ಇಂಡೋ - ಯೂರೋಪಿಯನ್ ಅಥವಾ ಮೈಥಲಾಜಿಕಲ್ ಸಿದ್ಧಾಂತ

ಜಾನಪದ ಕಥೆಗಳ ಮೂಲವನ್ನು ಕುರಿತ ಒಂದು ಸಿದ್ಧಾಂತ. ಅನೇಕ ವಿದ್ವಾಂಸರು ಕಳೆದ ಶತಮಾನದಿಂದಲೂ ಇಂಥ ಸಾಹಿತ್ಯದ ಇತಿಹಾಸವನ್ನು ಶೋಧಿಸಲು ಪ್ರಯತ್ನಿಸಿದ್ದಾರೆ. ಜಾನಪದ ಕಥೆಗಳ ಉಗಮ ಹೇಗಾಯಿತು. ಅವು ಎಲ್ಲಿಂದ ಎಲ್ಲಿಗೆ ಸಂಚಾರವನ್ನು ಕೈಗೊಂಡಿರಬಹುದು. ಮಾನವನ ಬದುಕಿನ ಮೇಲೆ ಅವು ಹೇಗೆ ಬೆಳಕು ಚೆಲ್ಲುತ್ತವೆ - ಈ ಮುಂತಾದ ವಿಷಯಗಳ ಮೇಲೆ ಅನೇಕ ಸಿದ್ಧಾಂತಗಳು ಹುಟ್ಟಿಕೊಂಡಿವೆ. ಗ್ರಿಮ್ ಸೋದರರು, ಮ್ಯಾಕ್ಸ್ ಮುಲ್ಲರ್, ಆಂಡ್ರು ಲ್ಯಾಂಗ್, ಆರ್ನೆ ಆಮಟಿ, ಸ್ಟಿತ್ ಥಾಮ್ಸನ್ ಮುಂತಾದ ಅನೇಕ ವಿದ್ವಾಂಸರು ಜಾನಪದ ಕಥೆಗಳ ಮೂಲದ ಬಗ್ಗೆ ತಮ್ಮವೇ ಆದ ಸಿದ್ಧಾಂತಗಳನ್ನು ಮುಂದಿಟ್ಟಿದ್ದಾರೆ.[೧]

