವವನ್ನು ಇಟ್ಟುಕೊಂಡು, ಅವರಿಗೆ ಗೌರವಕೊಡುವುದನ್ನೇ ನೆಪವಾಗಿಟ್ಟುಕೊಂಡು, ವಿದೇಶಿ ಮತೋಪದೇಶಕರು ಅವರನ್ನು ಮಿಶನ್ನಿಂದ ವಜಾಮಾಡಿಸಲು ಪ್ರಯತ್ನಿಸಿದರು.
  • ನಾವು ಮುಗ್ಧಜನರಿಗೆ ಅವರ ಧರ್ಮದಲ್ಲಿ ಇರುವ ಸತ್ಯಾಂಶಗಳನ್ನು ತಿಳಿಸಿ ಕೊಟ್ಟಮೇಲೆಯೂ ಅವರು ಸ್ವಧರ್ಮದಲ್ಲಿ ಶಾಂತಿಯನ್ನು ಕಾಣದೆ ಹೋದರೆ, ಕೈಸ್ತಧರ್ಮವನ್ನು ಸ್ವೀಕರಿಸಲಿ. ಮಾನಸಿಕವಾಗಿ ಅವರು ಸಿದ್ಧರಾದರೆ ಮಾತ್ರ ನಿಜವಾದ ಧರ್ಮಾಂತರ; ಇಲ್ಲವಾದರೆ ಬರಿ ಸ್ಥಳಾಂತರವಾಗುವುದು. ವಿದೇಶಿ ಧರ್ಮಪ್ರಚಾರಕರಿಗಿದ್ದಷ್ಟೆ ತಮಗೂ ಧಾರ್ಮಿಕ ಶ್ರದ್ಧೆ ಇದೆ ಮತ್ತು ತಮ್ಮದೇ ರೀತಿಯಲ್ಲಿ ಧರ್ಮಪ್ರಚಾರ ಮಾಡುವ ಹಕ್ಕಿದೆ ಎಂಬ ಅವರ ಸ್ಪಷ್ಟ ನುಡಿದರು.
  • ಅವರ ದಿಟ್ಟನಿಲುವಿನಿಂದಾಗಿ ಅಧಿಕಾರಿಗಳು ಸುಮ್ಮನಾದರು. ಮತ್ತೆ ಯಾರೂ ಅವರನ್ನು ಕೆಣಕಲು ಬರಲಿಲ್ಲ. ಚೆನ್ನಪ್ಪನವರಿಗೆ ಗಾಂಧೀಜಿಯವರ ಸ್ವಾತಂತ್ರ್ಯಹೊರಾಟ ಮತ್ತು ಅದ್ಪೃಶ್ಯತೆ ನಿವಾರಣೆಯ ಪ್ರಯತ್ನ ಬಹಳ ಹಿಡಿಸಿತು. ಗಾಂಧೀಜಿಯವರೊಡನೆ ಪತ್ರವ್ಯವಹಾರವನ್ನೂ ಮಾಡಿದ್ದರು. ತಮ್ಮ ಒಂದು ಕೃತಿಯನ್ನು ಅವರಿಗೆ ಅರ್ಪಿಸಿದರು.

ಸರ್ವಜ್ಞ ಅವರಿಗೆ ಪ್ರಿಯ ಬದಲಾಯಿಸಿ

  • ಅವರು ಸರ್ವಜ್ಞ ಕವಿ,[೧] ಯತ್ತ ಆಕರ್ಷಿತರಾದುದು ಒಂದು ವಿಶೇಷ ಸಂದರ್ಭದಲ್ಲಿ. ಉಪದೇಶಕರಾದ ಹೊಸದರಲ್ಲಿ ಒಂದು ಸಲ ವಿದೇಶದಿಂದ ಬಂದ ಜೆ.ಜೆ ಉರ್ನರ್ ಎಂಬ ಮಿಶನರಿಗೆ ಕನ್ನಡ ಕಲಿಸುವ ಹೊಣೆ ಬಂದಿತು. ಆಗ ಪಾಠದ ಮಧ್ಯ ಸರ್ವಜ್ಞನ ವಚನಗಳ ಉದಾಹರಣೆ ನೀಡಿದರು. ಅದರಿಂದ ಪ್ರಭಾವಿತರಾದ ಅವರು ಹೆಚ್ಚಿನ ಮಾಹಿತಿ ಬಯಸಿದರು.
  • ಸರ್ವಜ್ಞನ ಏಕದೇವೋಪಸನೆ, ಜಾತಿಯತೆಯ ಖಂಡನೆ, ವಿಶ್ವಧರ್ಮದ ಪ್ರತಿಪಾದನೆಗಳಲ್ಲಿ ಮತ್ತು ಸಮಾಜಸುಧಾರಣಾ ಪ್ರವೃತ್ತಿ ಕ್ರಿಸ್ತನ ಬೋಧನೆಯ ಛಾಯೆ ಕಂಡಿತು. ಅದರಿಂದ ಇನ್ನು ಹೆಚ್ಚಿನ ವಿವರ ಬೇಕೆಂದರು. ಆದರೆ ಚೆನ್ನಪ್ಪನವರಿಗೆ ಹೆಚ್ಚಿನ ವಿವರ ಗೊತ್ತಿರಲಿಲ್ಲ. ಸಾವಿರಾರು ಮೈಲುದೂರದಿಂದ ಬಂದ ವಿದೇಶಿಯರು ಮೆಚ್ಚುವ ತ್ರಿಪದಿಗಳ ಕವಿಯ ಬಗ್ಗೆ ತಮ್ಮ ಅಜ್ಞಾನ ಕಂಡು ಅವರ ಮನ ಮುದುಡಿತು.
  • ಅದೇ ಅವರ ಸಂಶೋಧನೆಗೆ ಪ್ರೇರಣೆ ನೀಡಿತು. ಆಗಿನಿಂದ ಆಳವಾದ ಸಂಶೋಧನೆಗೆ ತೊಡಗಿದರು. ಅನೇಕ ವರ್ಷಗಳ ಪರಿಶ್ರಮದಿಂದ, ಮುದ್ರಿತ, ಹಸ್ತಪ್ರತಿ, ತಾಳೆಯೋಲೆ ಮತ್ತು ಜನರ ಬಾಯ್ದೆರೆಯಲ್ಲಿರುವ ವಚನಗಳ ಸಂಗ್ರಹ ಮೊದಲು ಮಾಡಿದರು. ಅವುಗಳನ್ನು ಪರಿಷ್ಕರಿಸಲು ಅಧ್ಯಯನಮಾಡುವಾಗ ಕಾವ್ಯ, ಛಂದಸ್ಸು, ವ್ಯಾಕರಣಗಳ ವ್ಯಾಪಕ ಪರಿಚಯ ಮಾಡಿಕೊಂಡರು. ಕ್ರಿಯೆ ರಹಿತ ಜ್ಞಾನ ಅನುಭವ, ಕ್ರಿಯೆ ಸಹಿತ ಜ್ಞಾನ ಅನುಭಾವ ಎಂಬ ಸತ್ಯ ದರ್ಶನವಾಯಿತು.
  • ವಚನಗಳ ಸಂಪಾದನೆಯನ್ನು ಪೀಠಿಕೆ, ಪರಿಶಿಷ್ಟ, ಟಿಪ್ಪಣಿ ,ಅಕ್ಷರಾನುಸಾರ ಅನುಕ್ರಣಿಕೆ, ವಿವಿಧ ಮೂಲಗಳ ಉಲ್ಲೇಖ, ಶುದ್ಧರೂಪದ ನಿರ್ಧಾರಗಳನ್ನು ಅಳವಡಿಸಿಕೊಂಡು ಆಧುನಿಕ ಸಂಪಾದನಾಶಾಸ್ತ್ರದ ಪ್ರಕಾರ .ಸರ್ವಜ್ಞನ ೭೦೦೦ ವಚನಗಳ ಸಂಗ್ರಹವನ್ನು ೧೯೨೪ ರಲ್ಲಿ ಪ್ರಕಟಿಸಿದರು. ಅವರ ಗ್ರಂಥ ಸಂಶೋಧನೆ ಮತ್ತು ಸಂಪಾದನಾಶಾಸ್ತ್ರದ ಮಾದರಿ ಕೃತಿಯಾಯಿತು. ಹೀಗೆ ಅವರ ವಚನಯಾತ್ರೆ ಪ್ರಾರಂಭವಾಯಿತು.
  • ಅವರ ಅನುಭಾವಿ ಮನಸ್ಸು ಸಹಜವಾಗಿ ಇತರ ವಚನಕಾರರತ್ತ ಆಕರ್ಷಿತವಾಯಿತು. ಶರಣ ಸಾಹಿತ್ಯದ ಅವರ ಆಸಕ್ತಿ ಸಹಜವಾಗಿ ಅನೇಕ ವಿದ್ವಾಂಸರ ಗಮನ ಸೆಳೆಯಿತು. ಭೂಸನೂರುಮಠ ಅವರೊಂದಿಗೆ ಸೇರಿ ಮೋಳಿಗೆ ಮಾರಯ್ಯ ಮತ್ತು ಇತರ ಶರಣರ ವಚನ ಸಂಗ್ರಹದ ಕೆಲಸ ಪ್ರಾರಂಭಿಸಿದರು. ಅದಕ್ಕಾಗಿ ತಾಳೆಯೋಲೆಗಳ ಮತ್ತು ಕೈಬರಹದ ಪ್ರತಿಗಳ ಸಂಗ್ರಹಕ್ಕಾಗಿ ಓಡಾಡಿದರು. ಮೋಳಿಗೆ ಮಾರಯ್ಯ ಮತ್ತು ರಾಣಿ ಮಹದೇವಿಯಮ್ಮ ಅವರ ವಚನಗಳನ್ನು ಸಂಗ್ರಹಿಸಿ ಪ್ರಕಟಿಸಿದರು.

