ಶ್ರೀ ಚಂಪಕಧಾಮ ಸ್ವಾಮಿ ದೇವಾಲಯ, ನಾರಾಯಣಘಟ್ಟ

ಈ ದೇವಾಲಯವು ಕರ್ನಾಟಕದ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕು, ನಾರಾಯಣ ಘಟ್ಟ ಎಂಬ ಗ್ರಾಮದಲ್ಲಿದೆ.[೧][೨] ಈ ದೇವಾಲಯವು ಹೊಸೂರು ಮುಖ್ಯ ರಸ್ತೆಯ ಚಂದಾಪುರ ವೃತ್ತದಿಂದ ಆರು ಕಿ.ಮೀ.ದೂರದಲ್ಲಿ ಇದೆ.

ಇತಿಹಾಸ ಬದಲಾಯಿಸಿ

ಶ್ರೀರಾಮ ದೇವಾಲಯವೆಂದು ಕರೆಯಲ್ಪಡುವ ಶ್ರೀಭೂನೀಳಾ ಸಮೇತ ಚಲುವ ಚಂಪಕ ವರದರಾಜಸ್ವಾಮಿಯವರ ದೇವಾಲಯವು ಕರ್ನಾಟಕದ ಪುರಾತನ ದೇವಾಲಯವಾಗಿದೆ. ಈ ದೇವಾಲಯವು ೮ - ೯ ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆ. ಪ್ರಾಚ್ಯ ಸಂಶೋಧಕರಿಂದ ಇಲ್ಲಿ ದೊರೆತಿರುವ ಶಿಲಾ ಶಾಸನಗಳು ಹಾಗೂ ವೀರಗಲ್ಲು ಶಿಲೆಗಳ ಪರಿಶೀಲನೆ ಇಂದ ತಿಳಿದುಬಂದ ಮಾಹಿತಿಯೂ ಸಹಾ ಈ ದೇವಾಲಯವು ಚೋಳರ ಕಾಲದಲ್ಲಿ ನಿರ್ಮಿಸಿರಬಹುದೆಂಬುದಕ್ಕೆ ಒತ್ತು ನೀಡುತ್ತದೆ. ಈ ದೇವಾಲಯಕ್ಕೆ ಅಂಟಿಕೊಂಡಂತೆ ಇರುವ ಈಶ್ವರನ ಪುರಾತನ ದೇವಾಲಯವಿರುವುದರಿಂದ ಈ ದೇವಾಲಯವು ಚೋಳರ ಕಾಲದ್ದೆಂದು ತಿಳಿಯಲಾಗಿದೆ.

ಮೂರ್ತಿಗಳ ವಿವರ ಬದಲಾಯಿಸಿ

ಈ ದೇವಾಲಯದ ಮೂಲ ವಿಗ್ರಹಗಳು ಸಾಲಿಗ್ರಾಮ ಶಿಲೆ ಯಿಂದಾಗಿದ್ದು ಶ್ರೀಭೂನೀಳಾ ಸಮೇತ ವರದ ಹಸ್ತವಿರುವ ವರದರಾಜಸ್ವಾಮಿಯದ್ದಾಗಿರುತ್ತದೆ.

 
ಶ್ರೀ ಭೂನೀಳಾ ಸಮೇತ ಚಲುವ ಚಂಪಕ ವರದರಾಜಸ್ವಾಮಿ ದೇವಾಲಯ, ನಾರಾಯಣ ಘಟ್ಟ[೩]

ಇದರ ಜೊತೆಗೆ ಗಣಪತಿ, ಆಂಜನೇಯ, ಜಯವಿಜಯರು ಗರುಡನಾಗರಗಳ ವಿಗ್ರಹಗಳೂ ಇವೆ. ಈ ದೇವಾಲಯದ ಅವರಣ ದೊಳಗೆ ಒಂದು ಗರುಡಗಂಭ ಹಾಗೂ ಅವರಣದಿಂದಾಚೆಗೆ ಮತ್ತೊಂದು ಗರುಡಗಂಭವಿದೆ. ದೇವಾಲಯದ ಆವರಣದಲ್ಲಿ ನವಗ್ರಹಗಳ ಸನ್ನಿಧಿ ಇರುತ್ತದೆ.

ವಾಸ್ತು ಬದಲಾಯಿಸಿ

ದೇವಾಲಯದ ವಾಸ್ತು ಚೋಳರ ಕಾಲದಂತೆ ಇದ್ದು ವಿಶೇಷ ಕೆತ್ತನೆಗಳು ಇಲ್ಲ. ಗರ್ಭಗುಡಿ, ಸುಖನಾಶಿ ಮಂಟಪ, ನವರಂಗ ಮಂಟಪ, ಹಾಗೂ ವಿಸ್ತಾರದ ಪ್ರಾಕಾರವಿದೆ. ಈ ದೇವಾಲಯದ ಗರ್ಭಗುಡಿಯ ಮೇಲೆ ಏಕ ಕಳಸದಿಂದ ಕೂಡಿದ ವಿಮಾನ ಗೋಪುರವಿದೆ. ಶಿಥಿಲಗೊಂಡಿದ್ದ ಈ ದೇವಾಲಯವನ್ನು ಧರ್ಮಸ್ಥಳದ ಶ್ರೀಮಂಜುನಾಥಸ್ವಾಮಿ ದೇವಾಲಯದ ವತಿಯಿಂದ ನವೀಕರಿಸಲಾಯಿತು ಈ ದೇವಾಲಯಕ್ಕೆ ಉಪಯೋಗಿಸಿದ್ದ ಹಳೆಯ ಒರಟಾದ ಕಲ್ಲುಗಳನ್ನು ನುಣುಪಾಗಿಸಿ ಹಳೆಯ ಕಲ್ಲನ್ನೇ ಯಥಾವತ್ತಾಗಿ ಉಪಯೋಗಿಸಲಾಗಿದೆ. ಈ ಕಾರ್ಯವು ಸನ್ ೨೦೦೦ ಇಸವಿಯಲ್ಲಿ ಪೂರ್ಣಗೊಳಿಸಲಾಯಿತು. ಈ ದೇವಾಲಯದ ಪಶ್ಚಿಮ ದಿಕ್ಕಿನಲ್ಲಿ ಶಿಥಿಲವಾಗಿ ಮುಚ್ಚಿ ಹೋಗಿದ್ದ ಸುವರ್ಣಮುಖಿ ಕಲ್ಯಾಣಿಯನ್ನು ಪುನಃ ನಿರ್ಮಿಸಲಾಗಿದೆ. ಇಲ್ಲಿನ ದೇವಾಲಯದ ಸಮಿತಿಯವರು ಗ್ರಾಮಸ್ಥರ ಹಾಗೂ ಭಕ್ತಾಧಿಗಳ ಸಹಕಾರದೊಂದಿಗೆ ರಾಜಗೋಪುರವನ್ನು ನಿರ್ಮಿಸಲು ತೀಮಾನಿಸಿದ್ದಾರೆ.

ಪೂಜಾ ಕೈಂಕರ್ಯಗಳು ಬದಲಾಯಿಸಿ

ಈ ದೇವಾಲಯ ಹಾಗೂ ಪಕ್ಕದ ಈಶ್ವರ ದೇವಾಲಯದ ಪೂಜೆಗಳು ಸಾಂಗವಾಗಿ ನೆಡೆದು ಬರುತ್ತಿದೆ. ಈ ದೇವಾಲಯದ ಅರ್ಚಕರು ಪಾಂಚರಾತ್ರಾಗಮದ ರೀತ್ಯಾ ಪೂಜಾವಿಧಿಗಳನ್ನು ನೆಡೆಸುತ್ತಿದ್ದಾರೆ. ಇವರು ವಂಶ ಪಾರಂಪರ್ಯವಾಗಿ ಪೂಜೆ ಸಲ್ಲಿಸುತ್ತಿದ್ದು ಹಾಲಿ ಅರ್ಚಕರು ಇಪತ್ತೊಂದನೇ ತಲೆಮಾರಿನವರಾಗಿರುತ್ತಾರೆ.

ವಿಶೇಷ ಪೂಜಾದಿಗಳ ವಿವರ ಬದಲಾಯಿಸಿ

ಈ ದೇವಾಲಯದಲ್ಲಿ ಯುಗಾದಿ, ರಾಮನವಮಿ, ರಥಸಪ್ತಮಿ, ಶ್ರಾವಣಮಾಸದ ನಾಲ್ಕು ಶನಿವಾರಗಳಂದು ಉತ್ಸವಾದಿಗಳು ನಡೆಯುತ್ತದೆ. ಚೈತ್ರಶುದ್ಧ ಹುಣ್ಣಿಮೆಯಂದು ಬ್ರಹ್ಮ ರಥೋತ್ಸವದ ಕಾರ್ಯವು ಏಳು ದಿನದ ವಿವಿಧ ಸೇವೆಗಳಿಂದ ಕೂಡಿರುತ್ತದೆ. ಸೇವಾಕತ೯ರ ಹಾಗೂ ಅರ್ಚಕರ ಸಹಯೋಗದೊಂದಿಗೆ ಹಂಸವಾಹನ, ಶೇಷ ವಾಹನ, ಗಜವಾಹನ, ಗರುಡವಾಹನ, ಹನುಮಂತವಾಹನ, ಹಯವಾಹನದಲ್ಲಿ ಉತ್ಸವಾದಿಗಳನ್ನು ನೆಡೆಸುವುದರೊಂದಿಗೆ ಕಲ್ಯಾಣೋತ್ಸವ, ಪಲ್ಲಕ್ಕಿ ಉತ್ಸವ, ಪಾರ್ವಾಟೋತ್ಸವ, ವಸಂತೊತ್ಸವ, ಪುಷ್ಟೋತ್ಸವ, ಶಯನೋತ್ಸವ, ಮಹಾಭಿಷೇಕದೊಂದಿಗೆ ಈ ರಥೋತ್ಸವದ ಕಾರ್ಯಕ್ರಮಗಳು ಸಮಾಪ್ತವಾಗುತ್ತದೆ. ನವರಾತ್ರಿಯ ಸಮಯದಲ್ಲಿ ಹತ್ತು ದಿನಗಳೂ ದೇವರಿಗೆ ಶ್ರೀಮಹಾವಿಷ್ಣುವಿನ ದಶಾವತಾರದ ಅಲಂಕಾರ ಮಾಡಿ ಹತ್ತನೇ ದಿನ ಶಮೀ ವೃಕ್ಷದ ಪೂಜೆಯೊಂದಿಗೆ ಪೂರ್ಣಗೊಂಡು ಈ ಹತ್ತು ದಿನಗಳು ಆ ದಿನದ ಅವತಾರದ ಕಥಾ ಶ್ರವಣಗಳು ನಡೆಯುತ್ತದೆ. ದೀಪಾವಳಿಯ ಸಮಯದಲ್ಲಿ ವಿಷ್ಣು ದೀಪೋತ್ಸವವು ನೆಡೆಯುತ್ತದೆ.

ಘಟ್ಟ ತ್ರಯಗಳು ಬದಲಾಯಿಸಿ

ಘಟ್ಟ ತ್ರಯಗಳಲ್ಲಿ ಆದಿ - ನಾರಾಯಣ ಘಟ್ಟ, ಮಧ್ಯ- ಬನ್ನೇರು ಘಟ್ಟ ಅಂತ್ಯ - ಚುಂಚನಕಟ್ಟೆ ಎಂಬ ಪ್ರತೀತಿ ಇದೆ.[೪] ಈ ದೇವಾಲಯದ ದೇವರನ್ನು ಶ್ರೀರಾಮನೆಂದೂ ಕರೆಯುತ್ತಾರೆ. ಸುತ್ತಮುತ್ತಲಿನ ನೆರಾಟ ರೆಡ್ಡಿ ಜನಾಂಗಕ್ಕೆ ಈ ದೇವರು ಕುಲದೈವವಾಗಿದೆ. ಈ ದೇವಾಲಯ ಕರ್ನಾಟಕ ಸರ್ಕಾರ ಧಾಮಿ೯ಕ ಧತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ಶ್ರೀ ಭೂನೀಳಾ ಸಮೇತ ಚಲುವ ಚಂಪಕ ವರದರಾಜಸ್ವಾಮಿ ದೇವಾಲಯವು ಅನೇಕ ದಂತಕಥೆಗಳನ್ನು ಸಹಾ ಹೊಂದಿದೆ.

ಉಲ್ಲೇಖಗಳು ಬದಲಾಯಿಸಿ