ಅಗೋಚರ ಕೈವಾಡ (ಆರ್ಥಿಕ)



ಸ್ವಂತ ಹಿತಾಸಕ್ತಿ (ಸ್ವಾರ್ಥ), ಸೇವೆ ಮತ್ತು ಸರಕುಗಳಿಗಾಗಿ ಸ್ಪರ್ಧೆ, ಪೂರೈಕೆ-ಬೇಡಿಕೆ ಮೊದಲಾದ ಅಂಶಗಳ ಪ್ರಭಾವದಿಂದ ಒಂದು ಮಾರುಕಟ್ಟೆಯು ತಾನಾಗಿಯೇ ಸಾಗುವ ದಿಕ್ಕನ್ನು ವಿವರಿಸಲು ಅರ್ಥಶಾಸ್ತ್ರಜ್ಞರು ಬಳಸುವ ಪದವೇ ಅಗೋಚರ ಕೈವಾಡ. ಇದನ್ನು ಮೊತ್ತ ಮೊದಲಾಗಿ ಅರ್ಥಶಾಸ್ತ್ರಜ್ಞನಾದ ಆಡಮ್ ಸ್ಮಿತ್ ತನ್ನ ನೈತಿಕ ಭಾವನೆಗಳ ತತ್ವ ಎಂಬ ಕೃತಿಯಲ್ಲಿ ರೂಪಕಪದವಾಗಿ ಬಳಸಿದನು. ಅವನ ಅಭಿಪ್ರಾಯದ ಪ್ರಕಾರ, ಸೂಕ್ತ ಪರಿಸ್ಥಿತಿ ದೊರಕಿದಲ್ಲಿ ಒಂದು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಬಲಗಳು ಸಮಾಜಕ್ಕೆ ಲಾಭಕರವಾಗುವ ರೀತಿಯಲ್ಲಿ ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಕಡೆಗೆ ಮಾರುಕಟ್ಟೆಯನ್ನು ತಾನಾಗಿಯೇ ಒಯ್ಯುತ್ತವೆ. ಆಡಳಿತ ವ್ಯವಸ್ಥೆಯಿಂದ ಅತಿ ಕಡಿಮೆ ಹಸ್ತಕ್ಷೇಪ ಇರುವ ಮಾರುಕಟ್ಟೆಯ ಚೌಕಟ್ಟನ್ನು ಸೃಷ್ಟಿಸಲು ಈ ತತ್ವವು ತಳಹದಿಯಾಯಿತು.