ರಾಸ ಲೀಲೆ

ರಾಸ್ ಲೀಲಾ ಕೃಷ್ಣನ ಸಾಂಪ್ರದಾಯಿಕ ಕಥೆಯ ಭಾಗವಾಗಿದೆ

ರಾಸ ಲೀಲೆ ಭಾಗವತ ಪುರಾಣದಂತಹ ಹಿಂದೂ ಧರ್ಮಗ್ರಂಥಗಳು ಮತ್ತು ಗೀತ ಗೋವಿಂದದಂತಹ ಸಾಹಿತ್ಯದಲ್ಲಿ ವರ್ಣಿಸಲಾದ ಕೃಷ್ಣನ ಸಾಂಪ್ರದಾಯಿಕ ಕಥೆಯ ಭಾಗವಾಗಿದೆ, ಮತ್ತು ಇದರಲ್ಲಿ ಅವನು ರಾಧೆ ಹಾಗೂ ಅವಳ ಸಖಿಯರೊಂದಿಗೆ ನರ್ತಿಸುತ್ತಾನೆ. ಒಂದು ಭಾರತೀಯ ಶಾಸ್ತ್ರೀಯ ನೃತ್ಯವಾದ ಕಥಕ್ ಬ್ರಜ್‍ನ ರಾಸಲೀಲೆ ಮತ್ತು ಮಣಿಪುರಿ ಶಾಸ್ತ್ರೀಯ ನೃತ್ಯದಿಂದ ವಿಕಸನಗೊಂಡಿತು.[೧]

ಕೃಷ್ಣ ಮತ್ತು ರಾಧೆಯರು ರಾಸ ಲೀಲೆ ನೃತ್ಯ ಮಾಡುತ್ತಿದ್ದಾರೆ

ರಸ ಪದದ ಅರ್ಥ "ಸೌಂದರ್ಯಶಾಸ್ತ್ರ" ಮತ್ತು ಲೀಲೆ ಹಿಂದೂ ಧರ್ಮದ ಒಂದು ಪರಿಕಲ್ಪನೆಯಾಗಿದ್ದು, ಇದರರ್ಥ "ಕ್ರಿಯೆ", "ಆಟ" ಅಥವಾ "ನೃತ್ಯ". ಹಾಗಾಗಿ, ರಾಸ ಲೀಲೆ ಯನ್ನು "ಸೌಂದರ್ಯದ ಆಟ" ಎಂದು ಸ್ಥೂಲವಾಗಿ ಅಥವಾ ಹೆಚ್ಚು ವಿಶಾಲವಾಗಿ ದೈವಿಕ ಪ್ರೀತಿಯ ನೃತ್ಯ ಎಂದು ಭಾಷಾಂತರಿಸಬಹುದು.