ಜರ್ಮನ್ ಜಾನಪದ ಕಥೆಗಳ ಸಂಕಲನ ಬದಲಾಯಿಸಿ

1819ರಲ್ಲಿ ಗ್ರಿಮ್ ಸೋದರರ ಜರ್ಮನ್ ಜಾನಪದ ಕಥೆಗಳ ಸಂಕಲನ ಪ್ರಕಟವಾದಾಗಲೇ ಜಾನಪದ ಕಥೆಗಳನ್ನು ಕುರಿತು ಸ್ವಲ್ಪಮಟ್ಟಿನ ವೈe್ಞÁನಿಕ ವಿವೇಚನೆ ಆರಂಭವಾಯಿತು. ಅದೇ ಸಂದರ್ಭದಲ್ಲಿ ಇತರ ದೇಶಗಳ ಜಾನಪದ ಕಥೆಗಳ ಸಂಕಲನಗಳೂ ಪ್ರಕಟವಾದುವಾಗಿ ಆ ಎಲ್ಲ ಕಥೆಗಳಲ್ಲಿ ಅನೇಕ ಸಾಮ್ಯಗಳನ್ನು ಗುರುತಿಸಲಾಯಿತು. ವಸ್ತು ರೀತಿಗಳ ಈ ಸಾಮ್ಯವನ್ನು ಅವಲೋಕಿಸಿದ ವಿದ್ವಾಂಸರು ಇದರ ಹಿನ್ನೆಲೆಯಲ್ಲಿ ಕುರಿತು ಉತ್ತರ ಕೊಡಲು ಪ್ರಯತ್ನಪಟ್ಟರು. 1856ರ ವೇಳೆಗೆ ವಿಲಿಯಂ ಗ್ರಿಮ್ ಜಾನಪದ ಕಥೆಗಳನ್ನು ಕುರಿತು ಅವೆಲ್ಲವೂ ಇಂಡೋ-ಯೂರೋಪಿಯನ್ ಭಾಷಾಮೂಲದಿಂದ ಬಂದು ಬೇರೆ ಬೇರೆ ಬೆಳೆವಣಿಗೆಯನ್ನು ಪಡೆದುಕೊಂಡಿರಬಹುದು, ಜೊತೆಗೆ ಪುರಾಣಗಳೇ ಕ್ರಮೇಣ ಕರಗಿ ಜಾನಪದ ಕಥೆಗಳ ರೂಪನ್ನು ಧರಿಸಿರಬಹುದು ಎಂದು ಸಾರಿದ.ಗ್ರಿಮ್ ಸೋದರರ ಈ ಸಿದ್ಧಾಂತಕ್ಕೆ ಮೂಲಕಾರಣ 19ನೆಯ ಶತಮಾನದಲ್ಲಿ ಆರಂಭವಾದ ತೌಲನಿಕ ಭಾಷಾಧ್ಯಯನ. 18ನೆಯ ಶತಮಾನದ ಅಂತ್ಯದ ವೇಳೆಗೆ ಸಂಸ್ಕøತದ ಬಗ್ಗೆ, ಪಾಶ್ಚಾತ್ಯ ಭಾಷಾಸಾಹಿತ್ಯಗಳ ಬಗ್ಗೆ ಪಾಶ್ಚಾತ್ಯದೇಶಗಳಲ್ಲಿ ಉಂಟಾದ ಜಾಗೃತಿ ಅನೇಕ ಯೂರೋಪಿಯನ್ ವಿದ್ವಾಂಸರ ಆಸಕ್ತಿಯನ್ನು ಭಾರತದತ್ತ ಸೆಳೆಯಿತು. ಮುಂದೆ ಮ್ಯಾಕ್ಸ್‍ಮುಲ್ಲರ್ ಮುಂತಾದ ವಿದ್ವಾಂಸರು ಗ್ರಿಮ್ ಸೋದರರ ವಾದಕ್ಕೆ ಸಮರ್ಥನೆಯನ್ನೊದಗಿಸಿ ಆ ಸಿದ್ಧಾಂತವನ್ನು ಸ್ಥಾಪಿಸಲು ಪ್ರಯತ್ನಿಸಿದರು.[೨]

ಜರ್ಮನಿಯ ಥುರಿಂಜೆನ್ ಅಡವಿ ಬದಲಾಯಿಸಿ

ಜರ್ಮನಿಯ ಥುರಿಂಜೆನ್ ಅಡವಿಗಳಲ್ಲೂ ನಾರ್ವೆಯಲ್ಲೂ ಭಾರತದಲ್ಲೂ ಚಿಕ್ಕಮಕ್ಕಳಿಗೆ ಹೇಳುವ ಕಥೆಗಳು ಇಂಡೋ-ಯುರೋಪಿಯನ್ ಜನಾಂಗಕ್ಕೆಲ್ಲ ಸಾಮಾನ್ಯವಾದ ಮಗ್ಗದಿಂದ ರೂಪುಗೊಂಡವು. ಉತ್ತರಕ್ಕೂ ದಕ್ಷಿಣಕ್ಕೂ ಚದುರಿಹೋದ ಆರ್ಯಜನಾಂಗದವರು (ಸೂರ್ಯ, ಪ್ರಾತಃಕಾಲ ಮುಂತಾದ ಹೆಸರುಗಳನ್ನು ಕೊಂಡೊಯ್ದಂತೆ) ಯಕ್ಷಿಣಿ ಕಥೆಗಳ ಮೂಲಘಟಕಗಳನ್ನು ತಮ್ಮೊಡನೆ ತೆಗೆದುಕೊಂಡು ಹೋದರು. ಅವುಗಳಿಂದ ಈ ಕಥೆಗಳು ಟಿಸಿಲೊಡೆದು ಹಬ್ಬಿದುವು. ಆದರೆ ಈ ಪ್ರಾಚೀನ ಕಥೆಗಳಲ್ಲಿ ಅನೇಕ ಕಥೆಗಳು ಅರ್ಧಮರವು ಅಥವಾ ತಪ್ಪು ತಿಳುವಳಿಕೆಯಿಂದ ಹೊಸರೂಪ ತಳೆದ ಪ್ರಾಚೀನ ಪುರಾಣದ ಮುರುಕು ಚೂರುಗಳು. ಪ್ರಾರಂಭದಲ್ಲಿ ಜಾನಪದ ಕಥೆಗಳು ಹಿಂದಿನ ಪುರಾಣಕಥೆ ಅಥವಾ ಐತಿಹ್ಯಗಳ ಪುನರಾವೃತ್ತಿಯಾದರೂ ಅದ್ಭುತಕಥೆಗಳನ್ನು ಕುರಿತಾದ ಅಭಿರುಚಿಯ ಮೂಲಕ ಅನೇಕ ದಾದಿಯರೂ ಅಜ್ಜಿಯರೂ ಹೊಸ ಹೊಸ ಜಾನಪದ ಕಥೆಗಳನ್ನು ಕಲ್ಪಿಸಿದರು. ಮುಂದೆ ಡಾ. ಡಾಸೆಂಟ್ ತನ್ನ ನಾರ್ಸ್ ದೇಶಗಳ ಜಾನಪದ ಕಥೆಗಳು ಎಂಬ ಗ್ರಂಥದ ಮುನ್ನುಡಿಯಲ್ಲಿ ಪ್ರತಿಪಾದಿಸಿದ ವಿಚಾರಗಳನ್ನೂ ಪೌರಾಣಿಕ ಸಿದ್ಧಾಂತದ ಸಮರ್ಥನೆಗೆ ಬಳಸಿಕೊಳ್ಳಲಾಗಿದೆ. ನಾರ್ಸ್ ಜನಕ್ಕೆ ಸಂಬಂಧಿಸಿದ ಕಾಡುಬೇಟೆಗಾರ (ವೈಲ್ಡ್ ಹಂಟ್ಸ್‍ಮನ್) ಎಂಬ ಕಥೆ ಪುರಾಣರೂಪದಿಂದ ಸಾವಕಾಶವಾಗಿ ಜಾನಪದ ಕಥೆಯ ರೂಪಕ್ಕೆ ತಿರುಗಿದ ಹಂತಗಳನ್ನು ಡಾಸೆಂಟ್ ಗುರುತಿಸಿದ್ದಾನೆ. ಆ ಬೇಟೆಗಾರ ಜರ್ಮನಿಯ ಪ್ರಾಚೀನ ದೇವ ಓಡಿನ್ನನೇ ಆಗಿದ್ದಾನೆ ಎಂಬ ವಿಚಾರವನ್ನು ಮ್ಯಾಕ್ಸ್‍ಮುಲ್ಲರ್ ಸಮರ್ಥಿಸಿ ಬೇಟೆಗಾರ ಓಡಿನ್ನನ ತೀರ ಪ್ರಾಚೀನವಾದ ಎಳೆಗಳನ್ನು ವೇದಮೂಲಕ್ಕೆ ಕೊಂಡೊಯ್ಯಬಹುದೆಂದು ತಿಳಿಸಿದ್ದಾನೆ.ವೇದದ ಇಂದ್ರ ಗುಡುಗು, ಬಿರುಗಾಳಿ, ಮಳೆಗಳ ದೇವತೆಯಾಗಿದ್ದಾನೆ. ವಿಲಿಯಂ ಟೆಲ್ ಎಂಬ ಹೆಸರಾಂತ ಬಿಲ್ಲುಗಾರನ ಕಥೆಯಲ್ಲಿನ ಆ ಬಿಲ್ಲುಗಾರ ಸೂರ್ಯನ ಪ್ರತಿಬಿಂಬವೇ. ಗುರಿಯನ್ನು ಬಾಣದಿಂದ ಹೊಡೆಯುವಾತ ಇಂದ್ರ. ಅಪೊಲೊ, ಯೂಲಿಸಿಸ್ ಮುಂತಾದ ಯಾವ ಪುರಾಣವೀರನಾದರೂ ಸೂರ್ಯನೇ. ಏಕೆಂದರೆ ಆ ಬಾಣಗಳು ಸೂರ್ಯಕಿರಣಗಳೇ - ಹೀಗೆಂದು ಮ್ಯಾಕ್ಸ್‍ಮುಲ್ಲರ್‍ನ ಅಭಿಪ್ರಾಯ.

