ಕುಮಾರವ್ಯಾಸನ ಮುಂಡಿಗೆಗಳು

(ಮಂಡಿಗೆ ಇಂದ ಪುನರ್ನಿರ್ದೇಶಿತ)

ಕುಮಾರವ್ಯಾಸನ ಮುಂಡಿಗೆಗಳು ಬದಲಾಯಿಸಿ

  • ಕುಮಾರವ್ಯಾಸನ 'ಮುಂಡಿಗೆ' ಗಳು -ಅಥವಾ ಒಗಟು ಪದ್ಯಗಳು ; ಕುಮಾರವ್ಯಾಸ ಭಾರತದಲ್ಲಿ ಅನೇಕ ಮುಂಡಿಗೆಗಳು ಅಥವಾ ಒಗಟು ಪದ್ಯಗಳಿವೆ. ಅವಕ್ಕೆ ಅರಿತ ವ್ಯಾಖ್ಯಾನ ಕಾರರಿಲ್ಲದಿದ್ದರೆ ಅರ್ಥ ವಾಗುವುದುಕಷ್ಟ. : ಉದಾಹರಣೆಗೆ :-
  • ಪದ್ಯ :-
  • ವೇದ ಪುರುಷನ ಸುತನ ಸುತನ ಸ
  • ಹೋದರನ ಹೆಮ್ಮಗನ ಮಗನ ತ
  • ಳೋದರಿಯ ಮಾತುಳನ ರೂಪನನತುಳ ಭುಜ ಬಲದಿ |
  • ಕಾದಿ ಗೆಲಿದನಣ್ಣನವ್ವೆಯ
  • ನಾದಿನಿಯ ಜಠರದಲಿ ಜನಿಸಿದ
  • ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ ||

-

  • ಪದ ವಿಂಗಡನೆ :
  • ವೇದ ಪುರುಷನ ಸುತನ ಸುತನ ಸ
  • ಹೋದರನ ಮೊಮ್ಮಗನ ಮಗನ ತಳೋದರಿಯ
  • ಮಾತುಳನ ರೂಪನನು ಅತುಳ ಭುಜ ಬಲದಿ
  • ಕಾದಿ ಗೆಲಿದನ ಅಣ್ಣನ ಅವ್ವೆಯ
  • ನಾದಿನಿಯ ಜಠರದಲಿ ಜನಿಸಿದ
  • ಅನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ

- ಅರ್ಥ:-

  • ವೇದ ಪುರುಷನ -ನಾರಾಯಣನ ; ಸುತನ -ಬ್ರಹ್ಮನ ;
  • ಸುತನ -ನಾರದನ ; ಸಹೋದರನ - ಮರೀಚಿಯ ;
  • ಹೆಮ್ಮಗನ - ಇಂದ್ರನ (ಮರೀಚಿಯ ಮೊಮ್ಮಗ)

(ಬ್ರಹ್ಮನ ಮಗ ಮರೀಚಿ, ಮರೀಚಿಯ ಮಗ ಕಶ್ಯಪ -ಅವನ ಮಗ ಇಂದ್ರ )

