ಸದಸ್ಯ:ರವಿರಾಜ್ ಸಾಗರ್/ನನ್ನ ಪ್ರಯೋಗಪುಟ

ದೀವರ ಹಸೆ ಚಿತ್ತಾರ ಮತ್ತು ಬೂಮಣ್ಣಿ ಬುಟ್ಟಿ ಚಿತ್ತಾರ


ನಿಸರ್ಗದ ಇತರೆ ಪ್ರಾಣಿಗಳಂತೆ ಮನುಷ್ಯನೂ ಸಹ ಒಂದು ಪ್ರಾಣಿಯಾದರೂ ಸಹ ನಿಸರ್ಗದ ನೆಲಮೂಲದ ಅನುಭವಗಳಿಂದ ಕಲಿಯುತ್ತಾ , ಹೊಸತನ್ನು ಅನ್ವೇಷಿಸುತ್ತಾ , ಅನುಕರಿಸುತ್ತಲೇ ಕುಣಿಯುವುದನ್ನು, ಮಾತನಾಡುವುದನ್ನು,ಹಾಡುವುದನ್ನು , ಚಿತ್ತಾರ ಬಿಡಿಸುವುದನ್ನು ಕಲಿತುಕೊಂಡು ಹುಟ್ಟು ಕಲಾವಿದನಾದ. ನಾಗರಿಕತೆ ಕಲಿತಂತೆ ಮನುಷ್ಯನ ಕಲಾ ವೈವಿಧ್ಯತೆ ಬೆಳೆಯಿತು. ಅಂದು ಕಲಿತ ಬುಡಕಟ್ಟು ಸಂಪ್ರದಾಯ ಚಿತ್ತಾರ ಕಲೆ ಇಂದಿನವರೆಗೆ ಪರಂಪರೆಯಿಂದ ಸಾಗಿ ಬಂದು ವಿಶಿಷ್ಟತೆ ಹೆಚ್ಚಿಸಿಕೊಳ್ಳುತ್ತಲೇ ಬದುಕು ಕಟ್ಟಿಕೊಳ್ಳುತ್ತಿದ್ದಾನೆ. ಅಂತಹ ವಿಶಿಷ್ಟ ಪರಂಪರೆಯ ಚಿತ್ತಾರ ಕಲೆಯಲ್ಲಿ ಮಲೆನಾಡಿನ ಹೊಸ ಚಿತ್ತಾರ ಕಲೆಯೂ ಸಹ ಅತಿ ವಿಶಿಷ್ಟವಾದದ್ದು.

ಇದು ಮೇಲ್ನೋಟಕ್ಕೆ ವರ್ಲಿ ಕಲೆ ಅಂತೆಯೇ ಕಂಡರು ಸಹ ಹಲವು ವ್ಯತ್ಯಾಸಗಳಿವೆ. ಹಸೆ ಚಿತ್ತಾರದ ಹಿಂದೆ ಹಬ್ಬ ಮದುವೆಯ ಸಡಗರ ಸಂಭ್ರಮವಿದೆ. ನಿಸರ್ಗ ಆರಾಧನೆ ಫಲವಂತಿಕೆಯ ಸಾಂಕೇತಿಕ ಮೋಟಿಫ್ ಗಳಿವೆ. ಅನನ್ಯವಾದ ಸಾಂಪ್ರದಾಯಿಕ ಪರಂಪರೆಯಿದೆ. ವಿಶಿಷ್ಟವಾದ ಜಾಮಿತಿಯ ವಿನ್ಯಾಸಗಳಿವೆ. ನೈಸರ್ಗಿಕ ಬಣ್ಣಗಳ ಬಳಕೆಯ ಅನ್ವೇಷಣೆ ಇದೆ. ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲದೆ ನಮ್ಮ ದೇಶದಲ್ಲಿ, ಹಾಗೂ ಜಗತ್ತಿನ ಹಲವೆಡೆ ಬುಡಕಟ್ಟು ಸಂಪ್ರದಾಯಿಕ ಚಿತ್ತಾರ ಕಲೆ ಕಂಡುಬರುತ್ತದೆ. ಮಹಾರಾಷ್ಟ್ರದಲ್ಲಿ ವರ್ಲಿ, ಬಿಹಾರದಲ್ಲಿ ಮಧುಬನಿ ಚಿತ್ತಾರ ಕಲೆ ಇದ್ದಂತೆ ಕರ್ನಾಟಕದಲ್ಲಿ ಹಸೆ ಚಿತ್ತಾರ ಪರಂಪರೆ ಮದುವೆ,ಹಬ್ಬಗಳ ಸಾಂಪ್ರದಾಯಿಕ ಪರಂಪರೆಯೊಂದಿಗೆ ಬೆಸೆದುಕೊಂಡಿದೆ. ರಾಜಸ್ಥಾನ ಹರಿಯಾಣ ಉತ್ತರ ಪ್ರದೇಶಗಳಲ್ಲಿ ನವರಾತ್ರಿ ಸಂದರ್ಭದಲ್ಲಿ ಗೋಡೆ ಮೇಲೆ ಸಾಂಜಿದೇವಿಯ ಚಿತ್ರ ಬರೆಯುವ ಪರಂಪರೆಯಿದೆ.ಸಂಜೆ ದೇವಿಯ ಉಬ್ಬುಚಿತ್ರ ಹಲವಾರು ನಕ್ಷೆಗಳನ್ನು ಸೂರ್ಯ-ಚಂದ್ರ ಮರ ಗಿಡ ಬಳ್ಳಿ ಒಂಬತ್ತು ದಿನ ಪೂಜಿಸುತ್ತಾರೆ. ಕರ್ನಾಟಕದಲ್ಲಿ ಕುಣಬಿ ಯವರು, ಗೊಂಡರು ನಾಮದಾರಿಗಳು ಹಾಲಕ್ಕಿಗಳು ಸಹ ವಿವಿಧ ರೀತಿಯ ಸರಳ ಗೋಡೆ ಚಿತ್ತಾರ ಬರೆಯುತ್ತಾರೆ. ಹೀಗೆ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನ ಬುಡಕಟ್ಟು ಚಿತ್ತಾರ ಪರಂಪರೆಯಿದೆ.

ಮಲೆನಾಡಿನ ದೀವರ ಹಸೆ ಚಿತ್ತಾರದಲ್ಲಿ ಸಾಕಷ್ಟು ವೈವಿಧ್ಯತೆ ಇದೆ. ವಿಶಿಷ್ಟ ವಿನ್ಯಾಸಗಳು ಕಂಡುಬರುತ್ತದೆ.ಪೀಳಿಗೆಯಿಂದ ಪೀಳಿಗೆಗೆ, ಪ್ರದೇಶದಿಂದ ಪ್ರದೇಶಕ್ಕೆ ಮಹಿಳೆಯರು ತಮ್ಮದೇ ನೆಲಮೂಲದ ಜ್ಞಾನದಿಂದ ವಿನ್ಯಾಸದಲ್ಲಿ ಒಂದಿಷ್ಟು ನಾವಿನ್ಯತೆಯನ್ನು ಕಂಡುಕೊಳ್ಳುತ್ತಾ ತಮ್ಮ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಜಾಗತೀಕರಣದ ಇಂದಿನ ಕಾಲದಲ್ಲೂ ಸಹ ನಮ್ಮ ಹಳ್ಳಿಗಳ ಚಿತ್ತಾರಗಿತ್ತಿ ಯರು ಹಸೆ ಚಿತ್ತಾರವನ್ನು ಮದುವೆ, ಹಬ್ಬಗಳ ಸಂಪ್ರದಾಯದ ಪರಂಪರೆಯ ಭಾಗವಾಗಿಯೇ ಉಳಿಸಿಕೊಂಡು ಪೋಷಿಸಿಕೊಂಡು ಬಂದಿದ್ದಾರೆ. ಇತ್ತೀಚಿಗೆ ಕೆಲವು ಚಿತ್ತಾರ ಗಿತ್ತಿಯರು, ಕಲಾವಿದರು ಇದನ್ನು ಅನ್ನ ನೀಡುವ ಕಲೆಯನ್ನಾಗಿಯು ಬಳಸಿಕೊಳ್ಳಲು ಪ್ರಯತ್ನಿಸಿ ಮುಂದೆ ಸಾಗುತ್ತಿದ್ದಾರೆ. ಅಂತರ್ರಾಜ್ಯ ,ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಹಸೆ ಚಿತ್ತಾರ ಪ್ರದರ್ಶನವನ್ನು ಮಾಡಿ ಕರ್ನಾಟಕದ ನೆಲಮೂಲದ ಚಿತ್ರ ಕಲೆಗೆ ಜಾಗತಿಕ ಪ್ರಸಂಸೆ ತಂದುಕೊಟ್ಟಿದ್ದಾರೆ.

ಮಲೆನಾಡಿನಲ್ಲಿ ಕಂಡುಬರುವ ಹಸೆ ಗೋಡೆ ಚಿತ್ತಾರ, ಹೋಲುವ ಹಲವು ಮಾದರಿಗಳಿವೆ. ಹಾಲಕ್ಕಿ ಗೌಡರು ಹಲಿ ಬರೆಯುವುದು, ಮಲೆನಾಡಿನ ವಿವಿಧ ಜನಾಂಗಗಳು ದೀಪಾವಳಿ ಹಬ್ಬಕ್ಕೆ ಪೂಜೆಗೆ ಬರೆಯುವ ಶೇಡಿ, ಪ್ರಾಚೀನ ಕಲೆಯಾದ ರಂಗೋಲಿಯ ಕೆಲವು ಬಗೆಗಳು , ಇದೇ ಮಾದರಿ ಹೋಲುತ್ತವೆ. ಮದುವೆ ಶಾಸ್ತ್ರಕ್ಕಾಗಿ ಹಸೆ ಚಿತ್ತಾರವನ್ನು ಕೆಲವು ಜನಾಂಗಗಳು ಬರೆಯುವುದು ಈಗಲೂ ರೂಢಿಯಲ್ಲಿದೆ. ಆದರೆ ಜನಾಂಗದಿಂದ ಜನಾಂಗಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಕೆಲವೊಂದು ವಿನ್ಯಾಸದಲ್ಲಿ ವ್ಯತ್ಯಾಸಗಳಿವೆ. ಹಲವರು ಸರಳ ವಿನ್ಯಾಸ ಅನುಸರಿಸಿದರೆ, ಮಲೆನಾಡಿನ ಧೀವರು ಬರೆಯುವ ಹಸೆಗೋಡೆ ಚಿತ್ತಾರ, ಭೂಮಣ್ಣಿ ಬುಟ್ಟಿ ಚಿತ್ತಾರ ವಿನ್ಯಾಸದಲ್ಲಿ ಸಾಕಷ್ಟು ಕುಶಲತೆಯನ್ನು , ಹಲವು ಜಾಮಿತಿಯ ಅಂಶಗಳನ್ನು ಹೊಂದಿದೆ. ಭೂಮಣ್ಣಿ ಬುಟ್ಟಿ ಚಿತ್ತಾರ , ಮತ್ತು ಭೂಮಿ ಹಬ್ಬದ ಸಂಪ್ರದಾಯ ಮಲೆನಾಡಿನ ದೀವರಲ್ಲಿ ಮತ್ತಷ್ಟು ವಿಶಿಷ್ಟವಾಗಿದೆ. ನಮ್ಮ ದೇಶದಲ್ಲಿ ಕಂಡು ಬರುವ ಬಹುತೇಕ ಎಲ್ಲ ಬಗೆಯ ಜನಪದರ ಚಿತ್ತಾರದ ಬಗೆಗಳನ್ನು ಹೆಣ್ಣು ಮಕ್ಕಳು ಮಾತ್ರ ಬರೆಯುವುದು ಮತ್ತೊಂದು ವಿಶೇಷ. ಬಿಹಾರದ ಮಧುಬನಿ, ಮಹಾರಾಷ್ಟ್ರದ ವರ್ಲಿ, ಕರ್ನಾಟಕದ ಹಸೆ ಚಿತ್ತಾರವನ್ನು ಜಾಗತಿಕ ಮಟ್ಟದಲ್ಲಿ ವಿಶಿಷ್ಟ ಚಿತ್ರಕಲಾ ಬಗೆಗಳಾಗಿ ಬಿಂಬಿಸುವಲ್ಲಿ ಈಗ ಮಹಿಳೆಯರ ಜೊತೆ ಹಲವು ಕಡೆ ಪುರುಷ ಕಲಾವಿದರು ಸಹ ಬರೆಯುತ್ತಿದ್ದಾರೆ. ಆದರೂ ಮೂಲತಹ ಇದು ಬುಡಕಟ್ಟು ವರ್ಗಗಳ ಜನಪದರ ಹೆಣ್ಣು ಮಕ್ಕಳ ಕಲೆ.




