ಪಾಣಿನಿ ಸುಪ್ರಸಿದ್ಧ ಸಂಸ್ಕೃತ ವ್ಯಾಕರಣ ಕರ್ತೃ. ತಾಯಿ ದಾಕ್ಷಾ ಅಥವಾ ದಾಕ್ಷೀ. ತಂದೆ ಶಲಂಕ, ಗಾಂಧಾರದೇಶದ ಶಲಾತುರಗ್ರಾಮದವ. ಆ ಗ್ರಾಮವನ್ನು ಸ್ವತಃ ನೋಡಿ ಬಂದ [[ಹ್ಯುಯೆನ್ ತ್ಸಾಂಗ್]] ಈಗಿನ ಓಹಿಂಡ್ (ಉದ್ಭಾಂಡ) ನಗರದಿಂದ ನಾಲ್ಕು ಮೈಲಿ ದೂರದಲ್ಲಿ ಆ ಗ್ರಾಮ ಇದ್ದುದಾಗಿಯೂ ಅಲ್ಲಿ ಪಾಣಿನಿಯ ಸ್ಮಾರಕವಾಗಿ ಸ್ಥಾಪಿತವಾಗಿದ್ದ ಪ್ರತಿಮೆಯೊಂದನ್ನು ತಾನು ಕಂಡುದಾಗಿಯೂ ಬರೆದಿಟ್ಟಿದ್ದಾನೆ. ಪಾಣಿನಿಯನ್ನು ಅವನ ತಾಯಿಯ ಹೆಸರಿನ ಮೇಲೆ ದಾಕ್ಷಾ (ದಾಕ್ಷೀ) ಪುತ್ರನೆಂದೂ ತಂದೆಯ ಹೆಸರಿನ ಮೇಲೆ ಶಾಲಂಕನೆಂದೂ ಗ್ರಾಮದ ಹೆಸರಿನ ಮೇಲೆ ಶಾಲಾತುರೀಯ ಎಂದೂ ಕರೆಯುತ್ತಿದ್ದುದುಂಟು. ಶಾಲಾ ತುರೀಯ ಎಂಬ ರೂಪವನ್ನು ಪಾಣಿನಿಯೇ ತನ್ನ ಗ್ರಂಥದಲ್ಲಿ ವಿವರಿಸಿದ್ದಾನೆ. ಈತನಿಗೆ ಅಹಿಕ ಎಂಬ ಇನ್ನೊಂದು ಹೆಸರೂ ಇತ್ತು.[[ಚಂದ್ರಗುಪ್ತ ಮೌರ್ಯ|ಚಂದ್ರಗುಪ್ತನ]] ತಂದೆ ನಂದನ ಕಾಲದಲ್ಲಿ (ಕ್ರಿ.ಪೂ 215-291) ಪಾಟಲೀಪುತ್ತದಲ್ಲಿದ್ದ ವರ್ಷ ಎಂಬ ಆಚಾರ್ಯರಲ್ಲಿ ಪಾಣಿನಿ ಶಿಷ್ಯನಾಗಿದ್ದುದಾಗಿ [[ಕಥಾಸರಿತ್ಸಾಗರ]]ದಲ್ಲಿ ಹೇಳಿದೆ. ಪಾಣಿನಿ ಸಿಂಹದ ಬಾಯಿಗೆ ತುತ್ತಾಗಿ ಮರಣಕ್ಕೀಡಾದನೆಂದು ಕಥೆಯೊಂದರಿಂದ ತಿಳಿದುಬರುತ್ತದೆ.
