ಶ್ರೀ ಸತ್ಯ ಸಾಯಿ ಲೋಕ ಸೇವಾ ವಿದ್ಯಾಸಂಸ್ಥೆಗಳು,ಅಳಿಕೆ

ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ದಕ್ಷಿಣ ಕನ್ನಡದ ಆಳಿಕೆಯಲ್ಲಿ ಹಾಗೂ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಅನೇಕ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದೆ.ಕರ್ನಾಟಕದಲ್ಲಿ ಅತ್ಯಂತ ಬೇಡಿಕೆಯಿರುವ ವಿದ್ಯಾಸಂಸ್ಥೆಗಳು ಇವುಗಳಾಗಿದ್ದು, ಅತ್ಯುತ್ತಮ ಶಿಕ್ಷಣದೊಂದಿಗೆ ನೈತಿಕತೆಯನ್ನು ಕಲಿಸುವ ನೀಡುವ ತಮ್ಮ ವಿಶಿಷ್ಟ ಶಿಕ್ಷಣ ಪದ್ದತಿಯಿಂದ ಹೆಸರುವಾಸಿಯಾಗಿವೆ. ಮಡಿಯಾಲ ನಾರಾಯಣ ಭಟ್ಟರೆಂಬ ನಿಜಾರ್ಥದ ಕರ್ಮ ಯೋಗಿಯಿಂದ ಮಂಗಳೂರಿನ ಅಳಿಕೆಯೆಂಬ ಪುಟ್ಟ ಹಳ್ಳಿಯಲ್ಲಿ ೧೯೬೪ರಲ್ಲಿ ಶುರುವಾದ ಈ ಸಂಸ್ಥೆ ನಂತರ ಹೆಮ್ಮರವಾಗಿ ಬೆಳೆದು,ತನ್ನ ಬೀಜವೊಂದನ್ನು ಮುದ್ದೇನಹಳ್ಳಿರಯಲ್ಲಿ ಬಿತ್ತಿ ಆ ಸಂಸ್ಥೆಯೂ ವಿಶಾಲವಾಗಿ ಬೆಳೆಯುವಂತೆ ಮಾಡಿದ್ದು ವಿಸ್ಮಯವೇ ಸರಿ.

ಸಂಸ್ಥಾಪಕರು ಮತ್ತು ಇತಿಹಾಸ ಬದಲಾಯಿಸಿ

ಸಂಸ್ಥಾಪಕರು
 
ಪೂಜ್ಯ ಮಡಿಯಾಲ ನಾರಾಯಣ ಭಟ್ಟರು

ನಾರಾಯಣ ಭಟ್ಟರು ಅಂದು ಕಂಡ ಕನಸು ಚಿಕ್ಕದಾಗಿರಲಿಲ್ಲ.ಅವರೊಬ್ಬ ನಿಜಾರ್ಥದ ಕರ್ಮಯೋಗಿಯಾಗಿದ್ದರು.ಅವರು ಕಂಡದ್ದು ಹಿಂದೂ ಮಿಶನರಿ ಸಂಸ್ಥೆಯ ಕನಸು.ದೇಸಶವನ್ನು ಕಟ್ಟುವುದು ಯುವ ಜನಾಂಗವೆಂದು ಅರಿತ ಅವರು,ಅಂತಹ ಯುನ ಜನಾಂಗಕ್ಕೆ ಗುರುಕುಲ ಮಾದರಿಯ,ಮೌಲ್ಯಾಧಾರಿತ,ಹಣ ಕೇಂದ್ರಿತವಲ್ಲದ ವಿದ್ಯೆ ನೀಡಬೇಕೆಂದು ಬಯಸಿದರು.ಅವರೊಂದಿಗೆ ಅದೇ ರೀತಿಯ ಚಿಂತನೆಯುಳ್ಳ ಕೆಲವು ಯುವಕರು ಸೇರಿಕೊಂಡರು.ಎಲ್ಲರೂ ಸೇರಿ ಭಾರತ ಮಾತೆಯ ಮುಂದಿನ ಜನಾಂಗದ ಸೇವೆಗಾಗಿ ಬ್ರಹ್ಮಚರ್ಯವನ್ನು ಪಾಲಿಸುವ ಅಂದರೆ ಮದುವೆಯಾಗದಿರುವ ನಿರ್ಧಾರಕ್ಕೆ ಬ೦ದರು.ಅದರ ಫಲವೇ ಲೋಕ ಸೇವಾ ವೃಂದ ಎಂಬ ಸಂಸ್ಥೆ.ಅದರ ಉದ್ಘಾಟನೆ ೧೯೬೦ರ ದಸಶಕದಲ್ಲಿಯೇ ನಡೆಯಿತು.

