ಪೀಠಿಕೆ ಬದಲಾಯಿಸಿ

ಮಾನವನ ನಿತ್ಯದ ಕಾರ್ಯಗಳಲ್ಲಿ ವ್ಯವಹಾರವು ಅತಿ ಮಹತ್ವವಾದುದು.ವ್ಯಾಪಾರವು ಮಾನವನ ನಿತ್ಯದ ಚಟುವಟಿಕೆಗಳಲ್ಲಿ ಅತಿ ಮಹತ್ವದ ಸ್ಥಾನವನ್ನು ಪಡೆದಿದೆಯಲ್ಲದೇ ಮಾನವನ ಜಗತ್ತಿನ ಸುಖ-ಸಂತೋಷಗಳಿಗೆ ಮತ್ತು ಅಭಿವೃದ್ದಿಗೆ ಸಹಾಯಕವಾಗಿದೆ. ಈಗಿನ ದಿನಗಳಲ್ಲಿ ವ್ಯಾಪಾರದ ಕಾರ್ಯವು ಬಹಳಷ್ಟು ಕಠಿಣವಾಗುತ್ತಾ ಹೋಗುತ್ತಿದೆ.ಸಾಮಾನ್ಯ ಜೀವನದಲ್ಲಿ ವ್ಯವಹಾರವೆಂದರೆ ಮಾನವನು ಯಾವ ಕಾರ್ಯದಲ್ಲಿ ಮಗ್ನನಾಗಿರುತ್ತಾನೋ ಅದೇ ಕಾರ್ಯವಾಗಿರುತ್ತದೆ. ವ್ಯವಹಾರವೆಂಬ ಶಬ್ದವು ಸ್ಥಿತಿ ಸ್ಥಾಪಕವಾಗಿರುತ್ತದೆ. ಮಾನವನು ಭೂಮಿಯ ಅಡಿಯಿಂದ ಬೇರೆ ಬೇರೆ ತರಹದ ವಸ್ತುಗಳನ್ನು ಹುಡುಕಿ ತೆಗೆಯುತ್ತಾನೆ. ಅವುಗಳನ್ನು ತನಗೆ ಬೇಕಾದ ರೀತಿಯಲ್ಲಿ ಅಂದರೆ ಬೇರೆ ಬೇರೆ ಬಗೆಯ ಅಭಿರುಚಿಗನುಸರಿಸಿ ಪರಿವರ್ತಿಸಿಕೊಳ್ಳುತ್ತಾನೆ. ಬೇರೆ ಬೇರೆ ಯಂತ್ರೋಪಕರಣಗಳನ್ನು ತಯಾರಿಸುತ್ತಾನೆ. ಅವುಗಳ ಸಹಾಯದಿಂದ ಅನೇಕ ಬಗೆಯ ಸರಕುಗಳನ್ನು ತಯಾರಿಸುತ್ತೇವೆ. ಅವುಗಳನ್ನು ಸ್ಥಳದಿಂದ ಸ್ಥಳಕ್ಕೆ ಸಾಗಿಸುತ್ತಾನೆ. ಅವುಗಳನ್ನು ಕೆಡದಂತೆ ಸಂಗ್ರಹಿಸಿಡುತ್ತಾನೆ. ನಂತರ ಯಾರು ಅವುಗಳನ್ನು ಖರೀದಿಸಲಿಚ್ಚಿಸುತ್ತಾರೋ ಅವರಿಗೆ ತಲುಪಿಸುತ್ತಾನೆ. ಈ ಬಗೆಯ ಎಲ್ಲಾ ಕಾರ್ಯಗಳನ್ನು ವ್ಯವಹಾರ ಎಂಬ ಶಬ್ದದಲ್ಲಿ ಅಡಕವಾಗಿದೆ. ಸರಕುಗಳ ಉತ್ಪಾದನೆ ಮತ್ತು ಅವುಗಳ ಕೊಂಡುಕೊಳ್ಳುವಿಕೆ ಹಾಗೂ ಮಾರುವಿಕೆಯ ಮುಖಾಂತರ ಹಣಗಳಿಸುತ್ತಾನೆ. ಇವು ಮಾನವನ ಕಾರ್ಯಗಳಾಗಿವೆ.ಈ ಕಾರ್ಯಗಳ ಸಂಘಟನೆಯೇ ವ್ಯವಹಾರ ಸಂಘಟನೆ.ವ್ಯವಹಾರ ಸಂಘಟನೆಯು ಮಾನವನ ಕಾರ್ಯಕ್ರಮಗಳ ಒಂದು ಮುಖ್ಯವಾದ ಭಾಗದ ಅಭ್ಯಾಸದ ಶಾಖೆಯಾಗಿದೆ.