ಅನುಭವಮಂಟಪದ ಬಗ್ಗೆ ವಿಚಾರ ಬದಲಾಯಿಸಿ

  • ಅನುಭವ ಮಂಟಪದ ಬಗ್ಗೆ ವಿವಾದ ಉಂಟಾದಾಗ," ಸಂಬಂಧಿಸಿದ ಸಾಹಿತ್ಯದ ಅಧ್ಯಯನಮಾಡಿ ಅನುಭವ ಮಂಟಪದ ಐತಿಹಾಸಿಕತೆ ಕುರಿತ ಗ್ರಂಥ ರಚಿಸಿದರು. ಸೊಲ್ಲಾಪುರದ ಸಿದ್ದರಾಮನಿಗೆ ಲಿಂಗದೀಕ್ಷೆಯಾಗಿದ್ದ ಬಗ್ಗೆ ಬಹಳ ವಾದ ವಿವಾದವಿತ್ತು. ಸಿದ್ದರಾಮನ ಭಕ್ತೆ ಜಯದೇವ ತಾಯಿ ಲಿಗಾಡೆಯವರು ಆ ವಿಷಯದಲ್ಲಿ ಸಂಶೋಧನೆ ಮಾಡಲು ವಿನಂತಿಸಿದರು. ಅದರಂತೆ ಅಧ್ಯಯನ ಮಾಡಿ, ' ಸಿದ್ಧರಾಮ ಚರಿತ್ರೆ' ಸಿದ್ಧ ಪಡಿಸಿ ಸತ್ಯವನ್ನು ನಿರೂಪಿಸಿದರು.
  • ಅದಕ್ಕೆ ಕರ್ನಾಟಕ ಸರ್ಕಾರದ ದೇವರಾಜ ಬಹದ್ದೂರ್ ಪ್ರಶಸ್ತಿಯೂ ಬಂದಿತು.ನಂತರ ಆದಯ್ಯನ ವಚನಗಳ ಸಂಗ್ರಹವನ್ನೂ ಹೊರ ತಂದರು. ಅವರ ಪ್ರಕಾರ ವೀರಶೈವರ ಷಟ್ ಸ್ಥಳ ತತ್ವಗಳು ಯೇಸುವಿನ ನಡೆನುಡಿಯಲ್ಲಿ ಬಹಳ ಸಾಮ್ಯತೆ ಇದೆ. ಹೀಗೆ ಅವರು. ಕ್ರೈಸ್ತ ಮತ್ತು ಲಿಂಗಾಯತ ಧರ್ಮಗಳ ನಡುವಿನ ಸಾಮರಸ್ಯದ ಸೇತುವೆಯಾಗಿದ್ದರು. ವೀರ ಶೈವ ಧರ್ಮ ಕುರಿತು ೯ ಕೃತಿ ರಚಿಸಿರುವರು. ಸುಮಾರು ನಲವತ್ತು ವರ್ಷಗಳ ಕಾಲ ಅವರ ಬರವಣಿಗೆ ಸಾಗಿತು.

