ಕೊಂಬು ಕಹಳೆ ಬದಲಾಯಿಸಿ

ಮುನ್ನುಡಿ ಬದಲಾಯಿಸಿ

ನಾಡಿನ ಬಹುತೇಕ ಹಳ್ಳಿಗಳಲ್ಲಿ ಬಳಕೆಯಲ್ಲಿರುವ ವಾದ್ಯಗಳ ಗುಂಪಿನಲ್ಲಿ ಕೊಂಬು ಕಹಳೆಗಳಿಗೆ ಅಗ್ರಸ್ಥಾನ. ಜಾತ್ರೆ ಉತ್ಸವಗಳಲ್ಲಿ ಎಲ್ಲಾ ವಾದ್ಯಗಳಿಗೂ ಮೊದಲು ಕೊಂಬುಕಹಳೆ ಮೊಳಗಬೇಕು ಎಂಬುದು ರೂಡಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ಭೂತಕೋಲದ ಸಂದರ್ಭದಲ್ಲಿ ಹರಿಜನ ವರ್ಗವಾದ 'ನಲಿಕೆ' ಜನಾಂಗದವರು ಕೊಂಬು ಕಹಳೆ ಊದುತ್ತಾರೆ. ಇದೊಂದು ಉದ್ಯೋಗಿ ಕಲೆಯಾಗಿದೆ.

ಕೂಂಬು ಕಹಳೆಯ ಇತಿಹಾಸ ಬದಲಾಯಿಸಿ

ಅಂದಿನ ರಾಜರುಗಳು ಅವರ ಕಾಲದಲ್ಲಿ ರಣಕಹಳೆ ಬಳಕೆಯಲ್ಲಿತ್ತು. ಕೋಟೆಯ ಎತ್ತರದ ಬುರ್ಜಿನ ಮೇಲೆ ನಿಲ್ಲುತ್ತಿದ್ದ ಕಾವಲುಗಾರ ದೂರದಲ್ಲೇ ಶತ್ರುಗಳ ಆಗಮನವನ್ನು ಗುರುತಿಸಿ ಕೊಂಬು ಊದಿ ಕೋಟೆಯೊಳಗಿನ ಸೈನಿಕರನ್ನು ಎಚ್ಚರಗೊಳಿಸುತ್ತಿದ್ದ. ಯುದ್ಧ ಸಮಯದಲ್ಲೂ 'ಕೊಂಬು ಕಹಳೆ' ದನಿ ಸೈನಿಕರಿಗೆ ಸ್ಪೂರ್ತಿ ನೀಡುತ್ತಿದ್ದರು. ಅದೇ ರೀತಿ ಮದುವೆಯ ಸಂದರ್ಭದಲ್ಲಿ ಮದುವೆಯ ಗಂಡು ದೂರದಲ್ಲಿ ಬರುತ್ತಿರುವಾಗಲೇ 'ಕಹಳೆ' ಊದಿ ಹೆಣ್ಣಿನ ಕಡೆಯವರಿಗೆ ಬೀಗರು ಬರುತ್ತಿರುವ ವಿಚಾರವನ್ನು ತಿಳಿಸುತ್ತಿದ್ದುದುಂಟು. ಈಗ ಕೊಂಬು ಕಹಳೆಗಳ ಬಳಕೆ ಕಡಿಮೆಯಾಗಿದ್ದರೂ ಅಲ್ಲಲ್ಲಿ ಗೌರವದ ಸಂಕೇತವಾಗಿ ಬಳಕೆಯಲ್ಲಿದೆ. ಊರಿಗೆ ಧಾರ್ಮಿಕ ಗುರುಗಳು, ಅಧಿಕಾರಿಗಳು, ಬಂದಾಗಲೂ ಅದನ್ನು ಬಳಸುತ್ತಾರೆ. ಕೊಂಬು ಕಹಳೆ, ನಿರ್ದಿಷ್ಟ ಜನಾಂಗದಲ್ಲಿ ವಂಶಪಾರಂಪರ್ಯವಾಗಿ ಬೆಳೆದು ಬಂದಿದೆ. ಬಹುತೇಕವಾಗಿ ಈ ಕಲೆ ಆದಿ ಕರ್ನಾಟದಲ್ಲಿ ಹೆಚ್ಚು ಬಳಕೆಯಲ್ಲಿದೆ.

