ಅನಂತನಾಥ ಸ್ವಾಮಿ ಬಸದಿ,ನಾರಾವಿ

ಸ್ಥಳ ಬದಲಾಯಿಸಿ

ಈ ಜಿನ ಮಂದಿರವು ನಾರಾವಿಯ ಶ್ರೀ ಧರ್ಮನಾಥ ಸ್ವಾಮಿ ಬಸದಿಯ ಎದುರಿನ ಗೋಪುರದ ಪಶ್ಚಿಮ ಭಾಗದಲ್ಲಿದೆ.

ಇತಿಹಾಸ ಬದಲಾಯಿಸಿ

ಹಿಂದೆ ಶ್ರೀ ಅನಂತನಾಥ ಸ್ವಾಮಿಯನ್ನು ಕೆಳಗೆ ಸ್ವರ್ಣಾ ನದಿಯ ದಡದಲ್ಲಿದ್ದ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಮೇಗಿನ ನೆಲೆಯಲ್ಲಿ ಪೂಜಿಸಲಾಗುತ್ತಿತ್ತು. ೧೯೯೬ನೇ ಇಸವಿಯಲ್ಲಿ ಈ ಸಮಗ್ರ ಬಸದಿಯನ್ನು ಆ ಸ್ವರ್ಣಾ ನದಿಯ ನೆರೆ ನೀರಿನ ಬಾಧೆಯಿಂದ ಸುರಕ್ಷಿತ ಸ್ಥಳವಾದ ಶ್ರೀ ಧರ್ಮನಾಥ ಸ್ವಾಮಿ ಬಸದಿಯ ಪರಿಸರಕ್ಕೆ ಸ್ಥಳಾಂತರಿಸಿ ಈ ನೂತನ ಬಸದಿಯಲ್ಲಿ ಶ್ರೀ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಪೂಜಿಸಲು ಪ್ರಾರಂಭಿಸಲಾಯಿತು. ಆ ಸಮಯ ಶ್ರೀ ಧರ್ಮನಾಥ ಸ್ವಾಮಿಗೆ ನಡೆಯುತ್ತಿದ್ದ ಪಂಚಕಲ್ಯಾಣ ಸಂದರ್ಭದಲ್ಲಿ ಈ ಸ್ವಾಮಿಗೂ, ಇಲ್ಲಿಯ ಶ್ರೀ ಶಾಂತಿನಾಥ ಸ್ವಾಮಿಗೂ ಪಂಚಕಲ್ಯಾಣೋತ್ಸವವನ್ನು ನಡೆಸಲಾಯಿತು. [೧]

ವಿನ್ಯಾಸ ಬದಲಾಯಿಸಿ

ಈ ಬಸದಿಗೆ ಪ್ರವೇಶ ದ್ವಾರದಿಂದ ಮುಂದಕ್ಕೆ ಹೋಗುತ್ತಿದ್ದಂತೆ ಘಂಟಾ ಮಂಟಪ, ಗಂಧಕುಟಿ ಸಹಿತವಾದ ತೀರ್ಥಂಕರ ಮಂಟಪ, ಸುಕನಾಸಿ ಮತ್ತು ಗರ್ಭಗೃಹಗಳಿವೆ. ಇವೆಲ್ಲವುಗಳಿಗೆ ಪ್ರದಕ್ಷಿಣೆ ಬರಲು ಪ್ರದಕ್ಷಿಣಾ ಪಥವೂ ಇದೆ. ಇದನ್ನು ಶ್ರಾವಕ ಬಂಧುಗಳು ಪ್ರದಕ್ಷಿಣೆ ಬರಲು ಉಪಯೋಗಿಸಬಹುದು. ಗರ್ಭಗೃಹದಲ್ಲಿ ಪೀಠದ ಮೇಲೆ ಶ್ರೀ ಪದ್ಮಾವತಿ ದೇವಿಯ ಸುಂದರ ಪ್ರಭಾವಲಯದಿಂದ ರಂಜಿಸುವ ಲಲಿತಾಸನದಲ್ಲಿ ಕುಳಿತಿರುವ ಮೂರ್ತಿಯಿದೆ. ಅದಕ್ಕಿಂತ ಮೇಲೆ ಪೀಠದ ಮೇಲೆ ಮಕರ ತೋರಣದ ಲಕ್ಷಣದಿಂದ ಅಲಂಕೃತವಾದ ಪ್ರಭಾವಳಿಯನ್ನು ಹೊಂದಿರುವ ಸುಮಾರು ಒಂದು ಅಡಿ ಎತ್ತರದ ಕರಿಶಿಲೆಯ ಖಡ್ಗಾಸನ ಭಂಗಿಯ ಶ್ರೀ ಅನಂತನಾಥ ಸ್ವಾಮಿಯ ಬಿಂಬವಿದೆ. ಕೆಳಗೆ ಶೃತ ಮತ್ತು ಗಣಧರ ವಲಯಗಳಿವೆ. ಬಸದಿಯ ದ್ವಾರದ ಮೇಲೆ ಶ್ರೀ ಅನಂತನಾಥಾಯ ನಮಃ, ಶ್ರೀ ಪದ್ಮಾವತಿ ದೇವೈ ನಮಃ ಎಂದು ಬರೆಯಲಾಗಿದೆ. ಎದುರಿಗೆ ಬಾಗಿಲ ಬದಿಗಳಲ್ಲಿ ದ್ವಾರಪಾಲಕರ ವರ್ಣ ಚಿತ್ರಗಳಿವೆ.

ಉಲ್ಲೇಖಗಳು ಬದಲಾಯಿಸಿ

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್. p. ೨೦೬.