ಜನಪದ ಚಿತ್ರಕಲೆಗಳು ಮಾನವನ ಮೂಲಸಂವೇದನೆಗಳಿಗೆ ತೀರ ಹತ್ತಿರವಾದವುಗಳಾಗಿವೆ. ಇವು ಜನರ ಬದುಕಿನಷ್ಟೇ ವೈವಿಧ್ಯಪೂರ್ಣವಾಗಿರುತ್ತವೆ. ಜನಪದರು ತಮ್ಮ ಅನುಭವಗಳಿಗೆ ಜೀವಕೊಟ್ಟದ್ದು, ಬಣ್ಣ ತುಂಬಿದ್ದು ಇಂಥ ಕಲೆಗಳ ಮೂಲಕ. ಆದುದರಿಂದ ಇವು ಜನಪದರ ಬದುಕಿನ ವೈವಿಧ್ಯ ಕಲಾಪರಂಪರೆ, ಹೃದಯ ಶ್ರೀಮಂತಿಕೆ ಹಾಗೂ ಸಂಸ್ಕಾರವಂತಿಕೆಗಳನ್ನು ತಿಳಿಸಿಕೊಡುತ್ತವೆ. ಹೀಗೆ ಜನಪದ ಚಿತ್ರಕಲೆ ಜನಾಂಗಿಕ, ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ, ಭೌಗೋಳಿಕ ಅಂಶಗಳಿಂದ ಕೂಡಿದುದಾಗಿರುತ್ತದೆ. ಜನಪದರ ಸೌಂದರ್ಯ ಮೂಲಪ್ರಜ್ಞೆಯ ವರ್ಣರೇಖಾ ರೂಪವೇ ಜನಪದ ಚಿತ್ರಕಲೆ. ಹೀಗೆ ಜನಪದರ ಚಿತ್ರಕಲೆಯಲ್ಲಿ ಸೌಂದರ್ಯವೇ ಮೂಲಘಟಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಮಗ್ರ ಜನಪದ ಚಿತ್ರಕಲೆಗಳನ್ನು ಸೌಂದರ್ಯ ಮೂಲ, ಪ್ರಯೋಜನ ಮೂಲ, ಮನರಂಜನೆ ಮೂಲ, ಧರ್ಮಮೂಲ, ವೃತ್ತಿಮೂಲಗಳೆಂದು ವರ್ಗೀಕರಿಸಬಹುದು. ಜನಪದ ಚಿತ್ರಕಲೆಯಲ್ಲಿ ಜನಪದರ ದಟ್ಟವಾದ ಬದುಕು ಇರುವುದನ್ನು ಕಾಣುತ್ತೇವೆ. ಶಿಷ್ಟಪದ ಚಿತ್ರಕಲೆಯಲ್ಲಿ ಕಲಿಕೆಯ ಅನಿವಾರ್ಯತೆಯಿಂದಾಗಿ ಬೆರಳಣಿಕೆಯಷ್ಟು ಮಹಿಳೆಯರಿದ್ದರೆ ಜನಪದ ಚಿತ್ರಕಲೆಯಲ್ಲಿ ಮಹಿಳೆಯರದೇ ಸಿಂಹಪಾಲು. ಜನಪದ ಚಿತ್ರಕಲೆ ಸಂಪ್ರದಾಯನಿಷ್ಠವಾಗಿ ಸರಳ ರೂಪದಲ್ಲಿದ್ದರೆ ಶಿಷ್ಟಪದ ಚಿತ್ರಕಲೆ ಸಂಕೀರ್ಣನಿಷ್ಠವಾಗಿ ಕ್ಲಿಷ್ಟತೆಯನ್ನು ಹೊಂದಿರುತ್ತದೆ.

ಹಸೆಚಿತ್ತಾರ ಕಲೆ

ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಶಿಕಾರಿಪುರ, ಹೊಸನಗರ, ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಮತ್ತು ಉತ್ತರಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ ತಾಲ್ಲೂಕುಗಳಲ್ಲಿ ದೀವರು ಜನಾಂಗದವರು ಹೆಚ್ಚಾಗಿ ವಾಸವಾಗಿದ್ದಾರೆ. ಈ ಜನಾಂಗದ ಮಹಿಳೆಯರು ಪುರಾತನ ಕಾಲದಿಂದ ಹಸೆಚಿತ್ರ ಕಲೆಯನ್ನು ರೂಢಿಸಿಕೊಂಡು ಬಂದಿದ್ದಾರೆ. ಬೆಳೆದು ನಿಂತ ಭತ್ತದ ಗದ್ದೆಗಳಿಂದ ಭತ್ತದ ತೆನೆಗಳನ್ನು ಕೊಯ್ದು ತಂದು ಬಾಗಿಲು ತೋರಣ, ಜುಮುಕಿ, ಭತ್ತದಿಂದ ತಯಾರಿಸುವ ಭತ್ತದ ಮಂಟಪ, ಪೆಟ್ಟಿಗೆಗಳನ್ನು ತುಂಬಾ ಸುಂದರವಾಗಿ ಮತ್ತು ಕಲಾತ್ಮಕವಾಗಿ ತಯಾರಿಸುತ್ತಾರೆ. ಗುಡ್ಡಬೆಟ್ಟಗಳಲ್ಲಿ ಬೆಳೆಯುವ ಈಚಲು ಹುಲ್ಲನ್ನು ತಂದು ಬಣ್ಣ, ಬಣ್ಣದ ಚಾಪೆಗಳನ್ನು ಹೆಣೆಯುತ್ತಾರೆ. ಹೊಲಗದ್ದೆಗಳಲ್ಲಿ ಬೆಳೆಯುವ “ಹಿಟ್ಟಂಡೆ” ಎಂಬ ಹುಲ್ಲನ್ನು ತಂದು ಹೂದಾನಿಬುಟ್ಟಿ, ಆಭರಣಗಳನ್ನು ಇಡುವ ಪೆಟ್ಟಿಗೆ ಚಿಬ್ಲ, ಪೊರಕೆ ಮತ್ತು ಇರಿಕೆ ಮುಂತಾದ ವಸ್ತುಗಳನ್ನು ತಯಾರಿಸುತ್ತಾರೆ. ತಾವು ತೊಡುವ ಸೀರೆ, ರವಿಕೆಗಳಿಗೆ ಸುಂದರವಾದ ಕಸೂತಿಗಳಿಂದ ಅಲಂಕರಿಸಿಕೊಳ್ಳುವುದು, ಗೋಡೆ, ಬುಟ್ಟಿಗಳ ಮೇಲೆ ಚಿತ್ತಾರಗಳನ್ನು ಬರೆದು ಅಲಂಕರಿಸಿ ಸಂಭ್ರಮಿಸುವ ಕೃಷಿ ಅವಲಂಬಿತ ಬುಡಕಟ್ಟುಗಳಾದ ದೀವರು ಜನಾಂಗದ ಮಹಿಳೆಯರ ಕರಕೌಶಲ್ಯಗಳಲ್ಲಿ ಅವರಲ್ಲಿರುವ ಜೀವನಾಸಕ್ತಿಯನ್ನು ಕಾಣುತ್ತೇವೆ. ಇವರು ತಯಾರಿಸುವ ಕರಕುಶಲ ವಸ್ತುಗಳನ್ನು ಗಮನಿಸಿದಾಗ ಇವರಲ್ಲಿರುವ ಸೌಂದರ್ಯ ಪ್ರಜ್ಞೆ ಮತ್ತು ಜೀವನಾಸಕ್ತಿಯನ್ನು ಕಾಣಬಹುದು.

ಮಲೆನಾಡಿನ ಹಳ್ಳಿಗಳಲ್ಲಿ ಹಿಂದೆ ಆರು ಅಂಕಣದಿಂದ ಹನ್ನೆರಡು ಅಂಕಣದ ಮನೆಗಳು ಇರುತ್ತಿದ್ದವು. ಒಂದು ಅಂಕಣವೆಂದರೆ ಹತ್ತು ಅಡಿ ಉದ್ದ ಹತ್ತು ಅಡಿ ಅಗಲವಿರುವ ಜಾಗ. ಅವಿಭಕ್ತ ಕುಟುಂಬದ ದೀವರ ಮನೆಗಳಲ್ಲಿ ಐವತ್ತು-ಅರವತ್ತು ಜನ ಒಟ್ಟಿಗೆ ವಾಸ ಮಾಡುತ್ತಿದ್ದರು. ಆದರೆ ಇಷ್ಟು ದೊಡ್ಡ ಮನೆಯಲ್ಲಿ “ದೇವರಕೋಣೆ” ಪ್ರತ್ಯೇಕವಾಗಿ ಇರುತ್ತಿರಲಿಲ್ಲ. ಅಡಿಗೆ ಮನೆಯಲ್ಲಿ ಪೂರ್ವ ಅಥವಾ ಉತ್ತರಾಭಿಮುಖವಾಗಿ ಅರ್ಧ ಅಡಿ ಎತ್ತರ, ಮೂರು ಅಡಿ ಉದ್ದ, ಒಂದೂವರೆ ಅಡಿ ಅಗಲದ ಮಣ್ಣಿನಿಂದ ಮಾಡಿದ ಜಾಗವಿರುತ್ತಿತ್ತು. ಈ ಜಾಗದ ಮಧ್ಯಭಾಗದಲ್ಲಿ ದೊಡ್ಡದಾದ ತಾಮ್ರದ ಹಂಡೆ, ಎಡಬಲ ಬದಿಗಳಲ್ಲಿ ಎರಡು ತಾಮ್ರದ ಕೊಡಪಾನಗಳಿರುವ ಸ್ಥಳವೇ ‘ಹರಿಇಡಕಲು’. ಇದು ದೈವೀ ಸ್ಥಾನ. ಆ ಕುಟುಂಬದಲ್ಲಿ ನಡೆಯುವ ದೇವರ ಕಾರ್ಯಗಳು ಈ ಸ್ಥಳದಲ್ಲಿಯೇ ನಡೆಯುತ್ತವೆ. ಕುಟುಂಬದ ಪೂರ್ವಜರು (ಹಿರಿಯರು) ಇರುವ ಸ್ಥಾನ.

ಗ್ರಾಮೀಣ ಜನ ಮನೆ ಕಟ್ಟುವಾಗ ಮುಖ್ಯ ಬಾಗಿಲನ್ನು (ಪ್ರಧಾನ ಬಾಗಿಲು) ಪೂರ್ವ ಅಥವಾ ಉತ್ತರಾಭಿಮುಖವಾಗಿ ಇಡುವುದು ಸಂಪ್ರದಾಯ. ಮನೆಯನ್ನು ಪ್ರವೇಶಿಸಿದ ಕೂಡಲೇ ಸಿಗುವುದು ಮನೆಯ ಒಂದನೇ ಅಂಕಣದ ಜಗಲಿ. ಇದನ್ನು ದಾಟಿದ ನಂತರ ಸಿಗುವುದು ನಡುಮನೆ. ಇದು ಮನೆಯ ಎರಡನೇ ಅಂಕಣ. ಈ ಅಂಕಣದ ಪೂರ್ವ ಅಥವಾ ಉತ್ತರ ದಿಕ್ಕಿಗೆ ಎದುರಾಗುವ ಗೋಡೆಯೇ ಹಸೆಗೋಡೆ ಚಿತ್ತಾರ ಬರೆಯುವ ಗೋಡೆ. ಈ ಗೋಡೆಯ ಮಧ್ಯಭಾಗದಲ್ಲಿ ಐದು ಅಡಿ ಉದ್ದ, ಐದು ಅಡಿ ಅಗಲವಿರುವ ಚಚ್ಚೌಕದ ಭಾಗದಲ್ಲಿ ಸಗಣಿಯಿಂದ ಸಾರಿಸಿ ಕೆಮ್ಮಣ್ಣು ಬಳಿಯುತ್ತಾರೆ. ನಂತರ ಬಿಳಿಬಣ್ಣದಿಂದ ಹಸೆಚಿತ್ತಾರವನ್ನು ಬರೆಯುತ್ತಾರೆ. ಇದೇ ಹಸೆಗೋಡೆ ಚಿತ್ತಾರ.

