ಕನ್ನಡ ಪುಸ್ತಕ ಪ್ರಕಾಶನ

ಇತ್ತೀಚಿಗಿನ ದಿನಗಳಲ್ಲಿ ಕನ್ನಡ ಪ್ರಕಾಶೋದ್ಯಮ ಹಿಂದೆಂದೂ ಕಂಡಿರದಂತಹ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕಾಗದ ಹಾಗೂ ಮುದ್ರಣ ವೆಚ್ಚ ದುಬಾರಿಯಾಗಿ ಕನ್ನಡ ಪ್ರಕಾಶೋದ್ಯಮವನ್ನು ತತ್ತರಿಸುವಂತೆ ಮಾಡಿದೆ. ಇದರಿಂದಾಗಿ ಪುಸ್ತಕಗಳ್ ಬೆಲೆಯೂ ಏರುತ್ತಿದೆ. ಹೆಚ್ಚುತ್ತಿರುವ ಪುಸ್ತಕ ಬೆಲೆಯಿಂದಾಗಿ ಕೊಳ್ಳುವವರ್ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಕನ್ನಡ ಪುಸ್ತಕಗಳನ್ನು ಕೊಳ್ಳುವವರಿಲ್ಲ; ಕನ್ನಡದ ಪುಸ್ತಕೋದ್ಯಮ ಅಪಾಯದ ಅಂಚಿನಲ್ಲಿದೆ ಇತ್ಯಾದಿ ಮಾತುಗಳು ಸಾಹಿತ್ಯಿಕ ವಲಯಗಳಲ್ಲಿ, ಸಭೆ, ಸಮಾರಂಭಗಳಲ್ಲಿ ಕೇಳಿ ಬರುತ್ತಿದೆ. ಸಮಸ್ಯೆಯನ್ನು ವಾಸ್ತವ ನೆಲೆಗಟ್ಟಿನಲ್ಲಿ ಪರಿಶೀಲಿಸಿ ದೃಢ ಹೆಜ್ಜೆಗಳನ್ನಿಡಬೇಕಿದೆ. ಒಂದು ಗಮನಾರ್ಹ ಅಂಶವೆಂದರೆ ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಕನ್ನಡ ಪುಸ್ತಕಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಏರುತ್ತಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಕೃತಿಸ್ವಾಮ್ಯ ವಿಭಾಗ ಪ್ರಕಟಿಸುವ ವಾರ್ಷಿಕ ಗ್ರಂಥಸೂಚಿ ಹಾಗೂ ಕನ್ನಡ ಪುಸ್ತಕಗಳ ಸಗಟು ಖರೀದಿಗಾಗಿ ಪುಸ್ತಕ ಪ್ರಾಧಿಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ ಬರುವ ಅರ್ಜಿಗಳ ಆಧಾರದ ಮೇಲೆ ಹೇಳುವುದಾದರೆ ಮರು ಮುದ್ರಣಗಳೂ ಸೇರಿದಂತೆ ಕನ್ನಡದಲ್ಲಿ ಪ್ರತಿ ವರ್ಷ ಸುಮಾರು ೩೦೦೦ ಪುಸ್ತಕಗಳು ಪ್ರಕಟವಾಗುತ್ತಿವೆ. ನಮ್ಮಲ್ಲಿನ ಕನ್ನಡ ಸಾಕ್ಷರರ ಸಂಖ್ಯೆ, ನಮ್ಮ ರಾಜ್ಯದ ತಲಾವಾರು ವಾರ್ಷಿಕ ಆದಾಯ, ಗ್ರಂಥಾಲಯಗಳ ಜಾಲ್; ಇವುಗಳನ್ನು ಗಮನಿಸಿದರೆ ಸಾಕಷ್ಟು ದೊಡ್ಡ ಸಂಖ್ಯೆಯೆಂದೇ ಹೇಳಬೇಕು. ಸೀಮಿತ ಮಾರುಕಟ್ಟೆಯನ್ನು ಹೊಂದಿರುವ ಕನ್ನಡ ಪುಸ್ತಕೋದ್ಯಮ ಇಷ್ಟು ಸಂಖ್ಯೆಯಲ್ಲಿ ಪುಸ್ತಕಗಳನ್ನು ಹೊರತರುತ್ತಿರುವುದನ್ನು ಗಮನಿಸಿದರೆ ಆಶ್ಚರ್ಯವಾಗದಿರದು.

