ಪತ್ರಕರ್ತ
ಪತ್ರಕರ್ತರು ಆಧುನಿಕ ಸಮಾಜದ ಕನ್ನಡಿಯೆಂದೇ ಹೇಳಬಹುದು. ಪತ್ರಕರ್ತನು ಸ್ಥಳಿಯ ಮತ್ತು ಹೊರನಾಡಿನ ಪ್ರಸ್ತುತ ಸುದ್ದಿ-ಸನ್ನಿವೇಶಗಳನ್ನು ಸಮಾಜದ ಮುಂದೆ ಪತ್ರಿಕೋದ್ಯಮದ ಮೂಲಕ ವಿವರಿಸುತ್ತ ಹೋಗುತ್ತಾನೆ. ಅದೇ ರೀತಿ ರಾಜಕೀಯ ವ್ಯವಸ್ಥೆ, ಭೂಗತ ಜಗತ್ತಿನ ಷಡ್ಯಂತ್ರಗಳು ಇವೇ ಮೊದಲಾದ ವಿಷಯಗಳ ಬಗ್ಗೆ ಕಾಲಕಾಲಕ್ಕೆ ಜನತೆಗೆ ವರದಿ ಮಾಡುವದರ ಜೊತೆಗೇ ಒಂದು ರೀತಿಯ ಜನಾಭಿಪ್ರಾಯ ಮೂಡಿಸುವಲ್ಲಿಯೂ ತನ್ನ ಪಾತ್ರ ವಿಸ್ತರಿಸುತ್ತಾ ಹೋಗುತ್ತಾನೆ. ಈ ರೀತಿಯ ಜನಾಭಿಪ್ರಾಯದಿಂದಲೇ ಸರ್ಕಾರ ಬದಲಾಗಿದ್ದೂ ಉಂಟು. ಹಾಗಾಗಿ ಪತ್ರಿಕೋದ್ಯಮ ಮತ್ತು ಪತ್ರಕರ್ತನನ್ನು ಸಮಾಜದ ನಾಲ್ಕನೇ ಅಂಗ ಎಂದು ಕರೆದಿದ್ದಾರೆ.

ಪತ್ರಕರ್ತ ಇವತ್ತು ಮುದ್ರಿತ ಸ್ವರೂಪಗಳಾದ ಸುದ್ದಿಪತ್ರಿಕೆ/ಮ್ಯಾಗಜೀನ್ ವಿಭಾಗದಿಂದ ಹಿಡಿದು ರೇಡಿಯೊ, ಟೆಲಿವಿಷನ್ (ದೂರದರ್ಶನ),ಅಂತರಜಾಲ ವಿಭಾಗದವರೆಗೂ ಹರಡಿಕೊಂಡಿದ್ದಾನೆ. ಪತ್ರಿಕೋದ್ಯಮದಲ್ಲಿ ಪತ್ರಕರ್ತ (ವರದಿಗಾರ)ನಲ್ಲದೇ ಸಂಪಾದಕ, ಅಂಕಣಕಾರ, ಛಾಯಾಗ್ರಾಹಕ ಕೂಡ ತಮ್ಮದೇ ಆದ ಕೊಡುಗೆ ನೀಡುತ್ತಿರುತ್ತಾರೆ.
ಈ ಕಾಲದಲ್ಲಿ ಪತ್ರಕರ್ತನ ಪಾತ್ರವು ಪರಿಸರ, ಕೃಷಿ ಹಾಗೂ ಆರೋಗ್ಯ ಸಂಬಂಧಿತ ಜಾಗೃತಿಗಳನ್ನು ಜನರಿಗೆ ತಲುಪಿಸುವ ದಿಕ್ಕಲ್ಲಿಯೂ ಬೆಳೆದಿದೆ. ಜಲಮಾಲಿನ್ಯ, ತೈಲದ ದುರ್ಬಳಕೆ, ಆಮ್ಲವೃಷ್ಟಿ ಇತ್ಯಾದಿ ಕುರಿತ ಪರಿಸರ ವಿಷಯಗಳನ್ನೂ ಪತ್ರಕರ್ತರು ವರದಿ ಮಾಡುವ ಮೂಲಕ ಪ್ರಕೃತಿಯ ಸಂರಕ್ಷಣೆಗೆ ಸಹಾಯವಾಗುತ್ತಿದ್ದಾರೆ. ಇದರಿಂದ ಸಮಾಜದ ಸಾಮಾನ್ಯ ನಾಗರಿಕರು ನಿತ್ಯದ ಜೀವನದ ಜೊತೆ ಸುದೀರ್ಘ ಕಾಲದ ಪರಿಣಾಮಗಳ ಕುರಿತು ಅರಿವು ಪಡೆದು ಜವಾಬ್ದಾರಿಯುತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.