ಕಪಿಲಾ ಯೋಜನೆ : ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯ ಬಿದರಹಳ್ಳಿ-ಬೀಚನಹಳ್ಳಿ ಸಮೀಪದಲ್ಲಿ ಕಪಿಲಾ ನದಿಗೆ ಅಡ್ಡವಾಗಿ ನಿರ್ಮಿಸಿದ ಕಟ್ಟೆ; ಅದರಿಂದ ಸಂಗ್ರಹವಾಗುವ ನೀರು; ಅದರ ನೀರಾವರಿ ಉಪಯೋಗ-ಇಷ್ಟೂ ಈ ಯೋಜನೆಯಲ್ಲಿ ಅಡಕವಾಗಿವೆ (ಕಬಿನಿ ರಿ¸óÀರ್ವಾಯರ್ ಪ್ರೋಜೆಕ್ಟ್‌).

ಕಪಿಲಾನದಿ ಬದಲಾಯಿಸಿ

ಕಾವೇರಿ ನದಿಯ ಪ್ರಧಾನ ಉಪನದಿಗಳಲ್ಲಿ ಒಂದು. ನದಿಯ ಉಗಮಸ್ಥಾನ ಕೇರಳದ ವೈನಾಡು, ತಾಲ್ಲೂಕಿನ ಪಶ್ಚಿಮಘಟ್ಟಗಳ ಸಾಲಿನಲ್ಲಿದೆ. ಇದರ ಎತ್ತರ ಸಮುದ್ರಮಟ್ಟದಿಂದ 2100 ಮೀ ನದಿ 212 ಕಿಮೀಗಳಷ್ಟು ದೂರಕ್ಕೆ ಹರಿದು ತಿರುಮಕೂಡಲು ನರಸೀಪುರದಲ್ಲಿ ಕಾವೇರಿಯನ್ನು ಸೇರುತ್ತದೆ. ಉಗಮಸ್ಥಾನದಲ್ಲಿ ವಾರ್ಷಿಕ ಮಳೆ 175-310 ಸೆಂಮೀ. ತಳದ ಅರಣ್ಯ ಪ್ರದೇಶದಲ್ಲಿ ಇದು 75-175 ಸೆಂಮೀಗಳಷ್ಟು ಕಡಿಮೆ. ಮುಂದೆ ಮೈಸೂರು ಜಿಲ್ಲೆಯ ಬಂiÀÄಲು ಪ್ರದೇಶವನ್ನು ಪ್ರವೇಶಿಸುವ ಹೊತ್ತಿಗೆ ಹಲವಾರು ಉಪನದಿಗಳು ನೀರಿನಿಂದ ಕಪಿಲಾ ನದಿ ಪುಷ್ಟಿಗೊಳ್ಳುತ್ತದೆ. ಕೂಡಲು ನರಸೀಪುರ, ಯಳಂದೂರು, ಚಾಮರಾಜನಗರ, ಕೊಳ್ಳೇಗಾಲ ತಾಲ್ಲೂಕುಗಳಲ್ಲಿನ ಪರಿಸ್ಥಿತಿ ಯೋಜನೆಯ ನಿರ್ವಹಣೆಗೆ ಅತ್ಯಂತ ಅನುಕೂಲವಾದದ್ದು-ಕಡಿಮೆ ಮಳೆ, ಬಂiÀÄಲನಾಡು, ಗುಂಬುನೀರಿನ ನದಿ. ಅಂಕೆಗೆ ಒಳಪಡುವ ನದಿಯ ನೀರು ಇಲ್ಲಿ ಹೊಸ ನೆಲ, ಹೊಸ ಪರಿಸರವನ್ನೇ ಸೃಷ್ಟಿಸಿವೆ.