  • ಮಗನ - ಅರ್ಜುನನ ; (ಇಂದ್ರನ ಮಗ-ಅರ್ಜುನ)
  • ತಳೋದರಿಯ - ಸುಭದ್ರೆಯ : ಮಾತುಳನ -ಮಾವನ ಕಂಸನ
  • (ಎಂದರೆ ಸುಭದ್ರೆಯ ತಾಯಿ ದೇವಕಿ -ದೇವಕಿಯ ತಂದೆ ದೇವಕ,
  • ದೇವಕನ ಅಣ್ಣ ಉಗ್ರಸೇನ , ಉಗ್ರಸೇನನ ಮಗ ಕಂಸ ;
  • ಆದ್ದರಿಂದ ದೇವಕಿಗೆ ಕಂಸ ಅಣ್ಣ -ದೊಡ್ಡಪ್ಪನ ಮಗ ;
  • ಸುಭದ್ರೆಗೆ ದೇವಕಿಯ ಅಣ್ಣ ಕಂಸ ಸೋದರಮಾವ ; )
  • ರೂಪನನು - ಕಂಸನಿಗೆ ಸರಿಸಮಾನನು - ಜರಾಸಂಧನನ್ನು ;
  • ಅತುಳ ಭುಜ ಬಲದಿ - ಅಸಾಧಾರಣ ಭುಜ ಬಲದಿಂದ ;
  • ಕಾದಿ ಗೆಲಿದನ - ಯುದ್ಧ ಮಾಡಿ ಗೆದ್ದವನ -ಭೀಮನ  ; ಅಣ್ಣನ -ಯುಧಿಷ್ಠಿರನ ;
  • ಅವ್ವೆಯ - ತಾಯಿಯ ಎಂದರೆ ಕುಂತಿಯ ; ನಾದಿನಿಯ - ದೇವಕಿಯ
  • (ಕುಂತಿಯ ತಮ್ಮ ವಸುದೇವ , ತಮ್ಮನ ಹೆಂಡತಿ - ನಾದಿನಿ-
  • ನಾದಿನಿಯು -ವಸುದೇವನ ಪತ್ನಿ ದೇವಕಿ) ;
  • ನಾದಿನಿಯ ಜಠರದಲಿ ಜನಿಸಿದ -
  • ದೇವಕಿಯ ಗರ್ಭದಲ್ಲಿ ಜನಿಸಿದ ;
  • ಅನಾದಿ ಮೂರುತಿ -ಆದಿ ಇಲ್ಲದ ದೇವ ;(ಕೃಷ್ಣ )
  • ಸಲಹೊ - ಕಾಪಾಡು ; ಗದುಗಿನ ವೀರನಾರಯಣ -
  • ಗದುಗಿನ ದೇವಾಲಯದಲ್ಲಿರುವ - ವೀರ ನಾರಾಯಣ .