ಖಾಸಗಿ ಪ್ರಕಾಶಕರು ಹಾಗೂ ಆಕಾಡೆಮಿ, ವಿಶ್ವವಿದ್ಯಾಲಯಗಳಂತಹ ಸಾಂಸ್ಥಿಕ ಪ್ರಕಾಶಕರು ಪ್ರಕಾಶನ ಕ್ಷೇತ್ರದಿಂದ ಕ್ರಮೇಣ ಹಿಂದೆ ಸರಿಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ನಮ್ಮ ಲೇಖಕರು ತಮ್ಮ ಉತ್ಸಾಹ ಹಾಗೂ ಕ್ರಿಯಾಶೀಲತಗಳನ್ನಷ್ಟೇ ಬಂಡವಳನ್ನಾಗಿಸಿಕೊಂಡು ಪ್ರಕಾಶನ ಕ್ಷೇತ್ರಕ್ಕೆ ಅಡಿಯಿಡುತ್ತಾರೆ. ಪುಅಸ್ತಕ ಪ್ರಕಋನೆ ಯಾವ ಬಗೆಯಲ್ಲಿ, ಯಾವ ವಿನ್ಯಾಸದಲ್ಲಿ ಆಗಬೇಕೆಂದು ಗೊತ್ತಾಗದೆ ಸೋಲನ್ನನುಭವಿಸುತ್ತಾರೆ. ಭಾರತದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯ ಲೇಖಕರು ಪ್ರಕಾಶಕರಾಗಿರುವುದನ್ನು ಕರ್ನಾಟಕದಲ್ಲಿ ಮಾತ್ರ ಕಾಣಲು ಸಾಧ್ಯ. ಇದು ಕನ್ನಡದ ವೈಶಿಷ್ಟ್ಯಗಳಲ್ಲಿ ಒಂದು. ಅಂತೆಯೇ ಅದು ನಮ್ಮ ಮಿತಿಯನ್ನೂ ಸೂಚಿಸುತ್ತದೆ. ಪ್ರಕಾಶನ ಕ್ಷೇತ್ರ ಹೀಗೆ ವಿಕೇಂದ್ರೀಕೃತವಾಗುತ್ತಿರುವುದು ಆರೋಗ್ಯಕರ ಲಕ್ಷಣವಾದರೂ ಅದರ ಬೆನ್ನಲ್ಲೇ ಸಮಸ್ಯೆಗಳೂ ಹುಟ್ಟಿಕೊಳ್ಳುತ್ತಿವೆ. ಪ್ರಕಾಶನ ಕ್ಷೇತ್ರಕ್ಕೆ ಬೇಕಾದ ವ್ಯಾವಹಾರಿಕ ಜ್ಞಾನ, ಪ್ರಕಾಶನಕ್ಕೆ ಸಂಬಂಧಿಸಿದ ನೀತಿ, ನಿಯಮ, ಮಾರುಕಟ್ಟೆಯ ಜಾಲದ ಅರಿವು, ಕಾಗದ, ಮುದ್ರಣ ಪಡಿಯಚ್ಚು ರಕ್ಶಾಪುಟ ವಿನ್ಯಾಸ ಇತ್ಯಾದಿಗಳ ಬಗ್ಗೆ ಸೂಕ್ತ ತ್ಳಿವಳಿಕೆ, ಪುಸ್ತಕ ಪ್ರಚಾರ ಹಾಗೂ ವಿತರಣೆಗೆ ಅನುಸರಿಸಬೇಕಾದ ವಿಧಿ-ವಿಧಾನಗಳು ಮುಂತಾದ ಅಂಶಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು, ಹೊಂದಿರದ ಲೇಖಕರು ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ದಿಢೀರನೆ ತಮಗರಿವಿಲ್ಲದ ವ್ಯವಹಾರ ಕ್ಷೇತ್ರವೊಂದಕ್ಕೆ ಅಡಿಯಿಡುರುತ್ತಿರುವುದು ಸಮಸ್ಯೆಯನ್ನು ಇನ್ನೂ ಬಿಗಡಾಯಿಸುವಂತೆ ಮಾಡಿದೆ. ಪ್ರಕಟಿಸಿದ ಪುಸ್ತಕಗಳನ್ನು ಮಾರಲು, ಪ್ರಚುರಪಡಿಸಲು ಇರುವ ಅವಕಾಶ ಹಾಗೂ ಸಾಧ್ಯತೆಗಳ ಅರಿವಿನ ಮಿತಿ ಉತ್ಸಾಹಕ್ಕೆ ತಣ್ಣೀರೆರಚಿದಂತಾಗುತ್ತದೆ. ಪ್ರಕಟವಾದ ಪುಸ್ತಕಗಳನ್ನು ಓದುಗರಿಗೆ ತಲುಪಿಸಲಾಗದೆ ತೊಳಲಾಡುವಂತಾಗುತ್ತದೆ. ಸಣ್ಣ ಸಣ್ಣ ಪ್ರಕಾಶಕರದೂ ಇದೇ ಸಮಸ್ಯೆ. ಆದ್ದರಿಂದ ಪ್ರಕಾಶನಕ್ಕೆ ತೊಡಗುವ ಮೊದಲು ಲೇಖಕ ಅಥವಾ ಪ್ರಕಾಶಕ ತಿಳಿದಿರಲೇಬೇಕಾದ ಕೆಲವು ನಿಯಮಗಳನ್ನೂ ಪುಸ್ತಕ ಬಿಡುಗಡೆಯಾದ ನಂತರ ಕೈಕೊಳ್ಳಬೇಕಾದ ಕ್ರಮಗಳನ್ನೂ ತಿಳಿಯುವುದು ಅಗತ್ಯ. ಪುಸ್ತಕ ಪ್ರಕಾಶನಕ್ಕೆ ಸಂಬಂಧಿಸಿದಂತೆ ಹಲವು ನಿಯಮಗಳು ಜಾರಿಯಲ್ಲಿವೆ. ಇವುಗಳಲ್ಲಿ ಪುಸ್ತಕ ಮತ್ತು ಪತ್ರಿಕೆಗಳನ್ನು ಸಾರ್ವಜನಿಕ ಗ್ರಂಥಾಲಯಗಳಿಗೆ ಒಪ್ಪಿಸುವ ಅಧಿನಿಯಮ ಮುಖ್ಯವಾದುದು. ಕೇಂದ್ರ ಸರ್ಕಾರದ ಈ ಅಧಿನಿಯಮದ ಮೇರೆಗೆ ಕಾಶ್ಮೀರ ರಾಜ್ಯವನ್ನು ಹೊರತುಪಡಿಸಿ ಭಾರತದಲ್ಲಿ ಪ್ರಕಟವಾಗಿರುವ ಯಾವ ಪುಸ್ತಕವಾದರೂ, ಅದರ ಪ್ರಕಾಶಕರು ಪುಸ್ತಕ ಪ್ರಕಟವಾದ ೩೦ ದಿನಗಳೊಳಗಾಗಿ ಅದರ ಒಂದೊಂದು ಪ್ರತಿಯನ್ನು ಉಚಿತವಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಕಲ್ಕತ್ತೆಯ ನ್ಯಾಶನಲ್ ಲೈಬ್ರರಿ, ಮುಂಬೈನ ಸೆಂಟ್ರಲ್ ಲೈಬ್ರರಿ, ಮದರಾಸಿನ ಕನ್ನೆಮರ ಲೈಬ್ರರಿ ಹಾಗೂ ದೆಹಲಿಯ ಪಬ್ಲಿಕ್ ಲೈಬ್ರರಿಗಳಿಗೆ ಬೊಂದಾಯಿತ ಅಂಚೆಯ ಮೂಲಕ ಕಳುಹಿಸಬೇಕು. ಉತ್ತಮ ಪ್ರತಿ ಹಾಗೂ ಸಾಧಾರಣ ಪ್ರತಿಗಳೆರಡನ್ನೂ ಹೊರತಂದಿದ್ದರೆ ಕಲ್ಕತ್ತೆಯ ನ್ಯಾಶನಲ್ ಲೈಬ್ರರಿಗೆ ಕಳುಹಿಸುವ ಪ್ರತಿ ಉತ್ತಮ ಪ್ರತಿಯಾಗಿರಬೇಕು ಉಳಿದ ಮೂರು ಗ್ರಂಥಾಲಯಗಳಿಗೆ ಕಳುಹಿಸುವ ಪ್ರತಿ ಸಾಧಾರಣ ಪ್ರತಿಯಾಗಿದ್ದರೂ ಪರವಾಗಿಲ್ಲ. ಮರುಮುದ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನೊಂದಾವಣಿ ಆಗಿದ್ದರೆ ಅವುಗಳನ್ನು ಮತ್ತೆ ಈ ಗ್ರಂಥಾಲಯಗಳಿಗೆ ಕಳುಹಿಸುವ ಅಗತ್ಯವಿಲ್ಲ. ಕಳುಹಿಸುವಾಗ ಕೃತಿಸ್ವಾಮ್ಯ ಪುಟದ ಹಿಂದೆ ಪುಸ್ತಕವನ್ನು ಮುದ್ರಣಾಲಯದಿಂದ ಹೊರತಂದ ದಿನಾಂಕವನ್ನು ಮೊಹರೊತ್ತಿ ಸೂಚಿಸಬೇಕು. ಈ ಅಧಿನಿಯಮವನ್ನು ಪಾಲಿಸದಿದ್ದರೆ ಪ್ರಕಾಶಕರು ಪುಸ್ತಕದ ಮುಖಬೆಲೆಯ ಮತ್ತು ಐವತ್ತು ರೂಪಾಯಿ ದಂಡವನ್ನು ತೆರಲೇಬೇಕಾಗುತ್ತದೆ. ಈ ಗ್ರಂಥಾಲಯಗಳು ತಾವು ಹೊರ ತರುವ ಗ್ರಂಥಸೂಚಿಗಳಲ್ಲಿ ಈ ಪುಸ್ತಕಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪ್ರಕಟಿಸುತ್ತವೆ.

ಮುದ್ರಣಾಲಯ ಮತ್ತು ಪುಸ್ತಕ ನೋಂದಣಿ ಅಧಿನಿಯಮದ ಮೇರೆಗೆ ಭಾರತದಲ್ಲಿ ಪ್ರಕಟವಾಗುತ್ತಿರುವ ಪುಸ್ತಕಗಳಲ್ಲಿ ಮುದ್ರಕನ ಹಾಗೂ ಪ್ರಕಾಶಕನ ಹೆಸರು ಮತ್ತು ವಿಳಾಸಗಳನ್ನು ಸ್ಪಷ್ಟ್ರವಾಗಿ ನಮೂದಿಸಬೇಕು. ಇದನ್ನು ಪಾಲಿಸದಿದ್ದರೆ ನ್ಯಾಯಲಯ ೨೦೦೦ ರೂಪಾಯಿಗಳವರೆಗೆ ದಂಡ ಅಥವಾ ೬ ತಿಂಗಳ ಶಿಕ್ಶ್ಕೆ ಅಥವಾ ಎರಡನ್ನೂ ವಿಧಿಸುತ್ತದೆ. ಪುಸ್ತಕದ ಶೀರ್ಷಿಕೆ, ಭಾಷೆ, ಲೇಖಕನ ಅಥವಾ ಅನುವಾದಕನ ಹೆಸರು, ಮುಖಬೆಲೆ, ಪ್ರಕಟನೆಯ ವರ್ಷ, ಪ್ರತಿಗಳ ಸಂಖ್ಯೆ, ಮರುಮುದ್ರಣಗಳ ವಿವರ, ಇವುಗಳನ್ನು ಇಂಗ್ಲಿಷ್ ನಲ್ಲಿ ಅಥವಾ ಹಿಂದಿಯಲ್ಲಿ ಮುದ್ರಿಸಿರಬೇಕು. ಪುಸ್ತಕದ ಗಾತ್ರ, ಉಪಯೋಗಿಸಿದ ಕಾಗದ, ಲೇಖಕನು ಹುಟ್ಟಿದ ವರ್ಷ,, ಅವನು ಮೃತಪಟ್ಟರೆ ಮೃತನಾದ ವರ್ಷ ಇವುಗಳನ್ನು ಕೃತಿಸ್ವಾಮ ಪುಟದಲ್ಲಿ ಮುದ್ರಿಸಿದರೆ ಗ್ರಂಥಸೂಚಿಗಳನ್ನು ಸಿದ್ಧಪಡಿಸಲು ಅನುಕೂಲವಾಗುತ್ತದೆ. ಕೃತಿಸ್ವಾಮ್ಯವನ್ನು ಹೊಂದಿರುವವರ ಹೆಸರು ಮತ್ತು ವಿಳಾಸವನ್ನು ಮುದ್ರಿಸುವುದು ಅಗತ್ಯ.

