'ಮುದ್ರಾ ವಿಜ್ಞಾನ'

ಪ್ರಾಚೀನ ಕಾಲದಿಂದಲೂ ಭಾರತ ಜ್ಞಾನದ ಆರಾಧನೆ ಮಾಡುವ ದೇಶ. ತನ್ನ ಜ್ಞಾನದ ದೀಪ್ತಿಯಿಂದ ಜಗತ್ತನ್ನೇ ಬೆಳಗಿಸಿದ ದೇಶ. ನಮ್ಮ ಪೂರ್ವಜರಾದ ಋಷಿಮುನಿಗಳು “ನ ಹಿ ಜ್ಞಾನೇನ ಸದೃಶಂ ಪವಿತ್ರ ಮಹವಿದ್ಯತೆ” ಎಂದು ನಂಬಿದವರು. ಅವರು ಬಹಿರಂಗ ಪ್ರಕೃತಿಯನ್ನು ವೀಕ್ಷಿಸಿದ್ದೆ ಅಲ್ಲದೆ ಅಂತರಂಗದ ಪ್ರಕೃತಿಯನ್ನೂ ಪರೀಕ್ಷಿಸಿ ಅತ್ಯದ್ಭುತವಾದ ಆಯುರ್ವೇದ, ಯೋಗ, ಮುದ್ರಾ ವಿಜ್ಞಾನಗಳಂತಹ ಶ್ರ್ಟೇಷ್ಠ ಜ್ಞಾನ ಭಂಡಾರವನ್ನು ಮಾನವ ಸಮಾಜಕ್ಕೆ ಅರ್ಪಿಸಿದರು. ಇವುಗಳಲ್ಲಿ ಆಯುರ್ವೇದ ಮತ್ತು ಯೋಗ ಅಂದಿನಿಂದ ಇಂದಿನವರೆಗೂ ಪ್ರಚಲಿತದಲ್ಲಿದೆ. ಅವುಗಳಲ್ಲಿ ಯೋಗದ ಒಂದು ಅಂಶವೆಂದೇ ಪರಿಗಣಿಸಲಾದ ಮುದ್ರಾ ವಿಜ್ಞಾನವು ಇತ್ತೀಚೆಗೆ ಬೆಳಕಿಗೆ ಬಂದಿದ್ದು ಯೋಗದಂತೆ ಒಂದು ವಿಶೇಷ ವರವಾಗಿ ಪರಿಣಮಿಸಿದೆ. ಕೈಯ ಅಂಗುಷ್ಟದೊಂದಿಗೆ ಇತರ ಬೆರಳುಗಳನ್ನು ಸಂಯೋಜಿಸಿ ಮಾಡುವ ಭಂಗಿಗಳನ್ನು ಹಸ್ತ ಮುದ್ರೆಗಳೆನ್ನುವರು. ಸಂಸ್ಕ್ರತ ಭಾಷೆಯಲ್ಲಿ ‘ಮುದ್ರಾ’ ಎಂದರೆ ಮುಖದಲ್ಲಿ ತೋರುವ ಭಾವಾಭಿವ್ಯಕ್ತಿಯಾಗಿದೆ. ಆದುದರಿಂದ ಮುದ್ರೆಗಳು ಮಾನಸಿಕ, ಭಾವನಿಕ, ಭಕ್ತಿಯ, ಅಭಿವ್ಯಕ್ತಿಯ ಪ್ರತೀಕಗಳೆಂದು ಅರ್ಥ್ಯೆಸುತ್ತಾರೆ. ಈ ಮುದ್ರೆಗಳು ವ್ಯೆಜ್ಞಾನಿಕವಾಗಿ ಸಹ ಮಹತ್ತ್ವವಾದ ಹಿನ್ನೆಲೆಯನ್ನು ಹೊಂದಿವೆ. ನಮ್ಮ ಶರೀರದಲ್ಲಿ ಪ್ರವಹಿಸುತ್ತಿರುವ ಇಲೆಕ್ಟ್ರೋಮ್ಯಾಗ್ನೆಟಿಕ್ ಪವರ್ ಶರೀರದಿಂದ ಸತತವಾಗಿ ಹೊರ ಹೊಮ್ಮುತ್ತಿರುತ್ತದೆ. ಈ ಚೈತನ್ಯ ಶಕ್ತಿಯು ಕೈ ಬೆರಳುಗಳ ತುದಿ ಮತ್ತು ಕಾಲು