ಒಂದು ಕಡೆ ಎತ್ತರಕ್ಕೆ ಉದ್ದಾನುದ್ದ ಹರಡಿ ನಿಂತ ಪಶ್ಚಿಮ ಘಟ್ಟದ ಪಸಿರುಡೆಯ ಸೊಬಗು. ಮತ್ತೊಂದು ಕಡೆಯಲ್ಲಿ ಹಚ್ಚ ಹಸಿರಿನ ಗದ್ದೆ, ತೋಟದ ಬೆಡಗು. ನಡುವೆ ವಿಶಾಲ ಕೆರೆಯ ಮಧ್ಯೆ ಫಳಫಳಿಸುವ ಪದ್ಮಾವತಿ ದೇವಿಯ ಬಸದಿ. ನೀರಿನಲ್ಲಿ ಅಲ್ಲಾಡುವ ಮಂದಿರದ ಚಿತ್ರಕ್ಕೆ ಕಮಲದ ಹೂವುಗಳ ಸಿಂಗಾರದೈಸಿರಿ.

ಇಂತಹುದೊಂದು ಅಪರೂಪದ, ಇಡೀ ದಕ್ಷಿಣ ಭಾರತದಲ್ಲಿ ಮತ್ತೆಲ್ಲೂ ಸಿಗದಂಥ ಸೌಂದರ್ಯ ಮತ್ತು ದೈವಿಕ ಶಕ್ತಿಯ ಪರಮ ಕ್ಷೇತ್ರವನ್ನು ನೋಡಬೇಕಾದರೆ ನೀವು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ವರಂಗ ಎಂಬ ಪುಟ್ಟ ಹಳ್ಳಿಗೆ ಬರಬೇಕು.

೧೪ ಎಕರೆ ವಿಸ್ತಾರದ ತುಂಬಿ ತುಳುಕುವ ಕೆರೆಯ ನಡುವೆ ನೆಲೆ ನಿಂತಿರುವ ನಕ್ಷತ್ರಾಕಾರದ ಚತುರ್ಮುಖ ಬಸದಿ ಚೆಲುವನ್ನು ನೋಡಿಯೇ ಆನಂದಿಸಬೇಕು. ಪದ್ಮಾವತಿ ದೇವಿಯ ಸನ್ನಿಧಿಯನ್ನು ತಲುಪಲು ದೋಣಿಯೊಂದೇ ದಾರಿ. ಸುಮಾರು ೧೦೦ ಮೀಟರ್‌ಗಿಂತಲೂ ಹೆಚ್ಚು ದೂರವನ್ನು ಯಾವ ಮಳೆ, ಬಿಸಿಲು ಕಾಲದಲ್ಲೂ ದೋಣಿಯ ಮೂಲಕವೇ ಕ್ರಮಿಸಬೇಕು. ಆ ದೋಣಿ ಪಯಣವೇ ಒಂದು ರೋಚಕ ಅನುಭವ.

