ನವರೂಪ ವೈಭವ ಹುರಿಗಟ್ಟಿಸಿದ ಮೈಯಲ್ಲರಳಿದ ಕ್ಷಾತ್ರ ತೇಜಸ್ಸು, ಮಂದಸ್ಮಿತ ಮುಖದಲ್ಲಿ ಪಡಿಮೂಡಿದ ವೀತರಾಗಗಳು ಮಂಗಳ ದ್ರವ್ಯಗಳ ಅಭಿಷೇಕದಲ್ಲಿ ನವ ನವ ರೂಪಗಳೊಂದಿಗೆ ಮೇಳೈಸುವ ಬಾಹುಬಲಿ ಮೂರ್ತಿ, ದಿವ್ಯ ರೂಪವನ್ನು ಕಂಡು ಪುಳಕಿತಗೊಂಡ ಭಕ್ತ ಸಂದೋಹದಿಂದ ಬೋಲೋ ಶ್ರೀ ಬಾಹುಬಲಿ ಭಗವಾನ್ ಕೀ ಜೈ ಎಂಬ ಜಯಘೋಷ. ಕಾರ್ಕಳದ ಗೊಮ್ಮಟಗಿರಿಯಲ್ಲಿ ಬೆಳಗುತ್ತಿರುವ ವಿರಾಟ್ ವಿರಾಗಿಯ ಮಹಮಜ್ಜನದ ಮನಮೋಹಕ ಸನ್ನಿವೇಶವಿದು. ಅಗ್ರೋದಕ ಮೆರವಣಿಗೆಯಿಂದ ಆರಂಭಗೊಂಡು ಮಹಾ ಕುಂಭಾಭಿಷೇಕದ ವರೆಗಿನ ಪ್ರತಿ ಹಂತವೂ ಕುತೂಹಲಿಗಳ ಕಣ್ಣಿಗೆ ಹಬ್ಬ, ಭಕ್ತ ಜನರ ಪಾಲಿಗೆ ಭಾವುಕ ಕ್ಷಣ. ೧೦೮ ಕಲಶಗಳಲ್ಲಿ ಧುಮ್ಮಿಕ್ಕುವ, ಸೇಚನಗೊಳ್ಳುವ ಮಂಗಳ ದ್ರವ್ಯಗಳು ಸೃಷ್ಟಿಸುವ ವರ್ಣವೈವಿಧ್ಯವೊಂದು ಮಹಾಸಂಭ್ರಮ. ಅಭಿಷೇಕ ವೈವಿಧ್ಯ : ಏಕಕಾಲದಲ್ಲಿ ನೂರೆಂಟು ಕಲಶಗಳಿಂದ ಧಾರೆಯಾಗಿ ಸುರಿಯುವ ಜಲಾಭಿಷೇಕ ಗಂಗೆಯೇ ಧರೆಗಿಳಿದಂತೆ ಭಾಸವಾದರೆ, ಪರಿಶುದ್ಧತೆಯ ಪರಮ ಪ್ರತೀಕವಾದ ನಾಳೀಕೇರ ಕಡೆದ ಕಲ್ಲಿನಲ್ಲಿ ಜಲಶೀತಲತೆಯ ಮರುಪೂರಣ ಮಾಡುತ್ತದೆ. ಇಕ್ವ್ಷಾಕು ವಂಶದ ವೀರ ಕುವರ ಬಾಹುಬಲಿ ಇಕ್ಷು ರಸದಲ್ಲಿ ಮುಳುಗಿ ತುಷಾರ ಮೂರ್ತಿಯಾಗಿ ಕಂಗೊಳಿಸಿದರೆ, ತಲೆಗೆ ಸುರಿದ ಹಾಲು ನಿಧಾನವಾಗಿ ದೇಹ ಭಾಗಗಳಿಗೆ ಹರಡಿಕೊಳ್ಳುವ ಅನೂಹ್ಯ ಚೆಲುವು ಧವಳ ಮೂರ್ತಿಯನ್ನು ಸೃಷ್ಟಿಸುತ್ತದೆ. ದೇಹಕ್ಕೆ ಮಾತ್ರವಲ್ಲ ಆತ್ಮಕ್ಕೂ ಅಂಟಿದ ಜಿಗುಟನ್ನು ತೊಳೆಯುವ ಸಂಕೇತವಾಗಿ ಮೂರ್ತಿಗೆ ಹಾರಿಸಿದ ಕಲ್ಕಚೂರ್ಣ ಕಟ್ಟುಮಸ್ತಿನ ದೇಹದ ಖಂಡ ಖಂಡಗಳಲ್ಲಿ ಘನೀ ಭವಿಸಿ ಮನ್ಮಥ ರೂಪ ನೀಡಿದರೆ, ಅರಸಿನ ಸೇಚನದೊಂದಿಗೆ ಸ್ವರ್ನ ಮೂರ್ತಿಯ ಪ್ರತಿಷ್ಠಾಪನೆ. ಅಷ್ಟಾದಶ ಮರಗಳ ಒಣ ಕೆತ್ತೆಯಿಂದ ಮಾಡಿದ ಕಷಾಯದ ಅಭಿಷೇಕದಲ್ಲಿ ಕಡು ಹವಳ ಮೂರ್ತಿಯಾಗಿ ರೂಪಾಂತರ ಶ್ರೀಗಂಧ ಸೋಕುತ್ತಿದ್ದಂತೆಯೇ ಗಾಢ ವರ್ಣದ ಮೆರುಗಿನಲ್ಲಿ ಮೈನವಿರೇಳಿಸುವ ಮಂಗಲಮೂರ್ತಿ ಚಂದನಾಭಿಷೇಕದೊಂದಿಗೆ ರಕ್ತವರ್ಣದ ಚೆಲುವಾಂತ ಚೆನ್ನಿಗನಾಗುವುದು ಮಹಾವಿಸ್ಮಯ. ಪುಷ್ಪಾರ್ಚನೆಯಿಂದ ಇಡೀ ದೇಹವೇ ಉದ್ಯಾನದಂತೆ ಕಂಡರೆ, ಚಿನ್ನ, ಬೆಳ್ಳಿ, ನವರತ್ನಗಳ ಕನಕಾಭಿಷೇಕದ ಬಳಿಕ ಮಹಾ ಮೂರ್ತಿಯನ್ನು ಅಲಂಕರಿಸುವ ೭೦ ಅಡಿ ಎತ್ತರದ ಪುಷ್ಪಹಾರ, ಕೆಳಗಿನಿಂದ ಮೇಲಕ್ಕೆ ಮೇಲಿಂದ ಕೆಳಗೆ ಉಯ್ಯಾಲೆಯಂತೆ ಜೀಕುವ ಮಹಾಮಂಗಳಾರತಿ ದೈವಿಕ ಬೆಳಕನ್ನು ಸೃಷ್ಟಿಸುತ್ತವೆ.