ಗಂಗಾವತಿ ಪ್ರಾಣೇಶ್

ಗಂಗಾವತಿ ಪ್ರಾಣೇಶ್ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಸೆಪ್ಟೆಂಬರ್ 8, 1961ರಲ್ಲಿ ಗಂಗಾವತಿಯಲ್ಲಿ ಜನಿಸಿದ ಪ್ರಾಣೇಶ್ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಯಲಬುರ್ಗಿಯಲ್ಲೂ, ಬಿ. ಕಾಂ ಪದವಿಯನ್ನು ಗಂಗಾವತಿಯಲ್ಲೂ ಪಡೆದರು. ತಂದೆ ಸ್ವಾತಂತ್ರ್ಯಯೋಧರಾದ ಶ್ರೀ ಬಿ. ವೆಂಕೋಬಾಚಾರ್ಯರು ಶಾಲಾ ಶಿಕ್ಷಕರಾಗಿದ್ದರು. ತಾಯಿ ಸತ್ಯವತಿಬಾಯಿ ಅವರಿಂದ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡ ಪ್ರಾಣೇಶ್ 1982ರಿಂದ ಸಾಹಿತ್ಯದ ರಸಾಸ್ವಾದದಲ್ಲಿ ಮೀಯತೊಡಗಿದರು.

ಗಂಗಾವತಿ ಪ್ರಾಣೇಶ್
Born (1961-09-08) ೮ ಸೆಪ್ಟೆಂಬರ್ ೧೯೬೧ (ವಯಸ್ಸು ೬೨)
ಗಂಗಾವತಿ, ಕೊಪ್ಪಳ ಜಿಲ್ಲೆ
Occupation(s)ಹಾಸ್ಯಗಾರರು, ಲೇಖಕರು.
Known forಹಾಸ್ಯ
Parent(s)ತಂದೆ : ಶ್ರೀ ಬಿ. ವೆಂಕೋಬಾಚಾರ್ಯರು
ತಾಯಿ : ಸತ್ಯವತಿಬಾಯಿ
Awardsಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಜೀವನ ಬದಲಾಯಿಸಿ

