ಭಾರತದ ನ್ಯಾಯವ್ಯವಸ್ಥೆ

(ಭಾರತೀಯ ನ್ಯಾಯ ವ್ಯವಸ್ಥೆ ಇಂದ ಪುನರ್ನಿರ್ದೇಶಿತ)

ಭಾರತದ ನ್ಯಾಯವ್ಯವಸ್ಥೆಯು ಭಾರತದಲ್ಲಿ ಈಗ ಕಾರ್ಯನಡೆಸುತ್ತಿರುವ ಕಾನೂನು ವ್ಯವಸ್ಥೆ. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಬ್ರಿಟಿಷ್ ವಸಾಹತುಶಾಹಿ ಪ್ರಭಾವದ ದೀರ್ಘ ಅವಧಿಯ ಕಾರಣದಿಂದಾಗಿ ಇದು ಬಹುಮಟ್ಟಿಗೆ ಇಂಗ್ಲೆಂಡ್‌ನ ಸಾಮಾನ್ಯ ಕಾನೂನಿನ ಮೇಲೆ ಆಧಾರಿತವಾಗಿದೆ. ಸಮಕಾಲೀನ ಭಾರತೀಯ ಕಾನೂನಿನ ಬಹುತೇಕ ಭಾಗವು ಗಮನಾರ್ಹವಾಗಿ ಐರೋಪ್ಯ ಮತ್ತು ಅಮೇರಿಕದ ಪ್ರಭಾವವನ್ನು ತೋರಿಸುತ್ತದೆ.

ಕರ್ನಾಟಕದ ಉಚ್ಚ ನ್ಯಾಯಾಲಯ

ನ್ಯಾಯಾಂಗದ ಮೇಲೆ ಒತ್ತಡ: ಕಣ್ಣೀರಿಟ್ಟ ಸಿಜೆಐ ಬದಲಾಯಿಸಿ

 
ಸುಪ್ರೀಂ ಕೋರ್ಟ್'ಕಟ್ಟಡದಲ್ಲಿ ಮುಖ್ಯ ನ್ಯಾಯಮೂರ್ತಿಗಳ ಪೀಠವಿರುವ ಕೇಂದ್ರಭಾಗ

ನವದೆಹಲಿಯಲ್ಲಿ ೨೪-೪-೨೦೧೬ ರಂದು, ಮುಖ್ಯಮಂತ್ರಿಗಳು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಟಿ.ಎಸ್. ಠಾಕೂರ್ ದೇಶದ ಅಭಿವೃದ್ಧಿಯಲ್ಲಿ ಪರಿಣಾಮಕಾರಿಯಾದ ನ್ಯಾಯಾಂಗ ವ್ಯವಸ್ಥೆ ಸಹ ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದ್ದಾರೆ. ನ್ಯಾಯ ವಿತರಣೆ ಪ್ರಕ್ರಿಯೆ ನ್ಯಾಯಾಧೀಶರ ಸಂಖ್ಯೆಯ ಅನುಪಾತದಿಂದ ಹಾಗೂ ದೀರ್ಘಾವಧಿಯಿಂದ ಖಾಲಿ ಇರುವ ಹುದ್ದೆಗಳಿಂದ ಪ್ರತಿಕೂಲ ಪರಿಣಾಮ ಎದುರಿಸುತ್ತಿದೆ, ಅಭಿವೃದ್ಧಿ ಹೊಂದಿರುವ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಇಲ್ಲಿನ ನ್ಯಾಯ ವಿತರಣೆ ಪ್ರಕ್ರಿಯೆ ನಿರಾಶಾದಾಯಕವಾಗಿದೆ ಎಂದಿರುವ ಅವರು ಎಲ್ಲದಕ್ಕೂ ನ್ಯಾಯಾಂಗ ವ್ಯವಸ್ಥೆಯನ್ನೇ ದೂಷಿಸುವ ಪ್ರವೃತ್ತಿ ಬಗ್ಗೆ ಬೇಸರ ವ್ಯಕ್ತಪಡಿಸಿ ಪ್ರಧಾನಿ ಮೋದಿ ಎದುರಲ್ಲೇ ಕಣ್ಣೀರಿಟ್ಟ ಪ್ರಸಂಗವು ನಡೆಯಿತು.

  • ಭಾರತದ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರು ಭಾರತದ ನ್ಯಾಯವ್ಯವಸ್ಥೆಯಲ್ಲಿ ಇರುವ ಕೊರತೆ ಅದರ ಮೇಲಿರುವ ಒತ್ತಡವನ್ನು ಹೇಳುತ್ತಾ ಭಾವುಕರಾದರು.

