ಅಂಟಿಗೆ ಪಂಟಿಗೆ ಬದಲಾಯಿಸಿ

ಅಂಟಿಗೆ-ಪಂಟಿಗೆಯು ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯ ಕೆಲವು ಭಾಗಗಳಲ್ಲಿ ಪ್ರಚಲಿತದಲ್ಲಿರುವ ಕಲೆ. ಅವಂಟಿಗ್ಯೋ-ಪವಂಟಿಗ್ಯೋ, ಅಡೀಪೀಡಿ, ಅಂಟಿ ಪಂಟಿ, ಅವಟಿಗೋ ಪವಟಿಗೋ, ಜೌಂಟಿಗ್ಯೋ-ಸುಂಟಿಗ್ಯೋ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಮುಖ್ಯವಾಗಿ ದೀವರು, ಲಿಂಗಾಯಿತರು, ಬಂಟರು, ಒಕ್ಕಲಿಗರು ಹಾಗೂ ಹಸಲರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಅಂಟಿಗೆ ಪಂಟಿಗೆ ಪದಗಳಲ್ಲಿ ಅಂಟಿಗೆ ಕುರಿತು ಗೋಜಲುಗಳಿವೆ. "ಅಂಟಿಸುವುದೇ ಅಂಟಿಗೆ" ಎನ್ನುವ ಅರ್ಥದಲ್ಲಿ ಆ ಪದವನ್ನು ಇಲ್ಲಿ ಪರಿಗಣಿಸುವುದು ಅವೈಜ್ಞಾನಿಕವಲ್ಲ. ಆದರೆ ಪಂಟಿಗೆಯ ಬಗೆಗೆ ಇನ್ನೂ ಗೊಂದಲಗಳಿವೆ. ವಿದ್ವಾಂಸರು ತಮಿಳಿನ ಪಂಟಿಗೈ ಪದ ಕುರಿತು ಉಲ್ಲೇಖಿಸಿದ್ದಾರೆ. ಪಂಟಿಗೈ ಪದಕ್ಕಿರುವ ಹಬ್ಬ ಎನ್ನುವ ಅರ್ಥದಲ್ಲಿ ಅಂಟಿಗೆ ಪಂಟಿಗೆಯನ್ನು ದೀಪಾವಳಿ ಹಬ್ಬ ಎಂಬ ಮೂಲಾರ್ಥವಿರಬಹುದು ಎಂದಿದ್ದಾರೆ. ಈ ದೆಸೆಯಲ್ಲಿ ಚರ್ಚೆಗೆ ಅವಕಾಶವಿರುವುದರಿಂದ ಮುಂದಿನ ವಿವರಣೆಯನ್ನು ನೀಡಲಾಗಿದೆ.

ಸಂಪ್ರದಾಯ ಬದಲಾಯಿಸಿ

ಈ ಮನೆಯ ಕದವೇ ಚಂದ ಕದದ ಮೇಲಿನ ಬರುದಾರ ಸುವ್ವಿ ಕದದ ಮೇಲಿನ ಬರುದಾರೆ ಸಾಲಾಗಿ ಕಿವಿಯೆತ್ತಿ ನಿಂತ ಹಿಂಡು ಸುವ್ವಿ ಅಷ್ಟರಲ್ಲಿ ಮನೆಯವರು ಎದ್ದು ಬಾಗಿಲು ತೆಗೆಯುತ್ತಾರೆ. ಈ ದೀಪಧಾರಿಗಳು ಮನೆಯ ಜಗುಲಿಗೆ ಹೋಗಿ ಕುಳಿತು ದೀಪವನ್ನು ಇಡುತ್ತಾರೆ. ಆ ಮನೆಯವರು ಇವರ ದೀಪದಿಂದ ತಮ್ಮ ಮನೆಯ ಜ್ಯೋತಿಯನ್ನು ಹಚ್ಚಿಕೊಂಡು ಹೋಗಿ ಬಲೀಂದ್ರನ ಕಂಬದ ಮೇಲಿಡುತ್ತಾರೆ. ಅನಂತರ ಕಲಾವಿದರು ಅನೇಕ ಕಥನ ಗೀತೆಗಳನ್ನು ಹಾಡುತ್ತಾ ಮನೆ ಮನೆಗೂ ಹೋಗಿ ಜ್ಯೋತಿಯನ್ನು ಹಚ್ಚುತ್ತಾ ಮುಂದುವರೆಯುತ್ತಾರೆ. ಅಂಟಿಗೆ-ಪಂಟಿಗೆ ಕಲಾವಿದರು ಹಾಡುವ ಹಾಡುಗಳಿಗೆ ತೀರ್ಥಹಳ್ಳಿ ನರಸಿಂಹರಾಜಪುರ ಹಾಗೂ ಕೊಪ್ಪ ಪ್ರದೇಶಗಳಲ್ಲಿ 'ಅಂಟಿಕೆ-ಪಂಟಿಗಕೆ'ಎಂದು ಕರೆದರೆ ಸಾಗರ ತಾಲೂಕಿನಲ್ಲಿ 'ಹಬ್ಬ ಹಾಡುವ ಪದಗಳು' ಎನ್ನುತ್ತಾರೆ. ಸೊರಬ ಪ್ರದೇಶದಲ್ಲಿ 'ಬಲ್ಲಾಳಿ ಪದ್ಯಗಳು' ಎಂದೂ ಸಿರಸಿ,ಸಿದ್ಧಾಪುರ ಪ್ರದೇಶಗಳಲ್ಲಿ 'ಬಿಂಗಿ' ಪದ್ಯಗಳು ಎಂದೂ ಕರೆಯಲಾಗುತ್ತದೆ. ದೀವರು, ಲಿಂಗಾಯಿತರು, ಬಮಟರು, ಒಕ್ಕಲಿಗರು, ಹಸಲರು ಈ ಆಚರಣೆಯನ್ನು ರೂಢಿಸಿಕೊಂಡಿದ್ದಾರೆ. ಇವರು ತಮ್ಮ ಸುತ್ತಮುತ್ತಲಿನ ಗ್ರಾಮಗಳಿಗೆ ಮಾತ್ರ ಹೋಗುತ್ತಾರಾದರೂ ಅವರ ಜಾತಿಗಿಂತ ಮೇಲು ಜಾತಿಯವರ ಮನೆಗಳಿಗೆ ಮಾತ್ರ ಹೋಗುವುದು ಪದ್ಧತಿ. ಉದಾಹರಣೆಗೆ ಹಸಲರು ಹರಿಜನರಿಗಿಂತ ಶ್ರೇಣಿಯಲ್ಲಿ ಉತ್ತಮರಾದ್ದರಿಂದ ಅವರ ಮನೆಗೆ ಹೋಗುವುದು ನಿಷೇಧ. ಆದರೆ ಹಸಲರು ತಮಗಿಂತ ಉತ್ತಮರಿಂದು ಪರಿಗಣಿಸುವ ಒಕ್ಕಲಿಗರು, ಮಡಿವಾಳರು, ದೀವರು ಮೊದಲಾದ ಜಾತಿಗಳವರ ಮನೆಗಳಿಗೆ ಮಾತ್ರ ಹೋಗುವುದಾಗಿ ತಿಳಿಯುತ್ತದೆ. ದೀಪಾವಳಿ ನಂತರ ಒಂದು ತಿಂಗಳ ಒಳಗೆ ಊರಿನವರೆಲ್ಲಾ ಒಂದು ದಿನವನ್ನು ನಿಗದಿಪಡಿಸುತ್ತಾರೆ. ಆ ದಿನ ಊರಿನ ದೊದ್ದ ಬಯಲಿನ್ನಲ್ಲಿ ಚಪ್ಪರ ಹಾಕಿ ಗ್ರಾಮದ ಎಲ್ಲಾ ದೇವರಿಗೂ ದೀಪ ಹಚ್ಚಿ ಹಣ್ಣು ಕಾಯಿ ಪೂಜೆ ಮಾಡಿ, ದೇವರ ಬನಕ್ಕೆ ಹೋಗಿ ದೀಪವನ್ನು ಅಲ್ಲಿಯೇ ಬಿಟ್ಟು ಬರುತ್ತಾರೆ. ಮುಂದಿನ ದೀಪಾವಳಿಗೆ ಮತ್ತೆ ದೀಪ ತರುವ ಕೆಲಸ.