ಒಂದು ರಾತ್ರಿ ವೃಂದಾವನದ ಗೋಪಿಗಳು ಕೃಷ್ಣನ ಕೊಳಲಿನ ಧ್ವನಿ ಕೇಳಿ, ತಮ್ಮ ಮನೆಗಳು ಹಾಗೂ ಕುಟುಂಬಗಳಿಂದ ಸದ್ದಿಲ್ಲದೆ ಹೊರಬಂದು ಕಾಡಿನ ಕಡೆಗೆ ಹೋಗುತ್ತಾರೆ. ಅಲ್ಲಿ ರಾಸ ಲೀಲೆ ನಡೆಯುತ್ತದೆ. ಕೃಷ್ಣ ಸಹಿತ ಎಲ್ಲರೂ ರಾತ್ರಿ ಪೂರ್ತಿ ಕುಣಿಯುತ್ತಾರೆ. ಕೃಷ್ಣನು ಅತೀಂದ್ರಿಯವಾಗಿ ರಾತ್ರಿಯನ್ನು ಒಂದು ಕಲ್ಪದಷ್ಟು ಎಳೆಯುತ್ತಾನೆ. ಇದರ ಅವಧಿ ಸುಮಾರು ೪.೩೨ ಬಿಲಿಯ ವರ್ಷಗಳು. ಕೃಷ್ಣ ಭಕ್ತಿ ಸಂಪ್ರದಾಯಗಳಲ್ಲಿ, ರಾಸ ಲೀಲೆಯನ್ನು ಕೃಷ್ಣನ ವಿನೋದಕ್ರೀಡೆಗಳ ಪೈಕಿ ಒಂದು ಅತ್ಯುನ್ನತ ಹಾಗೂ ಅತ್ಯಂತ ನಿಗೂಢ ಕ್ರೀಡೆಯೆಂದು ಪರಿಗಣಿಸಲಾಗುತ್ತದೆ. ಈ ಸಂಪ್ರದಾಯಗಳಲ್ಲಿ, ಭೌತಿಕ ಪ್ರಪಂಚದಲ್ಲಿ ಮಾನವರ ನಡುವಿನ ಪ್ರಣಯ ಪ್ರೇಮವನ್ನು ಆಧ್ಯಾತ್ಮಿಕ ಪ್ರಪಂಚದಲ್ಲಿ ಕೃಷ್ಣನಿಗಾಗಿ ಆತ್ಮದ ಮೂಲ, ಭಾವಪರವಶ, ಆಧ್ಯಾತ್ಮಿಕ ಪ್ರೀತಿಯ ಕೇವಲ ಒಂದು ಕ್ಷೀಣ, ಭ್ರಾಂತಿಕಾರಕ ಪ್ರತಿಬಿಂಬವಾಗಿ ಕಾಣಲಾಗುತ್ತದೆ.

ಯಾರು ರಾಸ ಲೀಲೆಯನ್ನು ನಿಷ್ಠೆಯಿಂದ ಕೇಳುತ್ತಾರೊ ಅಥವಾ ವರ್ಣಿಸುತ್ತಾರೊ ಅವರು ಕೃಷ್ಣನ ಶುದ್ಧ ಭಕ್ತಿಯನ್ನು ಪಡೆಯುತ್ತಾರೆ ಎಂದು ಭಾಗವತ ಪುರಾಣದಲ್ಲಿ ಹೇಳಲಾಗಿದೆ.

ರಾಸ ಲೀಲೆಯು ಕಥಕ್, ಭರತನಾಟ್ಯ, ಒಡಿಶಿ, ಮೇಯ್ಟೇಯಿ ಮತ್ತು ಕುಚಿಪುಡಿ ಪ್ರದರ್ಶನಗಳಲ್ಲಿ ಒಂದು ಜನಪ್ರಿಯ ವಿಷಯವಾಗಿದೆ. ರಾಸ ಲೀಲೆಯು ಉತ್ತರ ಪ್ರದೇಶಮಥುರಾ, ವೃಂದಾವನ್ ಪ್ರದೇಶಗಳಲ್ಲಿ ಜನಪದ ನಾಟಕದ ಒಂದು ಜನಪ್ರಿಯ ರೂಪವಾಗಿದೆ, ವಿಶೇಷವಾಗಿ ಕೃಷ್ಣ ಜನ್ಮಾಷ್ಟಮಿ ಹಾಗೂ ಹೋಳಿ ಹಬ್ಬಗಳ ಸಂದರ್ಭದಲ್ಲಿ. ಈ ಪ್ರದೇಶದಲ್ಲಿನ ಗೌಡೀಯ ವೈಷ್ಣವ ಪಂಥದ ಅನುಯಾಯಿಗಳಲ್ಲೂ ಜನಪ್ರಿಯವಾಗಿದೆ. ರಾಸ್ ಮಹೋತ್ಸವ್ ಅನ್ನು ಅಸ್ಸಾಮ್‍ನ ರಾಜ್ಯ ಉತ್ಸವಳಲ್ಲಿ ಒಂದಾಗಿಯೂ ಆಚರಿಸಲಾಗುತ್ತದೆ, ಹೆಚ್ಚಾಗಿ ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಆರಂಭದಲ್ಲಿ.

ಉಲ್ಲೇಖಗಳು ಬದಲಾಯಿಸಿ

  1. Richmond, Farley P.; Darius L. Swann; Phillip B. Zarrilli (1993). Indian theatre: traditions of performance. Motilal Banarsidass Publ. p. 197. ISBN 81-208-0981-5.