ಅನಂತನಾಥಸ್ವಾಮಿ ಬಸದಿ, ಅರ್ಕುಳ ಬೀಡು

ಅನಂತನಾಥಸ್ವಾಮಿ ಬಸದಿ, ಅರ್ಕುಳ ಬೀಡು

ಸ್ಥಳ ಬದಲಾಯಿಸಿ

ಮಂಗಳೂರು ತಾಲೂಕು ಅರ್ಕುಳ ಗ್ರಾಮದ ಅರ್ಕುಳ ಬೀಡಿನ ಸಮೀಪ ಈ ಬಸದಿಯಿದೆ.

ವಿಗ್ರಹಗಳು ಬದಲಾಯಿಸಿ

ಬಸದಿಯಲ್ಲಿ ಶ್ರೀ ಪದ್ಮಾವತೀ ದೇವಿಯ ವಿಗ್ರಹದಂತೆ ಶ್ರೀ ಪಾಶ್ರ್ವನಾಥ ತೀರ್ಥಂಕರರ, ಬ್ರಹ್ಮದೇವರ, ಬಾಹುಬಲಿಯ ಮೂರ್ತಿಗಳೂ ಇವೆ. ಅರ್ಕುಳ ಬಸದಿಯ ಹಿಂಬದಿಯಲ್ಲಿ ಎರಡು ಪಾರಿಜಾತದ ಮರಗಳಿವೆ. ಗಂಧಕುಟಿಯು ತೀರ್ಥಂಕರ ಮಂಟಪದ ಮುಂದೆ ಇರುವ ಇನ್ನೊಂದು ಮಂಟಪದಲ್ಲಿ ಇದೆ. ಗಂಧಕುಟಿಯಲ್ಲಿ ಗಣಧರರ ಪಾದ, ಶ್ರುತ, ಬ್ರಹ್ಮದೇವರು, ಪಾಶ್ರ್ವನಾಥ ಸ್ವಾಮಿ, ಬಾಹುಬಲಿ ಸ್ವಾಮಿ ಹಾಗೂ ಪದ್ಮಾವತೀ ದೇವಿ ಮೂರ್ತಿಗಳಿವೆ. ಅಮ್ಮನವರ ಮೂರ್ತಿ ಪೂರ್ವಕ್ಕೆ ಮುಖ ಮಾಡಿದೆ ಹಾಗೂ ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪ ಇದೆ. ಅರ್ಕುಳ ಬಸದಿಯ ಮೂಲಸ್ವಾಮಿ ಶ್ರೀ ಅನಂತನಾಥ ತೀರ್ಥಂಕರರ ಮೂರ್ತಿಯು ಶಿಲೆಯದ್ದಾಗಿದೆ ಹಾಗೂ ಖಡ್ಗಾಸನದಲ್ಲಿದೆ. ಸುಮಾರು ಮೂರು ಅಡಿ ಎತ್ತರವಿದ್ದು, ಸುತ್ತಲೂ ಪಂಚಲೋಹದ ಪ್ರಭಾವಳಿಯಿದೆ. ಮೂಲಸ್ವಾಮಿ ಶ್ರೀ ಪಾಶ್ರ್ವನಾಥ ಸ್ವಾಮಿ. ಇದರೊಂದಿಗೆ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನ ಇದೆ. [೧]

ಆಚರಣೆ ಬದಲಾಯಿಸಿ

ನಿತ್ಯ ಪೂಜೆ ನಡೆಯುತ್ತದೆ. ಮಾತೆ ಪದ್ಮಾವತೀ ದೇವಿ ಮೂರ್ತಿಗೆ ನಿತ್ಯಪೂಜೆ ನಡೆಯುತ್ತದೆ. ದೇವಿಗೆ ಸೀರೆ ಉಡಿಸಿ, ಬಳೆಗಳನ್ನು ಹಾಕಿ, ಹೂವಿನಿಂದ ಅಲಂಕಾರ ಮಾಡಿ ನಿತ್ಯಪೂಜೆ ಮಾಡಲಾಗುತ್ತಿದೆ. ಅರ್ಕುಳ ಬಸದಿಯಲ್ಲಿ ಅಮ್ಮನವರ ಸನ್ನಿಧಾನದಲ್ಲಿ ಹೂ ಹಾಕಿ ನೋಡುವ ಪದ್ಧತಿ ಇದೆ. ಬಹಳ ಸಂದರ್ಭಗಳಲ್ಲಿ ಹೂವಿನ ಅಪ್ಪಣೆಯಾಗುವುದನ್ನೇ ಪ್ರಸಾದ ಅಥವಾ ಒಪ್ಪಿಗೆ ಎಂದು ಭಾವಿಸಲಾಗುತ್ತದೆ. ದಿನವೂ ಮೂಲಮೂರ್ತಿಗೆ ಕ್ಷೀರಾಭಿಷೇಕ, ಪೂಜೆಗಳು ನಡೆಯುತ್ತವೆ. ಸಂಜೆಯ ಪೂಜೆ ಕೂಡಾ ನಡೆಯುತ್ತದೆ. ಎಲ್ಲಾ ಹಬ್ಬಗಳ ಸಂದರ್ಭದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ನವರಾತ್ರಿ ಸಂದರ್ಭದಲ್ಲಿ ಇತರ ಜನರಿಂದಲೂ ಪೂಜೆ ನಡೆಯುತ್ತದೆ. ಬಸದಿಯ ಶ್ರೀ ಪದ್ಮಾವತೀ ದೇವಿಗೆ ವಿಶೇಷ ಹರಿಕೆಯ ಪೂಜೆಗಳನ್ನು ಹೇಳಿ, ಕಂಕಣ ಭಾಗ್ಯಕ್ಕಾಗಿ ವಿಶೇಷ ಹರಿಕೆಗಳನ್ನು ಜೈನರು ಹಾಗೂ ಜೈನೇತರರೂ ಹೇಳುತ್ತಾರೆ. ಇಲ್ಲಿ ಅನಂತನ ನೋಂಪಿ, ರಕ್ಷಾವಳೀ ಪೂಜೆ, ನವರಾತ್ರಿ ಪೂಜೆ, ಶ್ರಾವಣ ಶುಕ್ರವಾರಗಳ ವಿಶೇಷ ಪೂಜೆ ನಡೆಯುತ್ತದೆ. ಸ್ವಾಮಿ ಪ್ರತಿಷ್ಠೆ ಹಾಗೂ ಅಮ್ಮನವರ ಪ್ರತಿಷ್ಠೆಯ ದಿನ ಪ್ರತಿವರ್ಷ ನಡೆಯುತ್ತದೆ. ಬಸದಿಯ ಬಲಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿಯಿದೆ. ಅಷ್ಟದಿಕ್ಪಾಲಕರ ಕಲ್ಲುಗಳಿದ್ದು, ವಿಶೇಷ ಸಂದರ್ಭಗಳಲ್ಲಿ ಇದಕ್ಕೂ ಪೂಜೆ ನಡೆಯುತ್ತದೆ. ದೈವಗಳ ಚೆಂಡಿನ ಗದ್ದೆ ಬಸದಿಯ ಮುಂಭಾಗದಲ್ಲಿದೆ. ನೇಮ-ಉತ್ಸವಗಳು ಆರಂಭವಾಗುವುದು, ಮನೆ ಬಸದಿ ಹಾಗೂ ಅರ್ಕುಳ ಬಸದಿಗಳಲ್ಲಿ ವಿಶೇಷ ಪೂಜೆಯ ಮೂಲಕವೇ. ಬೀಡಿಗೆ, ಬಸದಿಗೆ ಹಾಗೂ ದೈವಸ್ಥಾನಗಳಿಗೆ ಅವಿನಾಭಾವ ಹಾಗೂ ಪಾರಂಪಾರಿಕ ನೇರ ಸಂಬಂಧ ಇರುವುದನ್ನು ಗಮನಿಸಬಹುದು.

ಉಲ್ಲೇಖಗಳು ಬದಲಾಯಿಸಿ

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರ ದರ್ಶನ (೧ ed.). ಉಜಿರೆ: ಮಂಜುಶ್ರೀ ಪಿಂಟರ್ಸ್. p. ೨೮೭-೨೮೮.