ನೇಮಿನಾಥ ಸ್ವಾಮಿ ಬಸದಿ, ಸುಲ್ಕೇರಿ

ನೇಮಿನಾಥ ಸ್ವಾಮಿ ಬಸದಿ, ಸುಲ್ಕೇರಿ ಶ್ರೀ ನೇಮಿನಾಥ ಸ್ವಾಮಿ ಬಸದಿ ಸುಲ್ಕೇರಿಯು ಬೆಳ್ತಂಗಡಿ ಪೇಟೆಯಿಂದ ೨೦ ಕಿ.ಮಿ ದೂರದಲ್ಲಿ ಕೊಕ್ರಾಡಿ ಗ್ರಾಮದ ಜಂತಿಗೋಳಿ ಎಂಬಲ್ಲಿ ಇದೆ.ಇಲ್ಲಿಗೆ ಸಾರ್ವಜನಿಕ ವಾಹನಗಳ ವ್ಯವಸ್ಥೆಇದೆ.

ಮೂರ್ತಿ ಮತ್ತು ವಿನ್ಯಾಸ ಬದಲಾಯಿಸಿ

ಈ ಬಸದಿಯಲ್ಲಿ ಪೂಜೆಗೊಳ್ಳುವ ಮುಖ್ಯ ತೀರ್ಥಂಕರರೆಂದರೆ ಶ್ರೀ ನೇಮಿನಾಥ ಸ್ವಾಮಿ. ಈ ಮೂರ್ತಿಯು ಪೂರ್ವ ದಿಕ್ಕಿಗೆ ಮುಖ ಮಾಡಿದೆ. ಶ್ರೀ ನೇಮಿನಾಥ ತೀರ್ಥಂಕರರು ೨೪ ತೀರ್ಥಂಕರರ ಪೈಕಿ ೨೨ನೆಯವರು. ಇಲ್ಲಿ ತೀರ್ಥಂಕರರ ಮೂರ್ತಿಯು ಶಿಲೆಯಿಂದ ಮಾಡಲ್ಪಟ್ಟಿದೆ. ಪ್ರಭಾವಲಯವು ಚಿತ್ರಿಕೆಗಳಿಂದ ಶೋಭಾಯಮಾನವಾಗಿದೆ. ಮಧ್ಯದಲ್ಲಿ ಮಕರತೋರಣ ಕಂಗೊಳಿಸುತ್ತಿದೆ. ತೀರ್ಥಂಕರರ ಪದ್ಮಪೀಥ ಚೌಕಾಕಾರವಾಗಿದ್ದಾಗಿದೆ. ಇಲ್ಲಿ ಗೋವೇಧ ಯಕ್ಷ ಮತ್ತು ಆಮ್ರಕೂಷ್ಮಾಂಡಿನಿ ಯಕ್ಷಿಯರಿದ್ದಾರೆ. ಇವರು ನಿಂತ ಭಂಗಿಯಲ್ಲಿದ್ದಾರೆ. ಇವರ ಕೈಯಲ್ಲಿ ಆಯುಧಗಳಿವೆ. ಯಕ್ಷನಿಗೆ ನಾಲ್ಕು ಕೈ. ಎರಡು ಕೈಗಳಲ್ಲಿ ಫಲ ಮತ್ತು ಖಡ್ಗ , ಇನ್ನೆರಡು ಕೈಗಳಲ್ಲಿ ಚಾಮರ ಮತ್ತು ಆಶಿರ್ವಾದದ ಮುದ್ರೆ ಇದೆ. ಯಕ್ಷಿಗೆ ಎರಡು ಕೈ. ಒಂದು ಕೈಯಲ್ಲಿ ಫಲ, ಇನ್ನೊಂದು ಕೈಯಲ್ಲಿ ಖಡ್ಗ. ತೀರ್ಥಂಕರರ ಮೂರ್ತಿಯ ಕೆಳಗೆ ಶಂಖ ಲಾಂಛನ ಇದೆ. ಈ ಮೂರ್ತಿಗೆ ಅಷ್ಟಮಹಾಪ್ರಾತಿಹಾರ್ಯಗಳಾದ ಚಾಮರ,ಮುಕ್ಕೋಡೆ ಇತ್ಯಾದಿ ಇವೆ. ಮುಕ್ಕೋಡೆಯ ಮೇಲೆ ಸಿಂಹ ಲಲಾಟ ಇದೆ. ಬಳಿಯಲ್ಲಿ ಪುಷ್ಟವೃಷ್ಟಿ ಕಾಣುತ್ತದೆ. ತೀರ್ಥಂಕರರನ್ನು ಶಿವದೇವಿ ಶ್ಲೋಕದಿಂದ ಸ್ತುತಿಸಲಾಗುತ್ತದೆ. ಇಲ್ಲಿ ತೀರ್ಥಂಕರರಿಗೆ ನೀರು, ಹಾಲು, ಸೀಯಾಳ, ಪಂಚಾಮೃತ, ವಿಶೇಷ ಇರುವಾಗ ದ್ರವ್ಯಗಳಾದ, ತೊಗರಿಬೇಳೆ, ಕಡ್ಲೆಬೇಳೆ, ತುಪ್ಪ, ಬಲ್ಲ, ಹೆಸರುಬೇಳೆ, ಕಲ್ಲುಸಕ್ಕರೆ, ಸಕ್ಕರೆ, ಗಂಧ, ಅರಶಿನ ಇತ್ಯಾದಿಗಳ ಅಭಿಷೇಕ ಮಾಡುತ್ತಾರೆ.ಈ ಬಸದಿಗೆ ಸುಮಾರು ೨೦೦-೩೦೦ ವರ್ಷಗಳ ಪ್ರಾಚೀನತೆ ಇದೆ ಎಂದು ಹೇಳಲಾಗುತ್ತದೆ. ಈ ಬಸದಿಯಲ್ಲಿ ದಿನಕ್ಕೆ ಬೆಳಗ್ಗೆ ಒಂದು ಸಾರಿ ಪೂಜೆ ನಡೆಸಲಾಗುತ್ತದೆ. ಇಲ್ಲಿ ಶ್ರುತ , ಗಣಧರಪಾದ, ಚವ್ವೀಸ ತೀರ್ಥಂಕರರ ಮೂರ್ತಿಗಳಿವೆ. ಯಾವುದೇ ಮೂರ್ತಿಗಳ ಮೇಲೆ ಬರಣಿಗೆ ಇಲ್ಲ. ಈ ಬಸದಿಯಲ್ಲಿ ಇನ್ನೂ ಹೆಚ್ಚಾಗಿ ಇರುವ ಸುಂದರ ಮೂರ್ತಿಯೆಂದರೆ ಶ್ರೀ ಶಾಂತಿನಾಥ ಸ್ವಾಮಿಯದ್ದು. ಈ ಮೂರ್ತಿಯು ನಿಂತ ಭಂಗಿಯಲ್ಲಿದೆ. ಮೂರ್ತಿಗೆ ಯಕ್ಷಯಕ್ಷಿಯರು ಇದ್ದಾರೆ. ಚಾಮರ, ಮುಕ್ಕೋಡೆ ಇದೆ. ಈ ಮೂರ್ತಿಯು ಕಂಚಿನದ್ದು.ಶ್ರೀ ಪದ್ಮಾವತಿ ಅಮ್ಮನವರ ಮೂರ್ತಿಯಿದೆ. ಅದು ಶಿಲೆಯದ್ದು. ಈ ಮೂರ್ತಿ ದೇವಕೋಷ್ಠದಲಿಲ್ಲ.ಈ ಮೂರ್ತಿ ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡಿದೆ.ಇದಕ್ಕೆ ಸೀರೆ ಬಳೆ ತೊಡಿಸಿ ಇತರ ಶೃಂಗಾರ ಮಾಡುತ್ತಾರೆ. [೧]