ಹಸೆಗೋಡೆಯ ಕೆಳಗೆ ವಧೂವರರನ್ನು ಕೂರಿಸುವಾಗ ಅಕ್ಕಿಯಲ್ಲಿ ಹದಿನಾರು ಮೂಲೆ ಆರತಿ (ರಂಗೋಲಿ) ಚೌಕಾಕಾರವಾಗಿ ಬರೆದು ಇದರ ಮೇಲೆ ಎರಡು ವೀಳ್ಯದೆಲೆ, ಎರಡು ಅಡಿಕೆ ಜಕ್ಕು ಬಾಳೆಕಾಯಿ ಇಟ್ಟು ನಂತರ ಇದರ ಮೇಲೆ ಈಚಲು ಚಾಪೆಗಳನ್ನು ಹಾಸುತ್ತಾರೆ. ಧಾರೆಗೆ ಹೋಗುವ ಮುನ್ನ ವರನ ಮನೆಯಲ್ಲಿ ಹೀಗೆ ಮಾಡುತ್ತಾರೆ. ಇದೇ ರೀತಿ ವಧುವಿನ ಮನೆಯಲ್ಲೂ ಚೌಕ ಬರೆದು ಎಲೆ ಅಡಿಕೆ, ಜಕ್ಕುಬಾಳೆಕಾಯಿ ಇಟ್ಟು ಐದು ಅಥವಾ ಹತ್ತು ಅಥವಾ ಹನ್ನೆರಡು ಈಚಲು ಚಾಪೆಗಳನ್ನು ಹಾಸುತ್ತಾರೆ. ಹಾಸುವ ಚಾಪೆಗಳು ಸರಿ ಸಂಖ್ಯೆಯಲ್ಲಿಯೇ ಇರಬೇಕು ಎಂಬ ನಿಯಮವಿದೆ. ಇವುಗಳ ಮೇಲೆ ಗಂಡಿನ ಮನೆಯವರು ತಂದ ಹಸೆ ಸೀರೆಯನ್ನು ಹಾಸಿ ಇದರ ಮೇಲೆ ವಧುವಿನ ಮನೆಯವರು ಉಡುಗೊರೆಯಾಗಿ ಕೊಡುವ ಜಮಖಾನವನ್ನು ಹಾಸುತ್ತಾರೆ. ನಂತರ ಇದರ ಮೇಲೆ ವಧೂವರರನ್ನು ಕೂರಿಸುತ್ತಾರೆ. ಇದನ್ನೇ ‘ಹಸೆ’ ಎನ್ನುತ್ತಾರೆ. ಹಸೆಯ ಮೇಲೆ ಹಾಸುವ ಅಷ್ಟೂ ಚಾಪೆಗಳನ್ನು ವಧುವಿಗೆ ಉಡುಗೊರೆಯಾಗಿ ವಧುವಿನ ಅಕ್ಕ-ತಂಗಿಯರು, ಸೋದರತ್ತೆಯರು, ಸಂಬಂಧಿಕರು ಕೊಡುತ್ತಾರೆ. ಹಸೆಯ ಹಿಂಭಾಗದ ಗೋಡೆಯೇ ‘ಹಸೆಗೋಡೆ’. ಈ ಗೋಡೆಯ ಮೇಲೆ ಬರೆದಿರುವ ಚಿತ್ರ ‘ಹಸೆಗೋಡೆ ಚಿತ್ತಾರ’. ಚಾಪೆಯ ಮೇಲೆ ಹಾಸುವ ಸೀರೆಗೆ ಹಸೆಸೀರೆ. ಈ ಸೀರೆಯನ್ನು ವರನ ಮನೆಯವರು ತರುತ್ತಾರೆ. ಹೀಗೆ ಈ ಶಬ್ದಗಳ ಹಿಂದೆ ಹಸೆ ಶಬ್ದ ಸೇರಿಕೊಂಡಿದೆ. ದೀವರು ಜನಾಂಗದವರು ಚಾಪೆಗೆ ಹಸೆ ಎನ್ನುವರು. ತಮ್ಮ ಮನೆಗಳಿಗೆ ಬಂದ ಅತಿಥಿಗಳಿಗೆ ಹಸೆ (ಈಚಲು ಚಾಪೆ) ಹಾಕಿ ಕೂರಿಸುವುದು ರೂಢಿಗತವಾದ ಪದ್ಧತಿ. ಮಲೆನಾಡಿನ ಗ್ರಾಮೀಣ ಸಂಸ್ಕøತಿಯ ಮೌಲಿಕ ರೂಪಗಳೆನಿಸಿದ ವಿವಿಧ ನಮೂನೆಯ ಹಸೆ ಚಿತ್ತಾರಗಳು, ಬುಟ್ಟಿ ಚಿತ್ತಾರಗಳು ಈವತ್ತಿನವರೆಗೂ ಸೌಂದರ್ಯಾಭಿರುಚಿಯನ್ನು ಉಳಿಸಿಕೊಂಡು ಬದುಕಿ ಬಂದಿವೆ. ಮನೆಯ ಗೋಡೆಯ ಮೇಲೆ, ಬಿದಿರು ಬುಟ್ಟಿಗಳ ಮೇಲೆ ರಚಿಸುವ ಚಿತ್ತಾರಗಳು ಹಳ್ಳಿಮನೆ ಗೋಡೆಗಳಿಗಷ್ಟೇ ಸೀಮಿತವಾಗಬಾರದು. ವಿಧಾನಸೌಧದ ಗೋಡೆಗಳ ಮೇಲೆ ಹಾಗೂ ಅಮೇರಿಕಾದ ವೈಟ್‍ಹೌಸಿನ ಒಳಗೋಡೆಗಳ ಮೇಲೂ ಮೂಡಿಬರಬೇಕು. ಇಂತಹದೊಂದು ಕಲೆಯನ್ನು ಉಳಿಸುವ ಹಾಗೂ ಅಭಿವೃದ್ಧಿಪಡಿಸುವ ಸಾಮಾಜಿಕ ಜವಾಬ್ದಾರಿ ಸರ್ಕಾರ, ಅಕಾಡೆಮಿ, ಸಂಘ ಸಂಸ್ಥೆಗಳು ಮತ್ತು ಸಾಂಸ್ಕøತಿಕ ಆದರ್ಶಗಳನ್ನುಳ್ಳ ವ್ಯಕ್ತಿಗಳು ಹೊರಲೇಬೇಕಾದ ಹೊಣೆಗಾರಿಕೆಯಾಗಿರುತ್ತದೆ. ಮಲೆನಾಡಿನ ದೀವರು ಮಹಿಳೆಯರು ಬರೆಯುವ ಅಪರೂಪದ ಚಿತ್ರಕಲೆ, ಇದೊಂದು ಸಮೂಹ ಚಿತ್ರಕಲೆ. ಇದು ಅತ್ಯಂತ ವಿಶಿಷ್ಟವಾದ ಹಾಗೂ ಸುಂದರವಾದ ಗ್ರಾಮೀಣ ಕಲಾಪ್ರಕಾರ. ಪಾರಂಪರಿಕ ವೃತ್ತಿ ಹಾಗೂ ಕಲೆಯ ದೃಷ್ಟಿಯಿಂದ ಹಸೆಗೋಡೆ ಮತ್ತು ಬುಟ್ಟಿ ಚಿತ್ತಾರಗಳು ಇಂದಿನವರೆಗೂ ತನ್ನೆಲ್ಲಾ ಸೌಂದರ್ಯಾಭಿರುಚಿಯನ್ನು ಉಳಿಸಿಕೊಂಡು ಬಂದಿವೆ. ಮಲೆನಾಡಿನ ಗ್ರಾಮೀಣ ಸಂಸ್ಕøತಿಯ ಮೌಲಿಕ ರೂಪಗಳೆನಿಸಿದ ಹಸೆಚಿತ್ತಾರಗಳು ಈ ಆಧುನಿಕ ಯುಗದಲ್ಲಿ ನಶಿಸುವ ಹಂತದಲ್ಲಿವೆ. ಆದರೆ ಈ ವಿಶಿಷ್ಟ ಚಿತ್ರಶೈಲಿ ಅದರ ಎಲ್ಲಾ ಶ್ರೀಮಂತಿಕೆಯೊಂದಿಗೆ ಮೂಲ ರೂಪದಲ್ಲಿ ಉಳಿಯುವಂತಾಗಬೇಕು. ಆ ಮೂಲಕ ನಮ್ಮ ಸಂಸ್ಕøತಿಯ ಬಹುಮುಖ್ಯ ಚಿತ್ರ ಪರಂಪರೆಯೆಂದು ಪುನರುಜ್ಜೀವನಗೊಳ್ಳಬೇಕು. ಇಂಥ ಕಲಾ ಪ್ರಕಾರದ ಪುನರುಜ್ಜೀವನವೆಂದರೆ ಅದನ್ನು ಯುವಜನರಿಗೆ ಕಲಿಸಿ, ಉಳಿಸಿ, ಬೆಳೆಸುವುದು ಎಂದೇ ಅರ್ಥ. ಇದು ಕೆಳವರ್ಗದ ಮಹಿಳೆಯರಿಗೆ ಒಂದು ಉತ್ತಮ ಉದ್ಯೋಗವೂ ಹೌದು. ಹಳೆಯದೆಂಬ ತಪ್ಪುಗ್ರಹಿಕೆಯಿಂದಾಗಿ ಇದರಿಂದ ಉತ್ಪನ್ನವಿಲ್ಲ ಎಂಬ ಸಂಕುಚಿತ ಮನೋಭಾವದಿಂದ ಈ ಕಲೆಯನ್ನು ಅವಗಣಿಸುವ ಪ್ರವೃತ್ತಿ ಕಂಡುಬರುತ್ತಿರುವುದು ದುರಂತವೇ ಸರಿ.

ಈವತ್ತಿಗೂ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಹೊಸನಗರ, ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಮತ್ತು ಉತ್ತರಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ ತಾಲ್ಲೂಕುಗಳಲ್ಲಿ ವಾಸಮಾಡುತ್ತಿರುವ ದೀವರು ಮಹಿಳೆಯರು ಹಾಗೂ ಇವರಿಂದ ಪ್ರಭಾವಿತರಾದ ಮಡಿವಾಳರು, ವಕ್ಕಲಿಗರು, ಬೋವಿ ಇತ್ಯಾದಿ ಕೆಳವರ್ಗದ ಮಹಿಳೆಯರು ಈ ಚಿತ್ರಕಲೆಯನ್ನು ಶ್ರದ್ಧಾಸಕ್ತಿಯಿಂದ ಉಳಿಸಿಕೊಂಡು ಬರುತ್ತಿದ್ದಾರೆ.


ಹಸೆ ಚಿತ್ರಗಳು

ದೀವರು ಮಾತೃಪ್ರಧಾನ ಸಮಾಜಕ್ಕೆ ಸೇರಿದವರು. ಹೊಲಗದ್ದೆ ಕೆಲಸ, ಹೈನುಗಾರಿಕೆ, ಚಾಪೆ ಹೆಣೆಯುವುದು, ಗೃಹಕೃತ್ಯದ ಕೆಲಸ, ಕೋಳಿ ಸಾಗಾಣಿಕೆ ಹೀಗೆ ಕುಟುಂಬದ ಸಮಸ್ತ ಕೆಲಸಗಳಲ್ಲಿ ಹೆಂಗಸರದೇ ಮೇಲುಕೈ. ಹಬ್ಬ, ಮದುವೆ, ಮುಂಜಿ, ಹೊಸಮನೆ ಗೃಹಪ್ರವೇಶ, ಜಾತ್ರೆಗಳಲ್ಲಿ ಹಾಡು, ಹಸೆ ಹಾಗೂ ಮನೆಯ ಅಲಂಕಾರಕ್ಕಾಗಿ ಕಲಾತ್ಮಕ ಚಿತ್ತಾರ ಬರೆಯುವಲ್ಲಿ ಇವರೇ ಮುಂದು. ದೀವರ ಮನೆಯಲ್ಲಿ ಮದುವೆಯೆಂದರೆ ಮಹಿಳೆಯರಿಗೆ ತುಂಬಾ ಸಂಭ್ರಮ, ಸಡಗರ. ಕೈತುಂಬಾ ಕೆಲಸ. ಮದುವೆ ಒಂದು ತಿಂಗಳಿರುವಾಗಲೇ ಮನೆಗೆ ಜೇಡಿ, ಕೆಮ್ಮಣ್ಣು ಬಳಿದು ಶೃಂಗಾರಗೊಳಿಸುತ್ತಾರೆ. ಮನೆಯ ಒಳ ಮತ್ತು ಹೊರ ಗೋಡೆಯ ಮೇಲೆ ಅಲಂಕಾರಕ್ಕಾಗಿ ಹದಿನಾರು ಮತ್ತು ಎಂಬತ್ತು ಮೂಲೆ ಆರತಿಗಳು, ತೇರು, ಚಕ್ಲುಬಕ್ಲು ಚಿನ್ನಾಣಿ, ಜಮಖಾನ, ವಸ್ತ್ರ ತಿರಿಗೆಮಣೆ ಹಾಗೂ ಬಾಗಿಲು ಕಿಟಕಿಗಳಿಗೆ ಬಾಗಿಲು ಚಿತ್ತಾರಗಳನ್ನು ಬರೆದು ಮನೆಯನ್ನು ಅಲಂಕಾರಗೊಳಿಸುತ್ತಾರೆ.

ಮಲೆನಾಡಿನ ಹಸೆ ಚಿತ್ರಕಲೆಯನ್ನು ಮೂರು ಭಾಗವಾಗಿ ವಿಂಗಡಿಸಿಕೊಳ್ಳಬಹುದು.

1) ಮದುವೆ ಕಾರ್ಯದಲ್ಲಿ ಬರೆಯುವ ಹಸೆಗೋಡೆ ಚಿತ್ತಾರಗಳು

2) ಮನೆಯ ಅಲಂಕಾರಕ್ಕಾಗಿ ಬರೆಯುವ ಚಿತ್ರಗಳು

3) ಹಬ್ಬ ಹರಿದಿನಗಳಲ್ಲಿ ಬರೆಯುವ ಬುಟ್ಟಿ ಚಿತ್ತಾರಗಳು

ಹಸೆಗೋಡೆ ಚಿತ್ತಾರ

ಹಸೆಗೋಡೆ ಚಿತ್ತಾರ-ಈ ಚಿತ್ರ ಚಿತ್ತಾರ ಕಲೆಯಲ್ಲಿ ತುಂಬಾ ಪ್ರಮುಖವಾದುದು. ಈ ಚಿತ್ರ ಬರೆಯದೇ ಮದುವೆಗಳು ನಡೆಯುವ ಹಾಗಿಲ್ಲ. ಇದರ ಕೆಳಗೆ ಮದುವೆಯಲ್ಲಿ ವಧೂ-ವರರನ್ನು ಕೂರಿಸಿ ಎಲ್ಲಾ ಶಾಸ್ತ್ರಗಳನ್ನು ನಡೆಸುತ್ತಾರೆ.

