ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಪಂ.ವ್ಹಿ.ಜಿ.ಜೋಗ್ [ ಪಂಡಿತ್.ವಿಷ್ಣು ದಿಗಂಬರ ಜೋಗ್]

೧೯೨೧ರಲ್ಲಿ ಈಗಿನ ಮುಂಬಯಿಯಲ್ಲಿ ಜನನ.

ಪ್ರಾರ್ಥಮಿಕ ಸಂಗೀತ ಶಿಕ್ಷಣ ಜೋಗ್ ಅವರಿಗೆ ಶ್ರೀ.ಎಸ್.ಸಿ.ಆಠವಲೆ ಹಾಗೂ ಶ್ರೀ.ಗಣಪತ್ ರಾವ್ ಪುರೋಹಿತ್ ಅವರಿಂದ ದೊರೆಯಿತು. ಮುಂದೆ ಜೋಗ್ ಅವರಿಗೆ ಶ್ರೀ ವಿಶ್ವೇಶ್ವರ್ ಶಾಸ್ತ್ರೀ, ಶ್ರೀ ಎಸ್.ಸಿ.ರತ್ನಾಕರ್ ಹಾಗೂ ಕೆಲ ಕಾಲದವರೆಗೆ ಶ್ರೀ ಬಾಬಾ ಅಲ್ಲಾವುದ್ದೀನ್ ಖಾನ್ ಅವರ ಮಾರ್ಗದರ್ಶನ ಲಭಸಿತು.

ಪಾಶ್ಚಾತ್ಯ ಸಂಗೀತ ವಾದ್ಯವಾದ ವಾಯೋಲಿನ್ನಿನ ಭಾರತೀಕರಣ ಮಾಡುವಲ್ಲಿ ಶ್ರೀಯುತರ ಶ್ರಮ ಅತ್ಯಂತ ಸ್ಮರಣೀಯ. ಅವರು ವಾಯೋಲಿನ್ನನ್ನು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಪರಿಚಯಿಸಿದ್ದೂ ಅಲ್ಲದೆ ಅದರ ಸರಿಯಾದ ಬಳಕೆಯನ್ನೂ ತೋರಿಸಿಕೊಟ್ಟರು. ಅವರು ವಾಯೋಲಿನ್ನನ್ನು ಪ್ರಸಿದ್ಧಗೊಳಿಸಿದ್ದು ಕಲಾರಾಧಕರಿಗೆ ಎಷ್ಟರ ಮಟ್ಟಿಗೆ ಮೆಚ್ಚುಗೆಯಾಯ್ತು ಅಂದರೆ ಅವರನ್ನ ರಸಿಕರು "ವಾಯೋಲಿನ್ ಸಮ್ರಾಟ್" ಎಂದೇ ಗುರುತಿಸಲಾರಂಭಿಸಿದರು.

ಗ್ವಾಲಿಯರ್, ಆಗ್ರಾ ಹಾಗೂ ಬಖಲೇ ಘರಾನಾಗಳ ಸಂಗೀತ ಪದ್ಧತಿಯನ್ನ ಕರಗತ ಮಾಡಿಕೊಂಡ ಶ್ರೀಯುತ ಜೋಗ್ ಅವರು ಈ ಮೂರೂ ಘರಾನಾಗಳ ಶೈಲಿಗಳ ಮಿಶ್ರಣವನ್ನ ಸಂಗೀತಾರಾಧಕರಿಗೆ ಯಥೇಚ್ಛವಾಗಿ ಉಣಬಡಿಸಿದರು.

ತಮ್ಮ ಹದಿನಾರನೇಯ ವಯಸ್ಸಿನಲ್ಲಿ ಲಖನೌ ನಗರದಲ್ಲಿ ಭೇಟಿಯಾದ ವ್ಯಕ್ತಿಯೊಬ್ಬರಿಂದ ಜೋಗ್ ಅವರು ಸಂಗೀತ ಕ್ಷೇತ್ರದಲ್ಲಿ ಇಷ್ಟೆಲ್ಲಾ ಸಾಧಿಸಲು ಶಕ್ಯವಾಯಿತು. ಆ ವ್ಯಕ್ತಿಯಿಂದ ಜೋಗ್ ಅವರು ಇಷ್ಟು ಪ್ರಭಾವಿತರಾದರೆಂದರೆ ಮುಂದೆ ಅವರ ಬಳಿಯೆ ಜೋಗ್ ಅವರು ಕೆಲ ಕಾಲ ಸಂಗೀತಾಭ್ಯಾಸವನ್ನು ಮಾಡಿದರು. ಅವರೇ ಶ್ರೀ ಬಾಬಾ ಅಲ್ಲಾವುದ್ದೀನ್ ಖಾನ್. ಜೋಗರ ಪರಿಶ್ರಮ , ಶ್ರದ್ಧೆ ಮುಂತಾದವುಗಳನ್ನ ನೋಡಿ ಶ್ರೀ ಬಾಬಾ ಅಲ್ಲಾವುದ್ದೀನ್ ಖಾನ್ ಅವರು ಜುಗಲ್ಬಂದಿ ಕಾರ್ಯಕ್ರಮವಂದನ್ನು ನೀಡಿದರು. ಹಾಗೆಯೇ ತಮ್ಮ ಮೆಚ್ಚುಗೆಯನ್ನ ಶ್ರೀ ಬಾಬಾ ಅಲ್ಲಾವುದ್ದೀನ್ ಖಾನ್ ಅವರು ತಮ್ಮ ವಾಯೋಲಿನ್ ಅನ್ನು ಜೋಗ್ ಅವರಿಗೆ ಉಡುಗೊರೆಯಾಗಿ ಕೊಟ್ಟು ಸೂಚಿಸಿದರು.

ಪ್ರಪಂಚದಾದ್ಯಂತ ಶ್ರೀಯುತ ಜೋಗರು ಸಂಗೀತ ಕಾರ್ಯಕ್ರಮಗಳನ್ನ ಕೊಟ್ಟಿದ್ದಾರೆ. ಅಮೇರಿಕಾದ ಕಾರ್ನೇಜ್ ಹಾಲ್ , ಲಿಂಕನ್ ಸೆಂಟರ್ ಹಾಗೂ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ಕೂಡಾ ಅವರು ತಮ್ಮ ಸಂಗೀತ ಲಹರಿಯನ್ನ ಹರಿಸಿದ್ದಾರೆ. ಜೋಗ್ ಅವರು ತಮಗೆ ಸಾಥ್ ನೀಡಬೇಕೆಂದು ಇತರ ಸಂಗೀತಗಾರರು ಬಯಸುತ್ತಿದ್ದದ್ದು ಅವರ ಪಾಂಡಿತ್ಯಕ್ಕೆ ಹಿಡಿದ ಕನ್ನಡಿ. ಜೋಗ್ ಅವರು ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಾದ ಫಯ್ಯಜ್ ಖಾನ್ , ಬಡೇ ಗುಲಾಮ್ ಅಲಿ ಖಾನ್ , ಪಂ. ಓಂಕಾರ್ ನಾಥ್ ಠಾಕೂರ್ , ಆಮೀರ್ ಖಾನ್ ಹಾಗೂ ಕೇಸರೀ ಬಾಯಿ ಕೇತ್ಕರ್ ಅವರೊಡನೆ ಸಾಥ ನೀಡಿದ್ದಾರೆ.

ಜೋಗರಿಗೆ ಬಹಳಷ್ಟು ಬಿರುದು , ಪ್ರಶಸ್ತಿ ಗಳು ಹುಡುಕಿಕೊಂಡು ಬಂದಿವೆ. ಅವುಗಳಲ್ಲಿ ೧೯೮೨ರಲ್ಲಿ ಪದ್ಮ ಭೂಷಣ , ೧೯೮೧ರಲ್ಲಿ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಹಾಗೂ ಐಟೀಸಿ ಪ್ರಶಸ್ತಿ ಪ್ರಮುಖವಾದವು.

ಕೋಲ್ಕತ್ತಾದ ಆಲ್ ಇಂಡಿಯಾ ರೇಡಿಯೋದೊಂದಿಗೆ ಜೋಗ್ ಅವರು ಬಹಳ ನಿಕಟ ಸಂಬಂಧ ಹೊಂದಿದ್ದರು .

ಜೋಗ್ ಅವರು ೨೦೦೪ ಜನೆವರಿ ೩೧ರಂದು ಸಂಗೀತ ರಸಿಕರಿಂದ ದೂರವಾದರು.