ವಾಯುಮಂಡಲದ ಸಂಮರ್ದಕ್ಕಿಂತ ಗಮನಾರ್ಹವಾಗಿ ಕಡಿಮೆಯಿರುವ ಸಂಮರ್ದ (ಲೋಪ್ರೆಷರ್). (ಅಧಿಕ ಸಂಮರ್ದ). ಅತ್ಯುನ್ನತ ಪ್ರದೇಶಗಳಿಗೆ (ಹಿಮಾಲಯ ಪರ್ವತಾಗ್ರಗಳು, ಅಂತರಿಕ್ಷಯಾನ) ಹೋದಾಗ ಅಲ್ಪಸಂಮರ್ದ ಸ್ವಾಭಾವಿಕವಾಗಿ ಒದಗುವುದು. ಬೇರೆ ಪ್ರದೇಶಗಳಲ್ಲಿ ಇದನ್ನು ಕೃತಕವಾಗಿ ತಯಾರಿಸಬೇಕು. ಈ ಕ್ರಿಯೆಯಲ್ಲಿ ವಾಯುರೇಚಕ (ಏರ್ ಪಂಪ್) ಬಲು ಮುಖ್ಯ. ಆಟೊಫಾನ್ ಗೆರಿಕ್ ಎಂಬಾತ ವಾಯುರೇಚಕವನ್ನು (1650) ನಿರ್ಮಿಸಿ ಮಾಗ್ಡೆಬರ್ಗ್‌ನಲ್ಲಿ ತೋರಿಸಿದ ಅರ್ಧಗೋಳಗಳ ಪ್ರಯೋಗ ವಾತಾವರಣದ ಸಂಮರ್ದವನ್ನು ವ್ಯಕ್ತಪಡಿಸಿತು (1654). ಇವನ ರೇಚಕದಿಂದ ವಾತಾವರಣದ ಒತ್ತಡದಲ್ಲಿ 1/1000 ಪಾಲಿನಷ್ಟು (ಎಂದರೆ ಸ್ಥೂಲವಾಗಿ 1 ಮಿಮೀ. ಪಾದರಸದ ಕಾಂಡದಷ್ಟು) ಅಲ್ಪಸಂಮರ್ದವನ್ನು ಉಂಟುಮಾಡಲಾಯಿತು. 1855ರ ವೇಳೆಗೆ ಗೈಸ್ಲರ್ ನಿರ್ವಾತ ಪಾದರಸದ ರೇಚಕಗಳನ್ನು ನಿರ್ಮಿಸಿದರು. ಇದರಿಂದಲೇ ಅಲ್ಪಸಂಮರ್ದದಲ್ಲಿ ವಿದ್ಯುತ್ತು ಹೇಗೆ ಪ್ರವಹಿಸುವುದೆಂಬುದನ್ನು ಪರಿಶೀಲಿಸಲು ಸಾಧ್ಯವಾಯಿತು. ಜೆ. ಜೆ. ಥಾಮ್ಸನ್ ಎಲೆಕ್ಟ್ರಾನಿನ ಅಸ್ತಿತ್ವವನ್ನು ಸ್ಥಾಪಿಸಿದುದೂ ರಾಂಟ್ಜನ್ ಎಕ್ಸ್‌-ಕಿರಣಗಳನ್ನು ಕಂಡುಹಿಡಿದುದೂ ಅತ್ಯಲ್ಪ ಸಂಮರ್ದವುಳ್ಳ ಗಾಜಿನ ಕೊಳವೆಗಳ ಸಹಾಯವಿಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ. ಅತಿನೇರಿಳೆಕಿರಣಗಳ ಶೋಧನೆಯೂ ಅಸಾಧ್ಯವಾಗುತ್ತಿತ್ತು. ಅಷ್ಟೇಕೆ, ಮನೆಗಳಲ್ಲಿ ಉರಿಸುವ ವಿದ್ಯುದ್ದೀಪಗಳಲ್ಲಿ ತಂತು (ಫಿಲಮೆಂಟ್) ಉರಿದುಹೋಗದೆ ಇರಬೇಕಾದರೆ ಗಾಳಿಯನ್ನು ಬುರುಡೆಯೊಳಗಿನಿಂದ ತೆಗೆದಿರಲೇಬೇಕು. ಗಾಳಿಯಲ್ಲದೆ ಬೇರೆ ಅನಿಲವನ್ನು ತುಂಬಬೇಕಾದರೂ ವಾಯುರೇಚಕಗಳು ಬೇಕು. ದ್ಯುತಿವಿದ್ಯುತ್ತಿನ ಬುರುಡೆ (ಫೋಟೋ ಎಲೆಕ್ಟ್ರಿಕ್ ಟ್ಯೂಬ್), ತ್ರಿವಾಟ ಬುರುಡೆ (ಟ್ರಯೋಡ್ ವಾಲ್ವ್‌), ಕ್ಯಾಥೋಡ್ ಕಿರಣ ಆಂದೋಳನ ಲೇಖಕ (ಕ್ಯಾಥೋಡ್ ರೇ ಆಸಿಲೋಗ್ರಾಫ್) ಇತ್ಯಾದಿ ಉಪಕರಣ ಗಳಲ್ಲಿಯೂ ಅತ್ಯಲ್ಪಸಂಮರ್ದ ಆವಶ್ಯಕ. ಈ ಉಪಕರಣಗಳಿ ಲ್ಲದಿದ್ದರೆ ಆಧುನಿಕ ಭೌತವಿಜ್ಞಾನವೇ ಈಗಿನಂತೆ ಇರುತ್ತಿರಲಿಲ್ಲ. ಬೀಸಣಿಗೆಯಿಂದ ಗಾಳಿ ಬೀಸಿಕೊಳ್ಳುವಾಗ ಬೀಸಣಿಗೆ ವಾಯುವನ್ನು ತಳ್ಳುವುದೆಂಬ ಅನುಭವ ನಮಗೆ ಬರುತ್ತದೆ. ಇದರಿಂದ ಕೊಳವೆಯೊಳಕ್ಕೆ ಒಂದು ಬೆಣೆಯನ್ನು ತಳ್ಳಿದಾಗಲೂ ಬೆಣೆಯ ಮುಂದಿನ ಗಾಳಿಯನ್ನು ಅದುಮಲಾಗುವುದೆಂದು ಊಹಿಸಬಹುದು. ಇದರ ಜೊತೆಗೆ ಒಂದು ಕಡೆಗೆ ಮಾತ್ರ ತೆಗೆಯಲಾಗುವ ಮುಚ್ಚಳದ ಕಲ್ಪನೆಯನ್ನು ಸೇರಿಸಿದರೆ ಫಾನ್ಗೆರಿಕೆಯ ರೇಚಕದ ಸೃಷ್ಟಿ ಅರ್ಥವಾಗುತ್ತದೆ. ಇಲ್ಲಿ R ಎಂಬ ಪಾತ್ರೆಯೊಳಗಣ ಗಾಳಿಯನ್ನು ತೆಗೆದು ಹಾಕಲು ರೇಚಕದ ಮೂತಿಯನ್ನು ಪಾತ್ರೆಯ ಕತ್ತಿಗೆ ಗಾಳಿ ತೂರಲಾಗದಂತೆ ಸೇರಿಸಿದೆ. ಈಗ P ಎಂಬ ಕೊಂತವನ್ನು (ಪಿಸ್ಟನ್) AB ಎಂಬ ಕೊಳವೆಯ ಕೆಳಗಡೆಗೆ ಒತ್ತಿ ಗಾಳಿಯನ್ನು ಅದುಮಿದರೆ ಕವಾಟ (ವಾಲ್ವ್) ಮುಚ್ಚಿ, ಗಾಳಿಯ ಸಂಮರ್ದಕ್ಕಿಂತ ಹೆಚ್ಚಾದ ಕೂಡಲೆ ಕವಾಟ ತೆರೆದು, P ಯನ್ನು ಅದುಮಿದಾಗ ಕೊಳವೆಯೊಳಗಣ ಗಾಳಿ ಮೂಲಕ ಹೊರಕ್ಕೆ ಹೋಗುತ್ತದೆ. ಇದು P ಕೊಳವೆಯ ಅಡಿಯಾದ A ಗೆ ಬರುವವರೆಗೆ ನಡೆಯುತ್ತದೆ. ಈಗ P ಯನ್ನು A ಯಿಂದ ಕೊಳವೆಯ ಮೇಲ್ತುದಿಯಾದ B ವರೆಗೆ ಎಳೆದರೆ ಬೆಣೆಗೂ ಕ್ಕೂ ಮಧ್ಯೆ ಅಲ್ಪಸಂಮರ್ದವಿರುವುದರಿಂದ (ಗಾಳಿ ಎಲ್ಲಿಯೂ ತೂರದಿದ್ದರೆ ಇಲ್ಲಿ ನಿರ್ವಾತವೇ ಇರುತ್ತಿತ್ತು.) ವಾತಾವರಣದ ಸಂಮರ್ದದಿಂದ ಮುಚ್ಚಿ, R ನಲ್ಲಿಯ ಗಾಳಿಯ ಒತ್ತಡದಿಂದ ತೆರೆದು, R ನಲ್ಲಿಯ ಗಾಳಿಯ ಒಂದು ಭಾಗ ಕೊಳವೆಯೊಳಕ್ಕೆ ಬಂದು ತುಂಬುತ್ತದೆ. ಮತ್ತೆ ಕೊಂತವನ್ನು A ಯವರೆಗೆ ತಳ್ಳಿದರೆ ಕೊಳವೆಯೊಳಗಿನ ಗಾಳಿ ನ್ನು ಮುಚ್ಚುವುದರಿಂದ, ಪಾತ್ರೆಗೆ ಹಿಂದಕ್ಕೆ ಹೋಗಲಾರದೆ ತೆರೆದು ದಾರಿ ಸಿಕ್ಕಿದೊಡನೆ ಹೊರಕ್ಕೆ ಹೋಗುತ್ತದೆ. ಹೀಗೆ ಹೆಚ್ಚು ಸಲ ಕೊಂತವನ್ನು ಓಡಾಡಿಸಿದರೆ R ನೊಳಗಿರುವ ಗಾಳಿಯ ಹೆಚ್ಚು ಭಾಗ ಹೊರದೂಡಲ್ಪಡುತ್ತದೆ.

ಅಲ್ಪಸಂಮರ್ದ

ರೇಚಕಗಳಲ್ಲಿ ಕಾಲಾನುಕ್ರಮದಲ್ಲಿ ಅನೇಕ ಸುಧಾರಣೆಗಳಾಗಿ ಈಗಿನ ಉದ್ದೇಶಗಳಿಗೆ ನೆರವಾಗುವಂತೆ ರಚಿತವಾಗಿವೆ. ಅವುಗಳಲ್ಲಿ ಬಿರಡೆಯೊಡನೆ ಎಣ್ಣೆ ತುಂಬಿದ ರೇಚಕಗಳು 0.05-0.02 ಮಿಮೀ ವರೆಗೆ ಹೋಗಬಲ್ಲುವು. ಎರಡು ಮೂರು ರೇಚಕಗಳನ್ನು ಕೂಡಿಸಿ 0.00005 ಮಿ. ಮೀ ವರೆಗೆ ಹೋಗಬಹುದು. ಆದರೆ ಇಂಥ ಅಲ್ಪಸಂಮರ್ದ ದೊರೆಯಲು ನೀರಿನ ಆವಿ, ಇತರ ಅನಿಲಗಳು ಮುಂತಾದುವು ಸ್ವಲ್ಪವೂ ಇಲ್ಲದಂತೆ ಮಾಡಬೇಕು. ನೀರಿನ ಆವಿಯನ್ನು ಹೀರಿಕೊಳ್ಳಲು ಪ್ರಬಲ ಗಂಧಕಾಮ್ಲ (), ರಂಜಕದ ಪೆಂಟಾಕ್ಸೈಡ್ () ಮುಂತಾದುವುಗಳಿರುವ ಕೊಳವೆಗಳನ್ನು ಪಾತ್ರೆಗೂ ರೇಚಕಕ್ಕೂ ಮಧ್ಯೆ ಸೇರಿಸಬೇಕು. ತೆಂಗಿನ ಕರಟದ ಇಂಗಾಲ ಅನಿಲಗಳನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ. ಇದು ಚೆನ್ನಾಗಿ ಕೆಲಸ ಮಾಡಲು ಇದನ್ನು ಡಿವಾರ್ ಪಾತ್ರೆಯಲ್ಲಿರುವ ದ್ರವವಾಯುವಿನಲ್ಲಿ (ಲಿಕ್ವಿಡ್ ಏರ್) ತಣ್ಣಗೆ ಮಾಡಬೇಕು. ಉಪಕರಣಗಳನ್ನು ಜೋಡಿಸುವುದರಲ್ಲಿಯೂ ವಿಶೇಷ ರೀತಿಯ ಉಪಕರಣಗಳು ಬೇಕು. ಧಾರಾರೇಚಕ (ವಾಟರ್ ಜೆಟ್ ಪಂಪ್), ದಂತಚಕ್ರರೇಚಕ (ಕಾಗ್ವೀಲ್ಪಂಪ್), ಟೆಪ್ಲರ್ ರೇಚಕಗಳನ್ನು ಇಲ್ಲಿ ಹೆಸರಿಸಬಹುದು. ಗೇಡೆ (1907) ಬಳಕೆಗೆ ತಂದ ರೇಚಕ, ಸೆನ್ಕೋ ಸಂಸ್ಥೆಯವರ ಹೈವಕ್ ರೇಚಕ ಈಚೆಗಿನ ಸುಧಾರಿತ ರೂಪದವು. ಇವುಗಳ ನಿರ್ಗಮ ಸಂಮರ್ದ ವಾತಾವರಣ ಸಂಮರ್ದವೇ. ಆದರೆ ನಿರ್ಗಮ ಸಂಮರ್ದವನ್ನು ಸಹಾಯಕ ರೇಚಕದಿಂದ ಕಡಿಮೆಮಾಡಿ ಅಂತಿಮಸಂಮರ್ದ ಬಹಳ ಕಡಿಮೆಯಾಗಿ ಮಾಡುವ ಎರಡು ರೀತಿಯ ರೇಚಕಗಳನ್ನು ಗೇಡೆಯೇ ಮೊದಲು ರಚಿಸಿದ. ಅವುಗಳ ಹೆಸರು ವಿಸರಣರೇಚಕ (ಡಿಫ್ಯೂಷನ್ ಪಂಪ್, 1915) ಅಣುರೇಚಕ (1912). ಭಾರತದ ಎಚ್.ಪಿ.ವಾರನ್ ಸಹ (ಪರಮೇಶ್ವರನ್) ಒಂದೆರಡು ವಿಸರಣರೇಚಕಗಳನ್ನು ತಯಾರಿಸಿದ್ದಾರೆ.

