ಅಕ್ಕಿ, ಟಿ.ಪಿ ಬದಲಾಯಿಸಿ

1908-. ಕರ್ನಾಟಕದ ಹೆಸರಾಂತ ಕಲಾವಿದರು. ಇಂದಿನ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ 1908 ಡಿಸೆಂಬರ್ 31ರಂದು ಜನಿಸಿದರು. ಉತ್ತಮ ಕಲಾಸಂಸ್ಕಾರದ ಪರಿಸರದಲ್ಲಿ ಬೆಳೆದ ಇವರು ವಿದ್ಯಾರ್ಥಿದೆಸೆಯಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ತಳೆದರು. ಮುಂಬಯಿಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್ ಕಾಲೇಜಿನಲ್ಲಿ ಮಾಸ್ಟರ್ ಪದವಿ ಗಳಿಸಿದರು. ಮುಂಬಯಿ, ನವಸಾರಿ, ಫಟಿಯಾಳ, ಬೆಂಗಳೂರು ಮೊದಲಾದ ನಗರಗಳಲ್ಲಿ ನಡೆದ ಚಿತ್ರಕಲಾ ಪ್ರದರ್ಶನಗಳಲ್ಲಿ ಪಾಲ್ಗೊಂಡು ಜನಮೆಚ್ಚುಗೆ ಗಳಿಸಿದರು. ವಿಜಯನಾಟ್ಯ ಸಂಸ್ಥೆ ಮತ್ತು ವಿಜಯ ಕಲಾ ಮಂದಿರವನ್ನೂ ಸ್ಥಾಪಿಸಿ (1947) ಪ್ರತಿವರ್ಷ ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಹಲವಾರು ಕಲಾಸಂಸ್ಥೆಗಳಲ್ಲಿ ಸಲಹಾ ಸಮಿತಿ ಸದಸ್ಯರಾಗಿ, ಅಧ್ಯಕ್ಷರಾಗಿ, ಉಚ್ಚಕಲಾಪರೀಕ್ಷೆಗಳ ಪರೀಕ್ಷಕರಾಗಿ, ನಿಯಂತ್ರಕರಾಗಿ, ಸಲಹೆಗಾರರಾಗಿ, ರಾಜ್ಯ ಮತ್ತು ಕೇಂದ್ರ ಲಲಿತಕಲಾ ಅಕಾಡೆಮಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ (1967). ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಕ್ಕಳ ಕಲಾ ಪ್ರದರ್ಶನದಲ್ಲಿ ಮತ್ತು ಕೋಲ್ಕತದಲ್ಲಿ ನಡೆದ ಅಖಿಲಭಾರತ ಕಲಾವಿದರ ಸಮ್ಮೇಳನದಲ್ಲಿ ಪ್ರತಿನಿದಿsಯಾಗಿ ಭಾಗವಹಿಸಿದ್ದರು (1967). ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆೆ (1981-84).