ಶಾಂತಿನಾಥ ಸ್ವಾಮಿ ಬಸದಿ, ಪುತ್ತೂರು

ಸ್ಥಳ ಬದಲಾಯಿಸಿ

ಈ ಬಸದಿಯು ಪುತ್ತೂರು ತಾಲೂಕು ಪುತ್ತೂರು ನಗರದ ಮಧ್ಯಭಾಗದಲ್ಲಿದೆ.

ಮಾರ್ಗ ಬದಲಾಯಿಸಿ

೧೬ನೇ ತೀರ್ಥಂಕರರಾದ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿಯ ಬಸದಿಯ ಪಕ್ಕದಲ್ಲೇ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಇಂದ್ರನ ಮನೆ ಇದೆ. ಇದರ ಎದುರಿಗೆ ಪುತ್ತೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ. ಇದಕ್ಕೆ ಹತ್ತಿರವಾದ ಇನ್ನೊಂದು ಬಸದಿ ಎಂದರೆ ಸುಮಾರು ಏಳು ಕಿಲೋಮೀಟರ್ ದೂರದಲ್ಲಿರುವ ನರಿಮೊಗರು ಶ್ರೀ ಸುಮತಿನಾಥ ಬಸದಿ.

ಇತಿಹಾಸ ಬದಲಾಯಿಸಿ

ಈ ಬಸದಿಯು ಸುಮಾರು ೮೦೦ ವರ್ಷಗಳ ಹಿಂದೆ ಹೊಯ್ಸಳರ ಕಾಲದಲ್ಲಿ ಕಟ್ಟಲಾಗಿದ್ದು ೧೯೯೩ರ ಜನವರಿಯಲ್ಲಿ ಜೀರ್ಣೋದ್ಧಾರಗೊಂಡಿದೆ. ಈ ಬಸದಿಯ ಇಂದ್ರರು ಆದ ಶ್ರೀ ಸಂತೋಷ್ ಕುಮಾರ್ ಇಂದ್ರರ ದೊಡ್ಡಪ್ಪ ಶ್ರವಣಬೆಳಗೊಳಕ್ಕೆ ಹೋಗಿ ಶ್ರೀ ದೇಶಭೂಷಣ ಮುನಿಮಹಾರಾಜರಿಂದ ದೀಕ್ಷೆಯನ್ನು ಪಡೆದು ಅನಂತರ ಕ್ಷೇತ್ರದಲ್ಲಿ ವಾಸ್ತವ್ಯವಿದ್ದು ನಿರ್ವಾಣ ಮಾಡಿದರು.[೧]

