ಮೈಸೂರು ಸೀಮೆಯ ಕ್ರೈಸ್ತ ಇತಿಹಾಸ

ಮೈಸೂರು ಸೀಮೆಯ ಕ್ರೈಸ್ತ ಇತಿಹಾಸಕ್ಕೆ ಅದರದೇ ಆದ ಪ್ರಾಚೀನತೆ ಇದೆ. ಯೇಸುಕ್ರಿಸ್ತನ ಶುಭಸಂದೇಶವನ್ನು ಜಗದೆಲ್ಲೆಡೆ ಸಾರುವ ಮಹದಾಸೆ ಹೊತ್ತು ಐರೋಪ್ಯ ಧರ್ಮಪ್ರಚಾರಕರು ಪೋರ್ಚುಗೀಸರಿಂದ ಕಂಡು ಹಿಡಿಯಲಾದ ಕಡಲದಾರಿಗಳಲ್ಲಿ ನಮ್ಮ ಭಾರತ ದೇಶಕ್ಕೂ ಬಂದರು. ಕ್ರಿಸ್ತಶಕ ಹದಿಮೂರನೇ ಶತಮಾನದಲ್ಲಿ ದೊಮಿನಿಕನ್ನರೂ, ಹದಿನೈದನೇ ಶತಮಾನದಲ್ಲಿ ಫ್ರಾನ್ಸಿಸ್ಕನ್ ಮಿಷನರಿಗಳೂ ಕನ್ನಡನಾಡಿನಲ್ಲಿ ಓಡಿಯಾಡಿದ್ದರೆಂದು ಚರಿತ್ರೆ ಹೇಳುತ್ತದೆ.

ಇತಿಹಾಸ ಬದಲಾಯಿಸಿ

ಮೈಸೂರು ರಾಜ್ಯದಲ್ಲಿ ಹೈದರಾಲಿಯ ಆಳ್ವಿಕೆ ಪ್ರಾರಂಭವಾಗುವ ವೇಳೆಗೆ ನಾಡಿನ ಎಲ್ಲೆಗಳಲ್ಲಿ ಮಾರ್ಪಾಡುಗಳುಂಟಾಗಿ ದೇವನಹಳ್ಳಿಯವರೆಗೂ ರಾಜ್ಯವಿಸ್ತರಣೆ ಆಯಿತು. ಆ ವೇಳೆಗೆ ಜೆಸೂಯಿತರು ತಮ್ಮ ತಮ್ಮ ಪ್ರಚಾರ ಕ್ಷೇತ್ರಗಳನ್ನು ವಿಂಗಡಿಸಿ ಕೊಂಡು ಕರಾವಳಿ ಪ್ರಾಂತ್ಯದ ಮಲಬಾರ್ ಮಿಷನ್, ಮೈಸೂರು ಪ್ರಾಂತ್ಯದ ಮೈಸೂರು ಮಿಷನ್, ಮಧುರೆ ಪ್ರಾಂತ್ಯದ ಮಧುರೆ ಮಿಷನ್ ಹಾಗೂ ದೇವನಹಳ್ಳಿಯಿಂದಾಚೆಗೆ ಪೂರ್ವ ಕರಾವಳಿವರೆಗೆ ಕರ್ನಾಟಿಕ್ ಮಿಷನ್ ಎಂದು ಗುರುತಿಸಿ ಕೊಂಡಿದ್ದರು. ಇವರಿಗೆಲ್ಲ ಪ್ರಚಾರ ಸಾಮಗ್ರಿ, ಹಣ, ರಾಜಕಾಣಿಕೆ, ಪೂಜಾವಸ್ತು, ಪತ್ರ, ಔಷಧಿ ಇವೆಲ್ಲವೂ ಗೋವಾದಿಂದ ಕೇರಳದ ಕೊಡುಂಗಲ್ಲೂರಿಗೆ ಸಮುದ್ರಮಾರ್ಗದಲ್ಲೂ ಅಲ್ಲಿಂದ ಒಳನಾಡುಗಳಿಗೆ ನೆಲಮಾರ್ಗದಲ್ಲೂ ತಲುಪುತ್ತಿದ್ದವು. ಈ ಪ್ರದೇಶಗಳಿಗೆ ಹೊರತಾದ ಅಂದರೆ ಕರ್ನಾಟಕದ ಉಳ್ಳಾಲ, ಫರಂಗಿಪೇಟೆ, ಬಸ್ರೂರು, ಖಾನಾಪುರ, ಹೊನ್ನಾವರ, ಕಿತ್ತೂರು ಮುಂತಾದೆಡೆಗಳಲ್ಲಿನ ಪ್ರಚಾರ ಕಾರ್ಯವು ಗೋವೆಯಿಂದ ನೇರವಾಗಿ ನಡೆದಿತ್ತಲ್ಲದೆ ಅಲ್ಲಿನ ಪ್ರಚಾರ ಭಾಷೆ ಕೊಂಕಣಿಯೇ ಆಗಿತ್ತು. ಕ್ರಿಸ್ತಶಕ ೧೬೮೩ರಲ್ಲಿ ಗೋವೆಯು ಮರಾಠರ ದಾಳಿಗೆ ತುತ್ತಾದಾಗ ಅಲ್ಲಿನ ಕ್ರೈಸ್ತರು ಕರ್ನಾಟಕಕ್ಕೆ ಓಡಿಬಂದರು.

ಮೈಸೂರು ಸೀಮೆಯ ಕ್ರೈಸ್ತ ಇತಿಹಾಸದ ಮೊದಲ ಚರ್ಚ್ ಬದಲಾಯಿಸಿ

  • ಮೈಸೂರು ಮಿಷನ್ ಫಾದರ್‍ಗಳ ಒಂದು ನೂರು ವರ್ಷಗಳ ಪರಿಶ್ರಮದ ಫಲವಾಗಿ ನಾಡಿನಾದ್ಯಂತ ಗಣನೀಯ ಸಂಖ್ಯೆಯಲ್ಲಿ ಕ್ರೈಸ್ತರ ಮತ್ತು ಅವರ ಸಂತಾನದ ಸಂಖ್ಯೆ ಪರಿವರ್ಧಿಸಿತು. ಕ್ರಿಸ್ತಶಕ ೧೭೦೭-೦೮ರಲಿ ಚಿಕ್ಕಬಳ್ಳಾಪುರವು ಮೊದಲ ಚರ್ಚ್ ಕಂಡಿತು. ಹೈದರಾಲಿಯು ಬೆಂಗಳೂರಿನ ಪೇಟೆ ಪ್ರದೇಶದಲ್ಲಿ ಕ್ರಿಸ್ತಶಕ ೧೭೨೪-೨೫ರಲ್ಲಿ ಕೋಟೆ ಕಟ್ಟಲುಪಕ್ರಮಿಸುವಾಗ ಆ ಕೋಟೆಯಂಚಿನಲ್ಲೇ ಸೈನಿಕರ ಮತ್ತು ಕೂಲಿಕಾರ್ಮಿಕರ ಧಾರ್ಮಿಕ ಅಗತ್ಯಗಳಿಗಾಗಿ ಒಂದು ಚರ್ಚ್ ತಲೆಯೆತ್ತಿತ್ತು.
  • ಸ್ವಾಮಿ ಮರೀ ನೋ (Fr. Salvator Marino, SJ) ರವರು ಅಮಲೋದ್ಭವಿ ಮರಿಯಾಮಾತೆಯ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದ ಈ ಚರ್ಚ್ನ ಪ್ರಾರಂಭೋತ್ಸವಕ್ಕೆ ಬೆಂಗಳೂರಿನ ಪಾರುಪತ್ಯಗಾರನೂ ಬಂದು ಪ್ರಾರ್ಥನೆ ಮಾಡಿದನೆಂದು ಜೆಸ್ವಿತ್ ಪತ್ರಗಳಿಂದ ವೇದ್ಯವಾಗುತ್ತದೆ. (ಬೆಂಗಳೂರಿನ ಮೊತ್ತಮೊದಲನೆಯದೆನಿಸಿದ್ದ ಈ ಚರ್ಚ್ ತೀರಾ ಇತ್ತೀಚಿನವರೆಗೂ ಕಾರ್ಯನಿರ್ವಹಿಸಿ ಸುಮಾರು ೧೯೮೬ರ ವೇಳೆಗೆ ಪರಭಾರೆಯಾಯಿತು).
  • ಕ್ರಮೇಣ ಬೆಂಗಳೂರು ಪೇಟೆಯ ಕೇಂದ್ರಸ್ಥಾನ, ಬಿಳೇಕಹಳ್ಳಿ (ಇಂದಿನ ಶಿವಾಜಿನಗರ), ಬ್ಯಾಡರಹಳ್ಳಿ (ದಂಡು ರೈಲುನಿಲ್ದಾಣದ ಹಿಂಬದಿ) ಮುಂತಾದ ಸ್ಥಳಗಳಲ್ಲೂ ಚರ್ಚ್ ಗಳಾದವು. ಇತ್ತ ಈ ಎಲ್ಲ ಚಟುವಟಿಕೆಗಳು ನಡೆದಿರುವಂತೆಯೇ ಅತ್ತ ಯೂರೋಪಿನಲ್ಲಿ ಧಾರ್ಮಿಕ ಸ್ಥಿತ್ಯಂತರಗಳು ನಡೆದುಹೋಗಿದ್ದವು.
  • ಇಂಡಿಯಾ ಮತ್ತು ಪೌರ್ವಾತ್ಯದೇಶಗಳ ವ್ಯಾಪಾರ ಮತ್ತು ಧರ್ಮಪ್ರಚಾರಗಳ ಸ್ವಾಮ್ಯ ತಮ್ಮದೇ ಎಂದು ವಾದಿಸಿದ ಪೋರ್ಚುಗೀಸರು ಪೋಪರ ಮೇಲೆ ಒತ್ತಡ ತಂದು ಇಂಡಿಯಾದಲ್ಲಿದ್ದ ಎಲ್ಲ ಜೆಸೂಯಿತ್ ಫಾದರ್ ಗಳನ್ನೂ ಹಿಂದಕ್ಕೆ ಹೋಗುವಂತೆ ಮಾಡಿದರು. ಇದು ಸಾಲದೆಂಬಂತೆ ಮೈಸೂರು ಸೀಮೆಯಲ್ಲಿ ಟಿಪ್ಪುವಿಗೂ ಇಂಗ್ಲಿಷರಿಗೂ ನಡುವೆ ನಾಲ್ಕು ಮಹಾಯುದ್ಧಗಳು ನಡೆದು ಆ ಸಂದರ್ಭದ ಧರ್ಮಪ್ರಚಾರಕ್ಕೂ ಹಿನ್ನಡೆ ಉಂಟಾಯಿತು.
  • ೧೭೯೧ರಲ್ಲಿ ಮೂರನೇ ಮೈಸೂರು ಯುದ್ಧ ನಡೆದು ಬೆಂಗಳೂರು ಕೋಟೆ ಪೇಟೆಯೆಲ್ಲ ಇಂಗ್ಲಿಷರ ಕೈವಶವಾಯ್ತು. ಒಂದು ವರ್ಷದ ನಂತರ ಮತ್ತೆ ಅದನ್ನು ಅವರು ಟಿಪ್ಪುವಿಗೇ ನೀಡಿದರು. ಟಿಪ್ಪು ಸಂಪೂರ್ಣ ನೆಲಕಚ್ಚಿದ ನಂತರ ಅಂದರೆ ೧೮೦೯ರಲ್ಲಿ ಬೆಂಗಳೂರಿನ ದಂಡುಪ್ರದೇಶ ಇಂಗ್ಲಿಷ್ ಸೈನ್ಯದ ಶಾಶ್ವತ ಠಾಣ್ಯವಾಗಿ ಮಾರ್ಪಟ್ಟಿತು. ದಂಡುಪ್ರದೇಶವು ಬೆಳೆದಂತೆಲ್ಲ ಅವರ ಸೇವಕರಾಗಿ ಬಂದ ತಮಿಳರೂ ಬೆಂಗಳೂರಿನ ನಿವಾಸಿಗಳಾದರು.