ನಾವು ಸರಕುಗಳನ್ನು ಕೊಂಡುಕೊಳ್ಳುತ್ತೇವೆ. ಅವುಗಳನ್ನು ಇತರರಿಗೆ ಮಾರಿ ಲಾಭಗಳಿಸಬೇಕೆಂಬ ಹಂಬಲದಿಂದ ನಾವು ಅವುಗಳನ್ನು ಕೊಂಡುಕೊಂಡರೆ ಆ ಕಾರ್ಯಕ್ಕೆ ವ್ಯಾಪಾರವೆನ್ನುತ್ತಾರೆ. ನಾವು ಕೇವಲ ನಮ್ಮ ಉಪಯೋಗಕ್ಕೋಸ್ಕರ ಸರಕುಗಳನ್ನು ಕೊಂಡುಕೊಂಡರೆ ಅಥವಾ ಉತ್ಪಾದಿಸಿದರೆ ಅದು ವ್ಯವಹಾರಿ ಕಾರ್ಯಕ್ರಮವಾಗಿರದೇ, ಆರ್ಥಿಕ ಚಟುವಟಿಕೆಯಾಗಿರುತ್ತದೆ. ಈ ರೀತಿಯಾಗಿ ಮಾರುವ ಧೋರಣೆಯು ವ್ಯವಹಾರಿ ಕಾರ್ಯವನ್ನು ಆರ್ಥಿಕ ಕಾರ್ಯದಿಂದ ಬೇರ್ಪಡಿಸಿದೆ.ವ್ಯಾಪಾರದಿಂದ ಎರಡು ಪಂಗಡದವರಿಗೂ ಅಂದರೆ ಮಾರುವವರಿಗೆ ಮತ್ತು ಕೊಳ್ಳುವವರಿಗೂ ಲಾಭವಾಗುತ್ತದೆ.

ವ್ಯಾಪಾರದ ವ್ಯಾಖೆ ಬದಲಾಯಿಸಿ

ಪೀಟರ್ ಸನ್ ಮತ್ತು ಫ಼್ಲೋಮನ್ ಎಂಬುವರು ಹೇಳಿದಂತೆ, " ಬೇರೆ ಬೇರೆ ಜನರು ಒಂದುಗೂಡಿ ಸರಕುಗಳನ್ನು ಇಬ್ಬರಿಗೂ ಪರಸ್ಪರ ಲಾಭವಾಗುವಂತೆ ವಿನಿಮಯ ಮಾಡಿಕೊಳ್ಳುವ ಚಟುವಟಿಕೆಯೇ ವ್ಯವಹಾರವು".ಕೇವಲ ಒಂದುಸಲ ಖರೀದಿಸಿ,ಮಾರಾಟ ಮಾಡಿದರೆ ಅದಕ್ಕೆ ವ್ಯವಹಾರವೆನ್ನುವುದಿಲ್ಲ. ನಿತ್ಯವು ಮಾರುವ ಮತ್ತು ಖರೀದಿಸುವ ಚಟುವಟಿಕೆಗಳಿಗೇ ವ್ಯಾಪಾರವೆನ್ನುತ್ತಾರೆ.

ವ್ಯವಹಾರವು ವಿಶಾಲವಾದ ಅರ್ಥವನ್ನು ಹೊಂದಿದೆ.ಅದರಲ್ಲಿ ವ್ಯಾಪಾರ, ವಾಣಿಜ್ಯ, ಮತ್ತು ಉದ್ದಿಮೆಗಳು ಅಡಕವಾಗಿರುತ್ತವೆ.ಮಾರುವ ಮತ್ತು ಕೊಳ್ಳುವ ಕಾರ್ಯದಲ್ಲಿ ಲೀನವಾಗಿರುತ್ತದೆ.ವಾಣಿಜ್ಯದಲ್ಲಿ ಮಾರುವ ಮತ್ತು ಕೊಳ್ಳುವ ಕಾರ್ಯಗಳಷ್ಟೇ ಅಲ್ಲದೇ ಅದಕ್ಕೆ ಸಹಾಯಕವಾಗಿರುವ ಇತರ ಕಾರ್ಯಗಳೂ ಕೂಡಿರುತ್ತವೆ. ಉತ್ಪಾದಿಸಲ್ಪಟ್ಟ ಸರಕುಗಳನ್ನು ಉಪಭೋಗದ ಸ್ಥಳಗಳಿಗೆ ಸಾಗಿಸುವುದು ವಾಣಿಜ್ಯದ ಕಾರ್ಯವಾಗಿರುತ್ತದೆ.ಸರಕುಗಳನ್ನು ಉತ್ಪಾದನಾ ಸ್ಥಳದಿಂದ ಸಂಗ್ರಹಿಸಿ, ಅವುಗಳನ್ನು ಅವುಗಳ ಉಪಭೋಗದ ಸ್ಥಳಗಳಿಗೆ ತಲುಪಿಸಿದಾಗ ವಾಣಿಜ್ಯದ ಕಾರ್ಯವು ಪೂರ್ಣಗೊಳ್ಳುತ್ತದೆ.ತನ್ನ ಕಾರ್ಯವನ್ನು ಪೂರ್ಣಗೊಳಿಸುವಲ್ಲಿ ವಾಣಿಜ್ಯವು ಸರಕುಗಳಿಗೆ ಬೇರೆ ಬೇರೆ ರೀತಿಯ ಉಪಯುಕ್ತತೆಗಳನ್ನು ಒದಗಿಸುತ್ತದೆಯಲ್ಲದೇ ಮಾರುವ, ಕೊಳ್ಳುವ, ಸಾರಿಗೆ, ಸಂಗ್ರಹಣೆ, ಹಣಕಾಸು, ಪ್ರಮಾಣೀಕರಣ, ವರ್ಗೀಕರಣ ಮುಂತಾದ ಅನೇಕ ಬಗೆಯ ತೊಂದರೆಗಳನ್ನು ಹೋಗಲಾಡಿಸಿ, ಸರಕುಗಳು ಉತ್ಪಾದಕನಿಂದ ಗ್ರಾಹಕನಿಗೆ ಸುಲಭವಾಗಿ ತಲುಪುವಂತೆ ಮಾಡುತ್ತದೆ.ವಾಣಿಜ್ಯವು ಸರಕುಗಳಿಗೆ ಸಮಯೋಪಯುಕ್ತತೆ, ಸ್ಥಳೋಪಯುಕ್ತತೆ, ಮತ್ತು ಸ್ವಾಮಿಯೋಪಯುಕ್ತತೆ ಯನ್ನು ಒದಗಿಸಿಕೊಡುತ್ತದೆ.ಒಟ್ಟಿನಲ್ಲಿ ಸರಕುಗಳು ಉತ್ಪಾದಿಸಲ್ಪಟ್ಟ ಮೇಲೆ ಅವುಗಳನ್ನು ಗ್ರಾಹಕರಿಗೆ ಅಥವಾ ಬಳಕೆದಾರರಿಗೆ ತಲುಪಿಸುವುದು ವಾಣಿಜ್ಯದ ಕಾರ್ಯವಾಗಿದೆ.ಆದರೆ ಉದ್ದಿಮೆಯೆಂದರೆ, ಸರಕುಗಳ ಉತ್ಪಾದನೆಗೆ ಮಾತ್ರ ಸಂಬಂದಿಸಿರುತ್ತದೆ. ಸರಕುಗಳನ್ನು ಉತ್ಪಾದಿಸುವುದು ಉದ್ದಿಮೆಯ ಕಾರ್ಯವಾಗಿದೆ.