ಎಂಥ ಸೌಂದರ್ಯ ನೋಡು.. ದೋಣಿಯಲ್ಲಿ ಸಾಗಿ ಕೆರೆಬಸದಿಯ ಮೆಟ್ಟಿಲನ್ನು ಹತ್ತಿ ನಿಂತು ನೋಡಿದರೆ ಸುತ್ತಲೂ ಜಲರಾಶಿ ಚೆಲುವು. ಅದರಾಚೆಗೆ ಹಸಿರು ರಾಜಿ. ಹೆಚ್ಚೆಂದರೆ ಐದು ಸೆಂಟ್ಸ್ ಜಾಗದಲ್ಲಿ ನಿರ್ಮಿಸಿದ ಮಂಟಪ ರೂಪಿ ಬಸದಿ ಹಲವು ವೈಶಿಷ್ಟ್ಯಗಳನ್ನು ಒಡಲಲ್ಲಿ ಹೊತ್ತುಕೊಂಡಿದೆ. ಜೈನ ತೀರ್ಥಂಕರರಾದ ಪಾರ್ಶ್ವನಾಥ, ಅನಂತನಾಥ, ನೇಮಿನಾಥ, ಶಾಂತಿನಾಥ ವಿಗ್ರಹಗಳು ಖಡ್ಗಾಸನ ಭಂಗಿಯ ಕರಿ ಶಿಲೆಯಲ್ಲಿ ಕೆತ್ತಲ್ಪಟ್ಟವೆ. ಹೊಯ್ಸಳ ಮತ್ತು ಚಾಲುಕ್ಯ ಶೈಲಿಗಳ ಸಮ್ಮಿಶ್ರಣವಿದು. ಈ ವಿಗ್ರಹಗಳ ಎರಡೂ ಬದಿಗಳಲ್ಲಿ ಆಯಾ ತೀರ್ಥಂಕರರ ಯಕ್ಷ, ಯಕ್ಷಿಯರ ಬಿಂಬಗಳಿವೆ. ಪೂರ್ವದಲ್ಲಿರುವ ಪಾರ್ಶ್ವನಾಥ ವಿಗ್ರಹದ ಪಕ್ಕ ಪದ್ಮಾವತಿ ದೇವಿಯ ಬಿಂಬವಿದೆ. ಅವಳೇ ಇಲ್ಲಿನ ಪ್ರಧಾನ ಶಕ್ತಿ.

ಚತುರ್ಮುಖ ಗರ್ಭಗುಡಿ, ಪ್ರತ್ಯೇಕ ನಾಲ್ಕು ದ್ವಾರಗಳು, ಪ್ರತಿಯೊಂದು ದಿಕ್ಕಿಗೂ ಒಂದೇ ಅಳತೆಯ ಮುಖ ಮಂಟಪಗಳು, ಹೊರಭಾಗದಲ್ಲಿ ಪ್ರದಕ್ಷಿಣೆ ಪಥ ಮತ್ತು ನಕ್ಷತ್ರಾಕಾರದ ಜಗುಲಿ. ಇಡೀ ಬಸದಿಯನ್ನು ಕಟ್ಟದ್ದು ಕಲ್ಲಿನಿಂದ. ಚಾವಣಿಯೂ ಕಲ್ಲಿನದೆ.

ಗುಡಿಯಲ್ಲಿರುವ ಮೂರ್ತಿಗಳು ೧೨ನೇ ಶತಮಾನದವು ಎಂದು ನಂಬಲಾಗಿದೆ. ಆಗಲೇ ಈ ಬಸದಿಯನ್ನು ನಿರ್ಮಿಸಲಾಗಿದ್ದು, ಕೆರೆಯನ್ನು ೧೨ನೇ ಶತಮಾನದಲ್ಲಿ ಆಳುಪ ರಾಣಿ ಜಾಕಲಿ ದೇವಿ ನಿರ್ಮಿಸಿದ್ದಾಳೆ ಎಂಬ ಐತಿಹ್ಯವಿದೆ.

ಪ್ರಾಕೃತಿಕ ಸೌಂದರ್ಯದ ಪರಮ ಸೀಮೆಯಂತಿರುವ ಈ ಚೆಲುವಿನ ಆಲಯಕ್ಕೆ ಹೋಗಲು ಇರುವ ನೀರ ದಾರಿಗೆ ದೋಣಿಯೊಂದೇ ಸಾಥಿ.