ಹಸೆಗೋಡೆ ಚಿತ್ತಾರಗಳಲ್ಲಿ ಅನೇಕ ವಿನ್ಯಾಸದ ಚಿತ್ರಗಳಿವೆ. ಮುಖ್ಯವಾಗಿ;

1) ಮುಂಡಿಗೆಗಳು ಇರುವ ಮಂಡಿಗೆ ಹಸೆ ಚಿತ್ರ

2) ಮಂಡಿಗೆ ಇಲ್ಲದ ಮಾದನಕೈ ಇರುವ ಸಾದಾ ಹಸೆ ಚಿತ್ರ

3) ಚಚ್ಚೌಕದ ಹಸೆ ಚಿತ್ರ

4) ತೇರು ಆಕಾರದ ಹಸೆ ಚಿತ್ರ

5) ಮೂರು ಗೋಪುರವಿರುವ ಹಸೆ ಚಿತ್ರ

6) ಒಂದು ಗೋಪುರವಿರುವ ಹಸೆ ಚಿತ್ರ

ಈ ಆರು ವಿನ್ಯಾಸಗಳ ಪ್ರತಿ ಚಿತ್ರವನ್ನು ಜೋಡೆಳೆ ಮತ್ತು ಒಂಟೆಳೆ ಚಿತ್ರಗಳೆಂದು ವಿಂಗಡಿಸಬಹುದು. ದೀವರು ಮಹಿಳೆಯರು ಮುಂಡಿಗೆ ಹಸೆ ಚಿತ್ರ ಮತ್ತು ಮದನ ಕೈ ಇರುವ ಸಾದಾ ಚಿತ್ತಾರಗಳನ್ನು ಮಾತ್ರ ಬರೆಯುತ್ತಾರೆ. ಉಳಿದ ನಾಲ್ಕು ಚಿತ್ರಗಳನ್ನು ಬರೆಯುವುದಿಲ್ಲ. ಬೇರೆ ಬೇರೆ ಜನಾಂಗದ ಮಹಿಳೆಯರು ಮಾತ್ರ ಬರೆಯುತ್ತಾರೆ.

1) ಮುಂಡಿಗೆ ಇರುವ ಹಸೆ ಚಿತ್ರ

ಈ ಚಿತ್ರದಲ್ಲಿ ನಾಲ್ಕು ಮುಂಡಿಗೆಗಳಿರುತ್ತವೆ. ಎರಡು ಮುಂಡಿಗೆಗಳನ್ನು ನಿಲ್ಲಿಸಿ ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ ಒಂದೊಂದು ಮುಂಡಿಗೆಗಳನ್ನು ಅಡ್ಡ ಇಟ್ಟು ಬರೆಯುತ್ತಾರೆ. ಜೋಡೆಳೆ ಮುಂಡಿಗೆ ಚಿತ್ರವಾದರೆ ಹನ್ನೆರಡು ಎಳೆಗಳಿರುತ್ತವೆ. ಒಂಟೆಳೆ ಚಿತ್ರದಲ್ಲಿ ಎಂಟುಎಳೆಗಳಿರುತ್ತವೆ. ಒಂಟೆಳೆ ಚಿತ್ರ ಬರೆಯುವುದು ಸುಲಭ, ಕೆಲಸ ಕಡಿಮೆ. ಜೋಡೆಳೆ ಹಸೆ ಬರೆಯುವುದು ತುಂಬಾ ಶ್ರೇಷ್ಠ ಎಂಬ ನಂಬಿಕೆ ಇದೆ. ಜೋಡೆಳೆ ಮತ್ತು ಒಂಟೆಳೆ ಹಸೆ ಚಿತ್ರಗಳಲ್ಲಿ ಎರಡು ಮದನನ ಕೈಗಳಿರುತ್ತವೆ. ನಾಲ್ಕು ಮುಂಡಿಗೆಗಳಲ್ಲಿ ಗೊಂಬೆ ಸಾಲುಗಳಿರುತ್ತವೆ. ಚಿತ್ರದ ಒಳ ಮತ್ತು ಹೊರಭಾಗದಲ್ಲಿ ಬರೆದಿರುತ್ತಾರೆ. ಗೂಡಿನಹಕ್ಕಿ ಎರಡರಿಂದ ನಾಲ್ಕು ಇರುತ್ತವೆ. ಚಿತ್ರದ ಮೇಲ್ಭಾಗದಲ್ಲಿ ಆರರಿಂದ ಎಂಟು ಕಳಸದ ಗಿಂಡಿಗಳಿರುತ್ತವೆ. ಮಧ್ಯಭಾಗದಲ್ಲಿ ಎರಡು ಪಲ್ಲಕ್ಕಿ(ದಂಡಿಗೆ)ಗಳು, ದಂಡಿಗೆ ಹೊರುವ ಮನುಷ್ಯರು, ದಿಬ್ಬಣದ ಜನಗಳು, ಮುಂಡಿಗೆಗಳು ಒಂದಕ್ಕೊಂದು ಸೇರುವ ಮೂಲೆಗಳಲ್ಲಿ ಪಪ್ಳಿ ಮತ್ತು ಬಾಬ್ಲಿ, ಜಲ್ಲಿ ಸಾಲು, ಚೆಂಡುಹೂವಿನ ಸಾಲು ಚಿತ್ರಗಳಿರುತ್ತವೆ. ದಂಡಿಗೆ ಒಳಗೆ ಬಾಸಿಂಗ ತೊಂಡಿಲು ಸೂಡಿರುವ ವಧೂವರರ ಚಿತ್ರಗಳು. ಒಂಟೆಳೆ ಮುಂಡಿಗೆ ಚಿತ್ರದಲ್ಲಿ ಕೂಡ ಇದೇ ವಿವರಗಳು ಇರುತ್ತವೆ.

ಒಂದು ಕುಟುಂಬದಲ್ಲಿ ಎರಡು ಮದುವೆಗಳು ನಡೆದರೆ ಹಸೆ ಚಿತ್ರದಲ್ಲಿ ಎರಡು ದಂಡಿಗೆಗಳನ್ನು ಬರೆದಿರುತ್ತಾರೆ. ಒಂದೇ ಮದುವೆಯಾದರೆ ಒಂದು ದಂಡಿಗೆ ಮಾತ್ರ ಇರುತ್ತದೆ.

ಮುಂಡಿಗೆ ಇಲ್ಲದ ಮದನನ ಕೈಗಳಿರುವ ಸಾದಾ ಹಸೆ ಚಿತ್ರ

ಇದು ಪುರಾತನ ಕಾಲದ ಚಿತ್ರ. ಹಿಂದಿನ ಕಾಲದಲ್ಲಿ ಎಲ್ಲರೂ ಒಂದೇ ಚಿತ್ರವನ್ನು ಬರೆಯುತ್ತಿದ್ದರು. ಇದರಲ್ಲಿ ಮುಂಡಿಗೆಗಳಿರುವುದಿಲ್ಲ. ಮುಂಡಿಗೆ ಚಿತ್ರ ಈಗ್ಗೆ ಅರವತ್ತು-ಎಪ್ಪತ್ತು ವರ್ಷಗಳ ಈಚಿಗೆ ಬಳಕೆಗೆ ಬಂದಿರುತ್ತದೆ. ಇದರಲ್ಲೂ ಜೋಡೆಳೆ ಒಂಟೆಳೆ ಚಿತ್ರಗಳಿರುತ್ತವೆ. ಜೋಡೆಳೆ ಚಿತ್ರದಲ್ಲಿ ಹನ್ನೆರಡು ಎಳೆಗಳಿರುತ್ತವೆ. ಒಂಟೆಳೆ ಚಿತ್ರದಲ್ಲಿ ಎಂಟು ಎಳೆಗಳಿರುತ್ತವೆ. ಇದರಲ್ಲಿ ಎರಡೂ ಕಡೆ ಐದೈದರಂತೆ ಹತ್ತು ಮದನನ ಕೈಗಳಿರುತ್ತವೆ. ಪ್ರಧಾನವಾಗಿ ಈ ಚಿತ್ರದಲ್ಲಿ ಪಪ್ಳಿ, ಬಾಬ್ಲಿ ಮತ್ತು ಜೋಡೆಳೆ ನಿಲಿಗಳು ತುಂಬಿರುತ್ತವೆ. ಚಿತ್ರದ ಮೇಲ್ಭಾಗದಲ್ಲಿ ಐದು ಕಳಸಗಳಿರುತ್ತವೆ. ಚಿತ್ರದ ಮಧ್ಯಭಾಗದಲ್ಲಿ ದಂಡಿಗೆ, ದಂಡಿಗೆ ಹೊರುವ ಜನಗಳು, ಓಲಗದವರು, ದಿಬ್ಬಣದವರು ಇರುತ್ತಾರೆ. ಈ ಚಿತ್ರದ ಸುತ್ತಲೂ ಮೂರುಕಡೆ ಎರಡಡಿಕೆ ಬಾಗಿಲು ಚಿತ್ರವಿರುತ್ತದೆ. ಇದು ತುಂಬಾ ಸುಂದರವಾದ ಚಿತ್ರ.

ವಿವಿಧ ಬಣ್ಣಗಳ ಹಸೆ

ದೀವರ ಮಹಿಳೆಯರು ಹಸೆಗೋಡೆ ಚಿತ್ತಾರವನ್ನು ಮೂರು ವರ್ಣಗಳಿಂದ ಬರೆಯುತ್ತಾರೆ. 1) ಬಿಳಿ ಹಸೆ, 2) ಕಪ್ಪುಹಸೆ ಮತ್ತು 3)ಕೆಂಪು ಹಸೆ ಎಂದು ಮೂರು ಸಂಪ್ರದಾಯಗಳಿವೆ.

ಬಿಳಿಹಸೆ

ಬಿಳಿಹಸೆ ಬರೆಯುವವರು ನೆರೆಗುಳಿ, ಹೊನಸು ಸೋಮಸಾಳೆ, ತೊಗರಿ, ವಾಳ್ಯಾಭತ್ತದ ತಳಿಯ ಯಾವುದಾದರೂ ಒಂದು ಜಾತಿಯ ಭತ್ತದ ಅಕ್ಕಿಯನ್ನು ಚೆನ್ನಾಗಿ ತೊಳೆದು ಮೂರು ದಿವಸ ನೆನೆಸಿ ಅದನ್ನು ನುಣ್ಣಗೆ ಅರೆದು ಅಕ್ಕಿ ಹಿಟ್ಟಿನ ಅಂಟು (ಪೇಸ್ಟ್) ಮಾಡಿಕೊಳ್ಳುತ್ತಾರೆ. ಪುಂಡಿ ನಾರಿನಿಂದ ಕುಂಚ (ಬ್ರೆಶ್) ತಯಾರಿಸಿಕೊಂಡು ಕುಂಚದ ಹಿಂಭಾಗಕ್ಕೆ ಬೆರಳಿನಿಂದ ಹಿಡಿದುಕೊಳ್ಳಲು ಅನುಕೂಲವಾಗುವಂತೆ ಭತ್ತದ ಹಲ್ಲಿನ ಕೊಳವೆಯನ್ನು ಹಾಕಿ ಕೊಳವೆ ಹಿಂಬಾಗದಲ್ಲಿ ದಾರ ಸರಿದಾಡದಂತೆ ದಾರವನ್ನು ಹಿಂಭಾಗಕ್ಕೆ ಗಂಟು ಹಾಕುತ್ತಾರೆ.

ಚಿತ್ತಾರವನ್ನು ಪ್ರಾರಂಭಿಸುವ ಮೊದಲು ಗೋಡೆಯನ್ನು ಸಗಣಿಯಿಂದ ಸಾರಿಸಿ, ಕೆಮ್ಮಣ್ಣು ಬಳಿಯುತ್ತಾರೆ. ಇದರ ಮೇಲೆ ಅಕ್ಕಿಹಿಟ್ಟಿನಿಂದ ತಯಾರಿಸಿಕೊಂಡ ಗಂನಿಂದ ಚಿತ್ತಾರ ಬರೆಯುತ್ತಾರೆ. ಕೆಂಪುಗೋಡೆಯ ಮೇಲೆ ಬಿಳಿ ಬಣ್ಣದಿಂದ ಹಸೆ ಬರೆಯುವುದರಿಂದ ಎಳೆಗಳು ಎದ್ದು ಕಾಣುತ್ತವೆ.

ಕಪ್ಪು ಹಸೆ

ಕಪ್ಪು ಹಸೆ ಬರೆಯುವ ಕುಟುಂಬಗಳ ಕಲಾವಿದೆಯರು ನೆರೆಗುಳಿ, ಕರೆಇಸಡಿ, ಹೊನಸು, ವಾಳ್ಯಾ ಈ ಜಾತಿಯ ಭತ್ತಗಳಲ್ಲಿ ಯಾವುದಾದರೂ ಒಂದು ತಳಿಯ ಭತ್ತದ ಅಕ್ಕಿಯನ್ನು ಕಪ್ಪಾಗುವಂತೆ ಹುರಿದು ನಂತರ ಗುಡ್ಡೆಗೇರು ಕಾಯಿ ಕೊಯ್ದು ಇದರಿಂದ ಬರುವ ಹಗಣ(ಗೇರುತುಪ್ಪ)ವನ್ನು ಹುರಿದ ಅಕ್ಕಿಯ ಜೊತೆಗೆ ಸೇರಿಸಿ ರುಬ್ಬುತ್ತಾರೆ. ಇದು ಅಂಟು ಅಂಟಾದ ಕಪ್ಪು ಬಣ್ಣವಾಗುತ್ತದೆ. ಗೋಡೆಯನ್ನು ಸಗಣಿಯಿಂದ ಸಾರಿಸಿ ಜೇಡಿಮಣ್ಣಿನಿಂದ ಬಳಿಯುತ್ತಾರೆ. ಇದರ ಮೇಲೆ ಕಪ್ಪು ಬಣ್ಣದಿಂದ ಹಸೆ ಚಿತ್ರ ಬರೆಯುತ್ತಾರೆ. ಕಪ್ಪು ಹಸೆ ಚಿತ್ರದಲ್ಲಿ ಎಲ್ಲಾ ವಿವರಗಳನ್ನು ಕಪ್ಪು ಬಣ್ಣದಿಂದ ಬರೆಯುತ್ತಾರೆ. ಹಸೆ ಚಿತ್ರದ ಮುಂಡಿಗೆ, ನಿಲಿ, ಗೊಂಬೆ ಸಾಲು, ಪಪ್ಳಿ, ಬಾಬ್ಲಿ, ಚೆಂಡುಹೂವಿನ ಸಾಲು, ಜೆಲ್ಲಿ ಸಾಲು, ಗೂಡಿನ ಹಕ್ಕಿ, ಕಳಸದ ಗಿಂಡಿಗಳು, ದಿಬ್ಬಣದ ಜನಗಳು ದಂಡಿಗೆ, ದಂಡಿಗೆ ಹೊರುವ ಜನಗಳು, ಓಲಗದವರು ಇತ್ಯಾದಿ ಚಿತ್ರಗಳನ್ನು ಬರೆಯುತ್ತಾರೆ.

ಕಪ್ಪು ಹಸೆ ಬರೆಯುವ ಸಂಪ್ರದಾಯದವರು ಮದುವೆಗಳಲ್ಲಿ ವರನಿಗೆ ಪೇಟಾ ತೊಡಿಸಿ ಕೈಯ್ಯಲ್ಲಿ ಕಠಾರಿಯನ್ನು ಕೊಡುತ್ತಾರೆ. ಈ ಸಂಪ್ರದಾಯದವರು ದೀಪಾವಳಿಯಲ್ಲಿ ಎತ್ತುಗಳಿಗೆ ಬಾಸಿಂಗ ಸೂಡುವುದಿಲ್ಲ. ಕರೂರು, ಬಾರಂಗಿ, ಆವಿನಹಳ್ಳಿ ಸೀಮೆಗಳಲ್ಲಿ ಕಪ್ಪು ಮತ್ತು ಕೆಂಪು ಹಸೆ ಬರೆಯುವ ಸಂಪ್ರದಾಯದವರು ಇದ್ದರು. ಹಿರೇಭಾಸ್ಕರ ಮತ್ತು ಲಿಂಗನಮಕ್ಕಿ ಆಣೆಕಟ್ಟೆಗಳಿಂದ ಮುಳುಗಡೆಯಾಗಿ ಶಿವಮೊಗ್ಗ ಜಿಲ್ಲೆಯ ಬೇರೆ ಬೇರೆ ಭಾಗದಲ್ಲಿ ಚದರಿ ಹೋಗಿದ್ದಾರೆ.

ಕಪ್ಪು ಮತ್ತು ಕೆಂಪು ಹಸೆ ಬರೆಯುವ ಸಂಪ್ರದಾಯದವರು ಕಾಗೋಡು, ಯಲಕುಂದ್ಲಿ, ಹಿರೇನೆಲ್ಲೂರು, ಸೂರನಗದ್ದೆ ಮುಂತಾದ ಹಳ್ಳಿಗಳಲ್ಲಿ ಕೆಲವು ಕುಟುಂಬಗಳಲ್ಲಿ ಈಗಲೂ ಬರೆಯುತ್ತಾರೆ. ಕಪ್ಪು ಮತ್ತು ಕೆಂಪು ಹಸೆ ಬರೆಯುವ ಕುಟುಂಬಗಳ ಸಂಪ್ರದಾಯದಂತೆ ಹಾಗೂ ಅವರ ಮನೆ ದೇವರುಗಳಿಗೆ ಸರಿ ಎನಿಸುವ ಅವರವರ ಮನೆತನಗಳಲ್ಲಿ ಅನುಸರಿಸಿಕೊಂಡು ಬಂದ ಸಂಪ್ರದಾಯದಂತೆ ಕಪ್ಪು ಮತ್ತು ಕೆಂಪು ಬಣ್ಣದ ಹಸೆ ಚಿತ್ತಾರಗಳನ್ನು ಬರೆಯುತ್ತಾರೆ.

ಕೆಂಪು ಹಸೆ

ಕೆಮ್ಮಣ್ಣಿನಿಂದ ಹಸೆ ಬರೆಯುವ ಕಲಾವಿದೆಯರು ಜೇಡಿಮಣ್ಣು(ಬಿಳಿಮಣ್ಣು)ನಿಂದ ಬಳಿದ ಗೋಡೆಯ ಮೇಲೆ ಹಸೆಚಿತ್ತಾರದ ಎಲ್ಲಾ ವಿವರಗಳನ್ನು ಕೆಮ್ಮಣ್ಣಿನಿಂದ ಬರೆಯುತ್ತಾರೆ. ಹಸೆ ಚಿತ್ತಾರದ ಮುಂಡಿಗೆ, ನಿಲಿ, ಗೊಂಬೆಸಾಲು, ಪಪ್ಳಿ, ಚೆಂಡುಹೂವಿನ ಸಾಲು, ಜೆಲ್ಲಿಸಾಲು ಗೂಡಿನ ಹಕ್ಕಿ, ಕಳಸದ ಗಿಂಡಿಗಳು, ದಿಬ್ಬಣದ ಜನಗಳು ಈ ಎಲ್ಲಾ ಚಿತ್ರಗಳನ್ನು ಬರೆದು ಮುಂಡಿಗೆ ಒಳಗಿನ ದಂಡಿಗೆ ಬರೆಯುವ ಸ್ಥಳವನ್ನು ಖಾಲಿ ಬಿಟ್ಟಿರುತ್ತಾರೆ.

ಕೆಂಪು ಹಸೆ ಬರೆಯುವ ಸಂಪ್ರದಾಯದವರು ದಂಡಿಗೆಯನ್ನು ಬರೆಯುವುದಿಲ್ಲ. ಇವರು ದೀಪಾವಳಿ ಹಬ್ಬದಲ್ಲಿ ಎತ್ತುಗಳಿಗೆ ಬಾಸಿಂಗ ಕಟ್ಟುವುದಿಲ್ಲ ಬಿಳಿಹಸೆ ಚಿತ್ತಾರ ಬರೆಯುವ ಸಂಪ್ರದಾಯದವರು ಮದುವೆಗಳಲ್ಲಿ ವಧೂವರರಿಗೆ ಬಾಸಿಂಗ ತೊಂಡಿಲು ತೊಡಿಸಿ ವರನ ಕೈಯಲ್ಲಿ ಹೂವಿನ ಕೋಲು ಕೊಡುತ್ತಾರೆ.

ಕಪ್ಪು ಹಸೆ ಬರೆಯುವ ಸಂಪ್ರದಾಯದವರು ಮದುವೆಗಳಲ್ಲಿ ವರನಿಗೆ ಪೇಟಾ ತೊಡಿಸಿ ಕೈಯಲ್ಲಿ ಕಠಾರಿಯನ್ನು ಕೊಡುತ್ತಾರೆ. ದೀಪಾವಳಿಯಲ್ಲಿ ಎತ್ತುಗಳಿಗೆ ಬಾಸಿಂಗ ಕಟ್ಟುವುದಿಲ್ಲ.

ನಿಯಮಗಳು

ಮದುವೆಗಳಲ್ಲಿ ಹಸೆಗೋಡೆ ಚಿತ್ತಾರ ಬರೆಯುವ ಪದ್ಧತಿ ಮಲೆನಾಡಿನ ದೀವರು ಮತ್ತು ಇತರೆ ಹಿಂದುಳಿದ ಜನಾಂಗಗಳಲ್ಲಿ ಪಾರಂಪರಿಕವಾಗಿ ಬಂದಂಥ ಒಂದು ಸಮುದಾಯ ಕಲೆಯಾಗಿ ಬೆಳೆದು ಬಂದಿದೆ. ಇತ್ತೀಚಿನ ದಿವಸಗಳಲ್ಲಿ ಪೇಟೆಯಲ್ಲಿ ಸಿಗುವ ಬೇರೆ ಬೇರೆ ಬಣ್ಣಗಳನ್ನು ಬಳಸುತ್ತಾರಾದರೂ ಚಿತ್ತಾರದ ವಸ್ತು, ವಿನ್ಯಾಸ, ರೇಖೆಗಳು ಮಾತ್ರ ಹಾಗೆಯೇ ಉಳಿದುಕೊಂಡು ಬಂದಿವೆ.

1) ಮದುವೆಗಳಲ್ಲಿ ಹಸೆಗೋಡೆ ಚಿತ್ತಾರಗಳನ್ನು ಮಧುಮಗ(ವರ)ನ ತಾಯಿ, ವಧುವಿನ ತಾಯಿ ಬರೆಯುವ ಹಾಗಿಲ್ಲ. ವಧೂ-ವರರ ಅಕ್ಕತಂಗಿಯರು, ಸೋದರತ್ತೆಯರು ಬರೆಯಬಹುದು. ಚಿಕ್ಕಮ್ಮ, ದೊಡ್ಡಮ್ಮಂದಿರು ಬರೆಯಬಹುದು.

2) ಚಿತ್ತಾರ ಬರೆಯುವವರು ಮದುವೆಯ ವಾರದ ಮುಂಚೆ ನಡೆಯುವ ವೀಳ್ಯಾಶಾಸ್ತ್ರದ ದಿವಸ ಎಳೆ ಹೊಡೆದು ಅಂದಿನಿಂದ ಬರೆಯಲು ಪ್ರಾರಂಭಿಸಬೇಕು.

3) ಹಸೆ ಚಿತ್ತಾರದ ಎಳೆಗಳನ್ನು ಒಂದು ಸಾರಿ ಹಾಕಿದರೆ ಅಳಿಸಿ ಬರೆಯುವ ಹಾಗಿಲ್ಲ. ಅಳಿಸಿ ಬರೆಯುವುದು ಅಪಶಕುನವೆಂದು ಭಾವಿಸುತ್ತಾರೆ. ಧಾರೆಯ ಮುಂಚೆಯೇ ಚಿತ್ತಾರ ಬರೆದು ಮುಗಿಸಿರಬೇಕು.

4) ಚಿತ್ತಾರದ ಬಣ್ಣ ತಯಾರಿಸಲು ಅಕ್ಕಿ ನೆನೆ ಹಾಕುವಾಗ ಒಳ್ಳೆಯ ಮುಹೂರ್ತ ನೋಡಿ ನೆನೆ ಹಾಕುತ್ತಾರೆ.

5) ಕುಟುಂಬದ ಸದಸ್ಯರಲ್ಲದೆ ಬೇರೆಯವರಿಂದ ಚಿತ್ತಾರ ಬರೆಸಿದಾಗ ಬರೆದ ಮಹಿಳೆಗೆ ರವಿಕೆ ಖಣ, ತೆಂಗಿನಕಾಯಿ, ಮಡಿಲಕ್ಕಿ ಹಾಕಿ ಗೌರವಿಸುತ್ತಾರೆ ಮತ್ತು ಚಿತ್ತಾರ ಬರೆಯುವಾಗ ಪ್ರಾರಂಭ ಮುಗಿಯುವವರೆಗೆ ತುಂಬಾ ಗೌರವದಿಂದ ಆತಿಥ್ಯ ಮಾಡುತ್ತಾರೆ.

6) ಒಮ್ಮೆ ಬರೆದ ಹಸೆ ಚಿತ್ತಾರವನ್ನು ಮೂರುವರ್ಷಗಳವರೆಗೆ ಅಳಿಸಬಾರದು ಎಂಬ ನಿಯಮವಿದೆ. ಆದರೆ ಒಂದು ವರ್ಷ ತುಂಬುವುದರೊಳಗೆ ಆ ಮನೆಯಲ್ಲಿ ಮದುವೆಗಳು ನಡೆದರೆ ಆ ಸ್ಥಳವನ್ನು ಬಿಟ್ಟು ಪಕ್ಕದಲ್ಲಿಯೇ ಹೊಸದಾಗಿ ಚಿತ್ರವನ್ನು ಬರೆಯಬಹುದು.

7) ಎರಡು ಮದುವೆಗಳು ಒಮ್ಮೆ ಆದರೆ ಎರಡು ದಂಡಿಗೆಯಿರುವ ಹಸೆ ಚಿತ್ತಾರವನ್ನು ಬರೆಯುತ್ತಾರೆ. ಒಂದೇ ಮದುವೆಯಾದರೆ ಒಂದು ದಂಡಿಗೆ ಇರುವ ಹಸೆ ಚಿತ್ರವನ್ನು ಬರೆಯುತ್ತಾರೆ.