ಜೆಸೂಯಿತರ ಪ್ರವೇಶ ಬದಲಾಯಿಸಿ

ಮೈಸೂರು ರಾಜ್ಯವನ್ನು ಕಂಠೀರವ ನರಸರಾಜ ಒಡೆಯನು ಆಳುತ್ತಿದ್ದ ಸಂದರ್ಭದಲ್ಲಿ ಅಂದರೆ ಕ್ರಿಸ್ತಶಕ ೧೬೪೮ ರಲ್ಲಿ ಇಟಲಿಯಿಂದ ಬಂದ ಜೆಸೂಯಿತ್ ಮಿಶನರಿಗಳಿಂದ ಇಲ್ಲಿ ಧರ್ಮಪ್ರಚಾರ ಕಾರ್ಯ ಆರ೦ಭವಾಯಿತು. ಗೋವೆಯಲ್ಲಿ ಮುಖ್ಯ ಕಚೇರಿ ಹೊಂದಿದ್ದ ಇಟಾಲಿಯನ್ ಜೆಸೂಯಿತರು ಕನ್ನಡನಾಡಿನ ಕರಾವಳಿ ಊರುಗಳಾದ ಹೊನ್ನಾವರ ಮತ್ತು ಮಂಗಳೂರುಗಳಲ್ಲಿ ಕ್ರಿಸ್ತಶಕ ೧೬೪೦ ರಲ್ಲೇ ಕ್ರೈಸ್ತ ಧರ್ಮಪ್ರಚಾರ ಕಾರ್ಯ ಕೈಗೊಂಡಿದ್ದರು. ಒಂದೆರಡು ವರ್ಷಗಳಲ್ಲಿ ಅವರು ಬಿದನೂರು ರಾಜ್ಯವನ್ನು ಪ್ರವೇಶಿಸಿದ್ದರು. ಕ್ರಿಸ್ತಶಕ ೧೬೪೮ರಲ್ಲಿ ಮೈಸೂರು ಸೀಮೆಯನ್ನು ಮೊದಲು ಪ್ರವೇಶಿಸಿದ ಫಾದರ್ ಲಿಯೊನಾರ್ಡೊ ಶಿನ್ನಮಿ ರಾಜಧಾನಿ ಶ್ರೀರಂಗಪಟ್ಟಣಕ್ಕೆ ಬಂದು ರಾಜನಿಂದ ಲಿಖಿತ ಅನುಮತಿ ಪಡೆದು ಕ್ಷೇತ್ರಕಾರ್ಯಕ್ಕೆ ತೊಡಗಿದರು.