[೧]

ಇಂದಿನ ನ್ಯಾಯದಾನದಲ್ಲಿ ಸಮಸ್ಯೆ ಬದಲಾಯಿಸಿ

  • ರಾಜಧಾನಿ ದೆಹಲಿಯಲ್ಲಿ ನಡೆದ ಪ್ರಧಾನಿ, ಸಿಎಂಗಳು ಮತ್ತು ಮುಖ್ಯ ನ್ಯಾಯಾಧೀಶರ ಜಂಟಿ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ನ್ಯಾಯಾಧೀಶರ ಕೊರತೆ ಮತ್ತು ನ್ಯಾಯದಾನ ವಿಳಂಬದಿಂದ ಹೇಗೆ ದೇಶದ ಮೇಲೆ ಪರಿಣಾಮವಾಗುತ್ತಿದೆ ಮತ್ತು ನ್ಯಾಯಾಂಗವು ಹೇಗೆ ಇತರರಿಂದ ಅವಹೇಳನಕ್ಕೆ ಗುರಿಯಾಗುತ್ತಿದೆ ಎಂದು ವಿವರಿಸಿ ನ್ಯಾ|ಟಿ.ಎಸ್‌. ಠಾಕೂರ್‌ ಕಣ್ಣೀರಿಟ್ಟರು.
 
ಸುಪ್ರೀಂ ಕೋರ್ಟ್‌ ಕಟ್ಟಡ: ಎದುರು ತಾಯಿ ಮತ್ತು ಮಗುವಿನ ಶಿಲ್ಪ ಕೃತಿ
ವಿವರ
  • "ಒಂದೆಡೆ ಅರ್ಜಿಗಳ ಹಿಮಪಾತವಾಗುತ್ತಿದೆ. ಇನ್ನೊಂದೆಡೆ ಅರ್ಜಿಗಳ ತ್ವರಿತ ವಿಲೇವಾರಿಗಾಗಿ ನ್ಯಾಯಾಧೀಶರ ಸಂಖ್ಯೆಯನ್ನು 21 ಸಾವಿರದಿಂದ 40 ಸಾವಿರಕ್ಕೆ ಹೆಚ್ಚುತ್ತಿರಬೇಕು ಎಂಬ ದಶಕಗಳ ಬೇಡಿಕೆಯು ಸರ್ಕಾರದ ಒಪ್ಪಿಗೆ ಪಡೆಯದೇ ಹಾಗೇ ಕೊಳೆಯುತ್ತಿದೆ'
  • 1987ರಿಂದ ಯಾವುದೇ ಪ್ರಗತಿ ಕಂಡಿಲ್ಲ. 50 ಲಕ್ಷ ಜನಕ್ಕೆ 10 ನ್ಯಾಯಾಧೀಶರು ಈಗ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಸಂಖ್ಯೆಯನ್ನು 50ಕ್ಕೆ ಏರಿಸಬೇಕು ಎಂದು ನ್ಯಾಯಾಂಗ ಆಯೋಗ 87ರಲ್ಲೇ ಶಿಫಾರಸು ಮಾಡಿತ್ತು. ಆದರೆ ಸರ್ಕಾರ ಈ ಬಗ್ಗೆ ನಿಷ್ಕ್ರಿಯವಾಗಿದೆ. ನ್ಯಾಯಾಧೀಶರ ಹೆಚ್ಚಳ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಮೂಲಸೌಕರ್ಯ ಒದಗಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಹೊಣೆಗಾರಿಕೆಯಾಗಿದೆ ಎಂದು ಅವರು ಸಮಸ್ಯೆಯನ್ನು ಕೂಲಂಕುಷವಾಗಿ ಬಿಡಿಸಿ ಇಟ್ಟರು.
