ಚಂದ್ರನಾಥ ಸ್ವಾಮಿ ಬಸದಿ, ಕುಂದಬೆಟ್ಟು, ಅಜೆಕಾರು

ಸ್ಥಳ ಬದಲಾಯಿಸಿ

ಕುಂದಬೆಟ್ಟು ಭಗವಾನ್ ಶ್ರೀ ೧೦೦೮ ಚಂದ್ರನಾಥಸ್ವಾಮಿ ಬಸದಿಯು ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಮರ್ಣೆಗ್ರಾಮದ ಅಜೆಕಾರಿನ ಕುಂದಬೆಟ್ಟುವಿನಲ್ಲಿ ಇದೆ. ಮಧುರಾ ಪಟ್ಟಣ ಬಸದಿ ಐದು ಕಿ.ಮೀ. ದೂರ ಇದೆ. ವರಂಗ ಬಸದಿ ೭ ಕಿ.ಮೀ ದೂರ ಇದೆ. ಬಸದಿಯು ಕಾರ್ಕಳ ಮಠಕ್ಕೆ ಸೇರಿದ್ದು, ೧೯೯೧ರಲ್ಲಿನಸಂಪ್ರೋಕ್ಷಣೆ ಆಗಿದೆ.

ಕಾಲ ಬದಲಾಯಿಸಿ

ಭೈರವ ಅರಸರ ಕಾಲದಲ್ಲಿ ಈ ಬಸದಿ ನಿರ್ಮಾಣ ಆಗಿದ್ದು, ಶಿಲಾಮಯವಾಗಿದೆ. ಬಸದಿಯ ಸಾನಿಧ್ಯವು ಅತಿಶಯವಾಗಿದ್ದು, ಇಷ್ಟಾರ್ಥಗಳು ಸಿದ್ಧಿ ಆಗುತ್ತವೆ.[೧]

ವಿನ್ಯಾಸ ಮತ್ತು ಸಂಪ್ರದಾಯ ಬದಲಾಯಿಸಿ

ಪಂಚಲೋಹದ ಪದ್ಮಾವತೀ ಮೂರ್ತಿ ಇದೆ. ಪಾರಿಜಾತ ಗಿಡ ಇರುವುದಿಲ್ಲ. ಹಂಚು ಛಾವಣಿಯ ಗೋಪುರ ಇದೆ. ಇಲ್ಲಿ ಈವರೆಗೆ ಯಾರೂ ಚಾತುರ್ಮಾಸ ಆಚರಿಸಿಲ್ಲ. ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳ ಮಂಟಪ ಇದೆ. ಇಲ್ಲಿ ಜಾಗಟೆ ತೂಗು ಹಾಕಲಾಗಿದೆ. ಮುಂದೆ ತೀರ್ಥಂಕರ ಮಂಟಪ ಇದೆ. ಇದರಲ್ಲಿ ಗಂಧಕುಟಿಯು ಇದೆ. ೨೪ ತೀರ್ಥಂಕರ ಮೂರ್ತಿಗಳೂ ಇಲ್ಲೇ ಇವೆ. ಗಂಧಕುಟಿಯ ಬಳಿಯಲ್ಲಿ ಗಣಧರ ಪಾದ, ಶ್ರುತ, ಬ್ರಹ್ಮದೇವರು ಇದ್ದು, ಅವರಿಗೆ ಪೂಜೆ ನಡೆಯುತ್ತದೆ. ಪದ್ಮಾವತೀ ಮೂರ್ತಿ ಇದ್ದು, ಸೀರೆ ಉಡಿಸಿ, ಅಲಂಕರಿಸಿ, ನೈವೇದ್ಯ ಇಟ್ಟು ನಿತ್ಯವೂ ಪೂಜೆ ನಡೆಯುತ್ತದೆ. ಕುಕ್ಕುಟ ಸರ್ಪ ಬೆಳ್ಳಿಯದ್ದು ಇದೆ. ಉತ್ತರಕ್ಕೆ ಮುಖ ಮಾಡಿರುವ ಪದ್ಮಾವತೀ ದೆವಿಯಲ್ಲಿ ಪ್ರಸಾದ ಕೇಳುವ ಪದ್ಧತಿ ಇದೆ. ಅನ್ಯ ಮತದವರ ಶುಭವಿವಾಹ ಸಂಭಂದ ಬಂಗಾರದ ಕರಿಮಣಿ ಸಹಿತ ಷೋಡಶೋಪಚಾರ ಹೂವಿನ ಪೂಜೆ ಹರಕೆ ಹೇಳಿ ಮದುವೆ ಆಗಿದ್ದು ಹಲವು ಇದೆ.

ಪೂಜಾ ವಿಧಾನ ಬದಲಾಯಿಸಿ

ಮೂಲನಾಯಕ ಶ್ರೀ ಚಂದ್ರನಾಥಸ್ವಾಮಿಯ ಬಿಂಬವು ಕರಿಶಿಲೆಯದ್ದು. ಹದಿನೈದು ಇಂಚು ಎತ್ತರ, ಪರ್ಯಂಕಾಸನ ಭಂಗಿ, ಹಿತ್ತಾಳಿಯ ಪ್ರಭಾವಳಿ ಇದೆ. ನಿತ್ಯವೂ ಮೂಲಬಿಂಬಕ್ಕೆ ಅಭಿಷೇಕ ಜರಗುತ್ತದೆ. ಅಷ್ಟದ್ರವ್ಯಗಳಿಂದ ನಿತ್ಯಪೂಜೆ ನಡೆಯುತ್ತದೆ. ವಜ್ರಲೇಪನ ಆಗಿಲ್ಲ. ಪದ್ಮಾವತೀ ದೇವಿಗೆ ಹರಕೆ ಪೂಜಾ ಸೇವೆಗಳು ಜರಗುತ್ತವೆ. ಪೂರ್ವಹ್ನ ನಿತ್ಯ ನೈವೇದ್ಯ ಪೂಜೆ, ಸಂಜೆ ದೀಪಾರಾಧನೆ ಆಗುತ್ತದೆ. ಬಸದಿಯಲ್ಲಿ ಯುಗಾದಿಗೆ ಹೊಸ ಪಂಚಾಂಗ ಪೂಜಿಸಿ, ಪಠಣ ಮಾಡಲಾಗುತ್ತದೆ. ಮಹಾವೀರ ಜಯಂತಿ ಉತ್ಸವ ನಡೆಯುತ್ತದೆ. ಫೆಬ್ರವರಿ ೧೮ರಂದು ವಾರ್ಷಿಕ ಪೂಜೆ, ಶ್ರಾವಣ, ನವರಾತ್ರಿ ಪೂಜೆ, ದೀಪಾವಳಿ, ಚರ್ತುದಶಿ, ಕಾರ್ತಿಕ ಮಾಸದ ತ್ರಯೋದಶಿಯಂದು ದೀಪೋತ್ಸವ, ವಿಶೇಷ ಸಿಂಹಮಾಸದ ಶುಕ್ರವಾರದ ಪೂಜೆಗಳು ನಡೆಯುತ್ತವೆ. ಈ ಸಮಯದಲ್ಲಿ ಊಟದ ವ್ಯವಸ್ಥೆ ಇರುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂ ಶ್ರೀ ಪ್ರಿಂಟರ್ಸ್. pp. ೮೭.