ದುರ್ವ್ಯಸನ

ನಾವು ಮಾಡಿದ ಪಾಪ ಕೃತ್ಯಗಳಿಗಾಗಿ ಅಥವಾ ತಪ್ಪುಗಳಿಗಾಗಿ ನರಕದಲ್ಲಿ ನಾವು ತೀವ್ರ ಯಾತನೆ, ಶಿಕ್ಷೆಯನ್ನು ಅನುಭವಿಸಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಜೀವಿತವಾಗಿರುವಾಗ ಈ ಲೋಕದಲ್ಲಿ ನಾವು ಸತ್ಕಾರ್ಯಗಳನ್ನು ಮಾಡಿ ಪುಣ್ಯ ಕಟ್ಟಿಕೊಳ್ಳಬೇಕು. ಅಂದರೆ ನಮಗೆ ಸ್ವರ್ಗ ಸಿಗುತ್ತದೆ ಎಂದು ಪುರಾಣ ಪುಣ್ಯ ಕಥೆಗಳಲ್ಲಿ ಹೇಳಲಾಗುತ್ತದೆ. ಆದರೆ ವಾಸ್ತವಿಕತೆಯಿಂದ ಯೋಚಿಸಿದಲ್ಲಿ ಸ್ವರ್ಗ, ನರಕಗಳೆಂದು ಬೇರೆ ಲೋಕಗಳೇ ಇಲ್ಲ. ನಮ್ಮ ನಡತೆ, ಸ್ವಭಾವ, ಸತ್ಕಾರ್ಯ, ಸುಕೃತ್ಯಗಳ ಪ್ರತಿಫಲವಾಗಿ ನಾವು ಸ್ವರ್ಗ ಅಥವಾ ನರಕವನ್ನು ಅನುಭವಿಸಬೇಕಾಗಿರುವುದು ಈ ಲೋಕದಲ್ಲಿಯೇ, ಅದೂ ನಮ್ಮ ಜೀವಿತ ಕಾಲದಲ್ಲಿಯೇ! ಆಧುನಿಕತೆಯ ಭರಾಟೆಯಲ್ಲಿ ವೈಜ್ಞಾನಿಕವಾಗಿ ನಾವು ಮುಂದುವರೆಯುತ್ತಿರುವದೇನೋ ನಿಜ. ಆಧುನಿಕತೆಯ ಹೆಸರಿನಲ್ಲಿ ಅನಾಗರಿಕತೆಯತ್ತ ಹೆಜ್ಜೆ ಹಾಕುತ್ತಿದ್ದೇವೆಯೋ, ಏನೋ? ಎಂಬ ಸಂದೇಹ ಕೆಲವೊಮ್ಮೆ ಕಾಡುತ್ತದೆ. ಇಂದಿನ ಆಧುನಿಕತೆಯಲ್ಲಿನ ಯುವ ಜನಾಂಗವನ್ನು ನೋಡಿದರೆ, ಅದಕ್ಕೆ ಹಿರಿಯರ ಸಂಸ್ಕಾರದ ಕೊರತೆಯಿರುವುದು ಎದ್ದು ಕಾಣುತ್ತಿದೆ. ಆಧುನಿಕತೆಯ ನೆಪದಲ್ಲಿ ಅನೇಕ ದುಶ್ಚಟಗಳಿಗೆ ದಾಸರಾಗುತ್ತಿರುವ ಯುವಕರು ಇದರಿಂದ ತಮ್ಮ ಭವಿಷ್ಯಕ್ಕೆ ಈಗಿನಿಂದಲೇ ಅಂಧಕಾರದ ಛಾಯೆಯನ್ನು ಆಹ್ವಾನಿಸುತ್ತಿದ್ದಾರೆ. ಆರೋಗ್ಯ ಸರಿಯಾಗಿದ್ದರೆ ಮಾತ್ರ ದೇಹ, ಮನಸ್ಸು ಸದೃಢವಾಗಿರಲು ಸಾಧ್ಯ. ನಮ್ಮ ದೇಹ ಮನಸ್ಸು ಸದೃಢ ಹಾಗೂ ಆರೋಗ್ಯಕರವಾಗಿದ್ದರೆ ಮಾತ್ರ ನಮ್ಮ ಭವಿಷ್ಯ ಉಜ್ವಲವಾಗುವದಲ್ಲದೇ, ಆರೋಗ್ಯಕರ ಸಮಾಜ ನಿರ್ಮಾಣವೂ ಸಾಧ್ಯ.