ಯೋಜನೆಯ ರೂಪರೇಖೆಗಳು ಬದಲಾಯಿಸಿ

ಮೊದಲು 1959ರಲ್ಲಿ ಸರ್ಕಾರದ ಆಡಳಿತ ಅಂಗೀಕಾರ ಪಡೆದ ಈ ಯೋಜನೆಯಲ್ಲಿ ಕಾಲಕ್ರಮೇಣ ಹಲವಾರು ಮಾರ್ಪಾಡುಗಳಾಗಿ; ಇಂದಿನ ಪರಿಷ್ಕೃತ ರೂಪದಲ್ಲಿ ನಿರ್ಮಾಣಗೊಂಡಿವೆ. ಕೆಲವು ವಿವರಗಳು: ಜಲಾನಯನ ಪ್ರದೇಶ . . . 2,232 ಚ.ಕಿಮೀ ಜಲಾಯನದ ಘನಗಾತ್ರ . . . 19,200 ಮಿಲಿಯನ್ ಘನ ಅಡಿಗಳು ಪ್ರಧಾನ ಉಪಯೋಗ . . . 49,606 ಹೆ. ಜಮೀನಿನ ವ್ಯವಸಾಯ, ಮಿಶ್ರ ಬೆಳೆ ಕ್ರಮೇಣ 72,835 ಹೆ. ಗಳಿಗೆ ವಿಸ್ತರಿಸುವ ಯೋಜನೆ. ಇತರ ಉಪಯೋಗಗಳು . . . 32,000 ಕಿ.ವಾ ವಿದ್ಯುಚ್ಛಕ್ತಿಯ ಉತ್ಪಾದನೆ. ಬೆಂಗಳೂರು ನಗರಕ್ಕೆ 2,800 ಮಿಲಿಯನ್ ಘನ ಅಡಿಗಳಷ್ಟು ನೀರಿನ ಸರಬರಾಜು ನೀರಾವರಿ ಉಪಯೋಗ ಹೊಂದುವ ಪ್ರದೇಶಗಳು . . . ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ಪ್ರದೇಶಗಳು ನÀಂಜನಗೂಡು, ಮೈಸೂರು, ತಿರುಮಕೂಡಲು, ನರಸೀಪುರ, ತಾಲ್ಲೂಕುಗಳಿಗೂ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು ತಾಲ್ಲೂಕುಗಳಿಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿಗೂ ಈ ಯೋಜನೆಯ ನೆರವು ಭಾಗಶಃ ದೊರೆಯುವುದು. ನಾಲೆಗಳು . . . ಕಪಿಲಾ ಬಲದಂಡೆ ನಾಲೆ, ಕಪಿಲಾ ಎಡದಂಡೆ ನಾಲೆ ಮತ್ತು ಕೃಷ್ಣರಾಜಸಾಗರದಿಂದ ಬಲದಂಡೆ ಎತ್ತರಮಟ್ಟದ ನಾಲೆ ನಡುವಿನ ಗಾರೆ ಕಟ್ಟಡದ ಕಟ್ಟೆಯ ಉದ್ದ . . . 250 ಮೀ ಕಟ್ಟೆಯ ಒಟ್ಟು ಉದ್ದ . . . 2692 ಮೀ ನದಿಪಾತ್ರದ ಸರಾಸರಿ ಮಟ್ಟದಿಂದ ಕಟ್ಟೆಯ ಎತ್ತರ . . . 27 ಮೀ ಜಲಾಶಯದ ಪಾತ್ರದಿಂದ ಅಡಿಪಾಯ ಸಾಗಿರುವ ಗರಿಷ್ಠ ಆಳ . . . 28 ಮೀ ಜಲಾಶಯದ ವಿಸ್ತಾರದಿಂದ ಮುಳುಗಡೆ ಯಾಗುವ ಪ್ರದೇಶ . . . 6076 ಹೆ ಕಟ್ಟೆಯ ಮೇಲಣ ರಸ್ತೆಯ ಅಗಲ . . . 8 ಮೀ ಕಟ್ಟೆಯ ನಿವೇಶನದಲ್ಲಿ ಹರಿಯುವ . . . ಸು. 1,94,000 ಕ್ಯೂಸೆಕ್ಸುಗಳು ನೀರಿನ ಗರಿಷ್ಠ ಬೆಲೆ . . . (ಕ್ಯೂಬಿಕ್ ಫೀಟ್ ಪರ್ ಸೆಕೆಂಡ್) ಯೋಜನೆಯ ಒಟ್ಟು ಅಂದಾಜು ಖರ್ಚು . . . ರೂ. 24.80 ಕೋಟಿ

ನೀರಾವರಿ ಬದಲಾಯಿಸಿ

ಯೋಜನೆ ಪೂರ್ಣವಾದಾಗ ಲಭಿಸುವ ಕೆಲವು ಮುಖ್ಯ ಪ್ರಯೋಜನ ಗಳನ್ನು ಮುಂದಿನ ಯಾದಿ ತೋರಿಸುತ್ತದೆ (ಸಂಖ್ಯೆಗಳು ಎಕರೆಗಳನ್ನು )

ನೀರಾವರಿ ಸೌಕರ್ಯವನ್ನು ಕ್ರಮೇಣ 1,85,000 ಎಕರೆಗಳಿಗೆ ವಿಸ್ತರಿಸುವ ಯೋಜನೆ ಇದೆ. ಅದು ಕಾರ್ಯರೂಪಕ್ಕೆ ಬಂದಾಗ ಬೇಸಾಯದಲ್ಲಿ ಆಗುವ ಪ್ರಗತಿಯ ಅಂದಾಜು ಮುಂದಿನ ಯಾದಿಯಲ್ಲಿದೆ.

ಯೋಜನೆಯಲ್ಲಿ ಮುಖ್ಯವಾಗಿ ವಿವಿಧ ಹಂತಗಳಿವೆ ಕಟ್ಟೆಯ ನಿವೇಶನದ ಆಯ್ಕೆ. ಪ್ರಾದೇಶಿಕ ಬೆಳೆಯ ಸಮಗ್ರ ವಿವರ ಸಂಗ್ರಹಣೆ, ಯೋಜನೆಯ ನೀಲನಕಾಶೆ ಮತ್ತು ಅಂದಾಜುಪತ್ರ, ಸರ್ಕಾರದ ಮಂಜೂರಾತಿ, ಕಾಮಗಾರಿಯನ್ನು ಕುರಿತಂತೆ ಟೆಂಡರನ್ನು ಕರೆದು ಒಪ್ಪುವುದು, ಜಲಾಶಯದಿಂದ ಮುಳುಗಡೆಯಾಗುವ ಪ್ರದೇಶಗಳ ಜನರ ಪುನಃರ್ನಿವೇಶನ, ಯೋಜನೆಯ ಕಾರ್ಯ.

1. ನಿವೇಶನದ ಆಯ್ಕೆ : ಕಪಿಲಾ ಯೋಜನೆಯ ಪ್ರಧಾನ ಉಪಯೋಗ ನೀರಾವರಿ. ವಿದ್ಯುದುತ್ಪಾದನೆ ಇಲ್ಲಿ ಆನುಷಂಗಿಕ (ಶರಾವತಿ ಯೋಜನೆಯ ಪ್ರಧಾನ ಉದ್ದೇಶ ವಿದ್ಯುದುತ್ಪಾದನೆ). ಆದ್ದರಿಂದ ಈ ಯೋಜನೆಯ ನಿವೇಶನದ ಆಯ್ಕೆಯಲ್ಲಿ ಗಮನಿಸಿದ ಅಂಶಗಳು ಹೀಗಿವೆ-(I) ನೀರಾವರಿಯ ಪ್ರಯೋಜನ ಬಹುಭಾಗಕ್ಕೆ ಲಭ್ಯವಾಗಬೇಕು; (ii) ಕಟ್ಟೆ ಹಾಗೂ ನಾಲೆ ವ್ಯವಸ್ಥೆಯ ಖರ್ಚು ಮತ್ತು ನೀರನ್ನು ನಿಯಂತ್ರಿಸಲು ಯುಕ್ತ ಸ್ಥಳಪರಿಶೀಲನೆಯಾಯ್ತು. ನಂಜನಗೂಡು ಪಟ್ಟಣದಿಂದ ಮೇಲುಭಾಗದಲ್ಲಿರುವ ಒಂಬತ್ತು ಸ್ಥಳಗಳನ್ನು ಆಯ್ದು ಪರಿಶೀಲಿಸಿ ಅಂತಿಮವಾಗಿ ಈಗಿನ ಸ್ಥಳವನ್ನು ಒಪ್ಪಲಾಯಿತು. ಈ ಕಟ್ಟೆಯನ್ನು; ಬಿದರಹಳ್ಳಿ-ಬೀಚನಹಳ್ಳಿಯ ಈಗಿನ ಸ್ಥಳಕ್ಕಿಂತ ಮೇಲುನದಿಯಲ್ಲೆ ಕಟ್ಟಿದರೆ ಕೇರಳರಾಜ್ಯದಲ್ಲಿ ಇನ್ನಷ್ಟು ಪ್ರದೇಶ ಮುಳಗಡೆ ಆಗುತ್ತಿತ್ತು. ಕೆಳನದಿಯಲ್ಲಿ ಎಲ್ಲಿಯಾದರೂ ಸ್ಥಳವನ್ನು ಆರಿಸಿದ್ದರೆ ಆಗ ಕಟ್ಟೆಯ ವಿಸ್ತಾರ ಏರುತ್ತಿತ್ತು. ಜೊತೆಯಲ್ಲೇ ನೀರಾವರಿಯಿಂದ ಉಪಯೋಗ ಪಡೆಯುವ ಪ್ರದೇಶಗಳ ವ್ಯಾಪ್ತಿ ಕುಂಠಿತವಾಗುತ್ತಿತ್ತು. ಇದರಿಂದ ಆಗುತ್ತಿದ್ದುದು ಉಭಯನಷ್ಟ. ಹೀಗೆ ಸ್ಥಳದ ಆಯ್ಕೆ ಪರ ಮತ್ತು ವಿರುದ್ಧಗಳ ನಡುವೆ ಒಂದು ವಿಧದ ಸಮತೋಲನ.

2 ಪ್ರಾದೇಶಿಕ ಬೆಳೆ : ಕಪಿಲಾಯೋಜನೆಯ ಇಂಜಿನಿಯರಿಂಗ್ ವಿಭಾಗ ವ್ಯವಸಾಯ ಇಲಾಖೆಯಿಂದ ಪ್ರಾದೇಶಿಕ ಬೆಳೆಗಳ ಸಮಗ್ರ ವಿವರಗಳನ್ನು ಸಂಗ್ರಹಿಸಿತು. ನೀರಾವರಿಯ ಗರಿಷ್ಠ ಲಾಭ ಪಡೆಯಲು ಈ ಅಂಶಗಳು ಅಗತ್ಯ. ಕಟ್ಟೆಯ ಎತ್ತರ, ನಾಲೆಗಳ ವಿನ್ಯಾಸ ಮುಂತಾದುವನ್ನು ನಿರ್ಧರಿಸುವಲ್ಲಿ ಭೌಗೋಳಿಕ ಸನ್ನಿವೇಶದಷ್ಟೇ ಮಹತ್ತ್ವ ಪ್ರಾದೇಶಿಕ ಬೆಳೆಗಳನ್ನು ಕುರಿತ ವಿವರಗಳಿಗೂ ಇದೆ; ನಾಲೆಗಳ ವ್ಯವಸ್ಥೆ ವ್ಯಾಪಿಸುವ ಒಟ್ಟು ಪ್ರದೇಶದಲ್ಲಿ ಭಿನ್ನದರ್ಜೆಯ ಮಣ್ಣುಗಳಿವೆ. ಇವುಗಳಲ್ಲಿ ಪ್ರಧಾನವಾದವು ಕಂಕರೆ, ಕೆಂಪು ಮತ್ತು ಕಪ್ಪು ಮಣ್ಣುಗಳು. ಮಳೆ ಕಡಿಮೆ. ಆ ನೀರನ್ನೇ ಆಶ್ರಯಿಸಿ ರಾಗಿ, ಜೋಳ ಮುಂತಾದ ಬೆಳೆಗಳನ್ನು ಮಾತ್ರ ಬೆಳೆಸುತ್ತಿದ್ದರು. ಇಲ್ಲಿಗೆ ಜಲಾಶಯದಿಂದ ವ್ಯವಸ್ಥಿತವಾಗಿ ಮತ್ತು ನಿರಂತರವಾದ ನೀರು ಪುರೈಕೆಯಿಂದ ಬತ್ತ, ಹಿಪ್ಪು ನೇರಳೆ ಮುಂತಾದ ಬೆಳೆಗಳನ್ನು ಬೆಳೆಸಬಹುದಾಗಿದೆ. ಇದರಿಂದ ಈ ಪ್ರದೇಶಗಳು ಆರ್ಥಿಕವಾಗಿ ಮುಂದುವರಿದಿವೆ.

