ಚತುರ್ಮುಖ ಬಸದಿ, ಗೇರುಸೊಪ್ಪೆ

ಸ್ಥಳ ಬದಲಾಯಿಸಿ

ಕರ್ನಾಟಕದಲ್ಲಿರುವ ಚತುರ್ಮುಖ ಬಸದಿಗಳ ಈ ಇಲ್ಲಿರುವ ಚತುರ್ಮುಖ ಬಸದಿ ಬಹು ಆಕರ್ಷಕ. ಗೇರುಸೊಪ್ಪೆಯು ಈಗ ಹೊನ್ನಾವರ ತಾಲೂಕು ನಗರ ಗ್ರಾಮದ ಒಂದು ಚಿಕ್ಕ ಹಳ್ಳಿ, ಆದರೆ ವಿಶೇಷವಾದ ಐತಿಹಾಸಿಕ ಮಹತ್ವವನ್ನು ಹೊಂದಿದೆ ಪ್ರಾಚೀನ ದಾಖಲೆಗಳಲ್ಲಿ ಇದನ್ನು ಕೇಮಪುರ ಭಲ್ಲಾತಕೀಪುರ ಮತ್ತು ನಗರಬಸ್ತಿಪುರ ಎಂದು ಕರೆಯಲಾಗಿದೆ. ಹೊನ್ನಾವರ ಸಾಗರ ರಸ್ತೆಯಲ್ಲಿ ಹೊನ್ನಾವರದಿಂದ 39 ಕಿಲೋಮೀಟರ್ ದೂರ ಹೋಗುವಾಗ ಸಿಗುವ ಶರಾವತಿ ನದಿಯ ಗೇರುಸೊಪ್ಪೆ ಅಣೆಕಟ್ಟಿನ ಕೆಳಗಡೆಯಿಂದ ಹೋಗುವ ಕಚ್ಚಾರಸ್ತೆರರುಲ್ಲಿ 6 ಕಿಲೋಮೀಟರ್ ಮುಂದುವರಿದಾಗ ಈ ಪ್ರದೇಶ ಸಿಗುತ್ತದೆ ಇಲ್ಲಿಯ ಕಾಡಿನ ಮಧ್ಯದ ಒಂದು ಬಟ್ಟೆಯ ಮೇಲ್ಬಾಗದಲ್ಲಿ ಈ ಬಸದಿ ಇದೆ. ಇದಕ್ಕೆ ನಾಲ್ಕು ದ್ವಾರಗಳು ಇರುವುದರಿಂದ ಇದು ಚತುರ್ಮುಖ ಬಸದಿ. ಈ ದ್ವಾರಗಳನ್ನು ಪ್ರವೇಶಿಸಿ ಮುಂದುವರಿದಾಗ ಸಿಗುವ ಹಜಾರದಂತಹ ಮಂಟಪದ ಮಧ್ಯದ ಗರ್ಭಗೃಹದಲ್ಲಿ ನಾಲ್ಕು ದಿಕ್ಕುಗಳಿಗೆ (ಅಂದರೆ ಪ್ರವೇಶ ದ್ವಾರಗಳಿಗೆ) ಮುಖಮಾಡಿ ಪದಾಸನ ಭಂಗಿಯಲ್ಲಿ ಕುಳಿತಿರುವ ನಾಲ್ಕು ಸುಂದರ ಶಿಲಾ ಜಿನ ಬಿಂಬಗಳಿವೆ. ಇವು ವರ್ತಮಾನ ಕಾಲದ ಮೊದಲ ತೀರ್ಥಂಕ‌ರುಗಳಾದ ಭಗವಾನ್ ವೃಷಭ, ಅಜಿತ, ಶಂಭವ ಮತ್ತು ಅಭಿನಂದನರ ಬಿಂಬಗಳು.[೧]