ಕೃತಿಸ್ವಾಮ್ಯ ಅಧಿನಿಯಮ೧೯೫೭ : ಪುಸ್ತಕ ಪ್ರಕಾಶನಕ್ಕೆ ಸಂಬಂಧಿಸಿದಂತೆ ಇದು ಕೇಂದ್ರದ ಮತ್ತೊಂದು ಮುಖ್ಯ ಅಧಿನಿಯಮ. ಇದು ಸಾಹಿತ್ಯ, ನಾಟಕ, ಸಂಗೀತ ಮತ್ತು ಕಲಾಕೃತಿಗಳನ್ನು ಲಿಖಿತ ಅನುಮತಿಯಿಲ್ಲದೆ ನಕಲು ಮಾಡುವುದು, ರೂಪಾಂತರಿಸುವುದು, ಮರುಪ್ರಕಟಿಸುವುದು ಮುಂತಾದವುಗಳ ವಿರುದ್ಧ ಅವುಗಳ್ಖ ಲೇಖಕರಿಗೆ ಕಾನೂನಿನ ನೆಲೆಯಲ್ಲಿ ಒದಗಿಸಿರುವ ರಕ್ಷಣೆ ಮತ್ತು ಹಕ್ಕನ್ನು ಕುರಿತದ್ದು. ಲೇಖಕನು ಬದುಕಿರುವವರೆಗೆ ಮತ್ತು ಅವನು ಮೃತಪಟ್ಟು ೬೦ ವರ್ಷಗಳ ಕಾಲ ಅವನ ಕೃತಿಸ್ವಾಮ್ಯ ಅಸ್ತಿತ್ವದಲ್ಲಿರುತ್ತದೆ. ಲೇಖಕರಿಗೆ ತಮ್ಮ ಕೃತಿಸ್ವಾಮ್ಯವನ್ನು ಒಟ್ಟಾಗಿ ಅಥವಾ ನಿರ್ದಿಷ್ಟ ಮುದ್ರಣಗಳಿಗೆ ಸಂಬಂಧಿಸಿದಂತೆ ಇತರರಿಗೆ ಮಾರುವ ಹಕ್ಕನ್ನು ಈ ಅಧಿನಿಯಮದ ಮೇರೆಗೆ ನೀಡಲಾಗಿದೆ. ಕೃತಿ ಸ್ವಾಮ್ಯವನ್ನು ನೋಂದಣಾಧಿಕಾರಿಗಳಿಂದ ಹೊಂದಿರುವವರು ದೆಹಲಿಯಲ್ಲಿರುವ ಕೃತಿಸ್ವಾಮ್ಯ ನೋಂದಣಾಧಿಕಾರಿಗಳಿಂದ ಅರ್ಜಿ ನಮೂನೆಯನ್ನು ಪಡೆದು ನಿಗದಿಪಡಿಸಿರುವ ಶುಲ್ಕವನ್ನು ಪಾವತಿ ಮಾಡಿ ತಮ್ಮ ಪುಸ್ತಕದ ಪ್ರತಿಯನ್ನು ನೋದಾಯಿಸುವ ಅವಕಾಶವನ್ನು ಈ ಅಧಿನಿಯಮ ಕಲ್ಪಿಸಿದೆ. ಆದ್ರೆ ಕೃತಿ ಸ್ವಾಮ್ಯದಬಗೆ ವಿವಾದಗಳಿದ್ದರೆ ಈ ದಾಖಲೆ ಮೇಲ್ನೋಟದ ಪುರಾವೆಯನ್ನು ಒದಗಿಸುತ್ತದೆ. ೧೯೬೮ರ ಕರ್ನಾಟಕ ಮುದ್ರಣಾಲಯ ಹಾಗೂ ಪುಸ್ತಕ ನೋಂದಣಿ ಅಧಿನಿಯಮದ ಅನ್ವಯ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ ಪುಸ್ತಕ ಪ್ರಕಟವಾದ ೩೦ ದಿನಗಳೊಳ್ಗಾಗಿ ಅದರ ಮೂರು ಪ್ರತಿಗಳನ್ನು ಕಳುಹಿಸಿ ಸ್ವೀಕೃತಿಯನ್ನು ಪಡೆಯಬೇಕು. ಕೇಂದ್ರ ಗ್ರಂಥಾಲಯವು ಇದರಲ್ಲಿ ಒಂದು