ಮುಕುಲ್ ಶಿವಪುತ್ರ (ಜನನ: ೨೫ ಮಾರ್ಚ್ ೧೯೫೬) ಇವರು ಹಿಂದುಸ್ತಾನಿ ಸಂಗೀತದ ಗಾಯಕರು ಮತ್ತು ಖ್ಯಾತ ಗಾಯಕ ಕುಮಾರ್ ಗಂಧರ್ವ ಇವರ ಪುತ್ರರು ಮತ್ತು ಶಿಷ್ಯರು.

ಮುಕುಲ್ ಅವರು ಕುಮಾರ್ ಗಂಧರ್ವ ಮತ್ತು ಅವರ ಮೊದಲ ಪತ್ನಿ ಭಾನುಮತಿ ಕಂಸ ಅವರ ಪುತ್ರ. ಇವರು ಸಂಗೀತ ಶಿಕ್ಷಣವನ್ನು ಅವರ ತಂದೆಯಿಂದ ಪಡೆದರು. ನಂತರ ಧ್ರುಪದ್ ಹಾಡುಗಾರಿಕೆಯನ್ನು ಪಂ. ಕೆ. ಜಿ. ಗಿಂಡೆಯವರಿಂದ ಮತ್ತು ಕರ್ನಾಟಕಿ ಸಂಗೀತದ ಶಿಕ್ಷಣವನ್ನು ವಿದ್ವಾನ್ ಎಂ ಡಿ ರಾಮನಾಥನ್ ಅವರಿಂದ ಪಡೆದಿದ್ದಾರೆ.

ಇವರು ೧೯೭೫ರಲ್ಲಿ ತಮ್ಮ ಮೊದಲ ಸಂಗೀತ ಕಚೇರಿಯನ್ನು ಪುಣೆಯ ಪ್ರಸಿದ್ಧ ಸವಾಯಿ ಗಂಧರ್ವ ಸಂಗೀತ ಸಮ್ಮೆಳನದಲ್ಲಿ ನೀಡಿದರು. ಆ ಸಮ್ಮೇಳನದಲ್ಲಿ ಕಚೇರಿ ನೀಡಿದ ಎರಡನೆಯ ತಲೆಮಾರಿನ ಮೊದಲ ಗಾಯಕರು.

ಇವರು ತಮ್ಮ ಗಾಯನದಲ್ಲಿ ತಮ್ಮ ತಂದೆಯವರ ಬಳಿ ಕಲಿತ ಶಿಕ್ಷಣವನ್ನು ತಳಹದಿಯಾಗಿಟ್ಟೂಕೊಂಡು, ಧ್ರುಪದ್ ಮತ್ತು ಕರ್ನಾಟಕಿ ಸಂಗೀತದ ಅಂಶಗಳನ್ನು ಸೇರಿಸಿಕೊಂಡಿದ್ದಾರೆ.

ಇವರ ಪತ್ನಿಯ ನಿಧನದ ನಂತರ ಇವರ ಸಂಗೀತದ ಜೀವನ ಸಾಕಷ್ಟು ಏರುಪೇರುಗಳನ್ನು ಕಂಡಿತು, ಅದರ ಜೊತೆಗೆ ಮಧ್ಯಪಾನವೂ ಸೇರಿ ಅವರ ಕಚೇರಿಗಳನೇಕವು ಹಾಳಾಗಿವೆ.

೨೦೧೫ರಲ್ಲಿ ಮಧ್ಯಪ್ರದೇಶದ ಸರಕಾರವು ಇವರಿಗೆ ಮದ್ಯಪಾನವನ್ನು ಬಿಡಿಸುವ ಸಲುವಾಗಿ ವಿಶೇಷ ಚಿಕಿತ್ಸೆಯನ್ನು ನೀಡಿ ಮದ್ಯಪಾನವನ್ನು ಬಿಡಿಸಲು ಸಹಾಯ ಮಾಡಿತು.

ಕಳೆದೆರಡು ವರ್ಷಗಳಿಂದ ಇವರು ತಮ್ಮ ಸಂಗೀತದ ವಿಚಾರಗಳನ್ನು ತಿಳಿಸಲು ಅನೇಕ ಉಪನ್ಯಾಸ ಆಧಾರಿತ ಕಚೇರಿಗಳನ್ನು ನೀಡುತ್ತಿದ್ದಾರೆ.

೨೦೧೮ರಲ್ಲಿ ಇವರು ದಕ್ಷಿಣ ಭಾರತದಲ್ಲಿ ತಮ್ಮ ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟರು. ಇವರ ಜೀವನದ ಅನೇಕ ಘಟನೆಗಳು ಮತ್ತು ಏರಿಳಿತಗಳು ಇವರ ಸಂಗೀತದ ಮೇಲೆ ಸಾಕಷ್ಟು ಪ್ರಭಾವ ಮಾಡಿವೆ.