ತಿರುವನಂತಪುರದಲ್ಲಿರುವ ಇಸ್ರೋದ ಕೇಂದ್ರ ವಿ.ಎಸ್.ಎಸ್.ಸಿ.ವು ದೇಶದ ಹೆಮ್ಮೆಯ ರಾಕೆಟ್^ಗಳನ್ನು ನಿರ್ಮಿಸುತ್ತದೆ. ಈ ಸಂಸ್ಥೆಯ ಆರಂಭದ ದಿನಗಳಿಂದಲೂ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ ಸಿ.ಆರ್.ಸತ್ಯ ಅವರು ಸಮ್ಮಿಶ್ರ ವಸ್ತು ಅಂದರೆ ಕಾಂಪಾಸಿಟ್ ಸಾಮಗ್ರಿಯನ್ನು ದೇಶೀಯವಾಗಿ ಉತ್ಪಾದಿಸಿದವರು. ಅಬ್ದುಲ್ ಕಲಾಮ್ ಅವರ ಮಾರ್ಗದರ್ಶನದಲ್ಲಿ ಈ ವಿಶೇಷ ಸಾಮಗ್ರಿಯ ಸುಲಭ ತಯಾರಿಕೆಯತ್ತ ತೊಡಗಿಕೊಂಡರು. ವಿ.ಎಸ್.ಎಸ್.ಸಿ.ಯ ತಾಂತ್ರಿಕ ನಿರ್ದೇಶಕರಾಗಿದ್ದ ಸಮಯದಲ್ಲಿ ದೇಶೀಯವಾಗಿ ಅತ್ಯಮೂಲ್ಯ ಎಂಜಿನಿಯರಿಂಗ್ ಸಾಮಗ್ರಿಗಳ ಉತ್ಪಾದನೆಗೆ ನೆರವಾಗಲೆಂದು ಟಾಟಾ ಸಮೂಹದ ಟಾಟಾ ಅಡ್ವಾನ್ಸ್ಡ್ ಮೆಟೀರಿಯಲ್ಸ್ನ ಉಪಾಧ್ಯಕ್ಷರ ಹೊಣೆ ಹೊತ್ತುಕೊಂಡರು. ಪ್ರಸ್ತುತ ಅದೇ ಕಂಪನಿಗೆ ತಾಂತ್ರಿಕ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.

ಕನ್ನಡದಲ್ಲಿ ಬರಹ ಅದರಲ್ಲೂ ಹಾಸ್ಯ ಬರಹಗಳತ್ತ ಸಿ.ಆರ್.ಸತ್ಯ ಅವರಿಗೆ ವಿಶೇಷ ಒಲವು. ಆವರ ಅನೇಕ ಹಾಸ್ಯ ಬರಹಗಳ ಸಂಗ್ರಹ, ವ್ಯಕ್ತಿ ಪರಿಚಯಗಳ ಸಂಗ್ರಹ, ವೃತ್ತಿ ಜೀವನದ ಅನುಭವಗಳ ಸಂಗ್ರಹ, ತಾಂತ್ರಿಕ ಲೇಖನಗಳ ಸಂಗ್ರಹ .... ಹೀಗೆ ಅವರ ಅನೇಕ ಕನ್ನಡ ಕೃತಿಗಳು ಪ್ರಕಟಗೊಂಡಿವೆ. ಯು.ಆರ್.ರಾವ್ ಹಾಗೂ ವಿಕ್ರಮ್ ಸಾರಾಭಾಯ್ ಅವರ ಜೀವನ ಚರಿತ್ರೆಗಳನ್ನೂ ಸಹಾ ಸಿ.ಆರ್.ಸತ್ಯ ರಚಿಸಿದ್ದಾರೆ. ಅವರ ಹಾಸ್ಯ ಲೇಖನಗಳು ಅಪರಂಜಿ ಮಾಸ ಪತ್ರಿಕೆಯಲ್ಲಿ ತಪ್ಪದೇ ಪ್ರಕಟವಾಗುತ್ತಿವೆ.

ಅಳಿವಿಲ್ಲದ ಸ್ಥಾವರ ಎಂಬ ಅವರ ಪುಸ್ತಕವು ಒಬ್ಬ ಹೊರನಾಡ ಕನ್ನಡಿಗನಾಗಿ, ಕೇರಳದ ಚರಿತ್ರೆ, ನಾಡು, ನುಡಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಕೃತಿ. ಅವರ ಅನ್ವೇಷಣೆಯ ಕೇಂದ್ರ ಬಿಂದುವಾದ ಅನಂತಶಯನದ ಭೌತಿಕ ವೈಭವವನ್ನು ಬಹು ಸ್ವಾರಸ್ಯವಾಗಿ ನಿರೂಪಿಸಿರುವ ಸಿ.ಆರ್.ಸತ್ಯ ಹೆಜ್ಜೆ ಹೆಜ್ಜೆಗೂ ಕೃತಿಯ ಬಗ್ಗೆ ಕುತೂಹಲವನ್ನು ಹೆಚ್ಚಿಸುತ್ತಾರೆ. ಇದೇ ಪುಸ್ತಕದ ಇಂಗ್ಲಿಷ್ ಆವೃತ್ತಿ Sentinels of Glory ಅನ್ನು ಅಬ್ದುಲ್ ಕಲಾಮ್ ತೀವ್ರವಾಗಿ ಮೆಚ್ಚಿಕೊಂಡಿದ್ದಾರೆ