ಉದ್ದಿಮೆಯು ಸರಕುಗಳಿಗೆ ಆಕಾರೋಪಯುಕ್ತತೆಯನ್ನು ಒದಗಿಸುತ್ತದೆ. ಕಚ್ಚಾ ಸರಕುಗಳನ್ನು ತೆಗೆದುಕೊಂಡು ಅವುಗಳನ್ನು ಸಿದ್ಧಮಾಡುವುದು ಉದ್ದಿಮೆಯ ಕಾರ್ಯವಾಗಿದೆ.ಹೀಗೆ ಸರಕುಗಳನ್ನು ಉತ್ಪಾದಿಸಬೇಕಾದರೆ ಉದ್ದಿಮೆಯು ಮಾನವರ ಸಹಾಯವನ್ನು ಒಳಗೊಂಡಿದೆ. ಹೀಗೆ ವಾಣಿಜ್ಯ ಹಾಗೂ ಉದ್ದಿಮೆಗಳನ್ನು ಕೂಡಿಕೊಂಡಿವದೇ ವ್ಯವಹಾರವು.

೧)ವ್ಯವಹಾರವು ಉತ್ಪಾದನೆಯಾಗಿರಬಹುದು.

೨)ವಿಮೆಯಾಗಿರಬಹುದು.

೩)ಸಾರಿಗೆಯಾಗಿರಬಹುದು.

೪)ಬ್ಯಾಂಕಿಂಗ್ ಆಗಿರಬಹುದು.

ಅದು ಸರಕುಗಳನ್ನು ಒಳಗೊಂಡಿರ ಬೇಕೆಂದಿಲ್ಲ ಸೇವೆಗಳನ್ನು ಕೂಡ ಒದಗಿಸಬಹುದು. ಉದಾಹರಣೆಗೆ:ಚಲನಚಿತ್ರ ಮಂದಿರಗಳು, ಹೋಟೆಲುಗಳು,ಇತ್ಯಾದಿ ವ್ಯವಹಾರಗಳ ಉತ್ತಮ ಉದಾಹರಣೆಯಾಗಿದೆ.

ವ್ಯವಹಾರ ಮತ್ತು ವೃತ್ತಿ ಬದಲಾಯಿಸಿ

ವ್ಯವಹಾರವೆಂದರೆ ವೃತ್ತಿಯಲ್ಲ,ವೃತ್ತಿ ಮತ್ತು ವ್ಯವಹಾರಗಳಲ್ಲಿ ಬಹಳಷ್ಟು ವ್ಯತ್ಯಾಸವಿದೆ. ವೃತ್ತಿ ಮಾಡುವವರು ಕೂಡ ಹಣವನ್ನು ತೆಗೆದುಕೊಂಡು ತಮ್ಮ ಸೇವೆಗಳನ್ನು ಸಲ್ಲಿಸುತ್ತಾರೆ.ಆದಾಗ್ಯು ಕೂಡ ಅವರದು ವ್ಯವಹಾರವಲ್ಲ.ಉದಾಹರಣೆಗೆ:ಡಾಕ್ಟರರು, ವಕೀಲರು,ಲೆಕ್ಕತಪಾಸಿಗಳು ತಮ್ಮ ಸೇವೆಗಳನ್ನು ಸಲ್ಲಿಸುತ್ತಾರೆ.ಅವರದು ವೃತ್ತಿ.ವ್ಯವಹಾರವಲ್ಲ. ವೃತ್ತಿ ಮಾಡುವವರಿಗೆ ಶಿಕ್ಷಣದ ಅವಶ್ಯಕತೆ ಇರುತ್ತದೆ. ವೃತ್ತಿನಿರುತ ಜನರು ತಮ್ಮದೇ ಆದ ಸಂಘಗಳನ್ನು ಹೊಂದಿರುತ್ತಾರೆ.ಡಾಕ್ಟರರು ಜ್ವರದಿಂದ ಬಳಲುತ್ತಿದ್ದ ಜನರಿಗೆ ತಮ್ಮ ಸೇವೆಯನ್ನು ಸಲ್ಲಿಸಿ ಅವರನ್ನು ಗುಣಪಡಿಸುತ್ತಾರೆ.ಇದಕ್ಕಾಗೆ ಅವರು ಹಣವನ್ನು ತೆಗೆದುಕೊಳ್ಳುತ್ತಾರೆ. ಆದರೆ ಅವರದು ವ್ಯವಹಾರವಲ್ಲ. ಅದು ವೃತ್ತಿ.ಅವರ ಇಡೀ ಜೀವನವೇ ಅವರ ಕೆಲಸದಲ್ಲಿರುತ್ತದೆ.

