ಶಿವ ಮತ್ತು ಪಾರ್ವತಿಯ ಮದುವೆಯ ಸಂಭ್ರಮವನ್ನು ಸೀತಲಸಸ್ತಿ ಎಂಬ ಹಬ್ಬದ ಮೂಲಕ ಹಲವಾರು ವರ್ಷಗಳಿಂದ ಇಂದಿನವರೆಗೂ ಆಚರಿಸಿಕೊಂಡು ಬರಲಾಗುತ್ತಿದೆ. ಇದು ಆರಂಭವಾದ ದಿನ ಇಂದಿಗೂ ಯಾರಿಗೂ ಸರಿಯಾಗಿ ತಿಳಿದಿಲ್ಲ, ಆದರೆ ಮುನ್ನೂರು ವರ್ಷಗಳಿಂದ ಆಚರಿಸಲಾಗುತ್ತಿರುವ ದಾಖಲೆ ಸಿಗುತ್ತದೆ. ಇದನ್ನು ಹಬ್ಬದ ರೂಪದಲ್ಲಿ ಆಚರಿಸಲಾಗುತ್ತಿದೆ. ವಿಭಿನ್ನ ರೀತಿಯ ಜನರು ಮತ್ತು ಕಲಾವಿದರು ಈ ಹಬ್ಬದಲ್ಲಿ ಪಾಲ್ಗೊಂಡು ಹಬ್ಬವನ್ನು ಹೆಚ್ಚು ಸುಂದರವಾಗಿಯೂ, ರಂಗುರಂಗಾಗಿ ಕಳೆಯಾಗಿರುವಂತೆ ಮಾಡುತ್ತಾರೆ. ಬೇಸಿಗೆಯ ದಗೆಯಿಂದ ರಕ್ಷಿಸುವಂತೆ ಮಳೆ ದೇವನನ್ನು ಪ್ರಾರ್ಥಿಸುವುದಕ್ಕಾಗಿ ಪ್ರತಿವರ್ಷದ ಬೇಸಿಗೆಯ ಕೊನೆಯಲ್ಲಿ (ಜೇಷ್ಠ ಮಾಸದ ಆರನೇಯ ದಿನ), ಆಚರಿಸಲಾಗುತ್ತದೆ. ಹಬ್ಬದ ಸಮಯದಲ್ಲಿ ಸಂಬಲ್‌ಪುರ್ ಅಕ್ಕಪಕ್ಕದ ರಾಜ್ಯಗಳ ಮತ್ತು ಹೊರದೇಶದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರ:Sitalsasthi.jpg

ಐತಿಹ್ಯ ಬದಲಾಯಿಸಿ

ಶಿವಪುರಾಣದ ಪ್ರಕಾರ ಸೀತಲಸಸ್ತಿ ಹಬ್ಬದ ಆಚರಣೆಯು ಗೌರಿ ಮತ್ತು ಶಂಕರನ ಮದುವೆಯ ಸಂಭ್ರಮವಾಗಿದೆ. ತಾರಕಾಸುರ ಎಲ್ಲ ದೇವತೆಗಳಿಗೂ ಮತ್ತು (ಸ್ವರ್ಗ, ಮೃತ್ಯ ಮತ್ತು ಪಾತಾಳ) ಲೋಕದವರಿಗೂ ಭೀತಿಯನ್ನು ಹುಟ್ಟಿಸಿ ದುಷ್ಟನಾಗಿ ಮೆರೆಯುತ್ತಿದ್ದ ಇವನ ತೊಂದರೆಯನ್ನು ತಾಳದಾದ ದೇವತೆಗಳು ಪರಿಹಾರಕ್ಕಾಗಿ ವಿಷ್ಣುವನ್ನು ಮೊರೆ ಹೋದರು. ವಿಷ್ಣು ಏನನ್ನೂ ಮಾಡಲು ಸಾಧ್ಯವಿರಲಿಲ್ಲ, ಏಕೆಂದರೆ ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಸಾವು ಬರಲಿ ಅಂದು ಬ್ರಹ್ಮನಲ್ಲಿ ವರವನ್ನು ಪಡೆದುಕೊಂಡಿದ್ದ. ಶಿವನ ಹೆಂಡತಿ ಸತಿ (ದಾಕ್ಷಾಯಣಿ) ಮರಣ ಹೊಂದಿದ್ದರಿಂದಾಗಿ ತನ್ನ ಸಾವು ಸಾಧ್ಯವಿಲ್ಲ ಎಂದು ತಾರಕಾಸುರ ಚೆನ್ನಾಗಿ ತಿಳಿದಿದ್ದ, ಪತ್ನಿ ವಿಯೋಗದಿಂದ ಶಿವನು ಜಗತ್ತಿನಿಂದ ವಿಮುಖನಾಗಿ ನಿರ್ಜನ ಪ್ರದೇಶದಲ್ಲಿ ಅಲೆದಾಡುತ್ತಾ ಕಠಿಣವಾದ ಜೀವನವನ್ನು ನಡೆಸುತ್ತಿದ್ದು, ಮಗನನ್ನು ಪಡೆಯಲು ಸಾಧ್ಯವಿರಲಿಲ್ಲ; ಅಲ್ಲದೇ ಶಿವನು ಆಳವಾದ ಧ್ಯಾನದಲ್ಲಿದ್ದ. ಶಕ್ತಿಯನ್ನು ಪಾರ್ವತಿಯಾಗಿ ಹುಟ್ಟಿಬರಲು ವಿನಂತಿಸಿಕೊಳ್ಳುವಂತೆ ವಿಷ್ಣು ದೇವತೆಗಳಿಗೆ ಸಲಹೆ ನೀಡಿದನು. ದೇವತೆಗಳ ವಿನಂತಿಯಿಂದಾಗಿ ಶಕ್ತಿ ಹಿಮವಂತನ ಮಗಳಾಗಿ ಸತಿಯಾಗಿ(ಪಾರ್ವತಿ) ಪುನರ್ಜನ್ಮ ಪಡೆದಳು ಮತ್ತು ಅತ್ಯಂತ ಲಾವಣ್ಯವತಿಯಗಿ ಬೆಳೆಯತೊಡಗಿದಳು. ನಾರದನು ಪಾರ್ವತಿಗೆ ಶಿವನ ಕುರಿತಾಗಿ ಹಲವಾರು ಕಥೆಗಳನ್ನು ಹೇಳಿ ಅವಳು ಶಿವನನ್ನು ಮದುವೆಯಾಗುವಂತೆ ಮನವೊಲಿಸುತ್ತಾನೆ. ಪಾರ್ವತಿ ಧ್ಯಾನದಲ್ಲಿ ನಿರತಳಾಗುತ್ತಾಳೆ, ಆದರೆ ಹಲವಾರು ವರ್ಷಗಳು ಕಳೆದರೂ ಶಿವನ ಧ್ಯಾನವನ್ನು ಭಂಗಗೊಳಿಸಲು ಸಾಧ್ಯವಾಗುವುದಿಲ್ಲ. ಮತ್ತೆ ದೇವತೆಗಳು ಈ ಸಮಸ್ಯೆಯನ್ನು ಪರಿಹರಿಸಲು ವಿಷ್ಣುವನ್ನು ಮೊರೆಹೋಗುತ್ತಾರೆ. ವಿಷ್ಣುವಿನ ಸಲಹೆಯ ಮೇರೆಗೆ ಕಾಮದೇವನು ತನ್ನ ಕಾಮ ಬಾಣವನ್ನು ಶಿವನ ಮೇಲೆ ಪ್ರಯೋಗಿಸುತ್ತಾನೆ. ಇದರಿಂದಾಗಿ ಶಿವನು ಎಚ್ಚರಗೊಂಡು ತನ್ನ ಮೂರನೇಯ ಕಣ್ಣನ್ನು ತೆರೆದು ಶಿಕ್ಷೆಯ ರೂಪದಲ್ಲಿ ಕಾಮನನ್ನು ಸುಟ್ಟು ಹಾಕುತ್ತಾನೆ; ಆದುದರಿಂದ ಕಾಮದೇವನು ಅನಂಗನ ರೂಪದಲ್ಲಿ ಬದಲಾಗುತ್ತಾನೆ. ಇದರ ಪರಿಣಾಮವಾಗಿ ಪಾರ್ವತಿಯ ಧ್ಯಾನ ಈಡೇರುತ್ತದೆ. ಶಿವನು ಪಾರ್ವತಿಯನ್ನು ಮದುವೆಯಾಗುವುದಕ್ಕಿಂತ ಮೊದಲು ಅವಳು ತನ್ನನ್ನು ಎಷ್ಟು ಪ್ರೀತಿಸುತ್ತಾಳೆ ಎಂದು ಪರೀಕ್ಷಿಸಲು ಬಯಸುತ್ತಾನೆ. ತಾನು ವಟು ಬ್ರಾಹ್ಮಣನಾಗಿ ಪುನರ್ಜನ್ಮ ತಳೆದು ಪಾರ್ವತಿಯನ್ನು ನೋಡಿ ಹೀಗೆ ಹೇಳುತ್ತಾನೆ, ಓ ಪಾರ್ವತಿ, ನೀನು ಯೌವನವತಿ ಮತ್ತು ಸುಂದರವಾಗಿದ್ದಿಯಾ, ಯಾಕೆ ಸ್ಮಶಾನದಲ್ಲಿ ವಾಸಿಸುವ ಮತ್ತು ಗಿಡದ ತೊಗಟೆಯನ್ನು ಸುತ್ತಿಕೊಂಡು ಹಾವನ್ನು ಆಭರಣವಾಗಿ ಧರಿಸಿಕೊಂಡ ಅವನನ್ನು ಮದುವೆಯಾಗಲು ಆರಿಸಿಕೊಂಡೆ. ನೀನು ಮದುವೆಯಾಗಲು ಬಯಸಿದ ಮಹೇಶ್ವರನ ಬಗ್ಗೆ ನನಗೆ ತಿಳಿದಿದೆ ಅವನು ಅರೆ ಬೆತ್ತಲಾಗಿರುತ್ತಾನೆ, ನೋಡಲು ಕುರೂಪಿಯಾಗಿದ್ದಾನೆ, ಅವನ ಕುಲ ಗೋತ್ರದ ಬಗ್ಗೆ ಯಾರಿಗೂ ತಿಳಿದಿಲ್ಲ ಮತ್ತು ನೀನು ಹೇಗೆ ಆ ಅಲೆಮಾರಿಯ ಜೊತೆಗೆ ಸಂತೋಷವಾಗಿರುವೆ. ಎಂಬಂತಹ ವಟು ಬ್ರಾಹ್ಮಣನ ಮಾತನ್ನು ಕೇಳಿ ಪಾರ್ವತಿಯು ಕೋಪಗೊಂಡಳು ಮತ್ತು ಹೀಗೆ ಹೇಳಿದಳು, ಓ ಬ್ರಾಹ್ಮಣ, ಹಲವಾರು ಶಾಸ್ತ್ರಗಳನ್ನು ಓದಿದ ನಂತರವೂ ನೀನು ಶಿವನ ಬಗ್ಗೆ ಏನನ್ನು ತಿಳಿಯದ ಅಜ್ಞಾನಿಯಾಗಿದ್ದೀಯ, ಹುಚ್ಚ ನೀನು! ಅವನು ಮುದುಕನಾಗಿರಲಿ ಅಥವಾ ಯುವಕನಾಗಿರಲಿ, ಕುರೂಪಿಯಾಗಿರಲಿ ಅಥವಾ ಸುಂದರವಾಗಿರಲಿ, ನನಗೇನೂ ಆದರಿಂದ ತೊಂದರೆಯಿಲ್ಲ, ನಾನು ಅವನ ಸುಂದರ ರೂಪವನ್ನು ನೋಡಿ ಮದುವೆಯಾಗುತ್ತಿಲ್ಲ, ಅವನಲ್ಲಿರುವ ಜ್ಞಾನದಿಂದಾಗಿ ಮೋಹಿತಳಾಗಿದ್ದೇನೆ. ಅವನನ್ನು ಬಿಟ್ಟು ನಾನು ಯಾರನ್ನೂ ಮದುವೆಯಾಗುವುದಿಲ್ಲ. ಈ ಪರೀಕ್ಷೆಗಳಿಂದ ತೃಪ್ತನಾದ ಶಿವನು ತನ್ನ ದೈವೀ ಸ್ವರೂಪದಲ್ಲಿ ಕಾಣಿಸಿಕೊಂಡನು. ಜೇಷ್ಠ ಶುಕ್ಲ ಪಕ್ಷ ಪಂಚಮಿಯ ದಿನದಂದು ಅವರು ಮದುವೆಯಾದರು.

ಐತಿಹಾಸಿಕ ಆಧಾರಗಳು ಬದಲಾಯಿಸಿ

ಚವ್ಹಾಣ್‌ ಸಾಮ್ರಾಜ್ಯದ(೧೬೯೫–೧೭೬೬) ರಾಜ ಛತ್ರ ಸಾಯಿಯ ಮಗನಾದ ಅಜಿತ್ ಸಿಂಗ್ ಸಂಬಲ್‌ಪುರವನ್ನು ಆಳುತಿದ್ದನು. ಈತನು ವೈಷ್ಣವ ಪಂಥದಲ್ಲಿ ನಂಬಿಕೆ ಮತ್ತು ನಿಷ್ಠೆಯನ್ನು ಹೊಂದಿದ್ದು ಹೆಚ್ಚುವರಿ ಸಮಯವನ್ನು ಪುರಿಯಲ್ಲಿಯೆ ಕಳೆದನು. ಸಂಬಲ್‌ಪುರವನ್ನು ಧಾರ್ಮಿಕ ಕ್ಷೇತ್ರವನ್ನಾಗಿ ಮಾಡಲು ಬಯಸಿದನು. ಪ್ರಾಚೀನ ಕಾಲದಲ್ಲಿ ಶಿವನನ್ನು ಆರಾಧಿಸುತ್ತಿದ್ದ ಬ್ರಾಹ್ಮಣರು ಕೋಶಲದಲ್ಲಿರಲಿಲ್ಲ. ರಾಜ ಅಜಿತ್ ಸಿಂಗ್ ಪುರಿಯ ಕೆಲವು ಬ್ರಾಹ್ಮಣ ಕುಟುಂಬಗಳಿಗೆ ಅಜಿತ್‌ಪುರ್ ಸಸಾನ್‌ಗೆ(ಇಂದಿನ ಸಸಾನ್) ಬಂದು ನೆಲೆಸುವಂತೆ ವಿನಂತಿಸಿಕೊಂಡನು. ಇದು ಅ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಮತ್ತು ಇತರೆ ಬ್ರಾಹ್ಮಣ ಮತ್ತು ಬೇರೆ ಜಾತಿಯ ಜನರಲ್ಲಿ ಅಸಂತೋಷವನ್ನುಂಟು ಮಾಡಿತು. ಬುಡಕಟ್ಟು ಮತ್ತು ಇತರೆ ಜನಾಂಗದ ಜನರಲ್ಲಿ ಸಾಮರಸ್ಯವನ್ನುಂಟು ಮಾಡಲು ಆ ಪ್ರದೇಶದಲ್ಲಿ ಹಲವಾರು ದೇವಸ್ಥಾನಗಳನ್ನು ನಿರ್ಮಿಸಿದನು. ಪ್ರಾಚೀನ ಕಾಲದಲ್ಲಿ ಸಂಬಲ್‌ಪುರ್ ಶಕ್ತಿ ಪೀಠವಾಗಿ ಪ್ರಸಿದ್ಧಿಯಾಗಿತ್ತು ಮತ್ತು ಶಿವ ಮತ್ತು ಶಕ್ತಿಯನ್ನು ಜೊತೆಯಾಗಿ ಪೂಜೆ ಮಾಡಲಾಗುತ್ತಿತ್ತು ಎಂದು ಅಜಿತ್ ಸಿಂಗ್ ತಿಳಿದಿದ್ದನು. ಈ ಪ್ರದೇಶದಲ್ಲಿ ದೇವಸ್ಥಾನಗಳನ್ನು