ವಿಸರಣ ರೇಚಕದ ತತ್ತ್ವ ಬದಲಾಯಿಸಿ

ಸಹಾಯಕ ರೇಚಕ ಹೀರುವುದರಿಂದ ಪಾದರಸ ಅಥವಾ ಎಣ್ಣೆಯ ಆವಿಯ ಪ್ರವಾಹ ಒಂದು ಕೊಳವೆಯೊಳಗೆ ಏರ್ಪಡುತ್ತದೆ. ಈ ಕೊಳವೆಗೆ ಸೇರಿದ ಪಕ್ಕದ ಕೊಳವೆಯ ನಿರ್ಗಮದ್ವಾರ ಅದರೊಳಗಿನ ಅನಿಲದ ಮಾಧ್ಯಮ ಮುಕ್ತ ಪಥಕ್ಕೆ (ಮೀನ್ ಫ್ರೀ ಪಾತ್) ಸರಿಸುಮಾರಾಗಿ ಸಮವಾಗಿದ್ದರೆ ಆ ಕೊಳವೆಯಿಂದ ಅನಿಲದ ಅಣುಗಳು ಪಾದರಸದ (ಅಥವಾ ಎಣ್ಣೆಯ) ಆವಿಯೊಳಕ್ಕೆ ವಿಸರಣ ಹೊಂದುತ್ತವೆ. ಆ ಅನಿಲಗಳನ್ನು ಆವಿಯ ಪ್ರವಾಹ ಹೊತ್ತು ಹೊರಕ್ಕೆ ಬರುವಾಗ ಆವಿಯನ್ನು ಶೀತಗೊಳಿಸಿ ದ್ರವರೂಪಕ್ಕೆ ತಿರುಗಿಸಿ ಅನಿಲವನ್ನು ಸಹಾಯಕರೇಚಕದಿಂದ ಎಳೆದು ಹೊರದೂಡಲಾಗುತ್ತದೆ. ದ್ರವರೂಪಕ್ಕೆ ಬಂದ ಪಾದರಸ (ಎಣ್ಣೆ) ಮತ್ತೆ ಆವಿಯನ್ನು ಉತ್ಪಾದಿಸುವ ಸ್ಥಳಕ್ಕೆ ಹರಿಯುವಂತೆ ಮಾಡುತ್ತಾರೆ. ಪಾದರಸದ (ಎಣ್ಣೆಯ) ಅಣುಗಳು ಸ್ವಲ್ಪಮಟ್ಟಿಗೆ ಮಾತ್ರ ಪಕ್ಕದ ಕೊಳವೆಯ ಅನಿಲದೊಳಕ್ಕೆ ವಿಸರಣಗೊಳ್ಳುತ್ತವೆ.

ಅಣುರೇಚಕದ ತತ್ತ್ವ ಬದಲಾಯಿಸಿ

ನಮ್ಮ ಪಕ್ಕದಲ್ಲಿ ಮೋಟಾರು ಬಂಡಿ ವೇಗವಾಗಿ ಹೋದರೆ ಅದು ಹೊತ್ತು ತಂದ ಗಾಳಿ ನಮ್ಮ ಮೇಲೆ ಬೀಸುವುದಷ್ಟೆ? ಹೀಗೆ ಚಲಿಸುವ ವಸ್ತು ಅನಿಲವನ್ನು ಎಳೆದುಕೊಂಡು ಹೋಗಬಲ್ಲುದು. ಒಂದು ಬಗೆಯ ಘರ್ಷಣದಿಂದ ಚಲಿಸುವ ವಸ್ತುವಿಗೆ ಅನಿಲ ಹತ್ತಿಕೊಂಡಿರುತ್ತದೆ. ಇದರಿಂದ ವೇಗವಾಗಿ ತಿರುಗುತ್ತಿರುವ ವಸ್ತುವಿನ ಎರಡು ಪಕ್ಕಗಳಲ್ಲಿ ಸಂಮರ್ದಭೇದವುಂಟಾಗುತ್ತದೆ. ಸಾಮಾನ್ಯ ಸಂಮರ್ದದಲ್ಲಿ ಇದೇನೂ ಗಣ್ಯವಾಗಿರುವುದಿಲ್ಲ. ಆದರೆ ಸಂಮರ್ದ ಕಡಿಮೆಯಾಗಿ ಒಂದು ಅಣು ಇನ್ನೊಂದನ್ನು ತಾಟಿಸುವಷ್ಟರಲ್ಲಿ ಕ್ರಮಿಸುವ ಸರಾಸರಿ ದೂರ (ಮೀನ್ ಫ್ರೀ ಪಾತ್) ಹೆಚ್ಚಾಗಿ ಚಲಿಸುತ್ತಿರುವ ಕಡೆಗೆ ಒಯ್ಯಲ್ಪಡುತ್ತದೆ. ಇದು ಫಲಕಾರಿಯಾಗಬೇಕಾದರೆ ಸಂಮರ್ದ ಕಡಿಮೆಯಾಗಿದ್ದು ಭ್ರಮಣವೇಗ ಹೆಚ್ಚಾಗಿರಬೇಕು. ಗೇಡೆ ಇಂಥ ರೇಚಕವನ್ನು ಮೊದಲು ನಿರ್ಮಿಸಿದ.

ಅಲ್ಪಸಂಮರ್ದಮಾಪಕಗಳು (ಲೋಪ್ರೆಷರ್ ಗೇಜ್) ಬದಲಾಯಿಸಿ

ಅಲ್ಪಸಂಮರ್ದವನ್ನು ಅಳೆಯಲು ವಿಶೇಷ ಮತ್ತು ಸೂಕ್ಷ್ಮ ಉಪಕರಣಗಳು ಬೇಕು. ಇವುಗಳ ಹೆಸರು (ಆವರಣದಲ್ಲಿ ಸೂಚಿಸಿರುವ ಸಂಖ್ಯೆ ಮಿಲಿಮೀಟರಿನಲ್ಲಿ ಆಯಾ ಮಾಪಕ ಅಳೆಯಬಲ್ಲ ಸಂಮರ್ದ)-ಮ್ಯಕ್ಲಿಯಡ್ ಮಾಪಕ ( ), ಕ್ನುಡ್ಸೆನ್ ರಶ್ನಿಪುಂಜಮಾಪಕ (ರೇಡಿಯೋಮೀಟರ್) ( ), ಲ್ಯಂಗ್ಮ್ಯೂರ್ ಮತ್ತು ಡಷ್ಮನ್ರ ಮಾಪಕ ( ) ಪಿರಾನಿಯ ಮಾಪಕ ( ) ಅಯಾನೀಕರಣ ಮಾಪಕ ( ). ಇದಲ್ಲದೆ ರೇಡಿಯೋ ವಿಕಿರಣದಿಂದ ಬರುವ ರಶ್ಮಿಗಳನ್ನು ಬಳಸಿ ಅಲ್ಪಸಂಮರ್ದವನ್ನು ಅಳೆಯುವುದೂ ಪ್ರಚಾರದಲ್ಲಿ ಬಂದಿದೆ. ಅತ್ಯುಚ್ಚ ನಿರ್ವಾತ : ಎರಡನೆಯ ಮಹಾಸಮರಾನಂತರ ಅಲ್ಪಸಂಮರ್ದಗಳನ್ನು ಕನಿಷ್ಠ ಮಟ್ಟಕ್ಕಿಳಿಸುವ ಅಭ್ಯಾಸ ವಿಶೇಷವಾಗಿ ಬೆಳೆಯಿತು. ಸಂಮರ್ದ ಕಡಿಮೆಯಾದಂತೆ ಪ್ರದೇಶ ಹೆಚ್ಚು ಹೆಚ್ಚಾಗಿ ನಿರ್ವಾತಗೊಳ್ಳುವುದರಿಂದ ಈ ವಿಜ್ಞಾನದ ಶಾಖೆಯನ್ನು ಅತ್ಯುಚ್ಚ ನಿರ್ವಾತವಿಜ್ಞಾನ (ಅಲ್ಟ್ರಾ ಹೈ ವ್ಯಾಕ್ಯೂಂ) ಎಂದೇ ಹೆಸರಿಸಿದರು. ಪರಮಾಣುಗಳ ಬೀಜಗಳ ಅಧ್ಯಯನ ಮಾಡುತ್ತಿದ್ದ ಭೌತಶಾಸ್ತ್ರವಿಜ್ಞಾನಿಗಳಿಗೆ ಅತ್ಯುಚ್ಚ ನಿರ್ವಾತದ ವಿಷಯದಲ್ಲಿ ತೀವ್ರಾಸಕ್ತಿ ಮೂಡಿತು. ಇದರ ಪ್ರಕಾರ 10 ಮಿ ಮೀ ಗಿಂತ ಕಡಿಮೆಯಾಗಿರುವ ಸಂಮರ್ದಗಳನ್ನು ಪಡೆಯುವುದು, ಅವುಗಳನ್ನು ಅಳೆಯುವುದು ಮತ್ತು ಸಂಪರ್ಕ ಸೂಕ್ಷ್ಮೋಪಕರಣಗಳನ್ನು ರಚಿಸುವುದು ಎಂಬ ಸಮಸ್ಯೆಗಳು