ಪುಟ್ಟಪರ್ತಿಯ ಶ್ರೀ ಸತ್ಯ ಸಾಯಿ ಬಾಬರವರ ಸಂಪರ್ಕಕ್ಕೆ ಬಂದ ಮಡಿಯಾಲರು ಅವರನ್ನು ಮಾರ್ಗದರ್ಶಿಯಾಗಿ ಸ್ವೀಕರಿಸಿ ಅನುಸರಿಸಲು ಪ್ರಾರಂಭಿಸುತ್ತಾರೆ.ಆ ಕಾಲದಲ್ಲಿಯೇ ಪುಸ್ತಕ ಪ್ರಕಟಿಸಲು ಪ್ರಾರಂಭಿಸುವ ಅವರು 'ಸೇವಾಮೃತ' ಎಂಬ ಮಾಸ ಪತ್ರಿಕೆಯನ್ನು ಹೊರ ತರುವ ಮೂಲಕ ಮತ್ತು ತಾವೆ ಅನೇಕ ಕಾದಂಬರಿಗಳನ್ನು ಬರೆಯುವ ಮೂಲಕ ಆ ದಿನಗಳಲ್ಲಿ ಕನ್ನಡ ಸಾಹಿತ್ಯ ಬೆಳೆಯುವುದಕ್ಕೆ ಸಹಾಯ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಹಿತೈಷಿಗಳ ಒತ್ತಾಯದ ಮೇಲೆ ವಿದ್ಯೆಯ ಗಂಗೆಯನ್ನು ದೂರದ ಮುದ್ದೇನಹಳ್ಳಿಗೂ ತಂದು,ಅಲ್ಲಿಯೂ ಶಾಲೆಯನ್ನು ಪ್ರಾರಂಭಿಸುತ್ತಾರೆ.ಅಂದು ಹೈ ಸ್ಕೂಲು ಆಗಿದ್ದ ಆ ಸಂಸ್ಥೆ ಇಂದು ಒಂದು ಸ್ವಾಯತ್ತ ವಿಶ್ವ ವಿದ್ಯಾನಿಲಯದ ನಿವೇಶನವನ್ನು ಹೊಂದಿದೆ(ಸತ್ಯ ಸಾಯಿ ವಿಶ್ವ ವಿದ್ಯಾನಿಲಯ).

ಮಡಿಯಾಲ ನಾರಾಯಣ ಭಟ್ಟರು ತಮ್ಮ ೪೯ನೆಯ ವಯಸ್ಸಿನಲ್ಲಿ ಕಾರು ಅಫಘಾತದಲ್ಲಿ ನಿಧನರಾದರು.ಅಫಘಾತದ ಹಿಂದಿನ ದಿನ ಪುಟ್ಟಪರ್ತಿಗೆ ತೆರಳಿ ತಮ್ಮ ಸಂಸ್ಥೆಯನ್ನು ಸ್ವೀಕರಿಸಬೇಕೆಂದು ಸತ್ಯಸಾಯಿ ಬಾಬಾರವರಲ್ಲಿ ಕೋರಿಕೊಂಡು ಅದಕ್ಕೆ ಒಪ್ಪಿಗೆಯನ್ನೂ ಪಡೆದಿದ್ದರು.ನಂತರ ಸತ್ಯಸಾಯಿ ಬಾಬರವರ ಮಾರ್ಗದರ್ಶನದಲ್ಲಿ ಲೋಕ ಸೇವಾ ವೃಂದವನ್ನು ವಿಸರ್ಜಿಸಿ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟ್ ಅನ್ನು ಸ್ಥಾಪಿಸಲಾಯಿತು.[೧]ಅವರ ಆದೇಶದಂತೆ ಅದುವರೆಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಗಂಗಾಧರ ಭಟ್ಟರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.ಅದುವರೆಗಿನಿಂದ ಇಲ್ಲಿಯವರೆಗೂ ಅವರೇ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸುತಿದ್ದಾರೆ.

ಸತ್ಯ ಸಾಯಿ ಬಾಬಾರವರ ಸಮರ್ಥ ಮಾರ್ಗದರ್ಶನದಲ್ಲಿ ಮುಂದುವರೆದ ಟ್ರಸ್ಟ್ ಈಗ ದೇಶದಾದ್ಯಂತ ಹೆಸರು ಮಾಡಿದೆ.ಎರಡು ಕ್ಯಾಂಪಸ್ಸಿನಲ್ಲಿ ವಿವಿಧ ಶಾಲಾ ಕಾಲೇಜುಗಳನ್ನು ನಡೆಸುತ್ತಿದೆ.ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಶೆಯನ್ನು ನಡೆಸುವಷ್ಟು ವಿದ್ಯಾರ್ಥಿಗಳು ಇಲ್ಲಿಗೆ ಪ್ರವೇಶವನ್ನು ಬಯಸಿ ಬರುತ್ತಿದ್ದಾರೆ.ಇಲ್ಲಿ ವಿದ್ಯಾಭ್ಯಾಸವನ್ನು ಮಾಡಿದವರು ಬೇರೆ ಬೇರೆ ಕ್ಶೇತ್ರಗಳಲ್ಲಿ ಹೆಸರು ಮಾಡಿದ್ದರೆ.[೨]

ಅಳಿಕೆಯಲ್ಲಿರುವ ವಿದ್ಯಾಸಂಸ್ಥೆಗಳು ಬದಲಾಯಿಸಿ

ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಳಿಕೆ ಮತ್ತು ಮುದ್ದೇನಹಳ್ಳಿಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ.ಅಳಿಕೆಯಲ್ಲಿರುವ ಶಿಕ್ಷಣ ಸಂಸ್ಥೆಗಳ ಸತ್ಯ ಸಾಯಿ ವಿಹಾರ,ಶಾರದ ವಿಹಾರ ಹಾಗೂ ವಾಣಿ ವಿಹಾರಗಳೆಂಬ ಮೂರು ನಿವೇಶನಗಳಲ್ಲಿ ಹರಡಿಕೊಂಡಿವೆ.ಅವುಗಳ ವಿವರವನ್ನು ಇಲ್ಲಿ ನೀಡಲಾಗಿದೆ.[೩]

ಶ್ರೀ ಸತ್ಯಸಾಯಿ ಲೋಕ ಸೇವಾ ಪದವಿ ಪೂರ್ವ ಕಾಲೇಜು,ಸತ್ಯಸಾಯಿ ವಿಹಾರ ಬದಲಾಯಿಸಿ

 
ಪದವಿಪೂರ್ವ ಕಾಲೇಜು

ಪದವಿ ಪೂರ್ವ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಖ್ಯಾತಿಯನ್ನು ಈ ಕಾಲೇಜು ಹೊಂದಿದೆ.ಕರ್ನಾಟಕದ ಎಲ್ಲಾ ಭಾಗಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಶಿಕ್ಷಣಕ್ಕಾಗಿ ಬರುತ್ತಾರೆ.ಅವರಿಗೆಲ್ಲಾ ಅತ್ಯಂತ ಕಡಿಮೆ ವೆಚ್ಚದಲ್ಲಿ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಿ ಕೊಡಲಾಗುತ್ತದೆ.ಇವರಲ್ಲದೆ ಸುತ್ತಮುತ್ತಲಿನ ಹಳ್ಳಿಯ ಮಕ್ಕಳು ಕೂಡ ಇಲ್ಲಿಗೆ ಬಂದು ವಿದ್ಯಾಭ್ಯಾಸವನ್ನು ಪಡೆದುಕೊಳ್ಳುತ್ತಾರೆ. ಪ್ರತಿ ವರ್ಷ ನಡೆಯುವ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆಯಲ್ಲಿ ಇಲ್ಲಿಯ ಹೆಚ್ಚಿನ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಗುವುದು ಸಾಮಾನ್ಯ.ಇದಲ್ಲದೆ ಪ್ರತಿ ವರ್ಷ ನಡೆಯುವ ಸಿ.ಇ.ಟಿ ಪರೀಕ್ಷೆಯಲ್ಲೂ ಇಲ್ಲಿನ ವಿದ್ಯಾರ್ಥಿಗಳು ಮೊದಲಿಗರಾಗಿರುತ್ತಾರೆ.ಸರ್ಕಾರದಿಂದ ಅನುದಾನವನ್ನು ಪಡೆಯುವ ಈ ಕಾಲೇಜು ಅತ್ಯುತ್ತಮ ಪಾಠ ಪ್ರವಚನಗಳಿಗಲ್ಲದೆ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸನಕ್ಕೆ ಹೆಸರುವಾಸಿ.ಸತ್ಯಸಾಯಿ ವಿಹಾರದ ಪ್ರಶಾಂತ ವಾತವರಣದಲ್ಲಿ ಈ ಕಾಲೇಜಿದ್ದು,ವಿಶಾಲ ಕ್ರೀಡಾಂಗಣಗಳನ್ನೂ,ಅತ್ಯುತ್ತಮ ಗ್ರಂಥಾಲಯವನ್ನೂ ಹೊಂದಿದೆ.ಇವಲ್ಲದೆ ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನ,ವೇದ ಪಠಣ ಮುಂತಾದ ತರಬೇತಿಗಳನ್ನು ನೀಡಲಾಗುತ್ತದೆ.ಕಾಲೇಜಿಗಾಗಿ ಸುಸಜ್ಜಿತ ಕಟ್ಟಡ ಹಾಗೂ ಪ್ರಾರ್ಥನಾ ಮಂದಿರ ಸತ್ಯಸಾಯಿ ವಿಹಾರದಲ್ಲಿ ಪ್ರಸ್ತುತ ಮೇಲೇರುತಿದ್ದು,ಬರುವ ಶೈಕ್ಷಣಿಕ ವರ್ಶದಲ್ಲಿ ವಿದ್ಯಾರ್ಥಿಗಳ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ.

ಶ್ರೀ ಸತ್ಯಸಾಯಿ ಲೋಕ ಸೇವಾ ವಿದ್ಯಾಕೇಂದ್ರ,ಸತ್ಯಸಾಯಿ ವಿಹಾರ ಬದಲಾಯಿಸಿ

ವಿದ್ಯಾಕೇಂದ್ರ,ಸತ್ಯಸಾಯಿ ವಿಹಾರ
 
ವಿಮಾನಾಕೃತಿಯ ಕಟಡ

ಸಂಪೂರ್ಣ ವಸತಿ ಶಾಲೆಯಾಗಿರುವ ವಿದ್ಯಾಕೇಂದ್ರ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯಿಂದ ಗುರುತಿಸಲ್ಪಟ್ಟಿದೆ.ಸಿ.ಬಿ.ಯ.ಸ್ಸಿ ಮಾದರಿಯಲ್ಲಿ ಶಿಕ್ಷಣ ನೀಡುವ ಕರ್ನಾಟಕದ ವಸತಿ ಶಾಲೆಗಳಲ್ಲಿ ಅತಿ ಬೇಡಿಕೆಯಿರುವ ಶಾಲೆ ವಿದ್ಯಾಕೇಂದ್ರ.ಇಲ್ಲಿಯ ಮಕ್ಕಳು ತಮ್ಮ ಪ್ರತಿಭೆಯಿಂದ ಎಂತವರನ್ನಾದರೂ ಸೆಳೆಯುತ್ತಾರೆ.ಆಟ,ಪಾಠ ಹಾಗೂ ಬೇರೆ ಯಾವುದೇ ಸಾಂಸ್ಕೃತಿಕ ಚಟುವಟಿಕೆಯಿರಲಿ,ಇಲ್ಲಿಯ ಮಕ್ಕಳು ಅದರಲ್ಲಿ ಪಾಲ್ಗೊಳ್ಳುತ್ತಾರೆಂದೇ ಅರ್ಥ.ಆರನೇ ತರಗತಿಯಿಂದ ಹತ್ತನೆಯ ತರಗತಿಯವರೆಗಿನ ವಿದ್ಯಾರ್ಥಿಗಳು ಇಲ್ಲಿದ್ದು,ಸುಮಾರು ೪೦೦ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಇದ್ದುಕೊಂಡು ಅಭ್ಯಾಸ ಮಾಡುತ್ತಿದ್ದಾರೆ.ಸಂಪೂರ್ಣ ವಸತಿ ಶಾಲೆಯಾದ್ದರಿಂದ ಎಲ್ಲಾ ಮಕ್ಕಳೂ ಹಾಸ್ಟೆಲಿನಲ್ಲಿಯೇ ಇದ್ದು ಓದುತ್ತಿದ್ದಾರೆ.ಈ ಶಾಲೆ ಪ್ರಾರಂಭವಾದಗಿನಿಂದಲೂ ಇಲ್ಲಿಯವರೆಗೂ ಹತ್ತನೆಯ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶವನ್ನು ದಾಖಲಿಸುತ್ತಾ ಬಂದಿರುವುದು ಒಂದು ದಾಖಲೆ.ಇಲ್ಲಿ ವ್ಯಾಸಾಂಗವನ್ನು ಮಾಡುವ ಹೆಚ್ಚಿನ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಾರೆ.[೪]

ಶ್ರೀ ಸತ್ಯಸಾಯಿ ಲೋಕ ಸೇವಾ ಹೈಸ್ಕೂಲ್(ಬಾಲಕುಟೀರ),ಶಾರದ ವಿಹಾರ ಬದಲಾಯಿಸಿ

ಹೈಸ್ಕೂಲು,ಶಾರದಾ ವಿಹಾರ
 
ಬಾಲಕುಟೀರ

ರಾಜ್ಯ ಮಾದರಿಯಲ್ಲಿ(ಕರ್ನಾಟಕ ಬೋರ್ಡ್) ಶಿಕ್ಷಣವನ್ನು ನೀಡುವ ಹೈಸ್ಕೂಲ್ ಇದಾಗಿದ್ದು,ಬಾಲಕರಿಗೆ ಹಾಗು ಬಾಲಕಿಯರಿಗಾಗಿ ಪ್ರತ್ಯೇಕ ನಿವೇಶನಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.ಬಾಲಕರ ಶಾಲೆ ಶಾರದಾ ವಿಹಾರದಲ್ಲಿದ್ದರೆ,ಬಾಲಕಿಯರ ಶಾಲೆ ವಾಣಿ ವಿಹಾರದಲ್ಲಿದೆ.ಬಾಲಕರಿಗೆ ವಸತಿ ವ್ಯವಸ್ಥೆಯಿದ್ದು,ಹಾಸ್ಟೆಲನ್ನು ಬಾಲಕುಟೀರ ಎಂದು ಕರೆಯಲಾಗುತ್ತದೆ.ಲೋಕ ಸೇವಾ ವೃಂದ ಪ್ರಾರಂಭವಾದ ದಿನಗಳಿಂದಲೂ ಈ ಬಾಲಕುಟೀರ ಕಾರ್ಯ ನಿರ್ವಹಿಸುತ್ತಿದೆ.ಹಾಸ್ಟೆಲ್ ವಿದ್ಯಾರ್ಥಿಗಳಲ್ಲದೆ ಸ್ಥಳೀಯ ವಿದ್ಯಾರ್ಥಿಗಳು ಸಹ ಇಲ್ಲಿ ಶಿಕ್ಷಣವನ್ನು ಪಡೆಯುತ್ತಾರೆ.ಬಾಲಕರಿಗೆ ಕನ್ನಡ ಹಾಗು ಇಂಗ್ಲೀಷ್ ಎರಡೂ ಮಾಧ್ಯಮಗಳ ಆಯ್ಕೆಯಿದೆ.ಆದರೆ ಬಾಲಕಿಯರಿಗೆ ಕನ್ನಡ ಮಾಧ್ಯಮದಲ್ಲಿ ಮಾತ್ರ ಬೋಧಿಸಲಾಗುತ್ತದೆ.ಶಿಕ್ಷಣದ ಜೊತೆ ಸಹಪಠ್ಯೇತರ ವಿಷಯಗಳಿಗೂ ಇಲ್ಲಿ ಆದ್ಯತೆಯನ್ನು ನೀಡಲಾಗುತ್ತದೆ.ಶಿಸ್ತು,ಉತ್ತಮ ಸಂಸ್ಕೃತಿ ಮತ್ತು ಅತ್ಯುತ್ತಮ ಫಲಿತಾಂಶಕ್ಕೆ ಈ ಶಾಲೆ ರಾಜ್ಯದಲ್ಲೇ ಹೆಸರುವಾಸಿ.

ಶ್ರೀ ಸತ್ಯಸಾಯಿ ಲೋಕ ಸೇವಾ ಪ್ರಾಥಮಿಕ ಶಾಲೆ,ವಾಣಿ ವಿಹಾರ ಬದಲಾಯಿಸಿ

 
ಪ್ರಾಥಮಿಕ ಶಾಲೆ,ವಾಣಿ ವಿಹಾರ

ಈ ಶಾಲೆಯಲ್ಲಿ ಒಂದನೆಯ ತರಗತಿಯಿಂದ ಏಳನೆಯ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡಲಾಗುತ್ತದೆ.ಹಾಸ್ಟೆಲ್ ವ್ಯವಸ್ಥೆಯಿಲ್ಲವಾದ ಕಾರಣ ಸುತ್ತಮುತ್ತಲಿನ ಮಕ್ಕಳಿಗೆ ಮಾತ್ರ ಇಲ್ಲಿ ಪ್ರವೇಶಾವಕಾಶವಿದೆ.ಉತ್ತಮ ಶಿಕ್ಷಣ,ಸಹ ಪಠ್ಯೇತರ ತರಬೇತಿ ಹಾಗೂ ಶಿಸ್ತಿಗೆ ಈ ಶಾಲೆ ಸುತ್ತಮುತ್ತಲಿನ ಪರಿಸರದಲ್ಲಿ ಹೆಸರುವಾಸಿ.

ಬಾಪೂಜಿ ಬಾಲನಿಕೇತನ,ಸತ್ಯಸಾಯಿ ವಿಹಾರ ಬದಲಾಯಿಸಿ

ಮಹಾತ್ಮ ಗಾಂಧಿಯವರ ಕಟ್ಟಾ ಅನುಯಾಯಿಯಾಗಿದ್ದ ಅಣ್ಣನವರು,ಅವರ ನೆನಪಿನಲ್ಲಿ ಸ್ಥಾಪಿಸಿದ ಸಂಸ್ಥೆಯೇ ಬಾಪೂಜಿ ಬಾಲನಿಕೇತನ.ಇದೊಂದು ಅನಥಾಲಯವಾಗಿದ್ದು,ಅನಾಥ ಅಥವಾ ಶಿಕ್ಷಣದ ವೆಚ್ಚವನ್ನು ಭರಿಸಲಾಗದ ಬಡ ಮಕ್ಕಳು ಇಲ್ಲಿ ವಾಸವಿದ್ದು ಅಳಿಕೆಯ ಉಳಿದ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣವನ್ನು ಪಡೆಯುತ್ತಿದ್ದಾರೆ.ಇವರ ಊಟ,ವಸತಿ ಉಚಿತವಾಗಿದ್ದು,ಅದರ ಖರ್ಚನ್ನು ಸಂಸ್ಥೆ ದಾನಿಗಳ ನೆರವಿನಿಂದ ಭರಿಸುತ್ತದೆ.ಪಿ.ಯು.ಸಿ ವರೆಗಿನ ಶಿಕ್ಷಣಕ್ಕೆ ಅಳಿಕೆಯಲ್ಲಿ ಅವಕಾಶವಿದ್ದು,ನಂತರ ಅವರ ಜೀವನೋಪಾಯಕ್ಕೆ ಸಂಸ್ಥೆ ವ್ಯವಸ್ಥೆ ಮಾಡುತ್ತದೆ.ಓದುವ ಅಭಿಲಾಶೆಯಿದ್ದರೆ,ಹೊರಗಿನ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶವನ್ನು ಕೊಡಿಸಿ ಸಂಸ್ಥೆಯೇ ಓದಿಸುತ್ತದೆ.ಹೀಗೆ ಅನೇಕ ಬಡ ಮಕ್ಕಳು ಅಳಿಕೆಯಲ್ಲಿ ಆಶ್ರಯ ಪಡೆದು ಉತ್ತಮ ಶಿಕ್ಷಣದೊಂದಿಗೆ ಬೆಳೆಯುತ್ತಿದ್ದಾರೆ.

ಶ್ರೀ ಸತ್ಯಸಾಯಿ ಲೋಕ ಸೇವಾ ಸುಪೀರಿಯರ್ ಆಸ್ಪತ್ರೆ,ಸತ್ಯಸಾಯಿ ವಿಹಾರ ಬದಲಾಯಿಸಿ

ಶ್ರೀ ಸತ್ಯಸಾಯಿ ಲೋಕ ಸೇವಾ ಸುಪೀರಿಯರ್ ಆಸ್ಪತ್ರೆ
 

ಶ್ರೀ ಸತ್ಯಸಾಯಿ ಬಾಬರವರು ಉಚಿತ ಶಿಕ್ಷಣ,ಆರೋಗ್ಯ ಸೌಲಭ್ಯ ಹಾಗೂ ನೀರಿನ ವ್ಯವಸ್ಥೆಯನ್ನು ಅತ್ಯಂತ ಬಡ ಜನರಿಗೆ ಕಲ್ಪಿಸಿಕೊಟ್ಟ ಮಹಾನ್ ಸಂತ.ಬಡವರಿಗೆ ಶಿಕ್ಷಣ,ಆರೋಗ್ಯ ಹಾಗೂ ನೀರು ಉಚಿತವಾಗಿ ಸಿಗಬೇಕೆನ್ನುವುದು ಅವರ ಅಭಿಲಾಷೆಯಾಗಿತ್ತು.ಅಣ್ಣನವರು ಕೂಡ ಆಳಿಕೆಯಲ್ಲಿ ಒಂದು ಚಿಕ್ಕದಾದ ಧರ್ಮಾಸ್ಪತ್ರೆಯನ್ನು ತೆರೆಯಬೇಕೆಂಬ ಕನಸು ಕಂಡಿದ್ದರು.ಅವರ ಕನಸುಗಳನ್ನು ಈಡೇರಿಸುತ್ತೇನೆಂದು ಅವರ ಕೊನೆಯ ದಿನಗಳಲ್ಲಿ ಮಾತು ಕೊಟ್ಟಿದ್ದ ಬಾಬ ಅವರ ವಚನಕ್ಕೆ ತಪ್ಪಲಿಲ್ಲ.ಅಣ್ಣನವರ ಕನಸಿನಂತೆ ಅಳಿಕೆಯಲ್ಲಿ ಒಂದು ಸುಪೀರಿಯರ್ ಆಸ್ಪತ್ರ್ಯನ್ನು ನಿರ್ಮಿಸುತ್ತೇನೆಂದು ೨೦೦೧ನೆಯ ಇಸವಿಯಲ್ಲಿ ಅವರು ಅಳಿಕೆಗೆ ಭೇಟಿ ಕೊಟ್ಟಾಗ ಘೋಷಿಸಿದರು.ಅದರಂತೆ ಅಳಿಕೆಯಲ್ಲಿ ಸುಪೀರಿಯರ್ ಆಸ್ಪತ್ರೆಯೊಂದು ಮೇಲೆ ಬಂತು.ಸತ್ಯಸಾಯಿ ವಿಹಾರದ ಮಹಾದ್ವಾರ ಹೊಕ್ಕಂತೆಯೇ ಸ್ವಲ್ಪ ದೂರದಲ್ಲಿ ದೇವಸ್ಥಾನದಂತೆ ಕಾಣುವ ಕಟ್ಟಡದಲ್ಲಿಯೇ ಈ ಆಸ್ಪತ್ರೆ ಕಾರ್ಯನಿರ್ವಹಿಸುವುದು. ಈ ಆಸ್ಪತ್ರೆಯ ವಿಶೇಷತೆಯೇನೆಂದರೆ ಇಲ್ಲಿ ಬಿಲ್ ಕೌಂಟರ್ ಇಲ್ಲ.ಬಡವ ಶ್ರೀಮಂತರೆಂಬ ಭೇದವಿಲ್ಲದೆ ತಪಾಸಣೆಯಿಂದ ಹಿಡಿದು ಔಷಧದವರೆಗೂ ಎಲ್ಲವೂ ಉಚಿತ.ಅಂದಿನಿಂದ ಇಂದಿನವರೆಗೂ ಈ ಆಸ್ಪತ್ರೆಯಲ್ಲಿ ಅದೆಷ್ಟೋ ಜನ ಉಚಿತವಾಗಿ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿದ್ದಾರೆ.ಇಲ್ಲಿಯವರೆಗೂ ಹೊರರೋಗಿ ವಿಭಾಗ ಮಾತ್ರ ಕಾರ್ಯನಿರ್ವಹಿಸುತ್ತಿದ್ದು,ಇತ್ತೀಚಿಗೆ ಚಿಕ್ಕ ಒಳರೋಗಿ ವಿಭಾಗವೂ ಲೋಕಾರ್ಪಣೆಗೊಂಡಿತು.ಅದರೊಂದಿಗೆ ಒಂದು ಚಿಕ್ಕ ಆಪರೇಷನ್ ಕೊಠಡಿಯನ್ನೂ ಉದ್ಘಾಟಿಸಲಾಯಿತು.ಹೀಗೆ ಮೇಲ್ದರ್ಜೆಗೊಂಡು ಇನ್ನಷ್ಟು ರೋಗಿಗಳಿಗೆ ನೆರವಾಗುವ ಸಲುವಾಗಿ ಈ ಆಸ್ಪತ್ರೆ ಸಿದ್ದವಾಗಿ ನಿಂತಿದೆ.