ಸಂಘಟನೆ ಬದಲಾಯಿಸಿ

ಸಂಘಟನೆಯೆಂದರೆ ಎಲ್ಲಾ ಘಟಕಗಳನ್ನು ಒಂದೆಡೆಗೆ ತರುವ ಕಾರ್ಯವು. ಉತ್ಪಾದನೆಯನ್ನು ನಡೆಸಲು ಬೇಕಾದ ಎಲ್ಲಾ ಘಟಕಗಳನ್ನು ಒಂದೆಡೆ ಕೂಡಿಸಿ, ಅವುಗಳಿಂದ ನಮಗೆ ಬೇಕಾದ ಕಾರ್ಯವನ್ನು ಕೈಗೊಳ್ಳುವುದೇ ಸಂಘಟನೆಯು.ಮೊದಲೇ ನಿರ್ಧರಿಸಲ್ಪಟ್ಟ ಕಾರ್ಯವನ್ನು ಸಂಪೂರ್ಣಗೊಳಿಸುವುದಕ್ಕಾಗಿ, ಅದಕ್ಕೆ ಅವಶ್ಯವಿರುವ ಘಟಕಗಳನ್ನು ಕೂಡಿಸಿ, ಕಾರ್ಯವನ್ನು ಪೂರ್ಣಗೊಳಿಸುವುದೇ ಸಂಘಟನೆಯು. ಆದ್ದರಿಂದ ವ್ಯವಹಾರ ಸಂಘಟನೆಯೆಂದರೆ ಉತ್ಪಾದನೆಯ, ಸಾರಿಗೆಯ ಮತ್ತು ಸೇವೆಯನ್ನು ಸಲ್ಲಿಸುವ ಸಂಸ್ಥೆಗಳನ್ನು ಸ್ಥಾಪಿಸುವುದು ಮತ್ತು ಅವುಗಳ ಆಡಳಿತವನ್ನು ಸುಗಮವಾಗಿ ನಡೆಯಿಸಿಕೊಂಡು ಹೋಗುವುದು ಆಗಿರುತ್ತದೆ.ವ್ಯವಹಾಕರಕ್ಕೆ ಸಂಬಂಧಪಟ್ಟ ಎಲ್ಲಾ ಘಟಕಗಳನ್ನು ಕೂಡಿಸಿ ಅವುಗಳಲ್ಲಿ ಸಂಯೋಜನೆಯನ್ನುಂಟು ಮಾಡಿ, ಅವುಗಳಿಂದ ವ್ಯವಹಾರವು ಸುಗಮವಾಗಿ ನಡೆಯುವಂತೆ ಮಾಡುವುದು ವ್ಯವಹಾರ ಸಂಘಟನೆಯಾಗಿರುತ್ತದೆ. ಯಾವುದೇ ಒಂದು ಕಾರ್ಯವನ್ನು ಸ್ಥಾಪಿಸುವುದರಿಂದ ಹಿಡಿದು ಅದರ ಕಾರ್ಯಕ್ರಮ ಸುಗಮವಾಗಿ ನಡೆಯುವಂತೆ ನೋಡಿಕೊಂಡು ಹೋಗುವ ಮಹತ್ವದ ಜವಾಬ್ದಾರಿಯು ವ್ಯವಹಾರ ಸಂಘಟನೆಯಾಗಿದೆ.ಒಟ್ಟಿನಲ್ಲಿ ವ್ಯವಹಾರ ಸಂಘಟನೆಯ ಕಾರ್ಯವು ಬಹಳ ಮಹತ್ವದಾಗಿರುತ್ತದೆ.ಪೀಟರ್ ಸನ್ ಫ಼್ಲೋಮನ್ ರು ಹೇಳಿದಂತೆ,"ಒಂದು ವ್ಯವಹಾರಕ್ಕೆ ಬೇಕಾಗುವ ಜನರನ್ನು ಒಂದುಗೂಡಿಸಿ,ಅವರಿಗೆ ಬೇಕಾಗುವ ಸೌಕರ್ಯವನ್ನು ಒದಗಿಸಿಕೊಟ್ಟು, ಅವರಿಗೆ ಮಾಡಬೇಕಾದ ಕಾರ್ಯಗಳನ್ನು ಹಂಚಿಕೊಟ್ಟು, ಅವರಿಂದ ಯೋಗ್ಯ ರೀತಿಯಲ್ಲಿ ಕಾರ್ಯವನ್ನು ತೆಗೆದುಕೊಳ್ಳಬೇಕಾದ ಕಾರ್ಯಕ್ಕೆ ವ್ಯವಹಾರ ಸಂಘಟನೆಯೆನ್ನುತ್ತಾರೆ.ಹೀಗೆ ಮಾಡಿಸಲ್ಪಟ್ಟ ಕಾರ್ಯಗಳು ಸಮರ್ಥವಾಗಿಯೂ, ಮಿತವಾಗಿಯೂ ಮತ್ತು ಯೋಗ್ಯರೀತಿಯಿಂದಲೂ ಆಗಿರಬೇಕು".ಲಭ್ಯವಿದ್ದ ಸರಕುಗಳಿಂದಲೇ ಮತ್ತು ಲಭ್ಯವಿದ್ದಷ್ಟು ಜನರಿಂದಲೇ ಅತಿ ಹೆಚ್ಚು ಪ್ರಯೋಜನಕರವಾದ ಕಾರ್ಯಗಳನ್ನು ತೆಗೆದುಕೊಳ್ಳುವುದು ಯೋಗ್ಯ ಸಂಘಟನೆಯ ಲಕ್ಷಣವಾಗಿರುತ್ತದೆ.ಆದ್ದರಿಂದ ವ್ಯವಹಾರದ ಧ್ಯೇಯ ಧೋರಣೆಗಳ ಮತ್ತು ಸೂತ್ರಗಳ ಕಾರ್ಯಗಳ ಮಧ್ಯೆ ಐಕ್ಯತೆಯನ್ನು ಮತ್ತು ಏಕಸಾಮ್ಯವನ್ನು ಸಾಧಿಸಬೇಕಾದುದು ವ್ಯವಹಾರ ಸಂಘಟನೆಯ ಮುಖ್ಯ ಕಾರ್ಯವಾಗಿದೆ.ಇದರಿಂದ ವ್ಯವಹಾರ ಪ್ರಗತಿಯನ್ನು ಸಾಧಿಸಲು ಅನುಕೂಲವಾಗುತ್ತದೆ. ಡಬ್ಲ್ಯೂ.ಎಚ್.ನ್ಯೂಮನ್ ರ ವ್ಯಾಖೆಯನ್ನು ಸ್ಮರಿಸುವುದು ಸೂಕ್ತವೆನಿಸುತ್ತದೆ.ನ್ಯೂಮನ್ ರ ಪ್ರಾಕಾರ "ವ್ಯವಹಾರ ಸಂಘಟನೆಯೆಂದರೆ ವ್ಯಾಪಾರ, ವಾಣಿಜ್ಯ ಮತ್ತು ಉದ್ದಿಮೆಗಳು ಸಾಧನಗಳ ಮಧ್ಯೆ ಸಹಕಾರವನ್ನು ಉಂಟುಮಾಡುವ ಕಲೆಯು.

ವ್ಯವಹಾರದ ಧ್ಯೇಯಗಳು ಬದಲಾಯಿಸಿ

ಮಾನವನ ಇತರ ಕಾರ್ಯಗಳಂತೆ, ವ್ಯವಹಾರವೂ ಕೂಡ ತನ್ನದೇ ಆದ ಧ್ಯೇಯ ಧೋರಣೆಗಳನ್ನು ಹೊಂದಿದೆ. ಇ.ಎಫ಼್.ಎಲ್. ಬ್ರೆಚ್ ರು ವ್ಯವಹಾರದ ಪ್ರಮುಖ ಧೋರಣೆಗಳನ್ನು ಈ ರೀತಿಯಲ್ಲಿ ವಿವರಿಸುತ್ತಾರೆ.

೧)ಬಂಡವಾಳಿನ ಮೇಲೆ ಲಾಭವನ್ನು ಗಳಿಸುವುದು.

೨)ಸಮಾಜದ ಜನರಿಗೆ ಉದ್ಯೋಗವಕಾಶಗಳನ್ನು ಕಲ್ಪಿಸುವುದು.

೩)ಜನರಿಗೆ ಅವಶ್ಯವಿದ್ದ ಸರಕುಗಳನ್ನು ಉತ್ಪಾದಿಸುವುದು ಮತ್ತು ಅವುಗಳನ್ನು ಸಾಗಿಸುವುದು.

೪)ಉದ್ಯೋಗವಿಲ್ಲದವರಿಗೆ ಸಾಮಾಜಿಕ ಸೌಖ್ಯತೆಯನ್ನು ಒದಗಿಸಿಕೊಡುವುದು.

೫)ಕೆಲಸದ ಮಹತ್ವ ಅರಿತುಕೊಳ್ಳುವುದು.

ವ್ಯವಹಾರದ ಧೋರಣೆಗಳು ಬದಲಾಯಿಸಿ

೧)ಆರ್ಥಿಕ ೨)ಸಾಮಾಜಿಕ ೩)ಮಾನವೀಯ.

ಆರ್ಥಿಕ ಧೋರಣೆಗಳು ಬದಲಾಯಿಸಿ

ವ್ಯವಹಾರ ಚಟುವಟಿಕೆಯ ಪ್ರಪ್ರಥಮವಾದ ಧ್ಯೇಯ ಧೋರಣೆಯೆಂದರೆ ಆರ್ಥಿಕ ಧೋರಣೆಯು.ಅಂದರೆ ಪ್ರತಿಯೊಂದು ವ್ಯವಹಾರದ ಧ್ಯೇಯವು ಲಾಭ ಗಳಿಸುವುದೇ ಆಗಿರುತ್ತದೆ.ಮನುಷ್ಯನು ತಾನು ಜೀವಿಸಿರುವುದಕ್ಕಾಗಿ,ಲಾಭವನ್ನು ಗಳಿಸಲಿಚ್ಛಿಸುತ್ತಾನೆ.ವುಡ್ರೋ ನಿಲ್ಸನ್ ರ ಪ್ರಕಾರ "ಯಾವುದೇ ಒಬ್ಬ ಮನುಷ್ಯನ ಪ್ರಾರ್ಥನೆಯನ್ನು ಕೇಳಿರಿ ಅದು ದಿನನಿತ್ಯದ ಆಹಾರಕ್ಕಾಗಿ ಇರುತ್ತದೆ. ಹಸಿದ ಹೊಟ್ಟೆಯನ್ನಿಟ್ಟುಕೊಂಡು ಯಾವನೂ ದೇವರನ್ನು ಪ್ರಾರ್ಥಿಸಲಾರ ಮತ್ತು ಇತರರನ್ನು ಪ್ರೀತಿಸಲಾರ."

