ಜೀವ ಜಂತುಗಳ ಆತ್ಮ ರಕ್ಷಣೆಯ ವಿಶಿಷ್ಟ ತಂತ್ರ

ಜೀವ ಜಂತುಗಳ ಆತ್ಮ ರಕ್ಷಣೆಯ ವಿಶಿಷ್ಟ ತಂತ್ರ ಬದಲಾಯಿಸಿ

ಕೋಟ್ಯಾಂತರ ಜೀವಿ ಪ್ರಭೇಧಗಳ ನಡುವೆ ಎಲ್ಲಾ ಜೀವಿಗಳು ಬಾಳಿ ಬದುಕಲು ತಮ್ಮ ಆತ್ಮರಕ್ಷಣೆಗಾಗಿ ನಿರಂತರವಾಗಿ ಒಂದಲ್ಲ ಒಂದು ರೀತಿ ಹೋರಾಡುತ್ತಿರಬೇಕಾಗುತ್ತದೆ. ಕೆಲವು ಜೀವಿಗಳು ಛದ್ಮವೇಷ ಧರಿಸಿ ತಮಗಿಂತ ಅಪಾಯಕಾರಿಯಾದ ಜೀವಿಗಳನ್ನು ಹೋಲುವುದೋ ಅಥವಾ ತಮ್ಮ ಸುತ್ತಮುತ್ತಲಿನ ಪರಿಸರದ ವರ್ಣವೈವಿಧ್ಯ, ಚಿತ್ತಾರಗಳನ್ನೇ ತದ್ವವಾಗಿ ಅನುಕರಿಸುವ ಮೂಲಕ ಪರಿಸರದಲ್ಲಿ ಲೀನವಾಗುವುದೋ ಹೀಗೆ ಯಾವುದಾದರೂ ತಂತ್ರದ ಮೂಲಕ ತಮ್ಮ ರಕ್ಷಣೆ ಮಾಡಿಕೊಲ್ಳುತ್ತವೆ. ಇನ್ನೂ ಕೆಲವು ಜೀವಿಗಳು ಬೇರೆ ಬೇರೆ ರಾಸಾಯನಿಕ ವಸ್ತುಗಳನ್ನು ಬಳಸಿ ಶತ್ರುಗಳ ಮೇಲೆ ದಾಳಿ ಮಾಡುವ ಮೂಲಕ ತಮ್ಮ ಆತ್ಮ ರಕ್ಷಣೆ ಮಾಡಿಕೊಳ್ಳುತ್ತವೆ. ಇಂಥ ಜೀವಿಗಳ ಸಂಖ್ಯೆ ಜಗತ್ತಿನಲ್ಲಿ ಹೇರಳವಾಗಿದೆ.

ಫಾರ್ಮಿಕ್ ಆಮ್ಲ ಎರಚುವ ಇರುವೆ! ಬದಲಾಯಿಸಿ

ರಾಸಾಯನಿಕ ಅಸ್ತ್ರಗಳೆಂದ ಕೂಡಲೇ ಮೊದಲು ನೆನಪಾಗುವುದು ಕೀಟಗಳು. ಕೀಟಗಳು ಈ ಭೂಮಿಯ ಮೇಲೆ ಮನುಷ್ಯ, ಅಷ್ಟೇ ಏಕೆ ಬೇರಾವುದೇ ಕಶೇರುಕಗಳು ಅಸ್ತಿತ್ವಕ್ಕೆ ಬರುವುದಕ್ಕೆ ಮೊದಲಿನಿಂದಲೂ ಇವೆ. ಇಂಥ ಹೋರಾಟಗಳೆಲ್ಲೆಲ್ಲಾ ಅವು ಪಳಗಿವೆ. ಹಾಗಾಗಿ ನೋಡಲು ನಮ್ಮ ಕೈಯುಗುರಿಗಿಂತ ಕ್ಷುದ್ರವಾಗಿ ಕಂಡರೂ, ರೊಚ್ಚಿಗೆದ್ದಾಗ ನಮ್ಮನ್ನು ಪಲಾಯನ ಸೂತ್ರ ಪಠಿಸುವಂತೆ ಮಾಡುವ ತಾಕತ್ತು ಅವುಗಳಿಗಿವೆ. ಕೆಲವು ಕೀಟಗಳಂತೂ ಎಷ್ಟೊಂದು ಉಗ್ರವಾಗಿ ಕಚ್ಚುತ್ತವೆಂದರೆ, ಒಮ್ಮೆ ಅವುಗಳ ಕೈಯಲ್ಲಿ ಕಡಿಸಿಕೊಂಡಾತ ಮತ್ತೆ ತನ್ನ ಜೀವನಪರ್ಯಂತ ಆ ಕೀಟಗಳನ್ನು ಕಂಡರೆ ಮೈಲುದೂರ ಓಡಬೇಕು.

ಇರುವೆಗಳು ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತವಾದ ಕೀಟಗಳು. ಸಾಮಾನ್ಯವಾಗಿ ಜೀವನದಲ್ಲಿ ಒಮ್ಮೆಯಾದರೂ ಇರುವೆಗಳಿಂದ ಕಡಿಸಿಕೊಂಡಿರದ ವ್ಯಕ್ತಿಯೇ ಇಲ್ಲ. ಮನೆಯ ಗೋಡೆಯ ಮೂಲೆಯಲ್ಲಿ ಓಡಾಡುತ್ತಿರುವ ಚಿಕ್ಕ ಇರುವೆಗಳಿಂದ ಹಿಡಿದು ನೋಡಲು ಭಯವಾಗುವಂಥ ದಪ್ಪ ದಪ್ಪ ಇರುವೆಗಳವರೆಗೆ  ಅವುಗಳಲ್ಲಿ ಸುಮಾರು 22 ಸಾವಿರ ಪ್ರಭೇದಗಳನ್ನು ಇದುವರೆಗೆ ಗುರುತಿಸಲಾಗಿದೆ. ಚಿಕ್ಕ ಚಿಕ್ಕ ಇರುವೆಗಳು ಕಡಿದಾಗ ಅಷ್ಟೇನೂ ನೋವಾಗದಿದ್ದರೂ ನೂರಾರು ಇರುವೆಗಳು ಮೈಗೆಲ್ಲಾ ಹತ್ತಿದಾಗ ಅದೊಂದು ಯಮಯಾತನೆಯೇ ಸರಿ. ಆದರೆ ಕೆಲವು ಮರಗಳ ಮೇಲೆ ಗೂಡುಕಟ್ಟಿಕೊಂಡಿರುವ ಕೆಂಪಿರುವೆಗಳು ನಿಜಕ್ಕೂ ಭಯಾನಕ. ಅವು ಕೇವಲ  ಕಚ್ಚುವುದಷ್ಟೇ ಅಲ್ಲ ಕಚ್ಚಿದ ಜಾಗಕ್ಕೆ ‘ಫಾರ್ಮಿಕ್’ ಆಮ್ಲವನ್ನು ಎರಚುವುದರಿಂದ ಕಚ್ಚಿದ ಜಾಗ ತೀಕ್ಷ್ನವಗಿ ಉರಿಯುತ್ತದೆ. ಕೆಂಜಿಗೆ, ಚುಗಳಿ ಎಂಬೆಲ್ಲಾ ಹೆಸರುಗಳಿಂದ ಕರೆಯಲ್ಪಡುವ ಈ ಇರುವೆಗಳು ತಾವು ವಾಸಿಸುವ ಮರಗಳಿಗೆ ಸಂಪೂರ್ಣ ರಕ್ಷಣೆ ಒದಗಿಸುತ್ತವೆ. ಫಾರ್ಮಿಕ್ ಆಮ್ಲದ ಕಾರಣದಿಂದಾಗಿಯೇ ಇರುವೆಗಳ ಕುಟುಂಬಕ್ಕೆ  ‘ಫಾರ್ಮಿಸಿಡೇ’ ಎಂಬ ಹೆಸರೇ ಇದೆ.

ವೀರ ಮರಣ ಅಪ್ಪುವ ಜೇನು!

ಜೇನು ಪ್ರಕೃತಿಯಲ್ಲಿ ದೊರೆಯುವ ಒಂದು ಪರಿಶುದ್ಧ ಆಹಾರ. ಅದೊಂದು ಅತ್ಯುತ್ತಮ ಔಷಧೀಯ ಗುಣವುಳ್ಳ ಆಹಾರವೂ ಹೌದು. ಅಂಥ ಸ್ವಾದಿಷ್ಟವಾದ ಜೇನನ್ನು ತಯಾರಿಸುವ ಕೀಟಗಳು ಕೆರಳಿದರೆ ಎಷ್ಟು ಅಪಾಯಕಾರಿಯಾಗಬಲ್ಲವು ಎಂಬುದನ್ನು ಎಲ್ಲರೂ ಬಲ್ಲರು. ಹೆಜ್ಜೇನು ಕಡಿಸಿಕೊಂಡವರು ಅದರ ಅನುಭವವನ್ನು ಕೇಳಿದರೆ ಕಣ್ಣಿಗೆ ಕಟ್ಟುವಂತೆ ವಿವರಿಸಿಯಾರು. ಅಲ್ಲೊಂದು ಇಲ್ಲೊಂದು ಜೇನು ಕಚ್ಚಿದರೆ ಅಂಥ ಅಪಾಯವೇನೂ ಇಲ್ಲ. ಆದರೆ ಹಿಂಡು ಹಿಂಡು ಜೇನ್ನೋಣಗಳು ದಾಳಿ ಮಾಡಿದರೆ ಮನುಷ್ಯನ ಮೇಲೆ, ಅಥವಾ ಯಾವುದೇ ಜೀವಿಯ ಮೇಲಾದರೂ ದಾಳಿ ಮಾಡಿದರೆ ಅದು ಅವುಗಳ ಪಾಲಿಗೆ ಅತ್ಯುತ್ಕ್ರಷ್ಟವಾದ ತ್ಯಾಗವೇ ಸರಿ.  ಏಕೆಂದರೆ ಒಮ್ಮೆ ತನ್ನ ವೈರಿಯ ದೇಹಕ್ಕೆ ತನ್ನ ವಿಷದ ಕೊಂಡಿಯನ್ನು ಚುಚ್ಚಿದ ಮೇಲೆ ಅದನ್ನು  ಹೊರಗೆರೆದುಕೊಳ್ಳಲು ಅವುಗಳಿಗೆ ಆಗುವುದಿಲ್ಲ. ಹೊರಗೆಳೆದುಕೊಳ್ಳುವ ಪ್ರಯತ್ನದಲ್ಲಿ ಅವುಗಳ ಜೀರ್ಣಾಂಗವ್ಯೂಹ, ಹೃದಯ ಎಲ್ಲವೂ ಕಿತ್ತುಬರುತ್ತವೆ. ಅಲ್ಲಿಗೆ ಅದರ ಜೀವನ ಸಮಾಪ್ತಿಯಾದಂತೆ. ಹೀಗೆ ತನ್ನವರ ರಕ್ಷಣೆಗಾಗಿ ಜೇನ್ನೋಣಗಳು ಮಾಡುವ ತ್ಯಾಗ ಅದು.

ಕಣಜಗಳು ಸಹ ಜೋನ್ನೋಣಗಳಷ್ಟೇ ಉಗ್ರವಾಗಿ ಕುಟುಕಬಲ್ಲವು. ಆದರೆ ಅವುಗಳಿಗೂ ಜೇನುಗಳಿಗೂ ಇರುವ ವ್ಯತ್ಯಾಸವೆಂದರೆ ಜೇನುಗಳು ಒಮ್ಮೆ ಕುಟುಕಿದ ಮೇಲೆ ತಮ್ಮ ಕೋಂಡಿಯನ್ನು ಹೊರಕ್ಕೆಳೆದುಕೊಳ್ಳಲಾಗದೆ ವೀರಮರಣ ಅಪ್ಪುತ್ತವೆ. ಆದರೆ ಕಣಜಗಳಿಗೆ ಆ ಭಯ ಇಲ್ಲ. ಅವು ಜೇನುಗಳಂಥ ಕೊಂಡಿಗಳನ್ನು ಹೊಂದಿಲ್ಲ. ಅವು ಒಮ್ಮೆ ಕಡಿದ ಮೇಲೂ ಪದೇ ಪದೇ ಶತ್ರಗಳನ್ನು ಕಡಿಯಬಲ್ಲವು. ಕೆಲವು ಜಾತಿಯ ಕಣಜಗಳು ಒಬ್ಬಂಟಿಯಾಗಿ ವಾಸಿಸಿದರೆ ಇನ್ನು ಕೆಲವು ಜಾತಿಯವು ಜೇನುಗಳಂತೆ ಸಮೂಹದಲ್ಲಿ ವಾಸಿಸುತ್ತವೆ. ಇವು ಸಹ ಅಪಾಯಕಾರಿಯಾದ ವಿಷವನ್ನು ತಮ್ಮ ಕಡಿತದೊಂದಿಗೆ ದೇಹದೊಳಕ್ಕೆ ಸೇರಿಸುತ್ತವೆ. ಒಂದೆರಡು ಕಣಜಗಳು ಕಚ್ಚಿದರೆ ಕಚ್ಚಿದ ಜಾಗದಲ್ಲಿ ಉರಿ, ಬಾವು ಕಂಡುಬಂದು ತಲೆಸುತ್ತು, ವಾಂತಿಯಂಥ ಲಕ್ಷಣಗಳು ಕಂಡುಬರಬಹುದೇ ವಿನಾ ಸಾವು ಸಮಭವಿಸಲಾರದು. ಆದರೆ ಜೇನುಗಳಂತೆ ಗುಂಪಾಗಿ ವಾಸಿಸುವ ಕಣಜಗಳು ಕಡಿದರಂತೂ ಸಾವು  ಕಟ್ಟಿಟ್ಟ ಬುತ್ತಿ.

ದೇಹದೊಳಗೆ ವಿಷ ಸೃಷ್ಟಿಸುವ ಜಂತುಗಳು

ಕೀಟ ಸಾಮ್ರಾಜ್ಯದಲ್ಲಿ ಕೆಲವು ಕೀಟಗಳು ತಮ್ಮ ರಕ್ಷಣೆಗಾಗಿ ಕಡಿಯುವ ಸಾಮಥ್ರ್ಯ ಬೆಳೆಸಿಕೊಂಡಿದ್ದರೆ ಇನ್ನು ಕೆಲವು ಅಂಥ ಸಾಮಥ್ರ್ಯವಿಲ್ಲದ ಕೀಟಗಳು ತಮ್ಮ ದೇಹದಲ್ಲಿ ವಿಷಕಾರಿ ರಾಸಾಯನಿಕಗಳನ್ನು ಹಿಡಿದಿಟ್ಟುಕೊಂಡು ಅವುಗಳನ್ನು ಶತ್ರುಗಳ  ಮೇಲೆ ಎರಚುವ ಮೂಲಕ ಆತ್ಮರಕ್ಷಣೆ ಮಾಡಿಕೊಳ್ಲುವ ಕಲೆಯನ್ನು ಕರಗತ ಮಾಡಿಕೊಂಡಿವೆ. ನಮ್ಮ ಕಾಲ ಕೆಳಗೆ ಹೊಸಕಿ ಹಾಕಬಹುದಂತಹ ಯಕ:ಶ್ಚಿತ್ ಜೀವಿಗಳಂತೆ ಕಾಣುವ ಕೀಟಗಳು ಅಷ್ಟೊಂದು ಅಪಾರಕಾರಿಯಾಗಿ ಪರಿಣಮಿಸುವುದು ಅವುಗಳ ರಾಸಾಯನಿಕ ಸಮರ  ಕಲೆಯಿಂದಾಗಿಯೇ. ಈ ಬಗೆಯ ಕೀಟಗಳಲ್ಲೆಲ್ಲಾ ಅತ್ಯಂತ ಪ್ರಸಿದ್ಧವಾದ ಕೀಟವೆಂದರೆ ‘ಬಂಬಾರ್ಡಿಯರ್ ಬೀಟಲ್’ ಎಂದೇ ಹೆಸರಾಗಿರುವ ಫಿರಂಗಿ ಓಡುಹುಳು. ನಮ್ಮ ತೆಂಗಿನಮರ ಕೊರೆಯುವ ದುಂಬಿ, ಖಡ್ಗಮೃಗ, ಜೀರುಂಡೆ ಮುಂತಾದ ಚಿಪ್ಪಿನ ಕೀಟಗಳ ವರ್ಗಕ್ಕೇ ಸೇರಿದ ಫಿರಂಗಿ ಓಡುಹುಳುಗಳ ವೈಶಿಷ್ಟ್ಯವೆಂದರೆ ಅವು ತಮ್ಮ ದೇಹದಲ್ಲೇ ರಾಸಾಯನಿಕ ಕ್ರಿಯೆಯ ಮೂಲಕ ಹೈಡ್ರೋಕ್ವಿನೋನ್ ಮತ್ತು ಹೈಡ್ರೋಜನ್ ಪರಾಕ್ಸೈಡ್ ದ್ರಾವಣಗಳನ್ನು ಎರಡು ಬೇರೆ ಬೇರೆ ಕೊಠಡಿಗಳಲ್ಲಿ ಸಂಗ್ರಹಿಸಿಕೊಂಡಿರುತ್ತದೆ. ಯಾವಾಗ ಶತ್ರುವೊಂದು ಬಂದು  ಅವುಗಳ  ಮೇಲೆ ದಾಳಿ ನಡೆಸುತ್ತದೋ ಆಗ ಆ ಎರಡೂ ದ್ರಾವಣಗಳನ್ನು ಮಿಶ್ರಣ ಮಾಡಿ ಅವುಗಳ ನಡುವೆ ರಸಾಯನಿಕ ಕ್ರಿಯೆಗಳನ್ನು ಹುಟ್ಟುಹಾಕುತ್ತವೆ. ಇದರ ಪರಿಣಾಮವಾಗಿ ಈ ರಾಸಾಯನಿಕಗಳು ನೀರಿನ ಕುದಿಯುವ ಬಿಂದುವಿನ ಸನಿಹಕ್ಕೆ ಕುದಿದು ವಿಷಕಾರಿ ಅನಿಲಗಳು ಕೀಟದ ದೇಹದ ಹಿಂಭಾಗದಿಂದ ಫಿರಂಗಿಯಿಂದ ಸಿಡಿದ ಗುಂಡಿನಂತೆ ಶತ್ರುಗಳ ಮೇಲೆ ಎರಗುತ್ತವೆ.  ಚಿಕ್ಕಪುಟ್ಟ ಕ್ರಿಮಿಕೀಟಗಳು ಈ ಹೊಡೆತಕ್ಕೆ ತತ್ತರಿಸಿ ಸತ್ತೇ ಹೋಗುತ್ತವೆ. ಸ್ವಲ್ಪ ದೊಡ್ಡ ಶತ್ರುಗಳೂ ಸಹ ಇದಕ್ಕೆ ಬೆಚ್ಚಿಬಿದ್ದು ಪಲಾಯನ ಸೂತ್ರ ಪಠಿಸುತ್ತದೆ. ಆದರೆ ಈ ರಾಸಾಯನಿಕಗಳನ್ನು ತನ್ನ ದೇಹದಲ್ಲೇ ಇಟ್ಟುಕೊಂಡಿದ್ದರೂ ಈ ಕೀಟಗಳಿಗೆ ಇದರಿಂದ ಯಾವ ಭಯವೂ ಇಲ್ಲ. ಏಕೆಂದರೆ ಇವನ್ನು ಸಂಗ್ರಹಿಸುವ ಕೊಠಡಿಗಳು ಎಷ್ಟೊಂದು ಬಲಿಷ್ಠವಾಗಿದೆಯೆಂದರೆ ಒಳಗಿನ ರಾಸಾಯನಿಕಗಳು ಕೀಟದ ಇತರ ಅಂಗಾಂಗಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಕೀಟದ ದೇಹದಲ್ಲಿ ಚಿಕ್ಕ ಚಿಕ್ಕ ಸ್ಪೋಟಗಳೇ ಸಂಭವಿಸಿದರೂ ಕೀಟಕ್ಕೆ ಯಾವುದೇ ತೊಂದರೆ ಆಗುವುದಿಲ್ಲ.

ಬುಲೆಟ್ ಆ್ಯಂಟ್

ಇರುವೆಗಳೆಲ್ಲಾ ಅತ್ಯಂತ ತೀಕ್ಷ್ಣವಾದ ಕಡಿತಕ್ಕೆ ಹೆಸರುವಾಸಿಯಾದ ಇರುವೆ ‘ಬುಲೆಟ್ ಆ್ಯಂಟ್’ . ಇದನ್ನು ’24 ತಾಸಿನ ಇರುವೆ’ ಎಂದೂ ಕರೆಯುತ್ತಾರೆ. ಇದು ಒಮ್ಮೆ ಕಡಿದರೆ ಆ ಅಗಾಧವಾದ ನೋವು 24 ಗಂಟೆಗಳ ಕಾಲ ಕಡಿಸಿಕೊಂಡವನನ್ನು ಕಾಡುತ್ತದೆ. ಇದರ ಕಡಿತದ ನೋವು ಕೋವಿಯಿಂದ ಹೊಡೆದ ಗುಂಡಿನ ನೋವಿನಷ್ಟೇ ತೀಕ್ಸ್ಣ ಎಮದು ಕಡಿಸಿಕೊಂಡಿರುವವರು ಅಭಿಪ್ರಾಯಪಟ್ಟಿರುವುದರಿಂದ ಇದನ್ನು ‘ಬುಲೆಟ್ ಆ್ಯಂಟ್’ ಎಮದು ಕರೆಯಲಾಗಿದೆ. ‘ಶ್ಮಿಟ್ ಸ್ಟಿಂಗ್ ಪೇನ್ ಇಂಡೆಕ್ಸ್’ ಎಂಬ ಒಂದು ಮಾಪನದ ಮೂಲಕ ಯಾವುದೇ ಜೀವಿಯ ಕಡಿತದ ನೋವನ್ನು ಅಳೆಯಲಾಗುತ್ತದೆ. ಈ ಮಾಪನದಲ್ಲಿ ಬುಲೆಟ್ ಆ್ಯಂಟ್ ನ ಕಡಿತಕ್ಕೆ 4+ ಅಂಕಗಳನ್ನು ದಯಪಾಲಿಸಲಾಗಿದೆ. ಟ್ಯಾರಂಟುಲಾ ಹಾಕ್ ವಾಸ್ಟ್ ಎಂಬ ಒಂದು ಜಾತಿಯ ಕಣಜಕ್ಕೆ 4 ಅಂಕಗಳನ್ನು ನೀಡಲಾಗಿದ್ದು, ಬುಲೆಟ್ ಆ್ಯಂಟ್ ಅದನ್ನು ಮೀರಿಸುತ್ತದೆ. ಹಾಗಾದರೆ ಈ ಇರುವೆಯ ಕಡಿತದಿಂದಾಗುವ ಆಗಾಧವಾದ ನೋವಿಗೆ ಕಾರಣವೇನು? ಕೇವಲ ಕಡಿತವೊಂದೇ ಇಷ್ಟೊಂದು ನೋವನ್ನುಂಟುಮಾಡುವಷ್ಟು ಉಗ್ರವೇ ಎಂಬ ಪ್ರಶ್ನೆ ಬರುತ್ತದೆ. ಈ ಪ್ರಶ್ನೆಗೆ ಉತ್ತರವೇ ಮತ್ತೇ ರಸಾಯನಿಕ ಅಸ್ತ್ರ. ಪೊನೆರಾಟಿಕ್ಸಿನ್ ಎಂಬ ಒಂದು ಬಗೆಯ ವಿಷ ಈ ಇರುವೆಗಳ ಕಡಿತದಿಂದ ನಮ್ಮ ದೇಹ ಸೇರುತ್ತದೆ. ಇದೇನೋ ಆರೋಗ್ಯವಂತ ಮನುಷ್ಯನಿಗೆ ಪ್ರಾಣಾಂತಿಕವಾದ ವಿಷವಲ್ಲದಿದ್ದರೂ ವಿಪರೀತ ನೋವನ್ನುಂಟುಮಾಡುತ್ತದೆ. ಈ ವಿಷದ ಕೆಲಸ ಸೋಡಿಯಂ ಅಯಾನುಗಳ ಚಲನೆಗೆ ಧಕ್ಕೆಯುಂಟು ಮಾಡಿ, ನರಮಂಡಲದ ಕಾರ್ಯ ನಿರ್ವಹಣೆಯ ಮೇಲೆ ಪರಿಣಾಮ ಬೀರುವುದು. ಈಗ ಇದನ್ನು ವೈದ್ಯಕೀಯ ಕ್ಷೇತ್ರದಲ್ಲಿ ಬಳಸಿಕೊಳ್ಳುವ ವಿಚಾರವಾಗಿ ಸಂಶೋಧನೆಗಳು ನಡೆಯುತ್ತಿವೆ. ಒಟ್ಟಿನಲ್ಲಿ ಕೀಟ ಜಗತ್ತಿನಲ್ಲಿ ಮಾನವನನ್ನು ಬೆಚ್ಚಿ ಬೀಳಿಸುವ ವಿಷಕಾರಿಗಳಲ್ಲಿ ಬುಲೆಟ್ ಇರುವೆಗಳು ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ.

ವಾಸನೆಯಿಂದಲೇ ಮತಿಗೆಡಿಸುವ ಸ್ಕಂಕ್!

ದೇಹದಲ್ಲಿ ವಿಷಕಾರಿ ರಾಸಾಯನಿಕಗಳನ್ನು ಬಳಸಿ ಶತ್ರಗಳನ್ನು ಬೆದರಿಸುವ ಕಲೆಯನ್ನು ಕೆಲವು ಸಸ್ತನಿಗಳೂ ಕಲಿತಿವೆ. ‘ಸ್ಕಂಕ್’ ಎಂಬ ಒಂದು ಜಾತಿಯ ಪ್ರಾಣಿಗಳು ತಮ್ಮನ್ನು ಹಿಡಿಯಲು ಬಂದ ಶತ್ರುಗಳನ್ನು ಬೆದರಿಸುವುದು ದುವಾಸನೆ ಬೀರುವ ರಾಸಾಯನಿಕದ ಮೂಲಕ. ಇದರ ಪೃಷ್ಟಭಾಗದಲ್ಲಿ ಇರುವ ಎರಡು ಗ್ರಂಥಿಗಳಿಂದ ಅಪಾಯಕಾರಿಯಾದ ದ್ರವ್ಯ ಬಿಡುಗಡೆಯಾಗುತ್ತದೆ. ಇದು ಮೂಗು ಮುಚ್ಚಿಕೊಳ್ಳುವಷ್ಟು ತೀಕ್ಷ್ಣವಾದ ದುರ್ವಾಸನೆ ಹೊಂದಿದ್ದು, ಮನುಷ್ಯರಿಗಂತೂ ತಲೆತಿರುಗೆ ಮೂರ್ಛೆ ಹೋಗುವಷ್ಟು ಅಪಾಯಕಾರಿಯಾಗಿರುತ್ತದೆ. ಕರಡಿಯಂಥ ದೊಡ್ಡ ಶತ್ರುಗಳೂ ಇದರ ವಾಸನೆಗೆ ಬೆದರಿ ಕಾಲಿಗೆ ಬುದ್ಧಿ ಹೇಳುತ್ತವೆ. ಮನುಷ್ಯರ ಮೂಗಿಗಂತೂ ಸುಮಾರು ಐದೂವರೆ ಕಿಲೋಮೀಟರ್ ದೂರದಿಂದಲೇ ಗಮನಕ್ಕೆ ಬರುವಷ್ಟು ತೀಕ್ಷ್ಣವಾಗಿರುತ್ತದೆ. ಈ ಗ್ರಂಥಿಗಳ ಸುತ್ತ ಇರುವ ಸ್ನಾಯುಗಳು ಈ ದ್ರವ್ಯವನ್ನು ಸುಮಾರು ಹತ್ತು ಅಡಿ ದೂರಕ್ಕೆ ಎರಚಲು ಸ್ಕಂಕ್‍ಗಳಿಗೆ ನೆರವಾಗುತ್ತವೆ. ಜೊತೆಗೆ ಅದು ಈ ದ್ರವ್ಯವನ್ನು ಬೇಕಾದ ದಿಕ್ಕಿಗೆ ಎರಚಲೂ ಇದು ಸಹಾಯಮಾಡುತ್ತದೆ.

ಹಲ್ಲಿ ಎಂದರೆ ವಿಷಪ್ರಾಣಿ ಎಂಬ ನಂಬಿಕೆಯೊಂದು ನಮ್ಮಲ್ಲಿ ಆಲವಾಗಿ ಬೇರೂರಿದೆ. ಹಲ್ಲಿ ಬಿದ್ದ ಊಟ ಸೇವಿಸಿ ನೂರಾರು  ಜನರು ಅಸ್ವಸ್ಥರಾದ ಸುದ್ದಿಗಳನ್ನು ಆಗಾಗ ಓದುತ್ತಲೇ ಇರುತ್ತೇವೆ. ಇದಕ್ಕೆ ವಾಸ್ತವವಾಗಿ ಹಲ್ಲಿ ಕಾರಣವಲ್ಲ. ನಮ್ಮ ದೇಶದಲ್ಲಂತೂ ವಿಷಕಾರಿ ಹಲ್ಲಿಗಳು ಇಲ್ಲವೇ ಇಲ್ಲ. ಈ ಜಗತ್ತಿನಲ್ಲಿ ವಿಷಕಾರಿ ಹಲ್ಲಿಗಳ ಕೇವಲ ಎರಡು ಪ್ರಭೇದಗಳು ಮಾತ್ರ ಅಸ್ತಿತ್ವದಲ್ಲಿವೆ. ಅತ್ಯಂತ ಹತ್ತಿರದ ಸಂಬಂಧಿಗಳಾದ ಗೀಲಾ ಮಾನ್‍ಸ್ಟರ್‍ಮತ್ತು ಮೆಕ್ಸಿಕನ್ ಬೀಡೆಡ್ ಲಿಜಾರ್ಡ್  ಎಂಬ ಈ ಎರಡು ಪ್ರಭೇದದ ಹಲ್ಲಿಗಳು ಅತ್ಯಲ್ಪ ಪ್ರಮಾಣದ ವಿಷವನ್ನು ಉತ್ಪಾದಿಸುತ್ತವೆ. ಇದರ ವಿಷವು ಕೋರಾಲ್ ಸರ್ಪದ ವಿಷದಷ್ಟೇ ಘೋರವಾದ ವಿಷವಾದರೂ ಅದನ್ನು ಅತ್ಯಲ್ಪ ಪ್ರಮಾಣದಲ್ಲಷ್ಟೇ ಉತ್ಪಾದಿಸುವುದರಿಂದ ಅದರಿಂದ ಮನುಷ್ಯರಿಗೆ ಪ್ರಾಣಹಾನಿಯೇನೂ ಉಂಟಾಗುವುದಿಲ್ಲ. ಕಚ್ಚಿದ ಜಾಗದಲ್ಲಿ ಉರಿ, ನೋವು ಕಾಣಿಸಿಕೊಳ್ಳಬಹುದು. ಕೆಲವು ದಿನಗಳ ಅನಂತರ ನಿಧಾನವಾಗಿ ಕಡಿಮೆಯಾಗುತ್ತದೆ.

ಅಷ್ಟಪದಿಗಳೆಂದರೆ ಎಲ್ಲರಿಗೂ ಒಂದು ರೀತಿಯ ಭಯವಿದೆ. ಅವುಗಳನ್ನು ಭಾರಿ ರಾಕ್ಷಸರಂತೆ ಎಲ್ಲೆಡೆ ವರ್ಣಿಸಲಾಗಿದೆ. ಆದರೆ ಅವು ಅಷ್ಟೊಂದು ಭಯಜನಕ ಜೀವಿಗಳೇ ಅಲ್ಲ. ಸುಮಾರು ಮುನ್ನೂರು ಪ್ರಭೇದಗಳಿರು ಈ ಅಕ್ಟೊಪಸ್‍ಗಳು ಬೆನ್ನೆಲುಬೇ ಇಲ್ಲದ ಜೀವಿಗಳು. ತಮ್ಮ ಆತ್ಮರಕ್ಷಣೆಗಾಗಿ ಇವು ಕೂಡಾ ರಾಸಾಯನಿಕಗಳನ್ನು ಬಳಸುವ ಉಪಾಯವನ್ನು ಕಂಡುಕೊಂಡಿವೆ. ಇವುಗಳ ದೇಹದಲ್ಲಿ ವಿಷಕಾರಿ ರಾಸಾಯನಿಕಗಳೇನೂ ಇಲ್ಲ. ಆದರೆ ದಪ್ಪನೆಯ ಶಾಯಿಯಂಥ ದ್ರವವೊಂದು ದೇಹದಲ್ಲಿರುತ್ತದೆ. ಯಾವುದಾದರೂ ಶತ್ರು ಅವುಗಳನ್ನು ಹಿಡಿದರೆ ಆ ಶಾಯಿಯನ್ನು ನೀರಿಗೆ ಚೆಲ್ಲುತ್ತದೆ. ಆ ಶಾಯಿಯಲ್ಲಿ ಇರುವ ವರ್ಣದ್ರವ್ಯ ನಮ್ಮ ಕೂದಲಿನ ಕಪ್ಪುಬಣ್ಣಕ್ಕೆ ಕಾರಣವಾಗುವಂಥ ಮೆಲನಿನ್. ಇದು ನೀರಿಗೆ ಬಿದ್ದ ಕೂಡಲೇ ಎಲ್ಲೆಡೆ ಹರಡಿಕೊಂಡು ಆ ಕಪ್ಪು ಮೋಡದೊಳಗೆ ಆಕ್ಟೊಪಸ್ ಎಲ್ಲಿದೆ ಎಂದೇ ಶತ್ರುಗಳಿಗೆ ಗೊತ್ತಾಗದಂತೆ ಮಾಡುತ್ತದೆ. ಈ ಅವಕಾಶವನ್ನು ಬಳಸಿಕೊಂಡು ಆಕ್ಟೋಪಸ್ ಕೂಡಲೇ ಅಲ್ಲಿಂದ ಪಲಾಯನ ಮಾಡುತ್ತದೆ.

ಪತಂಗ ಮತ್ತು ಚಿಟ್ಟೆಗಳ ಮರಿಹುಳುಗಳು ಪ್ರಕೃತಿಯಲ್ಲಿ ಅತ್ಯಂತ ದುರ್ಬಲ ಜೀವಿಗಳಂತೆ ಕಾಣುತ್ತವೆ. ಮೆತ್ತನೆಯ ಮೈಯ ಈ ಜೀವಿಗಳಿಗೆ ತಮ್ಮನ್ನು ರಕ್ಷಿಸಿಕೊಳ್ಳುವುದು ಸುಲಭದ ಮಾತಲ್ಲ. ಏಕೆಂದರೆ ಅವಕ್ಕೆ ಶತ್ರುಗಳು ನೂರಾರು. ಹಕ್ಕಿಗಳು, ಹಾವುಗಳು, ಬೇರೆ ಬೇರೆ ಕೀಟಗಳು ಇತ್ಯಾದಿಗಳು ಸದಾಕಾಲ ಈ ಮರಿಹುಳುಗಳನ್ನು ತಿನ್ನಲು ಹೊಂಚುಹಾಕುತ್ತಲೇ ಕುಳಿತಿರುತ್ತವೆ. ಹಾಗಾಗಿ ಅವು ತಮ್ಮನ್ನು ರಕ್ಷಿಸಿಕೊಳ್ಳಲು ದೇಹದ ಮೇಲೆ ಚುಚ್ಚುವಂಥ ಕೂದಲುಗಳ ಹೊದಿಕೆಯನ್ನು ಹೊಂದಿರುತ್ತವೆ. ಮೈಯಲ್ಲಿ ಉರಿ, ತುರಿಕೆ ಉಂಟುಮಾಡುವ ಇದರ ಕೂದಲುಗಳ ಹೊಡೆತವನ್ನು ಒಮ್ಮೆ ಅನುಭವಿಸಿದವನು ಮತ್ತೊಮ್ಮೆ ಅವುಗಳ ಸಮೀಪ ಸುಳಿಯುವ ಸಾಹಸ ಮಾಡಲಾರ. ಇನ್ನು ಕೆಲವು ಜಾತಿಯ ಮರಿಹುಳುಗಳು ತಮ್ಮನ್ನು ಯಾವುದೋ ಕೀಟವೋ ಹಕ್ಕಿಯೋ ಹಿಡಿದ ಕೂಡಲೇ ದೇಹದಿಂದ ವಿಷಕಾರಿ ರಾಸಾಯನಿಕವನ್ನು ಸ್ರವಿಸಿ ಅದರ ಬಾಯಿಗೇ ಉರಿ ಹತ್ತುವಂತೆ ಮಾಡುತ್ತವೆ. ಒಮ್ಮೆ ಅಂಥ ಮರಿಹುಳುವನ್ನು ಹಿಡಿದು ಪರಿಪಾಟಲು ಪಟ್ಟ ಜೀವಿ ಮತ್ತೊಮ್ಮೆ ಅಂಥ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ.

ಇನ್ನು ಸರ್ಪಗಳ ವಿಷವೂ ಒಂದು ಬಗೆಯ ರಾಸಾಯನಿಕವೇ. ಆದರೆ ಅದರ ಉಪಯೋಗ ಸಾಮಾನ್ಯವಾಗಿ ಆತ್ಮರಕ್ಷಣೆಗಿಂತ ಹೆಚ್ಚಾಗಿ ತಮ್ಮ ಬೇಟೆಯನ್ನು ಕೊಲ್ಲುವುದಕ್ಕೇ ಬಳಕೆಯಾಗುತ್ತದೆ. ಹಾಗಾಗಿ ಅದನ್ನು ಇಲ್ಲಿ ಪ್ರಸ್ತಾಪಿಸಲಾಗಿಲ್ಲ. ಯಾವುದೇ ಸರ್ಪವಾದರೂ ಮನುಷ್ಯರನ್ನು ಅಥವಾ ಬೇರಾವುದೇ ದೊಡ್ಡ ಜೀವಿಯನ್ನು ಕಂಡರೆ ಮೊದಲು ಪಲಾಯನ ಮಾಡಲು ಇಷ್ಟಪಡುತ್ತದೆಯೇ ಹೊರತು ದಾಳಿ ಮಾಡಲು ಅಲ್ಲ. ಆದರೆ ಸರ್ಪಗಳ ಪೈಕಿ ಸ್ಪಿಟಿಂಗ್ ಕೋಬ್ರಾ ಎಂಬ ಜಾತಿಯ ಹಾವುಗಳು ಮಾತ್ರ ತಮ್ಮ ವಿಷವನ್ನು ತಮ್ಮ ಆತ್ಮರಕ್ಷಣೆಗಾಗಿ ಶತ್ರುಗಳ ಮೇಲೆ ಉಗಿಯುವ ಸಾಮಥ್ರ್ಯ ಪಡೆದಿವೆ. ಸುಮಾರು ಆರಡಿ ದುರದವರೆಗೆ ತಮ್ಮ ವಿಷವನ್ನು ಎಸೆಯಬಲ್ಲವು. ಈ ವಿಷ ದೇಹಕ್ಕೆ ತಾಗಿದರೆ ಅಂಥ ಅಪಾಯವೇನೂ ಇಲ್ಲ. ಆದರೆ ಕಣ್ಣಿಗೇನಾದರೂ ತಗುಲಿದರೆ ಶಾಶ್ವತ ಕುರುಡುತನ ಕಟ್ಟಿಟ್ಟ ಬುತ್ತಿ.

ಹೀಗೆ ಜೀವಜಂತುಗಳು ತಮ್ಮ ರಕ್ಷಣೆಗಾಗಿ ಅಳವಡಿಸಿಕೊಂಡಿರುವ ನೂರಾರು ತಂತ್ರಗಳ ಪೈಕಿ ರಾಸಾಯನಿಕ ಸಮರವೂ ಒಂದು. ನೇರವಾದ ಯುದ್ಧದಲ್ಲಿ ಇರುವಂತಹ ಅನನುಕೂಲಗಳು ಈ ಯುದ್ಧದಲ್ಲಿ ಇಲ್ಲ. ತಮ್ಮ ಆಯುಧಗಳಾದ ಕೊಂಬಬು, ಕೈಕಾಲು ಇತ್ಯಾದಿಗಳ ನೆರವಿನಿಂದ ಶತ್ರುಗಳ ವಿರುದ್ಧ ನೆರ ಸಮರ ಸಾರುವುದರಲ್ಲಿ ಇರುವ ತೊಂದರೆಯೆಂದರೆ ಇದರಲ್ಲಿ ಯಾವಾಗಲೂ ಜಯ ಸಿಗುತ್ತದೆ ಎಂಬ ಖಾತರಿಯೇನಿಲ್ಲ. ಯುದ್ಧ ಕೈಗೊಂಡ ಎರಡೂ ಪಕ್ಷಗಳಿಗೂ ದೈಹಿಕ ಹಾನಿ ಖಂಡಿತ. ಆದರೆ ರಾಸಾಯನಿಕ ಸಮರದಿಂದ ಎರಡೂ ಪಕ್ಚದವರಿಗೆ ಹಾನಿ ಇಲ್ಲ. ಶತ್ರುವನ್ನು ಬೆದರಿಸಿಯೇ ಓಡಿಸಬಹುದು. ಒಂದೇ ಮಾತಿನಲ್ಲಿ ಹೆಳಬೇಕಾದರೆ ನೇರ ಸಮರವನ್ನು ಲಾಠಿಚಾರ್ಜ್ ಅಥವಾ ಗೊಲಿಬಾರ್ ಗೆ ಹೋಲಿಸಿದರೆ ರಾಸಾಯನಿಕ ಸಮರವನ್ನು ಅಶ್ರುವಾಯು ಪ್ರಯೋಗಕ್ಕೆ ಹೋಲಿಸಬಹುದು! ಹೀಗೆ ಅತ್ಯಂತ ಸುರಕ್ಷಿತ ಹಾಗೂ ವಿನ್- ವಿನ್ ಸಿಚುವೇಷನ್ (ಇಬ್ಬರಿಗೂ ಜಯ) ಎನ್ನಬಹುದಾದಂಥ ರಾಸಾಯನಿಕ ಯುದ್ಧ ಜೀವಜಂತುಗಳ ಅತ್ಯಂತ ಸುರಕ್ಷಿತ ಹಾಗೂ ಸಮರಕಲೆ ಎನಿಸಿದೆ.