ಇತಿಹಾಸ ಬದಲಾಯಿಸಿ

ಕ್ರಿ. ಶಿ. 14ನೇ ಶತಮಾನದ ಆರಂಭದಿಂದ ಕ್ರಿ.1606ರವರೆಗೆ ಗೇರುಸೊಪ್ಪೆಯ ಸಾಳುವ ಅರಸರ ರಾಜಧಾನಿಯಾಗಿತ್ತು ಹಾಗೂ ಮಧ್ಯದಲ್ಲಿ ಹರಿಯುವ ಶರಾವತಿ ನದಿಯ ಇಕ್ಕೆಲಗಳಲ್ಲಿ ಹರಡಿತ್ತು. ಈಗ ದಟ್ಟವಾದ ಕಾಡಿನಿಂದ ಆವರಿಸಿರುವ ಈ ಪ್ರದೇಶದಲ್ಲಿ ಈಗ ಉತ್ತಮ ಸ್ಥಿತಿಯಲ್ಲಿರುವ ಕೆಲವು ಬಸದಿಗಳಲ್ಲದೆ ಬಿದ್ದು ಹೋಗಿರುವ ಹಲವಾರು ಬಸದಿಗಳ ಮನೆಗಳ, ದೊಡ್ಡ ದೊಡ್ಡ ಮಹಲುಗಳ ಅಸ್ತಿವಾರಗಳನ್ನು ರಸ್ತೆಗಳ ಗುರುತುಗಳನ್ನು ಮತ್ತು ಶಿಲಾಶಾಸನಗಳನ್ನು ಕಾಣಬಹುದು. ಇಲ್ಲಿಂದ ಆಳಿದ ಕೊನೆಯ ರಾಣಿ (ಕರಿಮೆಣಸಿನ ರಾಣಿ) ಚನ್ನಭೈರಾದೇವಿ ಇರುವ ವರೆಗೆ ಈ ಪಟ್ಟಣವು ಉತ್ತುಂಗ ವೈಭವದಲ್ಲಿತ್ತು. ಬಸದಿಗಳು ಅರಮನೆಗಳು ಮತ್ತು ಸಿರಿವಂತಿಕೆಯ ಮನೆಗಳಿಂದ ಕಂಗೊಳಿಸುತ್ತಿತ್ತು. ಚತುರ್ಮುಖ ಬಸದಿಯು ತುಂಬಾ ಹಿರಿದಾದುದು ಹಾಗೂ ಪ್ರಸಿದ್ಧವಾದುದು. ಇದರ ಪರಿಸರವನ್ನು ಒಂದು ಹಿರಿಯ ಸಾಂಸ್ಕೃತಿಕ ಸ್ಮಾರಕವಾಗಿ ಸಂರಕ್ಕಿಕೊಂಡು ಬರುವ ಅಗತ್ಯವಿದೆ.ಆದುದರಿಂದ ಕೇಂದ್ರ ಪುರಾತತ್ವ ಇಲಾಖೆ ಇದನ್ನು ತನ್ನ ಸುಪರ್ದಿಗೆ ತಂದುಕೊಂಡು ತನ್ನದೇ ಆದ ರೀತಿಯಲ್ಲಿ ಸಂರಕ್ಷಿಸಿಕೊಂಡು ಬರುತ್ತಿದೆ. ಸಾಮಾನ್ಯವಾಗಿ ಬಸದಿಗಳನ್ನು ತೀರ್ಥಂಕ‌ರು ಭಗವಾನರ ಸಮವಸರಣದ ಪ್ರತಿರೂಪಗಳೆಂದು ಹೇಳುತ್ತಾರೆ. ಚತುರ್ಮುಖ ಬಸದಿಗಳಲ್ಲಿ ಇವು ಸ್ಪಷ್ಟವಾಗಿ ರೂಪಿತವಾಗಿವೆ. ಯಾಕೆಂದರೆ ಸಮವಸರಣದಲ್ಲಿ ಕುಳಿತು ತಮ್ಮ ದಿವ್ಯಧ್ವನಿಯ ಮೂಲಕ ಧರ್ಮೋಪದೇಶ ಮಾಡುವ ಜೀನೇಶ್ವರರು, ಸುತ್ತಲೂ ಕುಳಿತಿರುವ ಜನರು, ಮೃಗ, ಪಕ್ಷಿಯಾದಿಯಾಗಿ ಎಲ್ಲ ಜೀವಿಗಳಿಗೆ ಸಮಾನವಾಗಿ ಕಾಣುತ್ತಿದ್ದರು. ಇದೇ ಭಾವನ ಸರಿಯಾಗಿ ಪ್ರತಿಬಿಂಬಿತವಾಗಲು ಇಂತಹ ಚತುರ್ಮುಖ ಬಸದಿಗಳನ್ನು ನಿರ್ಮಿಸುತ್ತಿದ್ದರು. ಮೊದಲಿಗೆ ಒಬ್ಬರೇ ತೀರ್ಥಂಕ‌ರು ನಾಲ್ಕು ಮೂರ್ತಿಗಳನ್ನು ತಯಾರಿಸಿ ಪ್ರತಿಷ್ಟಾಪಿಸುತ್ತಿದ್ದರು. ಆದರೆ ಅನಂತರದ ಕಾಲದಲ್ಲಿ ತಮಗೆ ಪ್ರಿಯರಾದ ಮೂರ್ತಿಗಳನ್ನು ಪ್ರತಿಷ್ಟಾಪಿಸತೊಡಗಿದರು. ಈ ಮಂದಿರದಲ್ಲಿ ವರ್ತಮಾನ ಕಾಲದ ಮೊದಲ ನಾಲ್ಕರು ತೀರ್ಥಂಕ‌ರು ಬಿಂಬಗಳನ್ನು ಪ್ರತಿಷ್ಟಾಪಿಸಲಾಗಿದೆ. ಈ ವಿಶಿಷ್ಟ ಜಿನಮಂದಿರವನ್ನು ನಗಿರೆ - ಹಾಡುವಳ್ಳಿಗಳ ರಾಣಿಯಾದ ಚೆನ್ನಾಭೈರಾದೇವಿ ನಿರ್ಮಿಸಿದಳು ಎಂದು ಹೇಳಲಾಗುತ್ತದೆ. ಶಾಸನಗಳಲ್ಲಿ ವರ್ಣಿಸಿರುವಂತೆ ನಗರೆ, ತುಳು, ಹೈವ, ಕೊಂಕಣ ರಾಜ್ಯವಾಳುತ್ತಿದ್ದ ಈಕೆ ವಿಸ್ತಾರವಾದ ರಾಜ್ಯವನ್ನೂ ಅಪಾರ ಸಂಪತ್ತನ್ನೂ ಹೊಂದಿದಳು. ವಿದೇಶಗಳಿಗೂ ಬಹಳ ಪ್ರಮಾಣದ ಕರಿಮೆಣಸನ್ನು ರಫ್ತುಮಾಡಿ ಕರಿಮೆಣಸಿನ ರಾಣಿಯೆಂದು ಖ್ಯಾತಿ ಪಡೆದಿದ್ದಳು. ವಿಜಯನಗರದ ಚಕ್ರವರ್ತಿಗಳಿಗೆ ಆತ್ಮೀಯಳಾಗಿದ್ದು, ಈ ಗೇರುಸೊಪ್ಪೆಯಲ್ಲಿ ಈ ಚತುರ್ಮುಖ ಬಸದಿ ಮಾತ್ರವಲ್ಲದೆ, ಇನ್ನೂರ ಎಂಟು ಬಸದಿಗಳನ್ನು ನಿರ್ಮಿಸಿದ್ದಳೆಂದು ಹೇಳಲಾಗುತ್ತದೆ. ಅವುಗಳ ಪೈಕಿ ಕೆಲವು ಬಸದಿಗಳ ಅವಶೇಷಗಳನ್ನು ಇಲ್ಲಿನ ಸುಮಾರು ಮೂರು ಕಿಲೋಮೀಟರ್ ಸುತ್ತಳತೆಯಲ್ಲಿ ಕಾಣಬಹುದು.