ಇಷ್ಟಾರ್ಥ ಸಿದ್ಧಿ ಕ್ಷೇತ್ರ ಮೂಲತ: ಇದೊಂದು ಜೈನ ಕ್ಷೇತ್ರ. ಆದರೆ, ಇಲ್ಲಿಗೆ ಬಂದು ಪೂಜೆ ಸಲ್ಲಿಸುವವರಲ್ಲಿ ಹೆಚ್ಚಿನವರು ಅನ್ಯ ಧರ್ಮೀಯರು. ನೀರ ಮಧ್ಯೆ ಕುಳಿತ ಪದ್ಮಾವತಿ ದೇವಿ ಇಷ್ಟಾರ್ಥ ಸಿದ್ಧಿಯಾಗುವಂತೆ ಮಾಡುತ್ತಾಳೆ ಎನ್ನುವುದು ನಂಬಿಕೆ. ಮದುವೆಗಾಗಿ ಹರಕೆ ಹೇಳಿಕೊಳ್ಳುವುದು, ದೇವರ ಪ್ರಸಾದ ಕೇಳುವುದರ ಜತೆಗೆ ಮದುವೆಯಾದ ಹೊಸ ಜೋಡಿ ಮೊದಲ ಪೂಜೆ ಸಲ್ಲಿಸಲು ಈ ಬಸದಿಗೆ ಬರುವುದು ವಿಶೇಷ. ಇದರ ಜತೆಗೆ ಚರ್ಮ ರೋಗಗಳಿಗೆ ಹಲವರು ಹರಕೆ ಹೇಳಿಕೊಳ್ಳುತ್ತಾರೆ. ಸಮಸ್ಯೆ ಪರಿಹಾರವಾದಾಗ ಬೆಳ್ತಿಗೆ ಅಕ್ಕಿ, ಹುರುಳಿಯನ್ನು ದೇವರಿಗೆ ಅರ್ಪಿಸಲಾಗುತ್ತದೆ.

ಮತ್ಸ್ಯಧಾಮ ಹರಕೆಯಾಗಿ ಬಂದ ಅಷ್ಟೂ ಅಕ್ಕಿ, ಹುರುಳಿಗಳೆಲ್ಲ ಜಲರಾಶಿಯಲ್ಲಿ ಮನೆ ಮಾಡಿಕೊಂಡಿರುವ ಮೀನುಗಳ ಆಹಾರ. ಇದನ್ನು ನೀರಿಗೆ ಹಾಕಿದಾಗ ಎದ್ದೆದ್ದು ಬರುವ, ಆಹಾರಕ್ಕಾಗಿ ಪೈಪೋಟಿ ನಡೆಸುವ, ದೊಡ್ಡ ಗಾತ್ರದ ಮೀನುಗಳ ಸೌಂದರ್ಯವೂ ಆಹ್ಲಾದಕರ. ನಿರಂತರ ಧಾರೆ: ಅಚ್ಚರಿ ಎಂದರೆ ವರ್ಷದ ಯಾವ ಕಾಲದಲ್ಲೂ ಈ ಕೆರೆಯ ನೀರು ಬತ್ತುವುದಿಲ್ಲ. ಅಂಥ ಬರಗಾಲದಲ್ಲಿ ಕೆಲವು ದಿನ ನಡೆದು ಕೊಂಡು ಬಸದಿ ಸೇರಿದ ಉದಾಹರಣೆ ಬಿಟ್ಟರೆ ಉಳಿದೆಲ್ಲ ಕಾಲದಲ್ಲೂ ಕೆರೆ ತುಂಬಿ ತುಳುಕುತ್ತದೆ. ಬಸದಿಯ ಒಂದು ಪಾರ್ಶ್ವದಲ್ಲಿರುವ ವರಂಗ ತೀರ್ಥ ಈ ನೀರ ಸೆಲೆಯ ಮೂಲ. ಮೂರು ಹೊತ್ತೂ ಪೂಜೆ: ಭಕ್ತರು ಇರಲಿ, ಇಲ್ಲದಿರಲಿ.. ಬೆಳಗ್ಗೆ ಐದುವರೆಗೆ ಮೊದಲ ಪೂಜೆಯೊಂದಿಗೆ ಸಂಜೆವರೆಗೆ ಮೂರು ಹೊತ್ತಿನ ಪೂಜೆ ಇಲ್ಲಿನ ಅನೂಚಾನ. ಸೋಮವಾರ, ಶುಕ್ರವಾರ, ಮಂಗಳವಾರ ಮತ್ತು ಪರ್ವ ದಿನಗಳಲ್ಲಿ ಇಲ್ಲಿ ಪದ್ಮಾವತಿ ದೇವಿಗೆ ವಿಶೇಷ ಪೂಜೆ. ಸಿಂಹ ಮಾಸದಲ್ಲಂತೂ ಭಕ್ತರ ಮಹಾಪೂರ.