ನಿರ್ಮಿಸಿ ಅಷ್ಟ ಶಂಭು ದೇವಸ್ಥಾನಗಳಿಗೆ ಉದಾರವಾಗಿ ದೇಣಿಗೆಯನ್ನು ನೀಡಬೇಕೆಂದು ದೇವನ್ ದಕ್ಷಿಣ ರೇ ಸೂಚಿಸಿದನು. ಈಗಾಗಲೇ ರಾಜ ಬಲಿಯಾರ್ ಸಿಂಗ್ ಹುಮಾ ಎಂಬ ಸ್ಥಳದಲ್ಲಿ ’ಅಷ್ಟ ಶಂಭು’ ದೇವತೆಗಳ ಮುಖ್ಯಸ್ಥನಾದ ವಿಮಲೇಶ್ವರನಿಗೆ ಮಂದಿರ ನಿರ್ಮಾಣ ಮಾಡಿದ್ದನು; ನಂತರ ಅಜಿತ್ ಸಿಂಗ್ ಸಂಬುಗಳಿಗಾಗಿ ಇತರೆ ಏಳು ದೇವಸ್ಥಾನಗಳನ್ನು ನಿರ್ಮಿಸಿದನು. (ಅಂಬಬೋನಾದ ಕೇದಾರ್‌ನಾಥ್, ದಿಯೊಗಾಂವ್‌ದ ವಿಶ್ವನಾಥ, ಗೌಸಮಾದ ಬಲುಂಕೇಶ್ವರ, ಮನೇಶ್ವರದ ಮಾನ್ದಾತಾ, ಸೋರ್ನದ ಸ್ವಪ್ನೇಶ್ವರ, ಸೊರಂದಾದ ಬಿಸ್ವೇಶ್ವರ ಮತ್ತು ನಿಜ್ಜಿಯ ನೀಲಕಂಠೇಶ್ವರ). ಪುರಿಯ ಪ್ರಸಿದ್ಧ ರಥ ಯಾತ್ರೆಯಂತೆ ಅಜಿತ್ ಸಿಂಗ್ ಸಂಬಲ್‌ಪುರದಲ್ಲಿ ಜೇಷ್ಠ ಶುಕ್ಲ ಪಕ್ಷ ಪಂಚಮಿಯಂದು ಹರ ಪಾರ್ವತಿಯರ ಮದುವೆಯನ್ನು ಸೀತಲಸಸ್ತಿ ಜಾತ್ರಾ ಅಥವಾ ಯಾತ್ರೆಯಾಗಿ ಪ್ರಾರಂಭಿಸಿದನು. ದೇವ ಮತ್ತು ದೇವಿಯ ಮದುವೆಯು ಮಾನವರ ಮದುವೆಯಂತೆ ನಡೆಯುತ್ತದೆ. ತಾಲ್ ಉಥಾ(ಆರಂಭ), ಪತಾರ್‌ಪೆಂಡಿ (ನಿರ್ಬಂಧ), ಗ್ವಾಗುಂಡಾ(ಆಮಂತ್ರಣ), ಗಂಟ್ಲಾ ಕುಲಾಗಳನ್ನು ಧಾರ್ಮಿಕವಾಗಿ ಆಚರಿಸಲಾಗುತ್ತದೆ. ರಥ ಯಾತ್ರೆಯ ಸಂದರ್ಭದಲ್ಲಿ ಜಗನ್ನಾಥನನ್ನು ಗಣ ದೇವತೆಯಾಗಿ ಕಾಣಲಾಗುತ್ತದೆ ಅದೇ ರೀತಿಯಲ್ಲಿ ಶಿವಾ ಪಾರ್ವತಿಯನ್ನು ದೇವತೆಯಾಗಿ ಕಾಣಲಾಗುತ್ತದೆ.

ಆಚರಣೆ ಬದಲಾಯಿಸಿ

ನಿರ್ಧರಿಸಲಾದ ಒಂದು ಕುಟುಂಬದವರು ಪಾರ್ವತಿಯ ತಂದೆ ಮತ್ತು ತಾಯಿಯಾಗಿ ಪಾಲ್ಗೊಂಡು ಶಿವನ ಜೊತೆಯ ಮದುವೆಯಲ್ಲಿ ಪಾರ್ವತಿಯನ್ನು ಒಪ್ಪಿಸುತ್ತಾರೆ. ಶಿವನು ’ಸ್ವಯಂ ಭೂ’ ಆದ್ದರಿಂದ ಯಾರು ತಂದೆ ತಾಯಿಯಾಗಿ ಪಾಲ್ಗೊಳ್ಳುವುದಿಲ್ಲ. ಶಿವ ತನ್ನ ದೇವಾಲಯದಲ್ಲಿ ಇತರೆ ದೇವರು ಮತ್ತು ದೇವಿಯರ ಜೊತೆಗೆ ಮದುವೆಯ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಾನೆ. ಹನುಮಾನ್ ಮತ್ತು ನರಸಿಂಗ(ನರಸಿಂಹ) ವರನ ಕಡೆಯವರಾಗಿ ಕಾರ್ಯಕ್ರಮದ ಉಸ್ತುವಾರಿಯನ್ನು ಮುನ್ನಡೆಸಿಕೊಂಡು ಹೋಗುತ್ತಾರೆ. ದೇವತೆಯರ ಕುಟುಂಬವು ಮೆರವಣಿಗೆಯನ್ನು ಸ್ವಾಗತಿಸುತ್ತಾರೆ(ನಾವು ನಮ್ಮ ಮದುವೆಯಲ್ಲಿ ಮಾಡುವಂತೆ). ಪ್ರತಿಮೆಗಳನ್ನು ಸುಂದರವಾಗಿ ಶೃಂಗರಿಸಿ ಪಲ್ಲಕ್ಕಿಯಲ್ಲಿ ಇರಿಸಲಾಗುತ್ತದೆ, ಪಾರ್ವತಿಯ ತಂದೆತಾಯಿ ಮತ್ತು ಸಂಬಂಧಿಕರು ಕನ್ಯಾದಾನದ ಕ್ರಿಯೆಯನ್ನು ವಿಧಿವತ್ತಾಗಿ ಆಚರಿಸುತ್ತಾರೆ. ಮೆರವಣಿಗೆಯು ಮರುದಿನ ಪಾರ್ವತಿಯ ಜೊತೆಗೆ ದೇವಸ್ಥಾನಕ್ಕೆ ಹಿಂದಿರುಗಿ ಬರುತ್ತದೆ(ಮಂದಿರ ಪ್ರವೇಶ), ಜಾನಪದ ನೃತ್ಯ, ಜಾನಪದ ಸಂಗೀತ, ಇತರೆ ಹಲವಾರು ವಿಧವಾದ ನೃತ್ಯಗಳು ಮತ್ತು ಸಂಗೀತಗಳು ಈ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿವೆ. ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಮೊದಲಿಗೆ ಸೀತಲಸಸ್ತಿಯಲ್ಲಿ ಕೇವಲ ಜೌರಾಪದಾ ಮತ್ತು ನಂದಪದಾ ಆಚರಿಸಲಾಗುತ್ತಿತ್ತು, ೧೯೭೨ರಲ್ಲಿ ಮುಡಿಪದಾ ಕೂಡ ಹಬ್ಬದ ಭಾಗವಾಗಿ ಸೇರಿಕೊಂಡಿತು. ಹಬ್ಬದ ಸಂಪೂರ್ಣವಾದ ಉಸ್ತುವಾರಿಯನ್ನು ಜಂಟಿ ಸಹಯೋಗ ಸಮಿತಿ ನೋಡಿಕೊಳ್ಳುತ್ತದೆ. [೧][೨]

ಇವನ್ನೂ ಗಮನಿಸಿ ಬದಲಾಯಿಸಿ

  • ವಾಲಿಕೊಂಡಿರುವ ಹುಮಾ ದೇವಸ್ಥಾನ
  • ಹಿರಾಕುಡ್ ಅಣೆಕಟ್ಟು
  • ನುಖಾಯಿ

ಆಕರಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2010-12-15. Retrieved 2010-12-10.
  2. "ಆರ್ಕೈವ್ ನಕಲು". Archived from the original on 2011-07-16. Retrieved 2010-12-10.