ಶ್ವೇತಕುಮಾರಿ ಬದಲಾಯಿಸಿ

ಕಗ್ಗತ್ತಲೆಯ ಸೆರೆಮನೆಗಳಲ್ಲಿ ಬಂಧಿತರಾದ ಶ್ವೇತಕುಮಾರಿಯರನ್ನು (ಸ್ನೋ ವೈಟ್ ಪ್ರಿನ್ಸೆಸ್) ಹೊಳೆಯುವ ವೀರ ಬಿಡಿಸುವುದು ಅಸಂಖ್ಯ ಕಥೆಗಳಲ್ಲಿದೆ. ಪುರಾಣಪರಂಪರೆಯಲ್ಲಿನ ಚಳಿಗಾಲದ ಬಂಧನದಿಂದ ವಸಂತವನ್ನು ಬಿಡಿಸುವ ಕಥೆ ಅದಕ್ಕೆ ಮೂಲವಾಗಿದೆ. ಸೂರ್ಯನನ್ನು ರಾತ್ರಿಯ ಕತ್ತಲೆಯಿಂದ ಬಿಡಿಸುವ ಕಥೆಯೂ, ಆಕಳುಗಳೆಂದು ಕರೆಯಲಾದ ಮೋಡಗಳ ನೀರನ್ನು ತುಡುಗರು ಗವಿಗಳಲ್ಲಿ ಅಡಗಿಸಿಟ್ಟಾಗ ಅದನ್ನು ಬಿಡುಗಡೆಗೊಳಿಸಿದ ಕಥೆಯೂ ಒಂದೇ ನಿಸರ್ಗ ಪುರಾಣದ ಮಾದರಿಯವಾಗಿವೆ. ಇವುಗಳಲ್ಲಿನ ಎಲ್ಲ ಮಾದರಿಗಳನ್ನೂ ಜರ್ಮನ್ ಜಾನಪದ ಕಥೆಗಳಲ್ಲಿ ಗುರುತಿಸಬಹುದು. ನಿಸರ್ಗಶಕ್ತಿಗಳ ಪ್ರಣಯಗಳೂ ಹೋರಾಟಗಳೂ ಮೊದಲು ದೇವತೆಗಳ ಕಥೆಗಳಾಗಿರುತ್ತವೆ. ಆಮೇಲೆ ವೀರರ ಐತಿಹ್ಯಗಳಾಗಿ ರೂಪತಳೆದು ಕೊನೆಗೆ ಯಕ್ಷಿಣಿಯರ ಹಾಗೂ ಚಿಕ್ಕ ಭೂತಗಳ (ಇಂಪ್ಸ್) ಕಥೆಗಳಾಗುತ್ತವೆ. ಪುರಾಣಕಥೆಗಳ ದೇವತೆಗಳನ್ನು ತೆಗೆದು ಹಾಕಿದ ಕ್ರೈಸ್ತ ಕಥೆಗಳಲ್ಲೂ ಇವುಗಳ ಮಾದರಿಯಿದೆ. ಪ್ಲೂಟೊ ದೇವನನ್ನು ದುಷ್ಟಭೂತ (ಡೆವಿಲ್) ಎಂಬಂತೆ ಅಲ್ಲಿ ಮಾರ್ಪಡಿಸಿದ್ದಾರೆ - ಎಂದು ಮ್ಯಾಕ್ಸ್ ಮುಲ್ಲರನ ಅಭಿಪ್ರಾಯ.