ಮಾನವನು ಯಾವುದೇ ವ್ಯವಹಾರವನ್ನು ಮಾಡಬೇಕಾದರೆ ಲಾಭದ ಆಶೆಗಾಗಿಯೇ ಮಾಡುತ್ತಾನೆ. ಲಾಭದ ಆಶೆಯಿಲ್ಲದೇ ಯಾರು ವ್ಯವಹಾರವನ್ನು ಮಾಡುವುದಿಲ್ಲ. ಆಡಳಿತದ ಸಹಾಯದಿಂದ ಆರ್ಥಿಕ ಚಟುವಟಿಕೆಗೆ ಬೇಕಾದ ಸಾಧನಗಳನ್ನು ಅಂದರೆ ಭೂಮಿ, ಶಕ್ತಿ ಮತ್ತು ಬಂಡವಾಳವನ್ನು ಒಂದುಗೂಡಿಸಿ, ಅವುಗಳ ಸಹಾಯದಿಂದ ಲಾಭವನ್ನು ಗಳಿಸಬಹುದು. ಲಾಭದ ಪ್ರಮಾಣದ ಆಡಳಿತವನ್ನು ಬಹುಮಟ್ಟಿಗೆ ಅವಲಂಬಿಸಿರುತ್ತದೆ. ನಾವು ಲಾಭಗಳನ್ನು ಗಳಿಸಬೇಕಾದರೆ ಶ್ರಮಪಡಬೇಕು. ವ್ಯವಹಾರವನ್ನು ಸ್ಥಾಪಿಸಿ ಅದರಿಂದ ಉಂಟಾಗುವ ನಷ್ಟ ಹಾನಿಯನ್ನು ಎದುರಿಸಲು ಸಿದ್ಧವಾಗಿರಬೇಕು. ಅಂದರೆ ಮಾತ್ರ ವ್ಯವಹಾರವನ್ನು ನಡೆಯಿಸಿಕೊಂಡು ಹೋಗಲು ಸಾಧ್ಯ.ಇಲ್ಲದಿದ್ದರೆ, ಉತ್ಪಾದನೆಯ ಸಾಮರ್ಥ್ಯವನ್ನು ನಾಶಪಡಿಸಿದಂತಾಗುತ್ತದೆ.ಆದ್ದರಿಂದ ನಷ್ಟ ಭಯಕ್ಕೆ ತಕ್ಕಂತೆ ಅಥವಾ ಅದಕ್ಕನುಸಾರವಾಗಿ ಲಾಭವನ್ನು ಪಡೆಯಬೇಕು. ಈ ಲಾಭವು ಒಂದು ಸಂಸ್ಥೆಯ ಅಥವಾ ಉದ್ದಿಮೆಯ ಅಥವಾ ವ್ಯವಹಾರದ ಅಸ್ತಿತ್ವಕ್ಕೆ ಅಡಿಗಲ್ಲಾಗಿರುತ್ತದೆಯಲ್ಲದೇ ಸಮಾಜದ ಅಸ್ತಿತ್ವಕ್ಕೆ ಕೂಡ ನಾಂದಿಯಾಗಿರುತ್ತದೆ.