ಪ್ರವೇಶ ಪರೀಕ್ಷೆ ಬದಲಾಯಿಸಿ

ಫ್ರಸ್ತುತ ೬ನೆಯ ತರಗತಿ(ಸಿ.ಬಿ.ಎ.ಸ್ಸಿ),ಎಂಟನೆಯ ತರಗತಿ(ಸಿ.ಬಿ.ಎ.ಸ್ಸಿ ಹಾಗೂ ರಾಜ್ಯ ಬೋರ್ಡ್-ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮ) ಹಾಗೂ ಪಿ.ಯು.ಸಿಗೆ(ಪಿ.ಸಿ.ಯಂ.ಬಿ/ಯಸ್,ವಾಣಿಜ್ಯ ಹಾಗೂ ಆರ್ಟ್ಸ್) ಪ್ರವೇಶಾವಕಾಶವಿದೆ.ಬಾಲಕರಿಗೆ ಮಾತ್ರ ವ್ಯವಸ್ಥೆಯಿದ್ದು,ಪ್ರಸ್ತುತ ಶಾಲೆಗಳಿಗೆ ಬಾಲಕಿಯರಿಗೆ ಪ್ರವೇಶಾವಕಾಶವಿಲ್ಲ.ಮುಂದಿನ ಶೈಕ್ಷಣಿಕ ವರ್ಷದಿಂದ ಬಾಲಕಿಯರ ಪದವಿಪೂರ್ವ ಕಾಲೇಜು ವಾಣಿವಿಹಾರದಲ್ಲಿ ಕಾರ್ಯಾರಂಭ ಮಾಡಲಿದ್ದು,ಪದವಿಪೂರ್ವ ತರಗತಿಗಳಿಗೆ ಬಾಲಕಿಯರಿಗೆ ಪ್ರವೇಶವಿರುತ್ತದೆ.ಈ ಹೊಸ ಕಾಲೇಜಿನ ವಿಭಾಗಗಳ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಯಾವುದೇ ಬೇಧ ಭಾವಗಳಿಲ್ಲದೆ ಮುಕ್ತ ಪ್ರವೇಶ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಸೀಟನ್ನು ಕೊಡಲಾಗುತ್ತದೆ.ಪ್ರತಿ ವರ್ಷ ಮಾರ್ಚ್ ತಿಂಗಳಿನಲಿ ಅರ್ಜಿಯನ್ನು ಕರೆದು,ಏಪ್ರಿಲ್ ತಿಂಗಳ ಕೊನೆಯಲ್ಲಿ ಪರೀಕ್ಷೆ ಹಾಗು ಸಂದರ್ಶನವನ್ನು ನಡೆಸಲಾಗುತ್ತದೆ.ಹತ್ತು ದಿನಗಳೊಳಗಾಗಿ ಫಲಿತಾಂಶವನ್ನು ಪ್ರಕಟಿಸಿ,ಆಯ್ಕೆ ಆದ ವಿದ್ಯಾರ್ಥಿಗಳಿಗಷ್ಟೆ ಹಾಸ್ಟೆಲಿನಲ್ಲಿ ಸೀಟನ್ನು ನೀಡಲಾಗುತ್ತದೆ.ಎಲ್ಲಾ ತರಗತಿಗಳಿಗೂ ಪ್ರವೇಶ ಪರೀಕ್ಷೆ ಕಡ್ಡಾಯ. ವಿದ್ಯಾಕೇಂದ್ರಕ್ಕೆ ೬ನೆಯ ಹಾಗೂ ೮ನೆಯ,ಬಾಲಕುಟೀರಕ್ಕೆ ೮ನೆಯ ತರಗತಿಯಲ್ಲಿ ಸೇರುವ ವಿದ್ಯಾರ್ಥಿಗಳು ೧೦ನೆಯ ತರಗತಿಯವರೆಗೂ ಅಲ್ಲೇ ವಿದ್ಯಾಭ್ಯಾಸವನ್ನು ಮುಂದುವರೆಸಬಹುದು.ಮುಂದೆ ಪದವಿಪೂರ್ವ ಕಾಲೇಜಿಗೆ ಅವರೂ ಪ್ರವೇಶ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು.

ಕ್ಯಾಂಪಸ್ಸಿನಲ್ಲಿರುವ ಸೌಲಭ್ಯಗಳು ಬದಲಾಯಿಸಿ

ಮೇಧಾ
 
ಗ್ರಂಥಾಲಯ,ಸತ್ಯಸಾಯಿ ವಿಹಾರ

ಎಲ್ಲಾ ರೀತಿಯ ಅಮುಕೂಲಗಳನ್ನು ಈ ವಿದ್ಯಾನಿವೇಶನಗಳು ಒಳಗೊಂಡಿವೆ.ವಿಶಾಲವಾದ ಆಟದ ಮೈದಾನಗಳು ಲಭ್ಯವಿವೆ.ಫುಟ್ಬಾಲ್,ವಾಲಿಬಾಲ್,ಕ್ರಿಕೆಟ್,ಥ್ರೋಬಾಲ್,ಹ್ಯಾಂಡ್ ಬಾಲ್,ಟೆನ್ನಿಸ್,ಶಟಲ್-ಬ್ಯಾಡ್ಮಿಂಟನ್ ಮುಂತಾದ ಸುಸಜ್ಜಿತ ಕ್ರೀಡಾಂಗಣಗಳಿವೆ.ಸ್ಕೇಟಿಂಗ್ ಹಾಗೂ ಸ್ವಿಮ್ಮಿಂಗ್ ಫೂಲ್ ಸೌಲಭ್ಯವೂ ಇದ್ದು,ಇವುಗಳಲ್ಲಿ ವಿಶೇಶ ತರಬೇತಿಯನ್ನು ನೀಡಲಾಗುತ್ತದೆ.ವಿಶಾಲವಾದ ಬಯಲು ರಂಗ ಮಂದಿರ(ಶ್ರೀ ಸತ್ಯಸಾಯಿ ಕಲಾಮಂದಿರ) ಹಾಗೂ ಪ್ರಾರ್ಥನಾ ಮಂದಿರಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ.ಅತ್ಯಂತ ಸುಸಜ್ಜಿತ ಕಟ್ಟಡ 'ಮೇಧಾ'ದಲ್ಲಿ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ವಿಶಾಲವಾದ ಗ್ರಂಥಾಲಯ ಹಾಗೂ ಕಂಪ್ಯೂಟರ್ ವ್ಯವಸ್ಥೆಯಿದೆ.ಎಲ್ಲಾ ಶಾಲಾ-ಕಾಲೇಜುಗಳಲ್ಲಿಯೂ ಪ್ರತ್ಯೇಕ ಪ್ರಯೋಗಾಲಯಗಳ ವ್ಯವಸ್ಥೆಯಿದೆ.ಆಸಕ್ತ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಕರ್ನಾಟಕ ಸಂಗೀತ,ಹಿಂದೂಸ್ಥಾನಿ ಸಂಗೀತ,ಕಂಪ್ಯೂಟರ್,ನಾಟಕ,ಯಕ್ಷಗಾನ,ನೃತ್ಯ,ಭರತನಾಟ್ಯ,ವೇದ ಮುಂತಾದ ತರಬೇತಿಗಳನ್ನು ಆಯಾ ಕ್ಷೇತ್ರದಲ್ಲಿ ನುರಿತ ಪರಿಣಿತರಿಂದ ಕೊಡಿಸಲಾಗುತ್ತದೆ.ಈ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಗೆ ಒತ್ತು ನೀಡಲಾಗುತ್ತದೆ. ವಿದ್ಯಾರ್ಥಿಗಳಿಗಾಗಿ ಸತ್ಯಸಾಯಿ ವಿಹಾರದಲ್ಲೇ ಒಂದು ಸ್ಟೇಶನರಿ ಅಂಗಡಿಯಿದ್ದು,ದಿನಬಳಕೆಯ ಎಲ್ಲಾ ವಸ್ತುಗಳೂ ದೊರೆಯುತ್ತದೆ.ಅದಕ್ಕೆ ತಾಗಿಕೊಂಡಂತೆಯೇ ಬಟ್ಟೆ ಅಂಗಡಿ ಹಾಗೂ ಕ್ಯಾಂಟೀನ್('ವಿಕಾಸ) ಇದೆ.ಇದರ ಜೊತೆಗೆ ಆಸ್ಪತ್ರೆಯೂ ಸಮೀಪದಲ್ಲೇ ಇರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.ಜೆರಾಕ್ಸ್ ಸೌಲಭ್ಯ ಹಾಸ್ಟೆಲಿನಲ್ಲೇ ಲಭ್ಯವಿದ್ದು S.T.D ಬೂತ್ ಕೂಡ ಇದೆ.ಇಲ್ಲಿರುವ ಫೋನನ್ನು ಬಳಸಿಕೊಂಡು ವಿದ್ಯಾರ್ಥಿಗಳು ಮನಗೆಗೆ ಫೋನ್ ಮಾಡಬಹುದು.ಮೊಬೈಲ್ ಸಹಿತ ಬೇರೆ ಯಾವುದೇ ಎಲಕ್ಟ್ರಾನಿಕ್ ವಸ್ತುಗಳನ್ನು ವಿದ್ಯಾರ್ಥಿಗಳು ಇಟ್ಟುಕೊಳ್ಳವಂತಿಲ್ಲ.


ಬಾಹ್ಯ ಸಂಪರ್ಕಗಳು ಬದಲಾಯಿಸಿ

  1. http://alikeonline.org/
  2. http://ssslst.org/
  3. http://sssset.edu.in/

ಉಲ್ಲೇಖಗಳು ಬದಲಾಯಿಸಿ

  1. http://www.saibaba.ws/discourses/2004/04Jan27.htm
  2. http://www.sathyasai.org/education/globaloverview/Chapter4_30Jun07.htm
  3. http://www.sathyasai.ca/images/stories/education/globaloverview/Appendix_30Jun07.pdf[ಶಾಶ್ವತವಾಗಿ ಮಡಿದ ಕೊಂಡಿ]
  4. http://www.icbse.com/schools/sri-satyasai-loka-seva-vidya-kendra/830010