ಸರ್ ಜಾರ್ಜ್ ಕಾಕ್ಸ್ ಈ ಸಿದ್ಧಾಂತ ಬದಲಾಯಿಸಿ

ಸರ್ ಜಾರ್ಜ್ ಕಾಕ್ಸ್ ಈ ಸಿದ್ಧಾಂತವನ್ನು ಸಮರ್ಥಿಸಿದ್ದಾನೆ. ಪುರಾಣಕಥೆಗಳಲ್ಲೂ ಪ್ರಾಚೀನ ಮಹಾಕಾವ್ಯಕಥೆಗಳಲ್ಲೂ ಮ್ಯಾಕ್ಸ್ ಮುಲ್ಲರನಂತೆ ಈತನೂ ನಿಸರ್ಗ ವ್ಯಾಪಾರಗಳನ್ನು ಕಾಣುತ್ತಾನೆ. ಪ್ಯಾರಿಸ್ ಹೆಲೆನಳನ್ನು ಹರಣ ಮಾಡಿದ ಕಥೆಯೂ ಪರ್ಸಿಯಸ್ ಹಾಗೂ ಹೆರಾಕ್ಲಿಸನ ಸಾಹಸಗಳೂ ಹೆರಾಕ್ಲಿಸನ ಮರಣವೂ ಪರ್ಷಿಯದ ಫಿರ್ದೂಸಿ ಬರೆದ ಶಹನಾಮೆ ಎಂಬ ಮಹಾಕಾವ್ಯದಲ್ಲಿ ಬರುವ ಇಸ್ಟಂಡಿಯರ್, ಸೊಹ್ರಾಬ್ ಮುಂತಾದವರ ಕಥೆಗಳೂ ಸೂರ್ಯನ ಕಥೆಗಳೇ ಆಗಿವೆ. ಚಿನ್ನದ ಬಣ್ಣದ ಹುಡುಗ ಹುಡುಗಿಯರು, ಚಿನ್ನದ ಬಣ್ಣದ ಅಂಗಿ, ಚಿನ್ನದ ಬಾಣಗಳು, ಚಿನ್ನದ ಖಡ್ಗ, ಹೊಳೆಯುವ ಚಿನ್ನದ ಅರಮನೆಗಳು ಬಂದ ಕಡೆಗಳಲ್ಲೆಲ್ಲ ಸೂರ್ಯಪುರಾಣದ ಸಂಕೇತವಿದೆ. ಟ್ಯುಟನ್ನರ ಪುರಾಣಗಳು, ಗ್ರೀಕ್ ಮಹಾಕಾವ್ಯಗಳು, ಆರ್ಥರ್, ಷಾರ್ಲಮಾನನ ಕಥಾಚಕ್ರಗಳು - ಇವೆಲ್ಲ ಬಾಹ್ಯಜಗತ್ತಿನ ದೃಶ್ಯ ಮತ್ತು ಶ್ರವ್ಯಲೋಕಗಳನ್ನು ಚಿತ್ರಿಸುತ್ತವೆ. ಇದೇ ಹೋಲಿಕೆ ಜರ್ಮನಿ, ಸ್ಯಾಂಡಿನೇವಿಯ, ಗ್ರೀಸ್, ರೋಮ್, ಪರ್ಷಿಯ ಮತ್ತು ಭಾರತಗಳ ಜಾನಪದ ಕಥೆಗಳಲ್ಲೂ ಕಾಣಸಿಗುತ್ತದೆ.ಹೀರಡಟಸ್ ವರ್ಣಿಸಿದ ರ್ಹಾಂಪ್ಸಿನಿಟೋಸ್ ಕಥೆಯೂ, ನಾರ್ಸ್‍ದೇಶಗಳ ಕಳ್ಳರ ಗುರುವಿನ ಕಥೆಯೂ ಹಿತೋಪದೇಶದ ಬ್ರಾಹ್ಮಣನ ಆಡನ್ನು ಲಪಟಾಯಿಸಿದ ಕಳ್ಳರ ಕಥೆಯೂ ಆರ್ಯರು ಬೇರೆ ಬೇರೆಯಾಗಿ ಚದುರುವ ಮೊದಲಿನ ಕಥೆಗಳ ಅವಶೇಷಗಳೆಂದು ಹೇಳಿ ಇಲ್ಲೂ ಗ್ರೀಕರ ಚೋರದೇವ ಹರ್ಮಿಸ್‍ನ ಕಥೆಯ ಪುನರಾವೃತ್ತಿ ಕಾಣುತ್ತದೆಯೆಂದು ಕಾಕ್ಸ್ ಅಭಿಪ್ರಾಯಪಡುತ್ತಾನೆ.