ಬೀchi ಸಾಹಿತ್ಯದಿಂದ ಪ್ರಭಾವಿತರಾದ ಪ್ರಾಣೇಶ್, ಆ ಸಾಹಿತ್ಯದಲ್ಲಿರುವ ಹಾಸ್ಯವನ್ನು ಮೈಗೂಡಿಸಿಕೊಂಡು ಅದನ್ನೇ ಇತರರಿಗೆ ಹಂಚುವ ಕಾಯಕವನ್ನು 1994ರಿಂದ ಆರಂಭಿಸಿದರು. ‘ಹಾಸ್ಯಸಂಜೆ’ ಎಂಬ ವಿನೂತನವಾದ ಹಾಸ್ಯಕ್ಕೇ ಮೀಸಲಾದ ಕಾರ್ಯಕ್ರಮಗಳನ್ನು ಉತ್ತರ ಕರ್ನಾಟಕದಲ್ಲಿ ಆರಂಭಿಸಿದ ಕೀರ್ತಿ ಪ್ರಾಣೇಶರಿಗೆ ಸಲ್ಲುತ್ತದೆ. ಗುಲ್ಬರ್ಗಾ ಆಕಾಶವಾಣಿಯಿಂದ ಆರಂಭವಾದ ಇವರ ಹಾಸ್ಯಸಂಜೆ ಕಾರ್ಯಕ್ರಮವು ಇಂದು ದೂರದರ್ಶನದ ವಿವಿಧ ವಾಹಿನಿಗಳಿಗೂ ಹಬ್ಬಿದೆ. ವಿಶ್ವದ ವಿವಿದೆಡೆಗಳಲ್ಲಿರುವ ಸುಮಾರು 400 ಊರುಗಳಲ್ಲಿ ಪ್ರಾಣೇಶರು ನೀಡಿರುವ ಕಾರ್ಯಕ್ರಮಗಳ ಸಂಖ್ಯೆ ಹಲವು ಸಾವಿರಗಳನ್ನು ಮೀರಿವೆ. ಕೇವಲ ಭಾಷಣದಲ್ಲಷ್ಟೇ ಅಲ್ಲದೆ ಪ್ರಾಣೇಶರ ಪ್ರಾವಿಣ್ಯತೆ ತಬಲಾ, ಕೊಳಲು, ಸಂಗೀತಗಳಲ್ಲೂ ಚಾಚಿಕೊಂಡಿದೆ. ಪ್ರಾಣೇಶರ ವೈಶಿಷ್ಟ್ಯವ್ಯೇ ಅರಳು ಹುರಿದಂತೆ ಉತ್ತರ ಕರ್ನಾಟಕದ ಅಚ್ಚ ಕನ್ನಡದಲ್ಲಿ ಹರಿಸುವ ಅವರ ವಾಗ್ಝರಿ. ಅವರ ಈ ಮಾತುಗಾರಿಕೆ ವಿಶ್ವವ್ಯಾಪಿಯಾಗಿರುವ ಕನ್ನಡಿಗರೆಲ್ಲರಿಗೂ ಬಲುಪ್ರಿಯ. ಮಧ್ಯಪ್ರಾಚ್ಯ ದೇಶಗಳು, ಆಸ್ಟ್ರೇಲಿಯಾ, ಸಿಂಗಪೂರ್, ಥೈಲಾಂಡ್, ಮಲೇಶಿಯಾ, ಹಾಂಕಾಂಗ್, ಅಮೆರಿಕ ಮುಂತಾದ ನಗರಗಳಲ್ಲೆಲ್ಲಾ ಅವರ ಕಾರ್ಯಕ್ರಮಗಳು ಜನಪ್ರಿಯಗೊಂಡಿವೆ.

‘ನಗಿಸುವವನ ನೋವುಗಳು’ ಎಂಬ ಪುಸ್ತಕ ಬರೆದಿರುವ ಪ್ರಾಣೇಶ್ ಹಲವಾರು ಕ್ಯಾಸೆಟ್, ಸಿಡಿಗಳನ್ನೂ ಹೊರತಂದಿದ್ದಾರೆ. ಯೂ ಟ್ಯೂಬ್ ನಂತಹ ಅಂತರಜಾಲ ಮಾಧ್ಯಮಗಳಲ್ಲಿ ಅವರ ಹಲವಾರು ಕಾರ್ಯಕ್ರಮಗಳ ತುಣುಕುಗಳು ನಿರಂತರವಾಗಿ ಜನಪ್ರೀತಿಯನ್ನು ಸಂಪಾದಿಸುತ್ತಿವೆ. ದೂರದರ್ಶನಕ್ಕಾಗಿನ ಹಲವಾರು ಹಾಸ್ಯ ಪ್ರವಚನಗಳು, ಮಾತಿನ ಮಂಟಪಗಳು, ಚಾವಡಿಗಳು, ಹೊಸ ಹೊಸ ರೀತಿಯಲ್ಲಿನ ಸಾಂಸ್ಕೃತಿಕ ವೇದಿಕೆಗಳು ಮುಂತಾದವೆಲ್ಲಾ ಪ್ರಾಣೇಶರ ಹಾಸ್ಯ ರಸಾಯನವನ್ನು ನಿಂತ ನೀರಾಗಿಸದೆ, ನಿರಂತರ ಲವಲವಿಕೆಯ ನಾದವನ್ನಾಗಿರಿಸಿರುವಲ್ಲಿ ವಿಶಿಷ್ಟ ಪಾತ್ರ ವಹಿಸುತ್ತಿವೆ.

ಉಲ್ಲೇಖ ಬದಲಾಯಿಸಿ