ಝರತುಷ್ಟ್ರ-ಪ್ರಾಚೀನ ಇರಾನೀ ಜನರ ಪ್ರವಾದಿ. ಗ್ರೀಕ್ ಮತ್ತು ಇತರ ಐರೋಪ್ಯ ಭಾಷೆಗಳಲ್ಲಿ ಈತನನ್ನು ಝೊರೊ ಆಸ್ಟರ್ ಎನ್ನಲಾಗಿದೆ.

ಈತನ ಕಾಲವೂ ವೈದಿಕ ಋಷಿಮುನಿಗಳ ಕಾಲ ಹೇಗೋ ಹಾಗೆ ನಿಖರವಾಗಿ ತಿಳಿದುಬಂದಿಲ್ಲ. ಕ್ರಿಸ್ತನಿಗಿಂತ ಈತ 5000 ವರ್ಷಗಳಷ್ಟು ಹಿಂದಿನವನಿದ್ದಿರಬೇಕೆಂದು ವಿದ್ವಾಂಸರ ಊಹೆ.

ಝರತುಷ್ಟ್ರ ವೀರಕ್ಷತ್ರಿಯರ ಪವಿತ್ರ ಕುಟುಂಬದಲ್ಲಿ ಜನಿಸಿದ. ತಾಯಿ ದುಗ್ಥಾ. ಕನ್ಯಾವಸ್ಥೆಯಲ್ಲಿದ್ದ ಆಕೆಯ ಗರ್ಭವನ್ನು ಜ್ಯೋತಿಕಿರಣವೊಂದು ಪ್ರವೇಶಿಸಿತು. ಗರ್ಭವತಿಯಾದಳು. ಹೂಮೊಗದ ಹಸುಗೂಸು ಹುಟ್ಟಿತು. ಹುಟ್ಟುತ್ತಲೇ ನಸುನಕ್ಕಿತು. ಝರತುಷ್ಟ್ರ ಹುಟ್ಟಿದಾಗಲೇ ನಕ್ಕ ಏಕೈಕ ಮಾನವ. ಹದಿನೈದನೆಯ ವರ್ಷಕ್ಕಾಗಲೇ ಅವನಿಗೆ ವೈರಾಗ್ಯ ಮೂಡಿತು. ಮಾನವನ ಅಸ್ತಿತ್ವದ ರಹಸ್ಯವನ್ನರಿಯುವ ಗಹನ ಚಿಂತನೆಯಲ್ಲಿ ಧ್ಯಾನಮಗ್ನನಾಗಿ ಏಳು ವರ್ಷ ಏಕಾಂತ ವಾಸಮಾಡಿದ. ಮದುವೆ ಆಯಿತು. ಮೂರು ಜನ ಹೆಂಡತಿಯರು. ಮೂರು ಹೆಣ್ಣು ಮೂರು ಗಂಡು ಮಕ್ಕಳು. ಕೊನೆಗೆ ಎಲ್ಲವನ್ನೂ ಬಿಟ್ಟು ವರ್ಷಗಟ್ಟಲೆ ಕಾಡಿನಲ್ಲಿದ್ದುಕೊಂಡು ಹಾಲುಕೆನೆಯಿಂದಲೇ ಜೀವನ ನಿರ್ವಹಣೆ ಮಾಡಿ, ಕೊನೆಗೆ ಏಲ್‍ಬುರ್ಜ್ ಗುಡ್ಡದ ಮೇಲೆ ಕಾಲದ ಪರಿವೆ ಇಲ್ಲದೆ ಧ್ಯಾನಮಗ್ನನಾಗಿ ಕುಳಿತು ಬಿಟ್ಟ. ಅಹ್ರಿಮನ್ ಎಂಬ ದುಷ್ಟಶಕ್ತಿ ಆತನಿಗೆ ದುರಾಶೆ ತೋರಿಸಿ ವಿಚಲಿತನನ್ನಾಗಿ ಮಾಡಲು ಯತ್ನಿಸಿ ಸೋತು ಹಿಂತಿರುಗಿತು. ಝರತುಷ್ಟ್ರ ಗೆದ್ದ. ಜ್ಞಾನೋದಯವಾಯಿತು. ಅದು ಅವನ ಆತ್ಮವನ್ನು ಅಹುರಮಜ್ದ ಸನ್ನಿಧಿಗೊಯ್ಯಿತು. ಹೇ ಮಜ್ದ, ಪ್ರಪ್ರಥಮವಾಗಿ ನನ್ನ ಧ್ಯಾನದಲ್ಲಿ ನಿನ್ನ ಕಲ್ಪನೆ ಮಾಡಿಕೊಂಡಾಗ ಶುದ್ಧ ಹೃದಯದಿಂದ ನಾನು ನಿನ್ನನ್ನು ವಿಶ್ವದ ಪ್ರಥಮ ಅಭಿನೇತೃವೆಂದು ನಂಬಿದೆ. ವಿವೇಕದ ಜನಕ ನೀನು; ಸದಾಚಾರದ ಮಾನವ ಚಟುವಟಿಕೆಗಳ ನಿಯಂತೃ ನೀನು.-ಎಂದು ಝರತುಷ್ಟ್ರ ಹೊಗಳಿದ.

ಜ್ಞಾನಿ ಝರತುಷ್ಟ್ರ ಹೊರಲೋಕದಲ್ಲೀಗ ಅಡ್ಡಾಡಿದ. ಜನಕ್ಕೆ ಧರ್ಮಬೋಧೆಮಾಡಿದ. ಧರ್ಮ ಮತ್ತು ಅಧರ್ಮಗಳ ಹೋರಾಟ ನಿರಂತರವೆಂದೂ ಅದರಲ್ಲಿ ಧರ್ಮಕ್ಕೇ ಅಂತಿಮ ಜಯ ಎಂದೂ ತಿಳಿಸಿದ. ಆ ಕಾಲದ ಖಳ ಸ್ವಭಾವದ ದೊರೆಯೊಬ್ಬ ಈತನಿಗೆ ಚಿತ್ರಹಿಂಸೆಯನ್ನಿತ್ತನಂತೆ. ಭರ್ಜಿಗಳಿಂದ ಗಾಯಗೊಳಿಸಿ, ಕುದುರೆಗಳಿಂದ ಗೂಳಿಗಳಿಂದ ತುಳಿಸಿ, ಅಗ್ನಿದಿವ್ಯಕ್ಕೆ ಒಡ್ಡಿದಾಗಲೂ ಝರತುಷ್ಟ್ರ ಸೋಲದೆ ಕಾಯ್ದ ಹಿತ್ತಾಳೆಯಂತೆ ತೊಳಗಿ ಬೆಳಗಿದನೆನ್ನಲಾಗಿದೆ.

ಸುಮಾರು ಐವತ್ತು ವರ್ಷಗಳ ಕಾಲ ಝರತುಷ್ಟ್ರ ತನ್ನ ಮತಪ್ರಚಾರ ಮಾಡಿದ. ಈತನ ಮತ ಝರತುಷ್ಟ್ರ ಮತವೆಂದು ಪ್ರಸಿದ್ಧವಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: