ಪುಷ್ಪದಂತ ಸ್ವಾಮಿ ಜೈನ ತೀರ್ಥಂಕರರಲ್ಲಿ ಒಬ್ಬರು. ಇವರು ೯ನೇ ಜೈನ ತೀರ್ಥಂಕರರು. ಸುವಿಧಿನಾಥ ಇವರ ಇನ್ನೊಂದು ಹೆಸರು.

ಪುಷ್ಪದಂತ ಸ್ವಾಮಿ
9ನೇ ಜೈನ ತೀರ್ಥಂಕರರು
ಪುಷ್ಪದಂತ
ಪುಷ್ಪದಂತ ಸ್ವಾಮಿಯ ವಿಗ್ರಹ, ಅನ್ವಾ, ರಾಜಸ್ಥಾನ
ಇತರ ಹೆಸರುಗಳುಸುವಿಧಿನಾಥ
ಲಾಂಛನಮಕರ
ಬಣ್ಣಬಿಳಿ
ಎತ್ತರ100 ಬಿಲ್ಲು (300 ಮೀ)
ವಯಸ್ಸು2 ಲಕ್ಷ ಪೂರ್ವ (14.112 quintillion years)
ತಂದೆತಾಯಿಯರು
  • ಸುಗ್ರೀವ (ತಂದೆ)
  • ರಾಮ (ಸುಪ್ರಿಯಾ) (ತಾಯಿ)
ಪೂರ್ವಾಧಿಕಾರಿಚಂದ್ರಪ್ರಭಾ
ಉತ್ತರಾಧಿಕಾರಿಶೀತಲನಾಥ
ಜನ್ಮಸ್ಥಳಕಾಕಂದಿ, ಡೋರಿಯಾ, ಉತ್ತರ ಪ್ರದೇಶ
ಮೋಕ್ಷಸ್ಥಳಶಿಖ‍ರ್ಜಿ‌

ಜನನ ಬದಲಾಯಿಸಿ

ಚಂದ್ರಪ್ರಭ ಸ್ವಾಮಿ ಮುಕ್ತನಾಗಿ ತೊಂಭತ್ತುಕೋಟಿ ಸಾಗರೋಪಮ ಕಾಲ ಕಳೆದ ಮೇಲೆ ಪುಷ್ಪದಂತ ತೀರ್ಥಂಕರನ ಅವತಾರವಾಯಿತು. ಕಾಲಲಬ್ಧಿಯಾದ ಮೇಲೆ ಆತನ ಜೀವವು ಸೀತಾನದಿಯ ಉತ್ತರಕ್ಕಿರುವ ಪುಷ್ಕಲಾವತಿ ದೇಶದಲ್ಲಿ, ಪುಂಡರೀಕಿಣಿಯೆಂಬ ಅದರ ರಾಜಧಾನಿಯಲ್ಲಿ ಮಹಾಪದ್ಮರಾಜನಾಗಿ ಜನಿಸಿತು. ಆತನು ರಾಜ್ಯಭಾರ ಮಾಡುತ್ತಿರುವಾಗ ಭೂರಹಿತರೆಂಬ ಕೇವಲಿಗಳಿಂದ ಧರ್ಮ ಶ್ರವಣ ಮಾಡಿ, ವೈರಾಗ್ಯದಿಂದ ಜಿನದೀಕ್ಷೆ ವಹಿಸಿದನು. ಆತನ ತಪಃಪ್ರಭಾವದಿಂದ ಆತನಿಗೆ ಸ್ವರ್ಗದಲ್ಲಿ ಪ್ರಾಣತೇಂದ್ರ ಪದವಿ ದೊರೆಯಿತು.