ಸಾಮಾಜಿಕ ಧ್ಯೇಯ ಬದಲಾಯಿಸಿ

ವ್ಯವಹಾರದ ಪ್ರ-ಪ್ರಥಮ ಧ್ಯೇಯ ಧೋರಣೆಯೆಂದರೆ ಲಾಭ ಗಳಿಸುವುದೇ ಆಗಿರುತ್ತದೆ.ಆದಾಗ್ಯೂ ಕೂಡ ಈ ಲಾಭಗಳಿಕೆಗೆ ಮಿತಿಯಿಲ್ಲವೆಂದಿಲ್ಲ. ಲಾಭಗಳಿಕೆಯೆಂದರೆ, ಅದು ಕೇವಲ ಇತರ ಅಂಶಗಳನ್ನು ಬದಿಗೊತ್ತಿ ಲಾಭವನ್ನು ಗಳಿಸಬೇಕೆಂದಿಲ್ಲ. ವ್ಯವಹಾರವು ನಿರ್ಜನ ಪ್ರದೇಶದಲ್ಲಿ ನಡೆಯಲಾರದು. ಆದ್ದರಿಂದ ಅದು ಕೇವಲ ಲಾಭಗಳಿಕೆಯಿಂದ ಮುಂದುವರೆಯಲಾರದು.ವ್ಯವಹಾರವು ಸಮಾಜದಲ್ಲಿ ಅಸ್ತಿತ್ವದಲ್ಲಿರುವುದರಿಂದ ಸಮಾಜವು ಅದರ ಲಾಭಗಳಿಕೆಯ ಮೇಲೆ ಮಿತಿಯನ್ನು ಹೇರಿದೆ. ವ್ಯವಹಾರವು ಸಮಾಜದಲ್ಲಿ ಮತ್ತು ಸಮಾಜದ ಒಂದು ಅಂಗವಾಗಿ ಬೆಳೆಯುವುದರಿಂದ, ಅದು ಸಮಾಜವನ್ನು ಮತ್ತು ಅದರ ಸದಸ್ಯರನ್ನು ಬದಿಗೊತ್ತಿ ಲಾಭವನ್ನು ಗಳಿಸಲಾರದು. ಸ್ವತಂತ್ರ ವ್ಯವಹಾರಗಳಲ್ಲಿಯೂ ಕೂಡ, ಆರ್ಥಿಕ ಪೈಪೋಟಿಯಿಂದ,ಸಾಮಾಜಿಕ ಒತ್ತಡದಿಂದ,ರಾಜಕೀಯ ಕಾರ್ಯಗಳಿಂದ ಇಲ್ಲವೇ ಕಾನೂನಿನ ಸಹಾಯದಿಂದ ಲಾಭಗಳಿಕೆಯನ್ನು ಕಡಿಮೆಮಾಡಬಹುದು. ಇಲ್ಲವೇ ಹೋಗಲಾಡಿಸಹುದು. ಉದಾಹರಣೆಗಾಗಿ ,ಸರಕಾರವು ಒಂದು ಸಂಸ್ಥೆಗೆ ಒಳ್ಳೆಯ ಗುಣಮಟ್ಟದ ಸರಕುಗಳನ್ನೇ ಉತ್ಪಾದಿಸಬೇಕೆಂದೂ ಮತ್ತು ಅವುಗಳನ್ನು ನ್ಯಾಯವಾದ ಬೆಲೆಗೆ ಮಾರಬೇಕೆಂದೂ ಆದೇಶವನ್ನಿತ್ತು. ಅದರ ಲಾಭಗಳಿಕೆಯನ್ನು ನಿಯಂತ್ರಣ ಬೆಲೆಗೆ ಮಾರಬೇಕೆಂದೂ ಆದೇಶವನ್ನಿತ್ತು.ಅದರ ಲಾಭಗಳಿಕೆಯನ್ನು ನಿಯಂತ್ರಣದಲ್ಲಿಡಬಹುದು.ಕೆಲಸಗಾರರಿಗೆ ಯೋಗ್ಯ ರೀತಿಯಲ್ಲಿ ಸಂಬಳ ಕೊಡುವಂತೆಯೂ ಅದು ಕೇಳಿಕೊಳ್ಳಬಹುದು. ಹೇರಳವಾಗಿ ಕರವನ್ನು ಹೇರವ ಮೂಲಕವೂ ಕೂಡ ಸರಕಾರವು ಲಾಭಗಳೆಕೆಯನ್ನು ನಿಯಂತ್ರಣದಲಿಡಬಹುದು.ಇವೆಲ್ಲವುಗಳಿಂದ ಲಾಭಗಳಿಕೆಯನ್ನು ನಿಯಂತ್ರಣದಲ್ಲಿಡುವಲ್ಲಿ ಆರ್ಥಿಕ ಪೈಪೋಟಿಯೇ ಹೆಚ್ಚುತ್ತದೆ.

ಮಾನನೀಯ ಧ್ಯೇಯ ಬದಲಾಯಿಸಿ

ಮಾನವೀಯ ಧ್ಯೇಯವು ಸಾಮಾಜಿಕ ಧ್ಯೇಯದ ಒಂದು ಭಾಗವಾಗಿದೆ. ಆದರೂ ಕೂಡ ಇದರ ಮಹತ್ವವು ಹೆಚ್ಚಾಗಿದೆ.ಈ ಧ್ಯೇಯವು ವ್ಯವಹಾರೀ ಸಂಸ್ಥೆಯ ಸಿಬ್ಬಂದಿ ವರ್ಗದವರಿಗೆ ನೇರವಾಗಿ ಸಂಬಂದಿಸಿರುತ್ತದೆ. ಸಿಬ್ಬಂದಿ ವರ್ಗದವರನ್ನು ಕೂಡ ಮಾನವೀಯ ದೃಷ್ಟಿಯಿಂದ ನೋಡಿಕೊಳ್ಳಬೇಕು. ಅವರಲ್ಲಿ ಒಳ್ಳೆಯ ನೈತಿಕತೆಯನ್ನು ತುಂಬಬೇಕಲ್ಲದೇ ಸಂಸ್ಥೆಯು ತಮ್ಮದೇ ಎಂಬ ಭಾವನೆಯನ್ನು ಅವರಲ್ಲಿ ಬೆಳೆಯಿಸಬೇಕು, ಇದೇ ಈ ಧ್ಯೇಯದ ಗುರಿ.ವ್ಯವಹಾರವೆಂದರೆ ಕಲ್ಲು ಹಾಗೂ ಮಣ್ಣಿನಿಂದ ಮಾಡಲ್ಪಟ್ಟದ್ದಾಗಿರುವುದಿಲ್ಲ.ಅದು ಮಾನವರನ್ನೊಳಗೊಂಡಿರುತ್ತದೆ.ಸಿಬ್ಬಂದಿ ವರ್ಗದವರನ್ನು ಸಂಸ್ಥೆಯ ಧೋರಣೆಗಳನ್ನು ಪೂರ್ಣಗೊಳಿಸಬೇಕಾದರೆ ಸಂಘಟನೆಬೇಕು.ಎಲ್ಲರ ಸಹಾಯದಿಂದ ಮಾತ್ರ ಸಂಸ್ಥೆಯೂ ಮುಂದುವರೆಯಬಲ್ಲದು.ಕೇವಲ ನೌಕರರಿಗೆ ಹಣಕಾಸಿನ ಸೌಕರ್ಯವನ್ನು ಮತ್ತು ದೈಹಿಕ ಆರಾಮವನ್ನು ಒದಗಿಸಿಕೊಟ್ಟರೆ ಸಾಲದು. ವ್ಯವಹಾರಸ್ಥನು ತನ್ನ ನೌಕರರೊಂದಿಗೂ ಸಹಕರಿಸಬೇಕು.ವ್ಯವಹಾರಸ್ಥನು ತನ್ನ ನೌಕರರನ್ನು ಮನುಷ್ಯರೆಂದು ಗುರ್ತಿಸಬೇಕಲ್ಲದೇ ಅವರನ್ನು ಹುರಿದುಂಬಿಸಬೇಕು. ನೌಕರರ ಜಾಣತನ ,ಶ್ರದ್ದೆ, ಮತ್ತು ಯೋಗ್ಯತೆಗಳಿಗನುಸಾರವಾಗಿ ಅವರಿಗೆ ಸ್ಥಳಾನುಕೂಲ ಮಾಡಬೇಕು.ಇದರಿಂದಾಗಿ ಕೆಲಸಗಾರರರಿಗೆ ತಮ್ಮ ಜೀವನದ ಬಗೆಗೆ ಹೆಮ್ಮೆಯೆನಿಸುತ್ತದೆ.ಅವರ ಕಾರ್ಯ ಸಾಮರ್ಥ್ಯವೂ ಹೆಚ್ಚುತ್ತದೆ.ಅವರ ಕಾರ್ಯವನ್ನು ಉತ್ಸಾಹದಿಂದ ಮಾಡುತ್ತಾರೆ.ಮತ್ತು ಅವರ ಜೀವನವು ಸುಖಕರವಾಗಿರುತ್ತದೆ.