ತಲೆದೋರುವುವು. ಇಂಥ ಸೂಕ್ಷ್ಮೋಪಕರಣಗಳನ್ನು ಅತ್ಯುಚ್ಚ ನಿರ್ವಾತ ವ್ಯವಸ್ಥೆ (ಅಲ್ಟ್ರ ಹೈ ವ್ಯಾಕ್ಯೂಂ ಸಿಸ್ಟಮ್) ಎಂದು ಕರೆಯಲಾಗಿದೆ. ಅತ್ಯುಚ್ಚ ನಿರ್ವಾತ ಉಂಟುಮಾಡಬೇಕೆಂದಿರುವ ವಸ್ತುವಿನೊಳಗೆ (ವಿದ್ಯುತ್ತಿನ ಬಲ್ಬ್ ಇಂಥ ಒಂದು ವಸ್ತು) ಇರುವ ಅನಿಲದ ಸಕಲ ಅಣುಗಳನ್ನು ಹೊರತೆಗೆಯಬೇಕು. ಆಗ ಆ ಪ್ರದೇಶದ ಸಂಮರ್ದ ಇಳಿಯುವುದು. ಎಲ್ಲಿಯವರೆಗೆ ಇದು ಸಾಧ್ಯವಾದೀತು? ವಸ್ತುವಿನ ರಚನೆಯ ವೈಶಿಷ್ಟ್ಯದಿಂದ; ಹೊರವಾತಾವರಣದಿಂದ ಅಣುಗಳು ವಸ್ತುವಿನ ಗೋಡೆಗಳ ಮೂಲಕ ಒಳಗೆ ಒಸರುವುದರಿಂದ; ವಸ್ತುವಿನೊಳಗೆ ರಾಸಾಯನಿಕ ಕ್ರಿಯೆಯಿಂದ-ವಸ್ತುವಿನೊಳಗೆ ಉದ್ಭವಿಸುವ ಅನಿಲಾಣುಗಳನ್ನೂ ಪರಿಶೀಲನೆಗೆ ತೆಗೆದುಕೊಳ್ಳಲೇಬೇಕು. ಆದ್ದರಿಂದ ಯಾವುದೇ ಉಪಕರಣದಿಂದ ಪಡೆದ ಅತ್ಯುಚ್ಚ ನಿರ್ವಾತ ಎನ್ನುವುದು ಆ ವಸ್ತುವಿನೊಳಗೆ ಉದ್ಭವಿಸುವ ಅನಿಲಾಣುಗಳಿಗೂ ಹೊರತೆಗೆದ ಅನಿಲಾಣುಗಳಿಗೂ ನಡುವೆ ಏರ್ಪಟ್ಟ ಸಮತೋಲಸ್ಥಿತಿ. ಹೀಗೆ ಒಳಗೆ ಉದ್ಭವಿಸುವ ಅನಿಲಾಣುಗಳ ಸಂಖ್ಯೆಯನ್ನು ಅತಿಕನಿಷ್ಠ ಬೆಲೆಗೆ ಇಳಿಸುವುದೇ ಇಂಥ ಪ್ರಯೋಗದಲ್ಲಿ ಬಲು ಮುಖ್ಯ ಮತ್ತು ಜಟಿಲ ಸಮಸ್ಯೆ. ಈಚೆಗೆ (1966) ವಾಂಡರ್ಸ್ಲೈಸ್ ಎಂಬಾತ ಜನರಲ್ ಎಲೆಕ್ಟ್ರಿಕ್ ಸಂಶೋಧನಾಗಾರದಲ್ಲಿ   ಮಿಮೀ ನಿರ್ವಾತ ಸಂಮರ್ದ ಪಡೆದಿದ್ದಾನೆ (ಕೋಣೆ ಉಷ್ಣತೆಯಲ್ಲಿ).

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: