ಸೌಮ್ಯ ಸುಧೀಂದ್ರ ರಾವ್

ಸೌಮ್ಯ ಸುಧೀಂದ್ರರಾವ್ ಬದಲಾಯಿಸಿ

ಸೌಮ್ಯ ಸುಧೀಂದ್ರರಾವ್ ನೃತ್ಯ ಕಲಾವಿದರೂ, ನೃತ್ಯ ಸಂಗೀತ ಕಲಾ ವಿಮರ್ಶಕರೂ, ಸಂಗೀತ ನೃತ್ಯ ಸಂಗಮಗಳ ಅಪೂರ್ವ ಗುರುವರ್ಯರೂ, ‘ನೃತ್ಯ ಸುಧಾ’ ಸಂಸ್ಥೆಯ ಸಂಸ್ಥಾಪಕರೂ ಆದ ಸೌಮ್ಯ ಸುಧೀಂದ್ರ ಅವರು ಸಾಂಸ್ಕೃತಿಕ ಕಲಾಲೋಕದಲ್ಲಿ ತಮ್ಮದೇ ಛಾಪನ್ನು ಮೂಡಿಸಿದವರಾಗಿದ್ದಾರೆ.

ಜೀವನ ಮತ್ತು ಸಾಧನೆ ಬದಲಾಯಿಸಿ

ಮೂಲತಃ ಸೌಮ್ಯ ಸುಧೀಂದ್ರರಾವ್‌ ಅವರು ಕಲಾವಿದರ ಕುಟುಂಬದಲ್ಲಿ ಜನಿಸಿದವರು.ಅವರ ತಂದೆ ಶ್ರೀ ಕೃಷ್ಣಾ ರಾವ್‌ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದರು.ತಾಯಿ ಚಂದ್ರಮತಿ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಬಾಲ್ಯದಲ್ಲಿರುವಾಗಲೇ ತಾವು ಕಂಡ ಯಕ್ಷಗಾನದ ಮಜಲುಗಳನ್ನು ಆಪ್ತವಾಗಿ ಅಭ್ಯಸಿಸುತ್ತಿದ್ದ ತಮ್ಮ ಪುಟ್ಟ ಮಗಳ ಆಸಕ್ತಿಗಳನ್ನು ಕಂಡುಕೊಂಡ ಸೌಮ್ಯಾ ಅವರ ತಂದೆ-ತಾಯಂದಿರು ಇವರನ್ನು ಐದನೆಯ ವಯಸ್ಸಿನಲ್ಲೇ, ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾಶ್ರೀ ಶ್ರೀ ಮಾಧವ ರಾವ್‌ ಕೊಡವೂರು ಅವರಲ್ಲಿ ಮೂಗೂರು ಶೈಲಿಯ ಭರತನಾಟ್ಯದ ಕಲಿಕೆಗೆ ವ್ಯವಸ್ಥೆ ಮಾಡಿದರು. ಸೌಮ್ಯ ಅವರು ನೃತ್ಯ ಕಲಾನಿಧಿ ವಿದುಷಿ ಕಮಲಾ ಭಟ್ ಅವರಲ್ಲಿ ಪಂದನಲ್ಲೂರು ಶೈಲಿಯಲ್ಲಿ ಭರತನಾಟ್ಯವನ್ನುಅಭ್ಯಾಸ ಮಾಡಿ, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಭರತನಾಟ್ಯ ವಿದ್ವತ್ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯ ಸಾಧನೆ ಮಾಡಿದರು. ಸಂಗೀತದಲ್ಲೂ ನೃತ್ಯದಷ್ಟೇ ಸಮಾನಾಸಕ್ತಿ ಹೊಂದಿರುವ ಸೌಮ್ಯ ಅವರು ಬಾಲ್ಯದಲ್ಲೇ ತಮ್ಮ ತಾಯಿಯವರಿಂದ ಪ್ರೇರಣೆಗೊಂಡು ಮುಂದೆ ಸಂಗೀತ ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತರು. ಜೊತೆಗೆ ವಿದ್ವಾನ್ ಕೆ. ಎಮ್.ದಾಸ್‌ ಅವರಲ್ಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತವನ್ನೂಅಭ್ಯಾಸ ಮಾಡಿದರು

ನೃತ್ಯ ಸುಧಾ’ ಸಂಸ್ಥೆ= ಬದಲಾಯಿಸಿ

ಅಪರಾಧ ಶಾಸ್ತ್ರ ಹಾಗೂ ಆರಕ್ಷಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರಾದ ಸೌಮ್ಯ ಅವರು ಕೆಲಕಾಲ ಮಂಗಳೂರಿನ ಸ್ಕೂಲ್‌ ಆಫ಼್ ಸೋಶಿಯಲ್ ವರ್ಕ್, ರೋಶಿನಿ ನಿಲಯದಲ್ಲಿ ಅಪರಾಧ ಶಾಸ್ತ್ರ ಉಪನ್ಯಾಸಕಾರಾಗಿ ಸೇವೆ ಸಲ್ಲಿಸಿ ಮುಂದೆ ತಮ್ಮ ಅಂತರಾಳದಲ್ಲಿ ಜಾಗೃತವಾಗಿದ್ದ ಶಾಸ್ತ್ರೀಯ ನೃತ್ಯ ಕಲೆಯ ಮೇಲಿನ ಒಲವಿನಿಂದಾಗಿ ಉಪನ್ಯಾಸ ವೃತ್ತಿಗೆ ವಿದಾಯ ಹೇಳಿ ತಮ್ಮದೇ ಆದ ‘ನೃತ್ಯ ಸುಧಾ’ ಸಂಸ್ಥೆಯನ್ನು ತಮ್ಮ ಹುಟ್ಟೂರಾದ ಉಡುಪಿ ಬಳಿಯ ಕಟಪಾಡಿಯಲ್ಲಿ ಸ್ಥಾಪಿಸಿದರು. ಸೌಮ್ಯ ಅವರು, ತಾವು ತಮ್ಮ ಕಲಿಕೆಯ ದಿನಗಳಲ್ಲಿ ಅನುಭವಿಸಿದ ಸಾರಿಗೆಯ ಕೊರತೆ ಹಾಗೂ ಒಳ್ಳೆಯ ಶಿಕ್ಷಣಕ್ಕಾಗಿ ಮೈಲಿಗಟ್ಟಲೆ ನಡೆಯಬೇಕಾಗಿದ್ದಂತಹ ಸ್ಥಿತಿಗತಿಗಳನ್ನು ನೆನೆದು, ಅಂತಹ ಪರಿಸ್ಥಿತಿ ತಮ್ಮ ಹುಟ್ಟೂರಿನ ಮುಂದಿನ ತಲೆಮಾರಿನ ಮಕ್ಕಳಿಗೆ ತಟ್ಟದಂತೆ ಮಾಡಬೇಕು ಎಂಬ ಸದಾಶಯವನ್ನೇ ತಮ್ಮ ಧ್ಯೇಯವಾಗಿಸಿಕೊಂಡರು. ಈ ನಿಟ್ಟಿನಲ್ಲಿ ಅಂದು ಅವರು ಪುಟ್ಟದಾಗಿ ನೃತ್ಯ ಹೆಜ್ಜೆಯಿರಿಸಿದ ‘ನೃತ್ಯ ಸುಧಾ’ ಸಂಸ್ಥೆ, ಪ್ರಸ್ತುತದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡುತ್ತಾ ಆ ಮಕ್ಕಳ ನೃತ್ಯ ಕಲಿಕೆ, ಪ್ರದರ್ಶನ ಮತ್ತು ನೃತ್ಯ ಪರೀಕ್ಷಾ ಪರಿಣತಿಗಳ ಸಾಧನೆಗಾಗಿನ ವ್ಯವಸ್ಥೆಗಳ ಅಪೂರ್ವ ತಾಣವಾಗಿದೆ. ಸಂಗೀತ ಮತ್ತು ನೃತ್ಯ ಕ್ಷೇತ್ರಗಳೆರಡರಲ್ಲೂ ಪರಿಣಿತ ತರಬೇತಿ ನೀಡುತ್ತಿರುವ ಕೆಲವೇ ಅಪರೂಪದ ಗುರುಗಳಲ್ಲಿ ಸೌಮ್ಯ ಸುಧೀಂದ್ರ ರಾವ್‌ ಅವರು ಒಬ್ಬರೆನಿಸಿದ್ದಾರೆ. ಇದಲ್ಲದೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ನೃತ್ಯ ತರಬೇತಿಗಳನ್ನು ನೀಡುವುದರ ಮೂಲಕ ಅವರ ಜೀವನಕ್ಕೊಂದು ದಾರಿ ಕಲ್ಪಿಸುವ ಯೋಜನೆಗಳನ್ನೂ ಸೌಮ್ಯ ಕೈಗೊಂಡಿದ್ದಾರೆ. ರೋಶಿನಿ ನಿಲಯ(ಮಂಗಳೂರು) ಬೆಸೆಂಟ್ ಪದವೀ ಪೂರ್ವಕಾಲೇಜು, ಸೈಂಟ್ ಮೇರೀಸ್‌ ಕಾಲೇಜು(ಶಿರ್ವ), ಸೈಂಟ್ ಮಿಲಾಗ್ರಿಸ್‌ ಕಾಲೇಜು(ಕಲ್ಯಾಣ್ಪುರ) ಮುಂತಾದ ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳಿಗೆ ಸೌಮ್ಯ ಸುಧೀಂದ್ರ ರಾವ್‌ ಅವರ ನೃತ್ಯ ಪ್ರಾತ್ಯಕ್ಷಿಕೆ, ಕಾರ್ಯಾಗಾರಗಳ ಲಾಭದೊರೆತಿದೆ.

ನೃತ್ಯ ಪ್ರದರ್ಶನಗಳು ಬದಲಾಯಿಸಿ

ಸೌಮ್ಯ ಸುಧೀಂದ್ರ ರಾವ್‌ಅವರು ಹಲವಾರು ಪ್ರತಿಷ್ಠಿತ ನೃತ್ಯೋತ್ಸವಗಳಲ್ಲಿ ಮತ್ತು ಪ್ರಾತ್ಯಕ್ಷಿಕೆಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದಾರೆ. ಮಣಿಪುರಿ ನೃತ್ಯ, ಕಥಕ್ ನೃತ್ಯಗಳ ಕಾರ್ಯಾಗಾರಗಳಲ್ಲಿ ಸಹಾ ಭಾಗವಹಿಸಿ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ. ಕರ್ನಾಟಕದ ಹಲವಾರು ಪ್ರತಿಷ್ಟಿತ ನೃತ್ಯ ವೇದಿಕೆಗಳಲ್ಲಷ್ಟೇ ಅಲ್ಲದೆ, ತಮಿಳುನಾಡಿನ ಚಿದಂಬರಂನಲ್ಲಿ, ಗೋವಾದ ಮಹಾಲಸ ನಾರಾಯಣಿ ಉತ್ಸವದಲ್ಲಿ ಹಾಗೂ ಬಹ್ರೈನ್‌ ದೇಶದಲ್ಲೂ ಆಹ್ವಾನಿತರಾಗಿ ನೃತ್ಯ ಪ್ರದರ್ಶನವನ್ನು ನೀಡಿ ಬಂದಿದ್ದಾರೆ. ಸೌಮ್ಯ ಅವರು ಹಲವಾರು ನೃತ್ಯ ರೂಪಕಗಳನ್ನು ಸ್ವಯಂ ರಚಿಸಿ, ನೃತ್ಯ ಸಂಯೋಜಿಸಿ ಪ್ರದರ್ಶಿಸಿದ್ದಾರೆ. ‘ಗಿರಿಜಾಕಲ್ಯಾಣ’, ‘ಭಸ್ಮಾಸುರ ಮೋಹಿನಿ’, ‘ದಕ್ಷಧ್ವರ’, ‘ಶ್ರೀಕೃಷ್ಣ ಲೀಲಾಮೃತಂ’, ‘ಏಸು ಕ್ರಿಸ್ತ ಮಹಿಮೆ’, ‘ಮಾರ ಸಂಹಾರ’, ‘ಶಿವೋಹಂ’, ‘ಅಷ್ಟ ಲಕ್ಷ್ಮಿ ವೈಭವ’, ‘ರಾಮಾಯಣಂ’, ‘ದಶಾವತಾರ’ ಮುಂತಾದವು ಸೌಮ್ಯ ಸುಧೀಂದ್ರರಾವ್‌ ಅವರ ಅತಿ ಮನ್ನಣೆ ಪಡೆದ ನೃತ್ಯ ರೂಪಕಗಳಲ್ಲಿ ಸೇರಿವೆ. ‘ನವವಿಧಭಕ್ತಿ ಶ್ರೀಕೃಷ್ಣಾರ್ಪಣ’ ಎಂಬ ಕನ್ನಡ ಸಾಹಿತ್ಯವುಳ್ಳ ಸೌಮ್ಯ ಅವರ ನವ್ಯ ನೃತ್ಯಪ್ರಯೋಗವು ಇತ್ತೀಚೆಗೆ ಶ್ರೀಕೃಷ್ಣ ಮಠದ ಸೋದೆ ಪರ್ಯಾಯದಲ್ಲಿ ಪ್ರದರ್ಶನಗೊಂಡು ಕಲಾವಿಮರ್ಶಕರಿಂದ ಅತ್ಯುತ್ತಮ ಕಾರ್ಯಕ್ರಮವೆಂಬ ಪ್ರಶಂಸೆಗೆ ಪಾತ್ರವಾಗಿದೆ. ಈ ಕುರಿತು ತಮ್ಮ ಕೃತಜ್ಞತಾಪೂರ್ವಕ ಪ್ರತಿಕ್ರಿಯೆ ನೀಡುವ ಸೌಮ್ಯ ಅವರು “ಭಾಗವತ ಪುರಾಣದ ದೀರ್ಘ ಸಂಶೋಧನಾಕಲಿಕೆಯಿಂದ ಇದು ಸಾಧ್ಯವಾಯಿತು” ಎಂದು ಅಭಿಪ್ರಾಯಿಸುತ್ತಾರೆ.

