ಕನ್ನಡದ ಹೆಸರಾಂತ ದಲಿತ ಕವಿ ಡಾ.ಸಿದ್ಧಲಿಂಗಯ್ಯನವರ ಆತ್ಮಚರಿತ್ರೆ ಊರುಕೇರಿ. ಊರುಕೇರಿ ಆತ್ಮಕಥನ ಶುರುವಾಗುವುದು ಬಾಲ್ಯದಿಂದಲ್ಲ. ಅವರಿಗೆ ನೆನಪಿನಲ್ಲಿರುವ ಮುಖ್ಯವೆನಿಸಿದ ಘಟನೆಗಳನ್ನು ಬಿಡಿ ಬಿಡಿಯಾಗಿ ಹೇಳುತ್ತ ಹೋಗಿದ್ದಾರೆ. ದಲಿತ ಸಾಹಿತ್ಯದಲ್ಲಿ ಸಾಮಾನ್ಯವಾಗಿ ನೋವು ಕಾಣುತ್ತದೆ.ಆದರೆ ‘ಊರುಕೇರಿಯಲ್ಲಿ’ ತನ್ನ ನೋವಿನ, ಅವಮಾನಗಳ ವಿರುದ್ಧ ಪ್ರತಿಕಾರವನ್ನು ಎಲ್ಲಿಯೂ ವ್ಯಕ್ತ ಪಡಿಸಿಲ್ಲ. ಇಂತಹ ಎಲ್ಲಾ ಕಷ್ಟ ಕೋಟಲೆಗಳ ನಡುವೆ ಸಿದ್ದಲಿಂಗಯ್ಯ ಗೆದ್ದಿದ್ದಾರೆ. ಬಡತನ ಹೋರಾಟಗಳ ಬದುಕು ಈ ಕಥಾನಕದಲ್ಲಿ ತುಂಟತನ, ವ್ಯಂಗ್ಯದಲ್ಲಿ ನಿರೂಪಿತವಾಗಿದೆ; ಆ ಮೂಲಕ ಪ್ರತಿಭೆಯು ಬಡತನವನ್ನು ಗೆಲ್ಲುವ ಹೊಸ ಆತ್ಮವಿಶ್ವಾಸವೊಂದನ್ನು ಆವಿಷ್ಕರಿಸುವ ಅಪರೂಪದ ಬರವಣಿಗೆ ಇದು. ಸಿದ್ಧಲಿಂಗಯ್ಯ ನವರ ಕಲ್ಲು ಮುಳ್ಳಿನಿಂದ ಕೂಡಿದ ಬದುಕನ್ನು ಊರುಕೇರಿಯಲ್ಲಿ ಚಿತ್ರಿಸಿದ್ದಾರೆ. ಇದನ್ನು ಓದುತ್ತಾ ಕುಳಿತರೆ ಓದುಗನ ಜೀವನದಲ್ಲಿ ನಡೆದ ಘಟನೆಯಂತೆ ಕಾಣುತ್ತದೆ. ಅಷ್ಟರ ಮಟ್ಟಿಗೆ ಕೃತಿ ಓದುಗನಲ್ಲಿ ಪ್ರಭಾವ ಬೀರುತ್ತದೆ.

"https://kn.wikipedia.org/w/index.php?title=ಊರುಕೇರಿ&oldid=854546" ಇಂದ ಪಡೆಯಲ್ಪಟ್ಟಿದೆ