  • "ನಾನು ಕೇವಲ ಅರ್ಜಿದಾರರ ಪರ ಅಥವಾ ಜೈಲಲ್ಲಿ ಕೊಳೆಯುತ್ತಿರುವವರ ಪರ ಮಾತನಾಡುತ್ತಿಲ್ಲ. ದೇಶದ ಅಭಿವೃದ್ಧಿಯೂ ಇದರಲ್ಲಿ ಅಡಗಿದೆ. ಈಗಲೂ ತಡವಾಗಿಲ್ಲ. ಸಂದರ್ಭಕ್ಕೆ ತಕ್ಕಂತೆ ಸೆಟೆದು ನಿಲ್ಲಬೇಕು. ನ್ಯಾಯದಾನ ವಿಳಂಬಕ್ಕೆ ಕೇವಲ ನ್ಯಾಯಾಂಗ ಕಾರಣ ಎಂದು ಬೆಟ್ಟು ಮಾಡುವುದನ್ನು ಬಿಡಬೇಕು. ಏಕೆಂದರೆ ನ್ಯಾಯಾಧೀಶರ ನೇಮಕವು ಶಾಸಕಾಂಗ-ಕಾರ್ಯಾಂಗದ ಕೈಯಲ್ಲಿದೆಯೇ ವಿನಾ ನ್ಯಾಯಾಂಗದ ಕೈಯಲ್ಲಿಲ್ಲ' ಎಂದು ಹೇಳಿ ಗದ್ಗದಿತರಾದರು.
ಜಡ್ಜ್ ಗಳ ಕೊರತೆ ಆದದ್ದು ಹೀಗೆ...
  • ದೇಶದಲ್ಲಿ ನ್ಯಾಯಾಧೀಶರ ಕೊರತೆ ಹೇಗಾಯಿತು ಎಂದು ನ್ಯಾ| ಟಿ.ಎಸ್‌. ಠಾಕೂರ್‌ ಅವರೇ ಖುದ್ದಾಗಿ ೨೪-೪-೨೦೧೬ಭಾನುವಾರ ವಿವರಿಸಿದರು.
  • 1950ರಲ್ಲಿ ಸುಪ್ರೀಂ ಕೋರ್ಟ್‌ ಸ್ಥಾಪನೆಯಾದಾಗ ಇದರಲ್ಲಿ ಭಾರತದ ಮುಖ್ಯ ನ್ಯಾಯಾಧೀಶರು ಸೇರಿ 8 ನ್ಯಾಯಾಧೀಶರು ಇದ್ದರು. ಆಗ 1215 ಕೇಸುಗಳು ಇದ್ದವು. ಪ್ರತಿ ಜಡ್ಜ್'ಗಳಿಗೆ ಸರಾಸರಿ 100 ಪ್ರಕರಣಗಳಿದ್ದವು.
  • 1960ರಲ್ಲಿ ಸುಪ್ರೀಂ ಕೋರ್ಟ್‌ ಜಡ್ಜ್ ಗಳ ಬಲ 14ಕ್ಕೇರಿತು. ಪ್ರಕರಣಗಳ ಸಂಖ್ಯೆ 3247ಕ್ಕೇರಿತು.
  • 1977ರಲ್ಲಿ 18 ನ್ಯಾಯಾಧೀಶರಿದ್ದರು. 14,501 ಪ್ರಕರಣಗಳು ಬಾಕಿ ಇದ್ದವು.
  • 2009ರಲ್ಲಿ ಸುಪ್ರೀಂ ಕೋರ್ಟ್‌ ಜಡ್ಜ್ಗಳ ಸಂಖ್ಯೆ 31ಕ್ಕೇರಿತು. ಆದರೆ ಪ್ರಕರಣಗಳ ಸಂಖ್ಯೆ 77,181ಕ್ಕೇರಿತು.
ನ್ಯಾ|ಠಾಕೂರ್‌ ಹೇಳಿದ್ದು
  • ನ್ಯಾಯಾಧೀಶರ ಸಂಖ್ಯೆ 21 ಸಾವಿರದಿಂದ 40 ಸಾವಿರಕ್ಕೇರಿಸುವ ಪ್ರಸ್ತಾಪ 1987ರಿಂದಲೂ ನೆನೆಗುದಿಯಲ್ಲಿದೆ
  • ಈ ಬಗ್ಗೆ ಸರ್ಕಾರ ನಿಷ್ಕ್ರಿಯವಾಗಿದೆ. ನ್ಯಾಯಾಧೀಶರ ಹೆಚ್ಚಳ ಕೇಂದ್ರ, ರಾಜ್ಯ ಸರ್ಕಾರಗಳ ಜಂಟಿ ಹೊಣೆಗಾರಿಕೆ
  • ದೇಶದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಕೊರತೆಯಿಂದ ನ್ಯಾಯಾಂಗದ ಕೈಯನ್ನು ಕಟ್ಟಿಹಾಕಿದಂತಾಗಿದೆ
  • ಪರಿಸ್ಥಿತಿ ಹೀಗಿದ್ದರೂ ತ್ವರಿತ ನ್ಯಾಯದಾನ ಸಾಧ್ಯವಾಗದೆ ಇರುವುದಕ್ಕೆ ನ್ಯಾಯಾಂಗವನ್ನು ದೂಷಿಸಲಾಗುತ್ತಿದೆ

[೨]

ಖಾಲಿ ಹುದ್ದೆಗಳು ಬದಲಾಯಿಸಿ

  • 19 Oct, 2016
  • ದೇಶದಲ್ಲಿ 5 ಸಾವಿರ ನ್ಯಾಯಾಧೀಶರ ಕೊರತೆ
  • ಸುಪ್ರೀಂ ಕೋರ್ಟ್‌ ಮತ್ತು ದೇಶದ 24 ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳ ಕೊರತೆಯ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಅಧೀನ ನ್ಯಾಯಾಲಯಗಳ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂಬುದರತ್ತ ಕಾನೂನು ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶ ಹೇಳುತ್ತಿದೆ. ಅಧೀನ ನ್ಯಾಯಾಲಯಗಳಲ್ಲಿ 5,111 ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ. ಈ ವರ್ಷ ಜೂನ್‌ 30ರ ಅಂಕಿ ಅಂಶ ಪ್ರಕಾರ ದೇಶದಲ್ಲಿ ಮಂಜೂರಾದ ನ್ಯಾಯಾಧೀಶರ ಹುದ್ದೆ 21,303. ಕರ್ತವ್ಯ ನಿರ್ವಹಿಸುತ್ತಿರುವ ನ್ಯಾಯಾಧೀಶರ ಸಂಖ್ಯೆ 16,192 ಮಾತ್ರ.
  • ದೊಡ್ಡ ರಾಜ್ಯಗಳಲ್ಲಿ ಅಧೀನ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ನೇಮಿಸುವ ಕೆಲಸವನ್ನು ಹೈಕೋರ್ಟ್‌ ಮಾಡುತ್ತದೆ. 11 ರಾಜ್ಯಗಳಲ್ಲಿ ಹೈಕೋರ್ಟ್‌ ಈ ಕೆಲಸ ಮಾಡಿದರೆ 17 ರಾಜ್ಯಗಳಲ್ಲಿ ರಾಜ್ಯಗಳ ಲೋಕ ಸೇವಾ ಆಯೋಗದ ಮೂಲಕ ನೇಮಕಾತಿ ಮಾಡಲಾಗುತ್ತಿದೆ. ನ್ಯಾಯಾಧೀಶರ ಹುದ್ದೆಗಳು ಅತ್ಯಂತ ಹೆಚ್ಚು ಖಾಲಿ ಇರುವುದು ಗುಜರಾತ್‌ನಲ್ಲಿ ಇಲ್ಲಿ ಖಾಲಿ ಹುದ್ದೆಗಳ ಸಂಖ್ಯೆ 794. ಎರಡನೇ ಸ್ಥಾನದಲ್ಲಿ ಬಿಹಾರ (792) ಮತ್ತು ಮೂರನೇ ಸ್ಥಾನದಲ್ಲಿ ಉತ್ತರ ಪ್ರದೇಶ (595) ರಾಜ್ಯಗಳಿವೆ.
  • ನ್ಯಾಯ ನೀಡಿಕೆ ಮತ್ತು ಕಾನೂನು ಸುಧಾರಣೆಯ ರಾಷ್ಟ್ರೀಯ ಆಯೋಗದ ಸಲಹಾ ಸಮಿತಿಗೆ ಕಾನೂನು ಸಚಿವಾಲಯ ಟಿಪ್ಪಣಿಯೊಂದನ್ನು ಸಿದ್ಧಪಡಿಸಿ ನೀಡಿದೆ. ‘ಪ್ರಕರಣಗಳು ವಿಚಾರಣೆಯಾಗದೆ ಬಾಕಿ ಉಳಿಯಲು ನ್ಯಾಯಾಧೀಶರ ಸಂಖ್ಯೆ ಕಡಿಮೆ ಇರುವುದೇ ಕಾರಣ ಎಂಬುದು ಸರಿಯಾದ ಚಿತ್ರಣ ಅಲ್ಲ’ ಎಂದು ಈ ಟಿಪ್ಪಣಿಯಲ್ಲಿ ಹೇಳಲಾಗಿದೆ. ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳ ಅಂಕಿ ಅಂಶದ ವಿಶ್ಲೇಷಣೆಯನ್ನು ಈ ಟಿಪ್ಪಣಿಯಲ್ಲಿ ನೀಡಲಾಗಿದೆ. 2005ರಲ್ಲಿ ದಾಖಲಾದ ಸಿವಿಲ್‌ ಪ್ರಕರಣಗಳ ಸಂಖ್ಯೆ ಸುಮಾರು 40.69 ಲಕ್ಷವಾದರೆ 2015ರಲ್ಲಿ ಈ ಸಂಖ್ಯೆ 36.22 ಲಕ್ಷಕ್ಕೆ ಇಳಿದಿದೆ. ಇಳಿಕೆ ಪ್ರಮಾಣ ಶೇ 11. 2005ರಲ್ಲಿ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಇದ್ದ ನ್ಯಾಯಾಧೀಶೃ ಸಂಖ್ಯೆ 11,682. ಆದರೆ 2015ರಲ್ಲಿ ಅದು 16 ಸಾವಿರಕ್ಕೆ ಏರಿದೆ. ನ್ಯಾಯಾಧೀಶರ ಸಂಖ್ಯೆ ಹೆಚ್ಚಾಗಿದೆ, ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಬಾಕಿ ಪ್ರಕರಣಗಳ ಪ್ರಮಾಣ ಮಾತ್ರ ಏರುತ್ತಲೇ ಇದೆ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.[೩]

