ಕುರುಡುಮಲೆ

ಭಾರತ ದೇಶದ ಗ್ರಾಮಗಳು

ಕುರುಡುಮಲೆ ಕೋಲಾರ ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಊರು. ಮುಳಬಾಗಿಲಿನಿಂದ ಅಂದಾಜು ೭ ಕಿ. ಮೀ ದೂರದಲ್ಲಿರುವ ಈ ಊರು, ಚೋಳ ರಾಜನ ಕಾಲದ ಶಿಲ್ಪಕಲೆಯುಳ್ಳ ದೇವಸ್ಥಾನಗಳಿಗೆ ಮನೆಯಾಗಿದೆ.

ಕುರುಡುಮಲೆ ಸೋಮೇಶ್ವರ ದೇವಸ್ಥಾನ
ಕುರುಡುಮಲೆ ವಿನಾಯಕ - ಹತ್ತು ಅಡಿ ಎತ್ತರದ ಪ್ರಾಚೀನ ವಿನಾಯಕನ ಮೂರ್ತಿ

ಊರಿನಲ್ಲಿರುವ ಗಣಪನ ದೇವಸ್ಥಾನ ಬಹಳ ಪ್ರಖ್ಯಾತ. ಇಲ್ಲಿಯ ೧೦ ಅಡಿ ಎತ್ತರದ, ಒಂದೇ ಕಲ್ಲಿನಲ್ಲಿ ಕೆತ್ತಿರುವ ಪ್ರಖ್ಯಾತ ವಿನಾಯಕನ ಮೂರ್ತಿ ದಿನನಿತ್ಯ ದೂರ ದೂರದಿಂದ ಉತ್ಸಾಹಿಗಳನ್ನು, ಭಕ್ತರನ್ನು ಇಲ್ಲಿಗೆ ಕರೆತರುತ್ತದೆ. ವಿನಾಯಕನ ಮೂರ್ತಿ ರಾಮಾಯಣದ ಕಾಲದ್ದೆಂದು ಸ್ಥಳೀಯರ ನಂಬಿಕೆ. ಇದೇ ದೇವಸ್ಥಾನದಿಂದ ಸ್ವಲ್ಪವೇ ದೂರದಲ್ಲಿರುವ ಕುರುಡುಮಲೆ ಸೋಮೇಶ್ವರ ದೇವಸ್ಥಾನ ಚೋಳರ ಕಾಲದ ಶಿಲ್ಪಕಲೆಯಿಂದ ಕೂಡಿದೆ. ಚೋಳ ರಾಜನು ಸ್ವತಃ ಇಲ್ಲಿಗೆ ಬಂದು ಈ ದೇವಸ್ಥಾನವನ್ನು ಸಂಸ್ಥಾಪಿಸಿದ್ದನಂತೆ. ಇಲ್ಲಿಯ ಹಲವು ಶಿಲ್ಪಗಳು ಮುಸ್ಲಿಮ್ ದೊರೆಗಳ ದಾಳಿಯಲ್ಲಿ ಮುರಿದು ಹೋದವಂತೆ. ಅಳಿದುಳಿದ ಶಿಲ್ಪಕಲೆಯಲ್ಲಿ ಹಲವು ವಿಭಿನ್ನ ಮನಮೋಹಕ ಕಲಾಕೃತಿಗಳಿವೆ.

ಕುರುಡುಮಲೆಯ ಹೆಸರು ಮೊದಲು ಕೂಡುಮಲೆ ಎಂದಾಗಿತ್ತೆಂದೂ, ನಂತರ ಜನರಲ ಬಾಯಲ್ಲಿ ಅದು ಕುರುಡುಮಲೆ ಆಯಿತೆಂದೂ ಹಲವು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.

ಕುರುಡುಮಲೆ ಸೋಮೇಶ್ವರ ದೇವಸ್ಥಾನದಲ್ಲಿನ ಚೋಳರ ಶೈಲಿಯ ಶಿಲ್ಪಕಲೆಯುಳ್ಳ ಒಂದು ಸ್ಥಂಭ.

ದಂತಕಥೆಗಳು ಬದಲಾಯಿಸಿ

ಕುರುಡು ಮಲೆಯ ಸುತ್ತಲು ಇರುವ ಇನ್ನಿತರ ದಂತಕಥೆಗಳು ಹೀಗಿವೆ, ಕುರುಡು ಮಲೆ ಎಂಬ ಹೆಸರು ಕೂಡು ಮತ್ತು ಮಲೆ ಎಂಬ ಪದಗಳಿಂದ ಬಂದಿದೆ. ಇದರರ್ಥ ಸೇರುವ, ಭೇಟಿಯಾಗುವ ಸ್ಥಳವೆಂದು ಅರ್ಥ. ಸ್ಥಳೀಯರ ನಂಬಿಕೆಗಳಂತೆ ಈ ಸ್ಥಳವು ದೇವರುಗಳಿಗೆ ಬೇಸರವಾದಾಗ ಅವರು ಕಾಲ ಕಳೆಯುವ ಉದ್ದೇಶದಿಂದ ಭೂಮಿಗೆ ಇಳಿದು ಬರುವ ಸ್ಥಳವೆಂದು ಭಾವಿಸಲಾಗಿದೆ.

ಇಲ್ಲಿನ ಗಣೇಶ ದೇವಾಲಯವು 13.5 ಅಡಿ ಎತ್ತರದ ಗಣಪತಿ ಮೂರ್ತಿಯನ್ನು ಹೊಂದಿದೆ ಮತ್ತು ದೇವಾಲಯದ ವಿನ್ಯಾಸವನ್ನು ಎರಡು ವಿಭಿನ್ನ ಶೈಲಿಗಳಲ್ಲಿ ನಿರ್ಮಿಸಲಾಗಿದೆ. ಇದರ ಕುರಿತು ದಂತಕಥೆಗಳಿದ್ದು ಅದರ ಪ್ರಕಾರ ಈ ದೇವಾಲಯವನ್ನು ಇತಿಹಾಸ ಪ್ರಸಿದ್ಧ ಶಿಲ್ಪಿಗಳಾದ ಜಕಣಾಚಾರಿ ಮತ್ತು ಅವನ ಮಗ ಡಕಣಾಚಾರಿ ಇಬ್ಬರು ವಿನ್ಯಾಸಗೊಳಿಸಿದರು ಎಂದು ಹೇಳಲಾಗುತ್ತದೆ.

ಕುರುಡುಮಲೆಯಲ್ಲಿ ಸೋಮೇಶ್ವರ ದೇವಾಲಯವಿದ್ದು, ಅದು ಇಲ್ಲಿನ ಗಣಪತಿ ದೇವಾಲಯಕ್ಕಿಂತ ಹಳೆಯದಾಗಿದೆ. ಇದರ ನಿರ್ಮಾಣ ಕಾಲವು ನಮ್ಮನ್ನು ಚೋಳರ ಆಡಳಿತ ಕಾಲದಷ್ಟರವರೆಗು ಕೊಂಡೊಯ್ಯುತ್ತದೆ.

ಕುರುಡುಮಲೆ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ 100 ಕಿ.ಮೀ ದೂರದಲ್ಲಿದ್ದು, ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು.

ಕೆಳಗಿನ ಲೇಖನಗಳನ್ನೂ ನೋಡಿ ಬದಲಾಯಿಸಿ