ಬುಟ್ಟಿ ಚಿತ್ತಾರಗಳು

               ಮಲೆನಾಡಿನ ದೀವರು ಜನಾಂಗದವರು ಆಚರಿಸುವ ಹಬ್ಬಗಳಲ್ಲಿ ಭೂಮಿಹುಣ್ಣಿಮೆ ಹಬ್ಬ ತುಂಬಾ ಶ್ರೇಷ್ಠವಾದುದು ಮತ್ತು ವೈಶಿಷ್ಟ್ಯಪೂರ್ಣವಾದುದು. ಮಹಾನವಮಿ ಆಗಿ ಏಳು ಅಥವಾ ಆರನೇ ದಿವಸ ಬರುವ ಹುಣ್ಣಿಮೆ ಭೂಮಿಹುಣ್ಣಿಮೆ. ಈ ದಿವಸ ಭೂಮಿ ಹುಣ್ಣಿಮೆಯನ್ನು ಆಚರಿಸುತ್ತಾರೆ. ಇದಕ್ಕೆ ಬಯಕೆ ಹಬ್ಬವೆಂದೂ ಕರೆಯುತ್ತಾರೆ. ಗರ್ಭಿಣಿಯರಾದ ಹೆಣ್ಣುಮಕ್ಕಳಿಗೆ ಸೀಮಂತ ಕಾರ್ಯವನ್ನು  ಮಾಡುವಂತೆ ಗರ್ಭಧರಿಸಿ (ಹೊಡೆ) ನಿಂತ ಭತ್ತದ ಸಸಿಗಳಿಗೆ ಸೀಮಂತ ಮಾಡುತ್ತಾರೆ. ಭೂಮಿಯು ಸಹ ‘ಅಮೂಲ್ಯ ಸ್ತ್ರೀ ದೇವತೆ’ ಎಂಬ ದಾರ್ಶನಿಕ ಕಲ್ಪನೆ ಇವರದು. ಈ ಹಬ್ಬದಲ್ಲಿ ಬಿದಿರಿನಿಂದ ತಯಾರಿಸಿದ ಎರಡು ಬುಟ್ಟಿಗಳಿರುತ್ತವೆ. ಒಂದನೆಯದು ಭೂಮಣ್ಣಿಬುಟ್ಟಿ, ಎರಡನೆಯದು ಹಚ್ಚಂಬಲಿ ಬುಟ್ಟಿ. ಭೂಮಣ್ಣಿ ಬುಟ್ಟಿ ದೊಡ್ಡದಾಗಿರುತ್ತದೆ. ಇದು ಒಂದು ಅಡಿ, ಎತ್ತರ ನಾಲ್ಕು ಅಡಿ ಸುತ್ತಳತೆ ಇರುತ್ತದೆ. ಚಿಕ್ಕ ಬುಟ್ಟಿ ಎಂಟು ಇಂಚು, ಎತ್ತರ ಎರಡು ಅಡಿ, ಎಂಟು ಇಂಚು ಸುತ್ತಳತೆ ಇರುತ್ತದೆ. ಮಹಾನವಮಿ ಹಬ್ಬದ ಹಿಂದಿನ ದಿವಸ ಅಟ್ಟದ ಮೇಲಿದ್ದ ಬುಟ್ಟಿಗಳನ್ನು ಇಳಿಸಿ ಸಗಣಿಯಿಂದ ಬಳಿದು ಕೆಮ್ಮಣ್ಣು ಹಚ್ಚುತ್ತಾರೆ. ಮಹಾನವಮಿ ಹಬ್ಬದ ದಿವಸ ಹರಿ ಇಡಕಲು ಕೆಳಗೆ ಇಟ್ಟು ಪೂಜೆ ಮಾಡಿ ನಂತರ ಬುಟ್ಟಿಗಳ ಮೇಲೆ ಚಿತ್ತಾರ ಬರೆಯಲು ಪ್ರಾರಂಭ ಮಾಡುತ್ತಾರೆ. ಅಕ್ಕಿಯಿಂದ ತಯಾರಿಸಿದ ಬಿಳಿಯ ಬಣ್ಣದಿಂದ ಪುಂಡಿನಾರಿನ ಕುಂಚ(ಬ್ರೆಶ್)ದಿಂದ ಬುಟ್ಟಿಯ ಮೇಲೆ ಚಿತ್ರಗಳನ್ನು ಬರೆಯುತ್ತಾರೆ. ಬುಟ್ಟಿ ಚಿತ್ತಾರವನ್ನು ಬರೆಯುವ ಕಲಾವಿದೆಯರು ಎರಡು ರೀತಿಯಲ್ಲಿ ಚಿತ್ರ ಬರೆಯುತ್ತಾರೆ. ಸುತ್ತೆಳೆ ಚಿತ್ತಾರ ಮತ್ತು ಮೂಲೆ ಎಳೆ ಚಿತಾರ. ಸುತ್ತೆಳೆ ಚಿತ್ತಾರದಲ್ಲಿ ಹನ್ನೆರಡು ಎಳೆಗಳಿರುತ್ತವೆ. ಮೂಲೆ ಎಳೆ ಚಿತ್ತಾರದಲ್ಲಿ ಎಂಟು ಎಳೆಗಳಿರುತ್ತವೆ. ದೊಡ್ಡ ಬುಟ್ಟಿಯಲ್ಲಿ ಮಧ್ಯೆ ಎಂಟು ಮನೆಗಳಿರುತ್ತವೆ. ಸಣ್ಣ ಬುಟ್ಟಿಯಲ್ಲಿ ನಾಲ್ಕು ಮನೆಗಳು ಮಾತ್ರ ಇರುತ್ತವೆ. ಬುಟ್ಟಿಯ ಮೇಲೆ ಬರೆಯುವ ಚಿತ್ರಗಳನ್ನು ಎರಡು ಭಾಗವಾಗಿ ಮಾಡಿಕೊಳ್ಳಬಹುದು. ಕೃಷಿ ಚಟುವಟಿಕೆಗೆ ಸಂಬಂಧಿಸಿದ ಚಿತ್ರಗಳು ಮತ್ತು ಬಯಕೆ ಶಾಸ್ತ್ರಕ್ಕೆ ಸಂಬಂಧಿಸಿದ ಚಿತ್ರಗಳು. ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಚಿತ್ರಗಳಲ್ಲಿ ಗೊಣಬೆ, ಕರಬಾನದ ಗಡಿಗೆ, ಭತ್ತದ ಸಸಿ, ಏಣಿ, ಗಾಡಿ, ಎತ್ತು, ಕಣಕಪ್ಪಿನ ಹೂವು ಇತ್ಯಾದಿ ಚಿತ್ರಗಳು. ಬಯಕೆಗೆ ಸಂಬಂಧಿಸಿದ ಚಿತ್ರಗಳಲ್ಲಿ ಕೌಳಿಮಟ್ಟಿ, ಸೀತೆ ಮುಡಿ, ಜೋಗಿ ಜಡೆ, ರಂಜಲ ಹೂವಿನದಂಡೆ ಇತ್ಯಾದಿ ಚಿತ್ರಗಳು. ಎಳೆಗಳ ಮಧ್ಯೆ ಜೋಡೆಳೆನಿಲಿ, ಬಾಸಿಂಗದನಿಲಿ ಬರೆದು ಎಳೆಗಳು ಸೇರುವ ಮೂಲೆಗಳಲ್ಲಿ ಪಪ್ಳಿ ಬರೆಯುತ್ತಾರೆ. ದೊಡ್ಡ ಬುಟ್ಟಿಯಲ್ಲಿ ಕರಬಾನದ ಗಡಿಗೆ, ಕೌಳಿಮಟ್ಟಿ, ಸೀತೆಮುಡಿ, ಜೋಗಿಜಡೆ ಮತ್ತು ಬುಟ್ಟಿ ಹೊತ್ತ ಮನುಷ್ಯ ಚಿತ್ರಗಳಿರುತ್ತವೆ. ಹಚ್ಚಂಬಲಿ ಬುಟ್ಟಿಯಲ್ಲೂ ಬರೆಯುತ್ತಾರೆ. ಹುಣ್ಣಿಮೆ ಹಿಂದಿನ ರಾತ್ರಿ ಹಬ್ಬ ‘ಅಡುವ’ ಕೆಲಸ ಪ್ರಾರಂಭಿಸುತ್ತಾರೆ. ಸ್ನಾನ ಮಾಡಿ ಅಡುಗೆಮನೆ ಮತ್ತು ಅಡುಗೆ ಒಲೆ ಇಡಕಲುಗಳನ್ನು ಸಗಣಿಯಿಂದ ಸಾರಿಸಿ ಸ್ವಚ್ಛ ಮಾಡುತ್ತಾರೆ. ಸುಮಾರು ರಾತ್ರಿ 10 ಗಂಟೆಯಿಂದ ಅಡುಗೆ ಮಾಡಲು ಪ್ರಾರಂಭಿಸುತ್ತಾರೆ. ಮೊಟ್ಟ ಮೊದಲು ಅಮಟೆಕಾಯಿ, ಹುಳಿಕಂಚಿಕಾಯಿ, ಸಿಹಿಕಂಚಿಕಾಯಿ ಎಲ್ಲಾ ರೀತಿಯ ತರಕಾರಿಗಳು, ಮನುಷ್ಯರು ತಿನ್ನಬಹುದಾದ ಎಲ್ಲಾ ತರದ ಸೊಪ್ಪುಗಳು, ಎಲ್ಲಾ ರೀತಿಯ ಧಾನ್ಯಗಳನ್ನು ಸೇರಿಸಿ ಉಪ್ಪು ಹಾಕದೆ ಬೇಯಿಸಿ ಚರಗ ತಯಾರಿಸುತ್ತಾರೆ. ನಂತರ ಅಡುಗೆ ಪ್ರಾರಂಭಿಸುತ್ತಾರೆ. ಚಿತ್ರಾನ್ನ, ಮೊಸರನ್ನ, ಸೌತೆಕಾಯಿಂದ ಸಿಹಿಕಡಬು, ಸಪ್ಪೆಕಡಬು, ಅತಿರಸದ ಕಜ್ಜಾಯ, ಹೋಳಿಗೆ, ಕರ್ಜಿಕಾಯಿ, ವಡೆ, ಕುಚ್ಚುಂಡೆ, ಬಾಳೆಹಣ್ಣಿನ ಕಜ್ಜಾಯ, ಪಾಯಸ, ಕೆಸವಿನ ಚೀಪಿನ ಪಲ್ಯ, ಹೀರೆಕಾಯಿ ಹುಳಿ ಮುಂತಾದ ಪದಾರ್ಥಗಳನ್ನು ಬೆಳತನಕ ತಯಾರು ಮಾಡುತ್ತಾರೆ. ಅಷ್ಟರಲ್ಲಿ ಬೆಳಗಾಗುತ್ತದೆ. ಹಚ್ಚಂಬಲಿ ಬುಟ್ಟಿ ಚರಗ ತುಂಬಿಕೊಂಡು ಇಡಕಲು ಕೆಳಗೆ ಇಟ್ಟು ಪೂಜೆ ಮಾಡಿ ಸೂರ್ಯೋದಯದೊಳಗೆ ಹಚ್ಚಂಬಲಿ ಬುಟ್ಟಿ ಹೊತ್ತುಕೊಂಡು ತಮ್ಮ ಜಮೀನುಗಳಿಗೆ ಹೋಗಿ
                               ಹಚ್ಚಂಬಲಿ ಹರಿಬೆಸೊಪ್ಪು
                               ಹಿತ್ಲ್ಯಾಗೆ ಇರೊ, ದಾರೆ ಹೀರೆಕಾಯಿ
                               ಹೋ ಹೋ ಹೋ ಎಂದು ಕೂಗುತ್ತಾ