ಖಾಲಿ ಹುದ್ದೆಗಳ ಸಮಸ್ಯೆ-ಸಿ.ಜೆ.ಅಸಮಾಧಾನ ಬದಲಾಯಿಸಿ

  • ನ್ಯಾಯಮೂರ್ತಿಗಳಿಲ್ಲ ಎಂಬ ಕಾರಣಕ್ಕೆ ನ್ಯಾಯಾಲಯದ ಸಭಾಂಗಣಗಳಿಗೆ ಬೀಗ ಹಾಕಲಾಗಿದೆ. ಇಡೀ ನ್ಯಾಯಾಂಗ ವ್ಯವಸ್ಥೆಗೇ ಬೀಗ ಹಾಕಲು ನೀವು ಬಯಸಿದ್ದೀರಾ’ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ನೇತೃತ್ವದ ಪೀಠ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದ ಕಡತಗಳು ಮುಂದಕ್ಕೆ ಸಾಗದಿರುವುದನ್ನು ಟೀಕಿಸಿದೆ. ಹೀಗೆಯೇ ಮುಂದುವರಿದರೆ ಪ್ರಧಾನಿ ಕಾರ್ಯಾಲಯ ಮತ್ತು ಕಾನೂನು ಸಚಿವಾಲಯದ ಕಾರ್ಯದರ್ಶಿಗಳನ್ನು ಕೋರ್ಟ್‌ಗೆ ಕರೆಸಿಕೊಂಡು ವಾಸ್ತವ ಪರಿಸ್ಥಿತಿ ಏನು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ ಎಂದು ಪೀಠ ಎಚ್ಚರಿಕೆ ನೀಡಿದೆ. ವಿವಿಧ ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ. ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳು ಇಲ್ಲ ಎಂಬ ಕಾರಣಕ್ಕೆ ಹಲವು ಸಭಾಂಗಣಗಳಿಗೆ ಬೀಗ ಹಾಕಲಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿತು.
  • ನೇಮಕಾತಿ ನಿಯಮಗಳು ಅಂತಿಮಗೊಂಡಿಲ್ಲ ಎಂಬ ಕಾರಣಕ್ಕೆ ನೇಮಕಾತಿ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಲು ಅವಕಾಶ ಇಲ್ಲ ಎಂದು ಪೀಠ ಹೇಳಿದೆ.
  • ‘ಈ ವಿಚಾರದಲ್ಲಿ ಯಾವುದೇ ಬಿಕ್ಕಟ್ಟು ಸೃಷ್ಟಿಸಬಾರದು. ನೇಮಕಾತಿ ನಿಯಮ ಅಂತಿಮಗೊಳ್ಳದಿದ್ದರೂ ನ್ಯಾಯಮೂರ್ತಿಗಳ ನೇಮಕ ಮಾಡುವುದಾಗಿ ನೀವು ಮಾತು ಕೊಟ್ಟಿದ್ದೀರಿ. ನಿಯಮ ಅಂತಿಮಗೊಳಿಸುವುದು ಮತ್ತು ನೇಮಕಾತಿಯ ನಡುವೆ ಸಂಬಂಧ ಇಲ್ಲ’ ಎಂದು ಸರ್ಕಾರಕ್ಕೆ ಪೀಠ ಹೇಳಿದೆ. ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕ ಸಂಬಂಧ ಕೊಲಿಜಿಯಂ ಶಿಫಾರಸು ಮಾಡಿದ್ದರೂ ನೇಮಕಕ್ಕೆ ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ ಆಕ್ರೋಶ ವ್ಯಕ್ತಪಡಿಸಿದೆ.
  • ಆರೋಪ ಪ್ರತ್ಯಾರೋಪ: ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿ ಸೆ. 14ರಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಪ್ರತಿಕ್ರಿಯೆ ನೀಡಿದೆ. ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿ ಬಿಕ್ಕಟ್ಟು ಉಂಟಾಗಬಾರದು ಮತ್ತು ಪರಸ್ಪರ ದೂಷಣೆ ಮಾಡಬಾರದು ಎಂದು ಪ್ರತಿಕ್ರಿಯೆಯಲ್ಲಿ ಹೇಳಲಾಗಿತ್ತು. ನೇಮಕಾತಿ ಪ್ರಕ್ರಿಯೆ ವಿಳಂಬವಾಗಲು ಹೈಕೋರ್ಟ್‌ಗಳೇ ಕಾರಣ ಎಂದು ಕೇಂದ್ರ ಆರೋಪಿಸಿತ್ತು. ನ್ಯಾಯಮೂರ್ತಿಗಳ ನೇಮಕದಲ್ಲಿ ವಿಳಂಬ ಸಹಿಸುವುದಿಲ್ಲ ಎಂದು ಅದಕ್ಕೂ ಮೊದಲು ಸುಪ್ರೀಂ ಕೋರ್ಟ್‌ ಹೇಳಿತ್ತು. ‘ನ್ಯಾಯಾಂಗ ವ್ಯವಸ್ಥೆ ಕುಸಿದುಬಿದ್ದರೆ ಅದರ ಹೊಣೆಗಾರಿಕೆಯನ್ನು ಯಾರಾದರೂ ವಹಿಸಿಕೊಳ್ಳಲೇಬೇಕಾಗುತ್ತದೆ’ ಎಂದು ಹೇಳಿತ್ತು.