ಜೀವನಗಾಥೆ ಬದಲಾಯಿಸಿ

ದೀರ್ಘಕಾಲದವರೆಗೆ ಅಲ್ಲಿನ ಸುಖವನ್ನು ಅನುಭವಿಸಿ ದೇಹಾಂತ್ಯದಲ್ಲಿ ಕಾಕಂದಿ ನಗರಾಧಿಪತಿಯೂ ಇಕ್ಷ್ವಾಕ್ಷುವಂಶದವನೂ ಆದ ಸುಗ್ರೀವ ರಾಜನ ಪತ್ನಿ ಜಯಾರಾಮಾ ಮಹಾದೇವಿಯ ಗರ್ಭಕ್ಕೆ ಫಾಲ್ಗುಣ ಬಹುಳ ನವಮಿಯ ಮೂಲಾನಕ್ಷತ್ರದಲ್ಲಿ ಪ್ರವೇಶಿಸಿ, ಮಾರ್ಗಶಿರ ಶುದ್ಧ ಚೈತ್ರ ಯೋಗದಲ್ಲಿ ಜನನವನ್ನು ಪಡೆದನು. ದೇವೇಂದ್ರನು ಆತನ ಜನನಾಭಿಷೇಕೋತ್ಸವವನ್ನು ನೆರವೇರಿಸಿ ಪುಷ್ಪದಂತ ಎಂದು ನಾಮಕರಣ ಮಾಡಿದನು. ಎರಡು ಲಕ್ಷ ಪೂರ್ವಗಳಷ್ಟು ಆಯಸ್ಸನ್ನುಳ್ಳ ಮಹಾನುಭಾವನು ಶ್ವೇತವರ್ಣನಾಗಿ, ನೂರು ಬಿಲ್ಲುಗಳಷ್ಟು ಎತ್ತರ ಬೆಳೆದು, ರಾಜ್ಯಭಾರ ಮಾಡುತ್ತಿದ್ದನು.[೧]

ವೈರಾಗ್ಯ ಜೀವನ ಹಾಗೂ ನಿರ್ವಾಣ‌‌ ಬದಲಾಯಿಸಿ

ಒಮ್ಮೆ ಉಲ್ಕಾಪಾತವನ್ನು ಕಂಡು ಪುಷ್ಪದಂತ ಸ್ವಾಮಿಯು ವೈರಾಗ್ಯಪರನಾದನು. ಅವರು ವೈರಾಗ್ಯಪರರಾಗುವುದನ್ನೇ ಕಾಯುತ್ತಿದ್ದ ಲೋಕಾಂತಿಕದೇವರುಗಳು ಆತನ ವೈರಾಗ್ಯವನ್ನು ಸ್ಥಿರಗೊಳಿಸಿದರು. ದೇವೇಂದ್ರರು ಸೂರ್ಯಪ್ರಭವೆಂಬ ಪಲ್ಲಕ್ಕಿಯಲ್ಲಿ ಆತನನ್ನು ಪುಷ್ಪಕವನಕ್ಕೆ ಕರೆದೊಯ್ದರು. ಮಾರ್ಗಶಿರ ಶುಕ್ಲ ಪಾಡ್ಯದ ಸಂಜೆ ಆತನು ದೀಕ್ಷೆಯನ್ನು ಕೈಗೊಂಡನು. ಮರುದಿನ ಆಹಾರದಾನವನ್ನು ಪಡೆದು, ನಾಲ್ಕು ವರ್ಷ ಛದ್ಮಸ್ಥಾವಸ್ಥೆಯಲ್ಲಿದ್ದು ಕಾರ್ತಿಕ ಶುಕ್ಲ ದ್ವಿತೀಯೆಯ ಸಂಜೆ ಮೂಲಾನಕ್ಷತ್ರದಲ್ಲಿ ದೀಕ್ಷಾವನದ ನಾಗವೃಕ್ಷದ ಕೆಳಗೆ ಕೇವಲ ಜ್ಞಾನವನ್ನು ಪಡೆದನು. ಆನಂತರ ಸಮವಸರಣ ಮಂಟಪದಲ್ಲಿ ಕುಳಿತು ಆರ್ಯ ಖಂಡದಲ್ಲೆಲ್ಲಾ ಜ್ಞಾನೋಪದೇಶ ಮಾಡಿದನು. ಎಂಭತ್ತೆಂಟು ಗಣಧರರು ಆತನ ಆಶ್ರಮದಲ್ಲಿದ್ದರು. ಇತರ ತೀರ್ಥಂಕರರಂತೆ ಈತನೂ ಸಮ್ಮೇದಪರ್ವತದ ಶಿಖರದಲ್ಲಿ ಒಂದು ತಿಂಗಳು ರ‍್ಯಂಕಾಸನದಲ್ಲಿದ್ದು ನಿರ್ವಾಣ ಹೊಂದಿದನು. ದೇವೇಂದ್ರನಿಂದ ನಿರ್ವಾಣಕಲ್ಯಾಣ ನೆರವೇರಿತು. ಈತನ ಲಾಂಛನ ಮಕರ. ಈತನ ಯಕ್ಷ-ಯಕ್ಷಿಯರು ಅಜಿತ ಮಹಾ ಕಾಳೀ.

ಉಲ್ಲೇಖಗಳು ಬದಲಾಯಿಸಿ

  1. ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೪೩೨.