ಪಾಣಿನಿಯ ಕಾಲವೂ ನಿಕೃಷ್ಟವಾಗಿನಿರ್ದಿಷ್ಟವಾಗಿ ತಿಳಿದು ಬಂದಿಲ್ಲ. ಕ್ರಿಸ್ತಪೂರ್ವದಲ್ಲಿ ಇದ್ದನೆಂಬುದರಲ್ಲಿ ಅಭಿಪ್ರಾಯಭೇದವಿಲ್ಲವಾದರೂ [[ಬ್ರಾಹ್ಮಣ (ಹಿಂದೂ ಗ್ರಂಥ)|ಬ್ರಾಹ್ಮಣಗಳ]] ಕಾಲಕ್ಕಿಂತ ಈಚಿನವನೆಂದೂ ಪ್ರಾಯಃ ಪ್ರಾಚೀನ [[ಉಪನಿಷತ್ತು]]ಗಳ ಕಾಲದವನಿರಬೇಕೆಂದೂ ಒಬ್ಬರು ಹೇಳಿದರೆ ಗೋಲ್ಡ್ ಸ್ಟಕರ್ ಎಂಬ ಪಾಶ್ಚಾತ್ಯ ಪಂಡಿತ ಬೌದ್ಧರ ಕಾಲಕ್ಕಿಂತ ಹಿಂದೆ ಅಂದರೆ ಕ್ರಿ.ಪೂ ಏಳನೆಯ ಶತಮಾನದವನಿರಬೇಕೆಂದೂ ವೀಬರ್ ಎಂಬಾತ ಅಲೆಗ್ಜಾಂಡರನ ದಂಡಯಾತ್ರೆಗಳಿಗಿಂತ (ಕ್ರಿ.ಪೂ 326) ಹಿಂದೆ ಪಾಣಿನಿಯ ವ್ಯಾಕರಣ ರಚಿತವಾಗಿದ್ದಿರಲು ಸಾಧ್ಯವೇ ಇಲ್ಲವೆಂದೂ ಹೇಳುತ್ತಾರೆ. ವೀಬರನ ವಾದ ಹೀಗಿದೆ-ಯವನರ ಲಿಪಿ ಎಂಬರ್ಥದಲ್ಲಿ ಯವನಾನೀ ಎಂಬ ಪದವನ್ನು ಪಾಣಿನಿ ಬಳಸಿದ್ದಾನೆ.[[ಅಲೆಕ್ಸಾಂಡರ್|ಅಲೆಗ್ಜಾಂಡರನ]] ದಂಡಯಾತ್ರೆಗಳಿಗಿಂತ ಹಿಂದೆ ಭಾರತೀಯರಿಗೆ [[ಯವನ]]ರ ಪರಿಚಯವಿರಲಿಲ್ಲ. ಪಾಣಿನಿ ಯವನಾನೀ ಪದ ಬಳಸಿರುವುದರಿಂದ ಅವನಿಗೆ ಯವನರ ಮತ್ತು ವಾಯವ್ಯ ಪ್ರಾಂತ್ಯಗಳ ಪರಿಚಯವಿತ್ತೆಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಪೂರಕವಾಗಿ ಪಾಣಿನಿಯ ಗಣಪಾಠದಲ್ಲಿ ಆಂಭಿ, ಭಗಲ ಎಂಬ ಹೆಸರುಗಳೂ ಬರುತ್ತವೆ. ಇದರಿಂದ ಪಾಣಿನಿ ಕ್ರಿ.ಪೂ ನಾಲ್ಕನೆಯ ಶತಮಾನಕ್ಕಿಂತ ಹಿಂದಿನವನೆಂದು ಹೇಳಲು ಸಾಧ್ಯವೇ ಇಲ್ಲ. ಇದೂ ಅಲ್ಲದೆ [[ಪತಂಜಲಿ]]ಯ (ವ್ಯಾಕರಣ) ಮಹಾಭಾಷ್ಯ ಕ್ರಿ.ಪೂ ಎರಡನೆಯ ಶತಮಾನದಲ್ಲಿ ರಚಿತವಾದುದೆಂದು ಸ್ಥಿರಪಟ್ಟಿರುವುದರಿಂದ ಪಾಣಿನಿ ಕ್ರಿಪೂ 400ಕ್ಕಿಂತ ಈಚಿನವನಾಗಿರಲೂ ಅವಕಾಶವಿಲ್ಲ. ಸ್ವಲ್ಪ ಹೆಚ್ಚು ಕಮ್ಮಿ ಹೀಗೆಯೇ ವಿಚಾರಮಾಡಿ ಕೀತ್, ವೀಲರ್, ಮ್ಯಾಕ್ಸ್ ಮುಲ್ಲರ್ ಮುಂತಾದವರು ಪಾಣಿನಿಯ ಕಾಲ ಸುಮಾರು ಕ್ರಿ.ಪೂ 350 ಇರಬೇಕೆಂದು ಸಿದ್ಧಾಂತ ಮಾಡಿದ್ದಾರಾದರೂ ಗೋಲ್ಡ್ ಸ್ಟಕರ್ ಕ್ರಿ.ಪೂ ಏಳನೆಯ ಶತಮಾನದವನಿರಬೇಕೆಂದೂ ಭಂಡಾರ್ಕರ್ ಕ್ರಿ.ಪೂ ಐದನೆಯ ಶತಮಾನಕ್ಕಿಂತ ಈಚಿನವನಿರಬೇಕೆಂದೂ ಬೆಲ್ವಲ್ಕರ್ ಅವರು ಕ್ರಿ.ಪೂ 700ರಿಂದ 600 ರೊಳಗಿರಬೇಕೆಂದೂ ನಾಮಾಶ್ರಯೀ ಅವರು ಕ್ರಿ.ಪೂ 2400 ರಲ್ಲಿದ್ದಿರಬೇಕೆಂದೂ ವಾಸುದೇವ ಶರಣ್ ಅಗ್ರವಾಲಾ ಕ್ರಿ.ಪೂ 480ರಿಂದ 410 ರೊಳಗಿರಬೇಕೆಂದೂ ಬೇರೆ ಬೇರೆ ಅಭಿಪ್ರಾಯ ಹೊಂದಿದ್ದಾರೆ.