ತುಳಜಾ ಭವಾನಿ ಮಂದಿರ

ಮಹಾರಾಷ್ಟ್ರ ರಾಜ್ಯದ ಉಸ್ಮಾನಾಬಾದ್ ಜಿಲ್ಲೆಯಲ್ಲಿರುವ ತುಳಜಾಪುರ ತುಳಜಾ ಭವಾನಿಯ ಮಂದಿರವಿರುವ ಊರು. ಪೌರಾಣಿಕವಾಗಿ, ರಾಜಕೀಯವಾಗಿ ಮಹತ್ವ ಪೂರ್ಣವಾಗಿದೆ. ಭಾರತದೇಶದ ೫೧ ಶಕ್ತಿಪೀಠಗಳಲ್ಲಿ ಈ ಮಂದಿರವೂ ಒಂದು. ಮಹಾರಾಷ್ಟ್ರದ ಎರಡನೆಯ ಶಕ್ತಿಪೀಠ ಸಹ. ಮೂಲತಃ ಭೋಂಸಲೆ ರಾಜರ ಕುಲದೇವತೆಯಾದ ತುಳಜಾ ಭವಾನಿಯ ದೇವಾಲಯ, ಶಿವಾಜಿ ಮಹಾರಾಜರಿಂದ ಇನ್ನಷ್ಟು ಪ್ರವರ್ಧಮಾನಕ್ಕೆ ಬಂತು. ಇಂದಿಗೂ ಭೋಂಸಲೆ ರಾಜವಂಶಸ್ಥರೇ ಮಂದಿರದ ಆಡಳಿತವನ್ನು ನೋಡಿಕೊಳ್ಳುತ್ತಿದ್ದಾರೆ.

ಚಿತ್ರ:Tulaja bha.jpg
ತುಳಜಾ ಭವಾನಿ
ಚಿತ್ರ:Shri chakra.gif
ಶ್ರೀ ಚಕ್ರ

ತುಳಜಾಪುರ ಹೋಬಳಿ ಮುಖ್ಯ ಕೇಂದ್ರವಾಗಿದೆ. ಸೊಲ್ಲಾಪುರದಿಂದ ೪೪ ಕಿ.ಮೀ ದೂರ. ಉಸ್ಮಾನಾಬಾದ್‍ನಿಂದ ೧೯೮ ಕಿ.ಮೀ. ಬಿಜಾಪುರದಿಂದ ಕರ್ನಾಟಕ ಸರ್ಕಾರದ ಸಾರಿಗೆ ಬಸ್ಸುಗಳು ಸುಲಭವಾಗಿ ಸಿಗುತ್ತವೆ. ಸಹ್ಯಾದ್ರಿ ಪರ್ವತಶ್ರೇಣಿಯ ಉಪಶ್ರೇಣಿಯೆಂದೇ ಕರೆಯಲ್ಪಡುವ ಯಮುನಾಚಲ ಪರ್ವತ ಶ್ರೇಣಿಯ ಮಧ್ಯೆ ಸುತ್ತಲೂ ಬೆಟ್ಟ-ಗುಡ್ಡಗಳಿಂದಲೂ ಕಣಿವೆಗಳಿಂದಲೂ ಸುತ್ತುವರಿಯಲ್ಪಟ್ಟ ಈ ಊರಿನಲ್ಲಿ ತುಳಜಾ ಭವಾನಿ ಮಂದಿರವನ್ನು ಕೋಟೆಯಾಕಾರದಲ್ಲಿ ನಿರ್ಮಿಸಿದ್ದಾರೆ. ಸುತ್ತಲೂ ಕೋಟೆ, ಸರೋವರವನ್ನು ಪಾರುಮಾಡಿದ ನಂತರವೇ ದೇವಿಯ ದರ್ಶನ ಲಭ್ಯವಿದೆ. ಬೃಹದಾಕಾರದ ಎರಡು ದ್ವಾರಗಳಿಗೆ ಶಹಾಜಿ ಮತ್ತು ಜೀಜಾಜಿಯೆಂಬ ಹೆಸರನ್ನು ಇಟ್ಟಿದ್ದಾರೆ.


