ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರ

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಕೃಷ್ಣಾನಗರ ಗ್ರಾಮದಲ್ಲಿದೆ. ಇದು ೧೯೮೨ ರಲ್ಲಿ ಸ್ಥಾಪಿಸಿದ ಜಿಲ್ಲೆಯ ಪ್ರಪ್ರಥಮ ಸಕ್ಕರೆ ಕಾರ್ಖಾನೆಯಾಗಿದೆ. ಶ್ರೀ ಬಿ.ಟಿ.ಪಾಟೀಲ(ಶಿರಬೂರ)ರು ಕಾರ್ಖಾನೆಯ ಸ್ಥಾಪಕರು.

ಈ ಕಾರ್ಖಾನೆಯು ವಿಜಯಪುರದಿಂದ ೫೨ ಕಿ. ಮೀ ಅಂತರದಲ್ಲಿ ಗಲಗಲಿಗೆ ಹೋಗುವ ಮಾರ್ಗದಲ್ಲಿದೆ. ವಿಜಯಪುರ ಜಿಲ್ಲೆಯಲ್ಲಿ ಸ್ಥಾಪಿತವಾಗಿರುವ ಪ್ರಪ್ರಥಮ ಸಕ್ಕರೆ ಕಾರ್ಖಾನೆ. ಕಬ್ಬು ಬೆಳೆಗಾರರಿಗೆ ಈ ಕಾರ್ಖಾನೆ ವರದಾನವಾಗಿದ್ದು, ರೈತರ ಅನುಕೂಲಕ್ಕಾಗಿ ಕೃಷಿ ಸಂಶೋಧನೆ ಹಾಗೂ ಅಭಿವೃದ್ಧಿ ವಿಭಾಗವನ್ನು ಪ್ರಾರಂಭಿಸಿದೆ. ೧೮.೧೪ ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕವನ್ನು ಹೊಂದಿದೆ. ಸಕ್ಕರೆ ಉತ್ಪಾದನಾ ವಿಧಾನವನ್ನು ಮಕ್ಕಳಿಗೆ ಇಲ್ಲಿ ಪರಿಚಯಿಸಬಹುದಾಗಿದೆ. ಕಾರ್ಖಾನೆ ವ್ಯಾಪ್ತಿಯಲ್ಲಿ ೩೦ ರಿಂ‍ದ ೪೦ ಸಾವಿರ ಕಬ್ಬು ಬೆಳೆಯುವ ರೈತರಿದ್ದಾರೆ. ಕಾರ್ಖಾನೆಯಲ್ಲಿ ಸಾವಿರ ಜನರಿಗೆ ಕಾಯಂ ಹಾಗೂ ೪ ಸಾವಿರ ಜನರಿಗೆ ಹಂಗಾಮಿ ಉದ್ಯೋಗ ದೊರತಿದೆ. ಕಾರ್ಖಾನೆಗಳು ತಮ್ಮ ಕಬ್ಬು ಅರೆಯುವ ಸಾಮರ್ಥ್ಯವನ್ನು ೨ ರಿಂದ ೩ ಪಟ್ಟು ಹೆಚ್ಚಿಸಿಕೊಂಡು, ಸಹ ವಿದ್ಯುತ್‌ ಘಟಕ, ಡಿಸ್ಟಿಲರಿಗಳನ್ನು ಸ್ಥಾಪಿಸಿ ಆದಾಯವನ್ನೂ ಬೆಳೆಸಿಕೊಂಡಿದೆ. ಮಿತವ್ಯಯ, ಜಾಣ್ಮೆ, ದಕ್ಷತೆಯಿಂದ ಕಾರ್ಖಾನೆ ಮಾಲಿಕರು ಪ್ರಗತಿ ಹೊಂದಿ ಹೊಸ ಹೊಸ ಉದ್ಯಮಗಳನ್ನು ಕಟ್ಟುತ್ತಿದ್ದಾರೆ.

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ವತಿಯಿಂದ ಸ್ಥಾಪಿತವಾದ ಚಿಕ್ಕಗಲಗಲಿ ಗ್ರಾಮದ ಸಮೀಪದಲ್ಲಿ ಶ್ರೀ ಬಿ.ಟಿ.ಪಾಟೀಲ ಸ್ಮಾರಕ ನಂದಿ ಅಂತರಾಷ್ಟ್ರೀಯ ವಸತಿ ಶಾಲೆಯನ್ನು ೨೦೦೪ರಲ್ಲಿ ಪ್ರಾರಂಭಿಸಲಾಗಿದೆ.