ಬೆರಳುಗಳ ತುದಿ ಈ ಅಗ್ರಭಾಗಗಳಿಂದ ಮಾತ್ರ ಹೊರವಲಯದಲ್ಲಿ ಹೊಮ್ಮುತ್ತಿರುತ್ತದೆ. ಕಾರಣ ನಮ್ಮ ದೇಹದಲ್ಲಿ ಹರಡಿಕೊಂಡಿರುವ ಜ್ಞಾನವಾಹಿ ನಾಡಿಗಳ ತುದಿಗಳು ಬೆರಳುಗಳ ಅಗ್ರಭಾಗದ ತನಕ ಮುಟ್ಟಿವೆ. ಕೈ ಬೆರಳುಗಳಿಂದ ನಾವು ವಿವಿಧ ಮುದ್ರೆಗಳನ್ನು ಮಾಡಿದಾಗ ಈ ಚೈತನ್ಯ ಶಕ್ತಿಯು ಬಂಧಿಸಲ್ಪಟ್ಟು ವಿದ್ಯುತ್ಕಾಂತೀಯ ಅಲೆಗಳು ಪನಃ ಮಸ್ತಿಷ್ಕಕ್ಕೆ ಮರಳುತ್ತವೆ. ಆಗ ಮುದ್ರೆಗಳಿಂದ ಶರೀರದ ಆಯಾ ಕೇಂದ್ರಗಳು ಪ್ರಚೋದನೆಗೊಂಡು ಶರೀರದ ಅಂಗಾಂಗಗಳು ಆರೋಗ್ಯಪುರ್ಣ ಶಕ್ತಿಯನ್ನು ಪಡೆಯುತ್ತವೆ ಎಂಬುದೇ ಮುದ್ರಾ ವಿಜ್ಞಾನದ ವ್ಯೆಜ್ಞಾನಿಕ ಹಿನ್ನೆಲೆಯಾಗಿದೆ. ಬ್ರಹ್ಮಾಂಡವು ಐದು ತತ್ವಗಳಿಂದ ಸೃಷ್ಟಿಯಾಗಿದೆ. ಆ ಪಂಚ ತತ್ವಗಳೇ ಆಕಾಶ, ವಾಯು, ಅಗ್ನಿ, ಜಲ ಮತ್ತು ಪ್ರಥ್ವಿ. ಅದೇ ರೀತಿ ನಮ್ಮ ದೇಹವು ಕೂಡಾ ಈ ಐದು ಪಂಚ ತತ್ತ್ವಗಳಿಂದಾಗಿದೆ. ಇವುಗಳಲ್ಲಿ ಆಗುವ ಅಸಮತೋಲನವೇ ನಮ್ಮ ದೈಹಿಕ ಹಾಗೂ ಮಾನಸಿಕ ತೊಂದರೆಗಳಿಗೆ ಕಾರಣ. ಈ ಪಂಚ ತತ್ವಗಳು ನಮ್ಮ ಕೈಯ ಒಂದೊಂದು ಬೆರಳಿನಿಂದ ಪ್ರತಿನಿಧಿಸಲ್ಪಟ್ಟಿವೆ. ಬೆರಳುಗಳನ್ನು ಬೇರೆ ಬೇರೆ ಭಂಗಿಗಳಲ್ಲಿ ಜೋಡಿಸಿ ಒಂದೊಂದು ತತ್ವವನ್ನು ಸಮತೋಲನಗೊಳಿಸುವುದೇ ಮುದ್ರೆಗಳ ಮುಖ್ಯ ಉದ್ದೇಶ. ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ ಧ್ಯಾನದಲ್ಲಿ ಪ್ರಗತಿ ಹೊಂದಲು ಈ ಮುದ್ರೆಗಳು ಸಹಕಾರಿಯಾಗಿವೆ. ಮುದ್ರೆಗಳ ನಿರಂತರ ಸಾಧನೆಯಿಂದ ಆರೋಗ್ಯಕರ, ಉಲ್ಲಾಸಕರ, ಸರಳ, ಸಾತ್ವಿಕ ಹಾಗೂ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಮುದ್ರೆಗಳ ಕೆಲವು ಮಾರ್ಗದರ್ಶಕ ನಿಯಮಗಳು: . ಹೆಬ್ಬೆರಳಿನೊಂದಿಗೆ ಇತರ ಬೆರಳುಗಳ ಅಗ್ರಭಾಗ ಜೋಡಿಸಿದಾಗ ಆಯಾ ತತ್ವವು ಸಮತೋಲನದಲ್ಲಿರುತ್ತದೆ. . ಹೆಬ್ಬೆರಳಿನ ಬುಡದ ರೇಖೆಯ ಕೆಳಗೆ ಇತರ ಬೆರಳುಗಳ ಅಗ್ರಭಾಗ ಜೋಡಿಸಿದಾಗಾ ಆಯಾ ತತ್ವವು ಕಡಿಮೆ ಆಗುತ್ತದೆ. . ಹೆಬ್ಬೆರಳಿನ ಅಗ್ರಭಾಗವನ್ನು ಇತರ ಬೆರಳುಗಳ ಬುಡದ ರೇಖೆಯ ಬಳಿ ತಾಗಿಸಿದಾಗ ಆಯಾ ತತ್ವವು ಹೆಚ್ಚುತ್ತದೆ. . ಮುದ್ರೆಗಳನ್ನು ಲಿಂಗಭೇದ, ವಯಸ್ಸಿನ ನಿರ್ಬಂಧನೆಗಳಿಲ್ಲದೆ ಮಾಡಬಹುದು ಮತ್ತು ಮುದ್ರೆಗಳಿಗೆ ಸಮಯ, ಸ್ಥಳ. ದಿಕ್ಕು, ಆಸನಗಳ ಬಂಧನವಿಲ್ಲ. . ಎಡಗೈಯಿಂದ ಮಾಡಿದ ಮುದ್ರೆ ಬಲಭಾಗದ ಮೇಲೆ ಬಲಗೈಯಿಂದ ಮಾಡಿದ ಮುದ್ರೆ ಎಡಭಾಗದ ಮೇಲೂ ಪ್ರಭಾವ ಬೀರುವುದರಿಂದ ಎರಡೂ ಕೈಗಳಿಂದ ಸಾಧನೆ ಮಾಡುವುದು ಉತ್ತಮ. . ಮುದ್ರೆಗಳನ್ನು ಮಾಡುವಾಗ ಕೇವಲ ಬೆರಳಿನ ಅಗ್ರಭಾಗಗಳ ಸ್ಪರ್ಶ ಮಾತ್ರ ಆದರೆ ಸಾಕು ಒತ್ತಡ ಹಾಕಬೇಕಾಗಿಲ್ಲ ಮತ್ತು ಇತರ ಬೆರಳುಗಳನ್ನು ಸಾಕಷ್ಟು ನೇರವಾಗಿಡಬೇಕು. . ಜ್ಞಾನ ಮುದ್ರೆ, ಪ್ರಥ್ವಿ ಮುದ್ರೆ, ಅಪಾನ ಮುದ್ರೆ, ಪ್ರಾಣ ಮುದ್ರೆ ಮತ್ತು ವಾಯು ಮುದ್ರೆ ಈ ಐದು ಮುದ್ರೆಗಳನ್ನು ದಿನನಿತ್ಯವು 10-15 ನಿಮುಷ ಸಮಯದಂತೆ ಮಾಡಿದರೆ ಆರೋಗ್ಯ ದೃಢವಾಗಿ ರೊಗಗಳು ಹತ್ತಲಾರವು. ಕಾರಣ ಈ ಮುದ್ರೆಗಳಿಂದ ರೋಗಪ್ರತಿರೋಧಕ ಶಕ್ತಿ ಬೆಳೆಯುವುದು ಮತ್ತು ಆರೋಗ್ಯ, ಉತ್ಸಾಹದಿಂದ ವ್ಯಕ್ತಿತ್ವ ಕಂಗೊಳಿಸುವುದು. . ಮುದ್ರೆಗಳು ಖರ್ಚುವೆಚ್ಚವಿಲ್ಲದ, ಪರಾವಲಂಬನೆಯಿಲ್ಲದ, ಪರಿಹಾರೋಪಾಯಗಳು. . ಆದ್ದರಿಂದ ಇಷ್ಟೊಂದು ಉಪಯುಕ್ತವಾದ, ಆರೋಗ್ಯದಾಯಕವಾದ, ಖರ್ಚುವೆಚ್ಚಗಳಿಲ್ಲದ ಮುದ್ರೆಗಳನ್ನು ಎಲ್ಲರೂ ಶ್ರದ್ಧೆ ಮತ್ತು ವಿಶ್ವಾಸಗಳಿಂದ ತಮ್ಮ ಪ್ರತಿನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಾಗ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ. ಸಂಗ್ರಹ: ಸುಮನ್ ಚಿಪ್ಳುಣ್ ಕರ್ ರವರ, ಮುದ್ರಾ ವಿಜ್ಞಾನ ಪುಸ್ತಕದಿಂದ


                                                                                ವೇಗದ ರಹಸ್ಯ

ನಮ್ಮ ದಿನನಿತ್ಯದ ಅವಸರ, ಆತುರ, ಉದ್ವೇಗ, ಗೊಂದಲ, ಗಲಿಬಿಲಿಗಳು ನಮ್ಮ ಮನಸ್ಸನ್ನು ಬಳಲಿಸಿ ದೇಹವನ್ನು ದಣಿಯುವಂತೆ ಮಾಡುತ್ತವೆ. ಅವಸರದ ಫಜೀತಿಗಳನ್ನು ಎಲ್ಲರೂ ಅನುಭವಿಸಿಯೇ ಇರುತ್ತಾರೆ ಎಂಬ ಮಾತು ಸುಳ್ಳಲ್ಲ. ಇದರಲ್ಲಿ ನೀವು ಕೂಡ ಒಬ್ಬರಿರಬಹುದಲ್ಲವೇ? ಇವು ಕಾಲಾಂತರದಲ್ಲಿ ನಮ್ಮನ್ನು ರಕ್ತದೊತ್ತಡ, ನರಮಂಡಲದ ದೌರ್ಬಲ್ಯಗಳಿಂದ ನರಳುವಂತೆ ಮಾಡುತ್ತವೆ. ಇವುಗಳಿಂದ ಪಾರಾಗುವ ಬಗೆ ಹೇಗೆ ಎಂದು ನೀವೂ ತಿಳಿಯಬೇಕೆ? ಹಾಗಾದರೆ ಮುಂದೆ ಓದಿ ನೋಡಿ... ಬೇಗ ಬೇಗನೇ ಮುಂದುವರಿಯಲು ನೀವು ಮೆಲ್ಲಮೆಲ್ಲನೇ ನಡೆಯಬೇಕು. ಇದೆಂಥಹ ಮಾತು ಎನ್ನಬಹುದಲ್ಲವೆ ನೀವು. ಯೋಚಿಸಿ ನೋಡಿ. ಆಂಗ್ಲ ಭಾಷೆಯಲ್ಲಿನ hasten slowly ಎನ್ನುವ ಉಕ್ತಿಯನ್ನು ಕೇಳಿದ್ದೀರಾ? ಒಂದು ಪತ್ರಿಕಾ ಕಛೇರಿಗೆ ಒಬ್ಬ ಟೈಪಿಸ್ಟ್ ಹೊಸದಾಗಿ ಸೇರಿಕೊಂಡ. ಅವನು ವೇಗವಾಗಿ ತಪ್ಪಿಲ್ಲದೇ ಟೈಪ್ ಮಾಡುತ್ತಿದ್ದ. ಮ್ಯಾನೇಜರ್ ಅವನ ದಕ್ಷತೆಯನ್ನು ಕಂಡು ಸಂತುಷ್ಟರಾಗಿ ‘ಉಳಿದವರಿಗೂ ವೇಗದ ರಹಸ್ಯವನ್ನು ತಿಳಿಸಿಕೊಡು’ ಎಂದು ಆತನನ್ನು ಕೇಳಿಕೊಂಡರು. ‘ವೇಗವಾಗಿ ಟೈಪ್ ಮಾಡಬೇಕಾದರೆ ಮೊದಲು ಮೆಲ್ಲ ಮೆಲ್ಲನೇ ಟೈಪ್ ಮಾಡಬೇಕು’ ಎಂದು ಅವನು ರಹಸ್ಯವನ್ನು ಭೇದಿಸಿದಾಗ ಎಲ್ಲರೂ ಚಕಿತರಾದರು. ಅವನ ಅಭಿಪ್ರಾಯ ಇದು ವೇಗವನ್ನು ವರ್ಧಿಸುವ ಹಂಬಲವಿಲ್ಲದೇ ಟೈಪ್ ಮಾಡಬೇಕು. ಹಾಗೆ ವೇಗವನ್ನು ಅರ್ಧಕ್ಕಿಳಿಸಿದಾಗ ಎಲ್ಲಿ ತಪ್ಪಾಗುತ್ತದೆಯೋ ಎನ್ನುವ ಬೀತಿ ದೂರವಾಗುತ್ತದೆ. ಹಾಗೆ ಒಂದು ವಾರ ಟ್ಯಪ್ ಮಾಡುವಾಗ ನಮಗೆ ಗೊತ್ತಿರದಂತೆ ವೇಗವು ಹೆಚ್ಚಾಗಿರುವುದನ್ನು ಕಾಣುತ್ತೇವೆ. ‘ಅವಸರ, ಆತುರಗಳಿಗೂ ನಮ್ಮ ಕೆಲಸದ ವೇಗಕ್ಕೂ ಸಂಬಂಧವಿಲ್ಲ’. ಈ ವಿಚಾರವನ್ನು ಸರಿಯಾಗಿ ತಿಳಿದುಕೊಂಡರೆ ಎಲ್ಲ ಕೆಲಸಗಳನ್ನೂ ನಾವು ಆಸಕ್ತಿ, ಏಕಾಗ್ರತೆ ಮತ್ತು ಸಂತೋಷದಿಂದ ಮಾಡಬಹುದು. ಯಕ್ಷಿಣಿ ಆಟಗಾರನೊಬ್ಬ ಒಮ್ಮೆ ಶಾಲೆಗೆ ಬಂದಿದ್ದ. ಆತ ಏಕಕಾಲದಲ್ಲಿ ಆರು ಚೆಂಡುಗಳನ್ನು ಎರಡು ಕೈಗಳಿಂದ ವೇಗವಾಗಿ ಮೇಲಕ್ಕೆಸೆಯುತ್ತಲೂ, ಅವು ಕೆಳಕ್ಕೆ ಬರುತ್ತಿರುವಷ್ಟರಲ್ಲೇ ಸ್ಪರ್ಷ ಮಾತ್ರದಿಂದಲೋ ಎಂಬಂತೆ ತಿರುಗಿ ಮೇಲೇರುವಂತೆ ಮಾಡುತ್ತಿದ್ದ. ಚೆಂಡುಗಳು ಅವನ ಹಸ್ತವನ್ನು ಮುಟ್ಟುತ್ತಲೇ ಪುಟಿದು ನೆಗೆಯುವಂತೆ ತೋರುತ್ತಿದ್ದವು. ಎಷ್ಟು ಎತ್ತರಕ್ಕೆ ಹಾರಿಸಿದರೂ ಅವು ಅವನ ಕೈಯೆಡೆಗೆ ಕಾಣದ ಸೂತ್ರದಿಂದೆಳೆದಂತೆ ಓಡೋಡಿ ಬರುತ್ತಿದ್ದವು. ವಿದ್ಯಾರ್ಥಿಗಳು ಅವನ ಚಮತ್ಕಾರವನ್ನು ಕಂಡು ಚಕಿತರೂ, ಆನಂದಭರಿತರೂ ಆದರು. ಆಟಗಾರ ಹೋದ ನಂತರ ಕೆಲವು ಉತ್ಸಾಹಿ ಮಕ್ಕಳು ಕೈಗೆ ಸಿಕ್ಕಿದ ಲಿಂಬೆ ಹಣ್ಣು, ಮೂಸಂಬಿ, ಚೆಂಡುಗಳನ್ನು ಮುಖ ಮೂತಿಗಳ ಮೇಲೆ ಬೀಳಿಸಿಕೊಂಡರು. ಕೆಲವರು ಒಂದೆರಡು ದಿನ ಯತ್ನಿಸಿ ನಮ್ಮಿಂದಾಗದ ಕೆಲಸ ಎಂದು ಕೈಬಿಟ್ಟರು. ಸ್ವಲ್ಪ ದಿನಗಳ ಬಳಿಕ ಮಕ್ಕಳ ಮನೋರಂಜನಾ ಕಾರ್ಯಕ್ರಮದಲ್ಲಿ ಒಬ್ಬ ವಿದ್ಯಾರ್ಥಿ ನಾಲ್ಕು ಚೆಂಡುಗಳನ್ನು ತನ್ನ ಎರಡು ಕೈಗಳಿಂದ ಸರಸರನೆ ಹಾರಿಸಿ ಹಿಡಿದು ಎಲ್ಲರನ್ನು ಅಚ್ಚರಿಗೊಳಿಸಿದ. ವಿದ್ಯಾರ್ಥಿಗಳು ಜೋರಾಗಿ ಚಪ್ಪಾಳೆ ಹೊಡೆದು ತಮ್ಮ ಆನಂದ ವ್ಯಕ್ತಪಡಿಸಿದರು. ಕಾರ್ಯಕ್ರಮ ಮುಗಿದ ಬಳಿಕ ವಿದ್ಯಾರ್ಥಿಗಳೆಲ್ಲಾ ‘ಹೇಗೆ ಕಲಿತೆ ನನಗೂ ಹೇಳಿಕೊಡು’ ಎಂದರು. ಅವನು ಅವನ ಗುಟ್ಟು ಬಿಟ್ಟುಕೊಡದೆ ಮ್ಯಾಜಿಕ್ ಮಾಡಿದೆ ಎಂದ. ನಂತರ ಅವನ ಗೆಳೆಯ ಪ್ರತ್ಯೇಕವಾಗಿ ಕರೆದು ಕೇಳಿದಾಗ ಅವನೆಂದ ಪ್ರತಿನಿತ್ಯ ಯಾರೂ ಇಲ್ಲದ ಜಾಗದಲ್ಲಿ ಮೊದಲು ಒಂದೇ ಚೆಂಡನ್ನು ಮೆಲ್ಲ ಮೆಲ್ಲನೇ ಒಂದೇ ಕೈಯಿಂದ ಹಾರಿಸಿ ಅದೇ ಕೈಯಿಂದ ಹಿಡಿದೆ. ಸುಮಾರು 100 ಬಾರಿ ಮಾಡಿದ ಮೇಲೆ ಎರಡು ಚೆಂಡುಗಳನ್ನು ಒಂದೇ ಕೈಗಳಿಂದ ಒಂದಾದ ಮೇಲೊಂದರಂತೆ ಹಾರಿಸಿ ಹಿಡಿದೆ. ನನಗೂ ಸಾಧ್ಯ ಎಂದು ತೋರಿತು. ಹತ್ತು ದಿನಗಳ ಅನಂತರ ಒಂದೂ ತಪ್ಪು ಇಲ್ಲದೆ ವೇಗವಾಗಿ ಹಾರಿಸಿ ಹಿಡಿಯಲು ಸಾಧ್ಯವಾಯಿತು. ಬೇಗ ಬೇಗನೇ ಎನ್ನುವುದು ಮೆಲ್ಲ ಮೆಲ್ಲನೆಯಿಂದಲೇ ಸಾಧ್ಯ ಎಂದು ಆತ ಕಂಡುಹಿಡಿದಿದ್ದ. ಹಾರ್ಮೋನಿಯಮ್, ಪಿಟೀಲು ವಾದನ ಪಟುಗಳು ಕಛೇರಿ ನಡೆಸುವ ವೇಳೆ ವಾದ್ಯ ಬಾರಿಸುವವರು ಎಲ್ಲೆಲ್ಲಿ ಹೇಗೆ ಬೆರಳಿಡಬೇಕೆಂದು ಸ್ವಲ್ಪವಾದರೂ ಗಮನ ಕೊಡುವರೇ? ಇಲ್ಲ. ಹಾಗೆ ಗಮನವಿತ್ತರೆ ಅವರಿಂದ ಸರಿಯಾಗಿ ಬಾರಿಸಲು ಸಾಧ್ಯವಾಗುವುದೇ? ಖಂಡಿತಾ ಸಾಧ್ಯವಿಲ್ಲ. ಅವರ ಹೊರಮನಸ್ಸನ್ನು ಹಲವು ಕಡೆ ಗಮನವಿತ್ತರೂ ಒಳಮನಸ್ಸು ಅವರ ಬೆರಳುಗಳನ್ನು ಹೇಗೆ ಬೇಕೋ ಹಾಗೆ ನಡೆಸುತ್ತದಲ್ಲವೇ? ಇದರ ರಹಸ್ಯವನ್ನು ಅರಿಯೋಣವೇ? ಯಾವುದೇ ಕಲೆ ಅಥವಾ ಕೆಲಸದಲ್ಲಿ ನಮಗೆ ಪೂರ್ಣ ದಕ್ಷತೆ ಬರಬೇಕಾದರೆ ಅವರ ಕಾರ್ಯವಿಧಾನ ನಮ್ಮ ಸುಪ್ತಮನಸ್ಸಿನಲ್ಲಿ ಸರಿಯಾಗಿ ನೆಲೆನಿಲ್ಲಬೇಕು. ಅದನ್ನು ಮಾಡುವಾಗ ಲಕ್ಷ್ಯ ಕೊಡದೆ ಸರಾಗವಾಗಿ ಮಾಡುವಂತಾಗಬೇಕು. ಅದರಿಂದ ಸಂತೋಷವೂ ಉಂಟಾಗಬೇಕು. ಕೆಲಸವನ್ನೋ ಕಲೆಯನ್ನೋ ಅವಸರ, ಆತುರದ ಭಾರ ಹೊರಿಸದೇ ಮೆಲ್ಲ ಮೆಲ್ಲನೇ ಕಲಿಯಲು ಯತ್ನಿಸಿದರೆ ಅದನ್ನು ಸರಿಯಾಗಿ, ಪೂರ್ಣವಾಗಿ ಕಲಿಯಬಲ್ಲೆವು. ಅಲ್ಲದೆ, ಯಾವ ಕಷ್ಟವನ್ನೂ ಪಡದೆ ಅಥವಾ ಭಯವಿಲ್ಲದೆ ಮುಂದೆ ಅವಕಾಶ ಬಂದಾಗ ಪುನಃ ಅದನ್ನು ಮಾಡಬಲ್ಲೆವು. ನೀವು ಇತ್ತೀಚೆಗೆ ಸೈಕಲ್ ಸವಾರಿ ಮಾಡದೆ 10 ವರ್ಷಗಳೇ ಕಳೆದಿರಬಹುದು. ಆದರೆ ಒಮ್ಮೆ ತಿರುಗಿ ಸವಾರಿ ಮಾಡಲು ಯತ್ನಿಸಿ. ನಿಮ್ಮ ಸುಪ್ತ ಮನಸ್ಸು ಖಂಡಿತವಾಗಿ ನಿಮಗೆ ಸಹಾಯ ಗೈಯುವುದು. ನೀವು ಭಯ, ಸಂಶಯವಿಲ್ಲದೆ ಸಂತೋಷವಾಗಿ ಸವಾರಿ ಮಾಡುವಿರಿ. ಸಣ್ಣ ಕೆಲಸವಾದರೂ ಮನಸ್ಸು ಕೊಟ್ಟು ಚೆನ್ನಾಗಿ ಮಾಡಬೇಕು. ಏಕೆ ಎಂಬುದು ನಿಮಗೀಗ ಗೊತ್ತಾಗಿರಬಹುದಲ್ಲವೇ? ಕಲಿಕೆಯಲ್ಲಿ ಈ ತತ್ತ್ವದ ರಹಸ್ಯ ಹಲವು ವಿದ್ಯಾರ್ಥಿಗಳಿಗೆ ಅಪಾರವಾಗಿ ಸ್ಪೂರ್ತಿ ನೀಡಬಲ್ಲದು. ಅವರ ಅಧ್ಯಯನದ ಅಲ್ಲದೇ ಬದುಕಿನ ದಿಕ್ಕನ್ನೇ ಬದಲಿಸಬಹುದು ಎಂಬ ಆಶಯ ನನ್ನದು.