ಶೈಲಿ ಬದಲಾಯಿಸಿ

ಕಲಾವಿದರು ಕಲಾ ಪ್ರದರ್ಶನದ ಸಂದರ್ಭದಲ್ಲಿ ಕೋಟು ಪೇಟ ಧರಿಸುತ್ತಾರೆ. ಇದು ಇವರಿಗೆ ಉದ್ಯೋಗಿ ಕಲೆಯಾದರೂ, ಇದರಿಂದಲೇ ಇವರು ಜೀವನ ನಡೆಸುವುದು ಕಷ್ಟವಾಗುವದರಿಂದ ವ್ಯವಸಾಯವನ್ನು ಅವಲಂಬಿಸಿರುತ್ತಾರೆ. ಆಹ್ವಾನ ಬಂದರೆ ಹಳ್ಳಿ ಹಳ್ಳಿಗೆ ಹೋಗಿ ಕಲಾ ಪ್ರದರ್ಶನ ನೀಡುತ್ತಾರೆ. ಕಹಳೆ, ಕೊಂಬು ಊದಲು ಶಕ್ತಿ ಬೇಕಾಗುತ್ತದೆ. ಕೆಲವು ಕಲಾವಿದರು ಸುಮಾರು ಅರ್ಧ ತಾಸಿನವರೆಗೂ ಬಿಡದೇ ಉಸಿರು ಕಟ್ಟಿ ಊದಿ ಪ್ರೇಕ್ಷಕರನ್ನು ಬೆರಗು ಗೊಳಿಸುತ್ತಾರೆ. ಕಹಳೆಯನ್ನು ಹಿತ್ತಾಳೆಯ ತಗಡಿನಿಂದ ಮಾಡಿರುತ್ತಾರೆ. ಅದು ಇಂಗ್ಲೀಷಿನ 'ಎಸ್' ಅಕ್ಷರ ಆಕಾರವಾಗಿ ಇರುತ್ತದೆ. ಇದರಲ್ಲಿ ಎರಡು ಮೂರು ಭಾಗಗಳಿದ್ದು, ಪ್ರದರ್ಶನ ಸಮಯದಲ್ಲಿ ಒಂದರೊಡನೊಂದು ಭಾಗವನ್ನು ಸೇರಿಸಿಕೊಂಡು ಊದುತ್ತಾರೆ. ಕೊಂಬು ಹೆಸರೇ ಹೇಳುವಂತೆ ಕೊಂಬಿನಾಕಾರದಲ್ಲೇ ಇರುತ್ತದೆ. ಕೊಂಬು ಕಹಳೆ ದನಿಗಳಲ್ಲಿ ಸ್ಪಷ್ಟ ವ್ಯತ್ಯಾಸವಿರುತ್ತದೆ. ಎರಡೂ ಮೇಳಗೊಂಡಾಗ ಒಂದು ವಿಶಿಷ್ಟ ದನಿ ಕೇಳಿಸುತ್ತದೆ. ಈ ಎರಡು ವಾದ್ಯಗಳ ರಚನೆಯನ್ನು ಗಮನಿಸಿದರೆ ಕೊಂಬಿನ ಸುಧಾರಿತ ರೂಪವೇ ಕಹಳೆಯೆಂದೆನಿಸುತ್ತದೆ. ಆದರೂ ಎರಡೂ ವಾದ್ಯಗಳ ಬಳಕೆಯೂ ರೂಢಿಯಲ್ಲಿದೆ.

ಉಲ್ಲೇಖ ಬದಲಾಯಿಸಿ

  1. ಗೊ.ರು.ಚನ್ನಬಸಪ್ಪ, ಕರ್ನಾಟಕ ಜನಪದ ಕಲೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು, ೧೯೭೭.