ಕೆಲವು ಅಣೆಕಟ್ಟುಗಳು ನದಿ ಹೆಸರುಗಳಿಂದ, ಕೆಲವನ್ನು ಸ್ಥಳಗಳ ಹೆಸರುಗಳಿಂದ ಕರೆಯಲಾಗುತ್ತಿದೆ. ಒಂದು ನದಿಗೆ ಹಲವು ಕಡೆ ಅಣೆಕಟ್ಟುಗಳನ್ನು ಕಟ್ಟಿದರೆ, ನದಿಯ ಹೆಸರಿಗೆ ಬದಲಾಗಿ ಸ್ಥಳಗಳ ಹೆಸರುಗಳನ್ನು ಬಳಸುವುದುಂಟು. ತುಂಗಾ ಅಣೆಕಟ್ಟು ಗಾಜನೂರು ಬಳಿ, ಭದ್ರಾ ಅಣೆಕಟ್ಟು ಲಕ್ಶವಳ್ಳಿ ಬಳಿ ಇವೆ. ಸೂಪ ಅಣೆಕಟ್ಟು, ಬೊಮ್ಮನಹಳ್ಳಿ ಅಣೆಕಟ್ಟು, ಮಾಣಿ ಅಣೆಕಟ್ಟು, ಲಿಂಗನಮಕ್ಕಿ ಅಣೆಕಟ್ಟು ಇವಕ್ಕೆ ಸ್ಥಳಗಳ ಹೆಸರುಗಳನ್ನು ಇಟ್ಟಿದೆ.

       ಕೃಷಿ ಭೂಮಿಗಳ ನೀರಾವರಿಗಾಗಿ ಅಣೆಕಟ್ಟುಗಳ ನಿರ್ಮಾಣ ಕೈಗೊಳ್ಳುವುದು ರಾಜ ಮಹಾರಾಜರುಗಳ ಕಾಲದಿಂದಲೂ ಇದೆ. ವಿಜಯನಗರದ ಅರಸರ ಕಾಲದಲ್ಲಿ ತುಂಗಾಭದ್ರಾ ನದಿಗೆ ಕಟ್ಟಿದ ಸುಮಾರು ಎಂಟು ಅಣೆಕಟ್ಟುಗಳು ಇಂದಿಗೂ ಕೃಷಿ ಭೂಮಿಗಳಿಗೆ ನೀರುಣಿಸುತ್ತಿವೆ. ಆದರೆ ಇವೆಲ್ಲಾ ಚಿಕ್ಕ ನೀರಾವರಿ ಕಾರ್ಯಗಳಾಗಿವೆ. ಟಿಪ್ಪು ಸುಲ್ತಾನನೂ ಕಾವೇರಿಗೆ ಇಂದಿನ ಕೃಷ್ಣರಾಜಸಾಗರ ಇರುವ ಬಳಿ ಬಂದು, ಕಟ್ಟೆ ಕಟ್ಟಿಸಲು ಬಯಸಿದ್ದನೆಂದು ದಾಖಲೆಗಳು ಹೇಳುತ್ತವೆ.