ಪ್ರತಿಯನ್ನು ದಾಖಲೆಗಾಗಿ, ಇನ್ನೊಂದನ್ನು ಪರಾಮರ್ಶನೆಗಾಗಿ ಇಡುತ್ತದೆ. ಮೂರನೆಯ ಪ್ರತಿಯನ್ನು ದೆಹಲಿಯ ಲೋಕಸಭಾ ಗ್ರಂಥಾಲಯಕ್ಕೆ ಕಳಿಸುತ್ತದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಪುಸ್ತಕಗಳ ಮಾರಾಟ ಖರೀದಿಗೆ ಅರ್ಜಿಯನ್ನು ಸಲ್ಲಿಸುವ ಸಲುವಾಗಿ ಲೇಖಕ ಅಥವಾ ಪ್ರಕಾಶಕ ಈ ಸ್ವೀಕೃತಿಯ ಜೆರಾಕ್ಸ್ ಪ್ರತಿಯನ್ನು ಲಗತ್ತಿಸುವುದು ಕಡ್ಡಾಯವಾಗಿರುವುದರಿಂದ ಈ ನಿಯಮವನ್ನು ಪಾಲಿಸುವುದು ಒಳ್ಳೆಯದು. ಪ್ರಕಾಶಕರು ತಮ್ಮ ಪ್ರಕಟನೆಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಜೊತೆಗೆ ಉತ್ಪಾದನಾ ವೆಚ್ಚವನ್ನೂ ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸಬೇಕು. ಇದು ಪ್ರಕಾಶನೋದ್ಯಮದ ಇಂದಿನ ತುರ್ತು ಅಗತ್ಯ. ಕಾಗದದ ಆಕಾರಗಳು, ಬೈಂಡಿಂಗ್ ವಿಧಗಳು, ಪಡಿಯಚ್ಚು ತಯಾರಿಕೆ, ಪದರೀಕರ್ಸಣ, ಮುದ್ರಣ ಇತ್ಯಾದಿಗಳ ಬಗ್ಗೆ ಪ್ರಾಥಮಿಕ ತಿಳಿವಳಿಕೆಯನ್ನು ಹೊಂದಿರುವ ಪ್ರಕಾಶಕರು ಉತ್ಪಾದನಾ ವೆಚ್ಚದಲ್ಲಿ ಹತೋಟಿಯನ್ನು ಸಾಧಿಸುತ್ತಾರೆ. ಪುಸ್ತಕಕ್ಕೆ ಬೇಕಾದ ಕಾಗದ, ರಕ್ಷಾಪುಟದ ವಿನ್ಯಾಸ ಹಾಗೂ ಚಿತ್ರಗಳಿಗಾಗಿ ಸೂಕ್ತ ಕಲಾವಿದನ ಆಯ್ಕೆ, ಹಾಗೂ ಅವರೊಂದಿಗೆ ಚರ್ಚೆ, ಪಡಿಯಚ್ಚುಗಳ ತಯಾರಿಕೆ, ರಕ್ಷಾಪುಟದ ಮುದ್ರಣ, ಹಾಗೂ ಅದರ ಪದರೀಕರಣ, ಮುಂತಾದ ಕೆಲಸಗಳನ್ನು ಆಸಕ್ತಿವಹಿಸಿ ತಾವೇ ಸ್ವತಃ ಓಡಾಡಿ ನಿರ್ವಹಿಸುವ ಪ್ರಕಾಶಕರು ವೆಚ್ಚದಲ್ಲಿ ನಿಯಂತ್ರಣ ಸಾಧಿಸುತ್ತಾರೆ. ನಿರ್ದಿಷ್ಟ ಆಕಾರದ ಪುಸ್ತಕಕ್ಕೆ ಬೇಕಾದ ಕಾಗದ, ರಕ್ಷಾ-ಪುಟಕ್ಕೆ ಬೇಕಾದ ಬೋರ್ಡು, ಇವುಗಳನ್ನು ಲೆಕ್ಕ ಹಾಕಿ ತರುವುದರಿಂದ ಅನಗತ್ಯ ವೆಚ್ಚಗಳಿಗೆ ಆಸ್ಪದ ಇಲ್ಲದಂತಾಗುತ್ತದೆ. ಉತ್ಸಾಹ ಹಾಗೂ ಸೃಜನಶೀಲತೆ ಜೊತೆಗೆ ವ್ಯ್ವಹಾರಜ್ಞಾನವೂ ಸೇರಿದರೆ ಸೊರಗುತ್ತಿರುವ ಪ್ರಕಾಶನೋದ್ಯಮ ಚೇತರಿಸಿಕೊಳ್ಳುತ್ತದೆ. ಓದುಗರ, ಮಾರಾಟಗಾರರ ಗಮನ ಸೆಳೆಯುವಲ್ಲಿ ಮುದ್ರಣ ಹಾಗೂ ರಕ್ಷಾಪುಟಗಳು ಮುಖ್ಯ ಪಾತ್ರವಹಿಸುತ್ತವೆ ಎಂಬುದು ನಿರ್ವಾವಾದವಾದರೂ ಪುಸ್ತಕದ ಮಾರಾಟದ ಸಾಧ್ಯತೆಗಳನ್ನು ಗಮನಿಸಿ ಅದಕ್ಕೆ ಉಪಯೋಗಿಸಬೇಕಾದ ಕಾಗದ, ಮುದ್ರಣ ರೀತಿ ಇತ್ಯಾದಿಗಳನ್ನು ನಿರ್ಧರಿಸುವುದು ಸೂಕ್ತ. ಮಾರಾಟದ ಸಾಧ್ಯತೆಗಳು ತೀರಾ ಕಡಿಮೆಯಿರುವ ಪುಸ್ತಕಗಳಿಗೆ ಅಗತ್ಯಕ್ಕಿಂತ ಹೆಚ್ಚು ಹಣ ಹೂಡಿ, ಅದು ಮರಳಿ ಬರದಿದ್ದಾಗ `ಕನ್ನಡಿಗರು ಅಭಿಮಾನ್ಯಶೂನ್ಯರು' ಎಂಬ ಸಿನಿಕತನದ ಮಾತುಗಳನ್ನು ಪುನರುಚ್ಚರಿಸಿದರೆ ಸಮಸ್ಯೆ ಪರಿಹಾರವಾಗದು. ಪುಸ್ತಕದ ಬೆಲೆಯನ್ನು ನಿಗದಿ ಮಾಡುವಾಗ ಉತ್ಪಾದನಾ ವೆಚ್ಚ, ಲೇಖಕನ ಸಂಭಾವನೆ, ಮಾರಾಟಗಾರರಿಗೆ ನೀಡಬೇಕಾದ ಸೋಡಿ, ಹಾಗೂ ಇತರ ಎಲ್ಲ ಖರ್ಚುಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪುಸ್ತಕದ ಮುಖಬೆಲೆ ಸಾಮಾನ್ಯವಾಗಿ ಉತ್ಪಾದನಾ ವೆಚ್ಚದ ಮೂರರಷ್ಟು ನಿಗದಿಪಡಿಸುವುದು ರೀಢಿ. ಪುಸ್ತಕ ಪ್ರಕಟವಾದ ಕೂಡಲೆ ಅದನ್ನು ನಾಡಿನ ವಿವಿಧ ಪತ್ರಿಕೆಗಳಿಗೆ, ವಿಮರ್ಶೆಗಾಗಿ ಕಳುಹಿಸಬೇಕು. ಆಕಾಶವಾಣಿಯಂತಹ ಪ್ರಸಾರ ಮಾಧ್ಯಮಗಳಿಗೆ ಸಾದರ ಸ್ವೀಕಾರ ಹಾಗೂ ವಿಮರ್ಶೆಗಾಗಿ ಕಳುಹಿಸಿ, ಈ ಎಲ್ಲ ಮಾಧ್ಯಮಗಳನ್ನು ಪುಸ್ತಕದ ಪ್ರಚಾರಕ್ಕಾಗಿ ಬಳಸಿಕೊಂಡು, ಸಾಹಿತ್ಯಾಸಕ್ತರ ಗಮನವನ್ನು ಸೆಳೆಯಬೇಕು. ನಾಡಿನ ಖ್ಯಾತ ಅಂಕಣಕಾರರು, ವಿಷಯ ತಜ್ನರು, ವಾರ್ಷಿಕ ಸಮೀಕ್ಷಕರು