ವಿನ್ಯಾಸ ಬದಲಾಯಿಸಿ

ಬಸದಿಯ ಗರ್ಭಗೃಹದಿಂದ ಹೊರಕ್ಕೆ ಬರುತ್ತಿರುವಂತೆ ಗಂಧಕುಟಿ, ಘಂಟಾಪಂಟಪ, ತೀರ್ಥಮಂಟಪ ಮತ್ತು ಪ್ರಾರ್ಥನಾ ಮಂಟಪ ಇವೆ. ಈ ಮಂಟಪಗಳಲ್ಲಿ ಶ್ರಾವಣ ದಿವಸ ಶಾಂತಿ, ಆರಾಧನೆಗಳನ್ನು ಮಾಡುತ್ತಾರೆ. ಘಂಟಾಮಂಟಪದಲ್ಲಿ ಹೆಚ್ಚಿನ ಕಂಬಗಳು ಇಲ್ಲ.ಗೋಡೆಗಳ ಮೇಲೆ ಚಿತ್ರಗಳು ಇಲ್ಲ. ಎರಡು ಮಂಟಪಗಳ ನೆಲ ಕಾವಿಯಿಂದ ಮಾಡಲಾಗಿದೆ. ಇದರ ಹೊರ ಜಗಲಿಗೆ ಟೇಲ್ಸ್ ಹಾಕಲಾಗಿದೆ. ಇಲ್ಲಿ ದ್ವಾರಪಾಲಕರ ಮೂರ್ತಿಗಳು ಇಲ್ಲ. ಬಸದಿಯ ಎದುರು ಗೋಪುರ ಇದೆ. ಆದರೆ ವರ್ಣಚಿತ್ರಗಳಿಲ್ಲ. ಈ ಗೋಪುರಗಳನ್ನು ಆರಾಧನೆ, ನಾಮಕರಣ ಇತ್ಯಾದಿ ಧಾರ್ಮಿಕ ಉದ್ದೇಶಗಳಿಗೆ ಬಳಸಲಾಗುತ್ತದೆ. ಇಲ್ಲಿ ಕಂಬಗಳನ್ನು ಮುರಕಲ್ಲಿನಿಂದ ಮಾಡಲಾಗಿದೆ. ಇದರಲ್ಲಿ ಏನೂ ಚಿತ್ರಾಕೃತಿ ಇಲ್ಲ. ಈ ಬಸದಿಯಲ್ಲಿ ಕಛೇರಿ ವ್ಯವಸ್ಥೆ ಇಲ್ಲ. ಬಸದಿಗೆ ಮೇಗಿನ ನೆಲೆ ಇಲ್ಲ. ಗರ್ಭಗೃಹದ ಸುತ್ತಲೂ ಅಂಗಳ ಇದೆ. ಬಸದಿಯ ಪರಿಸರದಲ್ಲಿ ಪಾರಿಜಾತ ಹೂವಿನ ಗಿಎ ಇದೆ. ಕ್ಷೇತ್ರಪಾಲ ಸನ್ನಿಧಾನ ಇದೆ. ಕ್ಷೇತ್ರಪಾಲನನ ಮೂರ್ತಿ ಶಿಲೆಯದ್ದು. ಆತನ ಕೈಯಲ್ಲಿ ತ್ರಿಶೂಲ, ಖಡ್ಗ, ಭೂತಕಲ್ಲು ಮತ್ತು ಅಭಯಹಸ್ತ, ಗಾಹೂ ಕೆಳಗೆ ನಾಯಿಯ ಆಕೃತಿಗಳು ಕಂಡು ಬರುತ್ತದೆ. ಈ ಕ್ಷೇತ್ರಪಾಲನ ಜೊತೆ ೯ ಹೆಡೆಯ ನಾಗರಾಜ ಮತ್ತು ೭ ಹೆಡೆಯ ನಾಗರಾಣಿ ಮತ್ತು ೫ ಹೆಡೆಯ ನಾಗನ ಮೂರ್ತಿಯನ್ನು ಇಡಲಾಗಿದೆ. ಈ ಕ್ಷೇತ್ರಪಾಲನ ಕಾರಣಿಕದ ಶಕ್ತಿಯಿಂದಾಗಿ ಜಾನುವಾರುಗಳಿಗೆ ಕಷ್ಟ ಬಂದಾಗ, ರೋಗ ಬಂದಾಗ ಪರಿಹಾರ ಆಗಿದೆ. ಬಲಿಕಲ್ಲು ಇದೆ. ದಶದಿಕ್ಪಾಲಕರ ಕಲ್ಲು ಇದೆ. ಈ ಬಸದಿಯಲ್ಲಿ ಈವರೆಗೆ ಶಿಲಶಾಸನ ಅಥವಾ ಇತರ ದಾಖಲೆಗಳು ಸಿಗಲಿಲ್ಲ.

ಉಲ್ಲೇಖಗಳು ಬದಲಾಯಿಸಿ

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್. p. ೨೨೬-೨೨೮.