ಸೂರ್ಯಪುರಾಣ ಬದಲಾಯಿಸಿ

ಆದರೆ ಈ ರೀತಿಯಲ್ಲಿ ಎಲ್ಲ ಕಡೆಗೂ ಸೂರ್ಯಪುರಾಣವನ್ನು ಸ್ಥಾಪಿಸುವ ಪದ್ಧತಿ ತೀವ್ರ ಟೀಕೆಗೊಳಗಾಯಿತು. ಮ್ಯಾಕ್ಸ್ ಮುಲ್ಲರ್ ಸಹ ತನ್ನ ನ್ಯಾಚುರಲ್ ರಿಲಿಜನ್ ಎಂಬ ಗ್ರಂಥದಲ್ಲಿ ನೆಪೋಲಿಯನ್, ಮಿ. ಬ್ರೈಟ್ ಹಾಗೂ ತಾನೂ ಸಹ ಸೂರ್ಯಪುರಾಣವೆಂದು ಹಾಸ್ಯ ಮಾಡಿದ ಉದಾಹರಣೆಯನ್ನೆತ್ತಿ ಹೇಳಿ ಬಂದ ಸಾದೃಶ್ಯದಿಂದಲೇ ಸಿದ್ಧಾಂತವನ್ನು ಮಾಡುವುದರಲ್ಲಿನ ತೊಂದರೆಯನ್ನು ವಿವರಿಸಿದ್ದಾನೆ. ಆರ್ಯಭಾಷೆಗಳಲ್ಲಿನ ಹೆಸರುಗಳ ಹೋಲಿಕೆಗಳಿಂದ ಆತ ಸಿದ್ಧಮಾಡಿ ಅರ್ಥ ಕೆಲವೊಮ್ಮೆ ಸಮರ್ಪಕವಾದರೂ ಗ್ರೀಸಿನ ಕಾರಿಟೀಜ್ (ಛಿhಚಿಡಿiಣes) ಹಾಗೂ ವೇದದ ಹರಿತ್‍ಗಳು ಒಂದೇ ಎಂದುದೂ ಇತರ ಉತ್ಪತ್ತಿಗಳೂ (ವರುಣ ಗ್ರೀಸ ಯುರೇನಸ್ ಎಂದುದೂ) ವಿದ್ವಾಂಸರನೇಕರ ಒಪ್ಪಿಗೆ ಪಡೆಯಲಿಲ್ಲ.ಅನೇಕ ಜಾನಪದ ಕಥೆಗಳು ಪುರಾಣಕಥೆಗಳಿಂದ ಪ್ರಭಾವಹೊಂದಿರುವುದು ನಿಜವಾದರೂ ವ್ಯಾಸಭಾರತ, ಒಡಿಸ್ಸಿ ಮುಂತಾದ ಗ್ರಂಥಗಳಲ್ಲಿ ಅನೇಕ ಜಾನಪದ ಕಥೆಗಳು ಸೇರಿರುವುದು ಕಾಣುತ್ತದೆ. ಪಾಲಿಫೀಮಸ್ ಎಂಬ ಒಕ್ಕಣ್ಣಿನ ರಾಕ್ಷಸನನ್ನು ಒಡೀಸಿಯಸ್ (ಯೂಲಿಸಿಸ್) ತಂತ್ರದಿಂದ ಕೊಂದ ರೀತಿ ಜಾನಪದ ಕಥಾತಂತ್ರದ ಮಾದರಿಯದು. ಪರ್ಸಿಯಸ್ಸನ ಐತಿಹ್ಯದಲ್ಲೂ ಹೇಲಿಡೇ ಹೇಳುವಂತೆ ಅನೇಕ ಜಾನಪದ ಕಥಾಸೂತ್ರಗಳಿವೆ. ವಾಸ್ತವವಾಗಿ ಪುರಾಣಕಥೆ ಬೇರೆ, ಜಾನಪದ ಕಥೆ ಬೇರೆಯೆಂಬ ಕಲ್ಪನೆ ತೀರ ಪ್ರಾಚೀನ ಜನರಿಗಿರಲಿಲ್ಲ. ಪುರಾಣ ಕಥೆಗಳು ಜಾನಪದ ಕಥೆಗಳ ಒಂದು ಪ್ರಕಾರವೆಂದು ಹೇಳಬಹುದು ಎಂದು ಸ್ಪಿತ್ ಥಾಂಪ್ಸನ್ ಬರೆದಿದ್ದಾನೆ.