ಎಂ.ಇ.ಪಿ.ಯವರ(ಫ್ರೆಂಚ್ ಮಿಷನರಿಗಳು) ಬದಲಾಯಿಸಿ

  • ಟಿಪ್ಪುಸುಲ್ತಾನನ ಮರಣಾನಂತರ ಅಂದರೆ ೧೮೦೩ರ ವೇಳೆಗೆ ಇಂಡಿಯಾದ ಪ್ರೆಂಚ್ ವಸಾಹತುಗಳಲ್ಲಿದ್ದ ಫ್ರೆಂಚ್ ಪಾದ್ರಿಗಳು ಮೈಸೂರಿನತ್ತ ಮುಖ ಮಾಡಿದರು. ಇವರಲ್ಲಿ ಮೊದಲಿಗೆ ಬಂದವರು ಅಬ್ಬೆದುಬ ಎಂಬ್ ಫಾದರ್. ಮೈಸೂರು ಪ್ರಾಂತ್ಯದಲ್ಲಿ ಮೊತ್ತಮೊದಲ ಬಾರಿಗೆ ಸಿಡುಬು ಲಸಿಕೆಯನ್ನು ಪರಿಚಯಿಸಿದ ಕೀರ್ತಿ ಇವರದು. ಇವರು Hindu Manners, Customs and Ceremonies ಎಂಬ ಮೌಲಿಕ ಪುಸ್ತಕವನ್ನೂ ಬರೆದಿದ್ದಾರೆ.
  • ಶ್ರೀರಂಗಪಟ್ಟಣದ ಬಳಿಯಿರುವ ಪಾಲಳ್ಳಿಯ ಚರ್ಚ್ ನಲ್ಲಿ ಅಬ್ಬೆದುಬರವರು ಧರಿಸುತ್ತಿದ್ದರೆನ್ನಲಾದ ಪೂಜಾವಸ್ತ್ರಗಳನ್ನು ಇನ್ನೂ ಸಂರಕ್ಷಿಸಿಡಲಾಗಿದೆ. ಇವರ ನಂತರ ಬಂದ ಇತರ ಫ್ರೆಂಚ್ ಫಾದರ್ ಗಳು ಪಾಂಡಿಚೇರಿಯಲ್ಲಿ ಸಿದ್ಧತಾ ಶಿಕ್ಷಣ ಪಡೆದು ಬರುತ್ತಿದ್ದರಲ್ಲದೆ ಇಂಡಿಯಾದಲ್ಲಿ ತಮಿಳು ಭಾಷೆಯೊಂದೇ ಚಲಾವಣೆಯಲ್ಲಿದೆ ಎಂದು ಪರಿಭಾವಿಸಿದ್ದರು.
  • ಈ ಎಂಇಪಿ (ಮಿಸಿಯೋಂ ಎತ್ರಾಂಜೇರ್ ದ ಪಾರೀ = ಪ್ಯಾರಿಸ್ಸಿನ ಹೊರದೇಶ ಧರ್ಮಪ್ರಚಾರ ಸಂಸ್ಥೆ) ಫಾದರ್ ಗಳು ಇಟಾಲಿಯನ್ ಜೆಸೂಯಿತರಂತೆ ಬುದ್ಧಿವಂತರೂ ವಾಗ್ಮಿಗಳೂ ಆಗಿರಲಿಲ್ಲ. ಅವರ ಸೇವಾ ಮನೋಭಾವವೂ ಅಷ್ಟಕ್ಕಷ್ಟೇ. ಅದೇ ವೇಳೆಗೆ ದೂರದ ಫ್ರೆಂಚ್ ಸಂಸತ್ತಿನಲ್ಲಿ ಇಂಡಿಯಾದಲ್ಲಿ ವಸಾಹತು ಹೊಂದುವ ಪ್ರಸ್ತಾವ ಬಿದ್ದುಹೋಯಿತಲ್ಲದೇ ಧರ್ಮಪ್ರಚಾರಕರಿಗೆ ನೀಡುವ ಸಹಾಯಧನದ ಕುರಿತಂತೆ ಒಮ್ಮತ ಉಂಟಾಗಲಿಲ್ಲ.