ನೇಮಕದಲ್ಲಿ ವಿಲಂಬ ಬದಲಾಯಿಸಿ

  • ಕೊಲಿಜಿಯಂ ಶಿಫಾರಸುಗಳಿಗೆ ಅನುಮೋದನೆ ನೀಡಲು ಕೇಂದ್ರದಿಂದ ವಿಳಂಬ
  • ಇನ್ನೂ ಅಂತಿಮವಾಗದ ನ್ಯಾಯಮೂರ್ತಿ ನೇಮಕ ನಿಯಮಗಳು
  • 1971ರ ಯುದ್ಧದಲ್ಲಿ ಭಾಗವಹಿಸಿದ್ದ ಲೆ. ಕ. ಅನಿಲ್‌ ಕಬೋತ್ರ ಅವರಿಂದ ನ್ಯಾಯಮೂರ್ತಿಗಳ ಕೊರತೆ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ
  • ಕಾರ್ಯದರ್ಶಿಗಳಿಗೆ ನೋಟಿಸ್‌ ನೀಡಬಾರದೆಂದು ಅಟಾರ್ನಿ ಜನರಲ್‌ ಕೋರಿಕೆ. ಶೀಘ್ರ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸುವುದಾಗಿ ಭರವಸೆ
  • ವಿಚಾರಣೆ ನ. 11ಕ್ಕೆ ಮುಂದೂಡಿಕೆ

ನ್ಯಾಯಾಧೀಶರ ಕೊರತೆ ಬದಲಾಯಿಸಿ

  • ದೇಶದಲ್ಲಿರುವ ಹೈಕೋರ್ಟ್‌ಗಳ ಸಂಖ್ಯೆ : 24
  • 1,079 ಮಂಜೂರಾದ ನ್ಯಾಯಮೂರ್ತಿ ಹುದ್ದೆಗಳು
  • 478 ನ್ಯಾಯಮೂರ್ತಿ ಹುದ್ದೆಗಳು ಖಾಲಿ
  • 5,111 ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳ ಸಂಖ್ಯೆ
  • 21,303 ಕೆಳ ಹಂತದ ನ್ಯಾಯಾಲಯಗಳಿಗೆ ಮಂಜೂರಾದ ನ್ಯಾಯಾಧೀಶರ ಸಂಖ್ಯೆ
  • ಜಿಲ್ಲಾ ನ್ಯಾಯಾಧೀಶರ ನೇಮಕ ಹೈಕೋರ್ಟ್‌ನ ಹೊಣೆ

ಸುಪ್ರೀಂ ಕೋರ್ಟ್‌ ಹೇಳಿದ್ದು ಬದಲಾಯಿಸಿ

  • ನ್ಯಾಯಮೂರ್ತಿಗಳಿಲ್ಲ ಎಂಬ ಕಾರಣಕ್ಕೆ ಕರ್ನಾಟಕ ಹೈಕೋರ್ಟ್‌ನ ಒಂದಿಡೀ ಮಹಡಿಗೆ ಬೀಗ ಜಡಿಯಲಾಗಿದೆ
  • ಒಂದು ಸಂಸ್ಥೆಯು ಮತ್ತೊಂದರ ಜತೆ ಸಂಘರ್ಷಕ್ಕೆ ಇಳಿಯುವ ಸ್ಥಿತಿ ನಿರ್ಮಾಣ ಆಗಬಾರದು
  • ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸರ್ಕಾರ ಕಾಯುತ್ತಿದೆಯೇ?