ಮಾನವಶಾಸ್ತ್ರ ಬದಲಾಯಿಸಿ

ಜಗತ್ತಿನ ವಿವಿಧ ಭಾಗಗಳ ಜಾನಪದ ಕಥೆಗಳ ಮುಖ್ಯತಂತ್ರಗಳಲ್ಲಿ ಬಹಳ ಸಾಮ್ಯವಿದೆ. ಮಾನವಶಾಸ್ತ್ರದ ಆಧಾರದ ಮೇಲೆ ಆರ್ಯಪುರಾಣ ಅಥವಾ ಪದ್ಧತಿಗಳು ಪುರಾತನ ಅನಾಗರಿಕ ಜನಾಂಗಗಳ ನಂಬಿಕೆ ಆಚರಣೆಗಳ ಅವಶೇಷವೆಂದು ಈಗಲೂ ಕಾಣುವ ಕಾಡುಜನಾಂಗಗಳ ಸಂಪ್ರದಾಯದಿಂದ ಆಂಡ್ರೂ ಲ್ಯಾಂಗ್ ಸಮರ್ಥಿಸುತ್ತಾನೆ. ಪುರಾತನ ಆರ್ಯರು ಅನಾಗರಿಕರಾದರೂ ಅವರನ್ನು ಈಗಿನ ಅನಾಗರಿಕರೊಡನೆ ಹೋಲಿಸುವುದು ಸರಿಯಲ್ಲವೆಂದು ಮ್ಯಾಕ್ಸ್ ಮುಲ್ಲರ್ ಹೇಳಿದ್ದಾನೆ. ಆದರೆ ವೇದದ ವಿಧಿಕ್ರಮವನ್ನು (ರಿಚುಅಲ್) ಈಗಿನ ಜೂಲೂ ಮನುಷ್ಯನೂ ಆಧುನಿಕ ರೆಡ್ ಇಂಡಿಯನ್ನನೂ ತಮಗೆ ಪರಿಚಿತವಾದ ಸಂಪ್ರದಾಯವನ್ನು ಬಹಳ ಹೋಲುತ್ತವೆಯೆಂದು ಗುರುತಿಸಬಲ್ಲರು ಎಂದು ಓಲ್ಡೆನ್ ಬರ್ಗ್ ಹೇಳುವುದು ನಿಜವಾಗಿದೆ. ಆರ್ಯಜನಾಂಗಗಳ ಅನೇಕ ಜಾನಪದ ಕಥೆಗಳೂ ಪುರಾಣಕಥೆಗಳೂ ಪ್ರಾಗೈತಿಹಾಸಿಕ ಯುಗದಲ್ಲಿಯೇ ಈಜಿಪ್ಟ್ ಮತ್ತು ಬ್ಯಾಬಿಲೋನಿಯದ ಜನರಿಂದ ಪ್ರಭಾವಿತವಾಗಿವೆ. ಗ್ರೀಕರು ಈಜಿಪ್ಟಿನ ದೇವತೆಗಳನ್ನು ತೆಗೆದುಕೊಂಡರು ಎಂದು ಹೀರಡಟಸ್ ಹೇಳಿದರೆ ಫಿಲೋ ಫಿನಿಶಿಯನ್ನರ ಪುರಾಣ ಕಥೆಗಳನ್ನು ತೆಗೆದುಕೊಂಡರೆನ್ನುತ್ತಾನೆ. ಐಗುಪ್ತ ನಾಗರಿಕತೆಯನ್ನೂ ಪುರಾಣ ಕಥೆಗಳನ್ನೂ ಜಗತ್ತಿನ ನಾವಿಕರಾದ ಫಿನಿಶಿಯನ್ನರು ಜಗತ್ತಿನಾದ್ಯಂತ ಹಬ್ಬಿಸಿದರೆಂದು ಟಿ. ಈಲಿಯಟ್ ಸ್ಮಿತ್ ಬರೆದಿದ್ದಾನೆ.