ಕೃತಿರಚನೆ ಬದಲಾಯಿಸಿ

  1. ಅವರ ಭಗವದ್ಗೀತಾ ಪದಪ್ರಯೋಗ ಕೋಶ ಪರಿಶ್ರಮದಿಂದ ರಚಿತವಾದ ನಾಲ್ಕು ಸಂಪಟಗಳ ಬೃಹದ್ಗ್ರಂಥ ಮತ್ತು "ಎಲ್ಲಮ್ಮ, ದಕ್ಷಿಣ ಭಾರತದ ದೇವತೆ" ಎಂಬ ಸಂಶೋಧನಾ ಕಿರು ಕೃತಿ ರಚಿಸಿದರು. ಆದರೆ ಅವು ಇನ್ನೂ ಅಪ್ರಕಟಿತವಾಗಿವೆ.
  2. ಕ್ರೈಸ್ತಧರ್ಮ ಕುರಿತ ಸಾಹಿತ್ಯ ಕೃಷಿ ಅಪಾರ.
  3. "ಬನಾರಸಕ್ಕೆ ಬೆತ್ಲಹೆಮಿನ ವಿನಂತಿಯೊಂದಿಗೆ " ೧೯೨೧ ರಲ್ಲಿ ಪ್ರಾರಂಭವಾಯಿತು.
  4. ೧೯೬೮ ರಲ್ಲಿ ಬರೆದ ಯೇಸುವಿನ ಕೊನೆಯ ದಿನಗಳ ಚರಿತ್ರೆಯಾದ "ಮೃತ್ಯುಂಜಯ" ಅಂತಿಮ ಕೃತಿ.
  5. ಹಿಂದೂಧರ್ಮ ಕುರಿತಾಗಿ ೮ ಕೃತಿಗಳನ್ನು ರಚಿಸಿರುವರು.
  6. " ಹಿಂದೂ ಸಮಾಜ ಹಿತ ಚಿಂತಕ " ದಲ್ಲಿ ಹಿಂದೂ ಧರ್ಮದ ಹಿರಿಮೆಗೆ ಮಾರಕವಾದ ಜಾತಿಯತೆಯ ಕಳೆ -ಕಸವನ್ನು ಕಿತ್ತೊಗೆಯ ಬೇಕೆಂದು ಪ್ರತಿಪಾದಿಸಿರುವರು . ಪ್ರೊ. ರೇ.ಸಿ. ಬೇರಿಯವರ Childrens education Chart ಪುಸ್ತಕವನ್ನು "ಮಕ್ಕಳ ಶಿಕ್ಷಣ ಪಟ " ಎಂಬ ಹೆಸರಿನಲ್ಲಿ ಅನುವಾದಿಸಿ ಪ್ರಕಟಿಸಿರುವರು. ಅದರಲ್ಲಿನ ಅನೇಕ ಅಂಶಗಳು ಶಿಕ್ಷಕ, ಪೋಷಕ ಮತ್ತು ವಿದ್ಯಾರ್ಥಿಗಳಗೆ ಈಗಲೂ ಪ್ರಸ್ತುತವಾಗಿರವುದು ಅದರ ಮೌಲ್ಯದ ಸಂಕೇತವಾಗಿದೆ.
  7. Selected Writings of Reverend Channappa Daniel Uttangi, (1881-1962) : Translated from Kannada Google play][೨]

ಪತ್ರಿಕೆಯ ಸಂಪಾದಕರಾಗಿ ಬದಲಾಯಿಸಿ

ಅವರು ಗ್ರಂಥ ರಚನೆ ಮಾತ್ರವಲ್ಲದೆ ಅನೇಕ ಲೇಖನಗಳನ್ನು ಬರೆದು ಪತ್ರಿಕೆಗಳಲ್ಲೂ ಪ್ರಕಟಿಸಿರುವರು. ಸರ್ವಧರ್ಮಗಳನ್ನು ಸಮಾನ ಗೌರವದಿಂದ ಕಾಣುವ ಮತ್ತು ಸಮಾಜ ಸುಧಾರಕ ಸರ್ವಜ್ಞನ ವಚನಗಳಿಗೆ ಸಾಹಿತ್ಯ ಲೋಕದಲ್ಲಿ ಸೂಕ್ತ ಸ್ಥಾನ ಒದಗಿಸಿದರು. ೧೯೪೨ ರಲ್ಲಿ ನಿವೃತ್ತರಾದರು.

ಗೌರವ ಪ್ರಶಸ್ತಿ ಸನ್ಮಾನಗಳು ಬದಲಾಯಿಸಿ

  1. ೧೯೪೨ ರಲ್ಲಿ ಸಿದ್ದಪ್ಪ ಕಂಬಳಿ ಅವರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಪೌರಸನ್ಮಾನ ಮಾಡಿ, ಅಭಿನಂದನಾಗ್ರಂಥ ಅರ್ಪಿಸಲಾಯಿತು.
  2. ಗುಲ್ಬರ್ಗದಲ್ಲಿ ನಡೆದ ೩೨ನೆಯ ಕನ್ನಡ ಸಾಹಿತ್ಯ ಸಮ್ಮೇಳನದ(೧೯೪೯-೧೯೫೦) ಅಧ್ಯಕ್ಷತೆಯನ್ನು ನೀಡಿ ಗೌರವಿಸಲಾಯಿತು.

ಮರಣ ಬದಲಾಯಿಸಿ

ರೆವರೆಂಡ್, ಉತ್ತಂಗಿ ಚೆನ್ನಪ್ಪನವರು ೧೯೫೨ ಆಗಸ್ಟ್೨೮ ರಂದು ನಿಧನರಾದರು.

ಉಲ್ಲೇಖಗಳು ಬದಲಾಯಿಸಿ

  1. Sarvajna By Kurwatti Basappa Prabhu Prasad,Uttangi channappa
  2. A Channappa Uttangi Reader: Selected Writings of Reverend Channappa Daniel Uttangi, 1881-1962 : Translated from Kannada Google play