ವಿನ್ಯಾಸ ಬದಲಾಯಿಸಿ

ಈ ಬಸದಿಯು ವಿಜಯನಗರ ಕಾಲಾವಧಿಯಲ್ಲಿ ಅವಧಿಯಲ್ಲಿ ಕಟ್ಟಲಾಗಿದೆ. ಗರ್ಭಗೃಹದ ನಾಲ್ಕೂ ದಿಕ್ಕಿಗೆ ಒಂದೊಂದು ದ್ವಾರಬಂಧಗಳಿವೆ. ಸುತ್ತಲೂ ಸಭಾಮಂಟಪವಿದೆ ಇಂತಹ ವಾಸ್ತು ನಿರ್ಮಾಣಗಳನ್ನು ಸರ್ವತೋಭದ ಎಂದು ಕರೆಯುತ್ತಾರೆ. ಗರ್ಭಗೃಹದ ನಾಲ್ಕೂ ದಿಕ್ಕುಗಳ ಪ್ರವೇಶ ದ್ವಾರದಲ್ಲಿ ಎಡಬಲಕ್ಕೆ ಹಾವುಗದೆಗಳನ್ನು ಹಿಡಿದ ದ್ವಾರಪಾಲಕರಿದ್ದಾರೆ. ಈ ದೇವಸ್ಥಾನವು ನಕ್ಷತ್ರಾಕಾರದ ಜಗತಿಯ ಮೇಲಿದೆ. ಹೊರಗೋಡೆಗಳ ಮೇಲೆ ಅಲಂಕೃತ ಗೂಡುಗಳಲ್ಲಿ ದೇವ ದೇವಿಯರ ಶಿಲ್ಪಗಳಿವೆ ಮತ್ತು ಕೆಲವು ಜಾಲಂಧ್ರಗಳಿವೆ. ದ್ರಾವಿಡ ಮತ್ತು ಕದಂಬ ನಾಗರ ಶಿಖರಗಳುಳ್ಳ ಗೂಡುಗಳಲ್ಲಿ ಶಿಲ್ಪಗಳಿವೆ ನಾಲ್ಕು ಸ್ತಂಭಗಳಿಂದ ಕೂಡಿದ ನವರಂಗಗಳಿವೆ. ಅದರಲ್ಲಿ ದೇವ ಕೋಷಗಳಿವೆ. ಮೂರು ದ್ವಾರಬಂಧಗಳ ಲಲಾಟದಲ್ಲಿ ತೀರ್ಥಂಕ‌ರರ, ದಕ್ಷಿಣ ದ್ವಾರ ಬಂಧದಲ್ಲಿ ಗಜಲಕ್ಷ್ಮಿಯ ಶಿಲ್ಪಗಳಿವೆ” ಮೇಲಿನ ಆರೂಢರಲ್ಲಿ ಸುಂದರವಾದ ಅಧೋಮುಖ ಕಮಲಗಳಿವೆ. ಪ್ರಧಾನವಾದ ಈ ಚತುರ್ಮುಖ ಬಸದಿಗೆ ಹಿಂದಿನ ಕಾಲದಲ್ಲಿ ಎತ್ತರವಾದ ಮಾನಸ್ತಂಭವಿತ್ತಂತೆ. ಬಸದಿಯ ಅಧಿಷ್ಠನಾದ ಮೇಲೆ ಬಸದಿಯ ಸುತ್ತಲೂ ಹೊರಗಡೆಯಿಂದ ಪ್ರದಕ್ಷಿಣಾ ಪಥವಿತ್ತು. ಇದರ ಸುತ್ತಲೂ ಹಾಕಿರುವ ಮೂರು ಮೂರು ಪಟ್ಟಕಗಳ ಒಂದೇ ಪ್ರಮಾಣದ ಮತ್ತು ಎತ್ತರದ ಶಿಲಾಸ್ತಂಭಗಳು ಬಸದಿಯ ಸುತ್ತಲಿನ ಇಳಿಜಾರಾದ ಮಾತನ್ನು ಆಧರಿಸಿಕೊಂಡಿರುವಂತೆ ಕಾಣುತ್ತದೆ. ಪ್ರಾಚ್ಯ ಇಲಾಖೆಯವರು ಅಂಗಳದಲ್ಲಿ ಬಸದಿಯ ಸುತ್ತಲೂ ಹುಲ್ಲನ್ನೂ, ಕೆಲವು ಅಲಂಕಾರಿಕ ಗಿಡಗಳನ್ನೂ ಬೆಳೆಸಿದ್ದಾರೆ.

ಒಳಂಗಣ ವಿನ್ಯಾಸ ಬದಲಾಯಿಸಿ

ಪಾಂಗಣದ ಹೊರಗಡೆ ಎರಡು ಸುತ್ತಿನ ಪ್ರಾಕಾರಗೋಡೆ ಇದ್ದಂತೆ ಕಂಡು ಬರುತ್ತದೆ. ಈಗ ಅದು ಬಹಳ ತುಟಿತಗೊಂಡಿದೆ. ಇದರ ಒಳಗಡೆ, ಪಾಂಗಣದ ಬಳಿಯಲ್ಲಿ ಕ್ಷೇತ್ರಪಾಲ ಎಂದು ಗುರುತಿಸಿಕೊಳ್ಳಬಹುದಾದ ಸಾನ್ನಿಧ್ಯವೊಂದಿದೆ.

ಹೊರಾಂಗಣ ವಿನ್ಯಾಸ ಬದಲಾಯಿಸಿ

ಈ ಪ್ರಧಾನ ಬಸದಿಯ ಆವರಣದೊಳಗೆ ನಾಲ್ಕಾರು ಬಸದಿಯಂತಹ ಕಟ್ಟಡಗಳಿದ್ದು ಎಲ್ಲವೂ ಹಾಳು ಬಿದ್ದಿವೆ. ಆದರೆ ಎಲ್ಲವೂ ಈ ಪ್ರಧಾನ ಬಸದಿಗೆ ಮುಖ ಮಾಡಿಕೊಂಡಿವೆ. ಒಳಗಡೆ ಮತ್ತು ಬದಿಗಳಲ್ಲಿ ಹುಲ್ಲು ಮರ ಗಿಡಗಳು ಬೆಳೆದುಕೊಂಡಿವೆ. ಬದಿಗಳಲ್ಲಿ ಒಟ್ಟು ಲೆಕ್ಕ ಮಾಡಿದರೆ ಸುಮಾರು ಒಂಭತ್ತು ಇಂತಹ ಹರಿದು ಮುರಿದು ಬಿದ್ದಿರುವ ಹಳೆಯ ಕಟ್ಟಡಗಳ ಆಸ್ತಿವಾರಗಳಿವೆ.

ಉಲ್ಲೇಖ ಬದಲಾಯಿಸಿ

  1. ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳು. ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೮೬.