ಅರ್ಚಕರೇ ಅಂಬಿಗ ಕೆರೆಯ ನಡುವೆ ಇರುವ ಬಸದಿಗೆ ಸಾಗಲು ಇರುವ ದೋಣಿಗೆ ಅರ್ಚಕರೇ ಅಂಬಿಗ ಎನ್ನುವುದು ಇಲ್ಲಿನ ವಿಶೇಷ. ಎಷ್ಟೇ ಜನ ಬಂದರೂ ಅವರೇ ದೋಣಿಯಲ್ಲಿ ಬಂದು ಕರೆದೊಯ್ಯುತ್ತಾರೆ, ಮತ್ತದೇ ದಡಕ್ಕೆ ತಂದ ಬಿಡುತ್ತಾರೆ. ನಡುವೆ ಪೂಜೆ ಮಾಡಿ ಪ್ರಸಾದ ನೀಡುತ್ತಾರೆ. ಒಬ್ಬನೇ ಒಬ್ಬ ಭಕ್ತ ಬಂದು ಆ ಕಡೆಯ ದಡದಲ್ಲಿ ನಿಂತಿದ್ದರೂ ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ಮಳೆ ಇರಲಿ, ಬಿಸಿಲಿರಲಿ ದೋಣಿಯನ್ನು ಹುಟ್ಟುಹಾಕಿಕೊಂಡು ಬರುವ ನಗುಮುಖದಲ್ಲೇ ಒಂದು ದೈವಿಕತೆ ಇದೆ. ಯಾರೇ ಇದ್ದರೂ ಇಲ್ಲದಿದ್ದರೂ ಹೊತ್ತು ಹೊತ್ತಿಗೆ ಪೂಜೆ ನಡೆಯುವುದು ಇಲ್ಲಿನ ವೈಶಿಷ್ಟ್ಯ. ತಲೆತಲಾಂತರಗಳ ಅನೂಚಾನ ಸಂಪ್ರದಾಯ. ಮಧ್ಯಪ್ರದೇಶದಲ್ಲೊಂದು ಕಡೆ ಈ ಪರಿಯ ಕೆರೆ ಬಸದಿ ಬಿಟ್ಟರೆ ಇಡೀ ದೇಶದಲ್ಲಿ ಎಲ್ಲೂ ಇಂಥ ಸೌಂದರ್ಯವಿಲ್ಲ. ಈ ಬಸದಿಗೆ ಸೇತುವೆಯೊಂದನ್ನು ಕಟ್ಟುವ ಪ್ರಸ್ತಾವವಿತ್ತಾದರೂ ಬಳಿಕ ಅದನ್ನು ಕೈಬಿಡಲಾಗಿದೆ.

ಎಲ್ಲಿದೆ ವರಂಗ?

  • ವರಂಗ ಇರುವುದು ಉಡುಪಿ ಜಿಲ್ಲೆಯ ಹೆಬ್ರಿಯಿಂದ ಕಾರ್ಕಳದ ಕಡೆಗೆ ೫ ಕಿ.ಮೀ. ದೂರದಲ್ಲಿ.
  • ಕಾರ್ಕಳದಿಂದ ಸುಮಾರು ೨೫ ಕಿ.ಮೀ., ಉಡುಪಿಯಿಂದ ೩೭ ಕಿ.ಮೀ. ಮಂಗಳೂರಿನಿಂದ ೮೫ ಕಿ.ಮೀ. ದೂರ.
  • ಸಮಯವಿದ್ದರೆ, ತಾಕತ್ತಿದ್ದರೆ ಕೆರೆಯ ಪಕ್ಕವೇ ಇರುವ ಬೇಡ ರಾಜನ ಅರಮನೆಯ ಕುರುಹುಗಳಿರುವ ಬೆಟ್ಟವನ್ನು ಹತ್ತಿಳಿಯಬಹುದು.
  • ಪ್ರತಿ ಎಳ್ಳಮಾವಾಸ್ಯೆ ತೀರ್ಥ ಸ್ನಾನ ಮಾಡುವ ಕುಂದಾದ್ರಿ ತೀರ್ಥಕ್ಕೆ ತಲೆಯೊಡ್ಡಬಹುದು.