-

ಪದ್ಯ ೨ ಬದಲಾಯಿಸಿ

  • ಒಂದರಿಂದೆರಡಹುದನರಿ ಮೂ
  • ರಂದವನು ತಿಳಿ ನಾಲ್ಕರಲಿ ಮನ
  • ಗುಂದದಿರೈದರಲಿ ವರ್ಜಿಪುದಾರೇಳರಲಿ |
  • ಒಂದಿಸದಿರೆಂಟನು ವಿಚಾರಿಸಿ
  • ಮುಂದುವರಿದೊಂಭತ್ತರಲಿ ಮನ
  • ಗುಂದಿಸದೀರೈದರಲಿ ಭೂಪಾಲ ಕೇಳೆಂದ||
  • ಪದ ವಿಂಡಣೆ :
  • ಒಂದರಿಂದ ಎರಡು ಅಹುದನು ಅರಿ, ಮೂರು ಅಂದವನು ತಿಳಿ,
  • ನಾಲ್ಕರಲಿ ಮನ , ಕುಂದದಿರು, ಐದರಲಿ , ವರ್ಜಿಪುದು
  • ಆರು ಏಳರಲಿ ಒಂದಿಸದಿರು, ಎಂಟನು ವಿಚಾರಿಸಿ ,
  • ಮುಂದುವರಿದು ಒಂಭತ್ತರಲಿ, ಮನ ಕುಂದಿಸದಿರು ಈರು ಐದರಲಿ,
  • ಭುಪಾಲ ಕೇಳು ಎಂದ.
  • ಅರ್ಥ
  • ಒಂದರಿಂದ - ಮೂಲ ಚೈತನ್ಯವಾದ ಆ ಪರಬ್ರಹ್ಮ ದಿಂದ ;
  • ಎರಡು ಅಹುದನು ಅರಿ - ಪರಮಾತ್ಮ ಜೀವಾತ್ಮ ವಾಗಿ
  • ಈ ಮಾನವ ಸೃಷ್ಟಿಯಾಗಿರುವುದನ್ನು ತಿಳಿ ;
  • ಮೂರು ಅಂದವನು ತಿಳಿ - ಈ ಜಗತ್ತಿನ ನಡವಳಿಕೆಗೆ ಸತ್ವ, ರಜ,,ತಮ,
  • ಈ ಮೂರು ಗಣ ತ್ರಯಗಳು ಕಾರಣವೆಂಬುದನ್ನು ತಿಳಿದುಕೋ ;
  • ನಾಲ್ಕರಲಿ ಮನ - ಧರ್ಮ,ಅರ್ಥ, ಕಾಮ, ಮೋಕ್ಷ ಈನಾಲ್ಕರಲ್ಲೂ ಮನಸ್ಸಿರಲಿ,
  • ಅವನ್ನು ಸಾಧಿಸಬೇಕೆಂಬ ಗುರಿ ಇರಲಿ ;
  • ಕುಂದದಿರು, ಐದರಲಿ - ಪಂಚೇಂದ್ರಿಗಳಿಗೆ (ನೇತ್ರಗಳು, ನಾಸಿಕ, ಶ್ರೋತೃ/ ಕಿವಿ , ಜಿಹ್ವಾ/ನಾಲಿಗೆ, ತ್ವಕ್ / ಚರ್ಮ) ;
  • ವರ್ಜಿಪುದು -ಇವುಗಳಿಗೆ ವಶನಾಗಬೆಡ ;
  • ಆರು ಏಳರಲಿ -ಅರಿಷಡ್ವರ್ಗಗಳನ್ನೂ (ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ) ಮತ್ತು ಸಪ್ತ ವ್ಯಸನ ಗಳಾದ ಸ್ತ್ರೀ,ಅಕ್ಷ, ಮೃಗಯೆ, ಪಾನ, ವಾಕ್ಪಾರುಷ್ಯ , ಅರ್ಥದೂಷಣೆ , ದಂಡಪಾರುಷ್ಯ -ಇವುಗಳಿಂದ ; ಒಂದಿಸದಿರು - ದೂರವಿರು, ;
  • ಎಂಟನು ವಿಚಾರಿಸಿ - ಅಷ್ಠಾಂಗ ಯೋಗವನ್ನು ಅರಿತು (ಯಮ,ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ,ಧಾರಣ, ಸಮಾಧಿ) ;
  • ಮುಂದುವರಿದು ಒಂಭತ್ತರಲಿ - ನವ ವಿಧ ಭಕ್ತಿಯಲ್ಲಿ (ಶ್ರವಣ, ಸ್ಮರಣ, ಕ್ಭಿರ್ತನ, ವಂದನ, ಅರ್ಚನ, ಪಾದ ಸೇವನ, ಸಖ್ಯ, ದಾಸ್ಯ, ಆತ್ಮ ನಿವೇದನ) ಮನಸ್ಸನ್ನಿಡು (ಮುಂದುವರಿ) ;
  • ಮನ ಕುಂದಿಸದಿರು ಈರು ಐದರಲಿ, (ಎರಡು+ಐದು=ಹತ್ತು) ; ಇವುಗಳ ಜೊತೆಯಲ್ಲಿ ಕ್ಷಮೆ, ಮಾರ್ದವತೆ, ಆರ್ಜವ (ಪ್ರಾಮಣಿಕತೆ), ಶೌಚ, ಸತ್ಯ,ಸಂಯಮ, ತಪಸ್ಸು (ಶುದ್ಧ ಚಿಂತನೆ), ತ್ಯಾಗ, ಪರದ್ರವ್ಯದಲ್ಲಿ ಅನಪೇಕ್ಷೆ, ಬ್ರಹ್ಮಚರ್ಯ ಈ ಹತ್ತು ಸಾಮಾನ್ಯ ಧರ್ಮಗಳನ್ನು ;
  • ಮನ ಕುಂದದಿರು -ಮನಸ್ಸನ್ನು ಕುಂದಿಸಬೇಡ- ಧರ್ಮವನ್ನು ಬಿಡದೆ ಅನುಸರಿಸು
  • ಭೂಪಾಲ ಕೇಳು ಎಂದ.
  • ಈ ಪದ್ಯಕ್ಕೆ ರಾಜನೀತಿಗೆ ಅನುಗುಣವಾಗಿ ಬೇರೊಂದು ಬಗೆಯ ಅರ್ಥವನ್ನೂ ಹೇಳುತ್ತಾರೆ