ಗದ್ದೆಗಳಿಗೆ ಎರಚುತ್ತಾ ಹೋಗುತ್ತಾರೆ. ತಮಗೆ ಸೇರಿದ ಎಲ್ಲಾ ಗದ್ದೆಗಳಿಗೆ ಹಚ್ಚಂಬಲಿ ಎರಚಿ ಮನೆಗೆ ಹೋಗುತ್ತಾರೆ. ಸುಮಾರು 10 ಗಂಟೆಗೆ ಮನೆಯವರೆಲ್ಲರೂ ಸ್ನಾನ ಮಾಡಿ ಶುಚಿಯಾದ ಬಟ್ಟೆಯನ್ನು ಧರಿಸಿಕೊಂಡು ಮನೆಯ ಹಿರಿಯ ಮಹಿಳೆ ರಾತ್ರಿಯೆಲ್ಲಾ ತಯಾರು ಮಾಡಿದ ತಿಂಡಿ ಪದಾರ್ಥಗಳನ್ನು ದೊಡ್ಡ ಬುಟ್ಟಿಗೆ ತುಂಬಿ ಇಡಕಲು ಕೆಳಗೆ ಇಟ್ಟು ಪೂಜೆ ಮಾಡಿ ಮನೆಯ ಯಜಮಾನ ಬುಟ್ಟಿಯನ್ನು ಹೊತ್ತುಕೊಂಡು ಗದ್ದೆಗೆ ಹೋಗುತ್ತಾರೆ. ಮನೆಯವರೆಲ್ಲರೂ ಹೊಲಕ್ಕೆ ಹೋಗುತ್ತಾರೆ. ಹೊಲದಲ್ಲಿ ಒಂದು ಒಳ್ಳೆಯ ಸ್ಥಳ ನೋಡಿ ಪೂಜೆಗೆ ತಯಾರು ಮಾಡಿರುತ್ತಾರೆ. ಪೂಜೆ ಮಾಡುವ ಮತ್ತು ಭೂಮಣ್ಣಿ ಇಡುವ ಜಾಗಕ್ಕೆ ಸಗಣಿ ನೀರು (ಗೋಮಯ) ಪ್ರೋಕ್ಷಣೆ ಮಾಡುತ್ತಾರೆ. ಒಂದು ಮಟ್ಟವಾದ ಜಾಗದಲ್ಲಿ ಬುಟ್ಟಿ ಇಡುತ್ತಾರೆ. ಸಸಿಯ ಎರಡು ಕಡೆ ಲಕ್ಕಿ ಗೂಟಗಳನ್ನು ನೆಟ್ಟು ಸಸಿಯ ಬುಡವನ್ನು ಲಕ್ಕಿಗೂಟಕ್ಕೆ ಸೇರಿಸಿ ಕಟ್ಟಿರುತ್ತಾರೆ. ಚಿಕ್ಕದಾಗಿ ಮಾವಿನ ತೋರಣ ಮಾಡಿ ಮನೆಯ ಹಿರಿಯ ಮಹಿಳೆ ಹೂವು ಮತ್ತು ಬೆಂಡೋಲೆ, ತಾಳಿಸರ ಇಟ್ಟು ಶೃಂಗಾರ ಮಾಡುತ್ತಾಳೆ. ಬುಟ್ಟಿಯಲ್ಲಿರುವ ಎಲ್ಲಾ ಪದಾರ್ಥವನ್ನು ಸ್ವಲ್ಪ ಸ್ವಲ್ಪ ಹಾಕಿ ಸಸಿ ಎಡೆ, ಗುಳಿಎಡೆ, ಇಲಿಎಡೆ ಎಂಬುದಾಗಿ ಮೂರು ಎಡೆಯಿಟ್ಟು ಹಾಲು ಹಣ್ಣು ತುಪ್ಪ ಹಾಕಿ ಸಸಿಗೆ ನೈವೇದ್ಯವಿಟ್ಟು ತೆಂಗಿನಕಾಯಿ ಒಡೆದು ಪೂಜೆ ಮಾಡುತ್ತಾರೆ. ನಂತರ ಮನೆಯ ಯಜಮಾನ ಗುಳಿ ಎಡೆಯನ್ನು ಕೈಯಲ್ಲಿ ಹಿಡಿದುಕೊಂಡು ಹೋ ಹೋ ಎಂದು ಕಾಗೆಗಳನ್ನು ಕರೆಯುತ್ತಾ ಭತ್ತದ ಗದ್ದೆಯಲ್ಲಿ ಓಡಾಡುತ್ತಾನೆ. ಕಾಗೆ ಒಂದು ಎಡೆಯಲ್ಲಿರುವ ಯಾವುದಾದರೂ ತಿಂಡಿಯನ್ನು ಕಚ್ಚಿಕೊಂಡು ಹೋದರೆ ಗುಳಿ ಮುಟ್ಟಿತು ಎಂದು ಎಲ್ಲರೂ ಸಂತೋಷವಾಗಿ ಕೂತು ಊಟ ಮಾಡುತ್ತಾರೆ. ಇಲಿ ಎಡೆಯನ್ನು ಇಲಿಗಳ ಬಿಲಗಳಿರುವ ಕಡೆ ಇಟ್ಟು ಬರುತ್ತಾನೆ. ಸಸಿ ಎಡೆಯ ಒಂದು ಕಡಬನ್ನು ಗುಂಪಾಗಿರುವ ಸಸಿಗಳನ್ನು ಬುಡಸಹಿತ ಕಿತ್ತು ಬುಡದಲ್ಲಿ ಕಡಬನ್ನು ಇಟ್ಟು ಪುನಃ ಸಸಿಗಳನ್ನು ಅಲ್ಲಿಯೇ ಇಡುತ್ತಾರೆ. ಬೆಳೆ ಬೆಳೆದು ಕೊಯ್ಲು ಮಾಡುವಾಗ ಆ ಸಸಿಯ ಬುಡವನ್ನು ಕಿತ್ತು ಆ ಕಡಬನ್ನು ತೆಗೆಯುತ್ತಾರೆ. ಕಡುಬಿನಲ್ಲಿ ಹುಳು ಆಗಿದ್ದರೆ ಫಸಲು ಹುರಸಲು (ಹೆಚ್ಚು) ಆಗುತ್ತದೆ ಎಂಬ ನಂಬಿಕೆ.

ಬಣ್ಣಗಳು

               ಹಸೆ ಚಿತ್ರ ಕಲಾವಿದೆಯರು ಹಸೆ ಮತ್ತು ಬುಟ್ಟಿ ಚಿತ್ರಗಳನ್ನು ಬರೆಯುವಾಗ ಮುಖ್ಯವಾಗಿ ನಾಲ್ಕು ವರ್ಣಗಳನ್ನು ಬಳಸುತ್ತಾರೆ. ಈ ಬಣ್ಣಗಳು ತಮ್ಮ ಪರಿಸರದಲ್ಲಿಯೇ ದೊರಕುವ ನೈಸರ್ಗಿಕ ವರ್ಣಗಳು. ಮುಖ್ಯವಾಗಿ ಬಿಳಿ, ಕೆಂಪು, ಕಪ್ಪು ಮತ್ತು ಹಳದಿ ಬಣ್ಣಗಳು.

ಬಿಳಿ ಮತ್ತು ಕೆಂಪು ಬಣ್ಣಗಳು ಮಣ್ಣಿನಿಂದ ನದಿಗಳ ಪಕ್ಕದಲ್ಲಿ ತೇವವಿರುವ ಕಡೆ ಜೇಡಿ ಮಣ್ಣು (ಬಿಳಿ) ಇರುತ್ತದೆ. ವರ್ಷಕ್ಕೊಮ್ಮೆ ಅದನ್ನು ತಂದು ಉಂಡೆ ಕಟ್ಟಿ ಒಣಗಿಸಿ ಬುಟ್ಟಿ ತುಂಬಿ ಇಟ್ಟುಕೊಳ್ಳುತ್ತಾರೆ.

               ಗುಡ್ಡಗಳ ಮರಕಲು ಜಾಗಗಳಲ್ಲಿ ಕೆಲವು ಕಡೆ ಕೆಮ್ಮಣ್ಣು ಸಿಗುತ್ತದೆ. ಅದನ್ನು ತಂದು ಒಣಗಿಸಿ ಉಂಡೆಕಟ್ಟಿ ಬುಟ್ಟಿಯಲ್ಲಿ ಹಾಕಿ ಇಟ್ಟುಕೊಳ್ಳುತ್ತಾರೆ. ವರ್ಷಕ್ಕೊಮ್ಮೆ ಮನೆಗಳಲ್ಲಿ ಮದುವೆ, ಚೌಳ, ವಿಶೇಷವಾದ ಹಬ್ಬ, ದೀಪಾವಳಿ, ಗೌರಿಹಬ್ಬಗಳ ಸಂದರ್ಭದಲ್ಲಿ ಮನೆಯ ಗೋಡೆಗಳಿಗೆ ಜೇಡಿ ಕೆಮ್ಮಣ್ಣು ಬಳಿಯುತ್ತಾರೆ. ಅದಕ್ಕಾಗಿ ಕೆಮ್ಮಣ್ಣು ಮತ್ತು ಜೇಡಿ ಸದಾಕಾಲ ಸಂಗ್ರಹ ಮಾಡಿ ಇಟ್ಟುಕೊಂಡಿರುತ್ತಾರೆ. ಈ ಎರಡು ಬಣ್ಣದ ಮಣ್ಣನ್ನು ಚಿತ್ತಾರ ಬರೆಯಲು ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ದೀವರು ಜನಾಂಗದವರು ಮನೆಗಳಿಗೆ ಸುಣ್ಣ ಬಣ್ಣ ಮಾಡುತ್ತಿದ್ದಾರೆ.

ಅಕ್ಕಿಯಿಂದ ಬಿಳಿ ಮತ್ತು ಕಪ್ಪು ಬಣ್ಣ

ಮಲೆನಾಡಿಗರಾದ ದೀವರು ತಮ್ಮ ಜಮೀನುಗಳಲ್ಲಿ ಬೆಳೆಯುವ ಭತ್ತದ ತಳಿಗಳಾದ ನೆರೆಗುಳಿ ಹೊನಸು, ಸೋಮಸಾಲೆ, ತೊಗರಿ, ವಾಳ್ಯಾ ಇವುಗಳಲ್ಲಿ ಯಾವುದಾದರೂ ಒಂದು ತಳಿಯ ಭತ್ತದ ಅಕ್ಕಿಯನ್ನು ಚೆನ್ನಾಗಿ ತೊಳೆದು ಮೂರು ದಿವಸಗಳ ಕಾಲ ನೀರಿನಲ್ಲಿ ನೆನಸಿ ಮೂರು ದಿನಗಳ ನಂತರ ಅಕ್ಕಿಯನ್ನು ತೆಗೆದು ನುಣ್ಣಗೆ ಅರೆಯುತ್ತಾರೆ. ಅಕ್ಕಿಹಿಟ್ಟಿನ ಪೇಸ್ಟ್ ಮಾಡಿಕೊಳ್ಳುತ್ತಾರೆ, ಬ್ರೆಶ್ (ಕುಂಚ) ಮಾಡಿಕೊಳ್ಳುವುದು. ಪುಂಡಿ ಎಂಬ ಜಾತಿಯ ಗಿಡದ ನಾರಿನಿಂದ ಕುಂಚ (ಬ್ರೆಶ್) ತಯಾರಿಸಿಕೊಂಡು ಕುಂಚದ ಹಿಂಭಾಗಕ್ಕೆ ಬೆರಳಿನಿಂದ ಹಿಡಿದುಕೊಳ್ಳಲು ಅನುಕೂಲವಾಗುವಂತೆ ಭತ್ತದ ಹುಲ್ಲಿನ ಕೊಳವೆಯನ್ನು ಹಾಕಿ ಕೊಳವೆ ಸರಿದಾಡದಂತೆ ಹಿಂಭಾಗಕ್ಕೆ ಗಂಟು ಹಾಕುತ್ತಾರೆ. ಈ ರೀತಿಯ ಬ್ರೆಶ್‍ಗಳಿಂದ ಚಿತ್ತಾರವನ್ನು ಬರೆಯುತ್ತಾರೆ.

ಕಪ್ಪು ಬಣ್ಣ

               ಪೂರ್ವಕಾಲದ ಭತ್ತದ ತಳಿಗಳಾದ ನೆರೆಗುಳಿ, ಕರೆಇಸಡಿ, ಹೊನಸು, ವಾಳ್ಯಾ ಇತ್ಯಾದಿ ಜಾತಿಯ ಯಾವುದಾದರೂ ಒಂದು ಭತ್ತದ ತಳಿಯ ಅಕ್ಕಿಯನ್ನು ಕಪ್ಪಾಗುವವರೆಗೆ ಹುರಿದು ನೀರು ಹಾಕಿ ನುಣ್ಣಗೆ ಅರೆಯಬೇಕು. ಹೆಚ್ಚು ಕಪ್ಪಾಗಲು ಮತ್ತು ನಯವಾಗಲು ಗುಡ್ಡೆಗೇರು ಕಾಯಿಗಳನ್ನು ಕುಯ್ದು ಅವುಗಳಿಂದ ಹಗಣ (ಗೇರುತುಪ್ಪ) ಹೊರಡಿಸಿ, ಹುರಿದ ಅಕ್ಕಿಗೆ ಸೇರಿಸಿ ಪುನಃ ಅರೆಯುತ್ತಾರೆ. ಇದು ಕಪ್ಪು ಬಣ್ಣವಾಗುತ್ತದೆ.

ಹಳದಿ ಬಣ್ಣ

ಮಲೆನಾಡಿನ ದಟ್ಟವಾದ ಕಾಡುಗಳಲ್ಲಿ “ಗುರಿಗೆ” ಎಂಬ ಜಾತಿಯ ಮರಗಳಿವೆ. ಇವು ತುಂಬಾ ಎತ್ತರವಾಗಿ ಬೆಳೆಯುತ್ತವೆ. ಗುರಿಗೆ ಮರಗಳಂತೆ ಮುರುಗ, ಉಪ್ಪಾಗೆ, ಗುರಿಗೆ ಇವುಗಳು ಒಂದೇ ಗುಂಪಿಗೆ ಸೇರಿದ ಸಸ್ಯಗಳಾದರೂ ಬೇರೆ ಬೇರೆಯಾಗಿರುತ್ತವೆ. ಸುಮಾರು 80-100 ಅಡಿ ಎತ್ತರ ಬೆಳೆಯುತ್ತವೆ. ಮರದ ತುಂಬಾ ಸಣ್ಣ ಸಣ್ಣ ಕೊಂಬೆಗಳು ಮರಗಳ ಕೆಳಗೆ ಜೋತಿರುತ್ತವೆ. ತುಂಬಾ ಅಪರೂಪದ ಸುಂದರವಾದ ಸಸ್ಯಗಳು. ಉಪ್ಪಾಗೆ ಮತ್ತು ಗುರಿಗೆ ಬೀಜಗಳಿಂದ ಎಣ್ಣೆ ತೆಗೆಯುತ್ತಾರೆ. ಉಪ್ಪಾಗೆ ಬೀಜಗಳಿಂದ ಎಣ್ಣೆ ತೆಗೆದಾಗ ಮಳೆಗಾಲ, ಚಳಿಗಾಲಗಳಲ್ಲಿ ತುಪ್ಪದ ಹಾಗೆ ಗಟ್ಟಿಯಾಗಿ, ಮರಳಿನ ಹಾಗೆ ಹರಳು ಹರಳಾಗಿ ಬಿಳಿಯಾಗಿರುತ್ತದೆ.

