ವಿಮಲಾಬಾಯಿ ದೇಶಮುಖ

ವಿಮಲಾಬಾಯಿ ದೇಶಮುಖರವರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದ ದೇಶಮುಖ ಮನೆತನದ ನಾಯಕ ಜಗದೇವರಾವ ದೇಶಮುಖರವರ ಪತ್ನಿ, ರಾಜಕಾರಿಣಿ, ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಹಾಗೂ ಮಾಜಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು.

ಜನನ ಮತ್ತು ಕುಟುಂಬ ಬದಲಾಯಿಸಿ

ಮೂಲತಃ ದೇಸಗತಿ ಮನೆತನದವರಾದ ವಿಮಲಾಬಾಯಿ 1949, ಅಕ್ಟೋಬರ್ 21ರಂದು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಮುರಗೋಡದಲ್ಲಿ ಜನಿಸಿದರು. ಇವರ ತಂದೆ ಸೋಮಶೇಖರ ದೇಸಾಯಿ ಹಾಗೂ ತಾಯಿ ಶಾಂತಾಬಾಯಿ.

ವಿದ್ಯಾಭ್ಯಾಸ ಬದಲಾಯಿಸಿ

ಸ್ವಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದ ಇವರು ಎಸ್​ಎಸ್​ಎಲ್​ಸಿ ಪೂರೈಸಿದ ನಂತರ ಅನಿವಾರ್ಯ ಕಾರಣಗಳಿಂದ ಓದು ನಿಲ್ಲಿಸಿದ್ದರು. ಬಳಿಕ ಜಗದೇವರಾವ ದೇಶಮುಖರಿಗೆ ಎರಡನೇ ಪತ್ನಿಯಾಗಿ ಅವರ ರಾಜಕೀಯ ಬೆನ್ನೆಲುಬಾಗಿ ನಿಂತರು.

ಮಕ್ಕಳು ಬದಲಾಯಿಸಿ

ಇವರಿಗೆ ನಂದಿನಿ ಎಂಬ ಓರ್ವ ಪುತ್ರಿಯಿದ್ದು, ಮಹಾರಾಷ್ಟ್ರನಾಗಪುರ ಜಿಲ್ಲೆಯ ಧಣಿಯೊಬ್ಬರಿಗೆ ಮದುವೆ ಮಾಡಲಾಗಿದೆ. ಶಾಸಕರಾಗಿದ್ದ ಇವರ ಪತಿ ಅಪಘಾತವೊಂದರಲ್ಲಿ ಸಾವಿಗೀಡಾಗಿದ್ದಾರೆ. ತಂದೆ ಸಾವಿನ ನಂತರ ತಾಯಿಯಂತೆ ಇವರೂ ಅನುಕಂಪದ ಅಲೆ ಮೇಲೆ ಒಮ್ಮೆ ಶಾಸಕ ಸ್ಥಾನ ಅಲಂಕರಿಸಿದ್ದಿದೆ. ಇನ್ನು ಜಗದೇವರಾವ ಅವರ ಮೊದಲ ಮಡದಿಗೆ ಇಬ್ಬರು ಪುತ್ರಿಯರಿದ್ದು, ಅವರು ವಿದೇಶದಲ್ಲಿ ವಾಸಿಸುತ್ತಿದ್ದಾರೆ.[೧]

ರಾಜಕೀಯ ಬದಲಾಯಿಸಿ

ದೇಶಮುಖ ಮನೆತನದ ನಾಯಕ ಜಗದೇವರಾವ ಸಂಗನಬಸಪ್ಪ ದೇಶಮುಖರು ಜನತಾ ಪಕ್ಷದಿಂದ ಸತತ ಮೂರು ಬಾರಿ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿದ್ದರು. ರಾಮಕೃಷ್ಣ ಹೆಗಡೆ ಹಾಗೂ ಎಸ್.ಆರ್.ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿ ಸ್ಥಾನ ಅಲಂಕರಿಸಿದ್ದರು. ಅವರ ಅಕಾಲಿಕ ನಿಧನ ಬಳಿಕ ಕ್ಷೇತ್ರ ಕೈ ತಪ್ಪಿತು. ಮಧ್ಯಂತರದಲ್ಲಿ ಅಧಿಕಾರ ಕಸಿದುಕೊಂಡಿದ್ದ ಸಿ.ಎಸ್. ನಾಡಗೌಡರಿಂದ ಮತ್ತೆ ಕ್ಷೇತ್ರ ಕೈವಶ ಮಾಡಿಕೊಳ್ಳುವಲ್ಲಿ ಸಫಲರಾದವರೇ ಜಗದೇವರಾವ ಅವರ ಪತ್ನಿ ವಿಮಲಾಬಾಯಿ. 1994ರಲ್ಲಿ ವಿಮಲಾದೇವಿ ಜಯ ಸಾಧಿಸಿದರು.

