ಇವಳು ಇಥಿಯೋಪಿಯಾದ ದೊರೆ 'ಎಗ್ಗಿಪ್ಪಾಸ್‌'ನ ಮಗಳು. ಸಂತ ಮತ್ತಾಯನ ಸುಸಂದೇಶದಿಂದ ಪ್ರಭಾವಿತಳಾದ ಆಕೆ ಕ್ರೈಸ್ತಮತವನ್ನು ಅಪ್ಪುತ್ತಾಳೆ. ಅವಳೊಂದಿಗೆ ಅವಳ ತಂದೆಯೂ ಸೇರಿದಂತೆ ಇನ್ನೂ ಅನೇಕರು ಕ್ರೈಸ್ತಮತವನ್ನು ಸ್ವೀಕರಿಸುತ್ತಾರೆ. ಎಫಿಜಿನಿಯಾ ಮದುವೆಯಾಗದೇ ಕನ್ಯಾಸ್ತ್ರೀಯಾಗಿಯೇ ಉಳಿದು ಯೇಸುವಿನ ಸುಸಂದೇಶವನ್ನು ಸಾರಲು ಅಪೇಕ್ಷಿಸುತ್ತಾಳೆ. 'ಎಗ್ಗಿಪಾಸ್‌'ನ ಮರಣಾನಂತರ 'ಹಿರ್ತಾಕಸ್‌' ಎಂಬಾತ ದೊರೆಯ ಪಟ್ಟಕ್ಕೇರುತ್ತಾನೆ. ಆತ ಎಗ್ಗಿಪಾಸನ ಹೆಂಡತಿಯ ತಮ್ಮ ಎಂಬ ಅಭಿಪ್ರಾಯವಿದೆ. ಸುಂದರಿಯಾದ ತನ್ನಕ್ಕಳ ಮಗಳ ಮೇಲೆ ಅವನ ಕಣ್ಣಿರುತ್ತದೆ. ಅವಳನ್ನು ಮದುವೆಯಾಗಲು ಆತ ಆಶಿಸುತ್ತಾನೆ. ಆದರೆ ಅದಕ್ಕೆ ಎಫಿಜಿನಿಯಾಳ ಒಪ್ಪಿಗೆಯಿರುವುದಿಲ್ಲ. ಬೇರೆ ದಾರಿಕಾಣದೆ ಎಫಿಜಿನಿಯಾಳನ್ನು ಬಲಾತ್ಕರಿಸಲು ಹಿರ್ತಾಕಸ್‌ ಮುಂದಾಗುತ್ತಾನೆ. ವಿಷಯ ತಿಳಿದ ಸಂತ ಮತ್ತಾಯ, ಹಿರ್ತಾಕಸನಿಗೆ ಹಿತವಚನಗಳನ್ನು ಹೇಳುತ್ತಾನೆ. ಆದರೆ ಕಾಮಾಂಧನಾದ ಹಿರ್ತಾಕಸ್‌ ತನಗೆ ಹಿತವಾದವನ್ನು ಹೇಳಲು ಬಂದ ಪ್ರೇಷಿತ ಸಂತ ಮತಾಯನನ್ನೇ ಕೊಲ್ಲಿಸುತ್ತಾನೆ. ಸಂತ ಮತ್ತಾಯನ ಬೆಂಬಲವಿಲ್ಲದ ಎಫಿಜಿನಿಯಾಳ ಮೇಲೆ ಮತ್ತಷ್ಟು ಒತ್ತಡವನ್ನು ಹೇರಿತ್ತಾನೆ ಹಿರ್ತಾಕಸ್‌. ಅವನ ಯಾವ ಪ್ರಯತ್ನಕ್ಕೂ ಅವಳು ಬಗ್ಗದಿದ್ದಾಗ ಅವಳಿದ್ದ ಮನೆಗೆ ಬೆಂಕಿಯನ್ನು ಹಾಕಿ ಅವಳನ್ನು ಸಜೀವವಾಗಿ ಸುಡುವ ಯತ್ನ ನಡೆಸುತ್ತಾನೆ. ಅವಳು ಅದರಿಂದ ಪಾರಾಗುತ್ತಾಳೆ, ಆದರೆ ದೊರೆ ಕುಷ್ಟರೋಗಕ್ಕೆ ಬಲಿಯಾಗುತ್ತಾನೆ.