ರಾಜಮ್ಮ ಕೇಶವಮೂರ್ತಿ

ವಿದುಷಿ ರಾಜಮ್ಮ ಕೇಶವಮೂರ್ತಿ (ಏಪ್ರಿಲ್ ೨೮, ೧೯೨೯) ಕರ್ನಾಟಕ ಸಂಗೀತದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.

ರಾಜಮ್ಮ ಕೇಶವಮೂರ್ತಿ
Bornಏಪ್ರಿಲ್ ೨೮, ೧೯೨೯
ಚಿಕ್ಕಮಗಳೂರು ಜಿಲ್ಲೆಯ ಅಂಬಳೆ
Occupationಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರು

ಜೀವನ ಬದಲಾಯಿಸಿ

ಕರ್ನಾಟಕ ಸಂಗೀತದ ಅಭಿನವ ಶಾರದೆ ಎಂದು ಪ್ರಸಿದ್ಧರಾಗಿರುವ ರಾಜಮ್ಮನವರು ಚಿಕ್ಕಮಗಳೂರು ಜಿಲ್ಲೆಯ ಅಂಬಳೆ ಗ್ರಾಮದಲ್ಲಿ ಏಪ್ರಿಲ್ ೨೮, ೧೯೨೯ರಂದು ಜನಿಸಿದರು. ತಂದೆ ಲಕ್ಷ್ಮೀ ಕಾಂತಯ್ಯನವರು ಮತ್ತು ತಾಯಿ ಗುಂಡಮ್ಮನವರು. ಸರಕಾರಿ ಸೇವೆಯಲ್ಲಿದ್ದ ಕಾಂತಯ್ಯನವರಿಗೆ ಭದ್ರಾವತಿಗೆ ವರ್ಗವಾದಾಗ ಅಲ್ಲಿ ವಾಸವಿದ್ದ ಆಸ್ಥಾನ ವಿದ್ವಾನ್ ದೇವೇಂದ್ರಪ್ಪ, ಬಿ. ಶೇಷಪ್ಪ, ರಾಮಾಜೋಯಿಸ್, ಕೆ.ಎಸ್. ರಾಮಚಂದ್ರನ್‌ ಮುಂತಾದವರಲ್ಲಿ ಪ್ರಾರಂಭಿಕ ರಾಜಮ್ಮನವರ ಶಿಕ್ಷಣ ಮೊದಲ್ಗೊಂಡಿತು. ೧೯೪೭ರಲ್ಲಿ ರಾಜಮ್ಮನವರು ಸಂಗೀತದ ಸೀನಿಯರ್‌ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ತೇರ್ಗಡೆಹೊಂದಿದರು.

ಸಂಗೀತ ಶಿಕ್ಷಕಿ ಬದಲಾಯಿಸಿ

ಮದುವೆಯ ನಂತರ ಮೈಸೂರಿಗೆ ಬಂದ ರಾಜಮ್ಮನವರು ಸಂಗೀತ ವಿದ್ವಾಂಸರಾದ ಆರ್‌.ಕೆ. ನಾರಾಯಣಸ್ವಾಮಿ, ಆರ್‌.ಕೆ. ಶ್ರೀಕಂಠನ್ ಮುಂತಾದರವರಲ್ಲಿ ಪ್ರೌಢಶಿಕ್ಷಣವನ್ನು ಪಡೆದು ವಿದ್ವತ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು. ಮುಂದೆ ರಾಜಮ್ಮನವರು ಸರಕಾರಿ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಲಾರಂಭಿಸಿದರು. ರಾಜಮ್ಮನವರು ಮೂರು ದಶಕಗಳಿಗೂ ಹೆಚ್ಚು ಕಾಲ ಸಂಗೀತದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕರ್ನಾಟಕ ಸರಕಾರದ ಪರೀಕ್ಷಾ ಮಂಡಲಿಯ ವಿದ್ವತ್ ಪರೀಕ್ಷೆಯ ಪರೀಕ್ಷಕರಾಗಿ, ಅಧ್ಯಕ್ಷಿಣಿಯಾಗಿ ಸೇವೆ ಸಲ್ಲಿಸಿದ ಕೀರ್ತಿ ಅವರದ್ದು. ಪಿ.ಯು. ಮತ್ತು ಬಿ.ಎ. ತರಗತಿಗಳ ಐಚ್ಛಿಕ ಸಂಗೀತ ವಿದ್ಯಾರ್ಥಿಗಳಿಗೆ ಸಹಾ ಅವರು ಸಂಗೀತ ಪಾಠ ಮಾಡಿ ಮಾರ್ಗದರ್ಶನ ನೀಡಿದರು.

ಸಂಗೀತಗಾರ್ತಿಯಾಗಿ ಬದಲಾಯಿಸಿ

ರಾಜಮ್ಮನವರ ಕಚೇರಿಗಳು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮುಂಬಯಿ ಹೀಗೆ ವಿವಿದೆಡೆಗಳಲ್ಲಿ ಜರುಗಿದವು. ಅವರ ಕಾರ್ಯಕ್ರಮಗಳು ಆಕಾಶವಾಣಿ, ದೂರದರ್ಶನ ಕೇಂದ್ರಗಳಿಂದಲೂ ಭಿತ್ತರಗೊಂಡವು.

ಪ್ರಶಸ್ತಿ ಗೌರವಗಳು ಬದಲಾಯಿಸಿ

ರಾಜಮ್ಮ ಕೇಶವಮೂರ್ತಿಯವರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. ಚಿಕ್ಕಮಗಳೂರಿನ ೪ನೇ ಭಾರತೀಯ ಧರ್ಮ ಸಮ್ಮೇಳನದಲ್ಲಿ ಸಂಗೀತ ರತ್ನ ಬಿರುದು- ಸುವರ್ಣ ಪದಕ, ಬೆಂಗಳೂರಿನ ಗಾಯನ ಸಮಾಜ, ರಾಜಾಜಿನಗರದ ಶಂಕರ ಜಯಂತಿ ಸಂದರ್ಭದ ಸಂಗೀತ ಸಮ್ಮೇಳನದ ಅಧ್ಯಕ್ಷತೆ – ಸಂಗೀತ ವಿಶಾರದೆ ಬಿರುದು ಸನ್ಮಾನ, ಪುರಂದರ – ತ್ಯಾಗರಾಜರ ಆರಾಧನಾ ಮಹೋತ್ಸವ ಸಂದರ್ಭದಲ್ಲಿ ಮೈಸೂರಿನಲ್ಲಿ ಸಂಗೀತ ಕಲಾ ತಪಸ್ವಿ, ಶೇಷ ಗಣಪತಿ ಮಹಿಳಾ ಸಂಘದವರಿಂದ ಅಭಿನವ ಶಾರದೆ, ೧೯೭೭ರಲ್ಲಿ ಸ್ವರಭೂಷಿಣಿ ಬಿರುದು – ತೋಡ. ಮುತ್ತಿನಹಾರದೊಡನೆ ಸನ್ಮಾನ. ಕರ್ನಾಟಕ ಸಂಗೀತ, ನೃತ್ಯ ಅಕಾಡಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಅವರಿಗೆ ಸಂದಿವೆ.

ಸಂಗೀತ ಸಂತತಿ ಬದಲಾಯಿಸಿ

ರಾಜಮ್ಮ ಕೇಶವಮೂರ್ತಿ ಅವರ ಪತಿ ಬಿ. ಎಂ. ಕೇಶವಮೂರ್ತಿ ಮತ್ತು ಮಕ್ಕಳಾದ ಬಿ. ಕೆ. ಅನಂತರಾಂ, ಬಿ. ಕೆ. ಚಂದ್ರಮೌಳಿ ಸಹಾ ಸಂಗೀತದಲ್ಲಿ ಮಹತ್ವದ ಸಾಧಕರೆನಿಸಿದ್ದಾರೆ.