ಹಾಗೂ ವಿಮರ್ಷಕರಿಗೆ ಗೌರವ ಪ್ರತಿಗಳನ್ನು ಕಳುಹಿಸಬಹುದು. ಪುಸ್ತಕ ಮಾರಾಟಗಾರರಿಗೆ ಪುಸ್ತಕದ ವಿಷಯ, ಅದರ ಭೌತಿಕ ಲಕ್ಷಣಗಳನ್ನು ಹಾಗೂ ಮಾರಾಟದ ನಿಯಮಗಳನ್ನು ಪತ್ರಮುಖೇನ ವಿವರಿಸಿ ಬೇಡಿಕೆ ಆದೇಶ ಕ್ಜಳುಹಿಸಲು ಕೋರಬಹುದು. ಏಜೆನ್ಸಿ ಪ್ರಕಟಣೆ ಎಂದೂ ಪರಿಗಣಿಸಬಹುದು. ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಎಲ್ಲ ೨೦ ಜಿಲ್ಲಾ ಹಾಗೂ೧೫ ನಗರ ಕೇಂದ್ರ ಗ್ರಂಥಾಲಯಗಳು ಕನ್ನಡ ಪುಸ್ತಕಗ್ಳನ್ನು ನೇರವಾಗಿ ಕೊಳ್ಳುತ್ತವೆ. ಈ ೩೫ ಗ್ರಂಥಾಲಯಗಳನ್ನು ವರ್ಷದ ಯಾವುದೇ ಕಾಲದಲ್ಲಿ ಅರ್ಜಿ ಮೂಲಕ ಸಂಪರ್ಕಿಸಬಹುದು. ಕರ್ನಾಟಕ ಸರಕಾರದ ಸಾರ್ವಜನಿಕ ಗ್ರಂಥಾಲಯಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆಗಳು ಕನ್ನಡ ಪುಸ್ತಕಗಳನ್ನು ಸಗಟಾಗಿ ಖರೀದಿಸುತ್ತವೆ. ಕೇಂದ್ರ ಶಿಕ್ಷಣ ಇಲಾಖೆ ಸೃಜನ್ತರ ಪ್ರಕಾರಗಳ ಕನ್ನಡ ಪುಸ್ತಕಗಳನ್ನು ಖರೀದಿಸುತ್ತವೆ. ಲಂಡನ್ ನಲ್ಲಿರುವ ಇಂಡಿಯ ಆಫೀಸ್ ಎಂಡ್ ರೆಕೊರ್ಡ್ಸ್ ಲೈಬ್ರರಿ, ಅಮೇರಿಕಾದ ಕಾಂಗ್ರ್ಸ್ ಗ್ರಂಥಾಲಯಗಳು ಕನ್ನಡ ಪುಸ್ತಕಗಳನ್ನು ಖರೀದಿಸುತ್ತವೆ. ನ್ಯಾಶನಲ್ ಬುಕ್ ಟ್ರಸ್ಟ್ ತಾನು ನಡೆಸುವ ವಿವಿಧ ಪ್ರದರ್ಶನಗಳಲ್ಲಿ ಉಚಿತವಾಗಿ ಕನ್ನಡ ಪುಸ್ತಕಗಳನ್ನು ಪ್ರದರ್ಶನ ಅವುಗಳ ಭಾಷಾಂತರದ ಹಕ್ಕುಗಳನ್ನು ಆಸಕ್ತರಿಗೆ ಮಾರಲು ನೆರವು ನೀಡುತ್ತದೆ. ಈ ರೀತಿಯ ಸೌಲಭ್ಯಗಳನ್ನು ಗರಿಷ್ಠ ಬಳಕೆಯಾಗಬೇಕು. ಸಾಹಿತ್ಯಾಸಕ್ತರು ಸೇರುವ ಸಭೆ-ಸಂಕಿರಣ- ಸಮ್ಮೇಳನಗಳಲ್ಲಿ ಪುಸ್ತಕಗಳನ್ನು ಸಂದರ್ಶಿಸಿ ಮಾರಬಹುದಲ್ಲದ್ ಸದಭಿರುಚಿಯನ್ನು ಮೂಡಿಸುವ ಪ್ರಯತ್ನ ಮಾಡಬಹುದು.