ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಶಾಸ್ತ್ರ ಹೇಳಿ ಜೀವನ ನಡೆಸುವಂತಹ ಒಂದು ಅಲೆಮಾರಿ ಜನಾಂಗದವರು ಈ ಕೊಂಡಮಾಮರು. ಶಾಸ್ತ್ರ ಹೇಳುವಾಗ ಪ್ರತಿಯೊಂದು ಸಾಲಿನ ಕೊನೆಯಲ್ಲೂ 'ಕುರ್ರಮಾಮ' ಎಂದು ಹೇಳುವುದರಿಂದ 'ಕುರ್ರಮಾಮ', 'ಕುರುಮಾಮ' 'ಕುರುಕುರು ಮಾಮ'ಗಳೆಂದು ಇವರನ್ನು ಕರೆಯುವರು. ವಂಶ ಪಾರಂಪರ್ಯ ಉದ್ಯೋಗವಾಗಿ ಈ ಕಲೆಯನ್ನು ಬೆಳೆಸಿಕೊಂಡು ಬಂದಿರುವ ಇವರು ಸಾಮಾನ್ಯವಾಗಿ ಕರ್ನಾಟಕದಾದ್ಯಂತ ಕಂಡುಬರುತ್ತಾರೆ. ಇವರನ್ನು ಆಂಧ್ರದ ಮೂಲದವರೆಂದು ಹೇಳಲಾಗುತ್ತದೆ. ಆಂಧ್ರದ ಕ್ರಾಂತಿವೀರ ಅಲ್ಲೂರಿ ಸೀತರಾಮರಾಜು ಇವರ ಸಹಾಯದಿಂದಲೇ ಬ್ರಿಟಿಷರ ವಿರುದ್ಧ ಹೋರಾಡಿದ್ದೆಂದು ಹೇಳಲಾಗುತ್ತದೆ. ಕೊಂಡಮಾಮರ ಬಗೆಗಿನ ಪುರಾಣಗಳ ರೀತಿಯನ್ನು ಗಮನಿಸಬಹುದು.

ಕೊಂಡಮಾಮರ ಬಗೆಗಿನ ಪುರಾಣಗಳು ಬದಲಾಯಿಸಿ

ಕೈಲಾಸದಲ್ಲಿ ಒಮ್ಮೆ ಹೆಂಗಸರ ಬದಲು ಗಂಡಸರೇ ಅಡಿಗೆ ಮಾಡಿಕೊಂಡರಂತೆ. ಈ ಬಗ್ಗೆ ಪಾರ್ವತಿಯು ಮುನಿದು ನಮ್ಮನ್ನು ಅವಮಾನಗೊಳಿಸಿದ ನೀವು ಇನ್ನು ಮುಂದೆ ಭೂಲೋಕದಲ್ಲಿ ಕೊಂಡರಾಜರಾಗಿ ಊರಾಡಿಕೊಂಡು, ಒಂದು ಊರಲ್ಲಿಯಾದರೂ ಮೂರು ಕಲ್ಲುಗಳನ್ನು ಇಟ್ಟುಕೊಂಡು ಒಲೆಯೂಡಿ ಅಡಿಗೆ ಮಾಡಿಕೊಂಡು, ಒಂದು ನಿದ್ದೆ ಕಳೆದು ಮುಂದೆ ಸಾಗಿ ಎಂದು ಶಾಪ ಕೊಟ್ಟಳು. ಅದರಂತೆ ಶಾಪಗ್ರಸ್ಥರಾಗಿ ಕೊಂಡರಾಜರು ಹುಟ್ಟಿದರು. ಈ ಕಲಾವಿದರು ವೀರಗಚ್ಚೆ, ಎದೆಗೆ ಕಾವಿಬಟ್ಟೆ, ಇಲ್ಲವೆ ಅರೆದೋಳಿನ ಕರಿಯ ಕುಪ್ಪಸ ತೊಡುತ್ತಾರೆ. ಕೈಕಾಲುಗಳಿಗೂ ಬಿಳಿ ಎಕ್ಕದ ಬೇರಿನ ಬಳೆಗಳಿರುತ್ತವೆ. ಇದರೊಂದಿಗೆ ಬಿಗಿದುಕಟ್ಟಿದ ಮುಡಿ, ಕೈಯ ಏಕನಾದಕ್ಕೆ ಸಿಕ್ಕಿಸಿದ ನವಿಲುಗರಿ, ಕವಡೆಯ ನಡುಪಟ್ಟಿ, ಬಿಳಿಯ ಮತ್ತು ಕೆಂಪು ನಾಮ, ನೇತುಹಾಕಿದ ಚೀಲ, ಕಿವಿಗೆ ಚಂದ್ರಮುರಿ, ಬೆನ್ನಿಗೆ ಬತ್ತಳಿಕೆ, ಉದ್ದನಾದ ಗಡ್ಡಮೀಸೆ, ಮಣಿಸರ, ಕೆಂಪು ದಾರದಲ್ಲಿ ಪೋಣಿಸಿದ ಹಂದಿಯ ಹಲ್ಲು ಮೊದಲಾದ ಉಡುಗೆ ತೊಡುಗೆಗಳಿರುತ್ತವೆ. ಕೊಂಡಮಾಮನ ಕೈಯಲ್ಲಿ ಚಿಟಿಗೆ ಹಾಗೂ ಮತ್ತೊಂದು ಕೈಯಲ್ಲಿ ಪುಟ್ಟ ತಂಬೂರಿಯು ಇರುತ್ತದೆ. ಕೊರಳಿನಲ್ಲಿ ಹಂದಿಯ ಹಲ್ಲನ್ನು ಪೋಣಿಸಿ ಕಟ್ಟುವುದರಿಂದ ಯಾವುದೇ ರೀತಿಯ ಎಡರು ತೊಡರುಗಳು ಪರಿಹಾರವಾಗುತ್ತವೆ ಎಂಬುದಾಗಿ ಅವರಲ್ಲಿ ನಂಬಿಕೆಯು ಇರುವುದು. ಇವರ ಗುರುಗಳು ಮಾತ್ರ ಊರೊಳಗೆ ಬರುವುದಿಲ್ಲ. ಒಂದು ವೇಳೆ ಬಂದರೂ ದೂರದ ಕಾಡಿನೊಳಗೆ ಇರುತ್ತಾರೆ. ಇವರು ಭವಿಷ್ಯ ಹೇಳುವವರು ಅಲ್ಲದೆ ಹಳ್ಳಿಯ ವೈದ್ಯರು ಕೂಡ ಆಗಿರುತ್ತಾರೆ.

ಉಲ್ಲೇಖಗಳು ಬದಲಾಯಿಸಿ

  • ಕರ್ನಾಟಕ ಜನಪದ ಕಲೆಗಳ ಕೋಶ: ಸಂಪಾದಕ-ಹಿ.ಚಿ.ಬೋರಲಿಂಗಯ್ಯ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ, ೧೯೯೬.
"https://kn.wikipedia.org/w/index.php?title=ಕೊಂಡಮಾಮ&oldid=788924" ಇಂದ ಪಡೆಯಲ್ಪಟ್ಟಿದೆ