1996-1999ರವರೆಗೆ ಜೆ.ಎಚ್. ಪಟೇಲ್ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಅಧಿಕಾರ ಚಲಾಯಿಸಿದರು. ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು. ಆಗ ವಿಮಲಾಬಾಯಿ ಜನತಾದಳದಿಂದ ಸ್ಪರ್ಧೆಗಿಳಿದಿದ್ದರು.

ಸತತ ಸೋಲು ಬದಲಾಯಿಸಿ

ನಂತರ ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧಿಸಿದರಾದರೂ ಗೆಲುವು ಮರೀಚಿಕೆಯಾಯಿತು. 1999, 2004, 2008 ರಲ್ಲಿ ಜೆಡಿಎಸ್ ಹಾಗೂ 2013ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿಯಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. 2018ರ ಚುನಾವಣೆಯಲ್ಲಿ ಅನಾರೋಗ್ಯ ಹಿನ್ನೆಲೆ ಅನಿವಾರ್ಯವಾಗಿ ಕಣದಿಂದ ಹಿಂದೆ ಸರಿದಿದ್ದರು.[೨]

ಇಬ್ಬರು ಮಹಿಳೆಯರು ಬದಲಾಯಿಸಿ

ವಿಜಯಪುರ ಜಿಲ್ಲೆಯಿಂದ ಈವರೆಗೆ ಕೇವಲ ಇಬ್ಬರು ಮಹಿಳೆಯರು ಮಾತ್ರ ವಿಧಾನಸಭೆ ಪ್ರವೇಶಿಸಿದ್ದಾರೆ. 1957ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಸವನಬಾಗೇವಾಡಿ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಶೀಲಾ ಬಾಯಿ ಹೀರಾಚಂದ ಆಯ್ಕೆಯಾಗಿದ್ದರು. 1962ರಲ್ಲಿ ಮತ್ತೊಮ್ಮೆ ಅವರು ಆಯ್ಕೆಯಾಗಿದ್ದರು.

1994ರಲ್ಲಿ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ವಿಮಲಾಬಾಯಿ ದೇಶಮುಖ ಅವರು ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಬಂದಿದ್ದರು. ಜೆ.ಎಚ್. ಪಟೇಲ್ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಖಾತೆ ಸಚಿವೆಯಾಗಿದ್ದರು. 1999, 2004 ಹಾಗೂ 2008ರಲ್ಲಿ ಮರು ಆಯ್ಕೆ ಬಯಸಿ ದೇಶಮುಖ ಅವರು ಚುನಾವಣೆಗೆ ಸ್ಪರ್ಧಿಸಿದ್ದರಾದರೂ, ಗೆಲುವು ಅವರಿಗೆ ಒಲಿಯಲಿಲ್ಲ.[೩]

ನಿಧನ ಬದಲಾಯಿಸಿ

ಜೂಲೈ 22, 2018 ರಂದು ಮಧ್ಯಾಹ್ನ 12.30ಕ್ಕೆ ವಿಮಲಾಬಾಯಿ ದೇಶಮುಖರವರು 70ನೇ ವಯಸ್ಸಿನಲ್ಲಿ ನಿಧನರಾದರು.[೪]

ಉಲ್ಲೇಖ ಬದಲಾಯಿಸಿ

  1. https://www.thestate.news/districts/2018/04/02/muddebihal-assembly-constituency[ಶಾಶ್ವತವಾಗಿ ಮಡಿದ ಕೊಂಡಿ]
  2. https://www.prajavani.net/district/last-link-countrys-disaster-559143.html
  3. https://kannada.asianetnews.com/news/vijaypur-district-election-news
  4. "ಆರ್ಕೈವ್ ನಕಲು". Archived from the original on 2018-08-17. Retrieved 2018-08-14.