3 ನೀಲನಕ್ಷೆ ಮತ್ತು ಅಂದಾಜುಪತ್ರ : ಕಟ್ಟೆಯ ಸ್ಥೂಲ ಚಿತ್ರ ಮೇಲೆ ಹೇಳಿದ ಎರಡು ಪ್ರಧಾನ ಅಂಶಗಳಿಂದ ನಿರ್ಧರಿತವಾಗುತ್ತದೆ. ಈಗ ಕಟ್ಟೆಯ ತಳಪಾಯ, ಉದ್ದ, ಅಗಲ, ಎತ್ತರ ಮತ್ತು ಮಾದರಿ. ಕಟ್ಟೆಯ ಎರಡು ಬದಿಗಳ ಒಡ್ಡುಗಳ ರಚನೆ ಹಾಗೂ ವಿನ್ಯಾಸ. ದಿಡ್ಡಿಬಾಗಿಲುಗಳು (ಕ್ರಸ್ಟ್‌ ಗೇಟ್ಸ್‌) ತೂಬುಗಳು (ಸ್ಲೂಸಸ್) ಮತ್ತು ನಾಲೆಗಳು ಇವುಗಳಿಗೆ ಸಂಬಂಧಿಸಿದ ವಿವರಗಳು-ಇವನ್ನೆಲ್ಲ ಲಕ್ಷ್ಯದಲ್ಲಿರಿಸಿ ಯೋಜನೆಯ ಒಂದು ಸಮಗ್ರ ನೀಲನಕ್ಷೆಯನ್ನೂ ಅದರ ಜೊತೆಯಲ್ಲೇ ಒಂದು ಅಂದಾಜುಪತ್ರವನ್ನೂ ಸಿದ್ಧಗೊಳಿಸುತ್ತಾರೆ. ಗಾರೆಕಟ್ಟಡದ ಕಟ್ಟೆ ಹಾಗೂ ಮಣ್ಣಿನ ಒಡ್ಡುಗೋಡೆಗಳು ಇವುಗಳ ವಿನ್ಯಾಸ ರಚನೆಯಲ್ಲಿ ಲಕ್ಷಿಸಿದ ಪ್ರಧಾನ ಅಂಶಗಳೆಂದರೆ-(I) ಮೇಲುನದಿಯಲ್ಲಿ ನೀರಿನ ಹಾಗೂ ಗೋಡುಮಣ್ಣಿನ ತೂಕ; (ii) ಗಾರೆ ಕೆಲಸದ ತೂಕ; (iii) ಮೇಲುನದಿಯ ನೀರು ಹಾಗೂ ತೆರೆಗಳಿಂದ ಉತ್ಪನ್ನವಾಗುವ ಮಟ್ಟಸ ಬಲಗಳು (ಹಾರಿಜಾಂಟಲ್ ಫೋರ್ಸಸ್); (iv) ಜಲಾಶಯದ ನೀರಿನ ಮೇಲೊತ್ತಡ.

ಅಂದಾಜುಪತ್ರದಲ್ಲಿ ಪ್ರಧಾನವಾಗಿ ಎರಡು ವಿಭಾಗಗಳಿವೆ-ಕಪಿಲಾಕಟ್ಟೆ ಮತ್ತು ಮುಳುಗಡೆ ಪ್ರದೇಶಗಳ ಒಟ್ಟು ವೆಚ್ಚ ರೂ. 11.80 ಕೋಟಿ; ನಾಲೆಗಳ ಒಟ್ಟು ವೆಚ್ಚ ರೂ. 13.00 ಕೋಟಿ. ಆದ್ದರಿಂದ ಯೋಜನೆಯ ಒಟ್ಟುವೆಚ್ಚದ ಅಂದಾಜು ರೂ. 24.80 ಕೋಟಿ. ನೀಲನಕ್ಷೆ ಮತ್ತು ಅಂದಾಜುಪತ್ರದ ತಯಾರಿಕೆಯಲ್ಲಿ ಹಲವಾರು ಅಂಶಗಳನ್ನು ಆಧಾರವಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಕಟ್ಟೆಯ ತಳಪಾಯ; ಇಂತಿಷ್ಟು ಅಡಿಗಳು ಇದ್ದರೆ ಸಾಕೆಂದು, ತೀರ್ಮಾನಿಸಿ ಆ ಆಧಾರದ ಮೇಲೆ ಸಮಗ್ರ ನೀಲನಕ್ಷೆಯನ್ನೂ ಅದರ ಅಂದಾಜುಪತ್ರವನ್ನೂ ತಯಾರಿಸುತ್ತಾರೆ. ಆದರೆ ವಾಸ್ತವಿಕವಾಗಿ ಕಾರ್ಯಕ್ಕೆ ತೊಡಗಿದಾಗ ತಳಪಾಯದ ಆಳ ಸಾಲದೆಂದಾದರೆ ಅಥವಾ ರಚನೆಯಲ್ಲಿ ವ್ಯತ್ಯಾಸ ಅನಿವಾರ್ಯವೆನ್ನಿಸಿದರೆ ಇಡೀ ನೀಲನಕ್ಷೆಯನ್ನು ಬದಲಾಯಿಸಬೇಕಾಗುತ್ತದೆ. ಬದಲಾಗುತ್ತಿರುವ ದೇಶದ ಆರ್ಥಿಕ ಹವೆಯಿಂದಲೂ ಅಂದಾಜುಪತ್ರದ ಮೇಲೆ ಸಾಕಷ್ಟು ಪರಣಾಮವಾಗುತ್ತದೆ. ಉದಾಹರಣೆಗೆ ಸಾಮಗ್ರಿಗಳ ಹಾಗೂ ಕಾಮಗಾರಿಯ ಬೆಲೆಗಳು ವರ್ಷದಿಂದ ವರ್ಷಕ್ಕೆ ಏರುತ್ತಿವೆ. ಇಲ್ಲೆಲ್ಲ ವಾಸ್ತವಿಕ ಪರಿಸ್ಥಿತಿಯನ್ನು ಗಮನಿಸಿ ಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲು ಎಡೆ ಇದ್ದೇ ಇರುತ್ತದೆ.

ನೀಲನಕ್ಷೆ ಮತ್ತು ಅಂದಾಜುಪತ್ರ ಯೋಜನೆ ಕೇವಲ ದಾರಿಸೂಚಕಗಳು

4. ಸರ್ಕಾರದ ಮಂಜೂರಾತಿ : ರೂ.320 ಲಕ್ಷದ ಮೊದಲ ಯೋಜನೆಗೆ ಸರ್ಕಾರ 1959ರಲ್ಲಿ ಅಂಗೀಕಾರ ನೀಡಿತು. ಆದರೆ ಪರಿಶೀಲನೆ ಮುಂದುವರಿದಂತೆ ಹೊಸ ಸಮಸ್ಯೆಗಳೂ ಅವುಗಳಿಗೆ ಪರಿಹಾರಗಳೂ ಕಂಡುಕೊಂಡಂತೆ ರೂ.24.80 ಕೋಟಿ ವೆಚ್ಚದ ಯೋಜನೆಗೆ ಬೇರೆ ಬೇರೆ ಹಂತಗಳಲ್ಲಿ ಸರ್ಕಾರ ಒಪ್ಪಿತು.[೧]

5. ಕಾಮಗಾರಿ ಟೆಂಡರುಗಳು : ಇಂಥ ಬೃಹದ್ಯೋಜನೆಯನ್ನು ನಿರ್ವಹಿಸಲು ಸ್ಥಾಪಿಸಿದ ಎಂಜಿನಿಯರಿಂಗ್ ವಿಭಾಗ ಕಾಮಗಾರಿಯನ್ನು ವಿವಿಧ ಕಾರ್ಯಕಾರಿ ವಿಭಾಗಗಳಾಗಿ ವಿಭಜಿಸಿ ಒಂದೊಂದನ್ನೂ ಪ್ರತ್ಯೇಕವಾಗಿ ನೆರವೇರಿಸಲು ಟೆಂಡರುಗಳನ್ನು ಕರೆಯಿತು. ಉದಾಹರಣೆಗೆ ಸ್ಥಳಕ್ಕೆ ಲಾರಿಸಾಗುವ ದಾರಿಯ ರಚನೆ, ಒಡ್ಡುಗಳಿಗೆ ಮಣ್ಣು ಸಾಗಿಸುವ ಕೆಲಸ, ಕಟ್ಟೆಯ ತಳಪಾಯದ ರಚನೆ, ದಿಡ್ಡಿ ಬಾಗಿಲುಗಳ ನಿರ್ಮಾಣ ಮುಂತಾದ ವಿವಿಧ ಬಿಡಿ ಕೆಲಸಗಳು. ಎಂಜಿನಿಯರಿಂಗ್ ವಿಭಾಗ ಒಪ್ಪಿದ ಟೆಂಡರುದಾರರು ಅವರಿಗೆ ವಿಧಿಸಿದ ಕಾರ್ಯಗಳನ್ನು ಗೊತ್ತಾದ ವಿಧಿ, ನಿಯಮ, ದರಗಳ ಅನುಸಾರ ನಡೆಸಬೇಕು. ಇದು ಆಗುತ್ತಿರುವಾಗ ಹೆಜ್ಜೆಹೆಜ್ಜೆಗೂ ಉಸ್ತುವಾರಿ ನೋಡಿಕೊಳ್ಳಲು, ಎಲ್ಲವೂ ನೀಲಿನಕ್ಷೆ ಪ್ರಕಾರ ಮುಂದುವರಿಯುತ್ತಿವೆಯೇ ಎಂದು ದೃಢಪಡಿಸಿಕೊಳ್ಳಲು, ಅಲ್ಲಿ ನಮೂದಿಸಿರದ ಹೊಸ ಪರಿಸ್ಥಿತಿ ಕಾರ್ಯರಂಗದಲ್ಲಿ ತಲೆದೋರಿದರೆ ಸೂಕ್ತಪರಿಹಾರ ಅರಸಿ ಟೆಂಡರುದಾರನಿಗೂ ಸರ್ಕಾರಕ್ಕೂ ಅನ್ಯಾಯವಾಗದಂತೆ ಕೆಲಸ ಮುಂದುವರಿಸಿ ಕೊಂಡು ಹೋಗಲು-ಇವೇ ಮುಂತಾದ ಕಾರ್ಯನಿರ್ವಹಣೆಗೋಸ್ಕರ ಎಂಜಿನಿಯರಿಂಗ್ ವಿಭಾಗ ತನ್ನ ಒಂದು ದೊಡ್ಡ ಪಡೆಯನ್ನೇ ಯೋಜನೆಯ ವಿವಿಧ ಪ್ರದೇಶಗಳಲ್ಲಿ ವಿವಿಧ ಹಂತಗಳಿಗೆ ನಿಯೋಜಿಸಿತ್ತು.