ಸನ್ಮಾನ, ಗೌರವ, ಪ್ರಶಸ್ತಿಗಳು ಬದಲಾಯಿಸಿ

ಉರ್ವಾದ ನಾಟ್ಯಾಲಯದಿಂದ ‘ನಾಟ್ಯ ಪ್ರವೀಣೆ’, ವಿಶ್ವನಾಥಕ್ಷೇತ್ರದ ‘ನೃತ್ಯ ಕಲಾ ಉಪಾಸಕಿ’, ಬೆಸೆಂಟ್ ಶಿಕ್ಷಣ ಸಂಸ್ಥೆಯಿಂದ ‘ವರ್ಷದ ವ್ಯಕ್ತಿ’, ಬೆಂಗಳೂರಿನ ಕಾ.ಯು.ವೇ ರಾಜ್ಯೋತ್ಸವ ಪ್ರಶಸ್ತಿ, ಬಹ್ರೈನ್‌ ದೇಶದಲ್ಲಿನ ‘ವಸಂತೋತ್ಸವದ ವರ್ಷದ ಕಲಾವಿದೆ’ ಮುಂತಾದ ಪ್ರಮುಖ ಗೌರವಗಳೇ ಅಲ್ಲದೆ ಹಲವಾರು ಪ್ರತಿಷ್ಠಿತ ಸಂಘ ಸಂಸ್ಥೆಗಳ ಪ್ರಶಸ್ತಿ, ಸನ್ಮಾನ, ಗೌರವಗಳು ಸೌಮ್ಯ ಸುಧೀಂದ್ರ ರಾವ್‌ ಅವರನ್ನು ಅರಸಿ ಬಂದಿವೆ.

ಸೇವೆಗಳು ಬದಲಾಯಿಸಿ

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ನೃತ್ಯ ಪರೀಕ್ಷೆಗಳಿಗೆ ಹಲವಾರು ವರ್ಷಗಳಿಂದ ಪರೀಕ್ಷಕರಾಗಿ, ಮೌಲ್ಯಮಾಪಕರಾಗಿ ಸಹಾ ಸೌಮ್ಯ ಅವರ ಸೇವೆ ಸಲ್ಲುತ್ತಿದ್ದೆ. ಇದಲ್ಲದೆ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ನೃತ್ಯ, ಸಂಗೀತ ಸ್ಪರ್ದೆಗಳಿಗೆ ತೀರ್ಪುಗಾರರಾಗಿ ಸಹಾ ಅವರು ಸೇವೆ ಸಲ್ಲಿಸಿದ್ದಾರೆ. ಕಾರ್ಯಕ್ರಮ ನಿರೂಪಣೆ, ಪುಟ್ಟ ಕಥೆಗಳು, ಹನಿಗವನ ಮುಂತಾದವು ಸೌಮ್ಯ ಅವರ ಇನ್ನಿತರ ಹವ್ಯಾಸಿ ಕ್ಷೇತ್ರಗಳಾಗಿವೆ. ಇದಲ್ಲದೆ ಸೌಮ್ಯ ಸುಧೀಂದ್ರ ರಾವ್‌ ಅವರು ಪ್ರಸಿದ್ಧ ಪತ್ರಿಕೆಗಳಲ್ಲಿನ ವಿದ್ವತ್ಪೂರ್ಣ ಕಲಾವಿಮರ್ಶೆಗಳಿಗಾಗಿ ಸಹಾ ಹೆಸರಾಗಿದ್ದಾರೆ. ನೃತ್ಯದಲ್ಲಿ ಹೊಸ ಚಿಂತನೆ, ಹೊಸ ಪ್ರಯೋಗಳಾಗಬೇಕೆಂಬ ತಮ್ಮಆಶಯವನ್ನು ನನಸಾಗಿಸುವಲ್ಲಿ, ಅವರು ನಿರಂತರವಾಗಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದಾರೆ. ಈ ಎಲ್ಲ ವೈಶಿಷ್ಟ್ಯಗಳ ಜೊತೆಗೆಕಿರುತೆರೆಯ ‘ಜೀವನರಾಗ’ ಧಾರವಾಹಿಯಲ್ಲಿ ಸಹಾ ಅವರು ನಟಿಸುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಸುರಭಿ ಪ್ರತಿಷ್ಠಾನದ ಅನಾಥ ಮಕ್ಕಳ ಬೆಂಬಲಕ್ಕಾಗಿ ಬೆಂಗಳೂರಿನಲ್ಲಿ ವ್ಯವಸ್ಥೆಗೊಂಡಿದ್ದ ‘ಅನಾವರಣ’ ಕಾರ್ಯಕ್ರಮದಲ್ಲಿ ಸೌಮ್ಯ ಸುಧೀಂದ್ರ ರಾವ್‌ ಅವರು ಯಾವುದೇ ಪ್ರತಿಫಲಾಕ್ಷೆಯಿಲ್ಲದೆ, ತಮ್ಮ ಮಗು ಹಾಗೂ, ತಾವು ತಮ್ಮ ಸುತ್ತಮುತ್ತಲಿನ ಗ್ರಾಮೀಣ ಪರಿಸರದಲ್ಲಿ ವಿಶಿಷ್ಟ ಕಾಳಜಿಯಿಂದ ಬೆಳೆಸಿರುವ ತಮ್ಮ ಶಿಷ್ಯವೃಂದದೊಡಗೂಡಿ ನೀಡಿದ ಕಾರ್ಯಕ್ರಮ ಇನ್ನಿಲ್ಲದಂತೆ ನನ್ನ ಹೃದಯದಲ್ಲಿ ನೆಲೆನಿಂತಿದೆ. ಅಂದು ಸೌಮ್ಯ ಸುಧೀಂದ್ರ ರಾವ್‌ ಅವರು ಪ್ರಸ್ತುತ ಪಡಿಸಿದ ಪುಷ್ಪಾಂಜಲಿ ನೃತ್ಯ, ದಶಾವತಾರ ರೂಪಕ ಹಾಗೂ ಎಲ್ಲಾಡಿ ಬಂದೆ ಮುದ್ದು ರಂಗಯ್ಯ ಮುಂತಾದ ನೃತ್ಯರೂಪಕಗಳ ದೃಶ್ಯ ವೈಭವ, ಸುಶ್ರಾವ್ಯ ಸಂಗೀತ, ನಿರೂಪಣೆ, ತಂಡದ ಪ್ರತಿಯೋರ್ವರ ನೃತ್ಯಾಭಿನಯಗಳಲ್ಲಿನ ಪಕ್ವತೆ ಮತ್ತು ಸುಲಲಿತೆಗಳ ಸಂಯೋಗದಿಂದಾಗಿ ಪ್ರೇಕ್ಷಕರ ಹೃನ್ಮನಗಳನ್ನು ಆಪ್ತವಾಗಿ ಸೆಳೆದವು. ಅದರಲ್ಲೂ ವೇದಿಕೆಯ ಮೇಲೆ ಒಂದು ಬದಿಯಲ್ಲಿ ನಿಂತು ಪ್ರತಿಕ್ಷಣದ ನೃತ್ಯ ಪ್ರಸ್ತುತಿಗಳನ್ನೂ ಅತ್ಯಂತ ಆಪ್ತವಾಗಿ ಕಣ್ತುಂಬಿಕೊಳ್ಳುತ್ತಿದ್ದ ಸೌಮ್ಯ ಸುಧೀಂದ್ರ ರಾವ್‌ ಅವರ ಪುತ್ರಿ ಪುಟ್ಟ ಬಾಲೆ ಶ್ರೇಯಾ, ಹೀಗೆ ಸೌಮ್ಯ ಸುಧೀಂದ್ರ ರಾವ್‌ ಅವರು ತಮ್ಮ ತಂಡ ಪ್ರದರ್ಶನದಲ್ಲಿ ಪ್ರತಿಯೊಂದು ವಿಚಾರಕ್ಕೂ ಗಮನಹರಿಸುವ ರೀತಿ ಹೃದಯಂಗಮವಾದದ್ದು.

===ಉಲ್ಲೇಖ===

www.sallapa.com