  • ಎಂಇಪಿ ಸಂಸ್ಥೆಯ ಫಾದರ್ ಗಳು ಹೊಸದಾಗಿ ಮತಪ್ರಚಾರ ಮಾಡುವುದಿರಲಿ ಇದ್ದ ಅಲ್ಪಸ್ವಲ್ಪ ಕ್ರೈಸ್ತ ಘಟಕಗಳಿಗೇ ಧಾರ್ಮಿಕ ಅಗತ್ಯಗಳನ್ನು ಪೂರೈಸುವುದಕ್ಕೇ ಹೆಣಗಬೇಕಾಯಿತು. ಬೆಂಗಳೂರಿನಲ್ಲಿ ಅದಾಗಲೇ ಇಂಗ್ಲಿಷರ ಸೇವಕರಾಗಿ ಮನೆಮಾಡಿದ್ದ ತಮಿಳರು ಚರ್ಚ್ ಗಳಲ್ಲಿ ತಮ್ಮ ಆಧಿಪತ್ಯ ನಡೆಸಿದ್ದರು.
  • ಈ ಸ್ಥಳದಲ್ಲಿ ಬಹುಸಂಖ್ಯೆಯಲ್ಲಿದ್ದ ತಿಗುಳ ಜನಾಂಗಕ್ಕೆ ಸೇರಿದ ಕ್ರೈಸ್ತರು ಕನ್ನಡದಲ್ಲಿ ಧರ್ಮದೀಕ್ಷೆ ಪಡೆದು ಕನ್ನಡದಲ್ಲೇ ವ್ಯವಹರಿಸುವವರಾಗಿದ್ದರೂ ಸಹ ಅವರನ್ನು ತಮಿಳರೆಂದೇ ತಪ್ಪಾಗಿ ಭಾವಿಸಲಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಮೈಸೂರು ಸೀಮೆಯಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಮೂಲನಿವಾಸಿಗಳಾಗಿದ್ದ ಕನ್ನಡಿಗ ಕ್ರೈಸ್ತರಿಗೆ ಹೆಚ್ಚಿನ ಆತ್ಮಿಕ ಪೋಷಣೆ ಸಿಗಲಿಲ್ಲ. ಆದರೆ ಗೃಹಸ್ಥ ಉಪದೇಶಿಗಳ ನಿರಂತರ ಕಾರ್ಯತತ್ಪರತೆಯ ಕಾರಣದಿಂದ ಹಳ್ಳಿಗಳಲ್ಲಿನ ಕ್ರೈಸ್ತರಲ್ಲಿ ಕನ್ನಡತನ ಉಳಿದಿತ್ತೆಂಬುದೇ ಸಮಾಧಾನದ ಅಂಶ.

ಕೆಲ ಪ್ರಾಚೀನ ಕ್ರೈಸ್ತ ಕೇಂದ್ರಗಳು ಬದಲಾಯಿಸಿ

  1. ಬೆಂಗಳೂರು ನಗರ ಜಿಲ್ಲೆಯಲ್ಲಿ ಆನೆಕಲ್ಲು, ಕಾಮನಹಳ್ಳಿ, ಬಿಳೇಕಳ್ಳಿ (ಈಗಿನ ಶಿವಾಜಿನಗರ), ಬೇಗೂರು
  2. ಬೆಂಗಳೂರು ಗ್ರಾಮೀಣ ಜಿಲ್ಲೆಯಲ್ಲಿ ಉಯ್ಯಂಬಳ್ಳಿ, ಹಾರೋಬೆಲೆ, ಸಣ್ಣೇನಹಳ್ಳಿ, ದೇವನಹಳ್ಳಿ, ಕಾರಹಳ್ಳಿ
  3. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ
  4. ಮಂಡ್ಯ ಜಿಲ್ಲೆಯಲ್ಲಿ ಶ್ರೀರಂಗಪಟ್ಟಣ, ಗಂಜಾಂ, ಪಾಲಳ್ಳಿ, ಚಿಕ್ಕಅರಸಿನಕೆರೆ, ಕೂಟಗಲ್ಲು, ಕಿರಂಗೂರು
  5. ದಗನಿಕೋಟೆ ಜಿಲ್ಲೆ (ಈಗ ತಮಿಳುನಾಡಿನಲ್ಲಿದೆ) ಯಲ್ಲಿ ಕೆಂಪಟ್ಟಿ, ಮರಂದನಹಳ್ಳಿ, ಮದಗೊಂಡನಹಳ್ಳಿ, ತಳಿ
  6. ಚಾಮರಾಜನಗರ ಜಿಲ್ಲೆಯಲ್ಲಿ ರಾಮಾಪುರ, ಬಸವಾಪಟ್ಟಣ
  7. ಹಾಸನ ಜಿಲ್ಲೆಯಲ್ಲಿ ಶೆಟ್ಟಿಹಳ್ಳಿ, ಮಗ್ಗೆ, ಗಾರೇನಹಳ್ಳಿ, ಮೂಡಲದಾಸಾಪುರ

ಬೆಂಗಳೂರಿನತ್ತ ಮಹಾವಲಸೆ ಬದಲಾಯಿಸಿ

  • ಶರ್ಬಾನೋ ಎಂಬ ಫಾದರ್ ಮೈಸೂರು ಮಿಷನ್ನಿನ ಬಿಷಪರಾಗಿ ಬಂದ ನಂತರ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು. ಫಾದರ್ ಗಳನ್ನು ಕಂಡರೆ ಹಣಕ್ಕೆ ಕೈ ಚಾಚುವ ತಮಿಳರಿಗಿಂತ ಸ್ವಾಭಿಮಾನದಿಂದ ಬದುಕುವ ಕನ್ನಡಿಗರ ಬಗ್ಗೆ ಇವರು ಆದರ ಹೊಂದಿದ್ದವರು. ಸ್ಥಳೀಯ ಕ್ರೈಸ್ತ ಘಟಕಗಳು ಗಟ್ಟಿಯಾಗಿ ನೆಲೆಯೂರಿ ತಮ್ಮದೇ ಸಂಪನ್ಮೂಲ ರೂಢಿಸಿಕೊಳ್ಳಬೇಕೆಂಬ ಮನೋಭಾವ ಇದ್ದವರು. ಅದರಲ್ಲಿ ಯಶಸ್ಸು ಗಳಿಸಬೇಕಾದರೆ ಸ್ಥಳೀಯರೇ ಫಾದರ್ ಗಳೂ ಆಗಬೇಕೆನ್ನುವ ದೂರದೃಷ್ಟಿ ಹೊಂದಿದ್ದವರು. * * ಅದಕ್ಕಾಗಿ ಅವರು ಶಾಲೆಗಳನ್ನೂ ಕಾನ್ವೆಂಟುಗಳನ್ನೂ ಸ್ಥಾಪಿಸಿದರಲ್ಲದೇ ಸ್ಥಳೀಯ ಅಭ್ಯರ್ಥಿಗಳನ್ನು ಫಾದರ್ ಗಳ ಶಿಕ್ಷಣಕ್ಕೆಂದು ಕಳಿಸಿದರು. ಆದರೆ ನಾಡಿಗೆ ಬರಗಾಲ ಹಾಗೂ ಪ್ಲೇಗ್ ಮಾರಿ ಅಪ್ಪಳಿಸಿ ಮಿಷನ್ ಸಂಸ್ಥೆಗಳೆಲ್ಲವೂ ತಮ್ಮ ಪ್ರಚಾರಕಾರ್ಯವನ್ನು ಬದಿಗೊತ್ತಿ ಇತರ ಸೇವಾಕಾರ್ಯಗಳಲ್ಲಿ ತೊಡಗಬೇಕಾಯಿತು. ಸ್ಥಳೀಯರನ್ನೇ ಫಾದರ್ ಗಳನ್ನಾಗಿ ಮಾಡುವ ಶರ್ಬಾನೋರ ಕನಸು ಹೆಚ್ಚು ಫಲಪ್ರದವಾಗಲಿಲ್ಲ.