6. ಮುಳುಗಡೆ ಪ್ರದೇಶದ ಪುನರ್ನಿವೇಶನ : ನದೀಪಾತ್ರದ ಇಕ್ಕೆಲಗಳಲ್ಲೂ ಜನ, ಕೃಷಿ ವಿಪುಲವಾಗಿ ಹಬ್ಬಿರುವುದು ವಾಡಿಕೆ. ಆದ್ದರಿಂದ ಕಟ್ಟೆಯ ನಿರ್ಮಾಣದಿಂದ ಮೇಲುನದಿಯ ದಂಡೆಗಳ ಬಹುಭಾಗ ನೀರಿನಿಂದ ಮುಳುಗಿಹೋಗಿ ಅಲ್ಲಿನ ಜನರಿಗೂ ಅವರ ಸಂಪತ್ತಿಗೂ ಅಪಾರ ಹಾನಿ ಆಗುವುದು ಸಹಜ. ಈ ಜನವನ್ನು ಒಂದು ಯೋಜನಾನುಸಾರ ಸ್ಥಾನಾಂತರಿಸಿ ಪುನರ್ನಿವೇಶನಗೊಳಿಸಬೇಕು; ಅಲ್ಲದೇ ಅವರಿಗೆ ಆಗುವ ಸಂಪತ್ತುನಷ್ಟಕ್ಕೆ ಯುಕ್ತ ಪರಿಹಾರ ನೀಡಬೇಕು. ಕಪಿಲಾ ಜಲಾಶಯದಿಂದ ಮುಳುಗಡೆಯಾಗುವ ಪ್ರದೇಶಗಳ ವಿವರ ಹೀಗಿದೆ-

ಕರ್ನಾಟಕ ರಾಜ್ಯದಲ್ಲಿ ವ್ಯವಸಾಯಯೋಗ್ಯ ಭೂಮಿ . . . 5,650 ಎಕರೆಗಳು

	ಅರಣ್ಯ ಪ್ರದೇಶ 	. . .	6,530 ಎಕರೆಗಳು

ಕೇರಳ ರಾಜ್ಯದಲ್ಲಿ ವ್ಯವಸಾಯಯೋಗ್ಯ ಭೂಮಿ . . . 254 ಎಕರೆಗಳು

ಕರ್ನಾಟಕ ರಾಜ್ಯದಲ್ಲಿ 20 ಹಳ್ಳಿಗಳನ್ನು ಸ್ಥಾನಾಂತರಿಸಿ ಪುನರ್ನಿವೇಶನ ಮಾಡಬೇಕಾಯ್ತು. ಈ ಕಡೆ ನಡೆಯಬೇಕಾದ ಕೆಲಸ ಭರದಿಂದ ಮುಂದುವರಿಯಿತು. ಜಲಾಶಯ ಪುರ್ತಿ ಆಗುವ ಮೊದಲೇ ಇದು ಮುಗಿದಿರುವುದು. ಇಂಥ ಪುನರ್ನಿವೇಶನ ಗಳಿಂದ ಒದಗುವ ಒಂದು ಅನುಕೂಲತೆ ಎಂದರೆ ಹೊಸ ವಸತಿಯಲ್ಲಿ ಜನ ಹೊಸ ಮಾದರಿಯ ಆಧುನಿಕ ಜೀವನದಲ್ಲಿ ತೊಡಗಬಹುದು.

7. ಯೋಜನೆಯ ಕಾರ್ಯ : ಕಟ್ಟೆ ರಚಿಸಬೇಕೆಂದು ಉದ್ದೇಶಿಸಿದ ಸ್ಥಳದಲ್ಲಿ ತಳಪಾಯದ ರಚನೆ ಆರಂಭಿಸಿದಾಗ ಒಂದು ಹೊಸ ಸಂಗತಿ ಗೊತ್ತಾಯ್ತು-ಕೆಲವು ಕಡೆ 100 ಅಡಿಗಳ ವರೆಗೆ ಗುಂಡಿ ತೋಡಿದಾಗ ಮಾತ್ರ ಕಲ್ಲಿನ ಭದ್ರ ನೆಲ ದೊರೆಯಿತು. ಪುರ್ವಭಾವೀ ಯೋಜನೆಯಲ್ಲಿ ಇಲ್ಲದ ಈ ಅಂಶದಿಂದ ಕಟ್ಟೆಯ ರಚನೆ ಮತ್ತು ಖರ್ಚುಗಳಲ್ಲಿ ಸಹಜವಾಗಿ ವ್ಯತ್ಯಾಸ ಉಂಟಾಯಿತು. ಕಟ್ಟೆಯಲ್ಲಿ ಐದು ಪ್ರಧಾನ ವಿಭಾಗಗಳಿವೆ-ತಳಪಾಯ, ಸ್ಥಿರವಾದ ತಡೆಕಟ್ಟೆ, ದಿಡ್ಡಿಬಾಗಿಲುಗಳು, ತೂಬುಗಳು, ಕಟ್ಟೆಮೇಲಿನ ರಸ್ತೆ, ಗಾರೆಕಟ್ಟಡದ ಕಟ್ಟೆಯ ಅಡಿಪಾಯದ ರಚನೆ (ಉದ್ದ 835 ಅಡಿಗಳು) 1971ರಲ್ಲಿ ಪುರ್ಣವಾದುವು. ಕಟ್ಟೆಯ ಉಳಿದ ಭಾಗ, ತೂಬಿನ ರಚನೆ, ತಡೆಬಾಗಿಲಿನ ಅಳವಡಿಕೆ, ನಾಲೆಗಳ ನಿರ್ಮಾಣ ಇವೆಲ್ಲವೂ ತ್ವರಿತಗತಿಯಿಂದ ಸಾಗಿದವು. ಸರ್ಕಾರದ ಹಲವಾರು ಇಲಾಖೆಗಳು ಸಹಕರಿಸಿ ಏಕೋದ್ದೇಶ ಪ್ರೇರಿತವಾಗಿ ನಡೆಸಬೇಕಾದ ಈ ಮಹಾಕಾರ್ಯದ ಮುನ್ನಡೆ ಉತ್ಸಾಹದಾಯಕವಾಗಿತ್ತು. ಸು. 1974ರಲ್ಲೇ ಈ ಯೋಜನೆ ಪುರ್ಣಗೊಳ್ಳ ಬೇಕೆಂಬುದು ಸರಕಾರದ ಆಶಯವಾಗಿತ್ತು. ಕಪಿಲಾ ಜಲಾಶಯ ಹಾಗೂ ಕಪಿಲಾ ನಾಲೆಗಳ ವ್ಯವಸ್ಥೆ ಪುರ್ಣವಾದಾಗ ಈ ಯೋಜನೆಯ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ವಿಶೇಷವಾದ ವ್ಯಾವಸಾಯಿಕ ಮತ್ತು ಆರ್ಥಿಕ ಚಟುವಟಿಕೆಗಳು ತಾವಾಗಿಯೇ ತಲೆದೋರುತ್ತವೆ. ಬತ್ತದ ಬೆಳೆಗೆ ಅಧಿಕ ವೇಗ ದೊರೆತರೆ ಹಿಪ್ಪುನೇರಳೆಯ ಅಧಿಕ ವ್ಯವಸಾಯದಿಂದ ರೇಷ್ಮೆ ಉದ್ಯಮಕ್ಕೆ ಹೆಚ್ಚಿನ ಚಾಲನೆ ಲಭಿಸಿತು. ಹೆಚ್ಚು ಜನರಿಗೆ ಅಧಿಕ ಉದ್ಯೋಗಾವಕಾಶ ದೊರೆತು ದೇಶದ ಸರ್ವಾಂಗೀಣ ಆರ್ಥಿಕಾಭ್ಯುದಯಕ್ಕೆ ಕಪಿಲಾ ಯೋಜನೆ ಒಂದು ವಿಶಿಷ್ಟ ಕೊಡುಗೆ. (ಎಚ್.ಸಿ.ಕೆ.)

ಉಲ್ಲೇಖಗಳು ಬದಲಾಯಿಸಿ

  1. http://www.prajavani.net/news/article/2013/05/14/169003.html[ಶಾಶ್ವತವಾಗಿ ಮಡಿದ ಕೊಂಡಿ]