ಬೌದ್ಧರು ಶಮಥಸಾಧನೆಗಾಗಿ ಅಷ್ಟಾಂಗಯುಕ್ತವಾದ ಮಧ್ಯಮಮಾರ್ಗವನ್ನು ನಿರ್ದೇಶಿಸಿದ್ದಾರೆ. ಗೌತಮಬುದ್ಧನ ಮೊಟ್ಟ ಮೊದಲ ಪ್ರವಚನವಾದ ಧರ್ಮಾಚಕ್ರಪ್ರವರ್ತನ ಸೂತ್ರದಲ್ಲಿಯೇ ಈ ಎಂಟು ಅಂಗಗಳ ವಿವರಣೆ ಬರುತ್ತದೆ. ಇದನ್ನು ಆರ್ಯ-ಅಷ್ಟಾಂಗಿಕ-ಮಾರ್ಗ (ಅರಿಯೋ ಅಟ್ಠಂಗಿಕೋ ಮಗ್ಗೋ) ಎಂದು ಬುದ್ಧನೇ ಕರೆದಿದ್ದಾನೆ. ಈ ಅಷ್ಟಾಂಗಮಾರ್ಗವೇ ಚಕ್ಷುಕರಣೆ, ಜ್ಞಾನಕರಣೆ ಇದರಿಂದ ಉಪಶಮ, ನಿರ್ವೇದ, ನಿರ್ವಾಣ ಒದಗುತ್ತದೆ ಎಂದು ಬುದ್ಧನ ಆಶ್ವಾಸನೆ. ಅಷ್ಟಾಂಗಮಾರ್ಗದ ಎಂಟು ವಿವರಗಳನ್ನು ಪ್ರಜ್ಞಾಶೀಲ, ಸಮಾಧಿ ಎಂಬ ಮೂರು ವರ್ಗಗಳಲ್ಲಿ ಅಳವಡಿಸಿದ್ದಾರೆ. ಸಮ್ಯಕ್‌ ದೃಷ್ಟಿ ಸಮ್ಯಕ್‌ಸಂಕಲ್ಪ ಎರಡೂ ಪ್ರಜ್ಞಾವರ್ಗ; ಸಮ್ಯಕ್‌ವಾಚಾ, ಸಮ್ಯಕ್‌ಕರ್ಮಾಂತ, ಸಮ್ಯಕ್ಆಜೀವ ಇವು ಮೂರು ಶೀಲವರ್ಗ; ಸಮ್ಯಕ್‌ವ್ಯಾಯಾಮ, ಸಮ್ಯಕ್ ಸ್ಮೃತಿ ಮತ್ತು ಸಮ್ಯಕ್‌ಸಮಾಧಿ ಇವು ಮೂರು ಸಮಾಧಿವರ್ಗ, ಇದು ತ್ರಿವಿಧ ಶಿಕ್ಷೆ (ತಿವಿಧಾ ಸಿಕ್ಖಾ) ಎನಿಸಿಕೊಳ್ಳುತ್ತದೆ. ಸಮ್ಯಕ್ ದೃಷ್ಟಿಯೆನ್ನುವುದು ನಿಜವಾಗಿ ಮಾರ್ಗಾನುಸಂಧಾನದಿಂದ ಬರತಕ್ಕ ಫಲ. ಸಂಸಾರವನ್ನು ಅನಿತ್ಯ, ಅನಾತ್ಮ, ದುಃಖವೆಂದು ಮನದಟ್ಟು ಮಾಡಿಕೊಳ್ಳುವುದು ಸಮ್ಯಕ್ ದೃಷ್ಟಿ; ಮೋಹ, ದ್ವೇಷ, ರಾಗಗಳಿಂದ ವಿಮುಕ್ತಿ. ಸಮ್ಯಕ್‌ಸಂಕಲ್ಪವೆಂದರೆ ವಿರಕ್ತಿ (ನೈಷ್ಕರ್ಮ್ಯ ಸಂಕಲ್ಪ), ಶುಭಭಾವನೆಗಳು, ಯಾರಿಗೂ ಕೆಡುಕನ್ನು ಮಾಡದಿರುವ ಸಂಕಲ್ಪ , (ಅವಿಹಿಂಸಾ ಸಂಕಲ್ಪ), ಸಮ್ಯಕ್ವಾಚಾ ಎನ್ನುವುದರಲ್ಲಿ ಸುಳ್ಳು , ಚಾಡಿ, ಬಯ್ಯುವುದು, ಹರಟೆ ಮುಂತಾದುವನ್ನು ಬಿಡುವುದು ಸೇರುತ್ತದೆ. ಸಮ್ಯಕ್‌ಕರ್ಮಾಂತವೆಂದರೆ ಕೊಲ್ಲುವುದು, ಕಳವು, ವ್ಯಭಿಚಾರ ಇವುಗಳಿಂದ ದೂರವಾಗಿರುವುದು; ಕರುಣಾ ಪ್ರಮುಖವಾದ ಕೆಲಸಗಳನ್ನು ಮಾಡುವುದು. ಸಮ್ಯಕ್ಆಜೀವ ಎನ್ನುವುದರಲ್ಲಿ ಪರರಿಗೆ ಘಾಸಿಯಾಗುವಂಥ ವೃತ್ತಿಗಳನ್ನು ಹಿಡಿಯದಿರುವುದು; ಆಯುಧಗಳನ್ನೂ ಕೊಲೆಗಾಗಿ ಪಶುಗಳನ್ನೂ ಮನುಷ್ಯರನ್ನೂ ಹೆಂಡ ಮುಂತಾದ ಪದಾರ್ಥಗಳನ್ನೂ ವಿಷವನ್ನೂ ಮಾರುವುದು ಇಲ್ಲಿ ನಿಷಿದ್ಧವೆನಿಸಿದೆ; ಅನವದ್ಯವಾದ ಮತ್ತು ತನಗೂ ಇತರರಿಗೂ ಅಹಿತವಾಗದ ಕೆಲಸಗಳನ್ನು ಮಾಡಿ ಹೊಟ್ಟೆ ಹೊರೆದುಕೊಳ್ಳುವುದು. ಸಮ್ಯಕ್‌ವ್ಯಾಯಾಮವೆಂದರೆ ಅಶುಭ ಭಾವನೆಗಳು ಉಂಟಾಗದಂತೆಯೂ ಶುಭಭಾವನೆಗಳು ಉಂಟಾಗುವಂತೆಯೂ ಮೊದಲೇ ಇರುವ ಅಶುಭಭಾವನೆಗಳು ಹೋಗಿ ಮೊದಲೇ ಇರುವ ಶುಭಭಾವನೆಗಳು ಬೇರೂರುವಂತೆಯೂ ಪ್ರಯತ್ನಮಾಡುವುದು. ಸಮ್ಯಕ್ ಸ್ಮೃತಿಯಲ್ಲಿ ಕಾಯಾನುಪಶ್ಯನ, ವೇದನಾನುಪಶ್ಯನ, ಚಿತ್ತಾನುಪಶ್ಯನ ಮತ್ತು ಧರ್ಮಾನುಪಶ್ಯನಗಳು ಸೇರುತ್ತವೆ. ಬೌದ್ಧರ ಧ್ಯಾನಪಂಥಕ್ಕೆ ಸ್ಮೃತಿಮಾರ್ಗವೆಂದೇ ಹೆಸರು. ಅನುಪಾನ ಸ್ಮೃತಿ, ಮೈತ್ರೀಸ್ಮೃತಿ, ಚಂಕ್ರಮಣಧ್ಯಾನ ಮುಂತಾದುವು ಸಮ್ಯಕ್ ಸ್ಮೃತಿ ವಿಭಾಗದ ವಿವಿಧ ಪ್ರಕಾರಗಳು. ಸಮ್ಯಕ್ ಸ್ಮೃತಿ ಬಲಗೊಂಡು ಸಾರ್ಥಕವಾದರೆ ಸಮ್ಯಕ್ ಸಮಾಧಿ ಒದಗುತ್ತದೆ. ಗಾಳಿಯಿಲ್ಲದ ಸ್ಥಳದಲ್ಲಿರುವ ದೀಪ ಅಚಲವಾಗಿ ಉರಿಯುವಂತೆ ಚಿತ್ತ ಸ್ಥಿರವಾಗಿರುವುದು ಸಮಾಧಿಯೆನಿಸಿಕೊಳ್ಳುತ್ತದೆ.