ಗುರಿಗೆ ಬೀಜದಿಂದ ಎಣ್ಣೆ ತೆಗೆದಾಗ ಗಟ್ಟಿಯಾಗಿ ಹಳದಿಯಾಗಿ ಮರಳಿನಂತೆ ಹರಳು ಹರಳಾಗಿರುತ್ತದೆ. ಈ ಸಸ್ಯಗಳು ಮಾರ್ಚ್ ಏಪ್ರಿಲ್ ತಿಂಗಳುಗಳಲ್ಲಿ ಹೂವು ಬಿಟ್ಟು ಕಾಯಾಗಿ ಜೂನ್-ಜುಲೈ ತಿಂಗಳುಗಳಲ್ಲಿ ಹಣ್ಣಾಗುತ್ತವೆ. ಹಣ್ಣು ಬಲಿತ ಮೇಲೆ ಅವಾಗಿಯೇ ನೆಲಕ್ಕೆ ಬೀಳುತ್ತವೆ. ದೀವರ ಮಹಿಳೆಯರು ಬೆಳಿಗ್ಗೆ 6 ಗಂಟೆಗೆ ಕಾಡಿಗೆ ಹೋಗಿ ಬಿದ್ದ ಗುರಿಗೆ ಹಣ್ಣುಗಳನ್ನು ಬುಟ್ಟಿಯಲ್ಲಿ ಆರಿಸಿಕೊಂಡು ಬಂದು ಗುರಿಗೆ ಹಣ್ಣಿನ ಬೀಜಗಳನ್ನು ಸಂಗ್ರಹಿಸಿಕೊಂಡು ಎಣ್ಣೆ ತಯಾರಿಸುತ್ತಾರೆ. ಈ ಎಣ್ಣೆಯಿಂದ ಗೌರಿಹಬ್ಬಕ್ಕೆ ಬಂದ ಹೆಣ್ಣು ಮಕ್ಕಳಿಗೆ ಚಕ್ಕಲಿ, ಉದ್ದಿನವಡೆ, ಕಜ್ಜಾಯ (ಕಾಯ್ಗರಿಗೆ), ಅತಿರಸದ ಕಜ್ಜಾಯ, ಕುಚ್ಚುಂಡೆ, ಕರ್ಜಿಕಾಯಿ ಮುಂತಾದ ಪದಾರ್ಥಗಳನ್ನು ತಯಾರಿಸುತ್ತಾರೆ. ತುಂಬಾ ದಿವಸಗಳ ಕಾಲ ಗುರಿಗೆ ಎಣ್ಣೆಯಿಂದ ಮಾಡಿದ ತಿಂಡಿಗಳನ್ನು ಇಟ್ಟುಕೊಳ್ಳಬಹುದು. ಒಳ್ಳೆಣ್ಣೆ ಮತ್ತು ಇತರೆ ಎಣ್ಣೆಯಿಂದ ಈ ಪದಾರ್ಥಗಳನ್ನು ತಯಾರಿಸಿ ಬಹಳ ದಿವಸ ಇಟ್ಟುಕೊಳ್ಳಲು ಬರುವುದಿಲ್ಲ. ಕನುಗು ಬಂದು ಹಾಳಾಗುತ್ತವೆ. ಮಳೆಗಾಲದಲ್ಲಿ ಗುರಿಗೆ ಹಣ್ಣು ನೆಲಕ್ಕೆ ಬಿದ್ದವುಗಳನ್ನು ಆರಿಸಿಕೊಂಡು ಬಂದು ಒಡೆದು ಬೀಜ ತೆಗೆದು ನೀರಿನಲ್ಲಿ ತೊಳೆದು ಬಿಸಿಲು ಅಥವಾ ನೆರಳಲ್ಲಿ ಒಣಗಿಸಿ ನಂತರ ಒನಕೆಯಿಂದ ವಳ್ಳಿಗೆ ಹಾಕಿಕೊಂಡು ಕುಟ್ಟುತ್ತಾರೆ. ಕೇರಿದಾಗ ಬರುವ ಹಳದಿ ಪುಡಿಯನ್ನು ಜರಡಿಯಲ್ಲಿ ಸಾಣಿಸಿ ಬರುವ ಪುಡಿಯನ್ನು ತೆಳುವಾದ ಬಟ್ಟೆಯಿಂದ ವಸ್ತ್ರಕಾಯ ಮಾಡಿ ಬರುವ ನಯವಾದ ಹಳದಿ ಪುಡಿಯನ್ನು ನೀರು ಸೇರಿಸಿ ಅಂಟಾಗುವವರೆಗೆ ಅರೆಯುತ್ತಾರೆ. ಈ ರೀತಿ ಹಳದಿ ಬಣ್ಣ ತಯಾರಿಸಿಕೊಳ್ಳುತ್ತಾರೆ.

ಭೂಮಣ್ಣಿ ಬಟ್ಟುಗಳು

ಭೂಮಣ್ಣಿ ಹಬ್ಬಕ್ಕೂ, ಬೂರೆಹಬ್ಬಕ್ಕೂ ಹನ್ನೆರಡು ದಿವಸಗಳ ಅಂತರ. ಭೂಮಣ್ಣಿ ಹಬ್ಬದ ದಿವಸ ಮಹಿಳೆಯರು ರಾತ್ರಿಯೆಲ್ಲಾ ಭೂಮಣ್ಣಿ ಹಬ್ಬದ ಅಡಿಗೆಯನ್ನು ತಯಾರಿಸುತ್ತಾರೆ. ಬೆಳಗಿನ ಜಾವ ಹಚ್ಚಂಬಲಿ ಬುಟ್ಟಿಗೆ ಹಚ್ಚಂಬಲಿ (ಚರಗ) ತುಂಬಿ ಇಡಕಲು ಕೆಳಗೆ ಇಡುತ್ತಾರೆ. ಗಂಡಸರು ಸ್ನಾನ ಮಾಡಿ ಬುಟ್ಟಿಯನ್ನು ಪೂಜೆ ಮಾಡಿ ಹೊತ್ತುಕೊಂಡು ಜಮೀನಿಗೆ ಹೋಗುತ್ತಾರೆ. ಮಹಿಳೆಯರು ಭೂಮಣ್ಣಿ ಬುಟ್ಟಿ ಚಿತ್ತಾರ ಬರೆಯಲು ತಯಾರಿಸಿದ ಅಕ್ಕಿಹಿಟ್ಟಿನ ಬಣ್ಣದಲ್ಲಿ ನಾಲ್ಕು ಬೆರಳುಗಳನ್ನು ಅದ್ದಿಕೊಂಡು ಇಡಕಲು ಮತ್ತು ಬಾಗಿಲುಗಳ ಪಕ್ಕದಲ್ಲಿ ಬಟ್ಟುಗಳನ್ನು ಇಡುತ್ತಾರೆ. ಇವು ಭೂಮಣ್ಣಿ ಬಟ್ಟುಗಳು.

ಬೂರೆ ಬಟ್ಟುಗಳು

               ದೀಪಾವಳಿ ಹಬ್ಬದ ಮೊದಲನೇ ದಿವಸ ನರಕ ಚತುರ್ದಶಿಯ ಹಬ್ಬವನ್ನು ಗ್ರಾಮೀಣ ಜನರು ಬೂರೆ ಹಬ್ಬವೆಂದೂ ಕರೆಯುತ್ತಾರೆ. ಆ ದಿವಸ ಬಲೀಂದ್ರ ಪಾತಾಳ ಲೋಕದಿಂದ ಭೂಲೋಕಕ್ಕೆ ಬರುತ್ತಾನೆ ಎಂಬ ನಂಬಿಕೆ. ಬೂರೆಹಬ್ಬದ ದಿವಸ ದೀವರ ಮಹಿಳೆಯರು ಬೆಳಗಿನ ಜಾವ ಎದ್ದು ಹೊಸದಾಗಿ ತಂದ ಬೂರೆ ಮಗೆಯನ್ನು ಬಾವಿಗೆ ತೆಗೆದುಕೊಂಡು ಹೋಗಿ ಕೊಡಪಾನದಿಂದ ನೀರು ಎತ್ತಿ ಬೂರೆ ಮಗೆಗೆ ನೀರು ತುಂಬುತ್ತಾರೆ. ಮೊಗೆಯಿಂದ ಐದು ಸಾರಿ ಸ್ವಲ್ಪ ನೀರು ಬಾವಿಗೆ ಹಾಕುತ್ತಾರೆ. ನಂತರ ಐದು ಚಿಕ್ಕ ಕಲ್ಲುಗಳನ್ನು ತೊಳೆದು ಮೊಗೆಗೆ ಹಾಕುತ್ತಾರೆ ಜೀವಕಳೆ ತುಂಬಲು. ಇವು ಪಂಚಭೂತಗಳ ಪ್ರತೀಕಗಳೆಂದು ಭಾವಿಸುತ್ತಾರೆ.

ಮೊಗೆಗೆ ಅಡಿಕೆಕಾಯಿ ಗೊಂಚಲು, ಹಿಂಗಾರದ ಸ್ವಲ್ಪಭಾಗ, ಐದು ಮಾವಿನ ಎಲೆ, ಐದು ವೀಳ್ಯದೆಲೆ, ಪಚ್ಚೆತೆನೆ, ಚೆಂಡುಹೂವಿನ ಗುಚ್ಚು ಸೇರಿಸಿ ಮೊಗೆ ಒಳಗೆ ಹೊರಗಡೆ ಕಾಣುವಂತೆ ಹಾಕುತ್ತಾರೆ. ಮಾಲಿಂಗನಬಳ್ಳಿ, ಬಸವನ ಬಳ್ಳಿ ಮೊಗೆಯ ಕುತ್ತಿಗೆಗೆ ಸುತ್ತುತ್ತಾರೆ. ಮುಂಭಾಗದಲ್ಲಿ ಎರಡು ಸಗಣಿ ಉಂಡೆಗೆ ಕರ್ಕಿಹುಲ್ಲಿನ ಕುಡಿ ಇಟ್ಟು ಕಹಿ ಇಂಡ್ಲೆಕಾಯಿ ಸಗಣಿ ಮೇಲೆ ಇಟ್ಟು ಮೊಗೆಯ ಎರಡೂ ಕಡೆ ಪಕ್ಕದಲ್ಲಿಟ್ಟು ಚೆಂಡು ಹೂವು ಮುಡಿಸಿ ಪ್ರಥಮವಾಗಿ ಹರಿಇಡಕಲು ಕೆಳಗೆ ಇಟ್ಟು ಪೂಜೆ ಮಾಡುತ್ತಾರೆ. ನಂತರ ಹೊರಗಡೆಯಲ್ಲಿ ಜಗಲಿಯಲ್ಲಿ ನಿರ್ದಿಷ್ಟ ಜಾಗದಲ್ಲಿ ಕೂರಿಸಿ ಬಲಿಂದ್ರನ ಮುಂಭಾಗದಲ್ಲಿ ಬಸವನಪಾದ ಬರೆಯುತ್ತಾರೆ. ಕಳೆದ ವರ್ಷ ಸೂರಿಗೆ ಸಿಕ್ಕಿಸಿದ್ದ ಬೂರೆ ಮದ್ದನ್ನು ತೆಗೆದು ಒಲೆಗೆ ಹಾಕಿ ಸುಟ್ಟು ಅದರ ಬೂದಿಯನ್ನು ತೆಗೆದುಕೊಂಡು ಬೂರೆ ಮಗೆಯಲ್ಲಿದ್ದ ನೀರನ್ನು ಸೇರಿಸಿ ನಾಲ್ಕು ಬೆರಳುಗಳಿಂದ ಇಡಕಲು ಬಾಗಿಲುಗಳ ಪಕ್ಕದಲ್ಲಿ ಬಟ್ಟುಗಳನ್ನು ಇಡುತ್ತಾರೆ. ಭೂಮಣ್ಣಿ ಬಟ್ಟುಗಳು ಬೂರೆ ಹಬ್ಬದಲ್ಲಿ ಕಾಣದಂತೆ ಮುಂಚೆಯೇ ಅಳಿಸಿರುತ್ತಾರೆ. ಭೂಮಣ್ಣಿ ಬಟ್ಟು ಬೂರೆಗೆ ಕಂಡರೆ ದರಿದ್ರ ಬರುತ್ತದೆ ಎಂಬ ನಂಬಿಕೆ ಇದೆ.


ಉಡುಗೆ-ತೊಡುಗೆ

               ದೀವರು ಮಾತೃಪ್ರಧಾನ ಸಮಾಜಕ್ಕೆ ಸೇರಿದವರು. ಹೆಂಗಸರೇ ಕುಟುಂಬದ ವಹಿವಾಟು ನಡೆಸುವವರು. ಹೊಲಗದ್ದೆ ಕೆಲಸ, ಗೃಹಕೃತ್ಯದ ಕೆಲಸ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಈಚಲು ಹುಲ್ಲಿನಿಂದ ಚಾಪೆ ಹೆಣೆಯುವುದು, ತರಕಾರಿ ಬೆಳೆಯುವುದು, ಅಬ್ಬಲಿಗೆ (ಜಡೆಪತ್ರೆ) ಹೂವು ದಂಡೆ ಕಟ್ಟಿ ಮಾರುವುದು, ಕುಟ್ಟುವುದು, ಬೀಸುವುದು, ಪೇಟೆಗೆ ಹೋಗಿ ವಸ್ತುಗಳನ್ನು ಮಾರುವುದು, ಕೊಂಡು ತರುವುದು ಹೀಗೆ ಹಲವು ಹತ್ತು ಕೆಲಸಗಳನ್ನು ದಣಿವರಿಯದೇ ಮಾಡುತ್ತಾರೆ.