ಪದ್ಯ ೨ : ರಾಜ ನೀತಿಯ ಪ್ರಕಾರ ಬದಲಾಯಿಸಿ

  • ಒಂದರಿಂದ -ಬುದ್ಧಿ ಅಥವಾ ವಿವೇಕದಿಂದ,
  • ಎರಡನು -ಕರ್ತವ್ಯ ಮತ್ತು ಅಕರ್ತವ್ಯಗಳನ್ನು
  • ಅರಿ -ವಿಚಾರ ಮಾಡು,
  • ಮೂರು ಅಂದವನು ತಿಳಿ - ಶತ್ರುಗಳು ಯಾರು, ಮಿತ್ರರು ಯಾರು , ಉದಾಸೀನರು ಯಾರುಎಂಬುದನ್ನು ಅರಿತು,
  • ನಾಲ್ಕರಲಿ - ಸಾಮ, ದಾನ, ಬೇಧ, ದಂಡ ವೆಂಬ ಚತುರೋಪಾಯಗಳನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸು,
  • ಮನಗುಂದದಿರು ಐದರಲಿ - ಪಂಚೇಂದ್ರಿಗಳಿಗೆ ವಶನಾಗ ಬೇಡ,
  • ಆರನು - ಸಂಧಿ, ವಿಗ್ರಹ, ಯಾನ, ಆಸನ, ದ್ವೈದೀ ಭಾವ, ಸಮಾಶ್ರಯ, ಎಂಬ ರಾಜನೀತಿಯನ್ನು ಸಮಯಾನುಸಾರ ಉಪಯೋಗಿಸಿ,
  • ವರ್ಜಿಪುದು ಏಳರಲಿ - ಸ್ತ್ರೀ , ಜೂಜು , ಬೇಟೆ, ಮದ್ಯ, ಕಠೋರ ವಚನ, ಕ್ರೂರ ದಂಡನೆ, ದುಂದುಗಾರಿಕೆ, ಈ ಸಪ್ತ ವ್ಯಸನ ಗಳಿಂದ ದೂರವಿರು.,

ಹೀಗೆ ಮನಸ್ಸನು ಹಿಡಿತದಲ್ಲಿ ಇಟ್ಟುಕೊಂಡು,

  • ಅಷ್ಟಾಂಗ ಯೋಗವನ್ನು ಸಾಧನೆ ಮಾಡಿ, ನವ ವಿಧ ಭಕ್ತಿಯನ್ನು ರೂಡಿಸಿಕೊಂಡು, ದಶ ಧರ್ಮಗಳನ್ನು ಪಾಲಿಸು, ಇದರಿಂದ ಮಾನಸಿಕ ನೆಮ್ಮದಿ ದೊರಕುವುದು-

[೧][೨]

ಪದ್ಯ ೩ ಬದಲಾಯಿಸಿ

ಮುಂದುವರೆಸಿ -

ಆಧಾರ ಬದಲಾಯಿಸಿ

  • ಗಮಕಸಿರಿ -ಸ್ಮರಣ ಸಂಚಿಕೆ ೧೯೯೭ -( ಶ್ರೀ ಜಗನ್ನಾಥ ಶಾಸ್ತ್ರೀ)

ನೋಡಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. ಗಮಕಸಿರಿ -ಸ್ಮರಣ ಸಂಚಿಕೆ ೧೯೯೭ - ಶ್ರೀ ಜಗನ್ನಾಥ ಶಾಸ್ತ್ರೀ
  2. ಕರ್ನಾಟ ಭಾರತ ಕಥಾಮಂಜರಿ - ಕುಮಾರವ್ಯಾಸ; ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ.
  3. "ಮುಂಡಿಗೆಗಳು". Archived from the original on 2019-11-03. Retrieved 2019-11-22.