ಇದು ಅತಿಶಯ ಕ್ಷೇತ್ರ ವರಂಗ ಹೆಚ್ಚು ಕಡಿಮೆ ಸಾವಿರ ವರ್ಷ ಇತಿಹಾಸ ಹೊಂದಿರುವ, ಜೈನ ಧರ್ಮೀಯರ ಅತಿಶಯ ಕ್ಷೇತ್ರ. ಭಗವಾನ್ ಚಂದ್ರಸ್ವಾಮಿ ಬಸದಿ, ನೇಮಿನಾಥ ಸ್ವಾಮಿ ಹಿರೇಬಸದಿ ಮತ್ತು ಕೆರೆ ಬಸದಿ ಇಲ್ಲಿನ ಪ್ರಮುಖ ಆರಾಧನಾ ಕೇಂದ್ರಗಳು. ಶಾಸನದಲ್ಲಿ ಇದನ್ನು ವರಂಗ ತೀರ್ಥ ಎಂದು ಉಲ್ಲೇಖಿಸಲಾಗಿದೆ.

ವರಂಗ ಎಂಬ ಜನಾನುರಾಗಿ, ಜನಪ್ರಿಯ ರಾಜ ಈ ಪ್ರದೇಶವನ್ನು ಆಳುತ್ತಿದ್ದುದರಿಂದ ಅವನದೇ ಹೆಸರು ಊರಿಗೆ ಬಂತು ಎಂದು ಹೇಳಲಾಗುತ್ತಿದೆ. ಒಂದು ಐತಿಹ್ಯದ ಪ್ರಕಾರ, ಇಲ್ಲಿನ ನೇಮಿನಾಥ ಮೂರ್ತಿ ಕೆಲವೇ ಡಿಗ್ರಿ ವಾಲಿಕೊಂಡಿದ್ದು, ವಾರೆ ಅಂಗ ಎಂಬ ನೆಲೆಯಲ್ಲಿ ವರಂಗ ಹುಟ್ಟಿಕೊಂಡಿತು.

ಬಸದಿ, ಮಾನಸ್ತಂಭ, ಸಮಾಧಿ ಜೈನ ವಾಸ್ತುಶಿಲ್ಪದ ನಾಲ್ಕು ಪ್ರಕಾರಗಳಾದ ಬಸದಿಗಳು, ಮಾನಸ್ತಂಭ, ಏಕಶಿಲಾ ವಿಗ್ರಹಗಳು ಮತ್ತು ಸಮಾಧಿಗಳಲ್ಲಿ ವಾರಂಗದಲ್ಲಿ ಮೂರು ಪ್ರಕಾರಗಳಾದ ಮಾನಸ್ತಂಭ, ಬಸದಿ ಮತ್ತು ಸಮಾಧಿಗಳ ಸಮಾಗಮವಿರುವುದು ವಿಶೇಷ. ನೇಮಿನಾಥ ಸ್ವಾಮಿ ಬಸದಿ ದೀರ್ಘ ಆಯತಾಕಾರವಾಗಿದ್ದು, ಚೌಕ ಗರ್ಭಗಹ, ಸುಖಾಸೀನ, ನವರಂಗ ಮತ್ತು ಮುಖ ಮಂಟಪಗಳನ್ನು ಒಳಗೊಂಡಿದೆ. ಒಳಗೆ ನಾಲ್ಕು ಅಡಿ ಎತ್ತರದ ಧ್ಯಾನಾಸಕ್ತ ನೇಮಿನಾಥ. ಅದೇ ಬಸದಿಯಲ್ಲಿ ಚಂದ್ರನಾಥ ಸ್ವಾಮಿಯ ಪ್ರತ್ಯೇಕ ಗರ್ಭಗುಡಿ ಇದೆ.

