ಸದಸ್ಯ:Tharunya Sanil/ನನ್ನ ಪ್ರಯೋಗಪುಟ

ನಡಗುತ್ತಿನ ಮನೆ ಬದಲಾಯಿಸಿ

ನಡಗ್ರಾಮಕ್ಕೆ ನಡ ಎಂಬ ಹೆಸರಿಗೆ ಮೂಲ ಕಾರಣವೇ ಇಲ್ಲಿರುವ ಗುತ್ತಿನ ಮನೆ. ಗ್ರಾಮದ ಕೇಂದ್ರ ಸ್ಥಾನವಾದ ಮಂಜೊಟ್ಟಿಯಿಂದ ಪ್ರೇಕ್ಷಣೀಯ ಸ್ಥಳವಾದ ಗಡಾಯಿಕಲ್ಲಿಗೆ ಹೋಗುವ ಹಾದಿಯಲ್ಲಿ ಕಾಣಸಿಗುತ್ತದೆ. ಅಂದರೆ ಮಂಜೊಟ್ಟಿ ಪೇಟೆಯಿಂದ ಸುಮಾರು ಎರಡೂವರೆ ಕಿ. ಮಿ ದೂರದಲ್ಲಿದೆ.

ಕಾಲ ಮತ್ತು ಹಿನ್ನಲೆ ಬದಲಾಯಿಸಿ

ಈ ಗುತ್ತಿನ ಮನೆಯು ಸ್ಥಾಪನೆಯಾದ ವರ್ಷದ ನಿಖರ ಮಾಹಿತಿಗಳು ಇಲ್ಲದಿದ್ದರೂ ಸರಿ ಸುಮಾರು ಒಂದು ಶತಮಾನಕ್ಕಿಂತಲೂ ಹಿಂದೆಯೇ ಇದನ್ನು ನಿರ್ಮಿಸಲಾಗಿತ್ತೆಂದು ಮನೆಯ ಯಜಮಾನರ ಅಭಿಪ್ರಾಯ. ಬ್ರಿಟಿಷ್ ಆಡಳಿತ ಅವಧಿಯಲ್ಲಿ ಹೆಚ್ಚು ಪ್ರಸಿದ್ಧಿಯಲ್ಲಿದ್ದ ಈ ನಡುಗುತ್ತಿನ ಮನೆ ಇಂದಿನ ಅದೇ ಸೌಂದರ್ಯ, ಶೈಲಿಯ ಮೂಲಕ ನೋಡುಗರನ್ನು ಆಕರ್ಷಿಸುತ್ತಲಿದೆ. ಹಿಂದೆ ಕಾಜೂರಿನ ದರ್ಗವನ್ನು ಸಂಪರ್ಕಿಸುತ್ತಿದ್ದ ಏಕೈಕ ದಾರಿಯಾಗಿದ್ದು ಈ ಭಾಗದಲ್ಲಿ ಗ್ರಾಮಕ್ಕೆ ಹೊಸದಾದ ಅಸ್ತಿತ್ವವನ್ನು ಈ ಮನೆ ತಂದುಕೊಟ್ಟಿದೆ. ಗುತ್ತಿನ ಮನೆಯ ಸ್ಥಾಪನೆಯ ನಂತರ ಈ ಪ್ರದೇಶವನ್ನು ಜನ ಗ್ರಾಮದ ಕೇಂದ್ರ ಸ್ಥಾನವಾಗಿ ಬಳಸಿಕೊಂಡಿದ್ದರು ಗುತ್ತಿನ ಮನೆಯ ಆಡಳಿತದಲ್ಲಿ ದೇವಪ್ಪಾಜ್ರೀಯವರ ಕಾಲದಲ್ಲಿ ಇದು ಹೆಚ್ಚಿನ ಖ್ಯಾತಿಯನ್ನು ಗಳಿಸಿತು. ಇದರ ಆಡಳಿತ ನಿರ್ವಹಣೆ, ವ್ಯವಹಾರ ಚಾತುರ್ಯವು ಬಹಳಷ್ಟು ಪ್ರಸಿದ್ದಿಯನ್ನು ಪಡೆದಿದೆ.

ರಚನೆ ಬದಲಾಯಿಸಿ

ಹಿಂದೆ ಒಟ್ಟು ಮೂರು ನಾಲ್ಕು ಎಕರೆಯವರೆಗೆ ವಿಶಾಲವಾಗಿ ಈ ಗುತ್ತಿನ ಮನೆಯು ರೂಪುಗೊಂಡಿತ್ತು ಆದರೆ ಸದ್ಯ ಒಂದೆರಡು ಎಕರೆ ವ್ಯಾಪ್ತಿಯೊಳಗೆ ಈ ಗುತ್ತಿನ ಮನೆ ಇದೆ. ಕೆಂಪು ಇಟ್ಟಿಗೆ ಕೆಂಪು ಕಲ್ಲುಗಳಿಂದ ನಿರ್ಮಿಸಲ್ಪಟ್ಟ ಇದರ ತಳಹಂತಕ್ಕೆ ದಣಸು ಮಾಡಿದ ಮಣ್ಣಿನ ಮಿಶ್ರಣವನ್ನು ಸೇರಿಕಟ್ಟಲಾಗಿದೆ. ಸುಣ್ಣ, ಬೆಲ್ಲ, ಮರಳಿನ ಮಿಶ್ರಣದಿಂದ ಗೋಡೆಗಳನ್ನು ನಿರ್ಮಿಸಲಾಗಿದೆ. ಈ ಗುತ್ತಿನ ಮನೆ ಮೊದಲು ಮೂರು ಅಂತಸ್ತುಗಳನ್ನು ಹೊಂದಿತ್ತು. ಸದ್ಯ ಎರಡು ಅಂತಸ್ತಿನಲ್ಲಿದೆ. ಮೇಲ್ಚಾವಣಿಯನ್ನು ಸಂಪೂರ್ಣವಾಗಿ ವಿಶೇಷ ವಿನ್ಯಾಸ ಹೊಂದಿರುವ ಮರದ ಪಕ್ಕಾಸುಗಳಿಂದ ತಯಾರು ಮಾಡಲಾಗಿದ್ದು ಹಂಚಿನ ಮುಚ್ಚಳಿಗೆಯನ್ನು ಹೊಂದಿದೆ. ಮನೆಯ ನೆಲವನ್ನೆಲ್ಲಾ ಕೆಂಪಿಟ್ಟಿಗೆಯಿಂದಲೆ ನಿರ್ಮಾಣ ಮಾಡಲಾಗಿದೆ. ಮನೆಯ ಎದುರಿನ ಮಾರ್ಗವೊಂದನ್ನು ಬಿಟ್ಟು ಉಳಿದ ಎಲ್ಲಾ ಭಾಗವನ್ನು ಯೂ ಆಕಾರದಲ್ಲಿ ನಿರ್ಮಿಸಲಾಗಿದೆ. ಛಾವಣಿಗೆ ಆಧರವಾಗಲು ಮರದ ಕಂಬಗಳನ್ನು ನಿಲ್ಲಿಸಲಾಗಿದೆ. ಮನೆಯ ಚಾವಡಿಯಲ್ಲಿ ನಿರ್ಮಿಸಲ್ಪಟ್ಟ ಭೋದಿಗೆಯ ಕಂಬ ಮತ್ತು ಬಾಜಾರ್ ಹಲಗೆಗಳಲ್ಲಿ ಕಲಾಕುಸುರಿಯ ಸ್ಪಷ್ಟ ಚಿತ್ರಣವಿದೆ. ಇದನ್ನು ಒಂದು ಬಾರಿ ನವೀಕರಣ ಮಾಡಲಾಗಿದೆ. ಒಟ್ಟು ೫೦ ಜನರು ಏಕಕಾಲದಲ್ಲಿ ವಾಸ್ತವ್ಯ ಹೂಡಬಹುದಾದ ಸಾಮರ್ಥ್ಯವನ್ನು ಈ ಮನೆ ಹೊಂದಿದೆ. ಈ ಗುತ್ತಿನ ಮನೆಗೆ ಸಂಬಂಧಿಸಿದಂತೆ ಸುತ್ತಲಿನ ಹಳ್ಳಿಗಳಲ್ಲಿ ೬೦ ಎಕರೆ ಜಾಗವಿದ್ದು ಉಳಿದಂತೆ ಗ್ರಾಮದ ಮೇಲೆ ಹೆಚ್ಚಿನದಾದ ಹಿಡಿತವೂ ಇದೆ. ಗ್ರಾಮದ ಮೇಲೆ ವಿಶೇಷವಾದ ಅಧಿಕಾರವಿದ್ದುದರಿಂದ ಗ್ರಾಮಕ್ಕೆ ಸಂಬಂಧಪಟ್ಟ ಎಲ್ಲ ರಾಜಕೀಯ ಆಡಳಿತ ವಿಚಾರಗಳು ಈ ಮನೆಯಲ್ಲಿ ನಿರ್ಣಯವಾಗುತ್ತಿತ್ತು. ಮುಖ್ಯವಾಗಿ ಕಂದಾಯ, ಸುಂಕ ಮೊದಲಾದ ಸಮಸ್ಯೆಗಳ ಬಗ್ಗೆ ನಿರ್ಧಾರವನ್ನು ಇಲ್ಲೇ ಮಾಡಲಾಗುತ್ತಿತ್ತು. ಗೇಣಿ ಭೂಮಿಯು ಇದರೊಳಗೆ ಬರುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ತೀರ್ವೆ ವಸೂಲಾತಿಯು ನಡೆಯುತ್ತಿತ್ತು. ಗುತ್ತಿನ ಮನೆಯ ಆಡಳಿತ ವ್ಯಾಪ್ತಿ ಎಷ್ಟಿತ್ತೆಂದರೆ ಪುತ್ತೂರು, ಬಂಗಾಡಿಗಳಲ್ಲಿಯೂ ಇವರು ಆಡಳಿತ ನಿರ್ವಹಣೆ ಮಾಡುತ್ತಿದ್ದರು. ಈ ವ್ಯಾಪ್ತಿಯಲ್ಲಿ ಬರುವ ಜನರು ತಮ್ಮ ಭೂಮಿಯಲ್ಲಿ ಬೆಳೆದ ಬೆಳೆಗಳಲ್ಲಿ ಮೂರನೆಯ ಒಂದು ಭಾಗದಷ್ಟು ಗುತ್ತಿನ ಮನೆಯ ಜಮಾ ಉಗ್ರಾಣಕ್ಕೆ ಸಲ್ಲಿಸಿ ಲೆಕ್ಕ ಒಪ್ಪಿಸಬೇಕಾಗಿತ್ತು. ಇಷ್ಟಾದರೂ ಜನರ ಸುಭೀಕ್ಷೆ ಪಟೇಲರ ಮುಖ್ಯ ಆಶಯವಾಗಿತ್ತು. ಒಟ್ಟಿನಲ್ಲಿ ಈಗಿನ ನ್ಯಾಯ ತೀರ್ಮಾನಗಳ ಕೋರ್ಟಿನಂತೆ ಆಗಿನ ಕಾಲದಲ್ಲಿ ಗುತ್ತಿನ ಮನೆಗಳು ಕಂಡುಬರುತ್ತಿದ್ದವು. ಇಲ್ಲಿ ಪೋಲೀಸರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಕೆಗಳು ನಡೆಯುತ್ತಿದ್ದವು. ಈ ಗುತ್ತಿನ ಮನೆಯಲ್ಲಿ ಕೇವಲ ಕೆಲಸ ನಿರ್ವಹಣೆಗೆಂದೇ ಹಿಂದೆ ೧೦ ರಿಂದ ೧೫ ಜನ ಕೆಲಸಗಾರರಿದ್ದರಂತೆ ಸದ್ಯ ೩ ಜನರಿಗೆ ಇಳಿದಿದೆ. ಮನೆ ಮನೆತನದ ವಿಶೇಷ ಗೌರವವನ್ನು ಈ ಗುತ್ತಿನ ಮನೆಯಲ್ಲಿ ರಾಜಮುದ್ರಿಕೆ ಕೊಡುವ, ಅರಸರಿಗೆ ಪಟ್ಟಾಭಿಷೇಕ ನಡೆಯುವ, ಮಹಾನ್ ಕೈಂಕರ್ಯವು ನಡೆಯುತ್ತಿತ್ತು. ಸದ್ಯ ಈ ಗುತ್ತಿನ ಮನೆಯ ಉಸ್ತುವಾರಿಯನ್ನು ಶ್ರೀ ಧನಂಜಯ ಅಜ್ರಿ ವಹಿಸಿಕೊಂಡು ನಿರ್ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಸಾಂಪ್ರದಾಯಿಕ ಪರಂಪರೆ, ಆಡಳಿತ ವ್ಯವಸ್ಥೆಯ ಕಳೆಯನ್ನು ಮ್ಗಡಸಿಕೊಂಡಿರು ನಡ ಗುತ್ತಿನ ಮನೆಯು ದಕ್ಷಿಣ ಕನ್ನಡ ಜಿಲ್ಲೆಯ ಕೆಲವೇ ಕೆಲವು ಗುತ್ತಿನ ಮನೆಗಳಲ್ಲಿ ಒಂದಾಗಿದೆ.

ಉಲ್ಲೇಖ ಬದಲಾಯಿಸಿ

  1. https://www.thehindu.com/life-and-style/homes-and-gardens/guthu-mane-a-historical-treasure/article19203377.ece
  2. https://www.youtube.com/watch?v=zvdesKF0Eag