ಸರ್ಕಾರದ ಹೇಳಿಕೆ ಬದಲಾಯಿಸಿ

  • 24 ಹೈಕೋರ್ಟ್‌ಗಳಿಗೆ ಹೊಸದಾಗಿ 86 ನ್ಯಾಯಮೂರ್ತಿಗಳ ನೇಮಕ ಆಗಿದೆ
  • 121 ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಕಾಯಂ ಮಾಡಲಾಗಿದೆ
  • 18 ಹೆಚ್ಚುವರಿ ನ್ಯಾಯಮೂರ್ತಿಗಳ ಅವಧಿ ವಿಸ್ತರಣೆ ಮಾಡಲಾಗಿದೆ
  • 33 ನ್ಯಾಯಮೂರ್ತಿಗಳನ್ನು ವರ್ಗಾಯಿಸಲಾಗಿದೆ
  • ಸಭಾಂಗಣಗಳ ಸಂಖ್ಯೆ ಕಡಿಮೆಯೂ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚೂ ಇದ್ದ ದಿನಗಳಿದ್ದವು. ಈಗ ನ್ಯಾಯಮೂರ್ತಿ ಗಳಿಲ್ಲ ಎಂಬ ಕಾರಣಕ್ಕೆ ಹಲವು ಸಭಾಂಗಣಗಳಿಗೆ ಬೀಗ ಹಾಕಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳುತ್ತಿದೆ.[೪]
  • ಅಲಹಾಬಾದ್‌ ಹೈ ಕೋರ್ಟ್‌ನಲ್ಲಿ ಅಗತ್ಯವಿರುವ ಸ್ಥಾನಗಳ ಭರ್ತಿಗಾಗಿ ಜನವರಿಯಲ್ಲಿ 8 ಹಾಗೂ ಆಗಸ್ಟ್‌ನಲ್ಲಿ 27 ನ್ಯಾಯಮೂರ್ತಿಗಳ ನೇಮಕಾತಿಗೆ ಸುಪ್ರೀಂ ಕೋರ್ಟ್‌ ಸಮ್ಮತಿಸಿತ್ತು. ಒಟ್ಟು 35 ನ್ಯಾಯಮೂರ್ತಿಗಳ ನೇಮಕಾತಿ ಅಧಿಸೂಚನೆ ಈವರೆಗೂ ಪ್ರಕಟಿಸಲಾಗಿಲ್ಲ. ಪ್ರಸ್ತುತ ಅಲಹಾಬಾದ್‌ ಹೈ ಕೋರ್ಟ್‌ ನಲ್ಲಿ 77 ನ್ಯಾಯಮೂರ್ತಿಗಳಿದ್ದಾರೆ. ಇಲ್ಲಿ 160 ನ್ಯಾಯಮೂರ್ತಿಗಳ ಅವಶ್ಯಕತೆಯಿದ್ದು, ಶೇ.50ಕ್ಕೂ ಕಡಿಮೆ ಸಂಖ್ಯಾಬಲದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. ನೇಮಕಾತಿ ಪ್ರಕ್ರಿಯೆ ವಿಳಂಬದಿಂದಾಗಿ ಇತ್ಯರ್ಥವಾಗದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.
28 ಅಕ್ಟೋ, 2016 ಕ್ಕೆ, 24 ಹೈ ಕೋರ್ಟ್‌ಗಳಲ್ಲಿ ಸುಮಾರು 40 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ. ನೇಮಕಾತಿ ಪ್ರಕ್ರಿಯೆ ವಿಳಂಬಿಸದಂತೆ ಕೋರ್ಟ್‌ ತಾಕೀತು ಮಾಡಿದೆ.[೫]

ಕೇಂದ್ರ ಹಾಗೂ ನ್ಯಾಯಾಂಗದ ಮಧ್ಯೆ ಸಂಘರ್ಷ ಬದಲಾಯಿಸಿ

  • 23 ನವೆಂ, 2016:
  • ಕೇಂದ್ರ ಹಾಗೂ ನ್ಯಾಯಾಂಗದ ಮಧ್ಯೆ ಸಂಘರ್ಷ ಅಂತ್ಯವಾಗುವಂತೆ ಕಾಣುತ್ತಿಲ್ಲ. ಬಿಕ್ಕಟ್ಟು ತೀವ್ರವಾಗುತ್ತಿರುವ ಭಾವನೆ ಮೂಡುತ್ತಿದೆ. ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವುದಕ್ಕಾಗಿ 77 ಮಂದಿಯ ಹೆಸರುಗಳನ್ನು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಅವರ ಹಿರಿಯ ಸಹೋದ್ಯೋಗಿಗಳನ್ನೊಳಗೊಂಡ ಕೊಲಿಜಿಯಂ ಕಳಿಸಿತ್ತು. ಈ ಪೈಕಿ 34 ಹೆಸರುಗಳಿಗೆ ಮಾತ್ರ ಅನುಮೋದನೆ ನೀಡಿ 43 ಹೆಸರುಗಳನ್ನು ಕೊಲಿಜಿಯಂನ ಮರುಪರಿಶೀಲನೆಗೆ ಕೇಂದ್ರ ವಾಪಸ್ ಕಳಿಸಿತ್ತು. ಆದರೆ ಈ 43 ಹೆಸರುಗಳನ್ನು ಕಳೆದ ವಾರ ಸರ್ಕಾರಕ್ಕೇ ಕೊಲಿಜಿಯಂ ಮತ್ತೆ ವಾಪಸ್ ಕಳಿಸಿದೆ.
  • ನಿಯಮಗಳ ಪ್ರಕಾರ, ಇದನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಕಾರ್ಯಾಂಗಕ್ಕೆ ಇದೆ ಎಂಬುದು ನಿಜ. ಆದರೆ ಇಷ್ಟೊಂದು ದೊಡ್ಡ ಸಂಖ್ಯೆಯ ಹೆಸರುಗಳಿಗೆ ಸರ್ಕಾರದ ಅನುಮೋದನೆ ಸಿಕ್ಕದಿದ್ದುದೂ ವಿಚಿತ್ರ ಸನ್ನಿವೇಶ. ನ್ಯಾಯಾಂಗ ಹಾಗೂ ಕಾರ್ಯಾಂಗದ ಮಧ್ಯದ ದೊಡ್ಡ ಭಿನ್ನಾಭಿಪ್ರಾಯ ಈ ರೀತಿಯಲ್ಲಿ ಬಹಿರಂಗವಾಗುತ್ತಿದೆಯೇ ಎಂಬ ಅನುಮಾನ ಉಂಟಾಗುತ್ತದೆ. ಹೀಗಾಗಿ ನ್ಯಾಯಾಂಗ ಹಾಗೂ ಕಾರ್ಯಾಂಗದ ನಡುವಿನ ಮುಸುಕಿನ ಗುದ್ದಾಟ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ ಎಂಬುದು ಸ್ಪಷ್ಟ.
  • ‘ಇಡೀ ನ್ಯಾಯಾಂಗ ವ್ಯವಸ್ಥೆಗೇ ಬೀಗ ಹಾಕಲು ನೀವು ಬಯಸಿದ್ದೀರಾ’ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌.ಠಾಕೂರ್‌ ನೇತೃತ್ವದ ಪೀಠ ಇತ್ತೀಚೆಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿಯೂ ಇತ್ತು. ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದ ಕಡತಗಳು ಮುಂದಕ್ಕೆ ಸಾಗದಿರುವ ಬಗ್ಗೆ ಟೀಕೆಗಳನ್ನೂ ಮಾಡಲಾಗಿತ್ತು.
  • ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಕಾಯ್ದೆಯನ್ನು ಕೇಂದ್ರದ ಎನ್‌ಡಿಎ ಸರ್ಕಾರ ಜಾರಿಗೆ ತಂದಿತ್ತು. ನ್ಯಾಯಮೂರ್ತಿಗಳ ನೇಮಕದಲ್ಲಿ ಕಾರ್ಯಾಂಗಕ್ಕೆ ಮಹತ್ವದ ಪಾತ್ರ ನೀಡಿದ್ದ ಈ ಕಾಯ್ದೆ ‘ಅಸಾಂವಿಧಾನಿಕ’, ಜೊತೆಗೆ ನ್ಯಾಯಾಂಗದ ಸ್ವಾಯತ್ತತೆಗೆ ಧಕ್ಕೆ ತರುತ್ತದೆ ಎಂದು ಹೇಳಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ಈ ಕಾಯ್ದೆಯನ್ನು ರದ್ದುಪಡಿಸಿತ್ತು. ‘ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಸಂಸದೀಯ ಸಾರ್ವಭೌಮತ್ವಕ್ಕೆ ಹಿನ್ನಡೆಯಾಗಿದೆ’ ಎಂದು ಕೇಂದ್ರ ಸರ್ಕಾರ ತೀವ್ರ ಅಸಮಾಧಾನವನ್ನೂ ವ್ಯಕ್ತಪಡಿಸಿತ್ತು.
  • ರಾಷ್ಟ್ರದಲ್ಲಿರುವ 24 ಹೈಕೋರ್ಟ್‌ಗಳಲ್ಲಿ 23 ನವೆಂ, 2016ಕ್ಕೆ 400ಕ್ಕೂ ಹೆಚ್ಚು ನ್ಯಾಯಮೂರ್ತಿ ಹುದ್ದೆಗಳು ಖಾಲಿ ಇದ್ದವು.
  • 'ಬಾಕಿ ಪ್ರಕರಣಗಳ ಸಂಖ್ಯೆ ಏರುತ್ತಲೇ ಸಾಗುತ್ತದೆ. ನ್ಯಾಯದಾನ ವಿಳಂಬದಿಂದ ಜನರಿಗೆ ಪೂರ್ಣ ನ್ಯಾಯ ದಕ್ಕದೇ ಹೋಗಬಹುದು. ಈಗಾಗಲೇ ರಾಷ್ಟ್ರದ ವಿವಿಧ ನ್ಯಾಯಾಲಯಗಳಲ್ಲಿ ಸುಮಾರು 2.7 ಕೋಟಿ ಪ್ರಕರಣಗಳು ಇತ್ಯರ್ಥಕ್ಕೆ ಕಾದಿವೆ' ಎಂದು ಸುಪ್ರಿಂ- ಮುಖ್ಯ ನ್ಯಾಯಮೂರ್ತಿಗಳು ಹೇಳಿದರು..[೬]

ಉಲ್ಲೇಖಗಳು ಬದಲಾಯಿಸಿ

  1. [೧]
  2. "ಆರ್ಕೈವ್ ನಕಲು". Archived from the original on 2016-06-01. Retrieved 2016-04-25.
  3. ದೇಶದಲ್ಲಿ 5 ಸಾವಿರ ನ್ಯಾಯಾಧೀಶರ ಕೊರತೆ'
  4. ಬೀಗ ಹಾಕುವಿರಾ?;29 Oct,2016[ಶಾಶ್ವತವಾಗಿ ಮಡಿದ ಕೊಂಡಿ]
  5. http://www.prajavani.net/news/article/2016/10/28/448590.html ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌;28 Oct, 2016
  6. "ಕೇಂದ್ರ ಹಾಗೂ ನ್ಯಾಯಾಂಗದ ಮಧ್ಯೆ ಸಂಘರ್ಷ". Archived from the original on 2016-11-23. Retrieved 2016-11-24.

ಇದನ್ನೂ ನೋಡಿ ಬದಲಾಯಿಸಿ