ಬ್ಯಾಬಿಲೋನಿಯದ ಸುಮೇರಿಯನ್ನ ಬದಲಾಯಿಸಿ

ಆಧುನಿಕ ಸಂಶೋಧನೆಯ ಪರಿಣಾಮಗಳು ಬ್ಯಾಬಿಲೋನಿಯದ ಸುಮೇರಿಯನ್ನರೂ ಪ್ರಾಗೈತಿಹಾಸಿಕ ಯುಗದ ಈಜಿಪ್ಟಿಯನ್ನರೂ ನವಶಿಲಾಯುಗದ ಯೂರೋಪಿಯನ್ನರೂ ದಕ್ಷಿಣ ಪರ್ಷಿಯನ್ನರೂ ಭಾರತದ ಆರ್ಯರೂ ದೂರದ ವಂಶಸಂಬಂಧವುಳ್ಳವರೆಂಬುದನ್ನು ತೋರಿಸುವ ಒಲವು ಕಾಣುತ್ತದೆ ಎಂದು ಡೊನಾಲ್ಡ್ ಎ. ಮಿಕೆಂಜಿ ಬರೆದಿದ್ದಾನೆ. ಆರ್ಯ ಜಾನಪದ ಕಥೆಗಳು ಸೂರ್ಯ ಪುರಾಣಗಳೆಂದಾಗಲಿ ಆರ್ಯಪುರಾಣಗಳ ಚೂರುಗಳೆಂದಾಗಲಿ ಹೇಳುವುದು ಬಲುಮಟ್ಟಿಗೆ ಸರಿಯಲ್ಲ. ಅನೇಕ ಜನಾಂಗಗಳವರ ಜಾನಪದ ಕಥೆಗಳಲ್ಲೂ ಸೂರ್ಯ, ಚಂದ್ರ, ತಾರೆಗಳೂ ಪುರಾಣ ದೇವತೆಗಳೂ ಪಾತ್ರ ವಹಿಸುವುದು ನಿಜವಾದರೂ ಮ್ಯಾಕ್ಸ್ ಮುಲ್ಲರ್ ಹೇಳುವ ಕಪ್ಪೆರಾಜನ ಕಥೆಯೂ ಪಂಜಾಬಿನ ಭೇಕಿಯ (ಹೆಣ್ಣು ಕಪ್ಪೆ) ಕಥೆಯೂ ಸೂರ್ಯಪುರಾಣವೆಂಬುದು ಸರಳ ಜಾನಪದ ಕಥೆಗಾರರ ಊಹೆಗೆ ಮೀರಿದ ಕಲ್ಪನೆಗಳು.ಈ ಎಲ್ಲ ವಿಚಾರಗಳನ್ನೂ ಮಥನ ಮಾಡಿದಾಗ ತೋರುವ ಸಾರಾಂಶ ಇಷ್ಟು. ಜಾನಪದ ಕಥೆಗಳಿಗೆಲ್ಲ ಒಂದೇ ಮೂಲ, ಅದು ಪೌರಸ್ತ್ಯವಾದುದು ಎಂಬ ಹೇಳಿಕೆ ಪೂರ್ಣಸತ್ಯವಾಗಲಾರದು. ಅದು ಭಾಗಶಃ ಮಾತ್ರ ನಿಜ.

ಉಲ್ಲೇಖಗಳು ಬದಲಾಯಿಸಿ