ವ್ಯವಹಾರಸ್ಥನು ತನ್ನ ನೌಕರರಿಗೆ ಬೇರೆ ಬೇರೆ ರೀತಿಯ ಸೌಕರ್ಯಗಳನ್ನು ಒದಗಿಸಿಕೊಟ್ಟರೆ, ನೌಕರರ ಕಾರ್ಯಸಾಮರ್ಥ್ಯತೆಯು ತನ್ನಷ್ಟಕ್ಕೆ ತಾನೇ ಹೆಚ್ಚುತ್ತದೆ,ಇದರಿಂದಾಗಿ ಸಂಸ್ಥೆಯ ಸಾಮರ್ಥ್ಯವೂ ಅಧಿಕವಾಗುತ್ತದೆ. ಮತ್ತು ಅದರೊಂದಿಗೆ ಲಾಭಗಳಿಕೆಯ ಪ್ರಮಾಣವು ಅಧಿಕವಾಗುತ್ತದೆ.ನೌಕರರಲ್ಲಿ ಸಂಸ್ಥೆಯ ತಮ್ಮದೇ ಆಗಿದೆ ಮತ್ತು ತಮ್ಮ ಸುಖ-ಸಂತೋಷಗಳನ್ನು ರಕ್ಷಿಸುತ್ತದೆ ಎಂದು ಮನವರಿಕೆಯಾದರೆ ಅವರ ಕಾರ್ಯ ಸಾಮರ್ಥ್ಯತೆಯು ಹೆಚ್ಚುವುದರಲ್ಲಿ ಸಂದೇಹವಿಲ್ಲ. ಅವರು ಯಾವ ಬಗೆಯ ತೊಂದರೆಯಿಲದೆ ಕಾರ್ಯಪ್ರವ್ರುತ್ತರಾಗುತ್ತಾರೆ.

ಒಟ್ಟಿನಲ್ಲಿ ವ್ಯವಹಾರವು ನಾಲ್ಕು ಪಂಗಡಗಳ ಹಿತರಕ್ಷಣೆಯನ್ನು ಸಾಧಿಸಬೇಕಾಗುತ್ತದೆ.

೧)ವ್ಯವಹಾರದ ಮಾಲೀಕರು:(ಕಂಪೆನಿಯಿದ್ದರೆ ಅದರ ಶೇರುದಾರರು) ಅವರಿಗೆ ಅವರು ಹಾಕಿದ ಬಂಡವಾಳಕ್ಕೆ ಯೋಗ್ಯ ಲಾಭವನ್ನು ಒದಗಿಸುತ್ತದೆ.

೨)ಗ್ರಾಹಕರು:ಸರಕುಗಳ ಗುಣಮಟ್ಟ, ಬೆಲೆ ಮೊದಲಾದವುಗಳ ಬಗೆಗೆ ಗ್ರಾಹಕರನ್ನು ತೃಪ್ತಿಪಡಿಸಬೇಕು.

೩)ನೌಕರರು: ನೌಕರರಿಗೆ ಯೋಗ್ಯ ರೀತಿಯ ಸಂಬಳವನ್ನು ಕೊಟ್ಟು ಅವರ ಕಾರ್ಯಗಳನ್ನು ಪ್ರಶಂಸಶಿಸಿ ಅವರ ಕಾರ್ಯಸಾಮರ್ಥ್ಯತೆಯನ್ನು ಹೆಚ್ಚಿಸಬೇಕು.

೪)ಸಮಾಜ:ಸಮಾಜದ ಹಿತರಕ್ಷಣೆಯನ್ನು ಕಾಪಾಡಬೇಕು.

ಈ ರೀತಿಯಾಗಿ ವ್ಯವಹಾರವು ಈ ಮೂರು ಧ್ಯೇಯಧೋರಣೆಗಳನ್ನು ಹೊಂದಿರಬೇಕಲ್ಲದೇ ಅವುಗಳನ್ನು ಒಂದುಗೂಡಿಸಿಕೊಂಡು ಮುಂದುವರೆಯಬೇಕು.