ಮಂಡ್ಯ ಜಿಲ್ಲೆಯ ಖ್ಯಾತ ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಎಸ್.ಕೃಷ್ಣಸ್ವರ್ಣಸಂದ್ರ ಅವರ ವ್ಯಕ್ತಿಗತ ವಿವರ

ಎಸ್.ಕೃಷ್ಣಸ್ವರ್ಣಸಂದ್ರ ಮಂಡ್ಯ ಜಿಲ್ಲೆಯ ಖ್ಯಾತ ಸಾಹಿತಿಯಾಗಿ ಜೊತೆಗೆ ಜಿಲ್ಲೆಯ ಹಿರಿಯ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 21,ನವೆಂಬರ್ 1968ರಂದು ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಕೆಂಪೇಗೌಡ ಸಿದ್ಧಲಿಂಗಯ್ಯ-ಕೆಂಪಮ್ಮ ದಂಪತಿಗಳ ಪುತ್ರರಾಗಿ ಜನಿಸಿದ ಇವರು, ಪ್ರಾಥಮಿಕ ವಿದ್ಯಾಭ್ಯಾಸ ವನ್ನು ಸರಕಾರಿ ಪ್ರಾಥಮಿಕ ಶಾಲೆ ಗುತ್ತಲಿನಲ್ಲಿ ಆರಂಭಿಸಿ, ಪ್ರೌಢ ವಿದ್ಯಾಭ್ಯಾಸ ವನ್ನು ಮಂಡ್ಯದ ಮೈಷುಗರ್ ಶಾಲೆಯಲ್ಲಿ ಪೂರ್ಣಗೊಳಿಸಿದರು. ಪಿ.ಇ.ಎಸ್. ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಮುಗಿಸಿ, ಉನ್ನತ ಶಿಕ್ಷಣ ವನ್ನು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರಿನಲ್ಲಿ ಮುಗಿಸಿದರು.ಜಾನಪದ ಎಂ.ಎಯಲ್ಲಿ ಹೆಚ್ಚು ಅಂಕಗಳಿಸಿದ್ದಕ್ಕೆ ಸರ್ಕಾರದಿಂದ ನಗದು ಬಹುಮಾನ ಪಡೆದರು.

ವೃತ್ತಿ ಜೀವನ: ಪತ್ರಿಕೋದ್ಯಮದ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ಇವರು, ಮಂಡ್ಯದ ಪ್ರಮುಖ ಪತ್ರಿಕೆಗಳಾದ ನುಡಿ ಭಾರತಿ, ಮಂಡ್ಯ ಸುದ್ಧಿ, ಪೌರವಾಣಿ ಜೊತೆಗೆ ಪ್ರಾದೇಶಿಕ ಪತ್ರಿಕೆಯಾದ ಪ್ರಜಾನುಡಿಯಲ್ಲಿ ಪ್ರಮುಖ ವರದಿಗಾರಾಗಿ ಸೇವೆ ಸಲ್ಲಿಸಿದರು. ನಂತರ 2008ರಲ್ಲಿ ತಮ್ಮ ಸಂಪಾದಕತ್ವದಲ್ಲೇ ಕನ್ನಂಬಾಡಿ ಎಂಬ ಸ್ಥಳೀಯ ದಿನಪತ್ರಿಕೆ ಸ್ಥಾಪಿಸಿದ್ದಾರೆ.

ಇದರ ಜೊತೆ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿರುವ ಅವರು, ಮಂಡ್ಯದ ಪ್ರತಿಷ್ಟಿತ ಪಿಇಎಸ್ ಕಾಲೇಜಿನಲ್ಲಿ ಮೂರು ವರ್ಷ ಜಾನಪದ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಸಂಘಟನೆ, ಸಮಾಜಸೇವೆ ಪ್ರವೃತ್ತಿ ಯಾಗಿರಿಸಿಕೊಂಡಿರುವ ಇವರು, 1992ರಲ್ಲಿ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾಗಿ ಕಾವೇರಿ ನದಿ, ವಿದ್ಯಾರ್ಥಿ ಸಮಸ್ಯೆ ವಿರುದ್ಧ ಹೋರಾಟ ನಡೆಸಿದ್ದಾರೆ. 1990ರಲ್ಲಿ ಪಿಯುಸಿ ಓದಿನ ದಿನಗಳಲ್ಲೇ ಪುಷ್ಪ ಎಂಬುವವರೊಂದಿಗೆ ವಿವಾಹವಾದರು. 1997 ರಲ್ಲಿ ಡಾ.ಜೀ.ಶಂ.ಪ. ಸಾಹಿತ್ಯ ವೇದಿಕೆ ಸಂಸ್ಥಾಪನೆ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜನಪದ, ಭಾವಗೀತೆ ಸ್ಪರ್ಧೆ, ಪ್ರಶಸ್ತಿ ಪ್ರದಾನ, ಕವಿ ಕಾವ್ಯ ಮೇಳ ಆಯೋಜನೆ, ಕವಿಗಳ ಪುಸ್ತಕ ಪ್ರಕಾಶನ ಮಾಡಿದ್ದಾರೆ. 2000ನೇ ಇಸವಿಯಲ್ಲಿ ಮಂಡ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಒಂದು ವರ್ಷದಲ್ಲಿ ಎರಡು ಸಮ್ಮೇಳನ, ಯುವ ಸಮ್ಮೇಳನ, ಕಾರ್ಯಕ್ರಮಗಳ ಆಯೋಜನೆ, ಪ್ರಶಂಸೆ ಪಡೆದಿದ್ದಾರೆ. 2001 ರಲ್ಲಿ ಒಂದು ವರ್ಷದ ಪರಿಷತ್ತಿನ ಸಾಹಿತ್ಯ ಸೇವೆಗೆ, ಮತ್ತೆ ಅಧ್ಯಕ್ಷರಾಗಿ ಮರು ಆಯ್ಕೆಯಾದರು. ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ, ತಾಲೂಕು ಸಮ್ಮೇಳನ,ಕವಿ ಕಾವ್ಯ ಮೇಳ, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡಿದ್ದಾರೆ. ಇವರಿಗೆ 500ಕ್ಕೂ ಹೆಚ್ಚು ಪ್ರಶಸ್ತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

2008ರಲ್ಲಿ ಮತ್ತೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೂರು ಅವಧಿಯಲ್ಲಿ ಎಂಟು ತಾಲೂಕು ಸಾಹಿತ್ಯ ಸಮ್ಮೇಳನ, 15 ಕವಿಕಾವ್ಯ ಮೇಳ ಆಯೋಜನೆ ಇವರ ಸಾಹಿತ್ಯ ಕ್ಷೇತ್ರದ ಸಾಧನೆಯಾಗಿದೆ. 2012ರಲ್ಲಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಮಂಡ್ಯ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕವಾದ ಇವರು, 2013 ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿ ಪ್ರಸ್ತುತ ಅಧಿಕಾರದಲ್ಲಿ ಯಶಸ್ವಿಯಾಗಿ ಮುಂದುವರೆಯುತ್ತಿದ್ದಾರೆ. ಇದರ ಜೊತೆ 2013ರಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಹಿತ್ಯ ಕೃಷಿ: 1994 ರಲ್ಲಿ ಇದುವೇ ಭಾರತ (ಕವನ ಸಂಕಲನ, 1999 ರಲ್ಲಿ ಹನಿಕೇಕ್ (ಚುಟುಕು ಸಂಕಲನ), 2000 ದಲ್ಲಿ ಧರ್ಮಧ್ವಜ (ನಾಟಕ), 2004 ರಲ್ಲಿ ಪರ್ವಕಾಲ (ಕಾದಂಬರಿ), 2010ರಲ್ಲಿ ಗುಡ್ಡೆಬಾಡು (ಸಮಗ್ರ ಸಾಹಿತ್ಯ), 2012 ರಲ್ಲಿ ಮರ್ಯಾದಾ ಹತ್ಯೆ (ಕಥಾ ಸಂಕಲನ), 2012ರಲ್ಲಿ ಸಪ್ತ ಬಣ್ಣ (ಕವನ ಸಂಕಲನ), 2013 ರಲ್ಲಿ (ಲೇಖನಗಳ ಸಂಗ್ರಹ), 2013ರಲ್ಲಿ ಧರ್ಮಧ್ವಜ (ನಾಟಕ)ದ್ವಿತೀಯ ಮುದ್ರಣ, 2014 ರಲ್ಲಿ ಪುಣ್ಯಕೋಟಿ (ಪರಿಷ್ಕ್ರತ ಸಮಗ್ರ ಸಾಹಿತ್ಯ)ರಚಿಸಿದ್ದಾರೆ.

ದರಿದ್ರರ ಮಾರ್ಕ್ಸ್ ಕಾರ್ಡ್ ಸಾಹಿತ್ಯ, ನೆಲದ ನಗು, ಸುಗ್ಗಿ, ಕಣಜ, ಹೊನ್ನೇರು, ನೆಲದನುಡಿ, ಕಬ್ಬಿನ ಜಲ್ಲೆ. ಮುಂಗಾರು, ಕನ್ನಂಬಾಡಿ, ಪಾಂಚಜನ್ಯ, ಬೇವು-ಬೆಲ್ಲ, ತೂಗುವ ಗೊನೆಮಾವು ಸಂಪಾದಕತ್ವದ ಸಂಕಲನಗಳಾಗಿವೆ. ಕಾಚಕ್ಕಿ, ತವರು ಸ್ಮರಣ ಸಂಚಿಕೆಗಳನ್ನು ರಚಿಸಿದ್ದಾರೆ.

ಪ್ರಶಸ್ತಿ ಪುರಸ್ಕಾರ: 2001ರಲ್ಲಿ ಎಸ್.ಡಿ.ಜಯರಾಂ ಸಾಹಿತ್ಯ-ಪತ್ರಕರ್ತ ಪ್ರಶಸ್ತಿ, 2010ರಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮೂಡಾದಲ್ಲಿ ಭ್ರಷ್ಠಚಾರ ಸ್ಪೋಟ ತನಿಖಾ ವರದಿಗೆ ತನಿಖಾ ವರದಿ ಪ್ರಶಸ್ತಿ, 2010ರಲ್ಲಿ ಧರ್ಮಧ್ವಜ, ನಾಟಕ ಮಂಡ್ಯ ಕಲಾ ಮಂದಿರದಲ್ಲಿ ಪ್ರದರ್ಶನ, 2011ರಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಪ್ರತಿನಿಧಿಯಾಗಿ ಭಾಗಿ, 2012 ರಲ್ಲಿ ಆದಿ ಚುಂಚನಗಿರಿಯಲ್ಲಿ ಕನ್ನಡ ಸಾಹಿತ್ಯಸಮ್ಮೇಳನದಲ್ಲಿ ಸನ್ಮಾನ, 2012ರಲ್ಲಿ ಕರವೇ ನಲ್ನುಡಿ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಗುಡ್ಡೆಬಾಡು ಕಥೆಗೆ ಮೂರನೇ ಬಹುಮಾನ, 2013 ರಲ್ಲಿ ವಿಜಾಪುರದಲ್ಲಿ ನಡೆದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವನವಾಚನ, 2014 ರಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನಿಂದ ರಾಜ್ಯೋತ್ಸವ ಪ್ರಶಸ್ತಿ, 2014ರಲ್ಲಿ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ನಿಂದ ನಾಗರಿಕ ಸನ್ಮಾನ, 2014 ರಲ್ಲಿ ಅಂಬರೀಶ್ ಅಭಿಮಾನಿ ಸಂಘದಿಂದ ಸನ್ಮಾನ 2014 ರಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ. ಹೀಗೆ ಕೃಷ್ಣಸ್ವರ್ಣಸಂದ್ರ ಅವರು, ಸಾಹಿತ್ಯ, ಪತ್ರಿಕೋದ್ಯಮ, ಸಮಾಜಸೇವೆ, ಸಂಘಟನೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಸಲ್ಲಿಸಿದ್ದಾರೆ.