ಶಿಲಾನ್ಯಾಸ ಬದಲಾಯಿಸಿ

ಇಲ್ಲಿ ಭಗವಾನ್ ಶ್ರೀ ಪುಷ್ಪದಂತ ಸ್ವಾಮಿಯನ್ನು ಮೂಲ ನಾಯಕನನ್ನಾಗಿ ಪೂಜಿಸಲಾಗುತ್ತದೆ.ಇದು ಮೂಡುಬಿದರೆಯ ಜೈನ ಮಠದ ಧಾರ್ಮಿಕ ವ್ಯಾಪ್ತಿಗೆ ಒಳಪಟ್ಟಿದೆ. ತೀರ್ಥಂಕರ ಮಂಟಪ ಮತ್ತು ಗರ್ಭಗುಡಿ ಶಿಲಾಮಯವಾಗಿದೆ. ಈ ಬಸದಿಗೆ ಮೇಗಿನ ನೆಲೆಯಿಲ್ಲ. ಇಲ್ಲಿ ಶ್ರೀ ಪದ್ಮಾವತಿ ಅಮ್ಮನವರ ಮೂರ್ತಿ ಇದ್ದು ನಿತ್ಯವೂ ಪೂಜೆ ನಡೆಯುತ್ತದೆ. ಬಸದಿಯನ್ನು ಪ್ರವೇಶಿಸುವಾಗ ಸಿಗುವ ಎರಡು ಬದಿಯಲ್ಲಿ ಗೋಪುರಗಳು ಸಿಗುತ್ತವೆ. ಈ ಬಸದಿಗೆ ಕಾರ್ಯಾಲಯ ಅಥವಾ ಮುನಿ ವಾಸದ ಕೊನೆಯಿಲ್ಲ. ಆದರೆ ದೇವ ಕೂಟದಲ್ಲಿ ಗಜಲಕ್ಷ್ಮೀ ಹಾಗೂ ಕೀರ್ತಿ ಮುಖವಿದೆ. ಈ ಬಸದಿಯ ಪ್ರಾರ್ಥನಾ ಮಂಟಪಕ್ಕೆ ಹತ್ತುವಲ್ಲಿ ಯಕ್ಷ, ಯಕ್ಷಿಯ ಆಕೃತಿಗಳಿವೆ. ದ್ವಾರಪಾಲಕರ ವರ್ಣಚಿತ್ರ ಅಥವಾ ಕಲ್ಲಿನ ಮೂರ್ತಿಗಳು ಇಲ್ಲಿ ಕಂಡುಬರುವುದಿಲ್ಲ. ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪವಿದ್ದು ಅದರಲ್ಲಿ ಜಯ ಘಂಟೆ ಜಾಗಟೆಯನ್ನು ತೂಗುಹಾಕಲಾಗಿದೆ. ಒಳಗಡೆ ಅಧೋಮುಖ ಕಮಲದ ಕೆತ್ತನೆಯಿದೆ. ಇದು ವಿಜಯನಗರದ ಶಿಲ್ಪಿ ಶೈಲಿಯ ಕೆತ್ತನೆಗಳನ್ನು ಒಳಗೊಂಡಿದೆ. ಪ್ರಾರ್ಥನಾ ಮಂಟಪದಿಂದ ಮುಂದುವರೆದು ತೀರ್ಥಂಕರ ಸ್ವಾಮಿಯ ಒಳಗೆ ಹೋಗುವ ಸಿಗುವ ಮಂಟಪವನ್ನು ತೀರ್ಥ ಮಂಟಪ ಎಂದು ಕರೆಯುತ್ತಾರೆ. ಗಂಧಕುಟಿಯ ತೀರ್ಥಂಕರ ಮಂಟಪವಿದ್ದು ಅದರಲ್ಲಿ ಶೃತ, ಗಣದರಪಾದಗಳ ಮೂರ್ತಿಗಳಿದ್ದು ಅವುಗಳಿಗೆ ನಿತ್ಯವೂ ಪೂಜೆ ನಡೆಯುತ್ತದೆ. ಇಲ್ಲಿ ಶುಕನಾಸಿ ಇದೆ.ಇಲ್ಲಿನ ಮೂಲ ಸ್ವಾಮಿಯ ಬಿಂಬವು ಕಪ್ಪು ಶಿಲೆಯಿಂದ ಮಾಡಲ್ಪಟ್ಟಿದ್ದು ಸುಮಾರು ಐದುವರೆ ಅಡಿ ಎತ್ತರವಾಗಿ ಖಡ್ಗಾಸನ ಭಂಗಿಯಲ್ಲಿದೆ.

ಪೂಜಾ ವಿಧಾನ ಬದಲಾಯಿಸಿ

ಬಸದಿಯಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಹೀಗೆ ಎರಡು ಹೊತ್ತು ಪೂಜೆ ನಡೆಯುತ್ತದೆ. ಇಲ್ಲಿ ಪದ್ಮಾವತಿ ದೇವಿಯೇ ಮುಖ್ಯ ಯಕ್ಷಿಯನ್ನಾಗಿ ಪೂಜಿಸುತ್ತಾರೆ. ಅಮ್ಮನವರ ಬಿಂಬವು ಉತ್ತರಕ್ಕೆ ಮುಖ ಮಾಡಿಕೊಂಡಿದ್ದು ಎಲ್ಲಾ ರೀತಿಯ ಅಲಂಕಾರವನ್ನು ಮಾಡಿ ಪೂಜಿಸಲಾಗುತ್ತದೆ. ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪ ಇದ್ದು ಹೊಂಬುಚುಚ್ಚದಂತೆ ಹೂವು ಹಾಕಿ ನೋಡುವ ಕ್ರಮವೂ ಇದೆ. ಇಲ್ಲಿನ ಮೂಲ ಬಿಂಬದಲ್ಲಿ ಅಸ್ಪಷ್ಟ ಹಳೆಗನ್ನಡ ಬರಹವಿದೆ. ಮೂಲ ಸ್ವಾಮಿಯ ಹಳೆಯ ಬಿಂಬದಲ್ಲಿ ಮಕರ ತೋರಣದ ಅಲಂಕಾರವಿದೆ. ಈಗಿನ ಹೊಸ ಮೂರ್ತಿಯ ಪ್ರಭಾವಳಿಯಲ್ಲಿ ಎಲೆ ಮತ್ತು ಹೂಗಳ ಅಲಂಕಾರವಿದೆ. ಇಲ್ಲಿ ಫೆಬ್ರವರಿ ತಿಂಗಳಿನ ೯ನೇ ದಿನ ಪಂಚಕಲ್ಯಾಣ ವಾರ್ಷಿಕೋತ್ಸವ ಹಾಗೂ ಪಂಚ ಪರ್ವಗಳು ನಡೆಯುತ್ತದೆ.

ಉಲ್ಲೇಖ ಬದಲಾಯಿಸಿ

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್. p. ‌೨೪೪-೨೪೫.