ಅಂಟಿಗೆ ಪಂಟಿಗೆ ಪದಗಳು ಬದಲಾಯಿಸಿ

ಒಂದೊಂದು ಮನೆಯ ಮುಂದೆ ನಿಂತು 'ಬಾಗಿಲ ತೆಗಿಯರಮ್ಮ ಭಾಗ್ಯದ ಲಕ್ಷ್ಮಮ್ಮ ಜ್ಯೋತ್ಸಮ್ಮನೊಳಗೆ ಕರಕೊಳ್ಳಿ' ಎಂದು 'ಮುಳ್ಳಾಗೆ ಕಲ್ಲಾಗೆ ಬಂದೇವಯ್ಯ ತಂದೇವಿ ದೀಪವ ಕೊಳ್ಳೀರೀ' ಮುಂತಾಗಿ ಹಾಡಿಸಿ ಬಾಗಿಲು ತೆಗೆಸಿ 'ಜ್ಯೋತಿಗೆಣ್ಣೆಯರೆಯ ಬನ್ನಿ' ಎಂಬಂತಹ ಹಾಡುಗಳನ್ನು ಹೇಳಿ ತಮ್ಮ ಹಣತೆಯಿಂದ ಅವರಿಗೆ ದೀಪದ ಕುಡಿ ಕೊಡುತ್ತಾರೆ. ಅನಂತರ ಮನೆಯ ಜಗುಲಿಯನ್ನೇರಿ ಅರ್ಜುನ ಜೋಗಿಯ ಹಾಡು, ಉತ್ತರದೇವಿಯ ಹಾಡು, ತೆರೆ ಅಳೆಯುವ ಹಾಡು, ಕರು ಹಾಡು ಇತ್ಯಾದಿ ಧೀರ್ಘ ಗೀತೆಗಳನ್ನು ಒಕ್ಕೊರಲಿಂದ ಹಾಡುತ್ತಾರೆ. ಕೊನೆಯಲ್ಲಿ ಮಂಗಳಗೀತೆ ಹೇಳುತ್ತಾರೆ. ಹಾಡುಗಳಲ್ಲಿ ಹೆಚ್ಚಿನವು ತ್ರಿಪದಿಗಳು. ಉಳಿದವು ದ್ವಿಪದಿ, ಚೌಪದಿ ಮುಂತಾದ ಸರಳಗಳೂ ರಚನೆಗಳು, ಅಪರೂಪವಾಗಿ ಲಾವಣಿ ಅಥವಾ ಕೋಲಾಟದ ಮಟ್ಟುಗಳೂ ಇರುತ್ತವೆ. ಹಾಡುವಾಗ ಯಾವುದೇ ವಾದ್ಯ ಜೊತೆಗೆ ಇರುವುದಿಲ್ಲ. ಕಥನಗೀತೆಗಳಲ್ಲಿ ಸಾಮಾನ್ಯವಾಗಿ ಶಿವನ, ಶಿವಭಕ್ತರ ಅಪರೂಪವಾಗಿ ಐತಿಹಾಸಿಕ, ಕೌಟುಂಬಿಕ ಕಥೆಗಳು ಸೇರಿರುತ್ತವೆ. ಹಾಡುವವರಿಗೆ ಮನೆಮನೆಯಲ್ಲೂ ದೀಪಕ್ಕೆ ಎಣ್ಣೆ ಬಟ್ಟೆ ಅಕ್ಕಿ ಹಣ್ಣು ತೆಂಗಿನಕಾಯಿ ಹಬ್ಬದ ತಿಂಡಿ ಚಿಲ್ಲರೆ ಹಣ ಕೊಡುತ್ತರೆ. ಹೀಗೆ ಮೂರು ರಾತ್ರಿ ಪರ್ಯಂತ ದೀಪ ನೀಡುವುದು ನಡೆಯುತ್ತದೆ. ದೀಪ ಹಚ್ಚುವುದು ಮತ್ತು ದೀಪವನ್ನು ಊರೂರಿಗೆ ಹೊತ್ತೊಯ್ಯುವ ಈ ಸಂಪ್ರದಾಯ ಪ್ರಧಾನವಾಗಿ ಬೆಳಕು ನೀಡಿವ ಕ್ರಿಯೆಗೆ ಸಂಬಂಧಿಸಿದ್ದಾದರೂ ಕಲಾವಿದರು ಹಾಡುವ ಪದಗಳು ಆಷ್ಟಕ್ಕೆ ಸೀಮಿತಗೊಂಡಿಲ್ಲ. ದಾರಿ ಸಾಗಬೇಕಾದ ಕಾರಣ ಹಲವಾರು ಕಥನ ಕವನಗಳೂ ಇವರಿಗೆ ಕರಗತವಾಗಿದೆ. ಹೀಗಾಗಿ ಇವರು ಹಾಡುವ ಪದಗಳನ್ನು ಎರಡು ರೀತಿಯಲ್ಲಿ ವಿಂಹಡಿಸಬಹುದಾಗಿದೆ. ೧.ದೀಪದ ಯಾತ್ರೆಗೆ ಸಂಬಂಧಿಸಿದ ಪದಗಳು. ೨.ಇತರೆ ಪದಗಳು. ದೀಪದ ಯಾತ್ರೆಯ ವಿವಿಧ ಘಟ್ಟಗಳನ್ನು ಶಾಸ್ತ್ರೋಕ್ತವಾಗಿ ಪೂರೈಸುವ ಹಾಡಿನ ಪ್ರಕಾರಗಳೆಂದರೆ ೧. ಬಾಗಿಲು ತೆಗೆಯುವ ಹಾಡು. ೨.ದೀಪ ಹಚ್ಚುವ ಹಾಡು. ೩. ಬಲೀಂದ್ರನ ಹಾಡು. ೪. ಗ್ರಾಮದೇವತೆ ಹಾಡು. ೫. ಎಣ್ಣೆ ಎರೆಯುವ ಹಾಡು. ೬. ಭಾವನೆಂಟರ ಹಾಡು. ೭. ದೀಪ ಆರಿಸುವ ಪದ. ೮. ಜಟ್ಟಿಗನ ಪದ. ಎರಡನೆ ಪ್ರಕಾರದಲ್ಲಿ ಯಾವ ಪ್ರಕಾರವಾದರೂ ಆಗಬಹುದು. ಅಂಥವುಗಳಲ್ಲಿ ಮುಖ್ಯವಾಗಿ ಗೋವಿನ ಪದ, ದ್ರೌಪದಿ ಪದ, ಜೋಗುಳ ಪದ, ಗಂಗೆ ಗೌರಿ ಪದ, ಥರಣಮ್ಮನ ಪದ, ಬಂಜೆ ಪದ, ಗುಣಸಾಗರೀ ಪದ, ಕವಲೇ ಪದ, ಶಿವಯೋಗಿ ಪದ, ಉತ್ತರ ದೇವಿ ಪದ ಇತ್ಯಾದಿ ಕಥನಗಳಿರುತ್ತವೆ. ಉದಾಹರಣೆಗಾಗಿ ದೀಪದ ಯಾತ್ರಗೆ ಸಂಬಮಧಿಸಿದ ಒಂದೆರಡು ಹಾಡುಳ ತುಣುಕುಗಳನ್ನು ನೋಡಬಹುದು. ಊರಿಗೆ ಪ್ರವೇಶಿಸಿದ ಮೊದಲಲ್ಲಿ:

ದಿಮ್ಮಿಸಾಲ್ಹೊಡಿರಣ್ಣ

ದಿಮ್ಮಿಸಾಲ್ಹೊಡಿರಣ್ಣ

ದಿಮ್ಮಿಸಾಲ್ಹೊಡಿರಣ್ಣ ಒಂದೊಂದೆ ದನಿಗೆ

ಎತ್ತಿದ ಸಲಿಗೆ ಕಿತ್ತೆದ್ದು ಬರಲೋ

ಈ ಊರ ದೇವರಿಗೆ ಎನೇನ ಉಡುಗರೋ

ಈ ಊರ ಜಟಿಗಪ್ಪಗೆ ಎನೇನ ಉಡುಗರೋ

ಊರ ಮಾಸ್ತ್ಯಮ್ಮಾಗೆ ಎನೇನ ಉಡುಗರೋ

ಹೇರಲ್ಲಿ ಕಾಯೋ ಹೆಡಿಗಲ್ಲಿ ಹಣ್ಣೊ

ಸತ್ಯವಂತನಾದರೆ ಸಭೆ ಮುಂದೆ ಬರಲೋ

ಸಭೆಗೆ ನಮಗು ಸಮತೋಷ ತರಲೋ

ಆಚೆಯ ದಡದಾಗೆ ಯಾತರ ಬೆಳಕು

ಸ್ವನಾಗರ ಹುಡುಗಿಯ ಪಟ್ಟಿಯ ಬೆಳಕೋ

ಕಾಮಣ್ಣ ಭೀಮಣ್ಣ ಎನು ಮಾಡಿತ್ತಿದ್ದಿರೋ

ಕಗ್ಗಲ್ಲ ಕಡಿದು ಹಿಟ್ಟು ಮಾಡುತ್ತಿದ್ದರೋ

ವಿಷಯದ ಉಲ್ಲೇಖ ಬದಲಾಯಿಸಿ

  1. ' ' 'ಹಿ.ಚಿ. ಬೋರಲಿಂಗಯ್ಯ' ' ', ಕರ್ನಾಟಕ ಜಾನಪದ ಕಲೆಗಳ ಕೋಶ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