ತುಳಜಾ ಭವಾನಿ ಮಂದಿರ ಬದಲಾಯಿಸಿ

ಇದರ ಮೂಲಕ ಮುಂದೆ ಹೋಗಿ ನೂರಾರು ಮೆಟ್ಟಲುಗಳನ್ನು ಇಳಿದು ಕೆಳಗೆ ಹೋಗಬೇಕು. ಅಲ್ಲಿ ಸ್ವಯಂಭೂ ವಿಗ್ರಹ ಮಂದಿರವಿದೆ. ತುಳಜಾ ಭವಾನಿಯು ೮ ಕೈಗಳಿಂದ ಆಯುಧಗಳಿಂದ ಪೀಠದ ಮೇಲೆ ವಿರಾಜಮಾನಳಾಗಿದ್ದಾಳೆ. ೩ ಅಡಿ ಎತ್ತರದ ತಾಯಿಯ ವಿಗ್ರಹ ನೋಡಲು ಮನೋಹರವಾಗಿದೆ. ಭವಾನಿಯು ಚಾಮುಂಡೇಶ್ವರಿಯ ಅಪರಾವತಾರವಾಗಿದ್ದಾಳೆ. ಛತ್ರಪತಿ ಶಿವಾಜಿ ಮಹಾರಾಜರ ಆರಾಧ್ಯದೇವತೆಯಾಗಿದ್ದ ತುಳಜಾ ಭವಾನಿ ಸ್ವತಃ ಅವರಿಗೆ ಖಡ್ಗ ನೀಡಿದ್ದಳು ಎಂದು ಪ್ರತೀತಿಯಿದೆ. ಶಿವಾಜಿಯವರಿಗೆ ತುಳಜಾ ಭವಾನಿ ಸ್ವತಃ ದರ್ಶನ ನೀಡಿ ಆತನಿಗೆ ಯುದ್ಧದಲ್ಲಿ ಸಹಾಯ ಮಾಡುತ್ತಿದ್ದಳು. ಮುಸ್ಲಿಂ ದಾಳಿಕೋರರಿಂದ ಈ ಮಂದಿರವನ್ನು ರಕ್ಷಿಸಲು ಮಂದಿರದ ಸುತ್ತಲೂ ಆಳದ ಕಂದಕ, ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ದೂರದಿಂದ ನೋಡಿದರೆ, ಅಲ್ಲಿ ಮಂದಿರವಿರುವ ಸುಳಿವೂ ಸಿಕ್ಕುವುದಿಲ್ಲ. ಅಂದು ಕಟ್ಟಿದ ತಡೆಗೋಡೆಗಳು ಸುಸ್ಥಿತಿಯಲ್ಲಿವೆ. ಮಂದಿರದ ಹೊರಗೆ ಎರಡು ಹೊಂಡಗಳಿವೆ. ಅವಕ್ಕೆ ಗೋಮುಖ ತೀರ್ಥ, ಹಾಗೂ ಕಲ್ಲೋಲ್ ತೀರ್ಥಗಳೆಂದು ಹೆಸರು. ಮಂದಿರದ ನೀರಿನ ಪೂರೈಕೆಗಾಗಿಯೇ ಅವನ್ನು ನಿರ್ಮಿಸಲಾಗಿದೆ.


ಮರದ ತೊಟ್ಟಿಲು ಬದಲಾಯಿಸಿ

ತುಳಜಾ ಭವಾನಿ ದೇವಾಲಯದ ಆವರಣದಲ್ಲಿ ಒಂದು ಸಣ್ಣ ಮರದ ತೊಟ್ಟಿಲಿದೆ. ಅದನ್ನು ಅಲ್ಲಾಡಿಸಿ ಹರಕೆ ಹೊತ್ತರೆ, ಮಕ್ಕಳಾಗುವುದೆಂಬ ಪ್ರತೀತಿಯಿದೆ. ಇಂದಿಗೂ ಅಂತಹ ಭಕ್ತರನ್ನು ಆಕರ್ಷಿಸುತ್ತಿರುವ ಈ ತೊಟ್ಟಿಲು, ಯಾರನ್ನೂ ನಿರಾಶೆಗೊಳಿಸಿದಂತಿಲ್ಲ.

ಹರಕೆ ಉರುಳುಕಲ್ಲು ಬದಲಾಯಿಸಿ

ತುಳಜಾ ಭವಾನಿ ಮಂದಿರದ ಹಿಂಭಾಗಕ್ಕೆ ಹೋದರೆ, ಅಲ್ಲಿ ಉರುಳುಕಲ್ಲಿನ ಜಾಗವಿದ್ದು ಆ ಉರುಳುಕಲ್ಲಿನ ಮೇಲೆ ಕೈಇಟ್ಟು ಮನಸ್ಸಿನಲ್ಲಿ ಅಂದುಕೊಂಡಿದ್ದು ಆಗುವುದಾದರೆ ಕಲ್ಲು ಬಲಗಡೆಗೂ, ಆಗುವುದಿಲ್ಲ ಎಂದಾದರೆ ಎಡಭಾಗಕ್ಕೂ ತಿರುಗುತ್ತದೆ. ಅವೈಜ್ಞಾನಿಕವೆನ್ನಲಾಗದ ಈ ಆಚರಣೆ ಎಲ್ಲರನ್ನೂ ಅಚ್ಚರಿಗೊಳಿಸುತ್ತದೆ.