  • ನಂತರದ ಶತಮಾನದಲ್ಲಿ ನಡೆದ ಔದ್ಯಮಿಕ ಏರುಪೇರು ಹಾಗೂ ಇನ್ನಿತರ ಕಾರಣಗಳಿಂದಾಗಿ ಬೆಂಗಳೂರಿನತ್ತ ಮಹಾವಲಸೆಗಳು ಪ್ರಾರಂಭವಾದವು. ನಾಡಿನ ಭೂಪಟದಲ್ಲಿ ಬೆಂಗಳೂರು ರಾಜಧಾನಿಯ ಪಟ್ಟ ಗಳಿಸಿತು. ಪಾಂಡಿಚೇರಿಯಲ್ಲಿದ್ದ ಫಾದರ್ ಗಳ ತರಬೇತಿ ಸಂಸ್ಥೆ ಬೆಂಗಳೂರಿಗೆ ಬಂತು. ಮೈಸೂರು ಸೀಮೆಗೆಲ್ಲ ಒಂದೇ ಘಟಕವಾಗಿದ್ದ ಕ್ರೈಸ್ತ ಪೀಠ ವಿಭಾಗವಾಗಿ ಬೆಂಗಳೂರಿಗೆ ಅತ್ಯುಚ್ಛಪೀಠ ಲಭ್ಯವಾಯಿತು.
  • ಆಗ ನೇಮಕಗೊಂಡ ತೋಮಾಸ್ ಪೋತ್ತಕಮರಿ ಎಂಬ ಸ್ಥಳೀಯ ಬಿಷಪರು ಇಲ್ಲಿ ಕನ್ನಡ ಬಲ್ಲ ಫಾದರ್ ಗಳ ಕೊರತೆ ಮನಗಂಡು ಮಂಗಳೂರು ಕ್ರೈಸ್ತಪೀಠದಿಂದ ಹಲವಾರು ಫಾದರ್ ಗಳನ್ನು ಎರವಲಾಗಿ ಪಡೆದುಕೊಂಡರು. ಸ್ಥಳೀಯ ಗ್ರಾಮಗಳಿಂದ ಫಾದರ್ ಅಭ್ಯರ್ಥಿಗಳನ್ನು ಶಿಕ್ಷಣ ಸಂಸ್ಥೆಗೆ ದಾಖಲಿಸಿದರು.
  • ಸ್ಥಳೀಯ ಧರ್ಮಸಭೆಯ ಪೋಷಣೆಗೆ ಹಾಗೂ ಬೆಳವಣಿಗೆಗೆ ಸ್ಥಳೀಯ ಅಭ್ಯರ್ಥಿಗಳೇ ಮುಖ್ಯವಾದ ಮೂಲಧನ ಎಂಬುದನ್ನು ಇನ್ನಾರೂ ಅರಿಯದೇ ಹೋದುದು ಬೆಂಗಳೂರಿನ ಕ್ರೈಸ್ತಪೀಠದ ದೌರ್ಭಾಗ್ಯವೇ ಸರಿ. ಬೆಂಗಳೂರಿಗೆ ಪಾಂಡಿಚೇರಿಯಿಂದ ಬಂದಿದ್ದ ತಮಿಳು ಅಭ್ಯರ್ಥಿಗಳಾಗಲೀ ಮಂಗಳೂರಿನಿಂದ ಬಂದ ಕೊಂಕಣಿ ಅಭ್ಯರ್ಥಿಗಳಾಗಲೀ ಸ್ಥಳೀಯ ಧರ್ಮಸಭೆಯನ್ನು ಬೇರೂರಿಸುವ ಕೆಲಸಕ್ಕೆ ತೊಡಗದೇ ಸ್ವಜನ ಪಕ್ಷಪಾತ ತೋರಿ ಅಧಿಕಾರದಾಹಕ್ಕೆ ಒಳಗಾದರು. ಅವರಿಗೆಲ್ಲ ಬೆಂಗಳೂರು ಪುಷ್ಕಳ ಆಡುಂಬೊಲವಾಯಿತು.

ಉಲ್ಲೇಖಗಳು ಬದಲಾಯಿಸಿ