ಇಡೀ ಬಸದಿ ಕಲ್ಲಿನಿಂದಲೇ ನಿರ್ಮಾಣವಾಗಿದೆ. ಕಲ್ಲು ಕಲ್ಲಿನ ಚಿತ್ತಾರ, ಚೆಲುವು, ಬೆಳಕಿನ ವ್ಯವಸ್ಥೆಗಳೆಲ್ಲ ನಮ್ಮನ್ನು ಮೂಕ ವಿಸ್ಮಿತಗೊಳಿಸುತ್ತವೆ.

ಪ್ರವೇಶ ದ್ವಾರದಲ್ಲಿರುವ ೪೫ ಅಡಿ ಎತ್ತರದ ಮಾನಸ್ತಂಭ ಕರಾವಳಿಯ ಅತಿ ಪ್ರಾಚೀನ ಮತ್ತು ಹಿರಿಯಂಗಡಿ ಹಾಗೂ ಅಳದಂಗಡಿ ಬಳಿಕ 3ನೇ ಅತಿ ದೊಡ್ಡ ಮಾನಸ್ತಂಭ ಇದು. ಇಲ್ಲಿ ನೇಮಿನಾಥ ಸ್ವಾಮಿ ಬಸದಿಗೆ ಹೊಂದಿಕೊಂಡಂತೆ ಸಮಾಧಿ ಮತ್ತು ನಿಷಿಧಿಗಳಿವೆ.

ಪ್ರಸಕ್ತ ಶ್ರವಣಬೆಳಗೊಳದ ಮಠಾಧೀಶರಾಗಿರುವ ಶ್ರೀ ಮೂಲತ: ವರಂಗದವರು. ವರಂಗದ ಆಡಳಿತವನ್ನು ನೋಡಿಕೊಳ್ಳುತ್ತಿರುವ ಹೊಂಬುಜ ಮಠಾಧೀಶರು ವರಂಗಕ್ಕೊಂದು ಹೊಸ ರೂಪ ನೀಡುವ ಪ್ರಯತ್ನದಲ್ಲಿದ್ದಾರೆ.

ಉತ್ತರ ಭಾರತದಿಂದ ಪ್ರವಾಸಿಗರ ಸುಗ್ಗಿ ಸ್ಥಳೀಯವಾಗಿ ಸರ್ವ ಧರ್ಮಗಳ ಭಕ್ತರು ಮತ್ತು ಪ್ರವಾಸಿಗರನ್ನು ದೊಡ್ಡ ಮಟ್ಟದಲ್ಲಿ ಆಕರ್ಷಿಸುತ್ತಿರುವ ವರಂಗ ಜೈನ ಯಾತ್ರಾರ್ಥಿಗಳ ಪಾಲಿಗಂತೂ ಸ್ವರ್ಗ. ನೀವು ನಂಬಲಾರಿರಿ.. ಈ ಕ್ಷೇತ್ರಕ್ಕೆ ಪ್ರತಿ ದಿನ 50ಕ್ಕಿಂತಲೂ ಅಧಿಕ ಉತ್ತರ ಭಾರತದ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಕೆರೆ ಬಸದಿಯನ್ನು ಕಂಡು ಪುಳಕಿತರಾಗುತ್ತಾರೆ.

ಧರ್ಮಸ್ಥಳ, ಮೂಡುಬಿದರೆ, ಕಾರ್ಕಳಕ್ಕೆ ಬರುವ ಭಕ್ತರು ವರಂಗ, ಹೊಂಬುಜ ಮಾರ್ಗವಾಗಿ ಶ್ರವಣಬೆಳಗೊಳಕ್ಕೆ ಹೋಗುವುದು ಕ್ರಮ.